Total Pageviews

Friday, June 8, 2012

ಬಹಿಷ್ಕೃತ ಬ್ರಾಹ್ಮಣರ ಬೆಳಕಿನಲ್ಲಿ


ಬಹಿಷ್ಕೃತ ಬ್ರಾಹ್ಮಣರ ಬೆಳಕಿನಲ್ಲಿ
                                                      ---------------------------------------------------------------------------------------
Shishunala Sharifa & Guru ovinda Bhatta
 "ಚಡಚಣ(chadachan)ವೆಂದರೆ ಚಂದಪ್ಪ ಹರಿಜನ್(chandappa harijan), ಪುತ್ರಪ್ಪ ಸಾಹುಕಾರ,ಕೇಶವ ತಾವರಖೇಡ ಹಾಗೂ ಭೀಮಾತೀರದ ಹಂತಕರು ಎನ್ನುವ ಗೃಹಿಕೆಗೆ ತಂದು ನಿಲ್ಲಿಸಿದ್ದು ಮಾತ್ರ ನಮ್ಮ ಕನ್ನಡ ಸಿನಿಮಾದ ಕೆಲವು ಪಾತಕ ಮನಸ್ಸಿನ ನಿರ್ದೆಶಕರು ಮತ್ತು ಬೆಂಗಳೂರಿನ ಬರಹಗಾರರು. ಆದರೆ ನಲವತ್ತು ವರ್ಷಗಳ ದೀರ್ಘ ಬಾಳನ್ನು ಇಲ್ಲಿ ಕ್ರಮಿಸಿದ ನಮ್ಮಂಥವರಿಗೆ ನಮ್ಮೂರು ಗೊತ್ತು. ನಮ್ಮೂರು ಚಡಚಣ ಎಂದರೆ ಸಾಹಿತ್ಯ ಮತ್ತು ಆಧ್ಯಾತ್ಮ ದಿಗ್ಗಜರುಗಳಾದ ಸಿಂಪಿ ಲಿಂಗಣ್ಣ, ಬೇಂದ್ರೆ, ಮಧುರಚನ್ನ, ಕಾಪಸೆ, ಶ್ರೀ. ಎಂ.ಆರ್.ಜಾಹಾಗೀರದಾರ, ಡಾ.ಜಿ.ಬಿ.ಸಜ್ಜನ, ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಸಿದ್ಧೇಶ್ವರ ಸ್ವಾಮಿಗಳು. ನಮ್ಮೂರೆಂದರೆ ಅರವಿಂದ ಗ್ರಂಥಮಾಲೆ, ಸುಪ್ರಸಿದ್ಧ ದನಗಳ ಸಂತೆ, ಅರಿವೆ 
                                      ವ್ಯಾಪಾರ  ಹಾಗೂ ಜನಪದ ಜಾತ್ರೆ".




 ಬೇಲೂರಿನಲ್ಲಿ ನನ್ನ ಎದುರು ಮನೆಯೇ ಬೇಲೂರು ಕೃಷ್ಣಮೂರ್ತಿಯವರದ್ದು. ಸುಪ್ರಸಿದ್ಧ ವೈಕುಂಠದಾಸರ ಬೀದಿಯಲ್ಲಿ ಇರುವ ಇವರ ಆತ್ಮಕತೆಗೆ ‘ವೈಕುಂಠ ಬೀದಿ’ ಎಂದು ಹೆಸರಿಟ್ಟವನು ನಾನೆ. ಇವರು ನಮ್ಮ ಬ್ರಹ್ಮಣಕೇರಿಯ  ಕಾಫಿರ. ಇವರ ಆತ್ಮ ಕತೆಯಲ್ಲಿ ಒಂದು ಪದ್ಯ -
ಉಪ್ಪಾರಣ್ಣ ಊ ರಿಗೆ ಬಿದ್ದ ಕಚ್ಚೇಪೋಯ
ಜಂಗಮಯ್ಯ ಜಾರಿಬಿದ್ದ ಲಿಂಗಪೋಯ
ಹಾರುವಯ್ಯ ಹಾರಿಬಿದ್ದ ದಾರಪೋಯ.
ಇದು ಹಂಗು ಹರಿದವರು ತಮ್ಮನ್ನೂ, ಲೋಕವನ್ನೂ ಮುಂದಿಟ್ಟುಕೊಂಡು ನಗುವ ಪರಿ. ಗುರು ಗೋವಿಂದ ಭಟ್ಟನ ನೆಲೆಯವರು. ಇಂಥ ಬಹಿಷ್ಕೃತ ಬ್ರಾಹ್ಮಣರ ಒಂದು ದೊಡ್ಡ ಪಡೆಯೇ ನನ್ನನ್ನು ಆರಂಭದಿಂದಲೂ ತಿದ್ದಿ ತೀಡಿತು ಎಂದು ಹೇಳಲು ಅಭಿಮಾನವೆನಿಸುತ್ತದೆ. ಬಾಲ್ಯದಲ್ಲಿ ರಾಮಚಂದ್ರ ಕುಲಕರ್ಣಿ, ಹಳ್ಳಿ ಡಾಕ್ಟರು, ಆನಂತರ ಪ್ರೊ ಆರ್.ಕೆ.ಕುಲಕರ್ಣಿ, ಸು.ರಂ.ಯಕ್ಕುಂಡಿಯ(SU.RAM.YAKKUNDI) ಕಾವ್ಯ, ಎಲ್ಲ ಈಗಲೂ ರೋಮಾಂಚನಗೊಳಿಸುವ ಕ್ಷಣಗಳು. ಹಿರಿಯರು ‘ಜಾತಿ ನ ಪೂಚ್ ಸಾಧೂಕಿ’ ಎಂದಿದ್ದಾರೆ. ಅದಕ್ಕಾಗಿ ನಾನವರ ಜಾತಿ ಜಾಲಾಡುತ್ತಿಲ್ಲ. ನಮ್ಮಂಥವರನ್ನು ಬೆಳೆಸಿದ ಅವರ ಹೃದಯ ಶ್ರೀಮಂತಿಕೆಯ ನೆನಪುಗಳನ್ನು ಬಿಚ್ಚಿಡುತ್ತಿದ್ದೇನೆ.
