Total Pageviews

Thursday, June 30, 2011

ಶಬ್ದ ಸೂತಕದಿಂದ……….

                                                 ಶಬ್ದ ಸೂತಕದಿಂದ……….



`ತಲ್ಲಣ' ಎಂದ ತಕ್ಷಣ ನನಗೆ ತಟ್ಟನೆ ನೆನಪಾಗುವುದು ಸಾದತ್ ಹಸನ್ ಮಾಂಟೊ(Sadath hasan manto). ಕೇವಲ ೪೨ ವರ್ಷ ಬದುಕಿದ್ದ ಬೆಂಕಿಯ ಕುಡಿಯಂಥ ಈ ಬರಹಗಾರ ಭಾರತದ ಮಧ್ಯಯುಗಿನ ಉತ್ತರಾರ್ಧ ಇತಿಹಾಸದ ತಲ್ಲಣಗಳಿಗೆ ಸಾಕ್ಷಿಯಾದವನು. ಮಾನವೀಯತೆಯ ಒಡೆಯಲಾಗದ ಪ್ರತಿಮೆಯನ್ನು ಪ್ರೀತಿಸಿದ್ದ ಈತ ಸಮಾಜ ದೂಷಿತ ಸ್ವೇಚ್ಛಾಚಾರಿಯಾಗಿದ್ದರಿಂದ `ಪಾಪಿ' ಎನಿಸಿಕೊಂಡಿದ್ದ. ಒಂದಿಷ್ಟು ಕಾಲ ಲಾಹೋರ್, ಮತ್ತಷ್ಟು ಕಾಲ ಬೊಂಬೆ, ಹೀಗೆ ಲೋಲಕದಂತೆ  ಒಡಾಡಿಕೊಂಡಿದ್ದ ಸಾದತ್ ಹಸನ್ ಮಾಂಟೊ(Sadath hasan manto) ಆತನ ಕಾಲದ ಅಸಮಾಧಾನ, ವಿಷಾದ,ತಲ್ಲಣಗಳೇ ಮಡುಗಟ್ಟಿದ ಮಡುವಾಗಿದ್ದ. ಅದೇಕೊ ಗೊತ್ತಿಲ್ಲ, ಇಂಥ ಇನ್ನೊಬ್ಬ ಲೇಖಕ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಚರ್ಚೆಗೆ ಅರ್ಹನಿದ್ದಾನೆ ಎಂದು ನನಗೆ ಇದುವರೆಗೂ ಅನ್ನಿಸಿಲ್ಲ. ಹೀಗಾಗಿಯೇ ನನ್ನ ಪಾಲಿಗೆ `ತಲ್ಲಣ' ಎಂದರೆ ಮಾಂಟೊ. ಬೋದಿಲೇರನಿಗೆ ಬರೆದ ಮುನ್ನುಡಿಯಲ್ಲಿ ನನ್ನ ಈ ವಾದವನ್ನು ಸಮರ್ಥಿಸುವ ಲಂಕೇಶರ ಒಂದಿಷ್ಟು ಮಾತುಗಳಿವೆ. "ಒಂದು ಅನುಭವದ ಅಪಾಯ ಮತ್ತು ದುರಂತವನ್ನು ಎದುರಿಸಿ ಕಾವ್ಯಕ್ಕೆ ಕತ್ತು ಕೊಟ್ಟವರು ನಮ್ಮಲ್ಲಿ ಬಹಳ ಕಡಿಮೆ. ಪಶ್ಚಿಮದಲ್ಲಿ ಇಂಥವರ ಪಂಥವೇ ಇದೆ" ಎಂದಿದ್ದಾರೆ ಲಂಕೇಶ್(Lankesh). ಹೌದು, ಇದನ್ನು ನೀವೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದ ಇತಿಹಾಸದ ಅಗಣಿತ ವಿಪ್ಲವಗಳಿಗೆ ಮನಸ್ಸೊಡ್ಡಿದ ಬಂಗಾಲ, ಉತ್ತರ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಬಿಹಾರ, ಕಾಶ್ಮಿರ ಹಾಗೂ ಪಂಜಾಬಗಳನ್ನು ಹೊರತುಪಡಿಸಿದರೆ ದಕ್ಷಿಣದ ಬಹುಪಾಲು ಬರಹಗಾರರು ಸಾವಿನ ಲೇಪನವಿಲ್ಲದೆ ಬರೆದವರು. ವ್ಯಕ್ತಿ ನೆಲೆಯಲ್ಲಿ ಮತ್ತು ಸಮಷ್ಟಿಯ ನೆಲೆಯಲ್ಲಿಯೂ ಸಂತೃಪ್ತಿಯ ಜಾಡನ್ನು ಹಿಡಿದುಕೊಂಡು ಹೋಗುವ ದಕ್ಷಿಣದ ಬರಹಗಾರ, ತಾಕಲಾಟದ ಸಂದರ್ಭಗೊಳಗಾಗಿದ್ದು ಕಡಿಮೆ ಎಂದುಕೊಂಡಿದ್ದೇನೆ ನಾನು. ಹಾಗೆ ನೋಡಿದರೆ ನಮ್ಮದನ್ನು ಬರಹಗಾರನ `ತಾಕಲಾಟ'ಗಳು ಎಂದುಕೊಳ್ಳುವುದು ಹೆಚ್ಚು ಉಚಿತ. ಇಲ್ಲಿ ತಲ್ಲಣಗಳ ಪ್ರಶ್ನೆ ಕಡಿಮೆ.
ನಾನು `ತಾಕಲಾಟದ' ಅರ್ಥವನ್ನು ಮಾನಸಿಕ ಘರ್ಷಣೆ ಎಂದು ಗ್ರಹಿಸಿದ್ದೇನೆ. ಆದರೆ `ತಲ್ಲಣ'ದ ಅರ್ಥವ್ಯಾಪ್ತಿ ಬಹಳಷ್ಟು ಸಂಕೀರ್ಣ, ವಿಸ್ತ್ರತ ಹಾಗೂ ವಿಚಿತ್ರ. `ತಲ್ಲಣ' ಒಂದು ರೀತಿಯಲ್ಲಿ ಮನೋವ್ಯಥೆ, ತಾಪ, ಸಂಕಟ, ಕಕ್ಕಾಬಿಕ್ಕಿ, ಹೀಗೆ ಏನೇನೋ. ತಲ್ಲಣಕ್ಕೆ ಸಾಕ್ಷಿ `ಹೆರುವ ಹೊಳೆಯೊಳಗಿಳಿದ ಹೆಣ್ಣು' ಆಗಬಹುದೇನೋ. ತಾಕಲಾಟಕ್ಕೆ ಯಾವ ವ್ಯಾಪಾರಿ ಬುದ್ಧಿಯೂ ಸರಿಹೋದೀತು. ಕಾವ್ಯ ತಲ್ಲಣದ ಕೂಸಾದರೆ, ವಿಮರ್ಶೆ ತಾಕಲಾಟದ ಪ್ರತಿಫಲ ಅಷ್ಟೇ.
ನಾನೊಬ್ಬ ಬರಹಗಾರನಾಗಿ ಕ್ರಮಿಸಿದ ದಾರಿ  ಇವೆರಡರ ಮಧ್ಯದ್ದೋ ಅಥವಾ ಇವೆರಡನ್ನು ಸಮೀಕರಿಸಿಕೊಂಡಿದ್ದೋ? ಚಿಕ್ಕದೋ ಅಥವಾ ಹಿರಿದೋ? ನನಗೆ ತಿಳಿಯುತ್ತಿಲ್ಲ. ಅಂದಹಾಗೆ ಬಹುತೇಕ ಇದು ತಿಳಿದ ಮರುಕ್ಷಣವೇ ನಾನೊಬ್ಬ ಬರಹಗಾರನಾಗಿಯೂ ಉಳಿಯಲಿಕ್ಕಿಲ್ಲ. ನಿರಾಶೆ, ದಿಗ್ಭ್ರಮೆ, ಪಾಪಪ್ರಜ್ಞೆ, ಕಾಲಪ್ರಜ್ಞೆ, ವ್ಯಕ್ತಿಗತ ಇಬ್ಬಂದಿತನಗಳ ಮಧ್ಯ ಸೃಜನಶೀಲತೆಯ ಕಸುವು ಕಣ್ಣೊಡೆಯುತ್ತದೆ ಎಂದು ನನ್ನ ನಂಬಿಕೆ. ಇತಿಹಾಸದ ಶ್ರೇಷ್ಠಾತಿಶ್ರೇಷ್ಠ ಸಾಧಕರ ಜೀವನಗಳೆಲ್ಲವೂ ಯಾವುದೋ ಒಂದು ಬಡತನ, ಕೊಳಕುತನ, ಕೃತಕತೆಯ ಕಾಲ್ನಡಗೆಯಲ್ಲಿಯೇ ಪ್ರಾರಂಭವಾದುದು. ಅಗ್ನಿರೇಖೆಯನ್ನೆಳೆಯುವ ಪೆನ್ನನ್ನು ಎತ್ತಿಕೊಳ್ಳುವ ಮುಂಚೆ ನನಗುಂಟಾಗುವ ಪ್ರಶ್ನೆ `ತಾಕಲಾಟ'ದ್ದು, ಆನಂತರ ಎದುರಿಸಬೇಕಾದದ್ದು `ತಲ್ಲಣ'ದ್ದು. ಇಂಥ ಪ್ರಶ್ನೆಯನ್ನು ಒಬ್ಬ ಬರಹಗಾರನಾಗಿ ರಜನೀಶನನ್ನು ಕುರಿತು ನಾನು ಚಿಂತಿಸುವಾಗ, ಕೆ.ಎ.ಅಬ್ಬಾಸ(K A Abbas), ಇಕ್ಬಾಲ, ಹಾಗೂ ಗಾಂಧೀಜಿ(gandhji)ಯನ್ನು ಕುರಿತು ಚರ್ಚಿಸುವಾಗ, ಸಾದತ್ ಹಸನ್ ಮಂಟೊ(Sadath hasan manto), ಖರತುಲ್ ಐನ್ ಹೈದರರ ಕುರಿತು ವಿಚಾರಿಸುವಾಗ, ಬರೆಯುವಾಗ ನಾನು ಮತ್ತೆ ಮತ್ತೆ ಎದುರಿಸಿದ್ದೇನೆ. ಯಾಕೆಂದರೆ "ದೇವರ ತುಳಿತಕ್ಕೆ, ದೆವ್ವದ ತುಳಿತಕ್ಕೆ ಸಿಕ್ಕಾತ ತನ್ನ ನೋವನ್ನು ಕೃತಿಯಾಗಿಸುವ ಕೆಚ್ಚು  ದಿಟ್ಟತನದ್ದು. ಈ ಕೆಚ್ಚು ಮಾತ್ರ ಮನುಷ್ಯನನ್ನು ಉಳಿಸುತ್ತದೆ. ಇದಕ್ಕೆ ಭೂತದ, ವರ್ತಮಾನದ, ಭವಿಷ್ಯದ ಹಂಗಿಲ್ಲ. ಸ್ವರ್ಗ-ನರಕಗಳ ವಿಶ್ವಾಸವಿಲ್ಲ." ನಾನು ಸೂಚಿಸಿದ ಈ ಮೇಲಿನ ಬರಹಗಾರರು ದೇವರು ಹಾಗೂ ದೈವದ ತುಳಿತಕ್ಕೊಳಗಾದವರು, ನಿರ್ಭಾಗ್ಯದ ವರ ಪಡೆದ ನನ್ನಂಥ ಸುದೈವಿಗಳು.



Sunday, June 26, 2011

ಶ್ಯಾಂ ಬೆನಗಲ್ ರ “ಮಂಡಿ”(mandi) ಒಂದು ದೃಶ್ಯ ಕಾವ್ಯ

ಶ್ಯಾಂ ಬೆನಗಲ್ ರ “ಮಂಡಿ”(Mandi) ಒಂದು ದೃಶ್ಯ ಕಾವ್ಯ



 ೧೯೯೩ ರಲ್ಲಿ ಒಂದು ಮಹತ್ವದ ಸಿನಿಮಾ ಬಂತು. ಅದು ಶ್ಯಾಂ ಬೆನಗಲ್ ರ   “ಮಂಡಿ”(Mandi). “ಮಂಡಿ” ಎಲ್ಲ ಚಿತ್ರಗಳಂಥಹ ಒಂದು ಚಿತ್ರವಾಗಿದ್ದರೆ ನಾನಿಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ. “ಮಂಡಿ” ಕುರಿತ ಮುಖ್ಯ ಮಾತೇ ಅದು. ಎಲ್ಲ ಚಿತ್ರಗಳು ಎಲ್ಲಿ ನಿಲ್ಲುತ್ತವೆಯೋ ಅಲ್ಲಿಂದ “ಮಂಡಿ” ಪ್ರಾರಂಭವಾಗುತ್ತದೆ. ಈ ಚಿತ್ರ ಬಂದಾಗ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಎಂ.ಎ ಓದುತ್ತಿದ್ದೆ. ಅಂದಿನಿಂದ ಇಂದಿನವರೆಗೆ ಶ್ಯಾಂ ಬೆನಗಲ್ ರ  “ಮಂಡಿ” ಯನ್ನು ಅನೇಕ ಬಾರಿ ನೋಡಿದ್ದೇನೆ. ಪ್ರತಿ ಬಾರಿಯು ಹೊಸ ಹೊಸ ಅರ್ಥಗಳನ್ನು ಪಡೆದಿದ್ದೇನೆ. ಈ ಹಿನ್ನೆಲೆಯಲ್ಲಿ “ಮಂಡಿ” ನನಗೊಂದು ಸಿನಿಮಾ ಅನ್ನಿಸಲಿಲ್ಲ. ಕವಿತೆಯಾಗಿ, ದೃಶ್ಯಕಾವ್ಯವಾಗಿ ಕಾಡುತ್ತದೆ. ಒಂದು ವಿಚಾರವಾಗಿ ಹೆಪ್ಪುಗಟ್ಟುತ್ತದೆ.

