Total Pageviews

Tuesday, December 31, 2013

ಇವೆಲ್ಲವೂ ಶಶಿಯ ಕಿರಣಗಳೇ. . .



 ವೇಗೋತ್ಕರ್ಷದ ಸಿದ್ಧಾಂತಕ್ಕೆ ಮಳೆ ಹೊಡೆದುಕೊಂಡ ಆಧುನಿಕ ಮನುಷ್ಯನಿಗೆ ಕೆಲವೊಮ್ಮೆ ನೆನಪುಗಳೂ ಭಾರವಾಗುತ್ತವೆ. ಇನ್ನು ಕೆಲವೊಮ್ಮೆ ಕಳದೇ ಹೋಗುತ್ತವೆ, ಮತ್ತೆ ಕೆಲವೊಮ್ಮೆ ಉಳಿದೂ ದಾಖಲಿಸಲಾಗದ ಪಳೆಯುಳಿಕೆಗಳಾಗುತ್ತವೆ. ನನ್ನ ಈ ದಾಖಲಾತಿ ಇಂಥದೇ ಒಂದು ಸಾಧ್ಯತೆಯಿಂದ ಹೊರಬರುವ ಯತ್ನ. 2012ರ ಅಕ್ಟೋಬರ್ ತಿಂಗಳಲ್ಲಿ ನನ್ನ 'ಗಾಂಧಿ : ಅಂತಿಮ ದಿನಗಳು' ಕೃತಿಗೆ ಪ್ರಶಸ್ತಿ ಬಂತು. ಆನಂತರದ್ದೆಲ್ಲವೂ ಬರೀ ಭರಾಟೆ. ಇದರ ಸದ್ದಿನಲ್ಲಿ ಮೌನದ ಕೆಲವು ಆಲಾಪಗಳು ನನಗೇ ಕೇಳಿಸದೆ ಹೋದವೆನೋ.
       ನವೆಂಬರ್ 4 ರಿಂದ 8, 2012 ರವರೆಗೆ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಶಶಿಕಿರಣ ದೇಸಾಯಿಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಿತು. ಈ ನಾಲ್ಕು ದಿನಗಳ ಪ್ರದರ್ಶನ ಸಮಾರಂಭದ ಉದ್ಘಾಟನೆಗೆ ಹೋದವನು ನಾನು. ನನ್ನದೇ ಉದ್ಘಾಟನಾ ಭಾಷಣವೂ ಕೂಡ. ನನ್ನೊಂದಿಗಿದ್ದವರು ಅಂತರ್ ರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ರಾಮಸ್ವಾಮಿ, ಹಾಸನದ ಬರಹಗಾರ ಮಿತ್ರರಾದ ಚಂದ್ರಕಾಂತ ಪಡೆಸೂರು, ತಿರುಪತಿಹಳ್ಳಿ ಶಿವಶಂಕರಪ್ಪ, ಯೋಗಾ ಮಾಸ್ಟರ್ ಹಾಗೂ ಹಿರಿಯ ಕಲಾವಿದ ಶ್ರೀ ಬಿ.ಎಸ್.ದೇಸಾಯಿ. ಇಷ್ಟೊಂದು ಜನಸಂದಣೀಯ ಚೆತ್ರಕಲಾ ಪ್ರದರ್ಶನವನ್ನು ನಾನು ಈ ಹಿಂದೆಂದೂ ನೋಡಿಲ್ಲವೆಂದೇ ಹೇಳಬೇಕು. ಇದು ಶ್ರೀ ಬಿ.ಎಸ್.ದೇಸಾಯಿಯವರ ಸಾಮಾಜಿಕ ಸಂಬಂಧಗಳ ಶ್ರೀಮಂತಿಕೆಗೆ ಸಾಕ್ಷಿಯಾದ ಸಮಾರಂಭವೂ ಕೂಡ.

       ಭಾವ ಮತ್ತು ಭಾವನೆಗಳ ಅದ್ಭುತ ಲೋಕದಿಂದ ಹೊರಹೊಮ್ಮುವ ಬಣ್ಣಗಳು ನಮ್ಮ ಕಣ್ಣುಗಳಿಗೆ ಕಾಣಿಸಿಕೊಳ್ಳುವುದು ನೆಪ ಮಾತ್ರಗಳಾಗಿ. ಅವುಗಳ ಹುಟ್ಟಿನೊಂದಿಗೆ ಅವುಗಳ ಉದ್ದೇಶ ಮತ್ತು ಗುರಿ ನಿರ್ಧಾರಿತವಾಗಿದ್ದೂ ಅವು ವ್ಯಕ್ತಿಯೊರ್ವನ ಕಲೆಯ ಗುರಿಯನ್ನು ತಲುಪುತ್ತಿರುವಂತೆ ವರ್ತಿಸುತ್ತವೆ. ಬಣ್ಣಕ್ಕೆ ಕಲಾವಿದ ನೆಪವಾದನೋ, ಕಲಾವಿದನಿಗೆ ಬಣ್ಣ ಸಾಧನವಾಯಿತೋ ಇದು ಬಿಡಿಸಲಾಗದ ಅತ್ಯಂತ ಸಂಕೀರ್ಣ ಪ್ರಶ್ನೆ. ಇದಕ್ಕೆ ಒಂದು ಉತ್ತರ ಸಾಧ್ಯವಿಲ್ಲ. ಆದರೆ ಒಂದನ್ನೇ ಹೇಳುವ ಹಲವು ಉತ್ತರಗಳು ಸಾಧ್ಯ. ಅಂತೆಯೇ ಈ ಸಮಾರಂಭವನ್ನು ಉದ್ಘಾಟಿಸುತ್ತ ನಾನು ಹೇಳಿದೆ ಇವೆಲ್ಲವೂ ಶಶಿಯ ಕಿರಣಗಳೇ. . .
       ಇಲ್ಲಿ ಶಶಿ ಓರ್ವ ವ್ಯಕ್ತಿಯು ಹೌದು ಸಮಷ್ಠಿಯನ್ನು ರಂಗೇರಿಸುವ ಶಕ್ತಿಯೂ ಹೌದು. ಈ ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬನ ಕುಂಚ ಸೃಷ್ಠಿಯ ಸುತ್ತಲೂ ಗಿರಕಿ ಹೊಡೆಯುವ ಕಲಾರಾಧಕನಿಗೆ ವ್ಯಕ್ತಿಯು ಸಿಗುತ್ತಾನೆ, ಸಮಷ್ಠಿಯೂ ಸಿಗುತ್ತದೆ. ಶಶಿಕಿರಣ ದೇಸಾಯಿ ಇನ್ನೂ ಶುಕ್ಲಪಥಿಕ. ಸಾಗಬೇಕಾದ ದಾರಿ ಅನಂತವಾಗಿದೆ. ಪ್ರಸಿದ್ಧಿ, ಪ್ರಚಾರದ ರೋಗಗಳಿಂದ ಮುಕ್ತನಾಗಿ ಆರೋಗ್ಯವಂತನಾಗಿ ಬೆಳೆಯಬೇಕಿದೆ. ಆತನಿಗೆ ಶುಭವಾಗಲಿ.


Friday, December 27, 2013

ನನ್ನೂರು ಧಾರವಾಡ ನನ್ನ ಹೀಂಗ ಕಾಡಬ್ಯಾಡ

Ragam with Prof. Champa, Prof. Kattimani and Donur
ನನ್ನೂರು ಧಾರವಾಡ
ನನ್ನ ಹೀಂಗ ಕಾಡಬ್ಯಾಡ
ಎದೆಯಾಗ ನೂರು ತರದ
ಕುಡುಬುಡುಕಿಯಾಡಬ್ಯಾಡ. . .
ಇವು ಕೆಲವು ವರ್ಷಗಳ ಹಿಂದೆ ಧಾರವಾಡವನ್ನು ಕಳೆದುಕೊಳ್ಳುವ ಭಯದಲ್ಲಿ ನಾನು ಬರೆದ ಸಾಲುಗಳು.
ಅಲೆಮಾರಿಯಾದ ಮನುಷ್ಯ ಬದುಕಿನ ಹಲವು ಮಜಲುಗಳಲ್ಲಿ ಪರಕೀಯತೆಯ ಮತ್ತು ಬೇರುಗಡಿತತನದ ಭಾವದಿಂದ ನರಳುತ್ತಾನೆ. ತನ್ನದಾಗಿರುವುದೆಲ್ಲವು ತನ್ನದಲ್ಲವೆನೋ ಎನ್ನುವ ಸಣ್ಣ ಗುಮಾನಿಯಿಂದ ಪ್ರಾರಂಭವಾಗುವ ಈ ಯಾತನೆ ಎಂಥೆಂಥವರಿಗೂ ಭಯಾನಕ ರೋಗವಾಗಿ ಬಳಲಿಸಿದ್ದನ್ನು ನಾವು ನೋಡಿದ್ದೇವೆ. ದಾವಂತದ ದುನಿಯಾದಲ್ಲಿ ಭಾವನಾತ್ಮಕ ಅನಾವರಣಕ್ಕೆ ಸಿಗಬೇಕಾದಷ್ಟು ಸಮಯ ಸಿಗದೇ ಇದ್ದಾಗ ಹಬ್ಬಿಕೊಳ್ಳುವ ಭಾವ ಇದು. ಆಗೆಲ್ಲ ‘ಇರುವದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂದು ಅನಿವಾರ್ಯವಾಗಿ ಹಾಡಿಕೊಂಡು ಬಿಡಬೇಕಾಗುತ್ತದೆ.
        ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ವ್ಯವಸ್ಥೆಗಳನ್ನೂ ನಾವು ಅನೇಕ ಸಾರಿ ಹುಟ್ಟಿಹಾಕಿಕೊಂಡಿದ್ದೇವೆ. 2012ರಲ್ಲಿ ಬೆಂಗಳೂರಿನ ಸಂಜಯ ನಗರದಲ್ಲಿ ನಾಲ್ಕಾರು ಅನಿವಾಸಿ ಬೆಂಗಳೂರಿಗರೆಲ್ಲ ಸೇರಿಕೊಂಡು ಇಂಥದೇ ಒಂದು ವೇದಿಕೆಯನ್ನ ಹುಟ್ಟಿಸಿಕೊಂಡೆವು. ನನ್ನ ‘ಗಾಂಧಿ:ಅಂತಿಮ ದಿನಗಳು’ ಮೊದಲು ಬಿಡುಗಡೆಗೊಂಡದ್ದು ಇಲ್ಲಿಯೇ. ಇದರಲ್ಲಿ ನಾನು, ಹರಿಹರಪ್ರಿಯ, ಕೃಷ್ಣಮೂರ್ತಿರಾವ್, ಚೌಡಯ್ಯ, ದೇಸಾಯಿ, ಚಂಪಾ, ಎಲ್.ಹನುಮಂತಯ್ಯ, ರಾಜು ಮಳವಳ್ಳಿ, ಮಾಯಿಗೌಡ ಮತ್ತು ಭಗವಾನ್ ಎಲ್ಲರೂ ಇದ್ದೆವು. ಈ ವೇದಿಕೆಯನ್ನು ನಾವು ಕಿಟ್ಟು ಮನೆ ಎಂದು ಕರೆದೆವು. ಯಾವುದೋ ಒಂದು ಹೆಸರು, ಕೂಡಲು ಒಂದು ಕಾರಣ ಹುಡುಕಿಕೊಂಡಂತೆ.
        ಅಂಥದೇ ಒಂದು ಪ್ರಯತ್ನ ಧಾರವಾಡ ಕಟ್ಟೆ. ಇದು ವಲಸೆ ಹೋದ ಧಾರವಾಡಿಗರಿಗಾಗಿ ಗೆಳೆಯ ಬಸವರಾಜ ಡೋಣುರ ಕಂಡ ಕನಸು. 1994 ರಿಂದ ಒಂದು ವಯೋಮಾನವರಾದ ನಾನು, ಬಸವರಾಜ ಡೋಣುರ, ಶಿವಾನಂದ ಕೆಳಗಿನಮನಿ, ರಂಗರಾಜ ವನದುರ್ಗಾ, ಧನವಂತ ಹಾಜವಗೋಳ, ಮುಕುಂದ ಲಮಾಣಿ, ಡಾ. ತೇಜಸ್ವಿ ಕಟ್ಟಿಮನಿ, ಡಾ. ಕಮಲಾ ಹೆಮ್ಮಿಗೆ ಧಾರವಾಡದ ಸಾಂಸ್ಕೃತಿಕ ಪರಿಸರದಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದವರು. ಆದರೆ ಕಾಲಕ್ರಮೇಣ ಬದುಕಿನ ಓಘದಲ್ಲಿ ವೃತ್ತಿ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ಈ ಪ್ರೀತಿಯ ಧಾರವಾಡವನ್ನು ಬಿಟ್ಟು ಎಲ್ಲೆಲ್ಲೋ ಸೇರಿಕೊಂಡೆವು. ಆದರೆ ಈ ಸಾಂಸ್ಕೃತಿಕ ನಗರಿಯನ್ನು ಇನ್ನಿಲ್ಲದಂತೆ ಖಾಲಿಮಾಡಿಕೊಂಡು ಹೋದವರಲ್ಲ ನಾವು. ಬಾಳೆಯ ಮರ ಸಣ್ಣದೊಂದು ಬಚ್ಚೆಯನ್ನು ತನ್ನ ಪಕ್ಕದಲ್ಲಿ ಹುಟ್ಟಿಸಿಯೇ ಸಾಯುವಂತೆ ನಾವೆಲ್ಲ ನೆನಪಿನ ಬೀಜವನ್ನು ಬಿತ್ತಿಹೋದವರು. ಜಗಳಾಡುತ್ತ, ಟೀಕಿಸುತ್ತ, ಮತ್ತೆ ಮತ್ತೆ ಸೇರಲು ಆಸೆ ಪಟ್ಟವರು. ಈ ಒಂದು ಸಣ್ಣ ಕಾರಣಕ್ಕೆ ಹುಟ್ಟಿಕೊಂಡದ್ದು ಧಾರವಾಡ ಕಟ್ಟೆ.
Ragam on Dharwad Katte
        ನಮ್ಮ ಕಟ್ಟೆಗೆ ಮಹೋರ್ತ ಕೂಡಿ ಬಂದದ್ದು 22/09/2013 ರಂದು. ಆ ದಿನ ಮುಂಜಾನೆ ಗೆಳೆಯ ಬಸವರಾಜ ಡೋಣುರರ ಬೃಹತ್ ಅನುವಾದ ಸಂಪಾದನಾ ಕೃತಿ ‘ಕಥಾಮಂಜರಿ’ ಹಾಗೂ ಅವರದೇ ಇನ್ನೊಂದು ಕೃತಿ ‘ದಶಕದ ಕಥೆಗಳು’ ಬಿಡುಗಡೆಯ ಕಾರ್ಯಕ್ರಮ. ಕಥಾಮಂಜರಿಯನ್ನು ಕುರಿತು ಮಾತನಾಡಿದವನು ನಾನು. ನನ್ನ ಮಾತಿನ ಮುಖ್ಯ ಭಾಷಾಂತರ ರಶಿಯನ್ ಮೂಲದ ಚೆಕಾಫ್‍ನ ‘ಪಣ’. ಇದೊಂದು ಅದ್ಭುತ ಕಥೆಯೇ ಸತ್ಯ. ಅಷ್ಟೇ ಶಕ್ತಿಶಾಲಿ ಭಾಷಾಂತರ ಗೆಳೆಯ ಬಸವರಾಜ ಡೋಣುರರದ್ದು.

        ಇದೇ ಸಾಯಂಕಾಲ ‘ಧಾರವಾಡ ಕಟ್ಟೆ’ಯ ಉದ್ಘಾಟನೆ. ಪ್ರೊ. ಚಂಪಾ, ಡಾ. ತೇಜಸ್ವಿ ಕಟ್ಟೀಮನಿ, ಗಿರೀಶ ಹಾಗೂ ಡಾ.ಡಿ.ಎಂ.ಹಿರೇಮಠ ಸಮಾರಂಭದ ಉತ್ಸವ ಮೂರ್ತಿಗಳು. ಇದೇ ಸಂದರ್ಭದಲ್ಲಿ ಶಿವಶಂಕರ ಹಿರೇಮಠರ ಒತ್ತಾಸೆಯ ಮೇರೆಗೆ ಸಂ.ಶಿ.ಭೋಸನೂರಮಠರ ಭವ್ಯ ಮಾನವನ ಕುರಿತು ಅಭ್ಯಸಿಸಲು ಒಪ್ಪಿಕೊಂಡದ್ದು.