‘ತಂದೆ ಗೋವಿಂದ ಗುರುವಿನ ಪಾದಕ’ ಎಂದು ಸಿ.ಅಶ್ವಥ್(C. Ashwath) ರಾಗದ ತಾರಕದಲ್ಲಿ ಹಾಡುತ್ತಿದ್ದರೆ ನನ್ನೆದೆಯ ತಂಬೂರಿಯನ್ನು ಮೀಟಿ ನೆನಪುಗಳ ಢೇರಿಯ ಮುಂದೆ ಡಂಗುರ ಸಾರಿದಂತೆ ಭಾಸವಾಗುತ್ತದೆ. ಎದ್ದು ಕಾಡುವ ಸಾವಿರಾರು ನೆನಪುಗಳಲ್ಲಿ ಕಾಡುವ ಈ ನನ್ನ ಗುರುವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ಅಲ್ಲಮನಂತೆ ಬಯಲಾಗುತ್ತಾ, ಆಳವಾಗುತ್ತಾ ಶಬ್ಧಗಳ ಹಂಗು ಹರಿದು, ಸಾಧನೆಯ ಭ್ರಮೆಯಿಂದ ಹೊರಬಂದು, ನಮ್ಮೂರ ಹಳ್ಳದಂತೆ ಬತ್ತಿ ಹೋದ ಆ ಪುಣ್ಯಾತ್ಮನ ಪರೋಪಕಾರದ ಬುತ್ತಿಯನ್ನು ಬಿಚ್ಚಿಡುವುದು ಸೂಕ್ತವೆನಿಸುತ್ತದೆ. ಹಾಂ, ಅಂದ ಹಾಗೆ ಇದು ಗುರುವಂದನೆಯ ಸಂದರ್ಭ. ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಅವರವರ ಜಾತಿ ಗುರುಗಳು, ಹೆಣಗಳೂ ನಾಚುವ ರೀತಿಯಲ್ಲಿ ಶೃಂಗಾರಗೊಂಡು ಆತ್ಮರತಿಯನ್ನು ಅನುಭವಿಸಿ ಆಯಿತು. ಆದರೆ ಇವರಂತೆ ನೆಲ ನುಂಗುವ ರಾಜಕಾರಣಿಗಳನ್ನು, ಗುತ್ತಿಗೆದಾರರನ್ನು, ತನ್ನ ಅಸ್ಥಿತ್ವದ ಉಪಶಾಖೆಗಳನ್ನು ಹುಟ್ಟುಹಾಕದ ನನ್ನ ಗುರುವಿಗೆ ಈ ನುಡಿನಮನವೇ ಸಾಕಾಗಿರಬೇಕು.
ನಮ್ಮೂರು ಚಡಚಣ(chadchan). ಪ್ರಕೃತಿ ಹರಸಿದ ಒಂದೇ ಕಾಲವಾದ ಬೇಸಿಗೆಯನ್ನೇ, ಅದರ ತೀವ್ರತೆಯನ್ನು ಆದರಿಸಿ ಬೇಸಿಗೆ, ಕಡು ಬೇಸಿಗೆ ಮತ್ತು ಅತೀ ಬೇಸಿಗೆಯನ್ನು ಅನುಭವಿಸುತ್ತಾ, ಸಾಹಿತ್ಯ ಮತ್ತು ಆಧ್ಯಾತ್ಮಕ್ಕೊಂದು ಬೆಸುಗೆಯನ್ನು ಮಾಡಿಕೊಂಡಿತು. ಚಡಚಣವೆಂದರೆ ಚಂದಪ್ಪ ಹರಿಜನ್(chandappa harijan), ಪುತ್ರಪ್ಪ ಸಾಹುಕಾರ,ಕೇಶ ತಾವರಖೇಡ ಹಾಗೂ ಭೀಮಾತೀರದ ಹಂತಕರು ಎನ್ನುವ ಗೃಹಿಕೆಗೆ ತಂದು ನಿಲ್ಲಿಸಿದ್ದು ಮಾತ್ರ ನಮ್ಮ ಕನ್ನಡ ಸಿನಿಮಾದ ಕೆಲವು ಪಾತಕ ಮನಸ್ಸಿನ ನಿರ್ದೆಶಕರು ಮತ್ತು ಬೆಂಗಳೂರಿನ ಬರಹಗಾರರು. ಆದರೆ ನಲವತ್ತು ವರ್ಷಗಳ ದೀರ್ಘ ಬಾಳನ್ನು ಇಲ್ಲಿ ಕ್ರಮಿಸಿದ ನಮ್ಮಂಥವರಿಗೆ ನಮ್ಮೂರು ಗೊತ್ತು. ನಮ್ಮೂರು ಚಡಚಣ ಎಂದರೆ ಸಾಹಿತ್ಯ ಮತ್ತು ಆಧ್ಯಾತ್ಮ ದಿಗ್ಗಜರುಗಳಾದ ಸಿಂಪಿ ಲಿಂಗಣ್ಣ(Simpi Linganna), ಬೇಂದ್ರೆ(Bendre), ಮಧುರಚನ್ನ(Madhura Chenna), ಕಾಪಸೆ(Capase), ಶ್ರೀ. ಎಂ.ಆರ್.ಜಾಹಾಗೀರದಾರ( M R Jahagirdar), ಡಾ.ಜಿ.ಬಿ.ಸಜ್ಜನ(Dr. G B Sajjan), ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಸಿದ್ಧೇಶ್ವರ ಸ್ವಾಮಿಗಳು(Siddeshwara Swamiji). ನಮ್ಮೂರೆಂದರೆ ಅರವಿಂದ ಗ್ರಂಥಮಾಲೆ(Aravinda Granthamaale), ಸುಪ್ರಸಿದ್ಧ ದನಗಳ ಸಂತೆ, ಅರಿವೆ ವ್ಯಾಪಾರ ಹಾಗೂ ಜನಪದ ಜಾತ್ರೆ. ‘ಕಾನಡೀಚ ವಿಠ್ಠಲ’ ಎಂದೇ ಮಹಾರಾಷ್ಟ್ರದ ದೇವರುಗಳಲ್ಲಿ ಮರಾಠಿ(Marathi)ಗರ ವಕ್ರದೃಷ್ಠಿಗೆ ತುತ್ತಾದ ಪಂಡರಪುರದ ವಿಠ್ಠಲ(Pandarapua Vittal)ನನ್ನು ಕಾಣಲು ನೀವು ನಮ್ಮೂರನ್ನು ದಾಟಿಕೊಂಡೇ ಹೋಗಬೇಕು. ಹನ್ನೆರಡನೆ ಶತಮಾನದ ಶರಣೆ ಗುಡ್ಡಾಪುರದ ದಾನಮ್ಮ(Guddapur Danamma)ನನ್ನು ಭೆಟ್ಟಿಯಾಗಲೂ ನೀವು ನಮ್ಮೂರನ್ನೇ ಬಳಸಿಕೊಳ್ಳಬೇಕು. ಬೇಂದ್ರೆ ಸೋಲ್ಲಾಪುರದಲ್ಲಿರುವಷ್ಟೂ ಕಾಲ ಪದೇ ಪದೇ ಬಂದು ತಂಗಿದ ಊರು ಯಾವುದು ಎಂದು ಕೇಳಿದರೆ ಚಡಚಣವೆಂದೇ ಹೇಳಬೇಕು. ಬೇಂದ್ರೆ ಅವರ ನಾಟಕಗಳಲ್ಲಿ ಒಂದಾದ ‘ಮಂದಿ ಮದುವಿ’ಗೆ ನಮ್ಮೂರ ಸೇಡ್ಜಿಯ ಮನೆಯ ಜಗುಲಿಯೇ ಚಿಂತಕರ ಚಾವಡಿಯಾಯಿತು. ಹಾಗೆಯೆ ಈ ಸೆಡ್ಜಿಯ ಮನೆಯ ಪಕ್ಕದ ಸಂದಿಯೊಳಗಿನ ಒಂದು ಮನೆಯೊಳಗೆ ವಾಸವಾಗಿದ್ದ ಈ ನನ್ನ ಬರಹದ ನಾಯಕ, ನನ್ನ ಗುರು ಶ್ರೀ ಎಂ.ಆರ್.ಜಾಹಾಗೀರದಾರರ ನಾಲ್ಕು ದಶಕಗಳ ಬದುಕಿಗೆ ಚಡಚಣ ಸಾಕ್ಷಿಯಾಯಿತು.
