Total Pageviews

Thursday, October 30, 2014

ಕವಿತೆ, ಏಕಾಂತ, ಲೋಕಾಂತ



  ತುಳಿ ತುಳಿದು ಮಣ್ಣೆನಿಸಿದಿರಿ ನನ್ನ
ಬೈಗುಳಗಳ ಬೆಂಕಿಯುಗುಳಿ ಮಡಿಕೆಯಾಗಿಸಿದಿರಿ
ಸುಮ್ಮಸುಮ್ಮನೆ ಶಪಿಸಿ ಸಾಧನೆಗೆ ಅಣಿಗೊಳಿಸಿದಿರಿ
ಜಡವಾಗಿ ಸಾಯುವವನನ್ನು ಆಲೋಚನೆಯಾಗೆಂದು ಹರಸಿ
ನಿಜ ಜಂಗಮನಾಗಿಸಿದಿರಿ ನನ್ನ
ಕೋಟಿ ಪ್ರಣಾಮವೆನ್ನದೆ ಏನೆನ್ನಲಿ ಇನ್ನ

      ಬಹಳ ದಿನಗಳಿಂದ ಅಲ್ಲಿಗೆ ಹೋಗಿಬರಬೇಕೆಂಬುದು ಒಂದು ಹಂಬಲ. ನನ್ನೊಳಗೊಂದು ಆಲಯವಿಟ್ಟುಕೊಂಡು ಮತ್ತೆ ಮತ್ತೆ ನಾನು ಮಂತ್ರಾಲಯಕ್ಕೆ ಏಕೆ ಹೋಗುತ್ತೇನೆ? ಎಂದು ಪ್ರಶ್ನಿಸಿಕೊಂಡರೆ ನೆನಪಾಗುತ್ತವೆ ಹಲವು ಸಂಗತಿಗಳು.
        ಬಹಳ ಚಿಕ್ಕನಿದ್ದಾಗ ನಾವು ಆಂದ್ರದ ಶ್ರೀಶೈಲಕ್ಕೆ ಹೋಗಬೇಕಾದರೆ, ಒಂದಿಷ್ಟು ಕಾಲ ಬಳ್ಳಾರಿ, ಗುಂಟೂರು, ಕರ್ನೂಲ ಹೀಗೆ ಹೋಗಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೂ ಆಂದ್ರದಲ್ಲಿ ನಮ್ಮ ಮಾವ ಪ್ರವರ್ಧಮಾನರಾದ ಬಳಿಕ ಹೈದ್ರಾಬಾದಿನಲ್ಲಿ ತಮ್ಮ ರಾಜಕೀಯ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ಅಲ್ಲಿಂದ ಗುಲ್ಬರ್ಗಾ ಮಾರ್ಗವಾಗಿ ಇತ್ತ ಬರುವ ಅತ್ತ ಹೋಗುವ ಚಟುವಟಿಕೆ ಶರುವಿಟ್ಟುಕೊಂಡಿತು ನನ್ನ ಮನೆತನ. ಆದರೆ ನಾನು ದೊಡ್ಡವನಾದಂತೆ ನನ್ನ ತಾಯಿ ರಾಯಚೂರು, ಮಂತ್ರಾಲಯ ಮತ್ತು ಶ್ರೀಶೈಲ ಹೀಗೆ ಹೊಸದಾರಿ ಕಂಡುಕೊಂಡಳು.
        ರಾತ್ರಿಯೆಲ್ಲ ಪ್ರವಾಸ ಮಾಡಿ ನಾವು ಮಂತ್ರಾಲಯಕ್ಕೆ ಬರಬೇಕು. ಅಲ್ಲಿ ಇಡೀ ದಿನ ತುಂಗಾ ತೀರದ ರಾಯರ ವೃಂದಾವನದ ಸುತ್ತ ನಮ್ಮ ಗಿರಕಿ. ಆಗಿನ ಮಂತ್ರಾಲಯ ಇಗಿನದಲ್ಲ. ಬರೀ ಒಂದು ಪುಟ್ಟ ಹಳ್ಳಿ, ಪ್ರಶಾಂತ ವೃಂದಾವನ. ರಾಜಕುಮಾರರು ಪ್ರತಿ ಗುರುವಾರ ಇಲ್ಲಿಗೆ ಬರುತ್ತಾರೆ ಎಂಬ ಸುಳ್ಳಿಗೆ ನಾನೂ ತಲೆದೂಗಿದ್ದೆ. ಆದರೆ ಅದೇಕೊ ಗೊತ್ತಿಲ್ಲ, ಅತ್ಯಂತ ಬಾಲ್ಯದಲ್ಲಿ ನಾನು ರಾಯರ ವೃಂದಾವನಕ್ಕೆ ತಲೆಬಾಗಿದ್ದೆ. ಈಗಲೂ ಅಷ್ಟೆ. ಈ ದೇಶದ ನೂರು ಪ್ರತಿಶತ ಯಾತ್ರಾ ಸ್ಥಳಗಳಲ್ಲಿ 60% ಸಮಾಧಿಗಳೆ. ಹಾಗೆ ನನ್ನ ಮನ ಸೆಳೆದ ನಾಲ್ಕೇ ಸಮಾಧಿಗಳುಒಂದು ಗಾಂಧಿಯದು, ಮತ್ತೊಂದು ಶರೀಫ, ಇನ್ನೊಂದು ಮಂತ್ರಾಲಯ ಮಗದೊಂದು ಅಜ್ಮೇರಿನ ಖ್ವಾಜಾ ಬಂದೇ ನಮಾಜರದ್ದು.
    ನನಗೆ ಮಾತೃಕಾರುಣ್ಯದ ಅತ್ಯಂತ ಹಿರಿಯ ಗೆಳೆಯರೊಬ್ಬರು ನನ್ನ ಬಳಿ ಬರುತ್ತಿದ್ದ ನೆನಪು. ಸಮಾಧಾನದಿಂದ ಊಟ ಮಾಡುವುದನ್ನು ಕಲಿಸಿದ ಅವರು ಒಂದು ಮಾತು ಹೇಳುತ್ತಿದ್ದರು, “ಧಾರವಾಡಕ್ಕೆ ಹೋದಾಗ ಮಹಂತ ಅಪ್ಪಗಳ ಗದ್ದುಗೆಗೆ ಹೋಗಿ ನನಗಾಗಿ ನಂದಾದೀಪಕ್ಕೆ ಒಂದಿಷ್ಟು ಎಣ್ಣೆ ಹಾಕಿ ಬನ್ನಿ.” ಇದು ಸಣ್ಣ ಕೋರಿಕೆ ಆದರೆ ಜೀವನವನ್ನು ಸಾವರಿಸಿಕೊಳ್ಳುವ ದೊಡ್ಡ ದಾರಿ. ಅನುಸರಣೆ, ಅವಜ್ಞೆ ನಮ್ಮ ನಮ್ಮ ಚಿತ್ತ.
ಸಮಯ ಸಿಕ್ಕಾಗ ಹೀಗೆ ನಮ್ಮ ಹಿರಿಯರ ಸಂವೇದನೆಗಳ ಸುತ್ತ ಸುತ್ತಿ ಬರುವ ಪರಿಪಾಠವಿದೆ. ಹೀಗೆ ಸುತ್ತಾಡುವಾಗ ತಲೆ ತುಂಬಾ ದೀಪಗಳ ಹಾವಳಿ. ಹಣತೆಗಳ ದೀಪಾವಳಿ. ಮರಳಿ ಬೆಂಗಳೂರಿಗೆ ಬಂದು ಎರಡು ಕವಿಗೋಷ್ಠಿಗಳನ್ನು ಹಾಜರಾಗಬೇಕಿತ್ತು. ಒಂದು ಶೂದ್ರರ ನೇತೃತ್ವದಲ್ಲಿ, ಜೆ.ಪಿ.ನಗರದಲ್ಲಿ, ಮತ್ತೊಂದು ಚಂಪಾ ನೇತೃತ್ವದಲ್ಲಿ ಚಾಮರಾಜಪೇಟೆಯ ಕಸಾಪದಲ್ಲಿ. ಪ್ರಯಾಣದ ಆಯಾಸ ಒಂದಕ್ಕೆ ಹೋಗುವ ಮನಸ್ಸಾಗಲಿಲ್ಲ. ಇನ್ನೊಂದೂ ಅಷ್ಟೆ, ದಿನಾಂಕ 28 ಮತ್ತು 29 ರ ಮೀಟಿಂಗ್‍ಗಳ ಒತ್ತಡ ನೋಡಿದರೆ ಇದಕ್ಕೂ ಅದೇ ಗತಿ ಎಂದುಕೊಂಡಿದ್ದೆ. ಆದರೆ ಎಷ್ಟೇ ತಡವಾದರೂ ಸರಿ ಬರಲೇಬೇಕೆಂಬುದು ಚಂಪಾಜ್ಞೆ.