ತಪ್ಪಿತಸ್ಥನ ಅಫಿಡೆವಿಟ್ಟು


Ragam with the President of Ka.Sa.Pa Belgaum

ಹೀಗೆಯೇ . . .
ಮಾತಿಗೆ ಸಿಗದವರು, ಕೃತಿಯಾಗಿ ನಡೆದವರು
ಪುಣ್ಯವೇ ಹಣ್ಣಾದವರು
ಮತ್ತೆ ಬಂದಾರೆ ಯೇ?
ಕಾಯುತ್ತ ಕುಳಿತಿದ್ದೇವೆ ಶಬರಿಯಂತೆ!
ಪುಟದಾಚೆಗಿನ ಮಾತು
ತೆರೆ ಸರಿಯುವವರೆಗೆ
ಆಚೆ ಗೇನಿದೆಯೋ ದೇವರಿಗೇ ಗೊತ್ತು
        ಇವು ತಪ್ಪಿತಸ್ಥನೊಬ್ಬನ ಅಫಿಡೆವಿಟ್ಟುವಿನಲ್ಲಿ ಸಿಕ್ಕ ಸಾಲುಗಳು. ಈ ಅಫಿಡೆವಿಟ್ಟಿಗಾಗಿ ನೀವು ಕೋರ್ಟಿನ ಕಡತುಗಳಲ್ಲಿ ಕೈಯಾಡಿಸಬೇಕಿಲ್ಲ. ಪುಸ್ತಕದಂಗಡಿಯಲ್ಲಿ, ಇತ್ತೀಚಿನ ಕಾವ್ಯ ಸಂಕಲನಗಳಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟು ನಿಮಗೆ ಸಿಕ್ಕುಬಿಡುತ್ತದೆ. ನಮ್ಮೆಲ್ಲರ ತಪ್ಪುಗಳ ಪ್ರಾಮಾಣಿಕ ವಾರಸುದಾರನಾಗಿ ಈತ ನೀಡಿದ ಅಫಿಡೆವಿಟ್ಟಿನ ಪುಟಗಳ ಸಂಖ್ಯೆ ಐವತ್ತನ್ನು ಮೀರುತ್ತದೆ. ಹೆಚ್ಚು-ಕಡಿಮೆ ಗೋಡ್ಸೆ(Godse)ಯ ಅಫಿಡೆವಿಟ್ಟಿನ ಪುಟಗಳ ಸಂಖ್ಯೆಯಷ್ಟಾಯಿತಲ್ಲ? ಈ ಪ್ರೀತಿಯ ಅಪರಾಧಿಯ ಹೆಸರು ಡಾ. ವೈ.ಎಂ.ಯಾಕೊಳ್ಳಿ(Yakolli). ಬಾದಾಮಿ(Badami) ತಾಲೂಕಿನ ನೀರಬೂದಿಹಾಳದಲ್ಲಿ ಹುಟ್ಟಿದ ಈತ ತನ್ನನ್ನು ತಾನು ದಾರಿ ತಪ್ಪಿದ ಮಗ ಎಂದು ಕರೆದುಕೊಳ್ಳುತ್ತಾನೆ.
ಬರೆದದ್ದು ನಾಲ್ಕಾರು ಸಾಲು
ಬೊಗಳೆಯದೇ ಮಿಗಿಲಾದ ಪಾಲು
ವಂದಿ ಮಾಗಧರ ಸಲಹಿ
ಕಂತೆ ಕಂತೆಯ ಬರೆಸಿ,
ಗುಂಪು ಗುಂಪನು ಕಟ್ಟಿ
ಗಾಂಪರ ಗುಂಪಿಗೆ ಯಜಮಾನನೆನಸಿ
ಹೊತ್ತಿಗೆಯ ಹೊರೆ ಹೊತ್ತು ನಡೆದವನನ್ನು
ಕವಿಯೆಂದು ಕರೆದಾರು ಹೇಗೆ ನನ್ನ. . .
ಎಂದು ನಮ್ಮನ್ನು ಪ್ರಶ್ನಿಸುತ್ತಾನೆ. ಹೀಗಾಗಿ ಕವಿತೆಯ ಮುಂದೆ ಮೋಣಕಾಲೂರಿ ಕುಳಿತ ಇವನನ್ನು ಕುರಿತು ನಾನು ಹೇಳಿದ್ದು ಇಷ್ಟೆ. ನನ್ನ ಈ ಹೇಳಿಕೆ ಆತನ ತಪ್ಪಿತಸ್ಥನ ಅಫಿಡೆವಿಟ್ಟಿನ ಬೆನ್ನುಡಿಯಾಗಿದ್ದರೆ ಅದೂ ಅಪರಾಧವೆಂದುಕೊಳ್ಳಬೇಕೆ?
“ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ, ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಹೀಗೆ ಕೌದಿಯಂತೆ ಒಂದೊಮ್ಮೆ ಕವಿತೆಯಾಗಿ ಒಡಮೂಡುತ್ತದೆ. ಗೆಳೆಯ ಯಾಕೊಳ್ಳಿಯವರ ‘ತಪ್ಪಿತಸ್ಥನ ಅಫಿಡೆವಿಟ್ಟು’ವಿಗೂ ಇದು ಅನ್ವಯವಾಗುವ ಆಲೋಚನೆ.  ಮೂವತ್ನಾಲ್ಕು  ಕವಿತೆಗಳ  ಈ  ಸಂಕಲನ  ನೆನಪುಗಳೊಂದಿಗಿನ ಮುಖಾಮುಖಿ, ಧಾವಂತದಲ್ಲಿ ‘ಸಿಟಿ  ಬಸ್ಸಿಗೆ  ಓಡಿ ಹಿಡಿದಂತಲ್ಲ ಜೀವನ’, ಬಿಸಿಲು ಮಳೆಗಳಲ್ಲಿ, ಹೊಲದ ಬದುವಿನಲ್ಲಿ  ತಾಯಂದಿರ ಕೈ ಕುಡುಗೋಲುಗಳಲ್ಲಿ, ರೈತನ ನೇಗಿಲು-ಗುದ್ದಲಿಗಳಲ್ಲಿ, ಕಾರ್ಮುಕರ ಯಂತ್ರಗಳಲ್ಲಿ, ಮಗ್ನನಾದ ಭಗವಂತನನ್ನು ಗಮನಿಸುತ್ತಲೇ ಮುಂದಣ ಅನಂತತೆಗೆ ತೆರೆದುಕೊಳ್ಳುತ್ತಾ ಅನಿಕೇತನದತ್ತ ಹೊರಟಿರುವುದೇ ಈ ಹಿಂದಿನ ಸಾರ್ಥಕತೆ.”
Ragam, Lecturing on Tappitasthan Aphidevittu
        ನವೆಂಬರ್ 18 ರಂದು ಸವದತ್ತಿ(Saundatti)ಯಲ್ಲಿ ಈ ತಪ್ಪಿತಸ್ಥನ ಅಫಿಡೆವಿಟ್ಟನ್ನು ನಾನು ಸಾರ್ವಜನಿಕರೆದುರು ಅನಾವರಣಗೊಳಿಸಿದ್ದೇನೆ. ಸವದತ್ತಿಗೂ ನನಗೂ ನನ್ನ ಗಾಂಧಿ(Gandhi)ಯೊಂದಿಗೆ (‘ಗಾಂಧಿ:ಅಂತಿಮ ದಿನಗಳು’, ರಂಗ ಆರಾಧನಾ ತಂಡ, ಗೆಳೆಯ ಝಕೀರ್(Zakir)) ಶುರುವಾದ ಸಂಬಂಧ ಹೀಗೆ ಮತ್ತೆ ಮತ್ತೆ ನವೀಕರಣಗೊಳ್ಳುತ್ತಿದೆ. 2012 ಡಿಸೆಂಬರ್‍ದಲ್ಲಿ ಪ್ರಾರಂಭವಾದ ಇಲ್ಲಿಯ ನಮ್ಮ ಪ್ರವಾಸ 2013 ರಲ್ಲಿ ಮತ್ತೆ ಇಲ್ಲಿಯೇ ಬಂದು ನಿಲ್ಲುವುದರ ಮೂಲಕ ಭೂಮಿ ಗೋಲಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ.

Thursday, December 26, 2013

‘ಇರುವಷ್ಟು ಕಾಲ’ದಲ್ಲಿ ಕವಿಗಳೊಂದಿಗೆ

Eruvashtu Kaal Cover Page
       ಕರ್ನಾಟಕ ಸ್ವಾಭಿಮಾನಿ ವೇದಿಕೆ ಮತ್ತು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ ಬೆಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02 ಡಿಸೆಂಬರ 2013 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ನನ್ನ ಮಹತ್ವದ ಕೃತಿ ‘ಇರುವಷ್ಟು ಕಾಲ, ಇರುವಷ್ಟೇ ಕಾಲ. . .’ ಕವನ ಸಂಕಲನವನ್ನು ಡಾ. ಸಾ.ಸಿ.ಮರುಳಯ್ಯು(Dr.S.C.Marulayya)ನವರು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರೂಪದ ಸೂಫಿ ಗೆಳೆಯ ಶ್ರೀ ರಂಜಾನ್ ದರ್ಗಾ(Ramjan Darga) ಆತ್ಮದ ನಿವೇದನೆಗೆ ನಮಗಿರುವ ಏಕೈಕ ಮಾಧ್ಯಮ ಕಾವ್ಯ ಎಂದದ್ದು ಎಷ್ಟೊಂದು ಸೂಕ್ತವಾಗಿತ್ತು. ಗುರು ಹಾಗೂ ಈ ಕಾರ್ಯಕ್ರಮದ ರೂವಾರಿ ಚಂಪಾ(Champa) ಮತ್ತೆ ಕಾಲೇಜಿನ ಯುವಕರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಿಂತು ನಾಲ್ಕು ಗಂಟೆಗಳವರೆಗೆ ಈ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಯನ್ನು ನೀವು ಗಮನಿಸಬೇಕಿತ್ತು. ನಮ್ಮೊಂದಿಗಿದ್ದ ರಾಜಕಾರಣಿ, ಕವಿ ಶ್ರೀ ಕೆ.ಎಚ್.ಶ್ರೀನಿವಾಸ(K.H.Shinivas), ಶ್ರೀಮತಿ ಉಷಾ.ಪಿ.ರೈ(Usha.P.Rai), ಮನೋಹರಿ ಪಾರ್ಥಸಾರಥಿ, ಶ್ರೀ ಪುಟ್ಟೇಗೌಡ, ನ್ಯಾಯಮೂರ್ತಿ ಮಹಿಪಾಲ ದೇಸಾಯಿ(Mahipal Desai)(ಖಲೀಲ್ ಜಿಬ್ರಾನ್:ಪ್ರವಾದಿ), ಡಾ. ಕೊ. ಶ್ರೀವಸಂತಕುಮಾರ(Dr.K.Shrivasantakumar)(ಜೈನ ರಾಮಾಯಣ ಭಾಗ-2) ಮತ್ತು ಚಂಪಾ(ಚಂಪಾಲಹರಿ) ವೇದಿಕೆ ಮೇಲಿರುವುದರೊಂದಿಗೆ, ನನ್ನಂಥ ಎಳೆಯ ಗೆಳೆಯನೊಂದಿಗೆ ತಮ್ಮ ಕೃತಿಗಳನ್ನೂ ಬಿಡುಗಡೆಗೊಳಿಸಿ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಡಾ. ಬಾನಂದೂರು ಕೆಂಪಯ್ಯ(Dr.Bananduru Kempayya) ತಮ್ಮ ಕಂಚಿನ ಕಂಠದಿಂದ ಜನಪದ ಗೀತೆಯೊಂದನ್ನು ಹಾಡಿ ರಂಜಿಸಿದ್ದನ್ನು ಮರೆಯುವುದು ಸಾದ್ಯವಿಲ್ಲ. ಇದೇ ಸಂದರ್ಭದಲ್ಲಿ ಜರುಗಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ 60 ಜನ ಕವಿಗಳು ಇದರಲ್ಲಿ ಪಾಲ್ಗೊಂಡಿದ್ದು 32 ಜನ ಕವಯತ್ರಿಯರೂ ಇದರಲ್ಲಿ ಪಾಲ್ಗೊಂಡಿದ್ದು ಲಿಂಗ ಸಮಾನತೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು ಎನ್ನಬಹುದೇ.(?)
Book Releasing ceremany of Ragam

        ಹೆಸರಿಸಲೇಬೇಕಾದ ಕೆಲವು ಹಿರಿಯರು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಪಾಲ್ಗೊಂಡಿದ್ದಾರೆ. ಉದಾಹರಣೆಗೆ ಶ್ರೀ ಜರಗನಹಳ್ಳಿ ಶಿವಶಂಕರ(Jaraganahalli Shivashankar), ಡಾ. ಜಿ.ಎಚ್.ಹನ್ನೆರಡುಮಠ, ಶ್ರೀ ವಡ್ಡಗೆರೆ ನಾಗರಾಜಯ್ಯ, ಶ್ರೀದೇವಿ ಕಳಸದ, ಸುಜಾತಾ ವಿಶ್ವನಾಥ(Sujata Vishwanath), ಡಾ. ವರದಾ ಶ್ರೀನಿವಾಸ, ಶ್ರೀಮತಿ ಸಕೀನಾ ಬೇಗಂ ಇನ್ನೂ ಅನೇಕರು.
Ragam with Ramjan Darga
    ‘ಇರುವಷ್ಟು ಕಾಲ! ಇರುವಷ್ಟೇ ಕಾಲ. . .’ ನನ್ನ ಅತ್ಯಂತ ಪ್ರೀತಿಯ ಆರನೆಯ ಕಾವ್ಯ ಸಂಕಲನ. ಕಣ್ವ ಪ್ರಕಾಶನದ ಗೆಳೆಯ ಎಂ.ಆರ್.ಗಿರಿರಾಜು(M.R.Giriraju) ಈ ಸಂಕಲನವನ್ನು ಕಾವ್ಯಕ್ಕೆ ದುಬಾರಿಯಾದ ಈ ಕಾಲಘಟ್ಟದಲ್ಲಿ ಅತ್ಯಂತ ಮುತುವರ್ಜಿಯಿಂದ ಪ್ರಕಟಿಸಿದ್ದಾರೆ. ಸನ್ಮಿತ್ರ ಶ್ರೀ ಬಿ.ಎಸ್.ದೇಸಾಯಿ(B.S.Desai) ಸಂಕಲನದ ತುಂಬ ತಮ್ಮ ರೇಖಾ ಚಿತ್ರಗಳನ್ನು ಎಳೆದು ಜೀವ ತುಂಬಿದ್ದಾರೆ. ಸಂಕಲನ ಪ್ರಕಟವಾಗುವ ಸಂದರ್ಭದ ಆಸು-ಪಾಸಿನಲ್ಲಿಯೇ ಸಿಹಿಗಾಳಿಯ ಸಂಪಾದಕ ಮಿತ್ರ ರಾಜು ಮಳವಳ್ಳಿ(Raju Malavalli) ಮುಂಚಿತವಾಗಿಯೇ ಒಂದು ಲೇಖನವನ್ನು ಪ್ರಕಟಿಸಿ ಪುಸ್ತಕದ ಪ್ರಮೋಷನ್‍ಗೆ ಸಹಕರಿಸಿದ್ದಾರೆ. ಹೀಗಾಗಿ ನನ್ನ ಪುಸ್ತಕವನ್ನು ಕುರಿತು ನಾನು ಈ ದಿನ ಬಹಳಷ್ಟು ಏನಾದರು ಹೇಳಬೇಕಾದುದಿದೆ ಅಂದುಕೊಳ್ಳಲೇ ಇಲ್ಲ. ನನ್ನ ನಂಬಿಕೆ ಇಷ್ಟೆ-
      ‘ಕವಿತೆಯೊಂದಿಗಿನ ನನ್ನ ಈ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೆ. ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತ ಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಆ ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧ ಪಾಪಿ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿಬರುವ ನಾವು ಯಾರಿಗೆ ಪ್ರೀಯರೋ ಆ ದೇವರಿಗೇ ಗೊತ್ತು. ನಾವಿಬ್ಬರೂ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.’ ಎಂದುಕೊಂಡಿದ್ದೇನೆ.
Ragam with Bananduru Kempayya


        ನನ್ನೊಳಗಿನ ಧ್ಯಾನ, ಮೌನ ಮತ್ತು ಮುಕ್ತಿಗಳ ಮೊದಲ ಕೂಡಲಸಂಗಮ ಜರುಗಿದ್ದು ಈ ಸಂಕಲನದಲ್ಲಿ. ಪದಗಳ ಮೋಹದಿಂದ ಹೊರ ಬಂದು ಅರ್ಥದ ಹಾಗೂ ಅದರ ಆಚೆಯ ಅನಂತ ಲೋಕದಲ್ಲಿ ಕ್ರಮಿಸಿದ ಒಂದಿಷ್ಟು ಅನುಭವ ನನಗೆ ಈ ಬರಹದ ಮೂಲಕ ಒದಗಿದೆ. ಪುಸ್ತಕ ನಿಮ್ಮ ಮೆಚ್ಚಿನ ಅಂಗಡಿಗಳಲ್ಲಿ ಲಭ್ಯವಿದೆ.