ನಾನು ಹೆಚ್ಚು-ಕಡಿಮೆ ಏಳನೆಯ ಇಯತ್ತೆಯಲ್ಲಿದ್ದಾಗ  ಕವನದ ಗೀಳು ಶುರುವಾಯಿತು. ಆ ಆರಂಭದ ಕವಿತೆಗಳ ಮೊದಲ ಶ್ರೋತೃ ಶ್ರೀ ಸಿಂಪಿ ಲಿಂಗಣ್ಣ(Simpi Linganna). ನನ್ನದು ಅವರದು ಒಂದು ದಶಕದ ನಂಟು. ಅದೊಂದು ಯೋಗಾಯೋಗ, ಒಂದು ಮುಂಜಾನೆ ಮನೆವರೆಗೆ ಬಂದು ನನ್ನನ್ನು ಕರೆದುಕೊಂಡು ಅವರ ಮಿತ್ರರೊಬ್ಬರ ಮನೆಗೆ ಹೊರಟರು. ನನಗೆ ನೆನಪಿದೆ, ಒಂದು ಕೈಯಲ್ಲಿ ತೊಡೆಯವರೆಗೂ ಎತ್ತರಿಸಿದ ಧೋತ್ರ, ಇನ್ನೊಂದು ಕಡೆ ನಾನು, ನನ್ನ ಬಗಲಲ್ಲಿ ಕವಿತೆಗಳ ಒಂದು ನೋಟಬುಕ್, ಹೋಗಿ ನಿಂತದ್ದು ಮುಟ್ಟಿದರೆ ಕಿರ್ರಗುಟ್ಟುವ ಒಂದು ತೊಲಬಾಗಿಲ ಮುಂದೆ. ಸಣಕಲು ದೇಹದ ನಾನು ಕದ ತಳ್ಳಿ ಒಳ ಹೋದರೆ ಶ್ವೇತ ವಸ್ತ್ರಧಾರಿ, ಸ್ಥೂಲಕಾಯದ, ಪುಸ್ತಕ ರಾಶಿ, ಹಾರ್ಮೋನಿಯಂ, ಇಸ್ಪೀಟ್ ಕಾರ್ಡುಗಳ ಮಧ್ಯ ದೊಡ್ಡ ನಗೆಯೊಂದಿಗೆ ನಿತ್ಯ ನಮಗಾಗಿ, ನಮ್ಮಂಥವರಿಗಾಗಿಯೇ ಕಾಯುತ್ತಲೇ ಕುಳಿತಿರುವರೋ ಎನ್ನುವ ಓರ್ವ ಆತ್ಮಿಯ ಮನುಷ್ಯ. ಒಂದು ಕ್ಷಣ ಸಿಂಪಿ ಲಿಂಗಣ್ಣ ನನ್ನನ್ನ್ಯಾಕೆ ಇವರ ಬಳಿ ಕರೆತಂದರು ನನಗೆ ತಿಳಿಯಲೇ ಇಲ್ಲ. ಹಾಗೆ ನೋಡಿದರೆ ಬಾಲ್ಯದಿಂದಲೂ ಈ ವ್ಯಕ್ತಿ ನಮಗೆ ಚಿರಪರಿಚಿತ. ನಾವು ಎರಡು ಮೂರನೆಯ ಇಯತ್ತೆಯಲ್ಲಿದ್ದಾಗ ರಸ್ತೆಯ ಪಕ್ಕದಲ್ಲಿ ನಮಸ್ತೆ ಹೊಡೆಯಲು ಸಾಲಿನಲ್ಲಿ ನಿಂತಿರುತ್ತಿದ್ದೆವು. ಟ್ರಕ್ಕಿನವರೊ, ಟ್ರ್ಯಾಕ್ಟರನವರೊ, ಬಸ್ಸಿನವರೊ, ಸೈಕಲ್‌ನವರೊ ಯಾರಾದರೂ ಸರಿ ಅವರಿಗೆ ನಮ್ಮ ನಮಸ್ತೆ ಕಂಪಲ್ಸರಿ. ಅವರು ಮರಳಿ ಹೇಳುವುದು ಬಿಡುವುದು ಅವರ ಯೋಗ್ಯತೆ. ಯಾರೇ ಮಾಡದಿದ್ದರೂ ಲೂನಾ ಹತ್ತಿಕೊಂಡು ಮುಂಜಾನೆ ಒಂಬತ್ತಕ್ಕೆ ಸಾಯಂಕಾಲ ಐದು ಗಂಟೆಗೆ ಬರುತ್ತಿದ್ದ ಈ ಮನುಷ್ಯ ಮಾತ್ರ ಮುಗುಳ್ನಗುತ್ತ ನಮಗೊಂದು ನಮಸ್ತೆ ಹೊಡೆಯುತ್ತಾರೆನ್ನುವುದು ಖಾತ್ರಿ. ಅಂದಹಾಗೆ  ಅವರಿಗೆ ಜಹಾಗೀರದಾರ ಮಾಸ್ತರ ಎಂದು ಕರೆಯುತ್ತಾರೆ, ಅವರು ಅಘರಖೇಡದ ಜಹಾಗೀರದಾರರು. ಅವರು ಇಂಗ್ಲೀಷ ಬಾರದ ಹಳ್ಳಿ ಮಕ್ಕಳಿಗೆ ಪುಕ್ಕಟೆಯಾಗಿ ಶಿಕೋಣಿ ನಡೆಸುತ್ತಾರೆ, ಅವರು ನಮ್ಮೂರ ಹೈಸ್ಕೂಲಿನ ಹೆಡ್‌ಮಾಸ್ತರು ಎಂದೂ ನಮಗೆ ಗೊತ್ತು.