“ಬ್ಲೆಜ್” ಚಿತ್ರರವರ “ಮಂಡಿ”ಯ ತಾರಾಗಣದಲ್ಲಿರುವ ನಟ ನಟಿಯರೂ ಅಷ್ಟೇ ಅದ್ಭುತ. ಮುಖ್ಯ  ಭೂಮಿಕೆಯಲ್ಲಿ ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದಿನ್ ಶಾ, ಅಮರೀಷ್ ಪುರಿ, ಹರಬಂದೊ ಖುರಾನಾ, ಓಂಪುರಿ, ನೀನಾಗುಪ್ತಾ- ಒಟ್ಟಾರೆ ಭಾರತೀಯ ಚಿತ್ರರಂಗದ ಇಂದಿನ ಎಲ್ಲ ಘಟಾನುಘಟಿಗಳು.

ಹಾಗಿದ್ದರೆ ಸಹ ಭೂಮಿಕೆಯಲ್ಲಿ ಯಾರು, ಎನ್ನುವುದು ಪ್ರಶ್ನೆಯಲ್ಲವೇ? ಅದೇ “ಮಂಡಿ”ಯ ವಿಶೇಷ. “ಮಂಡಿ”(Mandi) ಎಂದರೆ ಬಾಝಾರ್, ಕನ್ನಡದಲ್ಲಿ ಸಂತೆ ಎಂದುಕೊಳ್ಳಬಹುದು. ಸಂತೆಯಲ್ಲಿ ಯಾರು ಮುಖ್ಯ? ಯಾವುದು ಮುಖ್ಯ, ಎಂದು ಪ್ರಶ್ನೆ ಕೇಳಬಹುದೇ? ಒಂದು ವೇಳೆ ನಾವು ಅಂಥ ಪ್ರಶ್ನೆಯನ್ನಿಟ್ಟಾಗಲು ಒಂದು ನಿಗದಿತ ಉತ್ತರ ಸಾಧ್ಯವೇ? ಹಾಗೆಯೇ “ಮಂಡಿ”.

ನಾನಾಗಲೇ ಹೇಳಿದ್ದೇನಲ್ಲ “ಮಂಡಿ” ಅಂದರೆ ಸಂತೆ. ಆದರೆ ಇದು ವಸ್ತುಗಳ ಸಂತೆ ಅಲ್ಲ. ಸೂಳೆಯರ ಸಂತೆ. ಈ ಸೂಳೆಯರೂ ನಡು ಬಾಝಾರಿನಲ್ಲಿ ವಸ್ತುಗಳಂತೆ ಮಾರಾಟಕ್ಕಿದ್ದಾರೆ. ವಸ್ತುಗಳಿಗೊಬ್ಬ ಒಡೆಯನಿರುವಂತೆ ಈ ಸೂಳೆಯರಿಗೂ ಓರ್ವ ಒಡತಿ ಇದ್ದಾಳೆ. ಇವರೂ ಪ್ರತಿ ರಾತ್ರಿ ವಸ್ತುಗಳಂತೆಯೇ ಮಾರಾಟವಾಗುತ್ತಾರೆ. ವಸ್ತುಗಳಿಗಿಂತಲೂ ನಿರ್ದಾಕ್ಷಿಣ್ಯವಾಗಿ ಬಳಸಲ್ಪಡುತ್ತಾರೆ.  ವಸ್ತುಗಳ ಸುತ್ತಲೂ ಸಾಮಾನ್ಯವಾಗಿ ನಡೆಯುವಂತೆ ತಾಳಿಕೆ-ಬಾಳಿಕೆ- ಸೌಂದರ್ಯದ ಪ್ರಶ್ನೆಗಳು ಸೂಳೆಯರ ಸುತ್ತಲೂ ನಡೆಯುತ್ತವೆ. ವಸ್ತುಗಳ ಗುಣಮಟ್ಟ ಹಾಗೂ ಸೌಂದರ್ಯದ ಆಧಾರದ ಮೇಲೆ ಅವುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತದೆ. ಹಾಗೆಯೆ ಸೂಳೆಯೊಬ್ಬಳು ಕೊಡುವ ಸುಖ, ಆರೋಗ್ಯ ಮತ್ತು ಆಕೆಯ ಸೌಂದರ್ಯದಂತೆ ಅವಳ ಮಾರುಕಟ್ಟೆಯ ಮೌಲ್ಯ. ಅವಳೂ ವಸ್ತುಗಳಂತೆ ಸಂತೆಯಲ್ಲಿ. ಆದರೂ ಒಂದಿಷ್ಟು ವ್ಯತ್ಯಾಸವಿದೆ.

ಜನರು ಕೊಂಡುಕೊಂಡ ವಸ್ತುಗಳನ್ನು ಮನೆಗಳಿಗೆ ಒಯ್ಯುತ್ತಾರೆ. ಆದರೆ ವಸ್ತುಗಳಂತೆ ಸಂತೆಯಲ್ಲಿರುವ ಸೂಳೆಯರು ಹಾಗಲ್ಲ. ಆಕೆ ಸಂತೆಯೊಳಗೆ ಅರೆಘಳಿಗೆ ಮಾರಾಟವಾಗಿ ಮತ್ತೆ ಸಂತೆಯೊಳಗೇ ಉಳಿಯುತ್ತಾಳೆ. ತಾನು ಮರಾಟಕ್ಕಿರುವ ದಿನ, ತನ್ನೊಳಗೆ ಖಾಲಿಯಾಗಲು ಬಂದ ಪುರುಷ ಎರಡೂ ಖಾಲಿಯಾಗುತ್ತವೆ, ಮುಗಿಯುತ್ತವೆ. ಆದರೆ ಸಂತೆ ಮತ್ತೆ ಸಿದ್ಧವಾಗುತ್ತದೆ. ಸೂಳೆ ಮತ್ತೆ ಮೈ ಹಾಸುತ್ತಾಳೆ. ಸೂಳೆ ಮತ್ತು ಸಂತೆ ಮತ್ತೆ ನಿರಂತರವಾಗುತ್ತಾರೆ. ಸೂಳೆ ಹೋದಡೆ ಎಲ್ಲ ಸಂತೆ, ಸಂತೆ ಇರುವಲೆಲ್ಲ ಸೂಳೆಯರು. ಸೂಳೆ ಸಂತೆಯೊಳಗಿನ ವಸ್ತುಗಳಂತೆ; ಅದರೆ ಆಕೆ ವಸ್ತುವಲ್ಲ. ಮನುಷ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಳೆಯರನ್ನು ಸಂಗ್ರಹಿಸಿಟ್ಟುಕೊಳ್ಳಲಾರ.ಆಕೆ ವಸ್ತುವಿನಂತೆ ಬಳಸಲ್ಪಡುತ್ತಾಳೆ, ಆದರೆ ಹೇಸಿಗೆಯಂತೆ ಬೀದಿಗೆ ಬೀಳುತ್ತಾಳೆ. ಶ್ಯಾಂ ಬೆನಗಲ್(Shyam benagal) ರ  “ಮಂಡಿ” ಈ ಮೇಲಿನ ಎಲ್ಲ ವಿಚಾರಗಳನ್ನು, ಕಾಳಜಿಗಳನ್ನು, ಹಂಚಿಕೊಳ್ಳಲು ಮಾಡಲಾಗಿರುವ ಒಂದು ಸಿನಿಮಾ, ಇದೊಂದು ‘ದೃಶ್ಯಕಾವ್ಯ’.

ಶ್ಯಾಂ ಬೆನಗಲ್(Shyam benagal) ರ  “ಮಂಡಿ” ಹೊಸದೇನನ್ನೂ ತೋರಿಸುತ್ತಿಲ್ಲ. ಇದುವರೆಗಿನ “ಸಲಾಂ ಬಾಂಬೆ”, “ಗೆಹರಾಯಿ”, ಹಾಗೂ “ಸಡಕ್” ಗಳ ಧಾಟಿಯಲ್ಲಿಯೇ ಇದೆ “ಮಂಡಿ”. ಆದರೆ ಈ ಮೇಲಿನ ಮೂರು ಚಿತ್ರಗಳಲ್ಲಿಯ  Melodramatic presentation of prostitute life ನಿಂದ ಭಿನ್ನವಾಗಿ ಸೂಳೆಯರ ಜೀವನವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. “ಮಂಡಿ”ಯೊಳಗೆ ಮಹಿಳಾ ಸಮಾಜದ ಎರಡು ಮುಖಗಳನ್ನು ಮುಖಾಮುಖಿಯಾಗಿ ನಿಲ್ಲಿಸಿ ಮಾತನಾಡಿರುವುದೇ ಬೆನಗಲ್ ರ ವಿಶೇಷತೆ. “ಮಂಡಿ”ಯೊಳಗಿನ ಸೂಳೆಯರು ಪುರುಷರಿಂದ ದೋಚಲ್ಪಟ್ಟವರು; ಅಷ್ಟೇ ಅಲ್ಲ ಸ್ವಯಂ ಮಹಿಳೆಯರಿಂದ ಸುಲಿಯಲ್ಪಟ್ಟವರು.

ಕಲ್ಕತ್ತೆಯ ನಗರವೊಂದರ ಹೃದಯ ಭಾಗದಲ್ಲಿ ಜೀವನದಿಂದ ವಂಚಿತರಾದ ನಾಲ್ಕಾರು ಹುಡುಗಿಯರನ್ನು ಇಟ್ಟುಕೊಂಡು ಕಸುಬಿನಲ್ಲಿ ನಿರತಳಾದ ಮಹಿಳೆಯೊಬ್ಬಳ ಕತೆಯೇ  “ಮಂಡಿ”. “ನಾವಿದ್ದರೇನೇ ಸಮಾಜ, ನಾವಿರುವುದರಿಂದಲೇ ಸಮಾಜದ ಆರೊಗ್ಯ” ಎಂಬುದು ಆಕೆಯ ವಾದ. ಅವಳ ಮನೆ ಪರಿತ್ಯಕ್ತ ಮಹಿಳೆಯರ ಆಶ್ರಯ ತಾಣ. ಆದರೆ ಆಕೆ ಎದುರಿಸಬೇಕಾಗಿರುವುದು ಮಹಿಳಾ ಸಂಘಟನೆಗಳ ವಿರೋಧವನ್ನು. ಸಮಾಜ ಸುಧಾರಣೆ ಎನ್ನುವ ಸಿದ್ಧಾಂತ ನಂಬಿರುವ, ಹೊಟ್ಟೆ ತುಂಬಿದ ಈ ಹೋರಾಟಗಾರ್ತಿಯರಿಗೆ, ಅಥವಾ ಇಂಥ ಹೋರಾಟಗಾರರಿಂದ ಧಿಡೀರ್ ಪ್ರಚಾರ ಗಿಟ್ಟ್ಟಿಕೊಳ್ಳಬೇಕೆಂಬ ಲೆಕ್ಕಾಚಾರ ಹಾಕಿರುವ ಪ್ರಚಾರಪ್ರಿಯ ಮಹಿಳಾಮಣಿಗಳಿಗೆ ವಾಸ್ತವದ ಅರಿವಿಲ್ಲ. ಹೊಟ್ಟೆ ಹೊರೆಯುವ ಮಾರ್ಗ ಎಲ್ಲರಿಗೂ ಒಂದೇ ಆಗಿಲ್ಲ. ಎಲ್ಲರ ಭಾಗ್ಯದಲ್ಲಿಯೂ ಗೌರವದ ಅನ್ನ ಇಲ್ಲ. ಕೆಲವರು ಈ ಸಮಾಜದಲ್ಲಿ ಮಾತುಗಳನ್ನು ಮಾರಿದಂತೆ ಇನ್ನು ಕೆಲವರು ಮೈಯನ್ನು ಮಾರಿಕೊಂದು ಬದುಕಬೇಕಾಗುತ್ತದೆ ಎಂದು ಶ್ಯಾಂ ಬೆನಗಲ್ ರ  “ಮಂಡಿ” ಯ ಮೂಲಕ ಸಮಾಜಕ್ಕೆ ಹೇಳಬೇಕಾಗಿದೆ.