Friday, November 8, 2013

ಮಲ್ಲಯ್ಯಸ್ವಾಮಿ: ಒಳಗೆ ದೀಪವನಿಟ್ಟು ಹೊರಗೆ ಹೋದವರು


“ಸ್ನೇಹ ದೂರದ ಮಾತು
ಸಾವಿನ ಟಿಪ್ಪಣೆಯೂ ಬರೆಯಲಿಲ್ಲ”
      ‘ನನಗೆ ದೀಪ ಅರುವ ಭಯವಿಲ್ಲ’ ಎನ್ನುವ ನನ್ನ ಕವಿತೆಯ ಸಾಲುಗಳ ಮೂಲಕ ಮೊನ್ನೆಯಷ್ಟೇ ಸಂಯುಕ್ತ ಕರ್ನಾಟಕದ ಮುಖಾಂತರ ಜನತೆಯೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ನನಗೆ ನಿನ್ನೆ ಅತೀವ ಆಘಾತದ ಕ್ಷಣಗಳೇ ಕಾದಿದ್ದವು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಡಿ.ರಾಜೇಂದ್ರಬಾಬು(D.Rajendrababu) ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದು, ಬಣ್ಣದ ಲೋಕಕ್ಕೆ ಈಗಷ್ಟೇ ಅಂಬೆಗಾಲಿಕ್ಕುತ್ತ ಅದರ ಬೆರಗಿಗೆ ಬಲಿಯಾಗಿ ಹೋದ, ಜಂಗಲ್‍ಜಾಕಿ(Jangal Jaaki) ಎಂದು ಹೆಸರು ಮಾಡಿದ್ದ ರಾಜೇಶ್(Rajesh) ಎನ್ನುವ ಹುಡುಗ ಮಾನಸಿಕ ಅಸ್ವಸ್ಥತೆಗೊಳಗಾಗಿ, ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ನನ್ನ ಸಾಹಿತ್ಯದ, ಅಸ್ತಿತ್ವದ, ನೆನಪುಗಳ, ಕನಸುಗಳ, ಅನುಭವಗಳ ಭಾಗವೇ ಆಗಿದ್ದ ನನ್ನ ದೊಡ್ಡಪ್ಪ, ಪಾರಿಜಾತ ಕಲಾವಿದ ಶ್ರೀ ಮಲ್ಲಯ್ಯಸ್ವಾಮಿ ಮಠಪತಿ (ಅಥಣಿ)ಯವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದು. ಮೂವರು ಒಂದಲ್ಲಾ ಒಂದು ರೀತಿಯಲ್ಲಿ ಕಲಾದೇವಿಯ ಮಕ್ಕಳೇ, ಈ ಬೆಳಕಿನ ಹಬ್ಬ ಅದ್ಯಾಕೆ ಇವರ ಬಾಳಿನಲ್ಲಿ ಶಾಶ್ವತ ಕತ್ತಲೆಯನ್ನು ಹೊತ್ತು ತಂದಿತೋ ಅರ್ಥವಾಗುತ್ತಿಲ್ಲ.
      ಬಯಲುಸೀಮೆಯ ಸೊಗಡು, ಕೃಷ್ಣಾ(Krishna) ತೀರದ ಜಾಡು, ಎರಡನ್ನೂ ಮೇಳೈಸಿಕೊಂಡು ಹುಟ್ಟಿದ ಅಭಿಜಾತ ಕಲೆಗಳಾದ ದೊಟ್ಟಾಟ, ಬಯಲಾಟಗಳು 50 ರ ದಶಕದಿಂದ 90 ರ ದಶಕದವರೆಗೂ ಜನರ ಮನರಂಜನೆಯ ಮಾಧ್ಯಮಗಳಷ್ಟೇ ಅಲ್ಲದೆ ಪರಂಪರೆಯ ಕೊಂಡಿಗಳಂತಿದ್ದವು. ಅವುಗಳಲ್ಲಿ ಶ್ರೀ ಕೃಷ್ಣ ಪಾರಿಜಾತ(Parijata)ವೂ ಒಂದು. ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಪ್ರಾರಂಭವಾಗುವ ಆಟಗಳು ಪ್ರಚಲಿತ ತಲ್ಲಣ, ತಾಕಲಾಟಗಳನ್ನು ಅದರೊಂದಿಗೆ ಮೈಗೂಡಿಸಿಕೊಂಡು ಜನರಲ್ಲಿ ಅರಿವಿನೊಂದಿಗೆ ಸಧಭಿರುಚಿಯನ್ನು ಮೂಡಿಸುತ್ತಿದ್ದ ಕಾಲವದು. ನನ್ನ ದೊಡ್ಡಪ್ಪನು ಈ ಕಲೆಯ ಬಲೆಯೊಳಗೆ ತನ್ನ ಬದುಕನ್ನು ಕಟ್ಟಿಕೊಂಡ ಒಬ್ಬ ಕಲಾವಿದ. ‘ಶ್ರೀ ಕೃಷ್ಣ ಪರಮಾತ್ಮನಿಗೆ ಇದು ನನ್ನ ಅಳಿಲು ಸೇವೆ’ ಎನ್ನುವ ಧ್ಯೇಯದೊಂದಿಗೆ ಆತ ‘ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ(Belgaum) ಜಿಲ್ಲೆ ಅಥಣಿ(Athani)ಯಲ್ಲಿ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ. ವರ್ಷಕ್ಕೆ 150 ಪ್ರದರ್ಶನಗಳಂತೆ ನಿರಂತರ 55 ವರ್ಷ ಕರ್ನಾಟಕ(Karnatak), ಮಹಾರಾಷ್ಟ್ರ(Maharastra), ಗೋವಾ(Goa) ಸೇರಿದಂತೆ ಇನ್ನೂ ಅನೇಕ ಕಡೆ ಆತನ ‘ಶ್ರೀ ಕೃಷ್ಣ ಪಾರಿಜಾತ ಕಂಪನಿ’ ಪ್ರದರ್ಶಿಸಿದ್ದು ಸರಿಸುಮಾರು 8000 ಕ್ಕೂ ಹೆಚ್ಚು ಪ್ರದರ್ಶನಗಳನ್ನು.
 ಅವರ ಹೆಸರು ಮಲ್ಲಯ್ಯಸ್ವಾಮಿ ಮಠಪತಿ(Mallayyaswami Mathapati), ಕರ್ನಾಟಕದ ಜನೆತೆಗೆ ‘ಶ್ರೀ ಕೃಷ್ಣ ಪಾರಿಜಾತ’ದ ಮೂಲಕ ಮಲ್ಲಯ್ಯಸ್ವಾಮಿ ಅಥಣಿ ಎಂದೇ ಹೆಸರುವಾಸಿಯಾಗಿದ್ದವರು. ಅನ್ನ, ಅಂಬಲಿ, ಹೆಸರು ನೀಡಿದ ಸ್ಥಳವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಅವರು ಮಠಪತಿ ಎನ್ನುವ ಅಡ್ಡಹೆಸರಿನ ಬದಲಾಗಿ ಅಥಣಿಯನ್ನೇ ತಮ್ಮ ಅಡ್ಡ ಹೆಸರನ್ನಾಗಿ ಮಾಡಿಕೊಂಡಿದ್ದರು. ತಮ್ಮನ್ನು ಬೆಳೆಸಿದ ತಾಯ್ನೆಲದ  ಬಗೆಗೆ ಅವರಿಗಿರುವ ಕೃತಜ್ಞತೆ ಅಂಥದ್ದು. ಬೆಳಗಾವಿ ಜಿಲ್ಲೆಯ ಮೈಗುರು ಎಂಬಲ್ಲಿ 1939 ರಲ್ಲಿ ಜನಿಸಿದ ಅವರದು ಮೂಲತಃ ಗೌಡಿಕೆ ಮತ್ತು ಕುಸ್ತಿಪಟುಗಳ ಮನೆತನ.  ಯಾವುದೇ  ಆರ್ಥಿಕ ತೊಂದರೆಗಳು ಇಲ್ಲದ ಮನೆತನದಿಂದ ಬಂದ ಅವರಿಗೆ ಕಲಾಸೇವೆಯ ಮೂಲಕವೇ ಹೊಟ್ಟೆ ಹೊರೆದುಕೊಳ್ಳಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಆದರೆ ಕಲೆ ಅವರ ಆತ್ಮದ ಹಸಿವಾಗಿತ್ತು.  ತಂದೆ ಗುರುಪಾದಯ್ಯ ಮತ್ತು ತಾಯಿ ಕಾಶೀಬಾಯಿಯವರ 8 ಜನ ಮಕ್ಕಳಲ್ಲಿ 5 ನೇ ಮಗನಾಗಿ ಜನಿಸಿದ ಅವರಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲಾಗಲಿಲ್ಲ. ಅಪ್ಪಟ ನಿರಕ್ಷರಿಗಳು. ಆದರೆ ಕಲಾಸರಸ್ವತಿಯನ್ನು ತಮ್ಮ ಹುಟ್ಟುಪ್ರತಿಭೆ, ಕಠಿಣಶ್ರಮ ಮತ್ತು ಅನಂತ ಪ್ರಯತ್ನಗಳಿಂದ ಒಲಿಸಿಕೊಂಡವರು.  ತಾನು ಓದು-ಬರಹ ಬಲ್ಲವನಲ್ಲವಾದರೂ ಅಕ್ಷರ ಕಲಿತು, ಶಿಕ್ಷಕ ವೃತ್ತಿಯಲ್ಲಿ ಹೆಸರು ಮಾಡಿದ್ದ ತಮ್ಮ ಸಹೋದರ ಗಂಗಯ್ಯ ಗುರುಪಾದಯ್ಯ ಮಠಪತಿಯವರಿಂದ ಶ್ರೀ ಕೃಷ್ಣ ಪಾರಿಜಾತ ಹಾಗೂ ಇನ್ನು ಹಲವಾರು ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ಓದಿಸಿಕೊಂಡು, ಬರೀ ಮನನ ಶಕ್ತಿಯಿಂದಲೇ ನಿರಂತರ 8 ರಿಂದ 10 ಗಂಟೆಗಳ ಕಾಲ ಪ್ರದರ್ಶನ ನೀಡುವ ತಾಕತ್ತನ್ನು ಬೆಳೆಸಿಕೊಂಡಿದ್ದರು.
     ಹುಟ್ಟಿದ್ದು ಮೈಗುರು, ಕಂಪನಿ ಕಟ್ಟಿದ್ದು ಅಥಣಿ ಮತ್ತು ನೆಲೆಸಿದ್ದು ಜಮಖಂಡಿಯಲ್ಲಾದರೂ ಅವರ ಸಂವೇದನೆಗಳಿಗೆ ಸಾಕ್ಷಿಯಾಗಿದ್ದು ಕೋಹಳ್ಳಿ, ಅಡಹಳ್ಳಿ, ಅಡಳಹಟ್ಟಿ ಎನ್ನುವ ಅಷ್ಟೆನು ಜನರಿಗೆ ಚಿರಪರಿಚಿತವಲ್ಲದ ಚಿಕ್ಕ ಚಿಕ್ಕ ಊರುಗಳು. ಆದರೆ ಆ ನೆಲದ ಕಂಪು ನನ್ನ ದೊಡ್ಡಪ್ಪನ ಬಾಲ್ಯದುದ್ದಕ್ಕೂ ಮೈಹಾಸಿದ್ದವು ಮತ್ತು ಮುಂಬರುವ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿ ಕೊಟ್ಟಿದ್ದವು. 
       ಹೆಸರಾಂತ ಅಭಿಜಾತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳ ಗರಡಿಯಲ್ಲಿ ಪಳಗಿದ ಅವರು ಕೆಲಕಾಲದ ನಂತರ ತಮ್ಮದೇ ಸ್ವಂತ `ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕಟ್ಟಿದರು. ಬ್ರಾಹ್ಮಣ, ದಲಿತ, ಕುರುಬ, ಲಿಂಗಾಯತ, ಮುಸ್ಲಿಂ ಎನ್ನುವ ಯಾವುದೇ ಜಾತಿ-ಮತಗಳ ಬೇಧವಿಲ್ಲದೆ ಬರೀ ಕಲೆಯನ್ನು ಉಸಿರಾಗಿಸಿಕೊಂಡವರ ದೊಡ್ಡ ಬಳಗವೇ ಅವರೊಂದಿಗಿತ್ತು.