      ಇಂದು ಮಗನ ಹುಟ್ಟುಹಬ್ಬ. ಎಳೆಯರ ಮುಂದೆ ಏರಿನಿಂದ ಬದುಕಬೇಕಾದುದು ಪ್ರತಿ ಹಿರಿಯನ ಜವಾಬ್ದಾರಿ. ಮೇಲಾಗಿ ಆಯ್ದ ಅತ್ಯಂತ ಹಿರಿಯ ಕವಿಗಳೊಂದಿಗಿನ ಈ ಗೋಷ್ಠಿಗಳು ಹೇಗಿರುತ್ತವೆ ಎಂಬ ಕುತೂಹಲ. ಆಫೀಸು ಮುಗಿಸಿಕೊಂಡು ಟ್ರಾಫಿಕ್ ಎಂಬ ಚಕ್ರವ್ಯೂಹ ಬೇಧಿಸಿಕೊಂಡು ಗೋಷ್ಠಿ ತಲುಪಿದಾಗ 6.45 ನಿಮಿಷ. ನಿಸಾರ್ ಆಗಲೇ ಸುಂದರ ಪದ್ಯ ಒಂದನ್ನು ಓದಲಾರಂಭಿಸಿದ್ದರು. ವೇದಿಕೆಯ ಕೊನೆಯ ಸಾಲಿನಲ್ಲಿ ನಾನು, ಸುಜಾತಾ ಕುಮಟಾ, ‘ಮಹಾಪರ್ವ’ದ  ಸುಷ್ಮಾ ಭಾರದ್ವಾಜ್. ಏಕೋ ಹಿಂದೆ ಕುಳಿತು ಕವಿತೆ ಕೇಳುವುದು ಅಸಹ್ಯ. ಕವಿತೆ ಅನಾವರಣಗೊಳ್ಳುವುದೇ ಕವಿಯ ಮುಖವೆಂಬ ಮಹಾರಂಗಸ್ಥಳದಲ್ಲಿ. ವೇದಿಕೆಯನ್ನಿಳಿದ ನಾನು ಸುಜಾತಾ ಕೇಳುಗರ ಮೊದಲ ಸಾಲಿನಲ್ಲಿ ಕುಳಿತು ಕವಿತೆಗಳಿಗೆ ಕಿವಿಗೊಡಬೇಕೆಂದರೆ ಮತ್ತೆ ಚಂಪಾಜ್ಞೆ. ಸರಿ, ವೇದಿಕೆಯನ್ನು ಹತ್ತಲೇ ಬೇಕಾಯಿತು. 
 ಒಂದು ತಪ್ಪೊಪ್ಪಿಗೆ, ಹಿಂದಿಯ ‘ಕಾವ್ಯಸಂಧ್ಯಾ’ ಉರ್ದುವಿನ ಮಶಯರಾ ಮತ್ತು ಮೆಹಫಿಲ್‍ಗಳಿಗೆ ಮನಸೋತ ನಾನು ನಮ್ಮ ಕನ್ನಡದ ಕವಿ ಗೋಷ್ಠಿಗಳನ್ನು ಪೇಲವ ಎಂದೇ ಪರಿಗಣಿಸಿದವನು. ಆದರೆ ಈ ನನ್ನ ಗ್ರಹಿಕೆ ತಪ್ಪೆನಿಸಿತು ಈ ದಿನ ನನಗೆ. ಕಾವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ, ಆಂಗಿಕ ಆಸ್ಥೆಯೊಂದಿಗೆ ಉಣಬಡಿಸುವ ಅಪರೂಪದ ಕವಿಗಳು ನಮ್ಮಲ್ಲಿದ್ದಾರೆ ಎನ್ನಿಸಿತು. ನಿಸಾರ್, ಎಸ್.ಜಿ.ಸಿದ್ಧರಾಮಯ್ಯ, ಬರಗೂರು, ಸುಷ್ಮಾ, ಆರ್.ಜಿ. ಹಳ್ಳಿ, ಎಲ್. ಹನುಮಂತಯ್ಯ, ಚಂಪಾ ಪ್ರೇಕ್ಷಕ ಮುಖಿಯಾದ ಕಾವ್ಯ ವಾಚನ ಮಾಡಬಲ್ಲರು. ಖಂಡಿತ, ಕವಿತೆ ಯಾವಾಗಲೂ ಧ್ಯಾನಸ್ಥವೆ. ಆದರಿದು ಸಂತೆ ಮತ್ತು ಚಿಂತೆಯೊಂದಿನ ಧ್ಯಾನ. ಇದರಲ್ಲಿ ಏಕಾಂತವಿರುವಂತೆ ಲೋಕಾಂತವೂ ಇದೆ. ಇದರೊಳಗೆ ಮೌನವಿಯವಂತೆ ಶಬ್ಧಸ್ಪೋಟವೂ ಇದೆ.