ಸಮಾಜದ ಎಲ್ಲ ಪುರುಷರ ಒಂದಿಲ್ಲಾ ಒಂದು ರಹಸ್ಯವನ್ನು ಬಚ್ಚಿಟ್ಟುಕೊಂಡಿರುವ ಈ ಸೂಳೆಯರು ರಾತ್ರಿಯಾಗುತ್ತಲೇ ಎಲ್ಲರಿಗೂ ಬೇಕು. ಆದರೆ ಹಗಲೊಳಗೆ ಎಲ್ಲರೂ ಅಕೆಯಿಂದ ಮುಕ್ತವಾದ ಸಮಾಜವನ್ನು ಕುರಿತೇ  ಭಾಷಣ ಮಾಡುತ್ತಾರೆ. ಸೂಳೆಯರ ಮೊಹಲ್ಲಾಗಳನ್ನು ಕೆಡವಿ ಅಲ್ಲಿ ಸಭ್ಯರು ಇರುವಂತೆ ಗೃಹ ನಿರ್ಮಾಣ ಮಾಡುತಿರುವ ಓರ್ವ ಕಾಂಟ್ರ್ಯಾಕ್ಟರ್, ಸೂಳೆಯರು  ಊರೊಳಗೆ ಇರಬಾರದು ಎನ್ನುವ ಮಹಿಳಾ ಕಾರ್ಯಕರ್ತೆಯರು, ಹಗಲಿನಲ್ಲಿ ಸಂಘಟನೆಯನ್ನೇ ಪ್ರೋತ್ಸಾಹಿಸುವ ಜನರು ಹಾಗೂ ಕಾನೂನು ಹೀಗೆ ಎಲ್ಲವೂ ಸೂಳೆತನವನ್ನು ಸಾಕುವ ರುಕ್ಮಿಣಿಬಾಯಿಯ ವಿರುದ್ಧ ಇದೆ.

“ಮಂಡಿ” ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಸೂಳೆಗಾರಿಕೆಯನ್ನು ವಿಷಯವಸ್ತುವಾಗಿಸಿಕೊಂಡ ಬಂದ ಸಿನಿಮಾಗಳಲ್ಲಿ ಒಂದಾಗಿದ್ದರೂ ಅವೆಲ್ಲವುಗಳಿಗಿಂತಲೂ ಇದು Presentation ನಲ್ಲಿ ತೀರ ಭಿನ್ನ. ಒಂದು ಕಡೆಗೆ ಅವರ ಭೀಷಣ ಹೋರಾಟದ ಚಿತ್ರಣ ನೀಡುತ್ತಲೇ ಇನ್ನೊಂದೆಡೆ ಸೂಳೆಯರ ಕೋಠಿಗಳಲ್ಲಿಯೂ ಮಕ್ಕಳು ಹುಟ್ಟುತ್ತಾರೆ. ಜೋಗುಳ ಇಲ್ಲಿಯೂ ಕೇಳಿ ಬರುತ್ತದೆ. ಸಾವು-ಸಂಭ್ರಮ ಇಲ್ಲಿಯೂ ಇರುತ್ತದೆ ಎಂಬ ಸಂದೇಶವನ್ನು ನಿರ್ದೇಶಕ ರವಾನಿಸುತ್ತಾ, ಒಂದು ರೀತಿಯಲ್ಲಿ ಎಲ್ಲವನ್ನೂ Humaniseಗೊಳಿಸುವ, ಪ್ರೀತಿಯದಾಗಿಸುವ ಪ್ರಯತ್ನ. “ಮಂಡಿ” ಚಿತ್ರ ವಿಶೇಷವಾಗುವುದೇ ಇಲ್ಲಿ. ಸೂಳೆಯರೆಂದರೆ ಅಸಹಜವಾದವರು ಎನ್ನುವ ರೀತಿಯಲ್ಲಿ ಬಿಂಬಿಸಿ, ಸಿನಿಮಾವನ್ನು ಮಾರ್ಕೆಟಿನಲ್ಲಿ ಗೆಲ್ಲಿಸುವ ತಂತ್ರ ಇಲ್ಲಿ ಬಳಸದೆ, ಮಾನವೀಯ ನೆಲೆಯಲ್ಲಿ ಇದೆಲ್ಲವೂ ನಿತ್ಯ-ಇದೆಲ್ಲವೂ ಸತ್ಯ ಎನ್ನುವ ಹಾಗೆ ಚಿತ್ರಿಸಲಾಗಿದೆ. ಈ ಎಲ್ಲ ಹೆಣ್ಣುಮಕ್ಕಳನ್ನು, ಅವರಿಂದ ಹುಟ್ಟುವ ಹೆಣ್ಣುಮಕ್ಕಳನ್ನು ಸಲಹುವ ಘರ್ ವಾಲಿ ರುಕ್ಮಿಣಿಬಾಯಿಯನ್ನು ನೋಡದಾಗ ನನಗೆ ನೆನಪಾದದ್ದು ಪ್ರಪಂಚದ ಅತ್ಯಂತ ಶ್ರೇಷ್ಠ Noble Peace Prize ಪಡೆಯುವಾಗ ಮದರ್ ಥೆರೆಸಾ ಹೇಳಿದ ಮಾತುಗಳು:”So every hour of the day and night there is always somebody-we have quite a number of unwedded mothers. We tell them: come, we will take care of you, we will take care of the child from you, and we will get a home for a child”. ಇದೇ ಬದುಕಿನ ಭರವಸೆಯನ್ನು ಇದೇ ಮಾತುಗಳಲ್ಲಿ “ಮಂಡಿ” ಯಲ್ಲಿ ಘರ್ ವಾಲಿ  ರುಕ್ಮಿಣಿಬಾಯಿಯೂ ಕೊಡುತ್ತಾಳೆ. ಆದರೆ ಅವಳು ಕಸುಬಿನಲ್ಲಿ ಸೂಳೆಯಾಗಿರುವುದೇ ಅವಳ ಸಂದೇಶಕ್ಕಿರುವ ದೊಡ್ಡ ತಡೆ. ಎಲ್ಲ ಅರ್ಥಗಳಲ್ಲಿಯೂ ಬರೀ ಆಕೆ ಘರ್ ವಾಲಿಯಷ್ಟೇ ಅಲ್ಲ ಆಕೆ ದಿಲ್ ವಾಲಿಯೂ ಕೂಡಾ. ಆದರೆ ಅದು ಯಾರಿಗೂ ಬೇಕಾಗಿಲ್ಲವಲ್ಲ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ಮಹಿಳಾವಾದ’ ಮಹಿಳಾ ವಿಮೋಚನಾ ಸಂಘಟನೆಗಳಂಥ ಅನೇಕ ಪದಪುಂಜಗಳು ಅಬ್ಬರಿಸಿದರೂ ಕೂಡಾ ಮಹಿಳಾ ಸಮಸ್ಯೆಗಳೇ ಹೆಚ್ಚಾದವೇ ವಿನಃ ಹೇಳಿಕೊಳ್ಳುವಂಥ ಕಾರ್ಯಗಳೇನೂ ನಡೆಯಲಿಲ್ಲ. ಪಾಶ್ಚಾತ್ಯ ಅನುಕರಣೆಯಲ್ಲಿ ಈ ವಾದಗಳು ಉಳ್ಳವರ  ಪ್ರತ್ಯೇಕವಾದಕ್ಕೆ ಉತ್ತೇಜನಕಾರಿಯಾದವೇ ವಿನಃ ಬಡವರ ಬದುಕು ಕಾಯುವ ಅಸ್ತ್ರಗಳೇನೂ ಆಗಲಿಲ್ಲ ಎಂಬುದನ್ನು “ಮಂಡಿ” ಯಲ್ಲಿ ಶ್ಯಾಂ ಬೆನಗಲ್ ಮನೋಜ್ಞವಾಗಿ ಚರ್ಚಿಸಿದ್ದಾರೆ.

ಚಿತ್ರದಲ್ಲಿ ಸಮಾಜದ ಕೊಳೆಯನ್ನು ಎತ್ತಿ ಹಾಕುವ, ವಿಧುರರಿಗೆ ತೋಳುಗಳ ನೀಡಿ ಆಸರೆಯಾಗುವ, ಹೆಣ್ಣು ಹೆತ್ತರೆ ಕುಣಿದಾಡುವ, ಈ ದೇಶದ ಕಲೆ- ಸಂಸ್ಕ್ರತಿ ಕಾಪಾಡುವ, ದುಃಖಿತರ ಕಣ್ಣಿರು ಒರೆಸುವ, ಸೂಳೆಯಾಗಿಯೂ ಸಂತರನ್ನು ಅಪಾರವಾಗಿ ಗೌರವಿಸುವ ಕೋಠಿವಾಲಿ ರುಕ್ಮಿಣಿಬಾಯಿ, ಈ ಸಮಾಜದ ಅವಿಭಾಜ್ಯ ಅಂಗ ಎನ್ನುವಂತೆ ತೋರಿಸಲ್ಪಟ್ಟಿದ್ದಾಳೆ. ಅವಳ ಕುರಿತು, ಅವಳ ನಡತೆ,ಉದ್ಯೋಗ ಕುರಿತು  ಎಲ್ಲರಿಗೂ ಆಕ್ಷೇಪಣೆಗಳಿವೆ, ಅದರೆ ಅವಳು ಯಾರ ಕುರಿತೂ ಆಪೇಕ್ಷಿಸುವುದಿಲ್ಲ. ಯಾವ ರೀತಿ ಸೂಳೆಗೆ ಹಗಲುಗಳಿಲ್ಲವೋ ಹಾಗೆಯೇ ಆಕೆಗೆ ಕೆಲ ಹಕ್ಕುಗಳೂ ಇಲ್ಲ ಎಂದು ಆಕೆ ಚೆನ್ನಾಗಿ ಬಲ್ಲಳು. ಸಮಾಜದ ಸಾಮಾನ್ಯ ಕ್ರಿಮಿಯೂ ಸೂಳೆಯ ಬಗೆಗೆ ಮಾತನಾಡಿ ಅಸಮಾನ್ಯನಾಗಬಹುದು. ಆದರೆ “ಮಂಡಿ”ಯೊಳಗೆ ತೋರಿಸಿದಂತೆ ಸೂಳೆ ಮಾತ್ರ ಯಾರನ್ನು ಕುರಿತೂ ಮಾತಾಡುವಂತಿಲ್ಲ, ಆಪಾದಿಸುವಂತಿಲ್ಲ. ಅವಳು ನಿರಂತರವಾಗಿ ಸಿನಿಮಾದ ಅಂತ್ಯದವರೆಗೂ ಸ್ಥಳದಿಂದ ಸ್ಥಳಕ್ಕೆ ಎತ್ತಂಗಡಿಯಾಗುತ್ತಲೇ ಇರುತ್ತಾಳೆ. ಸೂಳೆ ಹೋದಲೆಲ್ಲವೂ ಜನರ ಸಂತೆ. ಆಕೆ ನಿತ್ಯ ಆಶಾದಾಯಿ. ಊರ ಹೊರಗಿನ ಬಂಜರು ಭೂಮಿಯೂ ಆಕೆ ಕಾಲಿಟ್ಟಲ್ಲಿ ಮರುಜೀವ ಪಡೆಯುತ್ತದೆ. ಅವಳನ್ನು ಅರಸಿಕೊಂಡು ಬರೀ ಗಂಡಸರಷ್ಟೇ ಅಲ್ಲ ಯುವತಿಯರೂ ಕೂಡಾ ಬರುತ್ತಾರೆ.

“ಮಂಡಿ”ಯ ಕೊನೆಯಲ್ಲಿ ಒಂದು ಚಿಂತನಾರ್ಹ ದೃಶ್ಯ. ನಗರದ ಶ್ರೀಮಂತನೊಬ್ಬ ಹಡೆದು ಬಿಟ್ಟ ಹೆಣ್ಣು ಮಗುವನ್ನು ರುಕ್ಮಿಣಿಬಾಯಿ ಮಗಳಂತೆ ಬೆಳೆಸಿಕೊಂಡು ಬರುತ್ತಾಳೆ. ಆದರೆ ಆ ಹುಡುಗಿ ತನ್ನ ತಮ್ಮನನ್ನೇ ತನಗೆ ಗೊತ್ತಿಲ್ಲದೇ ಪ್ರೀತಿಸಿ ಚಿತ್ರದ ಕೊನೆಗೆ ಅವನೊಂದಿಗೆ ಓಡಿಹೋಗುತ್ತಾಳೆ. ಆ ಶ್ರೀಮಂತನಿಗೆ ನೈತಿಕವಾಗಿ ಹುಟ್ಟಿದ ತನ್ನ ಮಗ ಸಿಕ್ಕರೆ ಸಾಕಷ್ಟೇ.ಆದರೆ ಸೂಳೆಯೊಬ್ಬಳೇ ಆ ಹೆಣ್ಣು ಮಗಳಿಗಾಗಿ ಅರಚುತ್ತಿದ್ದಾಳೆ,ಹುಡುಕುತ್ತಿದ್ದಾಳೆ. ಕೊನೆಗೂ ಮಗಳು ಸಿಗಲಾರಳು. ಆಗಲೇ ಈ ಸೂಳೆ ಕೂಡಾ ಯಾರಿಗೂ ಬೇಡವಾಗಿದ್ದಾಳೆ. ಆಕೆಯ ಜೊತೆಗಿದ್ದ ಹುಡುಗಿಯರೆಲ್ಲಾ ಈ ಸೂಳೆಯ ಲಕ್ಷ್ಮಣ ರೇಖೆಯನ್ನು ದಾಟುತ್ತಾ ಗುಪ್ತಾ ಎಂಬ ರಾವಣನ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಸೂಳೆ ಈಗ ಬುದ್ಧಿವಂತರ, ಮಹಿಳಾವಾದಿಗಳ ದೌರ್ಜನ್ಯಕ್ಕೆ ಬಲಿಯಾಗಿದ್ದಾಳೆ.