         ಎಡಬಿಡದೆ ಕಲಾದೇವಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ ಎಲ್ಲೆಲ್ಲೂ ಅಭಿಮಾನಿ ಬಳಗ ನಿರ್ಮಾಣವಾಗಿತ್ತು. ಕಾಲಕ್ರಮೇಣ ಬಯಲಾಟಗಳಷ್ಟೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಅವರ 'ಶ್ರೀ ಕೃಷ್ಣ ಪಾರಿಜಾತ’ ಹೆಸರುವಾಸಿಯಾಗಿತ್ತು. ಅಷ್ಟೇ ಅಲ್ಲದೆ ನಾಡಿನ ಹೆಮ್ಮೆಯ ಉತ್ಸವಗಳಾದ 'ಮೈಸೂರು ದಸರಾ’, 'ಹಂಪಿ ಉತ್ಸವ’, 'ಚಾಲುಕ್ಯ ಉತ್ಸವ’, 'ನವರಸಪುರ ಉತ್ಸವ’ ಹಾಗೂ ಇನ್ನು ಹಲವಾರು ಕಡೆ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು. 2004 ರಲ್ಲಿ ಶ್ರೀಮತಿ ರಮಾದೇವಿ(Ramadevi) ರಾಜ್ಯಪಾಲರಾಗಿ, ಎಸ್.ಎಮ್ ಕೃಷ್ಣ(S.M.Krishna) ಅವರು ಮುಖ್ಯಮಂತ್ರಿಯಾಗಿದ್ದ  ಆವಧಿಯಲ್ಲಿ ಅವರಿಗೆ ಕನ್ನಡ ನಾಡಿನ ಅತ್ಯುನ್ನತ ಪ್ರಶಸ್ತಿಯಾದ `ರಾಜ್ಯೋತ್ಸವ ಪ್ರಶಸ್ತಿ’ವೂ ಒಲಿದುಬಂದಿತ್ತು. ತಮ್ಮ ಹೆಸರು ರುಜು ಮಾಡುವುದನ್ನು ಬಿಟ್ಟು ಮತ್ತೇನನ್ನು ಬರೆಯಲು ಆಗದ ಅನಕ್ಷರಸ್ಥ ವ್ಯಕ್ತಿಯೊಬ್ಬರು ಬರೀ ತವi್ಮ ಕಲಾ ನೈಪುಣ್ಯದಿಂದ ಎಲ್ಲೆಲ್ಲೂ ಮನೆಮಾತಾಗಿದ್ದರು. 
          ತಮಗೆ ದೊರೆತ ಗೌರವ, ಮನ್ನಣೆಗಳನ್ನು ತಲೆಗೆರಿಸಿಕೊಳ್ಳದೆ ವಿನಯಶೀಲರಾಗಿ ಬದುಕಿದ್ದ ಅವರು ನಾಡಿನ ಪ್ರಮುಖ ಅಕಾಡೆಮಿಗಳಲ್ಲೊಂದಾದ ಲಲಿತಕಲಾ ಆಕೆಡೆಮಿಯ ಸದಸ್ಯರಾಗಿದ್ದರು. ತಮ್ಮ ಅವಧಿಯಲ್ಲಿ ಹಲವಾರು ವೃತ್ತಿನಿವೃತ್ತ ಕಲಾವಿದರಿಗೆ ಮಾಶಾಸನಗಳನ್ನು ಕೊಡಿಸಿದರು, ಪ್ರತಿಭಾನ್ವಿತರನ್ನು ಪ್ರಚೋದಿಸಿ ಬೆಳೆಸಿದರು. ಅವರಿಗಾಗಿ ಹಲವಾರು ವೇದಿಕೆ, ಅವಕಾಶಗಳನ್ನು ಕಲ್ಪಿಸಿಕೊಟ್ಟರು.
        ಆಧುನಿಕತೆಯ ಬಿರುಗಾಳಿಗೆ ಸಿಕ್ಕು ನಶಿಸಿಹೋದ ಕಲೆಗಳು ಲೆಕ್ಕವಿಲ್ಲದಷ್ಟು. ದೀನೆ-ದೀನೆ ಜನರ ಆಸಕ್ತಿಗಳು, ಆಲೋಚನೆಗಳು, ಮನಸ್ಥಿತಿಗಳು ಬದಲಾದವು, ದಿನಗಟ್ಟಲೇ ಆಟ ನೋಡುವಷ್ಟು ವ್ಯವಧಾನವಿಲ್ಲದ ಸಂದರ್ಭಗಳು ಸೃಷ್ಟಿಯಾದವು. ಶ್ರೀ ಕೃಷ್ಣ ಪಾರಿಜಾತವನ್ಯಾಕೆ ನಾವು ಇಡೀ ರಾತ್ರಿಯಾಟದ ಬದಲಾಗಿ ಬರೀ ಮೂರುವರೇ ಗಂಟೆಗಳಷ್ಟು ಕಡಿಮೆ ಅವಧಿಗಿಳಿಸಿ ಪ್ರದರ್ಶಿಸಬಾರದು ಎಂದು ಅವರ ಕಂಪನಿಯ ಸದಸ್ಯರೊಬ್ಬರು ಕೇಳಿದಕ್ಕೆ ಅವರು ಹೇಳಿದ್ದರಂತೆ, “ನಾನು ತೀರಿಹೋಗುವವರೆಗೂ ಅಂಥ ಬದಲಾವಣೆಗೆ ನಾನು ಸಮ್ಮತಿಸುವುದಿಲ್ಲ” ಎಂದು. ಕಲೆ ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವ ಮಾಧ್ಯಮವಾಗಿರಲಿಲ್ಲ ಬದಲಾಗಿ ಅವರ ಆರಾಧ್ಯ ದೈವವಾಗಿತ್ತು. 
        ತಮ್ಮ ಇಡೀ ಕುಟುಂಬವನ್ನೇ ಅವಾರು ಕಂಪನಿಯ ನಿರಂತರ ಏಳಿಗೆಗಾಗಿ ತೊಡಗಿಸಿದ್ದರು. ಹೆಂಡತಿ, ಮಕ್ಕಳು ಯಾರೂ ಈ ಚೌಕಟ್ಟಿನಿಂದ ಹೊರತಾಗಿರಲಿಲ್ಲ, ಅಷ್ಟೇ ಅಲ್ಲದೇ ಸ್ವತಃ ಅವರಿಗೆ ಪಾರಿಜಾತ ಕಲಿಸಿದ ಹೆಸರಾಂತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳು ಕೂಡ ತಮ್ಮ ಶಿಷ್ಯನ ಕಂಪನಿಯಲ್ಲಿ ಕೆಲಸ ಮಾಡಿದರು. ಆ ಕಾಲದಲ್ಲೇ ನರ್ಸ್ ಆಗಿದ್ದ ಕಮಲಾಕ್ಷಿ ಎನ್ನುವ ದಲಿತ ಸಮುದಾಯದ ಮಹಿಳೆ ಮತ್ತು ಹೆಸರಾಂತ ಕಲಾವಿದೆಯೊಬ್ಬರು ತಮ್ಮ ಸರಕಾರಿ ವೃತ್ತಿಯನ್ನು ಧಿಕ್ಕರಿಸಿ ಪಾರಿಜಾತಕ್ಕೆ ಮನಸೋತು ತಮ್ಮ ಕೊನೆಯ ಉಸಿರಿರುವವರೆಗೂ ಆ ಕಂಪನಿಯಲ್ಲೇ ದುಡಿದರು. ಮುಸ್ಲಿಂ ಕಲಾವಿದರೊಬ್ಬರು ಸತ್ಯಭಾಮೆಯ ಪಾತ್ರದ ಮೂಲಕವೇ ಮನೆಮಾತಾಗಿದ್ದರು. ಅವರ ಹೆಂಡತಿ ಮಹಾದೇವಿಯವರಾಗಿರಬಹುದು, ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಎರಡನೆಯ ಮಗ ಮುರುಗೇಶ ಮಠಪತಿ ಆಗಿರಬಹುದು, ಉಪನ್ಯಾಸಕನಾಗಿದ್ದುಕೊಂಡು ತಂದೆಯ ಆಶೋತ್ತರಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದ ಅವರ ಮೊದಲ ಮಗ ಕೃಷ್ಣಕುಮಾರ ಮಠಪತಿ ಇರಬಹುದು, ಹೀಗೆ ಅವರ ಬಳಗ ಕಲಾಸೇವೆಯನ್ನೇ ಬದುಕಿನ ಧ್ಯೆಯವಾಗಿಸಿಕೊಂಡು ಪ್ರಚಾರದ ವ್ಯಾಮೋಹಕ್ಕೆ ಬೀಳದೆ ತಮ್ಮ ಬದುಕನ್ನು ಸಾರ್ಥಕವಾಗಿಸಿಕೊಂಡವರು.

       ಅವರೊಂದಿಗಿನ ನನ್ನ ಅನುಭವಗಳು ಕವಿತೆ, ಕಥನ, ಅಂಕಣಗಳ ರೂಪದಲ್ಲಿ ಹಲವಾರು ಆಯಾಮಗಳಲ್ಲಿ ಪ್ರಕಟಗೊಂಡಿವೆ. ‘ಅಕ್ಕ’ ಎನ್ನುವ ನನ್ನ ಕವಿತೆ ಇರಬಹುದು, ಇತ್ತಿಚಿಗೆ ‘ಸಿಹಿಗಾಳಿ’ಯಲ್ಲಿ ಪ್ರಕಟಗೊಂಡ `ಪಾರಿಜಾತವೆಂದರೆ ಅವಳೇ’ ಎನ್ನುವ ನನ್ನ ಅಂಕಣವಿರಬಹುದು, ನನ್ನ ಬರಹಗಳಲ್ಲಿ ಆಗಾಗ ಬಂದು ಮಿಂಚಿ ಹೋಗುವ ಹಲವಾರು ಪಾತ್ರಗಳಿರಬಹುದು, ಪ್ರಕಟನೆಯ ಹಂತದಲ್ಲಿರುವ ನನ್ನ ‘ಈ ಸಾಕಿಯರ ಕೈ ಸೋಕಿ’ ಎನ್ನುವ 15 ಮಹಿಳೆಯರ ತುಡಿತದ ಬದುಕಿರಬಹುದು, ಇದೆಲ್ಲವೂ ನನ್ನ ದೊಡ್ದಪ್ಪ ಎನ್ನುವ ಜಂಗಮನ ಜೋಳಿಗೆಯಿಂದಲೇ ನಾನು ಆಯ್ದುಕೊಂಡ ಮುತ್ತುಗಳು. ಅವರೇ ಈ ಎಲ್ಲ ನಿವೇದನೆಗಳ ಮೂಲ ಸೆಲೆ. ಜಗದ ಲೆಕ್ಕಾಚಾರಗಳನ್ನು ಮುರಿದು ತನ್ನದೆ ಶೈಲಿ, ಗತ್ತು, ಗೈರತ್ತಿನಿಂದ ಬದುಕಿದ ನನ್ನ ದೊಡ್ದಪ್ಪ ಮೊಗೆದಷ್ಟು ಸಿಗುವ ಬತ್ತದ ಖಣಜ. ಹಾಡು, ಹೆಣ್ಣು, ಹೆಂಡ, ಕಲೆ ಎಲ್ಲವನ್ನು ಸಮನಾಗಿ  ಆರಾಧಿಸಿಕೊಂಡು ಬಂದ ಅವರಿಗೆ ಬೇಧ ಗೊತ್ತಿರಲಿಲ್ಲ. `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಬದುಕಿದ್ದ ಅವರಿಗೆ ಅವರೇ ಸಾಟಿ. ಮಲ್ಲಯ್ಯಸ್ವಾಮಿ ಮಠಪತಿ ಈಗುಳಿದಿದ್ದ `ಶ್ರೀ ಕೃಷ್ಣ ಪಾರಿಜಾತ’ ಪರಂಪರೆಯ ಕೊನೆಯ ಕೊಂಡಿ. ಈಗ ಅದೂ ಕಳಚಿ ಬಿದ್ದಿತು. ಅಭಿಜಾತ ನಾನಿನ್ನೂ ಅವರೊಂದಿಗೆ ಸಾಕಷ್ಟು ಮಾತನಾಡುವುದಿತ್ತು, ಕೇಳುವುದಿತ್ತು, ಹೇಳುವುದಿತ್ತು, ಆದರೆ ನನ್ನ ಎಣಿಕೆಗೆ ಸಿಗದಂತೆ ಆ ಪಾತ್ರ ನನ್ನಿಂದ ಧಿಡಿರನೇ ಕಣ್ಮರೆಯಾಗಿಬಿಟ್ಟಿದೆ. ಎಷ್ಟೋ ಅಮೂಲ್ಯ ಅನುಭವಗಳಿಂದ ನಾನು ವಂಚಿತನಾಗಿಬಿಟ್ಟೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಈಗ ನಾನು ನನ್ನದೇ ಸಾಲುಗಳನ್ನು ಮತ್ತೇ ನೆನಪಿಸಿಕೊಳ್ಳುವಂತಾಗಿದೆ-
“ಯಾರು ಹೂವಿನ ಹಾಗೆ ಸೋಕಿ ಹೊದವರು
ಎದೆಯ ಬಟ್ಟಲ ತುಂಬಾ ಒಲವನೆರೆದವರು
  ಒಳಗೆ ದೀಪವನಿಟ್ಟು ಹೊರಗೆ ಹೋದವರು”

Wednesday, October 30, 2013

ಮುಲ್ಲಾ-ಮಠಪತಿ ಯಾವೂರಿಗೆ?

ಬಹುತೇಕ ಪದವಿಯ ಮುನ್ನಾ ದಿನಗಳು, ಮನೆಯೊಳಗೇನೊ ಒಂದು ಸುಳ್ಳು ಹೇಳಿ, ಗೆಳೆಯ ಬಸೀರ್‍ನೊಂದಿಗೆ ಊರು ಬಿಟ್ಟು ಓಡಿಬಿಟ್ಟಿದ್ದೆ. ಆಗಷ್ಟೆ ಮಾವನ ಹೊಟೇಲಿನಲ್ಲಿ ಗಲ್ಲೆಯ ಮೇಲೆ ಕುಳಿತುಕೊಳ್ಳುತ್ತಿದ್ದ ಆತನ ಜೇಬಿನ ತುಂಬಾ ದುಡ್ಡಿತ್ತು, ನನ್ನ ತಲೆ ತುಂಬಾ ಕನಸುಗಳಿದ್ದವು. ಇಬ್ಬರೂ ಹೊರಟು ಬಂದದ್ದು ಎಲ್ಲಿಗೆ? ಧಾರವಾಡಕ್ಕೆ. ಅಲ್ಲಿಂದ ಶಿರಹಟ್ಟಿಗೆ. ಅಲ್ಲಿ ಯಾರಿದ್ದರು? ಬಂಧು ಮಿತ್ರರೇನಾದರೂ ಇದ್ದರೇ? ಅದೇನು ಹೆಣ್ಣು-ಹೆಂಡದ ಅದ್ಧೂರಿಯ ಊರೇ? ಅಲ್ಲೇನು ಜಾತ್ರೆ ನಡೆದಿತ್ತೋ? ಯಾವುದು ಇಲ್ಲ. ಸಾಮಾನ್ಯವಾಗಿ ಬಾಲಕರನ್ನೋ, ಯುವಕರನ್ನೋ ಆಕರ್ಷಿಸಬಹುದಾದ ಯಾವ ಚಟುವಟಿಕೆಗಳೂ ಅಲ್ಲಿ ನಡೆದಿರಲಿಲ್ಲ. ಆದಾಗ್ಯೂ ನಾನು ಮಠಪತಿ, ಆತ ಮುಲ್ಲಾ, ಎಲ್ಲೋ ಹೊರಟಿದ್ದೀರಿ? ಎಂದು ಯಾರಾದರೂ ಕೇಳಿದ್ದರೇ ಖಂಡಿತವಾಗಿಯೂ ನಮ್ಮ ಬಳಿ ಯಾವ ಉತ್ತರವೂ ಇರಲಿಲ್ಲ. ಒಟ್ಟಾರೆ ಹೊರಟೆವು. ಇತ್ತ ಮಸೀದಿಯೂ ಅಲ್ಲದ, ಅತ್ತ ಮಠವೂ ಅಲ್ಲದ ಶಿರಹಟ್ಟಿಯ ಫಕೀರೆಶ್ವರನ ಸನ್ನಿಧಾನದಲ್ಲಿ ಎರಡು ದಿನ ಕಳೆದೆವು. ಆನಂತರ ಎರಡು ದಿನ ಧಾರವಾಡದಲ್ಲಿ. ಆಮೇಲೆ ಮರಳಿ ಊರಿಗೆ. ಹಾಗೆ ಅಂದು ಅರ್ಥಹೀನವಾಗಿ ತಿರುಗಾಡಿದ್ದ ಎರಡೂ ಊರುಗಳು ಇಂದು ನನ್ನ ಬದುಕಿನ ಅರ್ಥದ, ಆರ್ಥಿಕತೆಯ ತಾಣಗಳಾಗಿವೆ. ಧಾರವಾಡ ನನ್ನ ತಂದೆ-ತಾಯಿ, ತಮ್ಮ ಮತ್ತು ಸಾಹಿತ್ಯವನ್ನು ಕಾಪಿಟ್ಟ ನೆಲವಾದರೆ ಶಿರಹಟ್ಟಿ ನಾನು ಮತ್ತೆ ಮತ್ತೆ ಭೇಟ್ಟಿಕೊಟ್ಟ ಸ್ಥಳವಾಗಿದೆ.