ಇಲ್ಲಿಂದಲೇ ಶುರುವಾಯಿತು ನಮ್ಮ ಜುಗಲ್‌ಬಂದಿ. ಅಂದು ಜಾಹಾಗೀರದಾರರ ಗರಡಿಗೆ ನನ್ನನ್ನು ಸೇರಿಸಿ ಸಿಂಪಿ ಲಿಂಗಣ್ಣ ಮಾರ್ಗದರ್ಶಿಯಾದರೆ, ಎತ್ತಿಕೊಂಡ ಆ ಗುರು  ನನ್ನಂತರಂಗದ ಚಕ್ಷುಗಳಾದರು. ನಾಲ್ಕಾರು ದಿನಗಳಿಗೊಮ್ಮೆ ಕವಿತೆಗಳನ್ನು ತೆಗೆದುಕೊಂಡು ನಾನು ಹೋಗುವುದು, ಅವರು ಅತ್ಯಂತ ಧ್ಯಾನಸ್ಥರಾಗಿ ಕೇಳುವುದು, ಶ್ರೀ ಅರವಿಂದೋ, ಮಾತೆ, ರಾಮಕೃಷ್ಣ ಪರಮಹಂಸ, ವಿವೇಕಾನಂದ(Vivekanand) ಮತ್ತು ಅಂಬೇಡ್ಕರ(Ambedkar)ರನ್ನ ಕುರಿತು ಒಂದಿಷ್ಟೇನಾದರು ಹೇಳುವುದು ಇದು ಮಾಮೂಲು. ಅಂದಹಾಗೆ ನನ್ನ ಗುರು ಜಾಹಾಗೀರದಾರ ‘ಮ’ ಮಾಹಾಶಯ(ಮಹೇಶ ಚಂದ್ರಗುಪ್ತಾ)(Maheh Chandrgupta)ನ ರಾಮಕೃಷ್ಣ ವಚನ ವೇದ(Ramakrishna Vachanaveda)ವನ್ನು ನನಗೆ ಓದಲು ಕೊಟ್ಟಾಗ ನಾನು ಎಂಟನೆಯ ತರಗತಿಯಲ್ಲಿದ್ದೆ. ಅದೊಂದು ಅದ್ಭುತ ಪುಸ್ತಕ. ಮುಂದೊಂದು ದಿನ ಇದ್ದಕ್ಕಿಂದಂತೆ ಅವರು ನನ್ನನ್ನು ಕೂಡ್ರಿಸಿಕೊಂಡು ಕುವೆಂಪು(Kuvempu) ಅವರ ರಾಮಾಯಣ ದರ್ಶನಂ(Ramayana Darshanam) ಬೋಧಿಸಲಾರಂಭಿಸಿದರು. ಜಹಾಗೀರದಾರರ ಓದು ಕಲುಶಿತಗೊಂಡಿರಲಿಲ್ಲ ಅಥವಾ ಜಾತಿ ಮೋಹಕ್ಕೆ ಜೋತು ಬಿದ್ದು ತಮ್ಮ ಪ್ರನಾಳ ಶಿಶುಗಳನ್ನೇ ಜಟ್ಟಿಗಳೆಂದು ಅಗ್ಗಡಿಸುವ ಅಗ್ಗತನಕ್ಕೂ ಅದು ಒಳಗಾಗಿರಲಿಲ್ಲ. ನಮ್ಮೂರ ಹಳ್ಳದಂತೆ ಮನಸಿಚ್ಚೆ ಹರಿದ ಅವರ ಅಧ್ಯಯನದಲ್ಲಿ ನಾನು ಪ್ರಮುಖವಾಗಿ ಕಂಡದ್ದು ಜೆ.ಕೃಷ್ಣಮೂರ್ತಿ(J Krishna murthy), ಓಶೋ(Osho), ವಚನ ಸಾಹಿತ್ಯ(Vachana Saahitya), ಗುರುದೇವ ರಾನಡೆ ಸಾಹಿತ್ಯ(Gurudev Ranade Literature), ಗುರುಲಿಂಗ ಜಂಗಮ ಮಹಾರಾಜ ಹಾಗೂ ಮಧುರಚನ್ನರ ಸಾಹಿತ್ಯ(Madhura Chennara Saahitya), ಅಂಬೇಡ್ಕರ ಮತ್ತು ಉಪನಿಷತ್ ಸಾಹಿತ್ಯಗಳನ್ನು. ಶ್ರೀ ಅರವಿಂದೋ ಅವರ “ಡಿವೈನ ಲೈಫ(Divine Life)” ಕುರಿತು ಕರ್ನಾಟಕದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ಏಕೈಕ ವ್ಯಕ್ತಿ ಈ ಜಹಾಗೀರದಾರ ಎಂದು ವಿ.ಕೃ.ಗೋಕಾಕ ದಾಖಲಿಸಿದ್ದು ನನಗೆ ನೆನಪಿದೆ. ಇಂಗ್ಲೀಷ ಭಾಷಾ ಪ್ರಭುತ್ವದ ಆ ಭಾಗದ ಅದ್ಭುತ ಪ್ರತಿಭೆ ಎಂದು ಖ್ಯಾತರಾದ ಜಿ.ಬಿ.ಸಜ್ಜನ ಭಾಷಾ ಸೂಕ್ಷ್ಮತೆಗಳನ್ನು ಕುರಿತು ಅವರೊಂದಿಗೆ ಚರ್ಚಿಸುತ್ತಿದ್ದುದು ನನಗೆ ನೆನಪಿದೆ. ಸಿಂಪಿ ಲಿಂಗಣ್ಣನವರ ಎಲ್ಲ ಬರಹಗಳು ಹಸ್ತಪ್ರತಿ ರೂಪದಲ್ಲಿ ಮೊದಲು ಸೇರುತ್ತಿದ್ದುದೇ ಈ ನನ್ನ ಗುರುವಿನ ಕೈಗೆ. ಸೂರ್ಯನ ಪರಿಭ್ರಮಣ ಬೇಕಾದರೂ ಬದಲಾಗಬಹುದು ಆದರೆ ಮುಂಜಾವಿನ ಇವರಿಬ್ಬರ ಭೇಟ್ಟಿ ತಪ್ಪುವುದಿಲ್ಲ ಎನ್ನುವಷ್ಟು ಗಾಢ ಸ್ನೇಹ ಇವರದು. ಈ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತ ಜಹಾಗೀರದಾರರ ಮನೆಯಲ್ಲಿ ಬೆಳಗಾದರೆ ಅವರ ಪಕ್ಕದಲ್ಲಿಯೇ ಕುಳಿತಿರುತ್ತಿದ್ದ ನನಗೆ ಅವರ ಸಮೀಪದಲ್ಲಿರುವ ಒಂದು ಸಾತ್ವಿಕ ಸೊಕ್ಕು. ಆಗೀಗ ನನ್ನ ಹಸಿವೆಯನ್ನು ಮುಂಚೆಯೆ ಊಹಿಸಿಕೊಂಡು ಬಾಳೆಹಣ್ಣು, ಅವಲಕ್ಕಿ, ಪೇಡ, ಮಾವಿನಹಣ್ಣುಗಳ ನಿರಂತರ ಪೂರೈಕೆ ಇದ್ದೇ ಇರುತ್ತಿತ್ತು.
ಅದು ಯಾವ ದಿನ ಈಗ ನಾನು ನೆನಪು ಹಾರಿದ್ದೇನೆ. ಅವರು ಕೊಟ್ಟ ತಿಂಡಿ ತಿನ್ನಲು ನಾನು ಒದ್ದಾಡುತ್ತಿದ್ದೆ. ಅವರು ಕೇಳಿದರು - ದಿನಾಲೂ ಎಷ್ಟು ಚಪಾತಿ ತಿಂತಿಯಾ?
ಮೂರು
ನಿನ್ನ ವಯಸ್ಸಿನಲ್ಲಿ ನಾನು ಎಷ್ಟು ತಿನ್ನುತ್ತಿದ್ದೆ ಗೊತ್ತೇನು?
ಗೊತ್ತಿಲ್ಲ.