ಎಲ್ಲವೂ ಕೈ ಬಿಟ್ಟಿತೇ? ಮುಂದೇನು? ಎಂದು ಸೂಳೆ ಕೈ ಚೆಲ್ಲಿ ಕೂಡ್ರುವಷ್ಟರಲ್ಲಿ ಮತ್ತೆ ಬಾಬಾ ಖಡಕ್ ಷಾ ರ ಅಶರೀರವಾಣಿಯಾಗುತ್ತದೆ. ಸೂಳೆಗೆ ನೀರು, ನೆಲ ಎರಡೂ ಸಿಗುತ್ತದೆ. ಜೊತೆಯಲ್ಲಿ “ನಾರಿನಿಕೇತನ” ದಿಂದ ಓಡಿಬಂದ ಹುಡುಗಿಯೊಬ್ಬಳು ಸೂಳೆಯ ಸಂಗಾತಿಯಗುತ್ತಾಳೆ. ಒಂದು ಕಾಲಕ್ಕೆ ಸೂಳೆಯ ಕಪಿಮುಷ್ಠಿಯಿಂದ ಓಡಿಬಂದ ಹುಡುಗಿಯೊಬ್ಬಳು ಮತ್ತೆ ಬಂದು ಸೂಳೆಯ ಆಸರೆ ಪಡೆಯುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಆದರೆ ಮಹಿಳೆಯ ಕುರಿತಾದ, ಸಮಾಜದ ಕುರಿತಾದ, ಭದ್ರತೆ ಕುರಿತಾದ ಪ್ರಶ್ನೆ ಪ್ರಾರಂಭವಾಗುತ್ತದೆ. “ನಾರಿ ನಿಕೇತನ್”ಗಳು ನಮ್ಮ ಮಹಿಳೆಯರೇ ಹುಟ್ಟು ಹಾಕಿದ, ಸಮಸ್ಯೆ ಪರಿಹಾರ ಕೇಂದ್ರಗಳು ಎನ್ನುವುದಾದರೆ ಹುಡುಗಿಯೊಬ್ಬಳು ಅಲ್ಲಿಂದ ಒಡಿ ಬಂದು ಸೂಳೆಯ ಆಸರೆ ಏಕೆ ಪಡೆಯಬೇಕು? ಇದು ಪ್ರಶ್ನೆಯಲ್ಲವೇ?

ಶ್ಯಾಂ ಬೆನಗಲ್(Shyam benagal) ಭಾರತೀಯ ಚಿತ್ರರಂಗದಲ್ಲಿ ಬಹಳ ದೊಡ್ಡ ಹೆಸರು. ಪ್ರಯೋಗಶೀಲತೆಯಲ್ಲಿ ಅವರು ನಮ್ಮ ಕೆ. ಎ. ಅಬ್ಬಾಸ್, ಜಿ .ವಿ. ಅಯ್ಯರ್ ರ ಪಂಕ್ತಿಯಲ್ಲಿದ್ದವರು. ಸಿನಿಮಾ ಒಂದು ಶಕ್ತಿಶಾಲಿ ಮಾಧ್ಯಮ. ಅದಕ್ಕೊಂದು ಗುರುತರ ಜವಾಬ್ದಾರಿ ಇದೆ ಎಂಬುದನ್ನು ಪದೇ ಪದೇ ತೋರಿಸಿದವರು. ಇದಕ್ಕೊಂದು ಅದ್ಭುತ ನಿದರ್ಶನ “ಮಂಡಿ”. “ಮಂಡಿ” ಮರೆತುಬಿಡಬಹುದಾದ ಚಿತ್ರವಲ್ಲ. ಈ ಸಮಾಜದಲ್ಲಿ ಸೂಳೆಯರಿರುವವರೆಗೂ ಅಥವಾ ಅವಳ ನಿರ್ಗಮನದ ನಂತರವೂ ಅದರ ಔಚಿತ್ಯತೆಯನ್ನು ಕಳೆದುಕೊಳ್ಳುವುದಿಲ್ಲ.
ಚಿತ್ರದ ವಿಶೇಷತೆಗಳಲ್ಲೊಂದು ಕ್ಯಾಮರಾ ಭಾಷೆ. ಕ್ಯಾಮರಾ ಎಂದರೆ ಕೇವಲ ಒಂದು ಯಂತ್ರ ಮಾತ್ರ ಎಂದು ತಿಳಿದ ನಮ್ಮ ಯುವ ನಿರ್ದೇಶಕ ಮಹಾಶಯರು ಇಲ್ಲಿ ಕಲಿಯಬೇಕಾದುದು ಸಾಕಷ್ಟಿದೆ. ನಟರನ್ನು, ನಟಿಯರನ್ನು ಆರಾಧಿಸಿ ಚಿತ್ರ ಮಾಡುವ ದೃಷ್ಟಿಹೀನರಿಗೂ ತಿಳಿದುಕೊಳ್ಳಲು ಇಲ್ಲಿ ಸಾಕಷ್ಟಿದೆ. ಹರಿದು ಹೋಗುವ ಹಣಕ್ಕೆ ಪ್ರತಿಭೆಯಿದ್ದರೆ ಮಾತ್ರ ಅರ್ಥ ತುಂಬಲು ಸಾಧ್ಯವಿದೆ ಎನ್ನುವುದಕ್ಕೂ “ಮಂಡಿ” ಸಾಕ್ಷಿಯಾಗುತ್ತದೆ.

                                                          ಡಾ.ಆರ್.ಜಿ. ಮಠಪತಿ(ರಾಗಂ)