        ಧಾರವಾಡ ನನ್ನೂರೇ ಆಗಿ ಹೋಗಿದೆ. ಶಿರಹಟ್ಟಿ, ಶಿಶುನಾಳ ಮತ್ತು ಸಂಶಿಗಳು ನನ್ನ ಪ್ರೀತಿಯ ಸೂಫಿಗಳ ದರ್ಶನದ ನೆಲವಾಗಿದೆ. 2000ದ ಇಸ್ವಿಯಲ್ಲಿ ನಾನು ಗುಳೇದಗುಡ್ಡದಲ್ಲಿ ಅರೆಕಾಲಿಕ ಉಪನ್ಯಾಸಕನಾಗಿದ್ದಾಗ, ನನ್ನೊಂದಿಗೇ ಇದ್ದ ಗೆಳೆಯ ಮಹಾಂತೇಶ ಭಜಂತ್ರಿಯನ್ನು ಪೂರ್ಣಪ್ರಮಾಣದ ಉಪನ್ಯಾಸಕನಾಗಿ ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿಪೂರ್ವ ಕಾಲೇಜಿಗೆ ಉಪನ್ಯಾಸಕನಾಗಿ ನಾನು, ಹಿರಿಯ ಕವಿಮಿತ್ರ ಮಹಾದೇವ ಕಣವಿ ಹಾಗೂ ಶ್ರೀ ಆರ್.ಜಿ.ಕುಲಕರ್ಣಿ ಬಿಟ್ಟ ಬಂದ ನೆನಪು. 2003 ರಲ್ಲಿ ಮತ್ತೊಮ್ಮೆ ನನ್ನ ಸಂಸಾರಿಕ ಆರಂಭದ ದಿನಗಳಲ್ಲಿ ಇದೇ ಕಾಲೇಜಿಗೆ ಒಂದು ವಿಶೇಷ ಉಪನ್ಯಾಸ ನೀಡಲು ಹೋಗಿದ್ದ ನೆನಪು. ಈಗ ಸರಿಯಾಗಿ ಹತ್ತು ವರ್ಷಗಳ ನಂತರ ಮೂರನೆಯ ಬಾರಿ ಇಲ್ಲಿಗೆ ಹೋಗುವ ಸಂದರ್ಭ.
        ಊರು ಒಂದೇ ಆದರು ಸಂದರ್ಭಗಳು ಭಿನ್ನ ಭಿನ್ನ. ಬದುಕಿನ ನಲವತ್ತೆರಡನೆಯ ವರ್ಷದ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನವೇ (13/09/2013) ನಾನು ಮತ್ತೆ ಇದೇ ಕಾಲೇಜಿನ ಆವರಣದಲ್ಲಿ ಭಾಷಣ ಮಾಡಲು ನಿಂತುಕೊಂಡಿದ್ದೆ. ಉದ್ದೇಶ ಪೂರ್ವಕವಾಗಿ ಯತ್ನಿಸಿದರೂ ಸಾಧ್ಯವಾಗಲಾರದ ಸಂಯೋಜನೆ ಈ ಕಿರು ಕಾರ್ಯಕ್ರಮಕ್ಕೆ ಒದಗಿಬಂದಿತ್ತು. ಬಹುತೇಕ ಅತ್ಯಂತ ಎಳೆಯ ಗೆಳೆಯ, ತಂದೆ-ತಾಯಿ ನನ್ನೊಂದಿಗೆ ಹಂಚಿಕೊಂಡ ಮೊದಲ ವೇದಿಕೆ ಇದೇ ಆಗಿರಬಹುದು. ಎದುರುಗಡೆ ಹೆಂಡತಿ, ಮಗಳು ತರಂಗಿಣಿ ಹಾಗೂ ಬಾಲ್ಯದ ಆ ಹುಂಬುತನದ ಪ್ರವಾಸದಿಂದ ಇಂದಿನ ಹುಡುಕಾಟದ ಅಲೆಮಾರಿತನದವರೆಗಿನ ಎಷ್ಟೆಲ್ಲ ನೆನಪುಗಳು. ಈ ಕಾರ್ಯಕ್ರಮ ಖಂಡಿತವಾಗಿಯು ನನ್ನ ಬೌದ್ಧಿಕತೆಯ ಪ್ರದರ್ಶನವಾಗಿರಲಿಲ್ಲ ಬದಲಾಗಿ ನೆನಪುಗಳ ಕನವರಿಕೆ ಅಷ್ಟೆ.
 ಡಬಾಲಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಕಲಾವಂತ, ಉಪನ್ಯಾಸಕರುಗಳಾದ ಶ್ರೀ ಎನ್.ಹನುಮರೆಡ್ಡಿ, ಪಂಗನ್ನವರ್ ಹಾಗೂ ಅಂದು ತಮ್ಮ ಸಾಧನೆಗಳಿಂದಾಗಿ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿ ವೃಂದ ನನ್ನ ಇಡೀ ಪಿ.ಯು.ಸಿ ದಿನಗಳನ್ನ ಅಲೆ ಅಲೆಯಾಗಿ ಕಣ್ಣು ಮುಂದೆ ಹರಿಯುವಂತೆ ಮಾಡಿದವು. ಕವಿಯೊಬ್ಬನ ಬದುಕಿನ ಸಾರ್ಥಕಗಳಿಗೆ ಅವನ ಕವಿತೆ ಯಾರದೋ ಕಂಠದಿಂದ ಹಾಡಾಗಿ ಹೊರ ಚಿಮ್ಮಿದಾಗ. ಈ ಸಮಾರಂಭ ಅದಕ್ಕೂ ಸಾಕ್ಷಿಯಾಯಿತು. ಇಲ್ಲಿ ನನ್ನ ಹಾಡು -                                                                                                                                     ನನ್ನೂರು ಧಾರವಾಡ
                                                                    ನನ್ನ ಹಿಂಗ್ ಕಾಡಬ್ಯಾಡ
                                                        ಹಾಡಲ್ಪಟ್ಟಿತು.


Sunday, September 15, 2013

ತತ್ವ ಸಾಹಿತ್ಯದಲ್ಲಿ ಅನುಭಾವ

  “ಆರು ನಾನೆಂದು ವಿಚಾರಿಸುವ ವಿಷಮ
ಸಂಸಾರವಿದನು ಕನಸೆಂದರಿ”
                                                                                         -ನಿಜಗುಣ ಶಿವಯೋಗಿ