ಹತ್ತು ಚಪಾತಿ ತಿಂತಿದ್ದೆ. ಬಿಜಾಪುರದ ಗೌಳಿಗೇಟನಲ್ಲಿ ಒಂದು ಖಾನಾವಳಿ ಇತ್ತು. ಅಲ್ಲಿ ನಾನು ಊಟಾ ಮಾಡ್ತಿದ್ದೆ. ಒಂದು ಚಪಾತಿಗೆ ಒಂದು ಚಮಚ ತುಪ್ಪ ಹಚ್ಚಬೇಕು ಅಂತ ಆಗ ಪದ್ಧತಿ ಇತ್ತು. ನಾನು ಹತ್ತು ಚಪಾತಿ ತಿನ್ನಾವಾಂ. ಹತ್ತು ಚಮಚ ತುಪ್ಪ ಹಚ್ಚುದಾಗುದಿಲ್ಲಾ ಅಂಥೇಳಿ ಖಾನಾವಳಿಯಾವಾಂ ಊಟ ಬಿಡಿಸಿಬಿಟ್ಟ. ತಿಂದ್ರ ಊಟಾ ಬಡಸೋರು ಓಡಿಹೋಗಂಗ ತಿನಬೇಕು. ಎಂದು ಹೇಳಿ ಅವರು ನಕ್ಕಾಗ ಕೆಂಪಗಾಗಿದ್ದ ಅವರ ಕೆನ್ನೆಗಳನ್ನು, ಮಾತೃವಾತ್ಸಲ್ಯದ ಆ ದೃಷ್ಠಿಯನ್ನು ನನಗೆ ಇಂದಿಗೂ ಮರೆಯುವುದಾಗಿಲ್ಲ. ಮರೆಯುವಂಥದ್ದೇನನೂ ಕಲಿಸಲಿಲ್ಲ ಆ ನನ್ನ ಗುರು. ಚೆನ್ನಾಗಿ, ಮುಕ್ತವಾಗಿ ಪಂಥ ಪಂಗಡಗಳ ಗೊಡವಿಗೆ ಬೀಳದೆ ಓದಬೇಕು. ಹರಿದು ಬಂದವರನ್ನು ಬಾಚಿ ತಬ್ಬಿಕೊಳ್ಳಬೇಕು ಎಂದು ಕಲಿಸಿದ ಅವರು ನಾನು ಚೆನ್ನಾಗಿ ವ್ಯಾಯಾಮ ಮಾಡಬೇಕು ಎನ್ನುವುದರ ಕಡೆಗೂ ಗಮನವಿರಿಸಿದ್ದರು. ಅಂದಹಾಗೆ ವೃತ್ತಿಯಿಂದ ನಿವೃತ್ತರಾದ ನಂತರ ಒಬ್ಬ ಸಂಗೀತ ಮಾಸ್ತರನನ್ನು ಇಟ್ಟುಕೊಂಡು ಹಾರ್ಮೋನಿಯಂ ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಬದುಕಿನ ಮುಸ್ಸಂಜೆಯಲಿ ಅಂಬೇಡ್ಕರರನ್ನು ಕುರಿತು “ಕ್ರಾಂತಿ ಕಿಡಿ ಬಿ.ಆರ್.ಅಂಬೇಡ್ಕರ” ಪುಸ್ತಕ ಬರೆಯುತ್ತಿದ್ದರು. ಕೊನೆ ಕೊನೆಗೆ ಧಗೆಯ ಬಾಧೆ ತಾಳಲಾಗದಕ್ಕೆ ಬರಿಮೈಯಲ್ಲಿರುತ್ತಿದ್ದ ಅವರು ಜನಿವಾರ ಹಾಕಿಕೊಂಡಿರಲಿಲ್ಲ. ಮಾಂತಪ್ಪ ಸಾವಳಗಿ ಎನ್ನುವವರ ಹೋಟೆಲನಿಂದ ಊಟ ತರಿಸಿಕೊಳ್ಳುತ್ತಿದ್ದ ಅವರ ಮಜ್ಜಿಗೆಗೆ ಉಪ್ಪು ವಗ್ಗರಣಿಯ ನಿಷೇಧವಿರಲಿಲ್ಲ. ಅದೊಂದು ರೀತಿ ಕುಡಿವ ನೀರೇ ತೀರ್ಥ. ಸಿಕ್ಕ ಅನ್ನವೇ ಪ್ರಸಾದವೆಂದುಕೊಂಡ ಸ್ಥಿತಿ. 
ಆಲದ ಮರದಂತೆ ಬೆಳೆಯುವ, ವಿಶಾಲವಾಗಿ ಹಬ್ಬಿಕೊಳ್ಳಬಲ್ಲ ಎಲ್ಲ ಶಕ್ತಿ ಸಾಧ್ಯತೆಗಳಿದ್ದ ಎಂ.ಆರ್.ಜಹಾಗೀರದಾರ ಈ ಚಡಚಣಕ್ಕೆ ಯಾವಾಗ ಬಂದರು? ಗೊತ್ತಿಲ್ಲ ನನಗೆ. ಆದರೆ ಯಾಕೆ ಬಂದರು ಎಂಬುದು ಗೊತ್ತು. . . . . . ಆಸುಪಾಸಿನಲ್ಲಿ ನಮ್ಮೂರ ಹೈಸ್ಕೂಲನ್ನು ವೇದಾಂತ ಕೇಸರಿ ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಸ್ಥಾಪಿಸಿದರು. ಇವರು ಜಾತಿಯಿಂದ ನಾಯಿದರು(ನಾವಲಿಗ). ಆಗ ವೃತ್ತಿಯಿಂದ ಹವಾಲ್ದಾರರಾಗಿದ್ದ ಎಂ.ಆರ್.ಜಹಾಗೀರದಾರರಿಗೆ ದುಂಬಾಲು ಬಿದ್ದು ಇದ್ದ ವೃತ್ತಿಗೆ ರಾಜಿನಾಮೆ ಕೊಡಿಸಿ ನಮ್ಮೂರಿಗೆ ಕರೆತಂದು ಹೈಸ್ಕೂಲು ಹೆಡ್‌ಮಾಸ್ತರಿಕೆಯನ್ನು ಒಪ್ಪಿಸಿದರು. ಜೊತೆಗೆ ತಮ್ಮ ಶಿಷ್ಯನೊಬ್ಬನನ್ನು ಇವರ ಕೈಗೆ ನೀಡಿ ‘ಈತನಿಗೆ ಇಂಗ್ಲೀಷ ಕಲಿಸಬೇಕು’ ಎಂದು ತಿಳಿಸಿದರು. ಜಹಾಗೀರದಾರರಿಗೆ ಹೈಸ್ಕೂಲ ನಡೆಸುವುದು ಕಷ್ಟಕರವಾಗಿರಲಿಲ್ಲ ಆದರೆ ಸ್ವಾಮಿಗಳ ಶಿಷ್ಯನಿಗೆ ಇಂಗ್ಲೀಷ ಕಲಿಸುವುದು ಕಷ್ಟಕರವಾಗಿತ್ತು. ಯಾಕೆಂದರೆ ಊದಿದರೆ ಹಾರಿಹೋಗುವ ಶರೀರ, ಸಿಂಬಳ ಮೂಗು, ಮೇಲಾಗಿ ಈತ ಗುರುಗಳ ಶಿಷ್ಯ. ಇಂಥವನೊಂದಿಗೆ ಆರಂಭಿಕ ದಿನಗಳು ಕಷ್ಟಕರವೇ ಆಗಿದ್ದವು ಎಂ.