Tuesday, June 21, 2011

ಲಿಂಗದೇವರು ಹಳೆಮನೆ : ರಂಗನಿರ್ಗಮನ

ಲಿಂಗದೇವರು ಹಳೆಮನೆ(Lingadevaru Halemane) : ರಂಗನಿರ್ಗಮನ

``ನಾನು ಶಿವಮೊಗ್ಗದಲ್ಲಿದ್ದೀನಿ. ಅದೇ ಮಾಮೂಲೂ ಲಾಡ್ಜ್‌ನಲ್ಲಿ ಇದೀ ತಾನೆ? ಇನ್ನೂ ಎಷ್ಟು ದಿನ ಇರ್‍ತಿಯಾ? ನಾಳೆ-ನಾಡಿದ್ದು ಸೇರಿದ್ರಾಯ್ತು.”
ಹಳೆಮನೆಯವರ ನನ್ನೊಂದಿಗಿನ ಕೊನೆಯ ಮಾತುಗಳಿವು. ಅದೇ ರಾತ್ರಿ, ೧೨ರ ಆಸುಪಾಸಿನಲ್ಲಿ ಹಳೆಮನೆ ವಿಧಿವಶ. ಗೆಳೆಯ ಹಾಲತಿ ಸೋಮಶೇಖರ್, `Halemane is no more’ ಎನ್ನುವ smsನ್ನು ನನಗೆ ರವಾನಿಸಿದ್ದು ಅದೇ ರಾತ್ರಿ ೩ ಗಂಟೆ ೩೯ ನಿಮಿಷಕ್ಕೆ. ಆದರೆ ಅದನ್ನು ಗಮನಿಸಿದ್ದು ನಾನು ಮುಂಜಾವು ೫.೩೦ ನಿಮಿಷಕ್ಕೆ. ಒಂದು ಕ್ಷಣ ತಬ್ಬಿಬ್ಬು. ಇನ್ನೊಂದು ಕ್ಷಣ ನನ್ನಿಂದ ಏನೋ ತಪ್ಪಾಯಿತೆನ್ನುವ ಅಸಹ್ಯ, ಮತ್ತೊಂದು ಕ್ಷಣ ಎಲ್ಲ ಖಾಲಿಯಾದ, ಕೊನೆಯಾದ ಏನೋ, ಇನ್ನೇನ್ನೇನೋ.... ಶಬ್ದಕ್ಕೆ ಮೀರಿದ್ದು. ಮೌನದೊಳಗೆ ಮಿಡುಕಾಡಿದ್ದು.
ಎದ್ದವನೇ, ಇನ್ನು ತಡವಾಗುವುದು ಬೇಡ ಎಂದು ಕಾರು ದೌಡಿಸಿಕೊಂಡು ಕನಕದಾಸ ನಗರದ ಅವರ ಮನೆಯೆಡೆಗೆ ಹೊರಟೆ. ಮನೆಯ ಮುಂದೆ ರಾತ್ರಿಯೆಲ್ಲ ಸುಟ್ಟು ತಣ್ಣಗಾಗಿದ್ದ ಬೆಂಕಿ, ಬೂದಿ, ಅರೆಸುಟ್ಟ ಕಟ್ಟಿಗೆಗಳು, ಗೆಳೆಯ ಹಾಲತಿ, ಉಮೇಶ್, ರಮೇಶ್, ಹಳೆಮನೆಯವರ ಇಬ್ಬರೂ ಪುತ್ರಿಯರಾದ ಭೂಮಿಕಾ, ನಿಹಾರಿಕಾ, ಪತ್ನಿ ನಂದಾ ಹಾಗೂ ಕೆಲವು ಜನರನ್ನು ಹೊರತುಪಡಿಸಿದರೆ ಹೆಚ್ಚಿಗೆ ಜನರಿರಲಿಲ್ಲ. ಅಪೋಲೊ ಆಸ್ಪತ್ರೆಯ ಶೈತ್ಯಡಬ್ಬಿಯಲ್ಲಿ ಹಳೆಮನೆ ನಿರಾಳವಾಗಿದ್ದರು. ಆ ಕ್ಷಣದಲ್ಲಿ ಅವರು, ಶರೀಫನ ಸಾಲುಗಳಲ್ಲಿ ಹೇಳಬೇಕೆಂದರೆ, `ಹಳೆಮನೆ’, `ಗಂಟೆ ಬಾರಿಸಿದಂತೆ ಖಾಲಿ ಮನೆ’. ಮುಖಕ್ಕೊಂದು ವಿಲಕ್ಷಣವಾದ, ಶಾಂತ, ಸಮಾಧಾನದ ಮುದ್ರೆಯಿತ್ತು. ಬಕ್ಕುತಲೆಯಿಂದ ಪಾದಗಳವರೆಗೆ ನಿಶ್ಚಲವಾಗಿದ್ದ, ಹಳೆಮನೆಯವರ, ಈ ಪ್ರಪಂಚದಲ್ಲಿ ಮತ್ತೆ ಇನ್ನೆಂದೂ ಮರುಕ್ರಿಯೆಗೊಳಪಡಲಾರದ ನಿಶ್ಚಲ ದೇಹವನ್ನು ನೋಡಿದೆ, ನೋಡುತ್ತಲೇ ಇದ್ದೆ, ಮತ್ತೆ ವಿಧಿಯಿಲ್ಲದೆ ಸರಿದುಬಿಟ್ಟೆ.
`ಮನೆಯ ಒಳಕೋಣೆಯಲ್ಲಿ ಸುಜಾತಾ ಅಕ್ಕಿ, ಚಿದಾನಂದ ಸಾಲಿಯವರ ನಾಟಕಗಳ ಕೈ ಬರಹಗಳು ಮುನ್ನುಡಿಗಾಗಿ ಕಾಯುತ್ತಿವೆ, ಪ್ರಶಸ್ತಿ, ಪುರಸ್ಕಾರಗಳೆಲ್ಲಾ ತಬ್ಬಲಿಯಾಗಿವೆ, ash tray ನಿನ್ನೆ ರಾತ್ರಿ ಬಿದ್ದ ಅರ್ಧ ಸುಟ್ಟ ಸಿಗರೇಟು ಇನ್ನೂ ಕಸದ ಗುಂಡಿಯನ್ನು ಸೇರಿಲ್ಲ. ಆದರೆ ದೇಹ ಮಣ್ಣಿಗೆ ಈಗ ಸಿದ್ಧವಾಗಿದೆ. ಇನ್ನೊಂದು ಕ್ಷಣ ಅಲ್ಲಿರಬಾರದು ಎನ್ನಿಸಿಬಿಟ್ಟಿತು. ಬಂದು ತಣ್ಣಗೆ ಕುಳಿತುಬಿಟ್ಟೆ. ಅದು ಶಬ್ದ ಸತ್ತ ಘಳಿಗೆ... ಹಳೆಮನೆ ತೀರಿದರು ಎನ್ನುವ ಸತ್ಯವನ್ನು ನಿಶ್ಚಲ ದೇಹವನ್ನು ನೋಡಿದ ನಂತರವೂ ಮನವರಿಕೆಗೊಳ್ಳದ ನಾನು ಇನ್ನೊಬ್ಬರಿಗೆ ಹೇಳುವುದಂತೂ ದೂರದ ಮಾತು.
ಭಾಷೆಯನ್ನು ಕುರಿತು ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. ``ಪದವನರ್ಪಿಸಬಹುದಲ್ಲದೆ  ಪದಾರ್ಥವನ್ನರ್ಪಿಸಲಾಗದು.” ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’ ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಈಗ ನೆನಪೆಂಬ ಭೃಂಗದ ಬೆನ್ನೇರಿ ಹಿಂದೆ ಹೋಗಬೇಕು ನಾನು. ನಮ್ಮ ಸ್ನೇಹಕ್ಕೆ ೧೧ ವರ್ಷಗಳ ಆಯಸ್ಸು. `ಗುರುಗಳೇ’, ಎಂದು ನನ್ನ ಸಂಭೋದನೆಯಾದರೆ, `ಏನಯ್ಯಾ ಶಿಷ್ಯಾ’ ಎನ್ನುವ ಗೌಡಿಕೆಯ ಪ್ರಶ್ನೆ ಅವರದು. ಸ್ವಲ್ಪ ಸಿಟ್ಟಾಯಿತೋ, `ಅಯೋಗ್ಯ ನೀ ಈ ಜನ್ಮದಲ್ಲಿ ಸರಿ ಹೋಗೊಲ್ಲಾ’. ಇದು ಹಳೆಮನೆ. ಜಗಳ, ಪ್ರೀತಿ, ಆಕ್ರಮಣ, ಎಲ್ಲವೂ ನೇರಾನೇರ. ಹಳೆಮನೆಯ ಸ್ನೇಹ ಮತ್ತು ಬೌದ್ಧಿಕ ಸೌಂದರ್ಯದಲ್ಲಿ, ಅವರ ಉಡಾಪೆ ಗಮನಕ್ಕೆ ಬಾರದೆ ಹೋಯಿತು. ೨೦೦೧ರ ಆಸುಪಾಸಿನಲ್ಲಿ ಬದುಕಿಗೊಂದು ನೆಲೆಯನರಸುತ್ತಾ ನಾನು ಮೈಸೂರಿಗೆ ಬಂದೆ. ಭಾರತೀಯ ಭಾಷಾ ಸಂಸ್ಥೆ (CIIL)ಯ, ಡಾ.ಮಾರುತಿ ತಳವಾರ ನನಗೊಂದು ತಾತ್ಕಾಲಿಕ ನೆಲೆಯನೊದಗಿಸಿದರು. ಅದೇ ಸಂಸ್ಥೆಯ ಹಳೆಮನೆ ಎಂಬ ಅಡ್ಡ ಹೆಸರಿನ ಈ ಮನುಷ್ಯ ನನಗೆ ಆಕರ್ಷಕವಾಗಿ ಕಾಣಲು ಉತ್ತರ ಕರ್ನಾಟಕದ ಹಿನ್ನೆಲೆಯೇ ಕಾರಣ. ಇವರ್‍ಯಾರೋ ನಮ್ಮ ಕಡೆಯವರಿದ್ದಂತಿದ್ದಾರೆ, ಅದೃಷ್ಟವನ್ನು ಪರೀಕ್ಷಿಸಿಕೊಳ್ಳೋಣ ಎಂದು ನನ್ನ ಸ್ವವಿವರವನ್ನು ಅವರ ಮುಂದಿಟ್ಟೆ. ಸಿಗರೇಟು ಎಳೆಯುತ್ತಾ ಮುಕ್ತವಾಗಿ ನಗುತ್ತಾ, ತಮ್ಮ ಕಪ್ಪೆ ಮೂಗಿನ ಮೇಲೆ ಮತ್ತೆ ಮತ್ತೆ ಕೈಯಾಡಿಸಿಕೊಳ್ಳುತ್ತಾ ಗಟ್ಟಿಯಾಗಿ ಕುಳಿತುಕೊಂಡಿರುತ್ತಿದ್ದ ಈ ಲಿಂಗದೇವರ ಸುತ್ತ ನಾನು ಪ್ರದಕ್ಷಿಣೆ ಹಾಕಿದ್ದು ಒಂದು ವಾರವಷ್ಟೇ. ಆನಂತರ ಅವರು ನನ್ನನ್ನು ಸಾಕ್ಷರತಾ ಪುಸ್ತಕ ಆಯ್ಕೆ ಮಂಡಳಿಯ ಸದಸ್ಯನಾಗಿ ಬೆಂಗಳೂರಿಗೆ ಕಳುಹಿಸಿದರು. ಸುಮಾರು ಒಂದು ತಿಂಗಳ ಕೆಲಸ. `ಸದ್ಯ ಇದನ್ನು ಮಾಡಿಕೊಂಡಿರು, ಬರುವುದರೊಳಗಾಗಿ ಪ್ರೊಜೆಕ್ಟ್ ಗ್ರ್ಯಾಂಟ್ ಆಗಿರುತ್ತದೆ, ಕೆಲಸ ಮಾಡುವಿಯಂತೆ.’ ಸರಿ, ನಾನು ಬೆಂಗಳೂರಿಗೆ ಹೊರಟೆ. ಅದು ಹಳೆಮನೆ ತೋರಿಸಿದ ಹಾದಿಯ ಮೇಲೆ ನನ್ನ ಮೊದಲ ಪ್ರವಾಸವಾಗಿತ್ತು, ಪ್ರಯತ್ನವಾಗಿತ್ತು.
ಹೆಸರು ಮಾತ್ರ ಹಳೆಮನೆ(Lingadevaru Halemane), ಅವರ ಪಕ್ಕದಲ್ಲಿರುವವರೆಲ್ಲಾ ಯುವಕರೇ, ಹೊಸಬರೇ. ಚೆಂದದ ಹುಡುಗಿಯರಿಗಾಗಿ ಒಂದಿಷ್ಟು ವಿಶೇಷ ಆಕರ್ಷಣೆ, ಪ್ರೀತಿಯಿತ್ತು ಹಳೆಮನೆಯರಲ್ಲಿ. ಗುಣಗ್ರಾಹಿ ಆಗಿದ್ದರು. ಅವರ ಬೋಳು ತಲೆ ಎನ್ನುವುದು ಸಾವಿರಾರು ಯೋಜನೆಗಳ CPU. ಜೀವಂತಿಕೆಯ ಮನುಷ್ಯ. ಎಗ್ಗಿಲ್ಲದೇ ಬದುಕುವುದು, ಕುಡಿಯುವುದು, ಓದುವುದು, ತಿರುಗಾಡುವುದು ಅವರ ಜೀವನ ಶೈಲಿಯಾಗಿತ್ತು. ಯಾವುದಕ್ಕೂ ಪ್ರಾಮಾಣಿಕವಾಗಿ ಹಂಬಲಿಸುತ್ತಿದ್ದರು ಹಳೆಮನೆ. ಈ ಹಳೆಮನೆಯೆಂದರೆ ನನ್ನ ಪಾಲಿಗೆ ಹಂಬಲ ಮತ್ತು ಬೆಂಬಲ.
ನಾನು ಹೋದ ಹದಿನೈದು ದಿನಗಳ ನಂತರ ಹಳೆಮನೆ ಬೆಂಗಳೂರಿಗೆ ಬಂದರು. ಮದನ್‌ಗೋಪಾಲರೊಂದಿಗೆ ನನ್ನೆದುರು ಕುಳಿತು ಸದಸ್ಯರನೆಲ್ಲಾ ಉದ್ದೇಶಿಸಿ ಒಂದು ಭಾಷಣ ಬಿಗಿದು ಹೊರಟ ಬೈರಾಗಿ. ಕುಟುಂಬದಿಂದ ಭಾವನಾತ್ಮಕವಾಗಿ ಬೇರುಗಡಿತನಾಗಿದ್ದ ನಾನು ಅವರಲ್ಲಿಯೇ ಎಲ್ಲವನ್ನು ಕಂಡುಕೊಂಡಿದ್ದೆ. ನಾನೂ ಹೊರಟೆ ಅವರ ಬೆನ್ನು ಹತ್ತಿ. ಮಧ್ಯಾಹ್ನದ ಎರಡು ಗಂಟೆ, ಅಗ್ರಹಾರ ಕೃಷ್ಣಮೂರ್ತಿ ಸಿಕ್ಕರು. ಒಂದು ಚಿಕ್ಕ ಪಾನಗೋಷ್ಠಿಯಾಯಿತು. ಅಲ್ಲಿಂದ ಮತ್ತೆ ರವೀಂದ್ರ ಕಲಾಕ್ಷೇತ್ರದೆಡೆಗೆ. ಮರದ ಕೆಳಗೆ ನಿಂತುಕೊಂಡು ಇಬ್ಬರೂ ಅಶೋಕ್ ಬಾರಿದೋಟರ ನಾಟಕಗಳನ್ನು ನೋಡಿ ಮತ್ತೆ ನಿರ್ಗಮಿಸಿದೇವು. ಸಿಗರೇಟು ಪ್ಯಾಕೇಟ್ ಖಾಲಿಯಾಯಿತು. ಮುಂಜಾನೆಯಿಂದ ಹಳೆಮನೆಯವರಿಗೆ ನನ್ನೊಂದಿಗೇನೋ ವಿಶೇಷ ಮಾತನಾಡಬೇಕಿತ್ತು. ಗಕ್ಕನೇ ನಿಂತು ``ಜೇಬಿನಲ್ಲೆಷ್ಟು ದುಡ್ಡಿದೆಯೋ?’’ ಎಂದರು. ನೂರೋ, ಇನ್ನೂರೋ ತೆಗೆದು ತೋರಿಸಿದೆ. ಒಂದು ಜೋರಾದ ನಗೆ ನಕ್ಕು, ``ಇದರಿಂದ ಏನು ಆಗುವುದಿಲ್ಲ ಬಿಡೋ’’, ಎನ್ನುತ್ತಾ ತಕ್ಷಣ ಸಿಡಿಮಿಡಿಗೊಂಡರು. ``ನನ್ನ ಮಗಳು ಭೂಮಿ ಇದಾಳಲ್ಲ, ಅವಳ ಸಲುವಾಗಿ ಸಾಕಾಗಿ ಹೋಗಿದೆ. ಜೇಬಿನಿಂದ ದುಡ್ಡು ತೊಗೊಂಡ ಮೇಲೆ ಅದನ್ನ ನನಗೆ ಹೇಳೊದಲ್ವೇ? ಈಗ ನನ್ನ ಗತಿ ನೋಡು?’’ ಹಳೆಮನೆಯವರಿಗೆ ದುಡ್ಡು ಬೇಕಾಗುತಿತ್ತು. ಅವರದು ಬಡವರ ಬದುಕಲ್ಲ, ಇರುವಾಗ ಹೊಟ್ಟೆ ತುಂಬಾ ಉಂಡು, ಹಂಚಿ, ತೂರಾಡಿ ಜಾತ್ರೆ ಮಾಡುವ ಜಾಯಮಾನ. ``ಹಳೆಯ ಪುಸ್ತಕದ royalty ಒಂದು ಬರೋದಿದೆ ನವಕರ್ನಾಟಕದಿಂದ, ಅದೃಷ್ಟ ಪರೀಕ್ಷಿಸಿಕೊಳ್ಳೋಣ ನಡೆ ಕಣೋ’’ ಎಂದು ನವಕರ್ನಾಟಕದೆಡೆಗೆ ನನ್ನನ್ನು ಕರೆದುಕೊಂಡು ಹೋದರು. ಅವರೋ, ಇವರಿಗಾಗಿಯೇ ಕಾಯುತ್ತಿದ್ದರು ಎನ್ನುವಂತೆ, ಹತ್ತು ಸಾವಿರ ರೂಗಳನ್ನು ಹಳೆಮನೆಯವರ ಕೈಗಿಟ್ಟುs thanks ಹೇಳಿ, ಬೀಳ್ಕೊಟ್ಟರು. ಸಿಕ್ಕಿದೆಲ್ಲವೂ ಮೃಷ್ಟಾನ್ನ ಎಂದು ಜೋಳಿಗೆಗೆ ಸುರಿದುಕೊಳ್ಳುವ ಜಂಗಮನಂತೆ ಬ್ಯಾಗಿನಲ್ಲಿ ದುಡ್ಡಿಟ್ಟುಕೊಂಡು ಅವರು ನನ್ನನ್ನು ಕರೆದುಕೊಂಡು ಹೋದದ್ದು ಬೆಂಗಳೂರಿನ ಪ್ರಸಿದ್ಧ `ಕಂದಕೂರ್’ ಊಟದ ಮನೆಗೆ. ಆ `ಕಂದಕೂರ್ ಬಾಳೆ ಎಲೆ ಊಟದ ಬಗ್ಗೆ ಅವರಿಗೆ ಎಲ್ಲಿಲ್ಲದ ಅಭಿಮಾನ. ಗಡದ್ದಾಗಿ ಊಟ ಮಾಡಿ, ಗುಡಾಣ ಹೊಟ್ಟೆಯ ಮೇಲೆ ಕೈಯಾಡಿಸಿಕೊಳ್ಳುತ್ತಾ, ಸಿಗರೇಟು ಎಳೆದು ``ಊರಿಗೇನಾದ್ರು ಹೋಗ್ತೀಯಾ?’’ ಎಂದು ಪ್ರಶ್ನಿಸಿದರು. ನಾನು ಮೌನವಾದೆ. ಅವರು ಬೆಂಗಳೂರಿನ ಬಸ್‌ಸ್ಟ್ಯಾಂಡಿಗೆ ನನ್ನೊಂದಿಗೆ ಬಂದು, ಬಸ್ಸು ಹತ್ತಿಸಿ, ಸಾವಿರ ರೂಪಾಯಿಗಳನ್ನು ನನ್ನ ಕೈಗಿಟ್ಟು, `ಹೋಗಿ ಬಾ’ ಎಂದು ಹೇಳುತ್ತಾ ಹೊರಟುಹೋದರು.