       ತತ್ವಪದ ಸಾಹಿತ್ಯದ ಆರಂಭಿಕರಲ್ಲಿ ಅತ್ಯಂತ ಮಹತ್ವದವರು ನಿಜಗುಣ ಶಿವಯೋಗಿಗಳು. ಅನುಭಾವದ ಅದ್ಭುತ ಬೆಳಕಿನಲ್ಲಿ ರಚನೆಯಾದ ಅವರ ಸಾಹಿತ್ಯದ ಪ್ರತಿ ಸಾಲೂ ಜೀವನ ದರ್ಶನದ ಸೂಕ್ತಿಗಳು. ಅವರ ಒಂದು ಪದ್ಯ
ನಂಬು ಜ್ಞಾನವನೆ ಕರ್ಮವೆಂಬ ಜಾಲದೊಳು ಸಿಲುಕಿ
ಹಂಬಲಿಸದಿರು ಮುಕ್ತಿಯ ಬಯಸಿ.
ಇದು ನಿಜಗುಣ ಶಿವಯೋಗಿಗಳು ಜ್ಞಾನಕ್ಕೆ ನೀಡಿದ ಮಹತ್ವವನ್ನು ಸಾರುವ ಒಂದು ಪದ್ಯವಷ್ಟೆ. ಗಮನಿಸಬೇಕಾದ ಅಂಶ, ಅನುಭಾವದ ಅರಿವಿನಲ್ಲಿ ತತ್ವಪದಗಳನ್ನು ಬರೆದ ನಿಜಗುಣ ಶಿವಯೋಗಿಗಳಿಗಾಗಲಿ ಅಥವಾ ಇನ್ನ್ಯಾವುದೇ ತತ್ವಪದಕರರಿಗಾಗಲಿ ಧರ್ಮ, ಧಾರ್ಮಿಕ ಚಿಂತನೆ ವ್ಯಸನವಲ್ಲ, ಮಿತಿಯಲ್ಲ. ಅದು ಆತ್ಮವನ್ನು ಅರಿಯುವ ಅನಂತತೆಯ ದಾರಿ. ಅವರೇ ಹೇಳುವಂತೆ ಇದು
ಮುಸುಕಿದ ವಿಷಯಪತಂಗ ಬಿದ್ದುರುಳೆ
ತಾಮಸಬುದ್ಧಿಯೆಂಬ ಕತ್ತಲೆಯಳಿಯ
ಮಸಗಿ ಸುಜ್ಞಾನವೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೋರ್ದದನುಪಮ
 ಹೀಗೆ ತತ್ವಪದ ಎನ್ನುವುದು ಆತ್ಮದೊಂದಿಗಿನ ನಿರಂತರ ಸಂವಾದ, ತಾಮಸ ಬುದ್ಧಿ ಅಳಿಸಿ, ಸುಜ್ಞಾನದ ಪ್ರಭೆಯನ್ನು ಪಸರಿಸುವ ಶಕ್ತಿ..
       ತತ್ವಪದಕಾರರು ಮೂಲತಃ ಅನುಭಾವಿಗಳು. ಅವರು ಧರ್ಮಜಿಜ್ಞಾಸುಗಳೂ ಕೂಡ. ಆದರೆ ಧಾರ್ಮಿಕ ಸಾಹಿತ್ಯದಲ್ಲಿ ತೊಡಗಿದ ಕವಿಗೆ ಆಯಾ ಮತ-ಧರ್ಮವನ್ನು ಕುರಿತ ಶ್ರದ್ಧೆ ಮುಖ್ಯವಾದರೆ, ‘ಅನುಭಾವ ಸಾಹಿತ್ಯ’ಗಳಲ್ಲಿ ಅವನ್ನು ಬರೆಯುವವನಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲದೆ, ಒಂದು ಬಗೆಯ ಆಧ್ಯಾತ್ಮಿಕ ನಿಲುವೂ ಮತ್ತು ಅದರೊಂದಿಗೆ ವೈಯಕ್ತಿಕವಾದ ಸಾಧನೆಯೂ ಮುಖ್ಯವಾಗುತ್ತದೆ. ಕವಿ ಇಲ್ಲಿ ಒಬ್ಬ ಸಾಧಕ. ವಚನಗಳನ್ನು ಬರೆದ ಬಸವಣ್ಣ, ಕೀರ್ತನೆಗಳನ್ನು ಬರೆದ ಪುರಂದರದಾಸ, ತತ್ವಪದಗಳ ಅದ್ವರ್ಯರಾದ ನಿಜಗುಣ ಶಿವಯೋಗಿ ಹಾಗೂ ಇತರರನ್ನು ಅನುಭಾವ ಮಾರ್ಗದ ಸಾಧಕರೆಂದು ಪರಿಗಣಿಸಬಹುದು.  ಅನುಭಾವ ಸಾಹಿತ್ಯ ನಿರ್ಮಿತಿಗೆ ಒಂದು ಬಗೆಯ ‘ಸಾಧಕ’ ಮನೋಭಾವ, ಆಧ್ಯಾತ್ಮಿಕ ಅನುಭವಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹಂಬಲ ಅಗತ್ಯ. ಇಂಥ ನೆಲೆಯಿಂದ ಬರೆದವರು ವಚನಕಾರರು, ಹರಿದಾಸರು, ಹಾಗೂ ತತ್ವಪದಕಾರರು. ‘ಅನುಭಾವ ಸಾಹಿತ್ಯ’ ಎನ್ನುವುದು, ಭಕ್ತಿ ಸಾಹಿತ್ಯದೊಳಗಿನ ಒಂದು ಪ್ರಭೇದವಾಗಿರುವಂತೆಯೇ ತತ್ವಪದ ಅನುಭಾವ ಸಾಹಿತ್ಯದ ಅಭಿವ್ಯಕ್ತಿಯಾಗಿ ಪ್ರಕಟವಾಯಿತು. ‘ಅನುಭಾವ’ ಒಂದು ಮಾನಸಿಕ ನಿಲುವು. ಅನುಭಾವಿಯು ಮೂಲತಃ ಭಕ್ತನಾಗಿದ್ದರೂ, ಅದನ್ನೂ ಮೀರುತ್ತಾನೆ. ಆದರೆ ‘ಭಕ್ತ’ರಾದವರೆಲ್ಲರೂ ಅನುಭಾವದ ನೆಲೆಗೆ ಏರಿದವರಾಗಿರುತ್ತಾರೆಂದು ಹೇಳಲು ಬಾರದು.
           ಶರಣ ಚಳವಳಿಯ ಅಲ್ಲಮಪ್ರಭು ಈ ಸಂದರ್ಭದಲ್ಲಿ ಕನ್ನಡನಾಡು ಕಂಡಂತಹ ಮೊಟ್ಟಮೊದಲ ನಿಜವಾದ ಅನುಭಾವಿ. ಅನುಭಾವಿಯಾದ ಅಲ್ಲಮನಿಗೂ, ಅಂದಿನ ಸಾಮಾಜಿಕ-ಧಾರ್ಮಿಕ ಸ್ವರೂಪದ ಶರಣಸಂಘಟನೆಗೂ ಇರುವ ಸಂಬಂಧ ವಿಶಿಷ್ಟವಾದುದಾಗಿದೆ. ಮೂಲತಃ ಯಾವುದಕ್ಕೂ ಅಂಟಿಕೊಳ್ಳದಂತಹ ನಿಲುವಿನ ಅಲ್ಲಮ ಈ ಚಳವಳಿಯ ಮೂಲಕ ಹಾದುಹೋದ ಒಂದು ಮಿಂಚಿನ ಗೆರೆ. ಅಕ್ಕಮಹಾದೇವಿಯೂ ಅಷ್ಟೆ. ಆತನ ಆಧ್ಯಾತ್ಮಿಕ ಪ್ರಭುತ್ವವನ್ನು ಎಲ್ಲ ಶಿವಶರಣರೂ ಗೌರವದಿಂದ ಒಪ್ಪಿಕೊಂಡರು. ಅಲ್ಲಮನು ಅನುಭವಮಂಟಪದ ಅಧ್ಯಕ್ಷನಾಗಿದ್ದನೆಂಬ ಸಂಗತಿ ಈ ಗೌರವದ ಪ್ರತೀಕವಾಗಿದೆ. ಈ ದೃಷ್ಟಿಯಿಂದ ಅವನನ್ನು ‘ಪ್ರಭು’ ಎಂದು ಕರೆದದ್ದು ಅನ್ವರ್ಥಕವಾಗಿದೆ. ಈ ‘ಪ್ರಭು’ ಎನ್ನುವುದು ಇಟ್ಟ ಹೆಸರಿರಲಾರದು; ಅವರೆಲ್ಲರೂ ಕೊಟ್ಟ ಹೆಸರಾಗಿರಬಹುದು.
         ಹೊಸದಾಗಿ ರೂಪುಗೊಳ್ಳುತ್ತಿದ್ದ ಆ ಶರಣಧರ್ಮದ ಅನೇಕ ಗ್ರಹಿಕೆಗಳನ್ನು, ವಿಚಾರಗಳನ್ನು ತನ್ನ ವಿವೇಕದಿಂದ ಚಿಕಿತ್ಸೆಗೆ ಒಳಪಡಿಸಿದ್ದಷ್ಟೇ ಅಲ್ಲ, ಹಲವು ಚಿಂತನೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟವನು ಅಲ್ಲಮ. ಒಂದೆರಡು ನಿದರ್ಶನಗಳು.
         ಸಂಸಾರದೊಳಗಿದ್ದು ಶಿವಯೋಗವನ್ನು ಸಾಧಿಸುವುದು ಈ ಶರಣ ಧರ್ಮದ ಮುಖ್ಯ ತಾತ್ತ್ವಿಕ ನೆಲೆ. ಭಾರತೀಯ ಜೀವನ ದೃಷ್ಟಿ ಬದುಕನ್ನು ಇಹ-ಪರ ಎಂದು ವಿಭಾಗಿಸಿ, ಇಹಕ್ಕಿಂತ ‘ಪರ’ದ ಮೇಲೆ ಹೆಚ್ಚು ಒತ್ತನ್ನು ಕೊಡುವ ಪ್ರವೃತ್ತಿಯನ್ನು ಬೆಳೆಯಿಸಿಕೊಂಡ ಹಂತದಲ್ಲಿ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ’ ಎಂದು ಬಸವಣ್ಣನವರು ಹೇಳಿದರೆ, ಇದನ್ನು ಸಮರ್ಥಿಸುವಂತೆ, ಅಲ್ಲಮಪ್ರಭು -
ಕೊಟ್ಟಕುದುರೆಯ ನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ,
ಇದು ಕಾರಣ
ನೆರೆ ಮೂರು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರ ಲಿಂಗವನ್ನವರೆತ್ತ ಬಲ್ಲರೋ
ಎಂಬ ಮಾತಿನಲ್ಲಿ ಈ ನಿಲುವನ್ನು ಸೊಗಸಾಗಿ ಸಮರ್ಥಿಸುತ್ತಾನೆ.
         ಮಾಯೆಯನ್ನು ಕುರಿತು ಶಿವಶರಣರ ನಿಲುವು, ಪರಂಪರಾಗತ ನಿಲುವಿಗಿಂತ ಬೇರೆಯಾದದ್ದು. ಅಲ್ಲಮ ಮಾಯೆಯನ್ನು ಕುರಿತು-
ಹೊನ್ನು ಮಾಯೆ ಎಂಬರು
ಹೊನ್ನು ಮಾಯೆ ಅಲ್ಲ,
ಹೆಣ್ಣು ಮಾಯೆ ಎಂಬರು
ಹೆಣ್ಣು ಮಾಯೆ ಅಲ್ಲ,
ಮಣ್ಣು ಮಾಯೆ ಎಂಬರು
ಮಣ್ಣು ಮಾಯೆ ಅಲ್ಲ.
ಮನದ ಮುಂದಣ ಆಸೆಯೇ
ಮಾಯೆ ಕಣಾ ಗುಹೇಶ್ವರಾ.
ಎಂದು ಹೇಳುವುದರ ಮೂಲಕ ‘ಮಾಯೆ’ಯನ್ನು ಕುರಿತು ಮಾಡುವ ವ್ಯಾಖ್ಯಾನ ಅತ್ಯಂತ ವಿಶಿಷ್ಟವಾದುದಾಗಿದೆ.
            ಒಂದು ಮತ-ಧರ್ಮ ಪ್ರಸಾರದ ಸಂದರ್ಭದಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಭಾವಾವೇಶಗಳನ್ನೂ ಅವಿಚಾರಿತ ನಡವಳಿಕೆಗಳನ್ನೂ ತಿದ್ದಿ ಅದನ್ನು ವೈಚಾರಿಕತೆಯ ಹಾಗೂ ವಾಸ್ತವದ ನೆಲೆಗಳಿಗೆ ತರುವ ಕೆಲಸ ಬಹುಮುಖ್ಯವಾದದ್ದು. ಅಲ್ಲಮ ಈ ಕಾರ್ಯವನ್ನು ತುಂಬಾ ನಿರ್ದಾಕ್ಷಿಣ್ಯವಾಗಿ ನಿರ್ವಹಿಸುತ್ತಾನೆ. ಈ ದಾಸೋಹದ ಸಂತೆಯನ್ನು ಕಂಡು-
ಇಷ್ಟಲಿಂಗಕ್ಕೆ ತೋರಿ
ಮೃಷ್ಟಾನ್ನ ಹೊಡವರಿಗೆ
ಅದೆಲ್ಲಿಯದೊ ಇಷ್ಟಾರ್ಥಸಿದ್ಧಿ?
ಅದೆಲ್ಲಿಯದೊಲಿಂಗ? ಅದೆಲ್ಲಿಯದೊ ಜಂಗಮ?
ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು
ಗುಹೇಶ್ವರಾ.
ಎನ್ನುತ್ತಾನೆ. ಅಲ್ಲಮ ಕಂಡದ್ದು ತೋರಿಕೆಯ ಭಕ್ತಿಗೂ ನಿಜವಾದ ಅನುಭಾವಕ್ಕೂ ಇರುವ ಅಂತವರನ್ನು; ಕೇವಲ ‘ಅಂಗಜೀವಿ’ಗಳು ಅಶನಕ್ಕೆ ನೆರೆದು ‘ಲಿಂಗವಾರ್ತೆ’ಯನ್ನು ನುಡಿಯುವ ವಿಡಂಬನೆಯನ್ನು; ಆತನಿಗೆ ಅನ್ನಿಸಿತು-
ಹೊಟ್ಟೆಯ ಮೇಲೆ ಕಟ್ಟೋಗರದ
ಬುತ್ತಿಯ ಕಟ್ಟಿದರೇನು
ಹಸಿವು ಇಂಗಬಲ್ಲುದೆ?
ಅಲ್ಲಮನು ಧರ್ಮದ ಹೆಸರಿನಲ್ಲಿ ನೆರೆದ, ಹುಸಿ ಭಕ್ತರ ಸಮೂಹವನ್ನು ವಿಮರ್ಶಕನ ಚಿಕಿತ್ಸೆಗೆ ಒಳಗುಪಡಿಸಿದ ಕ್ರಮ ಇದು.
ಅಲ್ಲಮನ ಉಕ್ತಿಗಳು ಸಮಕಾಲೀನರ ಉಕ್ತಿಗಳಿಗಿಂತ ಬೇರೆಯಾಗಿ ತೋರುವುದು, ಅವು ನಿಜವಾದ ಅನುಭಾವಿಯೊಬ್ಬನ ನಿಲುವುಗಳನ್ನೂ, ಕಾಣ್ಕೆಗಳನ್ನೂ ಅಭಿವ್ಯಕ್ತಿಸುತ್ತವೆ ಎಂಬುದರಿಂದ.
ಅಲ್ಲಮನದು ಒಂದು ರೀತಿಯ ಉದ್ದೇಶಿತ ರಹಸ್ಯ ಭಾಷೆ. ಈ ಭಾಷೆ ಭಾರತದಲ್ಲಿ ರೂಪುಗೊಂಡದ್ದು ಬೌದ್ಧಧರ್ಮ ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು, ಜನಪ್ರಿಯತೆಗಾಗಿ ಮಂತ್ರ-ತಂತ್ರಾದಿ ಹಾಗೂ ಗುಪ್ತ ವಾಮ ಮಾರ್ಗಗಳನ್ನು ಅಳವಡಿಸಿಕೊಂಡು ವಜ್ರಯಾನ ಎಂಬ ಪಂಥವಾದಾಗ ಎಂದು ಹೇಳಲಾಗಿದೆ. ಮುಂದೆ ಬಂದ ಸಿದ್ಧಪಂಥ, ನಾಥಪಂಥಗಳೂ ಈ ‘ಸಂಧಾಭಾಷೆ’ಯ ಅಭಿವ್ಯಕ್ತಿ ಕ್ರಮವನ್ನು ಮುಂದುವರಿಸಿಕೊಂಡು ಬಂದವುಗಳಾಗಿವೆ.
            ಅಲ್ಲಮನ ವಚನಗಳು ಮೂಲತಃ ಅನುಭಾವದ ನೆಲೆಯಿಂದ ಹುಟ್ಟಿದವುಗಳಾಗಿವೆ. ಅನುಭಾವಿಯ ದೃಷ್ಟಿ ಎಂದರೆ ಅದು ಸದಾ ಮೂರ್ತದಿಂದ ಅಮೂರ್ತಕ್ಕೆ ಹಾಯುವಂಥದು. ಅಲ್ಲಮನ ಅಭಿವ್ಯಕ್ತಿಗಳಲ್ಲಿ ಮೂರ್ತಾಮೂರ್ತಗಳೆರಡನ್ನೂ ಏಕಕಾಲಕ್ಕೆ ಗುರುತಿಸಬಹುದು. ದೈವದ ನಿಲುವನ್ನು ಕುರಿತು ‘ಶಬ್ದದೊಳಗಣ ನಿಶ್ಶಬ್ದದಂತೆ ಗುಹೇಶ್ವರಾ ನಿಮ್ಮ ನಿಲುವು’ ಎಂಬ ಉಕ್ತಿಯೊಂದೇ ಸಾಕು. ಇದೊಂದು ಅದ್ಭುತವಾದ ಉಕ್ತಿ. ಹಾಗೆಯೇ ‘ಹೂವ ಮುಡಿಯಬಹುದಲ್ಲದೆ ಗಂಧವ ಮುಡಿಯಬಹುದೆ?” ಎಂಬ ಪ್ರಶ್ನೆ ಕೂಡಾ ಈ ಮೂರ್ತ- ಅಮೂರ್ತಗಳ ಪರಿಭಾಷೆಯದೇ. ದೈವೀ ಅನುಭವವನ್ನು ಕುರಿತು-
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ
ಬರಿದೆ ಬಹುದೆ ಶಿವಜ್ಞಾನ?
    ಎಂಬ ಈ ದೃಷ್ಟಿಕೋನವೇ ಮೂರ್ತ ಅಮೂರ್ತಗಳ ವಿವೇಚನೆಯನ್ನು ಕುರಿತದ್ದು. ಹೀಗಾಗಿ ಕಂಡದ್ದರ ಮೂಲಕ, ಕಾಣದುದರ ಕಡೆ ನಡೆಯುವುದೇ, ಮೂರ್ತವಾದ ವಾಸ್ತವಗಳನ್ನು ವಿರುವಿಕೆಯೇ ಈ ಅನುಭಾವಿಯ ನಿಲುವಾಗಿದೆ.
         ಅನುಭಾವ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಅರ್ಥ ಬೆಳೆದು ಬಂದಿದೆ. ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಬರುವ 'ಭಾವ' , 'ವಿಭಾವ', 'ಅನುಭಾವ' ಮುಂತಾದ ಶಬ್ದಗಳು ಕನ್ನಡದ ಈ ಶಬ್ದಕ್ಕೆ ಮೂಲವಾದರೂ, ಕನ್ನಡದಲ್ಲಿ ಅನುಭಾವ ಶಬ್ದ ಇವೆಲ್ಲಕ್ಕಿಂತ ತೀರ ಭಿನ್ನವಾದ ಮತ್ತು ಮಹತ್ವಪೂರ್ಣ ಅರ್ಥ ಪಡೆದುಕೊಂಡಿದೆ. ಅನುಭಾವ ಶಬ್ದಕ್ಕೆ ಸಂಸ್ಕೃತದಲ್ಲಿ ಗ್ರಹಿಕೆ ಎಂಬ ಅರ್ಥವಿದೆ ಅಷ್ಟೇ. ಮತ್ತು ಆ ಶಬ್ದದ ಪ್ರಯೋಗವನ್ನು ಸಾಹಿತ್ಯದಲ್ಲಿ ವ್ಯಾಪಕವಾಗಿ ಎಲ್ಲೂ ಮಾಡಲಾಗಿಲ್ಲ ಕೂಡ. ಆದರೆ ಕನ್ನಡ ಸಾಹಿತ್ಯದಲ್ಲಿ ಅನುಭಾವ, ಸಾಹಿತ್ಯದ ಒಂದು ಪ್ರಾಕಾರವಾಗಿಯೇ ರೂಪುಗೊಂಡುಬಿಟ್ಟಿದೆ. "ಅನುಭಾವವೆಂಬುದು ಆತ್ಮವಿದ್ಯೆ, ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು." ಎಂಬ ಶಿವಶರಣರ ಮಾತುಗಳಿಂದ ಅನುಭಾವ ಶಬ್ದದ ಅರ್ಥ ಕಲ್ಪನೆಯನ್ನು ಮಾಡಿಕೊಳ್ಳಬಹುದು. ತಮ್ಮ ಅರಿವಿನಿಂದ ಮತ್ತು ಆಚರಣೆಯಿಂದ ಪಡೆದ ಅನುಭವವನ್ನು ಶಿವಶರಣರು ಅನುಭಾವ ಎಂದು ಕರೆದರು. 
               ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ಕಂಡ ಸತ್ಯ ಮತ್ತು ಪಡೆದ ಆನಂದವನ್ನು ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ.
              ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."
ದಾಸಸಾಹಿತ್ಯ
        "ನಾಯಮಾತ್ಮಾ ಪ್ರವಚನೇನ ಅಭ್ಯೋ ನ ಮೇಧಯಾ ನ ಬಹುಧಾ ಶ್ರುತೇನ" ಅಂದರೆ, ಆತ್ಮಜ್ಞಾನವು ಪ್ರವಚನದಿಂದಾಗಲಿ, ಮೇಧಾಶಕ್ತಿಯಿಂದಾಗಲಿ ಅಥವಾ ಶ್ರವಣದಿಂದಾಗಲಿ ಲಭ್ಯವಾಗುವುಂಥದ್ದಲ್ಲ. ಆತ್ಮವು, ಕೇವಲ ಭೌತಿಕವಾದ ಇವೆಲ್ಲಕ್ಕೂ ಅತೀತವಾದದ್ದು. ಒಳಗಣ್ಣು ತೆರೆದಾಗ ಮಾತ್ರ ಆ ದಿವ್ಯ ಬೆಳಕು ಒಳಕ್ಕೆ ಹರಿಯುತ್ತದೆ, ಆ ಬಂಗಾರದ ಮುಚ್ಚಳ ತೆರೆದು ಸತ್ಯದ ದರ್ಶನವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಹಲವರು ಸತ್ಯಶೋಧನೆಯ ಈ ಮಾರ್ಗದಲ್ಲಿ ಸಾಗಿದ್ದಾರೆ. ಅವರಲ್ಲಿ ಅನೇಕರಿಗೆ ಸತ್ಯದರ್ಶನ ಸಾಧ್ಯವಾಗಿದೆ. ಆದರೆ ಅಂತಹ ಅನುಭಾವಿಗಳಲ್ಲಿ ಕೆಲವರು ಮಾತ್ರ ತಮಗಾದ ಆ ಅನುಭವವನ್ನು ಶಬ್ದಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಒಂದು ಮಹದ್ಪ್ರಯತ್ನವನ್ನು ಹದಿನೈದನೇ ಶತಮಾನದಲ್ಲಿ ದಾಸರು ಮಾಡಿದರು.
        ಪುರಂದರ ದಾಸರು, ಕನಕದಾಸರು, ಮತ್ತು ವಾದಿರಾಜರದು ದಾಸಸಾಹಿತ್ಯದಲ್ಲಿ ಜನಪ್ರಿಯ ಹೆಸರುಗಳು.
ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ. ಹದಿನೈದನೇ ಶತಮಾನದಲ್ಲಿ ನಿಜಗುಣ ಶಿವಯೋಗಿ ಎಂಬ ಮಹಾ ಅನುಭಾವಿ. ಅವರಿಂದ ’ತತ್ವಸಾಹಿತ್ಯ’ ಎಂಬ ಹೊಸ ಪ್ರಕಾರ ಹುಟ್ಟಿಕೊಂಡಿತು. ನಮ್ಮ ಮಧ್ಯೆ ಶಿಶುನಾಳ ಷರೀಫರು ತೀರ ಇತ್ತಿಚೆಗೆ ಆಗಿಹೋದ ಅನುಭಾವಿಗಳು. ಶರೀಫರ ಗೀತೆ ಅನುಭಾವ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಅಂತೆಯೇ ಬೇಂದ್ರೆ, ಡಿ.ವಿ.ಜಿ, ಪು.ತಿ.ನ, ಮಧುರಚನ್ನ ಅವರಂತಹ ನವೋದಯ ಕವಿಗಳ ಕಾವ್ಯದಲ್ಲಿಯೂ ಅನುಭಾವದ ಹೊಳಹನ್ನು ಹೇರಳವಾಗಿ ಕಾಣಬಹುದು.
          ತತ್ವಪದ ಎಂದರೇನು?
         ‘ತತ್ವಪದ ಅಂದ್ರೆ ಬೆಂಕಿಯಿದ್ದಂಗೆ, ಅಂಥ ಬೆಂಕೀನಾ ನುಂಗಿದೀವಿ, ಅದರ ಜೊತ್ಗೇ ಬದ್ಕುತಿದೀವಿ...’’
ಎಪ್ಪತ್ಮೂರು ವರ್ಷದ, ಬದುಕಿನ ಮುಸ್ಸಂಜೆಯ ತತ್ವಪದ ಗಾಯಕ ತಂಬೂರಿ ಜವರಯ್ಯ ಹೇಳುವ ಮಾತಿದು. ಇದಕ್ಕೆ ಪೂರಕ ಎನ್ನುವಂತೆ ಮುಪ್ಪಿನ ಷಡಕ್ಷರಿಗಳ ಒಂದು ಪದ್ಯ -
ಎನ್ನ ಒಳಗೆ ಜಾರರಿಹರು
ಎನ್ನ ಒಳಗೆ ಚೋರರಿಹರು
ಎನ್ನ ಒಳಗೆ ಘೋರಪಾಪ ಪೋರರಿಹರು
ಎನ್ನ ಒಳಗೆ ಕ್ರೂರದೃಷ್ಟಿ
ಎನ್ನ್ ಒಳಗೆ ಗರ್ವಪರ್ವ
ಎನ್ನ ಒಳಗೆ ವಿದ್ಯೆ ಡೊಂಕು
ಎನ್ನ ಒಳಗೆ ವಿಷಯಕೂಪ ವಿಷಯದಾಗರ
ಎನ್ನ ಒಳಗೆ ಕೋಪಸಿಡಿಲು
ಎನ್ನ ಒಳಗೆ ಆಸೆಮೇಘ
ಎನ್ನ ಮುಸುಕಿ ಶಿವನ ನೆನೆಯಲೀಯವಕ್ಕಟಾ
       ಕೈವಲ್ಯಪದಗಳು ಎಂದು ಸಂಗ್ರಹಿಸಲ್ಪಟ್ಟ ಶಿವಯೋಗಿಗಳ ಇಂಥ ನೂರಾರು ಪದ್ಯಗಳು ಆತ್ಮ ಜ್ಞಾನದ ಸಾವಿಲ್ಲದ ನಿದರ್ಶನಗಳು. ಇಲ್ಲಿಯ ಶೋಧ ಬಹಿರ್ಮುಖಿಯಾದುದಲ್ಲ. ಅದು ತನ್ನೊಳಗಿನ ಹುಡುಕಾಟ, ತನ್ನ ತನದ ಹುಡುಕಾಟ. ತತ್ವ ಚಿಂತನೆಯಂದರೆ ತನ್ನೊಳಗಿನ ಶೋಧ. ಆತ್ಮ ಜ್ಞಾನದ ನಿರೀಕ್ಷೆಯನ್ನುವುದು ಹೇಗಿರುತ್ತದೆ ಎನ್ನುವುದಕ್ಕೆ ಮೇಲಿನ ಪದ್ಯ ಒಂದು ಉತ್ತಮ ನಿದರ್ಶನ