ಆರ್.ಜಹಾಗೀರದಾರ ಅವರಿಗೆ. ಈತ ಸರಿಯಾಗಿ ಶಾಲೆಗೂ ಬರುತ್ತಿರಲಿಲ್ಲ. ಪರೀಕ್ಷೆಯ ದಿನಗಳಲ್ಲಿಯಂತೂ ಎಲ್ಲೋ ಹೋಗಿರುತ್ತಿದ್ದ ಈ ಮಹಾರಾಯನನ್ನು ಹುಡುಕಿ ತರುವ ಸತ್ವ ಪರೀಕ್ಷೆಯ ಕಾಲ. ಆತನೋ ಊ ರ ಹೊರಗಿನ ಹಾಳು ದೇಗುಲಗಳಲ್ಲಿ ಧ್ಯಾನಸ್ಥನಾಗಿರುತ್ತಿದ್ದ. ಹಾಗೂ ಹೀಗೂ ಪತ್ತೆಹಚ್ಚಿ ಎತ್ತಿ ತಂದು ಪರೀಕ್ಷೆ ಬರೆಯಿಸಿದರೆ ಪೇಪರ್ ತುಂಬಾ ಎರಡೆರಡು ಮೊಟ್ಟೆ ಇಟ್ಟು ಹೋಗಿತ್ತಿದ್ದ. ಇದನ್ನು ಸಹಿಸಲಾಗದ ಎಂ.ಆರ್.ಜಹಾಗೀರದಾರರು ಕೊನೆಗೊಮ್ಮೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ “ನನಗೆ ಬೇರೆ ಏನು ಬೇಕಾದರು ಹೇಳ್ರಿ, ಆದ್ರ ಈ ನಿಮ್ಮ ಶಿಷ್ಯನನ್ನು ಕರೆದುಕೊಂಡು ಹೋಗ್ರಿ. ಈ ಕಲ್ಲನ್ನು ನನಗೆ ಕಟೆಯೋಕ ಆಗುದಿಲ್ಲಾ” ಎಂದು ಖಡಾಮುಡಿ ಹೇಳಿಬಿಟ್ಟರು. ಮಲ್ಲಿಕಾರ್ಜುನ ಶ್ರೀಗಳ ಕಣ್ಣುಗಳು ಒದ್ದೆಯಾದವು. ಶಿಷ್ಯನನ್ನು ಸಮೀಪ ಕರೆದು ಹೇಳಿದರು “ಕೇಳಿದೆ ಏನಪ್ಪ, ಅವರಿಗೆ ಬ್ಯಾಡದ ಮ್ಯಾಲ ನೀ  ನನಗೂ ಬ್ಯಾಡ. ಈ ಎಲ್ಲಾ ಆಟಾ ಸಾಕು. ನಾನು ಇಡೀ ಜಗತ್ತನ್ನು ನಿನ್ನ ಕಣ್ಣುಗಳ ಮುಖಾಂತರ ನೋಡಬೇಕು ಅಂದುಕೊಂಡಿದ್ದೆ. . . . . . .”.
ಇದೆಲ್ಲ ಕೇಳಿ ಶಿಷ್ಯನಲ್ಲಿ ಏನೋ ಪರಿವರ್ತನೆಯಾಯ್ತು. ಆತನೂ ಅಳಲಾರಂಭಿಸಿದ, ಬದಲಾದ. ಈಗ ಇಡೀ ಕನ್ನಡ ಕುಲಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು(Siddeshwara Swamiji) ಎಂದು ಪರಿಚಿತನಾದ. ಮುಂದಿನ ಅವರ ಸಾಧನೆಯ ದಾರಿ ಇಲ್ಲಿ ಬೇಡ. ನಾನು ಹೇಳಬೇಕಾದುದು, ನಿರ್ಮೊಹದ ಗುರು ನಿರ್ಭೀತಿಯ ಶಿಷ್ಯನನ್ನು ಕೊಡಲು ಸಾಧ್ಯವಿದೆ. ಹಾಗೆಯೇ ಎಂ.ಆರ್.ಜಹಾಗೀರದಾರ ಸಿದ್ಧೇಶ್ವರ ಸ್ವಾಮಿಗಳು ಎಂಬ ಶಿಷ್ಯನನ್ನು ರೂಪಿಸಿದ್ದು. ಆಗ ಕೈ ಹಿಡಿದ ಗುರು ಬದುಕಿನ ಕೊನೆಯುಸಿರಿನವರೆಗೆ ಸಿದ್ಧೇಶ್ವರರಿಗೆ ಧಾರೆ ಎರೆಯುತ್ತಲೇ ಹೋದರು. ನನಗೆ ನೆನಪಿದೆ ಸಿದ್ಧೇಶ್ವರ ಸ್ವಾಮಿಗಳು ಉಪನಿಷತ್ ಕುರಿತಾದ ಆರಂಭಿಕ ಪ್ರವಚನಗಳನ್ನೆಲ್ಲ ನೀಡಿದ್ದು ನಮ್ಮೂರಿನಲ್ಲಿಯೆ. ಯಾಕೆಂದರೆ ಎಂ.ಆರ್.ಜಹಾಗೀರದಾರ, ಸಿಂಪಿಯವರನ್ನು ಕರೆದುಕೊಂಡು ಹೋಗಿ ಶಿಷ್ಯ ನೀಡುವ ಪ್ರವಚನವನ್ನು ಕಣ್ಣು ಮುಚ್ಚಿ ಕುಳಿತುಕೊಂಡು ಅತ್ಯಂತ ಧ್ಯಾನಸ್ಥರಾಗಿ ಕೇಳುತ್ತಿದ್ದರು. ಶಿಷ್ಯನನ್ನು ವೇದಿಕೆ ಮೇಲೆ ಕೂಡ್ರಿಸಿ, ಸ್ವಲ್ಪ ಕೆಳಗೆ ಶಿಷ್ಯನ ಸಮೀಪ ತಾವೂ ಕುಳಿತು ತಮ್ಮ ಬೆತ್ತವನ್ನು ನನ್ನ ಕೈಗೆ ನೀಡಿ, ಕಾವಲಿರಿಸಿದ ಗುರುವನ್ನು ನೆನೆದರೆ ಗಂಗಾಳದ ತುಂಬ ಹುಗ್ಗಿ ಹಾಕಿ ಸೆರಗಿನಿಂದ ಗಾಳಿ ಹಾಕುತ್ತ ಪಕ್ಕದಲ್ಲಿ ಕುಳಿತ ಸಾಲು ಸಾಲು ನಮ್ಮೂರ ಅಜ್ಜಿಯರ ನೆನಪಾಗುತ್ತದೆ ನನಗೆ.