Monday, October 27, 2014

ಹಣತೆಯೆ, ಹಂಚಿಕೊಳ್ಳಲೆ ನಿನ್ನ?

ಹಣತೆಯೆ,
ನಿನ್ನೆದೆಗೆ ಬಿದ್ದ ಹನಿ ಎಣ್ಣೆಗೂ ನರನಾಡಿಗಳಿರುತ್ತವೆ,
ಅದೂ ಚಲಿಸುತ್ತದೆ ನಿನ್ನೊಳಗೇ ಸೇರಿ
ತನ್ನದೆಲ್ಲವ ನೀಗಿ, ಒಂದಾಯಿತೆಂಬ ಹರುಷದಿ ಮಾಗಿ
ಬೆಳಕ ಹೆರುವ ತಾಯಿಯಾಗಿ ತುಡಿಯುತ್ತದೆ,
ದುಡಿಯುತ್ತದೆ, ಹರಸುತ್ತದೆ ಮಾಯೆಯಾಗಿ



ಹಣತೆಯೆ,
ಬೆಳಕಿನಿಂದ ಲಾಸ್ಯವಾಡುತ್ತ
ನೀ ಸುಡುವ ರೀತಿ, ಮೋಸದಿಂದ ರಕ್ತ ಹೀರಿದ ಪ್ರೀತಿ,
ಎಲ್ಲ ತಿಳಿಯುತ್ತದೆ ಹನಿ ಎಣ್ಣೆಗೂ
ಆದರೂ ಅದ್ಯಾಕೆ ಅದು ತಣ್ಣಗೊ?
ತನ್ನದೊಂದು ಪುಟ್ಟ ತಕರಾರೂ ಇಲ್ಲ ಅದರೊಳಗೆ ಸಣ್ಣಗೆ
 ಹಣತೆಯೆ
ಹನಿ ಎಣ್ಣೆಯ ಬಗಲ ಬೆವರಲೇ ಬೆಳೆದ ನೀ
ಬೆಳಕಾದೆ, ದೀಪವಾದೆ, ದಾರಿಯಾದೆ, ದೇವರಾದೆ
ಕತ್ತಲೆಗೆ ಕುಠಾರಳೆಂದು, ಆದಿಯೆಂದು, ಅಗ್ನಿಯೆಂದು
ದೀಪಗಳ ಹಾವಳಿಯೆಂದು, ದೀಪಾವಳಿಗೆ ಬಂದು
ನಿನ್ನ ಹಮ್ಮು ನೀಗಿಸಿಕೊಂಡೆ

ಹಣತೆಯೆ,
ನಿನ್ನ ಹೊಳಪಿಗೆ ಕಣ್ಣು ಮಿಟುಕಿಸಿ
ಹಂಬಲಿಸಿ ಬಂದ ಚಿಟ್ಟೆಗಳ ಸುಟ್ಟೆ
ಚಿಣ್ಣ-ಚಿನ್ನಾರಿಗಳ ಹೊಸ ಬಟ್ಟೆಗೂ ಬೆಂಕಿ ಇಟ್ಟೆ
ನಿನ್ನೊಂದಿಗಿನ ಪ್ರೀತಿಯನ್ನೇ ಮಸಣಕ್ಕೆ ಅಟ್ಟೆ
ನಿನ್ನ ಒಂದು ಮುತ್ತಿಗೆ ಬದುಕು ಸತ್ತ ಬಟ್ಟೆ
 
ಆದರೆ
ನಿನ್ನೆದೆಯೊಳಗಿನ ಎಣ್ಣೆ
ಬೊಬ್ಬೆಯಿಂದ ಬಾಯಿಬಿಟ್ಟ ಕೈಗೆ
ಸುಟ್ಟ ಮೈಗೆ, ಸಮಾಧಾನವಾಗಿ
ತಂಪೆರೆವ ಮಲಾಮಾಗಿ ಸವರುತ್ತಲೇ ಇದೆ
ನೀ ಸುಟ್ಟು ಹಾಕಿದ ಹೆಣದ ನೆನಪಿನೆದೆಯ ಮೇಲೆ
ಉರಿವ ಹಣತೆಯಲ್ಲಿ ಒಂದಾಗಿ ತಣ್ಣಗೆ ಹರಿಯುತ್ತಲೇ ಇದೆ.