   ಭಾರತದಲ್ಲಿ ತತ್ವ ಚಿಂತನೆಯ ಇತಿಹಾಸ ಬಹಳ ಪುರಾತನವಾದದ್ದು. ಇದನ್ನು ಏಳು ಘಟ್ಟಗಳಲ್ಲಿ ವಿಭಜಿಸಲಾಗಿದೆ.
1. ವೇದಗಳ ಕಾಲದ ತಾತ್ವಿಕ ಚಿಂತನೆ. (ಕ್ರಿ. ಪೂ 2000- ಕ್ರಿ. ಪೂ 500)
2. ಸೂತ್ರಗಳ ಕಾಲದ ತಾತ್ವಿಕ ಚಿಂತನೆ (ಕ್ರಿ. ಪೂ 500- ಕ್ರಿ. ಪೂ 200)
3. ಮಹಾ ಕಾವ್ಯಾಗಳ ತಾತ್ವಿಕ ಚಿಂತನೆ (ಕ್ರಿ. ಶ 200- ಕ್ರಿ. ಶ 300)
4. ಪುರಾಣಗಳ ಕಾಲದ ತಾತ್ವಿಕ ಚಿಂತನೆ (ಕ್ರಿ. ಶ 300- ಕ್ರಿ. ಶ 750)
5. ಅನಂತರದ ದರ್ಶನ ಕಾಲ (ಕ್ರಿ. ಶ 750-ಕ್ರಿ. ಶ 1000)
6. ಮಧ್ಯಕಾಲದ ಹಿಂದೂ ತಾತ್ವಿಕ ಚಿಂತನೆ (ಕ್ರಿ. ಶ 1000- ಕ್ರಿ. ಶ 1800)
7. ಆಧುನಿಕ ಕಾಲದ ತಾತ್ವಿಕ ಚಿಂತನೆ (ಕ್ರಿ. ಶ 800- ಕ್ರಿ. ಶ 1950)
    ತತ್ವ ಚಿಂತನೆಗೆ ಪಾಶ್ಚಾತ್ಯರು ಕೊಟ್ಟಿರುವ ಅರ್ಥ ಬಹಳ ಸಂಕುಚಿತವಾದುದು. ಅವರ ಸಾಹಿತ್ಯದಲ್ಲಿ ಇದು Metaphysical poetry ಆಗಿ ಪ್ರಕಟವಾಯಿತು.
Metaphysical poetry is concerned with the whole experience of man, but the intelligence, learning and seriousness of the poets means that the poetry is about the profound areas of experience especially - about love, romantic and sensual; about man's relationship with God - the eternal perspective, and, to a less extent, about pleasure, learning and art. Metaphysical means dealing with the relationship between spirit to matter or the ultimate nature of reality
Metaphysical poems are lyric poems. They are brief but intense meditations, characterized by striking use of wit, irony and wordplay.
ಭಾರತೀಯರ ಪ್ರಕಾರ ತತ್ವಶಾಸ್ತ್ರ ಕೇವಲ ತರ್ಕ ವಿಶ್ಲೇಷಣೆಯಲ್ಲ. ಅದು ಪ್ರಕ್ರಮ ಪದ್ಧತಿಯೂ(ಸಿಸ್ಟಮ್ ಬಿಲ್ಡಿಂಗ್) ಅಲ್ಲ, ಬದಲಾಗಿ ಜೀವನಾನುಭವಗಳನ್ನು ತರ್ಕ ವಿಶ್ಲೇಷಿಸಬೇಕು ಆದರೆ ತರ್ಕದ ಮಿತಿಗೆ ಸಿಗದ ನಾನಾ ವಿಚಾರಗಳನ್ನೂ ತತ್ವಶಾಸ್ತ್ರ ಒಳಗೊಳ್ಳಬೇಕು. ಒಬ್ಬ ವ್ಯಕ್ತಿ ತನ್ನ ಚಿಂತನೆಯ ಎಂಥಹ ದಿವ್ಯ ಆನಂದದಲ್ಲಿ ನಮ್ಮನ್ನು ಮುಳುಗಿಸುತ್ತಾನೆ ಮತ್ತು ಎತ್ತರಕ್ಕೆ ಒಯ್ಯುತ್ತಾನೆ ಎನ್ನುವುದರ ಮೇಲೆ ತತ್ವ ಚಿಂತನೆಯ ಗುಣಮಟ್ಟದ ನಿರ್ಧಾರವಾಗಬೇಕು. ಭಾರತೀಯ ತತ್ವ ಚಿಂತನೆಗೆ ಸಮೀಪವೆನ್ನಿಸುವಂತೆ ಆಲೋಚಿಸಿದವರು ಪಾಶ್ಚಾತ್ಯರಲ್ಲಿ ಇಬ್ಬರೇ. ಒಬ್ಬ ಪ್ಲೆಟೋ ಮತ್ತೊಬ್ಬ ಪೈಥಾಗೋರಸ್. ಪ್ಲೆಟೋ ಇದನ್ನು That dear delight, ಎಂದು ಕರೆದರೆ, ಪೈಥಾಗೋರಸ್ ಇದನ್ನು Highest music ಎಂದಿದ್ದಾನೆ.
     ಭಾರತದಲ್ಲಿ 11ನೆ ಮತ್ತು 19ನೆ ಶತಮಾನಗಳ ನಡುವಿನ ಕಾಲದಲ್ಲಿ ತತ್ವ ಚಿಂತನೆಯೇ ಇರಲಿಲ್ಲವೆನ್ನುವ ಪಾಶ್ಚಾತ್ಯರ ಇನ್ನೊಂದು ದೋಷಪೂರ್ಣ ಅಭಿಪ್ರಾಯ.
      12ನೆ ಶತಮಾನದ ಕರ್ನಾಟಕದ ಶರಣ ಚಳುವಳಿ. ಅದೇ ಕಾಲದಲ್ಲಿ ಭಾರತಕ್ಕೆ ಕಾಲಿರಿಸಿದ ಇಸ್ಲಾಂ, 14ನೆ ಶತಮಾನದ ಹಿಂದೂ ಧರ್ಮದ ಭಕ್ತಿ ಪಂಕ್ತಗಳೊಂದಿಗೆ ಜನ್ಮತಾಳಿದ ಸೂಫಿಳ್, ಇವುಗಳ ಪರಿಣಾಮವೆನ್ನುವಂತೆ ಮನುಷ್ಯ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಅಕ್ಬರ್‍ನ ದೀನ್-ಇ-ಇಲಾಹಿ, ಆನಂತರದ 18ನೆ ಶತಮಾನದ ತಾತ್ವಿಕ ಚಿಂತನೆಯ ಬೆಳವಣಿಗೆಗಳು ಇಲ್ಲಿಯ ತತ್ವ ಚಿಂತನೆಯ ನಿರಂತರತೆಯನ್ನು ತೋರಿಸುತ್ತದೆ.
      ತತ್ವ ಚಿಂತನೆಯ ಬೆಳವಣಿಗೆಯಲ್ಲಿ ಪೂರ್ವದ ಕೆಲವು ಗುಂಪು ಹಾಗೂ ವ್ಯಕ್ತಿಗಳನ್ನು ಉಲ್ಲೇಖಿಸದೇ ಇರಲಾಗದು. ವಿಶಿಷ್ಟಾದ್ವೈತ, ದ್ವೈತಾದ್ವೈತ, ದ್ವೈತ ಶುದ್ಧ ಅದ್ವೈತ, ಭಕ್ತಿಪಂಕ್ತ, ಹರಿದಾಸ ಭಕ್ತಿಪಂಕ್ತ, ಶಿವಶರಣ ಭಕ್ತಿಪಂಕ್ತ, ರಮಾನಂದ ಭಕ್ತಿಪಂಕ್ತ, ನಾನಕ ಭಕ್ತಿಪಂಕ್ತ ಹೀಗೆ ಅಸಂಖ್ಯಾತ. ವ್ಯಕ್ತಿಗಳಲ್ಲಿ ಕರ್ನಾಟಕದಲ್ಲಿ ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಕೂಡಲೂರು ಬಸವಲಿಂಗ ಶರಣ, ಕಡಕೋಳ ಮಡಿವಾಳ ಶಿವಯೋಗಿ, ಬಾಲಲೀಲಾ ಮಹಂತ ಶಿವಯೋಗಿ, ಘನಮಠದ ನಾಗಭೂಷಣ ಶಿವಯೋಗಿ, ಮೈಲಾರ ಬಸವಲಿಂಗ ಶರಣ, ಶಿಶುನಾಳ ಶರೀಫ, ಶ್ರೀ ಚಿತಂಬರ ದೀಕ್ಷಿತ, ಗುಡಗೇರಿ ಕಲ್ಮಠದ ಸಂಗಮೇಶ್ವರರು, ಅಗಡಿ ಶೇಷಾಚಲ ಸ್ವಾಮಿ, ಗರಗದ ಮಡಿವಾಳ ಸ್ವಾಮಿ, ನವಲಗುಂದದ ನಾಗಲಿಂಗ ಸ್ವಾಮಿ, ಅವರಾಧಿ ಫಲಹಾರ ಸ್ವಾಮಿ, ಹುಬ್ಬಳಿಯ ಸಿದ್ಧಾರೂಢರು, ಗದುಗಿನ ಶಿವಾನಂದ ಸ್ವಾಮಿ, ದೋಟ್ಯಾಳ ಸುಖಮುನಿಯಪ್ಪ, ಅಂಕಲಗಿ ಅಡವಿ ಸ್ವಾಮಿ, ಹುಲಿಯಾಳ ಶಂಭುಲಿಂಗ ಸ್ವಾಮಿ ಹೀಗೆ ಅಸಂಖ್ಯಾತ ತತ್ವ ಚಿಂತಕರನ್ನ ಮಧುರಚನ್ನರವರೆಗೂ ಗುರುತಿಸುವಂತೆ ರಾಷ್ಟ್ರಮಟ್ಟದಲ್ಲಿ ರಾಮಾನುಜಾಚಾರ್ಯ, ಮದ್ವಾಚಾರ್ಯ, ವಲ್ಲಭಾಚಾರ್ಯ, ಮೀರಾ ದೇವಿ, ಚಂಡಿ ದಾಸ, ನರಸಿಂಗ್ ಮೇಹತಾ, ವಿದ್ಯಾಪತಿ, ಕಬೀರ, ನಾನಕ, ರಾಜಾರಾಮ್ ಮೋಹನರಾಯ್, ದೇವೆಂದ್ರನಾಥ ಟ್ಯಾಗೋರ್, ಕೇಶವ ಚಂದ್ರಸೇನ್, ಸ್ವಾಮಿ ದಯಾನಂದ ಸರಸ್ವತಿ, ದ್ಯಾನದೇವ, ಚಾಂಗದೇವ, ನಾಮದೇವ, ಏಕನಾಥ, ರಾಮದಾಸ್, ತುಕಾರಾಮ, ಜನಾರ್ಧನ ಪಂತ್, ಮೋಲೊ ಪಂತ್, ರಾಣಡೆ, ತಿಲಕ, ಆನಿಬೆಸೆಂಟ್, ವಿವೇಕಾನಂದ, ಗಾಂಧಿ, ರವಿಂದ್ರನಾಥ ಟ್ಯಾಗೋರ್, ಶ್ರೀ ಅರವಿಂದೋ, ಕೃಷ್ಣಚಂದ್ರಭಟ್ಟಚಾರ್ಯ, ರಾಧಾ ಕೃಷ್ಣನ್, ಇಕ್ಬಾಲ್, ಆನಂದಕುಮಾರ ಸ್ವಾಮಿ, ಮೇಡಂ ಬ್ಲಾವಟ್ಸ್ಕಿ ಇವರುಗಳನ್ನು ಗುರುತಿಸಬಹುದು.
ಬೇರೆ ಬೇರೆ ಕಾಲ, ಸ್ಥಳ ಮತ್ತು ಮತಗಳಿಗೆ ಸೇರಿದ ಈ ಮೇಲಿನ ಎಲ್ಲ ಶ್ರೇಷ್ಠ ಅನುಭಾವಿಗಳು ಆತ್ಮ ವಿದ್ಯೆ ಎನಿಸಿದ ತಮ್ಮ ತತ್ವ ಚಿಂತನೆಯ ಮೂಲಕ ಒಟ್ಟಾರೆ ಹೇಳಿದ್ದೇನು ಎಂಬುದನ್ನು ಹೀಗೆ ಕ್ರೂಢಿಕರಿಸಬಹುದು. – ಇಡೀ ಜಗತ್ತಿಗೇ ಕಲ್ಯಾಣವಾಗವೇಕು, ಅದಕ್ಕಾಗಿ ಸರ್ವರೂ ಶ್ರಮಿಸಬೇಕು; ಸರ್ವರನ್ನೂ ಪ್ರೀತಿ, ವಾತ್ಸಲ್ಯ, ನ್ಯಾಯಯುತವಾದ ಗೌರವದಿಂದ ನೋಡಬೇಕು; ಅಜ್ಞಾನವನ್ನು ಕಿತ್ತೊಗೆಯಬೇಕು; ಯಾವ ಧರ್ಮವೂ ಮೇಲಲ್ಲ, ಯಾವ ಧರ್ಮವೂ ಕೀಳಲ್ಲ; ಬೇರೆ ಬೇರೆ ಧರ್ಮಗಳು ಒಂದೇ ಸ್ಥಳಕ್ಕೆ(ದೇವರು) ಕೊಂಡೊಯ್ಯುವ ವಿವಿಧ ಮಾರ್ಗಗಳು; ಪ್ರತಿಯೊಬ್ಬರೂ ದೇವರಿಗಾಗಿ ಹಂಬಲಿಸಬೇಕು; ದೇವರ ಅಸ್ಥಿತ್ವ ಮಾನವನ ಅಸ್ತಿತ್ವದಷ್ಟೇ ಖಂಡಿತವಾದುದು;  ಸ್ವಯಂಸಿದ್ಧ ತತ್ತ್ವವಾದ ಅದರ ಅಸ್ತಿತ್ವವನ್ನು ತರ್ಕದಿಂದ ಸ್ಥಾಪನೆ ಮಾಡುವ ಪ್ರಯತ್ನ ನಗೆಪಾಟಲಾದೀತು; ಮೂರ್ತಿ ಪೂಜೆಯಲ್ಲಿ ತಪ್ಪೇನೂ ಇಲ್ಲ, ಮಾನವನದು ಎತ್ತರದ ಬಾಳು, ಬಿತ್ತರದ ಬದುಕು ಆಗಬೇಕು ಎಂದು ಬೋಧಿಸಿದರು.
ಹಾಗೆ ನೋಡಿದರೆ, ಯಾವುದನ್ನು ‘ತತ್ವಪದ’ ಎಂದು ನಾವು ನಿರ್ದೇಶಿಸುತ್ತೇವೆಯೋ ಅವುಗಳ ಮೂಲವನ್ನು ನಾವು ಹನ್ನೆರಡನೆಯ ಶತಮಾನದ ವಚನಕಾರರು ಬರೆದ ಹಾಡುಗಳಲ್ಲಿಯೆ ಗುರುತಿಸಬೇಕಾಗುತ್ತದೆ ಎನ್ನುತ್ತಾರೆ ಡಾ. ಎಲ್. ಬಸವರಾಜು. ಅವರು ಪ್ರಕಟಿಸಿರುವ ‘ಶಿವದಾಸ ಗೀತಾಂಜಲಿ’ ಎಂಬ ಸಂಗ್ರಹದ ಪೀಠಿಕೆಯಲ್ಲಿ “ಈ ಪ್ರಸ್ತುತ ಸಂಕಲನದಲ್ಲಿ ಇಪ್ಪತ್ತೇಳು ಜನ ‘ಶಿವದಾಸ’ರ, ಒಂದು ನೂರಾ ಎಂಬತ್ತೆಂಟು ಹಾಡುಗಳಿವೆ.  ಇವುಗಳನ್ನು ಬಸವಣ್ಣನವರೂ ಮತ್ತು ಅವರ ಸಂಗಡಿಗರಾದ, ಅಲ್ಲಮ, ಚನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ, ಹಾವಿನಹಾಳ ಕಲ್ಲಯ್ಯ ಮೊದಲಾದವರು ಬರೆದರೆಂದೂ” ಉಲ್ಲೇಖಿಸುತ್ತಾರೆ.  ಅಂದರೆ, ನಿಜಗುಣರಿಗಿಂತ ಮೊದಲು ಹಾಗೂ ಹರಿದಾಸರುಗಳಿಗಿಂತ ಹಿಂದೆ ಬಸವಾದಿ ಶಿವಶರಣರೂ, ವಚನ ನಿರ್ಮಿತಿಯ ಜತೆಜತೆಗೆ ಹಾಡುಗಳನ್ನೂ ಬರೆದಿದ್ದರು ಎಂದಂತಾಯಿತು.
    ಮುಂದೆ ನಿಜಗುಣ ಶಿವಯೋಗಿಗಳಿಂದ ಪ್ರಾರಂಭವಾದ ತತ್ವಪದಗಳ ಪ್ರೇರಣೆ ಒಂದು ಹೊಸ ದಾರಿಯನ್ನು ತೆರೆದು ಕನ್ನಡದಲ್ಲಿ ತತ್ವ ಪದಗಳ ಸಮೃದ್ಧಿಗೆ ಕಾರಣವಾಯಿತು.
ತತ್ವಪದ ಸಾಹಿತ್ಯದ ವಿಷಯ, ಅನುಭವ, ಚರ್ಚೆಗಳ ಹರವು ಬಹಳದೊಡ್ಡದು. ಅದಕ್ಕೆ ಯಾವುದೇ ಮಿತಿ-ಮಡಿವಂತಿಕೆ ಇಲ್ಲ. ಉದಾಹರಣೆಗೆ- ಸಾಹಿತಿಗಳನ್ನು ವಿಡಂಬಿಸುತ್ತಾ ಶರೀಫರು ಬರೆದ ಒಂದು ಪದ್ಯ
ಸಾಹಿತಿ ಬ್ರಹ್ಮನ ಬೊಗಳಿದರೇನು
ಛೀ ನಾನಾ ಜಲ್ಮಕೆ ಬಿದ್ದು ಹೊರಳಾಡುವಿಯಾ ಮರುಳೇ
ಹೊಲಸಿನ ಸಿಂಬಳ ಸೇವಿಪ ನೊಣದಂತೆ
ತಿಳಿಯದೆ ವಿಷಯದಿ ಬಳಲುವಿಯಾ ಮರುಳೇ
ಹಲವು ಶಾಸ್ತ್ರಗಳೋದಿ ಗಿಳಿಯಂತೆ ಸಂಸಾರ
ಬಲಿಯ ಪಂಜರದೋಳ್ ಅಳಲುವೆಯಾ ಮರುಳೇ
ವಸುಧೆಯೋಳ್ ಶಿಶುನಾಶಧೀಶನ
ಅಸಮ ಸ್ಥಳದಲ್ಲಿ ಕ್ರಮವಿಳಿಸುವಿಯಾ ಮರುಳೇ
         ಶಿಶುನಾಳ ಶರೀಫರು ಜನಜೀವನಕ್ಕೆ ಹತ್ತಿರದ ಸಂಗತಿ ಹಾಗೂ ಅಧ್ಯಾತ್ಮ ಚಿಂತನೆಗಳನ್ನೊಳಗೊಂಡ ತತ್ವಪದಗಳನ್ನು ಆಡು ಭಾಷೆಯಲ್ಲಿ ರಚಿಸಿದರು. ತಮ್ಮ ಕಣ್ಣಿಗೆ ಏನು ಕಾಣುತ್ತದೋ ಅದನ್ನೇ ಪದ್ಯವಾಗಿಸುವ ಅದ್ಭುತ ಶಕ್ತಿ ಶರೀಫರಿಗೆ ಸಿದ್ಧಿಸಿತ್ತು. ಅಣ್ಣಿಗೇರಿ ಮದುಮಗಳೊಬ್ಬಳು ಗಂಡನ ಮನೆಗೆ ಹೊರಟು ನಿಂತಾಗ ಅಳುತ್ತಿದ್ದುದನ್ನು ಕಂಡು ಬರೆದ ಅಳಬೇಡಾ ತಂಗಿ ಅಳಬೇಡಾ, ಚಂಚಲ ಮನಸ್ಸು, ಅಜ್ಞಾನ, ಜಡತ್ವ ನೀಗಿಸಿ ಜ್ಞಾನದ ಬೆಳಕು, ಏಕಾಗ್ರತೆ, ಸ್ಥಿರತೆಯಂತಹ ಸದ್ಗುಣಗಳನ್ನು ರೂಢಿಸಿಕೊಳ್ಳುವಂತೆ ಹೇಳಿದ ‘ಕೋಡಗನ ಕೋಳಿ ನುಂಗಿತ್ತಾ’, ಸದಾ ಕಾಲ ನಿದ್ದೆ ಮಾಡುತ್ತಿದ್ದರೆ ಏನೂ ಸಾಧಿಸಲಾಗದು ಎಂಬ ಅರ್ಥ ನೀಡುವ ‘ನಿದ್ದಿ ಎಂಬ ನಿಜ ಹಾದರಗಿತ್ತಿ’, ವಿದ್ವಾಂಸರೊಬ್ಬರು ಪ್ರಭುಲಿಂಗ ಲೀಲೆಯನ್ನು ತಪ್ಪಾಗಿ ಹೇಳುತ್ತಿದ್ದಾಗ ಅದನ್ನು ಕಂಡು ‘ಎಚ್ಚರ ಇರಬೇಕೋ ಪ್ರಭುಲಿಂಗ ಲೀಲೆ ಹೇಳುವಾಗ ಸರಿಯಾಗಿ ಹೇಳಬೇಕೋ’ ಸೇರಿದಂತೆ ಬದುಕಿನ ಅನೇಕ ವಿಷಯಗಳನ್ನು ಶರೀಫರು ತತ್ವಪದಗಳಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ಶರೀಫರ ತತ್ವಪದಗಳು ಅಧ್ಯಾತ್ಮದ ತಳಹದಿ ಮೇಲೆ ರಚನೆಗೊಂಡಿವೆ. ಆದ್ದರಿಂದ ಶರೀಫರು ಹಾಗೂ ಅವರ ತತ್ವಪದಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಧ್ಯಾತ್ಮದ ಬಗ್ಗೆ ಸ್ಪಲ್ಪವಾದರೂ ಅರಿವು ಇರಬೇಕು. ತತ್ವಪದಗಳಲ್ಲಿ ಧೈರ್ಯ, ಸ್ವಾವಲಂಬನೆ, ಸ್ವಾಭಿಮಾನ, ಭಾವೈಕ್ಯತೆ ಮತ್ತು ಎಲ್ಲರೂ ಒಂದು ಎಂಬ ಸಂದೇಶವಿದೆ. ಕರ್ನಾಟಕದ ಕಬೀರ ಎಂದೇ ಖ್ಯಾತರಾಗಿರುವ ಶರೀಫರು ಕಂಡದ್ದನ್ನು ಕಂಡಂತೆ ಯಾವುದೇ ಮುಲಾಜಿಲ್ಲದೆ ಹೇಳುವ ನಿಷ್ಠುರವಾದಿಯಾಗಿದ್ದರು. ‘ಶರೀಫ’ ಎಂದರೆ ಪಾರ್ಸಿ ಭಾಷೆಯಲ್ಲಿ ಅಧ್ಯಾತ್ಮದ ಸಾಧಕ ಮತ್ತು ‘ಎಲ್ಲರಿಂದ ಗೌರವ ಪಡೆಯುವವನು ಎಂದರ್ಥ’. 
       ಶಿಶುನಾಳ ಶರೀಫರು ಒಂದರ್ಥದಲ್ಲಿ ತತ್ವಪದಗಳ ರೂವಾರೀ, ಅವರ ಪ್ರಕಾರ ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೊಚಿಸುವ ರೀತಿಯನ್ನು ಯಾವೊದೋ ಒಂದು ಸನ್ನಿವೇಶಕ್ಕೆ ಹೊಲಿಸಿ ಹಾಡಿನಿಂದ ವಿವರಿಸುವದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳೀದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು.
ಸರ್ಪಭೂಷಣ ಶಿವಯೋಗಿ
         ತತ್ವಪದಗಳು ಮೂಲತಃ ಹಾಡುಗಬ್ಬದ ಪರಂಪರೆಗೆ ಸೇರಿದವುಗಳು.  ನಾವು ಯಾವುದನ್ನು ತತ್ವಪದಗಳೆಂದು ಕರೆಯುತ್ತೇವೆಯೋ ಆ ಲಕ್ಷಣಗಳನ್ನೊಳಗೊಂಡ ಹಾಡುಗಬ್ಬಗಳನ್ನು ಮೊದಲು ಪ್ರಾರಂಭಿಸಿದವರು ಹದಿನೈದನೆಯ ಶತಮಾನದ ನಿಜಗುಣ ಶಿವಯೋಗಿಗಳು – ಎಂದು ಹೇಳಲಾಗಿದೆ.  ಸ್ವಾರಸ್ಯದ ಸಂಗತಿ ಎಂದರೆ, ಹಾಡುಗಬ್ಬಗಳ ಪರಂಪರೆಯನ್ನೆ ವಿಸ್ತರಿಸಿದ ಹರಿದಾಸರ ಕೀರ್ತನೆಗಳೂ ಹೆಚ್ಚು ಕಡಿಮೆ ಸಮಾನಾಂತರವಾಗಿ ಇದೇ ಕಾಲಮಾನದಲ್ಲಿಯೇ ಸಂಭವಿಸಿವೆ.  ಯಾಕೆಂದರೆ ಕೀರ್ತನ ಸಾಹಿತ್ಯವೆಂಬ ಪಂಥ, ಹದಿನೈದನೆಯ ಶತಮಾನದ ಶ್ರೀಪಾದರಾಯರಿಂದ ಮೊದಲಾಯಿತೆಂದು ಹೇಳಲಾಗಿದೆ.  ಹೀಗಾಗಿ ಒಂದೆಡೆ ವೀರಶೈವ ತತ್ವಪದಕಾರರ ರಚನೆಗಳೂ ಮತ್ತೊಂದೆಡೆ ಹರಿದಾಸರ ವೈಷ್ಣವಭಕ್ತಿ ಪರವಾದ ಕೀರ್ತನೆಗಳೂ ಅಂದಿನ ಕರ್ನಾಟಕದ ವಿಭಿನ್ನಪರಿಸರಗಳಲ್ಲಿ ಕಾಣಿಸಿಕೊಂಡಂತೆ ಭಾಸವಾಗುತ್ತದೆ. 
          ಈ ಎರಡೂ ಪ್ರಕಾರಗಳ ಸಮಾನ ಧೋರಣೆ ಇರುವುದು ಭಕ್ತಿಯ ಮೂಲಮಾನದಲ್ಲಿ, ಮುಖ್ಯವಾಗಿ ವೇದಾಂತವನ್ನು ಜನಸಮ್ಮುಖ ಮಾಡಿದ್ದು.  ವೇದೋಪನಿಷತ್ತುಗಳಿಗೆ ಸಮ್ಮತವೆಂದು ತೋರಿದ ಅದ್ವೈತವನ್ನೂ, ಷಟ್ಸ್ಥಲ ಸಿದ್ಧಾಂತವನ್ನೂ ಒಂದು ರೀತಿಯಲ್ಲಿ ಸಮನ್ವಯಗೊಳಿಸಿದ ವೀರಶೈವ ಸಂತ ಮತ್ತು ಕವಿ ನಿಜಗುಣ ಶಿವಯೋಗಿ.  ನಿಜಗುಣರ ನಂತರ ಮುಂದಿನ ತತ್ವಪದಕಾರರ ನಿಲುವು ಹೆಚ್ಚು ದೇಶೀಯವಾಯಿತೆಂಬುದು, ಗುರುತಿಸಿಕೊಳ್ಳಬೇಕಾದ ಸಂಗತಿ.
       ನಿಜಗುಣರ ನಂತರದ ಕಾಲದಿಂದ ಸಂತ ಶಿಶುನಾಳ ಷರೀಫರ ಕಾಲದವರೆಗೂ, ಮುಪ್ಪಿನಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾಮಹಾಂತಸ್ವಾಮಿ, ಕಡಕೋಳ ಮಡಿವಾಳೇಶ್ವರ ಇತ್ಯಾದಿಯವರ ಹಾಡುಗಳನ್ನು ತತ್ವಪದಗಳೆಂದು ಕರೆದದ್ದರ ಜತೆಗೆ, ಸ್ವರವಚನಗಳೆಂದೂ ಕರೆದಿರುವುದು ಕುತೂಹಲದ ಸಂಗತಿಯಾಗಿದೆ. ಭುಜಲಿಂಗ ಶಿವಯೋಗಿಗಳ ಶಿಷ್ಯರಾದ ಮುಪ್ಪಿನ ಷಡಕ್ಷರಿಗಳ ಒಂದು ಪದ್ಯ-
ಎನ್ನ ಕಂದಿಸುತ್ತ ಬಹಳ
ಎನ್ನ ಬಾಧಿಸುತ್ತ ಬಿಡದೆ
ಎನ್ನ ನೊಂದು ನೆವಗಳಿಂದ ಕಾಡಿದವರಿಗೆ. . . .