ಬಹುತೇಕ ಈ ಸಾವಿನಲ್ಲಿಯೂ ಅವರು ಹೀಗೆಯೇ ಹೊರಟುಹೋದರು. ಕಾಲು ಕೆದರಿ ಜಗಳ ಕಾಯುತ್ತಿದ್ದ ಹಳೆಮನೆ, ನನಗೆ ನಿರ್ಮೋಹಕ್ಕೂ ಆದರ್ಶ. ಮನುಷ್ಯನಾಗಿದ್ದ ಹಳೆಮನೆಯವರ ಹಳೆಯ ಬದುಕಿನಲ್ಲಿ ಅದೆಷ್ಟೋ ದೀರ್ಘ ಸಂಬಂಧಗಳು, ಮಧ್ಯದಲ್ಲಿಯೇ ಕೈ ತಪ್ಪಿವೆ. ಗೋಳಾಡಿಸಿ, ಹೈರಾಣು ಹಾಕಿ, ಅಟ್ಟಾಡಿಸಿ ಅವರನ್ನು ಗಟ್ಟಿಗೊಳಿಸಿದ್ದವೇನೋ. ಹೀಗಾಗಿ ಹೋರಾಟಕ್ಕಾಗಿ ಹೋರಾಡುತ್ತಿದ್ದ ಹಳೆಮನೆ ನಿರ್ಮೋಹ ಸಾಧಿಸಿಕೊಂಡಿದ್ದರು.
ಅವರು ಸಾಗಿ ಬಂದ ದಾರಿಯೂ ಸರಳರೇಖೆಯದ್ದಲ್ಲ. ಯಾವ ರಾಜಕೀಯ ಅಥವಾ ದೊಡ್ಡ ಶೈಕ್ಷಣಿಕ ಹಿನ್ನೆಲೆಯಿಲ್ಲದ, ಸಾಮಾನ್ಯ ರೈತಾಪಿ ಕುಟುಂಬದಿಂದ ಬಂದ ಹಳೆಮನೆ, ತನ್ನ ಸ್ವಸಾಮರ್ಥ್ಯದಿಂದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಬೆಳೆಸಿಕೊಂಡಿದ್ದರು. ಭಾಷಾ ವಿಜ್ಞಾನವನ್ನು ಅಭ್ಯಸಿಸಿ, ಭಾರತೀಯ ಭಾಷಾ ಅಧ್ಯಯನ ಸಂಸ್ಥೆ (CIIL)ಯಲ್ಲಿ ಸೇರಿಕೊಂಡು, ಅಲ್ಲಿದ್ದುಕೊಂಡೇ ಪತ್ರಿಕೋದ್ಯಮ, ರಂಗಭೂಮಿ, ಜನಪರ ಚಳುವಳಿಗಳು, ಸಿನಿಮಾ ಮತ್ತು ಸಾಹಿತ್ಯಕ್ಕೆ ತೊಡಗಿಸಿಕೊಂಡರು. ಕನ್ನಡ ಎಂ.ಎ. ಮಾಡಿ ಆರು ಚಿನ್ನದ ಪದಗಳನ್ನು ಪಡೆದರು. ನಾನು ಗಮನಿಸಿದಂತೆ ಭಾಷಾ ಸಂಸ್ಥೆ, ಸಂಶೋಧನೆಗಾಗಿ ಮೀಸಲಾಗಿರುವ ಒಂದು ಸರ್ಕಾರಿ ಅಂಗ. ಹಳೆಮನೆಯವರನ್ನು ಹೊರತುಪಡಿಸಿ ಉಳಿದ್ಯಾವ ಸಂಶೋಧಕರೂ ಸಾಮಾಜಿಕ ಚಿಂತನೆಗಳಿಗೆ ತೊಡಗಿಸಿಕೊಂಡ ಉದಾಹರಣೆಗಳಿಲ್ಲ. ಆದರೆ ಹಳೆಮನೆಯವರ ದಾರಿ ಭಿನ್ನವಾಗಿತ್ತು. ಒಂದು ಕಾಲಕ್ಕೆ ಮೈಸೂರಿನ ದಾಸ್‌ಪ್ರಕಾಶ್ ಹೋಟೆಲ್‌ನ ಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದರು, ಜನಪರ ರಂಗಭೂಮಿಗಳಾದ IPಖಿಂ, ಸಮುದಾಯ, ಬೀದಿ ನಾಟಕಗಳ ಮೂಲಕ ಸಮಾಜದೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿಕೊಂಡರು. ಸಮಕಾಲೀನ ಸಾಮಾಜಿಕ, ರಾಜಕೀಯ, ವಿದ್ಯಮಾನಗಳನ್ನೆತ್ತಿಕೊಂಡು ರಾಜಶೇಖರ ಕೋಟಿಯವರ `ಆಂದೋಲನ’ಕ್ಕೆ ನಿರಂತರ ಐದು ವರ್ಷ ಅಂಕಣಗಳನ್ನು ಬರೆದರು. ರಾಜ್ಯ ಸಾಕ್ಷರತಾ ಮಿಷನ್ನಿನ ಕರ್ಣಧಾರತ್ವ ವಹಿಸಿಕೊಂಡು ರಾಜ್ಯವನ್ನು ಹತ್ತಾರು ಸಾರಿ ಸುತ್ತಿ ಬಂದರು. ಹಳೆಮನೆ ರಾಜ್ಯವಾಪಿಯಾಗಿದ್ದರು.
ಮೊದಲ ದಾಂಪತ್ಯದ ತೊಡಕುಗಳು, ಆಕ್ಸಿಡೆಂಟ್‌ಗಳು, ವಿರೋಧಗಳು ಅದೆಷ್ಟೋ ಬಾರಿ ಹಳೆಮನೆಯವರನ್ನು ಮುಟ್ಟಿಸಬೇಕಾದ ಗುರಿಗೆ ಮುಟ್ಟಿಸಲಿಲ್ಲ. ಈ ಮಧ್ಯ ಒಮ್ಮೆ `CIIL’ದ, ಮತ್ತೊಮ್ಮೆ `ರಂಗಾಯಣ’ದ ನಿರ್ದೇಶಕರೆಂದು ಅಧಿಕೃತವಾಗಿ ಘೋಷಣೆಯಾಗಿಯೂ ಅಧಿಕಾರ ಕೈಗೆ ಸಿಗಲಿಲ್ಲ. ಹಲವು ಕಾರಣಗಳಿಂದ ಯಾವ ಬಡ್ತಿಯನ್ನು ಪಡೆಯದೇ ನಿಶ್ಚಲವಾದ ಹಳೆಮನೆ ಈ ಶಾಪವನ್ನೇ ವರವನ್ನಾಗಿಸಿಕೊಂಡರು. ಮೈಸೂರಿನ, ನಾಡಿನ, ಎಲ್ಲ ಸಂಘ-ಸಂಸ್ಥೆಗಳೊಂದಿಗೆ ತಾವಿದ್ದ ಸ್ಥಳದಿಂದಲೇ ಸಂಪರ್ಕವೇರ್ಪಡಿಸಿಕೊಂಡರು. ನಿರಂತರವಾಗಿ ಬರೆದರು. ಮುಂಜಾನೆ ೧೦ ಗಂಟೆಗೆ ಭಾಷಾ ಸಂಸ್ಥಾನಕ್ಕೆ ಬಂದು ಬರೆಯಲು ಕುಳಿತುಕೊಳ್ಳುತ್ತಿದ್ದ ಹಳೆಮನೆ ಸಾಯಂಕಾಲದ ಐದು ಗಂಟೆವರೆಗೂ ಕುಳಿತ ಸ್ಥಳದಿಂದ ಕದಲುತ್ತಿರಲಿಲ್ಲ. ಮಧ್ಯ ಎರಡು ಗಂಟೆಗೆ ಊಟ, ಟೀ ಮತ್ತು ನಿರಂತರವಾಗಿ ಸಿಗರೇಟ್. ಬಹುತೇಕ ಯಾರೂ ಮತ್ಸರಪಡಬಹುದಾದಷ್ಟು ಪ್ರತಿಭೆ, ಜೀವನಸೌಂದರ್ಯ, ಕಾರ್ಯಕ್ಷಮತೆ, ದೇವರು ಈ ಲಿಂಗದೇವರಿಗೆ ಧಾರೆ ಎರೆದಿದ್ದ.
ಭಾಷಾ ಸಂಸ್ಥಾನದಲ್ಲಿ ಅವರ ಕೋಣೆಗೆ Directorರರಿಗಿಂತಲೂ ಹೆಚ್ಚಿನ ಸಂದರ್ಶಕರಿರುತ್ತಿದ್ದರು. ಪಾಪ ಪೋಸ್ಟ್‌ಮನ್‌ನಂತೂ ಇವರ ಪೋಸ್ಟಿನ ಹೊರೆ ಹೊತ್ತೇ ಸುಸ್ತಾಗಿರಬಹುದು. ಐದು ಗಂಟೆಗೆ ನೇರವಾಗಿ ಅಲ್ಲಿಂದ ರಂಗಾಯಣಕ್ಕೆ. `ಭಾಷಾ ಸಂಸ್ಥಾನ’ ಅವರ ಬುದ್ಧಿ ಮತ್ತು ಬದುಕಿನ ಆಕರವಾಗಿದ್ದರೆ `ರಂಗಾಯಣ’ ಹಳೆಮನೆಯವರ ಹೃದಯದ ಹಂಬಲ. ರಾತ್ರಿಯಾದರೇ ಜಾತ್ಯಾತೀತವಾಗಿ, ವಯಸ್ಸಿನ ಗಣನೆಯಿಲ್ಲದೆ, ಲಿಂಗಭೇದವಿಲ್ಲದೇ, ಶುರುವಾಗುತಿತ್ತು ಲಿಂಗದೇವರ ಗೋಷ್ಠಿ. ಒಂದಂತೂ ಹೇಳಬಲ್ಲೆ, ಅವರ ಪಾನಗೋಷ್ಠಿಗಳು ನಮ್ಮ ವಿಶ್ವವಿದ್ಯಾಲಯದ ಪಾಠ ಪ್ರವಚನಗಳಿಗಿಂತ ಆದೆಷ್ಟೋ ಮೇಲಾಗಿರುತ್ತಿದ್ದವು. ಹೀಗೊಂದು ರಾತ್ರಿ ಮಾತು ಮತ್ತು ಮದಿರೆಯ ಜಾತ್ರೆಯಲ್ಲಿದ್ದ ನಾವು ಸಮಯ ನೋಡಿಕೊಂಡಾಗ ೨ ಗಂಟೆ. ಅಂದು ಹಳೆಮನೆಯವರ ಹೆಂಡತಿ ನಂದಾ ಮನೆಯಲ್ಲಿರಲಿಲ್ಲ. ಏನಿದ್ದರೂ ಹಳೆಮನೆಯವರೇ ನನಗೆ ಊಟ ಬಡಿಸಬೇಕು. ಅನ್ನದ ಪಾತ್ರೆ ಎತ್ತಿಕೊಂಡು ನನಗೂ, ತಮಗೂ ಅನ್ನ ಬಡಿಸಿದ ಹಳೆಮನೆಯವರಿಗೆ ಆ ರಾತ್ರಿ ಸಾಂಬಾರಿರುವ ಪಾತ್ರೆಯೇ ಸಿಗಲಿಲ್ಲ. ಸರಿ, ಏನೋ ಒಂದನ್ನು ಹಾಕಿಕೊಂಡು ಊಟ ಮುಗಿಸಿದೆವು. ಮುಂಜಾನೆ ಎದ್ದು ನೋಡಿದರೆ ಸಾಂಬಾರ್ ಪಾತ್ರೆ ಅವರ ಊಟದ ತಟ್ಟೆಯ ಕೆಳಗಡೆಯೇ ಇದೆ. ಆ ದಿನ ಅವರಂದದ್ದು ನೆನಪು. ``ಶಿಷ್ಯ, ವಯಸ್ಸಾಯ್ತು ಕಣೋ’’. ಆದರೆ ನೀವು ಹೇಳಿ, ಅರವತ್ತೆರಡಕ್ಕೆ ಈ ಲೋಕ ನಿರ್ಗಮಿಸಿದ ಹಳೆಮನೆಯವರಿಗೆ ನಿಜವಾಗಿಯೂ ವಯಸ್ಸಾಗಿತ್ತೇ?
ಮೈಸೂರು ಅರಸು ಮನೆತನವನ್ನು ಕುರಿತು ಸಂಸನ ನಂತರ ಬಹಳಷ್ಟು ನಾಟಕಗಳನ್ನು ಬರೆದವರು ಹಳೆಮನೆಯವರೇ ಇರಬಹುದು. ಅಂದಹಾಗೆ ಮೈಸೂರು ಪ್ಯಾಲೆಸ್‌ನ ಹೊನಲು-ಬೆಳಕಿನ ವಿನ್ಯಾಸಕಾರರೂ ಹಳೆಮನೆಯೇ ಆಗಿದ್ದರು. ಅದಕ್ಕಾಗಿ ಪತ್ರಿಕೆಯಲ್ಲಿ ಎಷ್ಟೊಂದು ಕಟು ವಿಮರ್ಶೆಯನ್ನು ಎದುರಿಸಿದರು. `ಚಿಕ್ಕದೇವ ಭೂಪ’, `ಅಂತೆಂಬರ ಗಂಡ’, `ಮದರ್ ಕರೇಜ್’, `ಡಾ.ಬೇತೂನ್’, `ಧರ್ಮಪುರಿಯ ದೇವದಾಸಿ’, ಹೀಗೆ ಹಳೆಮನೆ ನಾಟಕಗಳನ್ನು ಬರೆದರು, ಆದರೆ ಸೃಜನಶೀಲ ಬರವಣಿಗೆ ಅವರಿಗೆ ಒಗ್ಗಿತ್ತೆಂದು ಅವರ ನಾಟಕಗಳನ್ನು ಗಂಭೀರವಾಗಿ ಅಭ್ಯಸಿಸಿದ ನನಗೆ ಅನಿಸಲಿಲ್ಲ. ಶಿವಮೊಗ್ಗ ವಿಶ್ವವಿದ್ಯಾಲಯದ ಬಿ.ಎ. ವಿದ್ಯಾರ್ಥಿಗಳಿಗೆ ಅವರ `ಅಂತೆಂಬರ ಗಂಡ’ ನಾಟಕ ಕುರಿತು ಬರೆದುದ್ದರ ನೆನಪಿದೆ. ಅವರ ನಾಟಕಗಳನ್ನು ಇಟ್ಟುಕೊಂಡು ಹಂಪಿ ವಿಶ್ವವಿದ್ಯಾಲಯದಿಂದ ಪದವಿಯೊಂದನ್ನು ಪೂರೈಸಿಕೊಳ್ಳಬೇಕು ಎಂದೂ ನನ್ನ ವಿಚಾರವಾಗಿತ್ತು. ಆದರೆ ಅದೇಕೊ, ಅದ್ಯಾವುದು ಸಾಧ್ಯವಾಗಲೇ ಇಲ್ಲ. ಎರಡು ವರ್ಷದ ನನ್ನ ಮೈಸೂರು ವಾಸಕ್ಕೆ ಒಂದು ಹೊಸ ಅರ್ಥ ಒದಗಿಸಿದರು ಹಳೆಮನೆ. ನಾನು ಸಹಾಯಕ ಸಂಶೋಧಕನಾಗಿ ಕಿಕ್ಕೇರಿ ನಾರಾಯಣರ ಜೊತೆಗೆ ಕೆಲಸ ಮಾಡುತ್ತಿದ್ದರೂ ಮಾತುಗಾರಿಕೆಯಲ್ಲಿ, ಸ್ನೇಹದಲ್ಲಿ, ಕಾಯಕದಲ್ಲಿ ನನಗೆ ಹಳೆಮನೆಯವರೇ ಆದರ್ಶವಾಗಿದ್ದರು. ಹಳೆಮನೆಗೆ ಹತ್ತಿರವಾಗಲು ಇರಬೇಕಾದ ಅರ್ಹತೆ ಒಂದೇ, ದುಡಿಯುತ್ತೇನೆ ಎಂಬ ಛಲ, ಈ ಕಾರಣಕ್ಕಾಗಿಯೇ ಇರಬಹುದು, ನನ್ನನ್ನು ಮನೆಯ ಮಗನಂತೆ ನೋಡಿಕೊಂಡರು. ನಂದಾ ಮತ್ತು ಲಿಂಗದೇವರು ನನ್ನ ಜೀವನದ ಅನೇಕ ಸಾಂಸಾರಿಕ ತಿರುವುಗಳಲ್ಲಿ ಜೊತೆಯಾಗಿ ನಿಂತರು. ೨೦೦೩ರಲ್ಲಿ ನಾನು ಬಾಗಲಕೋಟೆಯ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕನಾಗಿ ಹೋಗುವುದು ಎಂದು ನಿರ್ಧಾರವಾಯಿತು. ಇವರ ಪಕ್ಕದಲ್ಲಿಯೇ ಇದ್ದುಕೊಂಡು ಏನನ್ನಾದರೂ ಮಾಡಬೇಕೆನ್ನುವ ನನ್ನ ವಿಚಾರವನ್ನು ಹಳೆಮನೆ ವಿರೋಧಿಸಿದರು. ಅವರ ವಾದವಿಷ್ಟೆ, ``CIILನಲ್ಲಿ ನಿನಗೊಂದು ನಿಶ್ಚಿತ ನೆಲೆಯನ್ನು ಒದಗಿಸುವುದಾಗುವುದಿಲ್ಲ. ಮೇಲಾಗಿ ಸಾಕಷ್ಟು ಶಕ್ಯತೆ ಇರುವ ನಿನಗೆ ಈ ಸ್ಥಳ ಸರಿಯಾದುದಲ್ಲ. ಪ್ರತಿನಿತ್ಯವೂ ಯುವಕರನ್ನು ಉದ್ದೇಶಿಸುವ ಉಪನ್ಯಾಸಕ ವೃತ್ತಿ ನಿನ್ನ ಬೆಳವಣಿಗೆಯನ್ನು ವಿಸ್ತರಿಸಬಹುದು, ಅಲ್ಲಿದ್ದುಕೊಂಡು ನೀನು ಅIIಐನೊಂದಿಗೆ ಅನೇಕ ಯೋಜನೆಗಳನ್ನು ಮಾಡಬಹುದು. ಅದಕ್ಕಾಗಿ ಇಲ್ಲಿ ನಾನಿದ್ದೇನೆ. ನೀನು ಸುಮ್ಮನೆ ಬಾಗಲಕೋಟೆಗೆ ಹೋಗತಕ್ಕದ್ದು’ ಎಂದು ದೇವರು ಆಜ್ಞಾಪಿಸಿದರು. ದೇವರ ಆಜ್ಞೆ ಮೀರುವುದುಂಟೆ?
ನುಡಿದಂತೆ ನಡೆದರು ಲಿಂಗದೇವರು. ನಾನು ಹೋದಡಗೆಲ್ಲ ಬಂದರು. ``ಈತ ನನ್ನ ಶಿಷ್ಯ, ಬಹಳ ಜೋರಾಗಿದ್ದಾನೆ,’’ ಎಂದು ಅಭಿಮಾನದಿಂದ ಹೇಳಿಕೊಂಡರು. ಆದರೆ ಅದೇನೋ ಗೊತ್ತಿಲ್ಲ, ಒಮ್ಮೆ ಬಳ್ಳಾರಿಯಲ್ಲಿ ನಾವಿಬ್ಬರು ಜಗಳವಾಡಿದ್ದು ನೆನಪಿದೆ. ಅದೊಂದು ಸಾರ್ಥಕ ಜಗಳ ಬಿಡಿ. ಎಡಪಂಥೀಯ ಆಲೋಚನೆಗಳೇನೇ ಇದ್ದರೂ ಅದು ಸಂಪೂರ್ಣ ನನ್ನ ಹಕ್ಕು ಎನ್ನುವ ಮೊಂಡುತನ ಹಳೆಮನೆಯವರಿಗೆ ಕೆಲವೊಮ್ಮೆ ಬಂದುಬಿಡುತಿತ್ತು. ಒಂದೇ ಸಮಾರಂಭಕ್ಕೆ ನಾವಿಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ಹೋಗಿದ್ದೆವು. ಕಾರ್ಯಕ್ರಮ ಮುಗಿಯಿತು, ಸಾಯಂಕಾಲದ ನಮ್ಮ ಪಾನಗೋಷ್ಠಿ ಶುರುವಾಯಿತು. ಜಗಳಕ್ಕೆ ಕಾರಣನಾದವನು ಅಲ್ಬರ್ಟ್ ಕಾಮು. ಕಾಮುವಿನ ‘Out sider’ ಕಾದಂಬರಿಯನ್ನು ನಾನು MA ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ``ನೀನೇನೊ ಕಾಮುವನ್ನು ಪಾಠ ಮಾಡ್ತಿಯಾ? ಮೊದಲು ಅದು ನಿನಗೇ ಚೆನ್ನಾಗಿ ಅರ್ಥವಾಗಿದೆಯಾ ನೋಡಿಕೊ,’’ ಎಂದು ನನ್ನನ್ನು ತಣ್ಣಗಾಗಿಸಲು ನೋಡಿದರು ಹಳೆಮನೆ. ಇದಕ್ಕೂ ಹಿಂದೆ ಎಚ್.ಆರ್.ಭಸ್ಮೆ ಎನ್ನುವ ನಾಟಕಕಾರನ್ನೊಬ್ಬನನ್ನು ಕುರಿತೂ ಅವರು ನನ್ನನ್ನು ಹೀಗೆಯೇ ಬಾಯ್ಮುಚ್ಚಿಸಿದ್ದು ಬಾಕಿ ಉಳಿದುಕೊಂಡಿತ್ತು. ಯಾವುದನ್ನೂ ಬಾಕಿ ಉಳಿಸಿಕೊಳ್ಳಬಾರದು ಎನ್ನುವುದನ್ನು ನಾನು ಚಂಪಾ ಮತ್ತು ಹಳೆಮನೆ ಅವರಿಂದಲೇ ಕಲಿತವನಾದುದರಿಂದ, ರೋಷದಿಂದ ಎದ್ದು ನಿಂತು, ``ಕಾಮುವನ್ನು ಕುರಿತು ನಿಮಗೇನು ಗೊತ್ತಿದೆ?’’ ಎಂದು, ನನಗೆ ಗೊತ್ತಿರುವುದೆಲ್ಲವನ್ನು ಮಾತಾಡಿಬಿಟ್ಟೆ. ಹಳೆಮನೆ ನೋಡುತ್ತಲೇ ಇದ್ದರು. ಮೈದಡವಿ, ಕೈಹಿಡಿದು, “ಲೋ, ಲೋ ಅಯೋಗ್ಯ, ತುಂಬಾ ಚೆನ್ನಾಗಿ ಮಾತಾಡ್ತಿ ಕಣೋ. ಚನ್ನಾಗಿ ತಿಳಕೊಂಡಿದಿಯಾ, ನಿನ್ನ ಓದನ್ನು ನಾನು ಗೌರವಿಸುತ್ತೇನೆ, ಕೂತ್ಕೊ” ಎಂದು ಕೂಡ್ರಿಸಿದರು. ಅದೇ ಕೊನೆ, ಹಳೆಮನೆ ಆನಂತರದಿಂದ ನನ್ನನ್ನು ಕಂಡ ರೀತಿಯೇ ಭಿನ್ನ. ಕುಟುಕುವ, ಛೇಡಿಸುವ, ತಕ್ಷಣ ಏನಾದರೂ ಮಾತನಾಡುವ ಅವರ ಈ ಪ್ರವೃತ್ತಿಗೆ ಹೆದರಿ ಅನೇಕ ಸೂಕ್ಷ್ಮ ಜೀವಿಗಳು ಅವರ ಪ್ರೀತಿಯಿಂದ ವಂಚಿತರಾದರು.
ಹಳೆಮನೆಯ ಓದಿನ ಹರವು ವಿಸೃತ್ತವಾಗಿತ್ತು, ಸೂಕ್ಷ್ಮವಾಗಿತ್ತು, ವೈವಿಧ್ಯಮಯವಾಗಿತ್ತು. ಕೆಲವೊಮ್ಮೆ ನನ್ನಿಂದಲೂ ಕೆಲವು ವಿಚಾರಗಳನ್ನು ಕೇಳಿ, ಆ ಕುರಿತು ಬರೆದಿದ್ದು ಉಂಟು. ಉದಾಹರಣೆಗೆ ಹೆಸರಾಂತ ಅಂಕಣಕಾರ, ಚಿತ್ರನಿರ್ದೇಶಕ, ಎಡಪಂಥಿಯ ಲೇಖಕ ಕೆ.ಅಬ್ಬಾಸರ ಮರಣಪತ್ರವನ್ನು ಅವರು ಭಾಷಾಂತರಿಸಿ ‘ಆಂದೋಲನ’ಕ್ಕೊಂದು ಅಂಕಣ ಬರೆದಿದ್ದು ನೆನಪಿದೆ.
ನಾನಿರುವಾಗ ಬಾಗಲಕೋಟೆಗೆ ಎರಡು ಬಾರಿ ಬಂದರು ಹಳೆಮನೆ. ಬಸವೇಶ್ವರ ಸೈನ್ಸ್ ಕಾಲೇಜಿನ ‘ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಭಾಗವಹಿಸಿ, ನೇರವಾಗಿ ಮನೆಗೆ ಬಂದು ನನ್ನ ಮಗನೊಂದಿಗದೆಷ್ಟೋ ಹೊತ್ತು ಕಳೆದದ್ದು ನೆನಪಿದೆ. ಈ ಭಾಗ್ಯವನ್ನು ಕಳೆದುಕೊಳ್ಳಬಾರದೆಂದುಕೊಂಡ ನಾನು ತಕ್ಷಣ department ನ ನನ್ನ ವಿದ್ಯಾರ್ಥಿಗಳನ್ನು ಮನೆಯಲ್ಲಿ ಸೇರಿಸಿಬಿಟ್ಟೆ. ಒಂದು, ಎರಡು, ಮೂರು ಬೀರುಗಳನ್ನು ಹೀರುತ್ತಾ, ಆ ಮಧ್ಯಾಹ್ನದಲ್ಲಿ ನನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು  feminisium ಕುರಿತು ಮಾತನಾಡಿದ್ದನ್ನು ಹೇಗೆ ಮರೆಯಲಾದೀತು? ಇದು ಜರುಗಿ ಮೂರು ವರ್ಷವೂ ಗತಿಸಿಲ್ಲ. ಅವರ ಆ ಅವಸ್ಥೆಯಲ್ಲಿಯೂ ಬಾಗಲಕೋಟೆಯಿಂದ ಬೀಳಗಿಗೆ two wheeler ಮೇಲೆ ಕರೆದುಕೊಂಡು ಹೋಗಿ ಒಂದುಕಡೆ ನಿಲ್ಲಿಸಿದೆ. “ಇದೇನೋ? ಇಲ್ಲಿ ಕರೆದುಕೊಂಡು ಬಂದಿದಿಯಾ? ಇಲ್ಲೇನಿದ ನೋಡಲಿಕ್ಕೆ?” ಎಂದು ಅವರು ನುಡಿಯುವುದರೊಳಗಾಗಿ ಅವರಿಗೆ ಕೆಳಗೆ ನೋಡಲು ಸೂಚಿಸಿದೆ. ಗಾಬರಿಯಾದರು ಹಳೆಮನೆ! ನಮ್ಮ ಇತಿಹಾಸದ ಅವಜ್ಞೆಗೊಂದಿಷ್ಟು ಶಾಪ ಹಾಕಿದರು. ಯಾಕೆಂದರೆ ಅವರು ನಿಂತದ್ದು ಯಾವ ಕನಿಷ್ಠ ರೂಪರೇಷೆಯೂ ಇಲ್ಲದ ‘ಸಿಂಧೂರ ಲಕ್ಷ್ಮಣ’ನ ಸಮಾದಿಯ ಪಕ್ಕ. ಕಲ್ಲು ಹಾಸೊಂದರ ಮೇಲೆ ‘ಸಿಂಧೂರ ಲಕ್ಷ್ಮಣನ ಸಮಾದಿ, ‘ಜನನ ಮತ್ತು ಮರಣ’ ವಿವರ ಬಿಟ್ಟರೆ ಅಲ್ಲಿ ಮತ್ತೇನೂ ಇರಲಿಲ್ಲ. ಹೀಗೆ ಹಳೆಮನೆಯವರನ್ನು ನಾನು ಸುತ್ತಿಸಿದ್ದು, ಕಾಡಿದ್ದು, ಮತ್ತು ಪೀಡಿಸಿದ್ದು. ಮನುಷ್ಯ ಪ್ರೀತಿಯಾಗಿಯೋ, ಮಮತೆಯಾಗಿಯೋ ಹೀಗೊಂದು ಸುಖವಾದ ಪೀಡನೆಯನ್ನು ನೀಡದೆ ಹೋದರೆ ಮೂಳೆ-ಮಾಂಸಗಳ ಒಂದು ಆಕಾರವಾಗುತ್ತಾನೆ, ಸತ್ತ ಮೇಲೆ ಭೂಗೋಲ ಸೇರುತ್ತಾನಷ್ಟೆ.
ಉಪನ್ಯಾಸಕನಾಗಿ ನಾನು ಬೇಲೂರಿಗೆ ಬಂದೆ. ಹಳೆಮನೆ ಅಲ್ಲಿಗೂ ಬಂದರು. ನನ್ನ ‘ಜಗತ್ಪ್ರಸಿದ್ಧ ಭಾಷಣಗಳು’ ಕೃತಿಯನ್ನು ಬಿಡುಗಡೆ ಮಾಡಿ, ಟ್ರ್ಯಾಟಸ್ಕಿಯ ಭಾಷಣ ಕುರಿತು ಅದ್ಭುತವಾಗಿ ಮಾತನಾಡಿದರು. ನನ್ನ ಬಗ್ಗೆ ಅಭಿಮಾನ ಪಟ್ಟು ಬೇಲೂರಿನ ಜನತೆಯನ್ನು ಸಂಭೋಧಿಸಿದರು. ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಹೋದ ಹಳೆಮನೆ, ಊರು ತಲುಪಿದರೋ! ಎಂದು ಘೋನಾಯಿಸಿದಾಗ ನೊಂದು ಹೇಳಿದ್ದರು. “ಹೊಳೆ ನರಸೀಪುರ ದಾಟ್ತಾ ಇದೀನಿ, ಶರತ್ ತೀರಿಹೋಗಿದ್ದಾನೆ. ಸಣ್ಣ ಹುಡುಗ, ಇನ್ನೂ ಬದುಕಬೇಕಾದವನು ಈ ಕುಡಿಯೋದನ್ನ ಬಿಡಲಿಲ್ಲ ಹಾಳಾದವನು” ಎಂದು. ಈಗ ಈ ಮಾತುಗಳು ಅವರಿಗೂ ಅನ್ವಯಿಸುತ್ತವೆಯೇ? ಅವರು ಅವಿಶ್ರಾಂತರಾದರೆ?
“ರಂಗೋಲಿ ಇಟ್ಟ ಮನೆಗೂ ಸಾವು ತಪ್ಪುವುದಿಲ್ಲ.
ಬಳ್ಳಿ ತಬ್ಬಿದ ಮನೆಯೊಳಗೂ ತಬ್ಬಲಿತನ ತಪ್ಪುವುದಿಲ್ಲ.”
ಇಂತಹ ಒಂದು ತಬ್ಬಲಿತನವನು ಈಗ ಹಳೆಮನೆ ನಮಗೆ ಹೀಗೆ ಬಿಟ್ಟು ಹೋಗಬಹುದೇ?
ಮರೆಯುವ ಮುನ್ನ ಮತ್ತೊಂದು ಮಾತು. ನನ್ನ ‘ಪರ್ದೇಸಿಯ ಫೀಲ್ಮಿ ಪಯಣ’ ಕುರಿತು ‘ಒಂದು ದ್ವೀಪದ ವ್ಯಥೆ’ಯೆನ್ನುವ ಎಂತಹ ಸುಂದರ ಮುನ್ನುಡಿಯನ್ನು ಬರೆದಿದ್ದರು.
ಸದಾ ವಾದ-ವಿವಾದಗಳನ್ನು ಹುಟ್ಟುಹಾಕಿಕೊಳ್ಳುತ್ತಲೇ ಜೀವಂತವಾಗಿದ್ದ ಹಳೆಮನೆ, ನಕ್ಸಲರ ಪರ ಎನ್ನುವ ವಿವಾದಕ್ಕೂ ಒಳಗಾದರು. ಎಡಪಂಥಿಯರಾಗಿರಲಿಲ್ಲ ಹಳೆಮನೆ. ಅದು ಅವರ ಓದಷ್ಟೇ. ಸುತ್ತೂರು ಮಠದೊಂದಿಗೂ, ನಕ್ಸಲ್‌ರ ಕೋವಿಯೊಂದಿಗೂ; ಸಿದ್ಧರಾಮಯ್ಯನೊಂದಿಗೂ, ಯಡಿಯೂರಪ್ಪನ ಒಡ್ಡೋಲಗದೊಂದಿಗೂ ತನ್ನದೇ ಒಂದು ದಾರಿ ಮಾಡಿಕೊಂಡಿದ್ದ ಹಂಬಲದ ಹಳೆಮನೆಯವರಿಗೆ ಇದೆಲ್ಲವು ಅನಿವಾರ್ಯವಾಗಿತ್ತು. ವ್ಯವಸ್ಥೆಯೊಂದಿಗಿದ್ದುಕೊಂಡೇ ಅದನ್ನು ಬದಲಾಯಿಸಬಹುದು ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಯಾವುದಕ್ಕೂ ವಿಮುಖರಾಗಬಾರದು ಎಂದು ನಂಬಿದ್ದ ಹಳೆಮನೆ ಕೆಲವು ಸಭೆ-ಸಮಾರಂಭಗಳಲ್ಲಿ ನಿರುತ್ತರರಾಗಿದ್ದನ್ನು ನಾನು ನೋಡಿದ್ದೆನೆ. ಮೈಸೂರಿನ ಕಾಲೇಜು ಸಮಾರಂಭವೊಂದರಲ್ಲಿ ಪ್ರಶ್ನೋತ್ತರ ಘಳಿಗೆಯಲ್ಲಿ, ವಿದ್ಯಾರ್ಥಿಯೊಬ್ಬ ಎದ್ದು ನಿಂತು ಪ್ರಶ್ನಿಸಿದ. “ನೀವು ಪರಿಸರದ ಬಗ್ಗೆ ಮಾತನಾಡುತ್ತೀರಿ. ಜೊತೆಗೆ ಒಂದರ ಮೇಲೊಂದು ಸಿಗರೇಟು ಸೇದುತ್ತೀರಿ, ನಿಮ್ಮ ಮಾತು ಮತ್ತು ಕೃತಿಯ ಮಧ್ಯ ಸಾಮ್ಯತೆ ಇಲ್ಲ ಎಂದು ನಿಮಗೆ ಅನ್ನಿಸುವುದಿಲ್ಲವೇ?” ಸಿಟ್ಟೆನೋ ಬಂದಿತ್ತು, ಆದರೆ ಸುಮ್ಮನಾಗಲೇ ಬೇಕಿತ್ತು ಹಳೆಮನೆ-
“ಎನ್ನ ವಾಮಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನ ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ
ಕೂಡಲ ಸಂಗಮದೇವ’
ಎಂದು ಒಳಗೊಳಗೇ ಬಾಗಿರಬಹುದು ಅಥವಾ ಮಾಗಿರಬಹುದು ಲಿಂಗದೇವರು.
ಸತ್ತ ವ್ಯಕ್ತಿಯ ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ ೧೨/೦೬/೧೧ರ ಸಾಯಂಕಾಲದ ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು. ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ. ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’. ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. ““Being frank is always better than being falsely sweet. Because by being frank in life, we may get a lot of true enemies but surely not untrue friends”
ಈಗ ನೀವೆ ಹೇಳಬೇಕು, ಹಳೆಮನೆ ಯಾರನ್ನು ಗಳಿಸಿದ್ದರು? ಸ್ನೇಹಕ್ಕೆ ಅವರೆಷ್ಟು ಪ್ರಾಮಾಣಿಕರಾಗಿದ್ದರು? ಅಥವಾ ಅಂದುಕೊಳ್ಳಬೇಕು ಅವರಂತೆಯೇ ಅವರ ಬಳಗವಿತ್ತು. ಯಾವುದೇನೇ ಇರಲಿ ಈ ‘ಶೃದ್ಧಾಂಜಲಿ’ಯಲ್ಲಿ ಮಾತನಾಡಿದ “ಆಂದೋಲನ” ಪತ್ರಿಕೆಯ ರಾಜಶೇಖರ ಕೋಟೆಯವರ ಮಾತುಗಳಂತೂ ಸತ್ಯ. “ಹಸಿವು” ಎಂದರೇನೆಂದು ಹಳ್ಳಿಯಿಂದ ಬಂದು ಅರಿತವರಾಗಿದ್ದ ಹಳೆಮನೆಯವರು “ಹಸಿದವರನ್ನು ಹತ್ತಿರಕ್ಕೆ ಕರೆದುಕೊಂಡು ಅನ್ನ ಹಾಕಿ ಸಲುಹಿದರು. ಇದು ನನ್ನ ಅನುಭವವೂ ಕೂಡ. ಒಡಲ ಉರಿಯಾರಿದವನಿಗೆ ಎಲ್ಲವೂ ಸರಳ, ಸಹಜ ಮತ್ತು ಸಾಹಿತ್ತಿಕ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಲಿಂಗದೇವರು ಹಳೆಮನೆ(Lingadevaru Halemane) ವಚನ ಸಾಹಿತ್ಯವನ್ನು ಕುರಿತು ಎಷ್ಟೊಂದು ಅದ್ಭುತವಾಗಿ ಮಾತನಾಡುತ್ತಿದ್ದರು ಎಂಬುದನ್ನು ನೆನೆದು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈಗ ಅದೇ ವಚನಕಾರರ ಮಾತುಗಳಲ್ಲಿಯೇ ಹಳೆಮನೆಯವರನ್ನು ನಾನು ಕಟ್ಟಿಕೊಡಬೇಕು-
“ಒಡಲುಗೊಂಡವ ಹಸಿವ
 ಒಡಲುಗೊಂಡವ ಹುಸಿವ
 ನೀ ಎನ್ನಂತೆ ಒಮ್ಮೆ ಒಡಲುಗೊಂಡು ನೋಡಾ.”