Wednesday, October 22, 2014

ನನ್ನೆದೆ ಭಾವಕೆ ನಿನ್ನಯ ಒಲವು



ಕಣ್ಣೊರಿಸಿಕೊ, ತಣ್ಣನೆಯ ಮೌನ ಸರಸಿ
ದೀಪ ಹಚ್ಚಿಡು ತಾಯಿ,
ಮಣ್ಣೊಳಗೆ ಮಗ್ನರಾದ
ಮುದ್ದು ಗೊಲ್ಲರ ಕರೆದು ಗಲ್ಲ ತೀಡು
ರಂಗೋಲಿ ಇಟ್ಟು, ನೆನಪುಗಳ ಪಟಾಕಿ ಸುಡು
ತೇಲಿ ಬರಬಹುದೆಲ್ಲೋ ಸತ್ತವನ ಎದೆಯ ಹಾಡು
       14 ವರ್ಷಗಳ ಗಾಢ ನಿದ್ರೆಯಿಂದ ಎಚ್ಚತ್ತು, ಬೆಳಕಿನೆಡೆಗೆ ಮೊಗಮಾಡಬೇಡಿತ್ತು ನನ್ನ ಇಲಾಖೆ. ದೀಪ ಬೆಳಗುವ ಹೊತ್ತು, ಯಾರೂ ನಿದ್ರೆಯಲ್ಲಿರಬಾರದು, ಆಲಸ್ಯ ಅಲ್ಪ ಕತ್ತಲೆಯೂ ಶಿಕ್ಷಣದಂಥ ಕ್ಷೇತ್ರದಲ್ಲಿ ಸುಳಿಯಬಾರದು, ಎಂಥ ಏಳು-ಬೀಳುಗಳ ಮಧ್ಯಯೂ ಆತ್ಮಸಾಕ್ಷಿಯ ಪ್ರಭೆಯನ್ನು ಮುಂದಿರಿಸಿಕೊಂಡು, ಬಾಳಿನಲ್ಲಿ ದೀಪ ಹಿಡಿದುಕೊಂಡು, ಮುಂದೊರೆಯಬೇಕು ಎಂದು 59 ವರ್ಷಗಳ ವಯಸ್ಸಿನ ನಿವೃತ್ತಿಯಂಚಿನ ಆಯುಕ್ತರು, ಹರಸುವಾಗ ನನಗೆ ನಾಚಿಕೆಯಾಗುತ್ತಿತ್ತು, ಮನಸ್ಸು ಬಾಲ್ಯದ ನನ್ನ ಹಾಡೊಂದನ್ನು ಗುನುಗುನಿಸುತ್ತಿತ್ತು –
ಎತ್ತು ನಿನ್ನ ಮನವೆತ್ತು
ಹೃದಯಧನ ಏರು ಎಸೆದು ತೆಂಗು
ಏಳು ಏಳು ಜಗದಗ್ನಿಲಿಂಗವೆ ತತ್ವ ಮಸಿಯನುಂಡು
       ಆಯುಕ್ತರ ಈ ಕನಸಿನ ಫಲಶೃತಿಗಳು ಬೆಂಗಳೂರಿನ ನಮ್ಮ ಬಾಳುಗಳ ಅಸ್ತಿತ್ವಗಳು. ನಮ್ಮಗಳ ಮೊದಲ ಪ್ರಯೋಗವಾಗಿ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಎಂಟು ವಿಷಯಗಳ ರಾಜ್ಯ ಪರಿಣಿತರ, ಒಂದು ದಿನದ ಕಾರ್ಯಗಾರವನ್ನು ಕಾಲೇಜು ಶಿಕ್ಷಣ ಇಲಾಖೆಯ ನಮ್ಮ ತಂಡ ಆಯೋಜಿಸಿತು. ಫಲಿತಾಂಶ ನಿರೀಕ್ಷೆಯ ಮಟ್ಟದಲ್ಲಿರಲಿಲ್ಲ ಆದರೆ ತೀರ ನೀರಸವೇನೂ ಅಲ್ಲ. 
 ಈ ಬೆಂಗಳೂರು ಈಗ ನನ್ನ ಆ 20 ವರ್ಷಗಳ ಹಿಂದಿನ ನಗರವಲ್ಲ. ಕೆಲವು ಬಾರಿಯಂತೂ ಎಲ್ಲೋ ವಿಜಾಪುರ-ಬಾಗಲಕೋಟೆಗಳಲ್ಲಿದ್ದಂತೆ ಭಾಸವಾಗುತ್ತದೆ. ವಿಧಾನಸೌಧದಿಂದ ವಿನ್ಸೆಂಟ್ ಗ್ರೇವ್‍ಯಾರ್ಡ್ ವರೆಗೂ, ಕೋರಮಂಡಲದಿಂದ ನೆಲಮಂಗಲದವರೆಗೂ ಎಲ್ಲಿ ನೋಡಿದರಲ್ಲಿ ಕನ್ನಡಿಗರು. ತೆಲಗು, ತಮಿಳರ ಪಾರಮ್ಯ ಮೊದಲಿನಷ್ಟಿಲ್ಲ. ಇದರಲ್ಲಿ 60% ಕನ್ನಡಿಗರು ಬರೀ ವಿಜಾಪುರ-ಬಾಗಲಕೋಟೆ, ಹೈದ್ರಾಬಾದ್ ಕನ್ನಡಿಗರೆ. ನಾವಿರುವ ರಾಜಾಜಿನಗರದಿಂದ ಎಂ.ಎಸ್. ಬಿಲ್ಡಿಂಗ್ ವರೆಗೆ ಖಾನಾವಳಿಗಳದ್ದೆ ಕಾರುಬಾರು.