ಹಿಂದೆ ಎನ್ನ ಬೈದವರಿಗೆ
ಮುಂದೆ ಎನ್ನ ಬೈದವರಿಗೆ
ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ
  ‘ಸ್ವರವಚನ’ ಎಂಬ ನುಡಿಗಟ್ಟಿನಲ್ಲಿರುವ ‘ವಚನ’ ಎಂಬ ಪದ ಸಹಜವಾಗಿಯೇ, ಶಿವಶರಣರ ವಚನಗಳಿಗೂ ಇವುಗಳಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಆ ಪರಂಪರೆಯಲ್ಲಿ ಸರ್ಪಭೂಷಣ ಶಿವಯೋಗಿಗಳ ‘ಕೈವಲ್ಯ ಕಲ್ಪವಲ್ಲರಿ’ ಒಂದು ವಿಶಿಷ್ಟವಾದ ಕೃತಿ. ಅವರ ಒಂದು ಪದ್ಯ
ಬಿಡುಬಾಹ್ಯದೊಳು ಡಂಭವ
ಮಾನಸದೊಳಗೆಡಬಿಡದಿರು ಶಂಭುವ
ಒಡಲೊಳುವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವನಿನಗೊಲಿವನೆ ಮರುಳೇ

ಜನಮೆಚ್ಚಿ ನಡಕೊಂಡರೇನುಂಟು ಲೋಕದಿ
ಮನಮೆಚ್ಚಿ ನಡಕೊಂಬುವುದೇ ಚಂದವು
ಜನರೇನು ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ
        -ಕಡುಕೋಳ ಮಡಿವಾಳಪ್ಪ ತತ್ವಪದಕಾರರಲ್ಲಿಯೇ ಅತ್ಯಂತ ನಿರ್ಭಿಡೆಯ ಬರಹಗಾರ. ಅವರು ನಾಲ್ಕು ಕೃತಿಗಳನ್ನು ಬರೆದಿದ್ದು ವಿಡಂಬನೆ ಅವರ ಕಾವ್ಯದ ಮುಖ್ಯ ಲಕ್ಷಣ. ಉದಾಹರಣೆಗೆ-
ಬಾಯಲೊಂದು ಆಡ್ತೀರಿ
ಮನಸಿನೊಳಗೊಂದು ಮಾಡ್ತೀರಿ
ಬರೆದಿಟ್ಟದ್ದು ಓದಿಕೊಂಡು
ಭ್ರಾಂತಿಗೆಟ್ಟು ಹೋಗತೀರಿ

ಶೀಲವಂತರಂತೇಳಿ ಸುಳ್ಳೆ ಶೀಲ ಮಾಡ್ತೀರಿ
ಸಂತ್ಯಾನ ಲಿಂಗ ಕಟಗೊಂಡು
ಸತ್ಯಾನಾಸಾಗಿ ಹೋಗತೀರಿ
          ಆದರೆ ಈ ಶೈಲಿಗೆ ತೀರ ವಿರುದ್ಧ ಎನ್ನುವಂತೆ ಮೃದು, ಮಿತ, ಹದುಳ ಭಾಷೆಯ ಮತ್ತೊಬ್ಬ ತತ್ವಪದಕಾರ ಬಾಲಲೀಲಾ ಮಹಾಂತ ಶಿವಯೋಗಿ. ಅವರ ಒಂದು ಉದಾಹರಣೆ-
ಅವರವರ ಭಕ್ತಿಗೆ ಅವರವರ ಭಾವಕ್ಕೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಇರುವೊಂದು ಕನ್ನಡಿಯ ನೂರಾರು ಜನಪಿಡಿಯೆ
ಸರಳಾಗಿ ಅವರವರ ರೂಪ ಕಾಣುವಂತೆ
ತತ್ವಪದಗಳನ್ನು ರಚಿಸಿದವರಂತಯೇ ಅವುಗಳನ್ನು ಪ್ರಚಾರ ಮಾಡುತ್ತ ಬತಿಹನಕನ್ನು ಸವೆಸಿದ, ಅವುಗಳಲ್ಲಿ ಹುದುಗಿದ ಅನುಭಾವದ ಬೆಳಕನ್ನು ಪಸರಿಸುತ್ತ ಬಾಳಿದ ಜನಪದ ಕಲಾವಿದರ ದೊಡ್ಡ ಪರಂಪರೆಯು ಈ ನಾಡಿನಲ್ಲಿದೆ. ಅವರೆಲ್ಲರೂ ವಂದ್ಯರು ಮತ್ತು ಪ್ರಾತಃಸ್ಮರಣಿಯರು

•           ದಿನಾಂಕ:07/09/2013ು ಕನ್ನಡ ಸಾಹಿತ್ಯದಲ್ಲಿ ಅನುಭಾವ, ರಾಷ್ಟ್ರೀಯ ವಿಚಾರ ಸಂಕಿರಣ, ಶಿವಾನಂದ ಕಾಲೇಜ ಕಾಗವಾಡ