ನಮ್ಮೂರ ಸುತ್ತ-ಮುತ್ತ ಸಿಂಪಿ ಲಿಂಗಣ್ಣ, ಎಂ.ಆರ್.ಜಹಾಗೀರದಾರ ಅದೊಂದು ರೀತಿಯ ಭಲೆಜೋಡಿ. ಎಲ್ಲಿ ಸಿಂಪಿಯವರ ಭಾಷಣವೋ ಅಲ್ಲಿ ಜಹಾಗೀರದಾರರ ಅಧ್ಯಕ್ಷತೆ ಇರಲೇಬೇಕು. ಜಹಾಗೀರದಾರರು ಹೇಳಿದ್ದರು; “ನಾನೊಂದು ತರಹ ಮಾಸ್ತರ ರ ಭಾಷಣಕ್ಕೆ ಮೂಗುದಾರ” ಅವರದು ಒನ್ ಪ್ಲಸ್ ಒನ್ ಪ್ಲ್ಯಾನ್. ಒಬ್ಬರನ್ನು ಕರೆದರೆ ಇನ್ನೊಬ್ಬರನ್ನು ಕರೆಯಲೇಬೇಕು. ಅದು ಅನಿವಾರ್ಯ ಜೀವದ ಜೋಡಿ. ಸ್ನೇಹದ ಸಂಸ್ಕೃತಿಗೊಂದು ಮಿಸಾಲ್. ಅರವತ್ತರ ಗಡಿದಾಟ್ಟಿದ್ದ ಇಬ್ಬರಿಗೂ ಮಂಡೆ ನೋವು, ಇಬ್ಬರೂ ಕುಂಟುತ್ತಲೇ ಬರುತ್ತಿದ್ದರು. ಸಿಂಪಿಯವರ ಭಾಷಣ ಪ್ರಾರಂಭವಾಗುತ್ತಿದ್ದುದೇ ಈ ಹೇಳಿಕೆಯಿಂದ - “ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ” ಎಂದು ಬಸವಣ್ಣ ಹೇಳಿಕೊಂಡ. ಆದರೆ ಪ್ರಯೋಗ ಮಾಡಲಿಕ್ಕೆ ಕೂಡಲಸಂಗಯ್ಯ ನಮ್ಮಿಬ್ಬರನ್ನು ಹಿಡಕೊಂಡ, ಜಹಾಗೀರದಾರರದು ದೊಡ್ಡದೊಂದು ನಗೆ.
ನಾನು ನನ್ನ ಗುರು ಜಹಾಗೀರದಾರರ ಬಳಿಗೆ ಬರುವಷ್ಟರಲ್ಲಿ ಅವರು ವಿಧುರ. ಮಕ್ಕಳು ಬೇರೆ ಬೇರೆ ಕಡೆಗೆ ನೌಕರಿಯಲ್ಲಿದ್ದರು. ಇಸ್ಪೀಟು ಅವರಿಗೆ ಬಹಳ ಪ್ರೀತಿಯ ಆಟ. ಒಂದು ರೂಪಾಯಿ ಜಿದ್ದಿಗಿಟ್ಟು ಆಡೋದು. ಸಿಂಪಿಯವರಿಂದ ಒಂದು ರೂಪಾಯಿ ಗೆದ್ದರೆ ಅದೇ ದೊಡ್ಡ ಜಾಕ್‌ಪಾಟ್. ಸಾಯಂಕಾಲದ ಅವಲಕ್ಕಿ ನಕ್ಕಿ. ಜಹಾಗೀರದಾರರು ತೀರಿದ ನಂತರ ಒಂಟಿಯಾದ ಸಿಂಪಿಯವರು ಇಸ್ಪೀಟ ಎಲೆಗಳನ್ನು ಅರವಿಂದರ ಫೋಟೋದ ಮುಂದೆ ಒಗೆದು ಕಣ್ಣೀರಿಟ್ಟದ್ದುಂಟು. ಜಹಾಗೀರದಾರರು ನನ್ನನ್ನು ಅಂಬಾಸಿಡಾರ್ ಕಾರನಲ್ಲಿ ಊರಿಗೆ ಕರೆದುಕೊಂಡು ಹೋದ ನೆನಪು.
ಬಿಜಾಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರರ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳನ್ನು ಕುರಿತು ‘ಗುರುದೇವ’ ಗ್ರಂಥ ಬಿಡುಗಡೆಯ ಕಾರ್ಯಕ್ರಮ ಇತ್ತು. ಹುಣಸ್ಯಾಳ ಗೌಡತಿಯವರು ಬರೆದ ದೊಡ್ಡ ಪುಸ್ತಕ ಅದು. ಕೃತಿ ಕುರಿತು ಅವತ್ತಿನ ಮುಖ್ಯ ಭಾಷಣ ಎಂ.ಆರ್.ಜಹಾಗೀರದಾರರದು. ನಾನು, ಗುರುಗಳು ಮತ್ತು ಸಿಂಪಿಯವರು ಚಡಚಣದಿಂದ  ಬರುವುದರೊಳಗಾಗಿ ಆಶ್ರಮದಲ್ಲಿ ಬಿ.ಟಿ.ಸಾಸನೂರ, ಶಂಗು ಬಿರಾದಾರ, ಚಿಂತಾಮಣಿ, ಸಂಗಮೇಶ ಬಿರಾದಾರ ಎಲ್ಲರೂ. ಗದುಗಿನ ಮಲ್ಲಿಕಾರ್ಜುನರ ಉಪನಿಷತ್ ಹೊಳಹುಗಳನ್ನು ಕುರಿತು, ಶಿಷ್ಯ ಸಿದ್ಧೇಶ್ವರ ಸ್ವಾಮಿಗಳ ನಿರಾಢಂಬರತೆಯನ್ನು ಕುರಿತು ಎಷ್ಟೊಂದು ಗೌರವ ಮತ್ತು ಕಕ್ಕುಲಾತಿಯಿಂದ ಮಾತನಾಡಿದ್ದರು ಎಂ.ಆರ್.ಜಿ, ಅನಂತರ ಹುಣಸ್ಯಾಳ ಗೌಡತಿಯವರ ಮನೆಯಲ್ಲಿ ಸಿಂಪಿಯವರು ಮತ್ತು ಜಹಾಗೀರದಾರರು ಜಿದ್ದಿನ ಮೇಲೆ ಹೋಳಿಗೆ ಊಟ ಮಾಡಿದ್ದು ಒಂದು ಮಾಸದ ನೆನಪು. ವಯಸ್ಸಾಗುತ್ತಾ ಬಂದಿತ್ತು. ಆಗಲೇ ಜಹಾಗೀರದಾರರ ಕಾಲುಗಳು ಸ್ವಾಧಿನ ಕಳೆದುಕೊಂಡಿದ್ದವು. ಕಾರಿನಲ್ಲಿ ಕುಳಿತ ಮೇಲೆ ಯಾರಾದರೂ ಕಾಲು ಎತ್ತಿ ಇಡಬೇಕಾಗುತ್ತಿತ್ತು. ಆ ದಿನ ನಾನು ಕಾಲು ಎತ್ತಿ ಇಡಲು ಹೋದೆ. ಪ್ರೀತಿಯಿಂದ ನಿರಾಕರಿಸಿದರು. ಆಶ್ರಮದ ಶಿಷ್ಯನೊಬ್ಬ ಬಂದು ಎತ್ತಿಟ್ಟ.