ಈ ತಿಂಗಳ 12 ರಿಂದ 22 ರವರೆಗೆ ನನ್ನ ಬೆಂಗಳೂರು ಬದುಕೊಂದು ವಿಚಿತ್ರ ಅನುಭವಗಳ ಕಲಸು ಮೇಲೋಗರ. ಪುಸ್ತಕಗಳ ಮಳಿಗೆಗಳಲ್ಲಿ ‘ಕಾವ್ಯಕ್ಕೆ ಉರುಳು’ ತಣ್ಣಗೆ ತನ್ನ ಮೂರನೇ ಸುತ್ತಿನ ಮಾರಾಟ ಮುಗಿಸಿಕೊಂಡಿದೆ. ನನ್ನ ಒಟ್ಟು 19 ಶಿರ್ಷಿಕೆಗಳು ಈ ಬದುಕು ಸಂಭ್ರಮವಾಗಿಸುವಷ್ಟು ಸುಂದರವಾಗಿ ಓಡುತ್ತಿವೆ. ಸಿದ್ಧಲಿಂಗಯ್ಯನವರ ಮನೆಯ ಮಗಳಾಗಿ ತನ್ನ ಎದೆಯ ನೋವ ಬಿಚ್ಚಿಕೊಳ್ಳುತ್ತ ಸಮಾಧಾನವಾಗಿ ಬರುತ್ತಿದ್ದಾಳೆ ನನ್ನ ಸಾಕಿ, ಅವಳಿಗಾಗಿ ರಾಜಭವನವೇ ಸಿದ್ಧಗೊಳ್ಳುವುದೆನೊ! ಓಶೋ ಬರುತ್ತಿದ್ದಾನೆ ಹೊಸ ವಿನ್ಯಾಸದಲ್ಲಿ.
ಸಂಕೀರ್ಣ ಅನುಭವಗಳ ಗುರುವಿನಂತೆ ನಿಂತು ಪಾಠ ಕಲಿಸಿದ 2014 ಕೊನೆಯ ಘಟ್ಟದಲ್ಲಿದೆ. ಇಲ್ಲಿ ಕರಗಿದುದಕ್ಕೆ ಬೇಸರವಿಲ್ಲ, ಬೇರಾದುದಕೆ ಶಾಪವೂ ಇಲ್ಲ, ನನ್ನ ಪ್ರಾಮಾಣಿಕ ಯತ್ನಗಳ ಸಂತೃಪ್ತಿಯೊಂದಿಗೆ ದಿನಾಂಕ:12/10/2014 ರಂದು ರಾಜಕುಮಾರ ಸಮಾಧಿಯ ಮುಂದೆ ಕೈ ಮುಗಿದು ನಿಂತಾಗ, ಅವರ ಇಷ್ಟದ ಪದ್ಯ
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
ರಾಜಕುಮಾರರ ಸಮಕಾಲೀನ ಇನ್ನೊಬ್ಬ ಪ್ರತಿಭಾವಂತ ಕನ್ನಡದ ಕೊನೆಯ ಹಿರಿಯ ನಟ ರಾಜೇಶ, ಅರ್ಜುನ ಮತ್ತು ಧೃವಸರ್ಜಾ ಅವರ ಮಾವ. ನನ್ನ ಸಾಹಿತ್ಯ ಪ್ರೇಮಿ. ಅವರು ಕಾಂಪ್ಲಿಮೆಂಟ್ರಿ ಓದುಗರಲ್ಲ. ತಿರುಗಾಡಿ ಪುಸ್ತಕ ಸಂಗ್ರಹಿಸಿದವರು. ಇಷ್ಟಪಟ್ಟವರಿಗೆ ಹುಡುಕಾಡಿ ಫೋನಾಯಿಸಿದವರು. ಕಳೆದ ಮೂರು ತಿಂಗಳಲ್ಲಿ ಅವರಿಗೆಲ್ಲೊ ನನ್ನ ಗಾಂಧಿ ಸಿಕ್ಕುಬಿಟ್ಟ, ಹೀಗೆ ನನ್ನನ್ನೊಯ್ದು ಅವರಿಗೆ ಕೊಟ್ಟುಬಿಟ್ಟ. ಈಗ ಅವರ ಫೋನು, ಮಾತು ನನ್ನ ನಿತ್ಯ ಕರ್ಮಗಳಲ್ಲಿ ಒಂದು.
21 ರಂದು ಅರ್ಜುನ ಸರ್ಜಾರ ‘ಅಭಿಮನ್ಯು’ ಮಾರುಕಟ್ಟೆಗೆ ಬರುವ ಸಡಗರ ಅವರ ಮನೆಯಲ್ಲಿದ್ದಾಗಲೂ ದಿನಾಂಕ 20 ರಂದು ನಾನು ಅವರೊಂದಿಗೆ ಇರಲೇಬೇಕು ಎಂದು ಪ್ರೀತಿಯ ಹಠಕ್ಕೆ ಬಿದ್ದವರು ಈ ಹಿರಿಯ ಜೀವ ರಾಜೇಶ. ಅದೇ ದಿನ ಇತ್ತ ಪೂರ್ವ ಚರ್ಚೆಗಾಗಿ ರಾಜಭವನಕ್ಕೆ ಹೋಗಬೇಕಾದ ಒತ್ತಡ. ಎರಡೂ ಪ್ರೀತಿ-ಗೌರವಗಳೇ. ಹ್ಯಾಗೋ ಎರಡಕ್ಕೂ ಅವಕಾಶ ಮಾಡಿಕೊಂಡೆ. ಗೆಳೆಯ ಶಂಕರ ಹೂಗಾರರ ಸಾರಥ್ಯದಲ್ಲಿ ವಿದ್ಯಾರಣ್ಯಪುರಂದ ಅವರ ಮನೆಯಲ್ಲಿ ಎರಡು ಗಂಟೆಗಳ ಚರ್ಚೆ, ಚರ್ಚೆ ಮತ್ತೂ ಚರ್ಚೆ. ಇಂಥ ಪ್ರೀತಿಯ ಸರಳ ನಟನೊಬ್ಬನನ್ನು ನಾನು ನೋಡಿಯೇ ಇಲ್ಲ ಎನ್ನಬೇಕು. ಅಬುದಾಬಿಯಿಂದ ಮಗಳು ತಂದ ಒಂದು ವ್ಯಾನಿಟಿ ಬ್ಯಾಗ್‍ನ್ನು ನನ್ನ ಮಡದಿಗೆ ಕಾಣಿಕೆಯಾಗಿ ನೀಡಿ, ಹಳೆಯ ಆ -          
ರವಿ ವರ್ಮನಾ, ಕುಂಚದಾ,
ಕಲೆ ಬಲೆ ಸಾಕಾರವೂ
ಗೀತೆಯನ್ನು ಹಾಡಿ ಅವರು ನಮ್ಮನ್ನು ಬೀಳ್ಕೊಡಲಿಲ್ಲ, ಬದಲಾಗಿ ತಮ್ಮ ಕುಟುಂಬದಲ್ಲಿ ಸ್ಥಾಪಿಸಿಕೊಂಡರು.
ವಿದ್ಯಾರಣ್ಯಪುರಂದಿಂದ ನೇರ ರಾಜಭವನಕ್ಕೆ ಅಲ್ಲಿ ಒಂದು ಗಂಟೆಯ ಚರ್ಚೆ, ಮುಂದಿನ ಸ್ವಾತಂತ್ರೋಧ್ಯಾನದ ಎದುರುಗಡೆಯ ನಮ್ಮ ಯುಜಿಸಿ ಕಛೇರಿಯಲ್ಲಿ ಮಹತ್ವದ ಸಭೆ, ರಾತ್ರಿ ಧಾರವಾಡದತ್ತ ಪ್ರವಾಸ, ‘ಬರೀ ಇದನ್ನೇ ಮಾಡುತ್ತೀರೋ? ಗಂಭೀರವಾದುದೇನಾದರೂ ಬರಿಯುತ್ತಿರೊ?’ ಅದೃಶ್ಯ ಗೆಳತಿಯ ಅಪರೂಪದ ಪ್ರಶ್ನಾರ್ಥಕ ಎಸ್‍ಎಂಎಸ್ ಎಚ್ಚರಿಕೆ ಒಂದುಕಡೆ, ‘ಯಾವುದಕ್ಕೂ ಚಿಂತಿಸಬೇಕಿಲ್ಲ ರಾಗಂ, ನಿಮ್ಮ ದಾರಿ ಸರಿಯಾಗಿದೆ, ಹೀಗೆಯೇ ಬೆಳೆಯುತ್ತೀರಿ, ದೈತ್ಯ ಪ್ರತಿಭೆ ಶುಕ್ರಾಚಾರ್ಯನಂತೆ’ ಎಂದು ಗುರುಗಳೊಬ್ಬರ ಆಶೀರ್ವಾದ ಮತ್ತೊಂದು ಕಡೆ.
 ಯಾವುದಕ್ಕೆ ಬಾಗಲಿ? ಮತ್ತ್ಯಾವುದಕ್ಕೆ ಎದೆಯುಬ್ಬಿಸಲಿ? ಸಾವಿರ ಸಾವಿರ ಕನಸು ಹೊತ್ತುಕೊಂಡು ಹೋಗುವಾಗ ಸಹಾಯ ಕೇಳಿ ನಿಮ್ಮ ದೈವಗಳನಲ್ಲದೆ ಇನ್ನ್ಯಾರಿಗೆ ಕೇಳಲಿ?
ಕ್ಷಮಿಸಿ, ನನ್ನ ಬದುಕೆಲ್ಲವೂ ಕವಿ ಸಮಯವೆ. ಇದೆ ತಿಂಗಳು 26 ಮತ್ತು 29 ರಂದು ಬೆಂಗಳೂರಿನ ಎರಡು ಮಹತ್ವದ ಕಾವ್ಯ ಸಂಜೆಗಳಲ್ಲಿ ನನ್ನ ಕವಿತೆಯೊಂದಿಗೆ ನಿಲ್ಲುತ್ತಿದ್ದೇನೆ. ಕನಸಿದ್ದವರು ಕೇಳಲು ಬನ್ನಿ. ಈಗ ನನ್ನೊಂದಿಗೆ ಕವಿತೆಯಾಗಿಯೇ ಅರಳಿದ ಕೂಸೊಂದರ ಕವಿತೆ ಹಂಚಿಕೊಳ್ಳೊಣ ಬನ್ನಿ –
 ಅರಳುವ ಹೂವಿಗೆ ದುಂಬಿಯ ಒಲವು
ಮೋಹದ ಮೀನಿಗೆ ನೀರಿನ ಒಲವು
ಬಾನಾಡಿಗೆ ಬಾನಿನ ಒಲವು
ನಲಿವ ಬಳ್ಳಿಗೆ ಗಾಳಿಯ ಒಲವು
ಒಡಲ ನೋವಿಗೆ ಹಾಡಿನ ಒಲವು
ಕಡಲಿನ ತೀರಕೆ ತೆರೆಯ ಒಲವು
ಕುಣಿಯುವ ನವಿಲಿಗೆ ಗಿರಿಯ ಒಲವು
ನನ್ನೆದೆ ಭಾವಕೆ ನಿನ್ನಯ ಒಲವು
                                                                       -   ನೀತು