ಡಾ. ರಾಜಶೇಖರ ಮಠಪತಿ (ರಾಗಂ)



Thursday, June 9, 2011

ಹೀಗೊಂದು ಘಜಲ್ ....

        ಹೀಗೊಂದು  ಘಜಲ್(ghajal)


ಸಖಿಯೇ,
ನಿನ್ನುರಿನಲಿ  ನಾನೊಬ್ಬನೇ 
ನಿನ್ನ ಹೆಜ್ಜೆಗಳ ಹಾದಿ ಹಿಡಿದು 
ಎಲ್ಲವೂ ಬಿಟ್ಟು ಬಂದಿದ್ದೇನೆ 
ಸುಮ್ಮನೆ  


ದಾರಿ ಹೋಕನಿಗಿಂತ 
ಕೇಳು,
ದೊಡ್ಡ ಗೌರವವೇನೂ ಬೇಡ
ಕಪ್ಪಿಟ್ಟ ಮಲ್ಲಿಗೆಯ 
ಮಾತ್ರ ಕೊಡಬೇಡ 

ಹೌದು,
ನನಗಾಗಿಯೇ ದೀಪ ಹೊತ್ತಿಸಬೇಡ 
ನಿನ್ನ ಕಣ್ಣಾಲೆಗಳ
ಬೆಳಕು ಮಾತ್ರ ನಿಂದಿಸಬೇಡ 

ನನಗೆ ಗೊತ್ತಿದೆ ಸಖಿಯೆ,
ಶೆರೆಯ ಮಿಂದೆಳುವುದು  ಸಾವಲ್ಲವೆಂದು 
ನಿಶೆಯೊಡಲ ಹಾಡುಗಳು 
ಬೆಳಕಲ್ಲವೆಂದು

ಬಾ
ಬಂದಿದ್ದೇನೆ ನಾನೊಬ್ಬನೇ 
ಇಂಗುತ್ತೇನೆ ಮಾತಾಗಿ 
ನಿನ್ನೊಳಗೆ ಸುಮ್ಮನೆ 
                                                         -ರಾಗಂ