ಅವರ ಸಾವು ಇನ್ನೊಂದು ವಾರ ಇತ್ತು. ಅದೇನು ಗೊತ್ತಾಗುವ ವಿಷಯವೇ? ಅವರು ಏನೋ ಬರೆಯುತ್ತಾ ಕುಳಿತಿದ್ದರು. ನಾನು ಹೋದೆ, ಬಳಿಗೆ ಕರೆದು ಕೂಡ್ರಿಸಿಕೊಂಡು ‘ರಾಮಾಯಣ ದರ್ಶನಂ(Ramayana Darshanam)’ ಕಾವ್ಯದ ಆರಂಭದ ಕವಿಯ ಪ್ರಾರ್ಥನೆಯನ್ನು ನನಗೆ ಜೋರಾಗಿ ಓದಿ ಹೇಳಲಾರಂಭಿಸಿದರು. ವಿಪರೀತ ಕೆಮ್ಮು ಮುಂದೆ ಓದಲಾಗಲಿಲ್ಲ. ಎಷ್ಟೋ ಹೊತ್ತು ನನ್ನ ಬೆನ್ನ ಮೇಲೆ ಕೈ ಇಟ್ಟು ಹಾಗೇ ಕುಳಿತರು ಮತ್ತೆ ಓದಲು ಹೋದರು, ಆಗಲಿಲ್ಲ. ಅವರು ವಿರಮಿಸಿದರು, ನಾನು ಪುಸ್ತಕ ತೆಗೆದುಕೊಂಡು ಮನೆಗೆ ಬಂದೆ. ನನ್ನ ಗುರುಗಳಿಗೆ ಅಬ್ರಾಹ್ಮಣರ ಮನೆಯ ಮಜ್ಜಿಗೆ ಎಂದರೆ ತುಂಬಾ ಇಷ್ಟ. ಎರಡು ದಿನಗಳ ನಂತರ ಮಜ್ಜಿಗೆಯ ಗ್ಲಾಸು ಕೈಯಲ್ಲಿ ಹಿಡಿದುಕೊಂಡು ಅವರನ್ನು ನೋಡಲು ಹೋದೆ. ಅವರ ಮನೆಯ ಮುಂದೆ ಒಂದಿಷ್ಟು ಜನ ಸೇರಿದ್ದರು. ಏನಾಗಿರಬಹುದು? ನನ್ನಿಂದ ಊಹಿಸಿಕೊಳ್ಳವುದೂ ಆಗದ ಎಳೆಯ ವಯಸ್ಸು. ನನಗೆ ಈ ದೊಡ್ಡ ದೊಡ್ಡ ಜನಗಳ ಮಧ್ಯದಿಂದ ಅವರ ಬಳಿ ಹೋಗಲು ಭಯ. ನಿಂತವರ ಕಾಲುಗಳ ಸಂದಿಯಿಂದ ಗುರುಗಳ ಮುಖವನ್ನೇ ಗಮನಿಸುತ್ತಿದ್ದೆ. ಇದ್ದಕ್ಕಿದ್ದಂತೆ ಅವರು ನನ್ನೆಡೆಗೆ ನೋಡಿ ಕೆಮ್ಮುತ್ತ ಕೈ ಮಾಡಿ ಕರೆದರು. ಅಬ್ಬಾ ಎಂಥಾ ಖುಷಿ ಅಂತೀರಾ! ಮಜ್ಜಿಗೆಯ ಗ್ಲಾಸಿನೊಂದಿಗೆ ಓಡಿ ಹೋದೆ. ಒಂದಿಷ್ಟು ಕುಡಿದರು. ಬಹಳ ಬಳಲಿದ್ದರು, ಬೆನ್ನಲ್ಲಿ ನೀರು ತುಂಬಿಕೊಂಡಿತ್ತು. ತೆಗೆಸುವ ಸಲುವಾಗಿ ಸೋಲ್ಲಾಪುರದ ಆಸ್ಪತ್ರೆಗೆ ಒಯ್ಯಲು ವಾಹನ ಸಿದ್ಧವಾಗಿ ನಿಂತಿತ್ತು. ನಾನು ಅಳುತ್ತ ಮನೆಗೆ ಬಂದೆ, ಅತ್ತ ಅವರನ್ನು ಸೋಲ್ಲಾಪುರಕ್ಕೆ ಒಯ್ಯಲಾಯಿತು.
ಮರುದಿನ ಸಾಯಂಕಾಲ ಸೋಲ್ಲಾಪುರದಿಂದ ಸಿಡಿಲಿನಂಥ ಸುದ್ಧಿ. ಊರಿಗೆ ಊರೇ ಮೌನ. ಜಹಾಗೀರದಾರ ತೀರಿಹೋಗಿದ್ದರು.  ಶಿಷ್ಯರೆಲ್ಲಾ ಸೇರುವವರೆಗೆ ಬ್ರಾಹ್ಮಣರು ಹೆಣ ಇಡಲಿಲ್ಲ. ಬದುಕಿರುವವರೆಗೂ ಈ ಕರ್ಮಠತನದಿಂದ ದೂರವಿದ್ದ ನನ್ನ ಗುರುವಿನ ಹೆಣಕ್ಕೆ ಕರ್ಮ ತಪ್ಪಲಿಲ್ಲ. ಅದೊಂದು ರೀತಿ ಕಬೀರನ ಕಥೆಯಷ್ಟೆ.  ಯಾವ ನದಿಯನ್ನು ನಿತ್ಯ ದಾಟುತ್ತ ಆರು ದಶಕಗಳ ಬಾಳನ್ನು ಜಹಾಗೀರದಾರ ಸಾಗಿಸಿದ್ದರೋ ಅದೇ ನದಿಯ ದಡದಲ್ಲಿ ಅವರ ದೇಹಕ್ಕೆ ಅಗ್ನಿ ಸ್ಪರ್ಶವಾಯಿತು. ನನಗೆ ಕಣ್ಣೀರು ಬರಲಿಲ್ಲ. ಆದರೊಂದು ಕವಿತೆ ಬರೆದೆ “ಕ್ರೌಂಚದ ಕಣ್ಣೀರು”. ಅವರಿಗೇ ಅರ್ಪಿಸಿದ ನನ್ನ ಮೊದಲ ಕವನ ಸಂಕಲನದ ಕೊನೆಯ ಕವಿತೆ ಇದೆ. ಆ ಮೂಲಕ ನನ್ನ ಗುರುವಂದನೆ ನಿರಂತರವಾಗಿದೆ.
ಒಬ್ಬ ನಾಯಿದ ದೃಷ್ಠಾರ, ಒಬ್ಬ ಬ್ರಾಹ್ಮಣ ಗುರು, ಮತ್ತೊಬ್ಬ ಗಾಣಿಗ ಶಿಷ್ಯ ನಮ್ಮೂರನ್ನು ಮಾನವತೆಯ ದಿವ್ಯ ಪರಂಪರೆಗೆ ಸೇರಿಸಿದಂತೆ ಇನ್ನ್ಯಾರೂ ಸೇರಿಸಲಿಲ್ಲ. ಆನಂತರದ್ದು ರಕ್ತಚರಿತ್ರೆ, ಜಾತಿ ಕದನ. ಜಾತಿಯೊಳಗೆ ಹುಟ್ಟುವದು ನಮ್ಮ ನಿಯಂತ್ರಣದಲ್ಲಿಲ್ಲದ ಅನಿವಾರ್ಯ. ಆದರೆ ಅದರೊಳಗೇ, ಅದಕ್ಕಾಗಿಯೇ ಸಾಯುವುದು ಮಾತ್ರ ನಾವೇ ಕ್ಷಮಿಸಿಕೊಳ್ಳಲಾಗದ ಅಪರಾಧ. ಇದು ನನ್ನ ಗುರುವಿನ ಸಂದೇಶವಾಗಿತ್ತು ಎಂದುಕೊಂಡಿದ್ದೇನೆ    
      
                                                                                       -ಡಾ.ರಾಜಶೇಖರ.ಮಠಪತಿ(ರಾಗಂ)