Thursday, October 16, 2014

ಹಾಡು ಹಳೆಯದಾಗುವುದಿಲ್ಲ, ನೆನಪು ಅಂದಗೆಡುವುದಿಲ್ಲ



      ದಿನಾಂಕ: 14/10/2014 ರ ಮಂಗಳವಾರ, ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಮತ್ತು ನಿರ್ದೇಶಕರು ಅಪರಾಹ್ನ 04 ರಿಂದ 05 ವರೆಗೆ, ಕಾಲೇಜು ಶಿಕ್ಷಣ ಇಲಾಖೆಯ, ಜ್ಞಾನತರಂಗ ವಾಹಿನಿ ಮೂಲಕ, ಎಜುಸ್ಯಾಟ್ ಆರ್‍ಓಟಿ ಸೌಲಭ್ಯ ಇರುವ ಎಲ್ಲ ಸರಕಾರಿ 411 ಪ್ರಥಮ ದರ್ಜೆ ಕಾಲೇಜುಗಳಿಗೆ, ಯುಜಿಸಿ ಯ 2(ಎಫ್) ಮತ್ತು 12(ಬಿ) ಮಾನ್ಯತೆಗಳ ಮೂಲಕ, ಧನಸಹಾಯ ಆಯೋಗವು ಒದಗಿಸುವ ಸೌಲಭ್ಯಗಳನ್ನು ಪಡೆಯುವ ರೀತಿಯನ್ನು ಕುರಿತು ನೀವು ಒಂದು ಗಂಟೆಯ ಸಂವಾದವನ್ನು ಮಾಡಬೇಕು ಎಂದು ಆದೇಶಿಸಿದಾಗ ನನಗೆ ಒಂದು ಕ್ಷಣ ತಬ್ಬಿಬ್ಬು.
    ಮನಸ್ಸು ಬೇಲೂರಿನ ದಿನಗಳತ್ತ ಹೊರಳಿ ನೋಡಿತು. ನಮ್ಮ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಉಪನ್ಯಾಸಕ ಗೆಳೆಯರೊಂದಿಗೆ ಕೂಡಿ ಎಜುಸ್ಯಾಟ್ ಮೂಲಕ ಆಯುಕ್ತರು ಮತ್ತು ನಿರ್ದೇಶಕರು ಮಾತನಾಡುವಾಗಲೆಲ್ಲ ಪಕ್ಕದ ನನ್ನ ಗೆಳೆಯರಿಗೆ ಹೇಳುತ್ತಿದ್ದೆ, ‘ನಾನೊಂದು ದಿನ ಅಲ್ಲಿ ಕುಳಿತು ಮಾತನಾಡುತ್ತೇನೆ, ನಿವು ಇಲ್ಲಿಯೇ ಕುಳಿತು ನೋಡುತ್ತಿರುತ್ತೀರಿ,’ ತಿರುಕನ ಕನಸೆಂದು ಅವರು ಖೊಳ್ಳೆಂದು ನಕ್ಕು ಚಹಾ ಕುಡಿಯಲು ಕರೆದೊಯ್ಯುತ್ತಿದ್ದರು. ಗತಿ ಕಾಣದ ನಾನು ಅದೇ ಬೇಸರದಲ್ಲಿ ರಾಯರ ಮೊರೆ ಹೊಕ್ಕು ಮೌನವಾಗುತ್ತಿದ್ದೆ. ಇಂದು ಆ ಅವಕಾಶ ಬಂದು, ರಾಜ್ಯದ 411 ಕಾಲೇಜುಗಳ 5 ಲಕ್ಷ ವಿದ್ಯಾರ್ಥಿ ಸಮುದಾಯದ, ಯುಜಿಸಿ ವಿಭಾಗದ ಸಮನ್ವಯ ಅಧಿಕಾರಿಯಾಗಿ ಮಾತನಾಡುವ ಅವಕಾಶ ಬಂದಾಗ ಯಾರ ಸ್ಮರಿಸಬೇಕು? ಯಾರಿಗೆ ಋಣಿಯಾಗಬೇಕು? ಯಾರಿಗೆ ಶಿರಬಾಗಬೇಕು? ಎನ್ನುವಾಗ ಬಸವಣ್ಣನ ಸಾಲೊಂದು ತಲೆಯಲ್ಲಿ ಸುತ್ತುತ್ತಿತ್ತು –
ಬಾಗಿದ ತಲೆಯ
ಮುಗಿದ ಕೈಯಾಗಿರಿಸು
ಕೂಡಲಸಂಗಮದೇವಾ
    ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಮಾನ್ಯ ಆಯುಕ್ತರ ಹಾಗೂ ನಿರ್ದೇಶಕರ ವಿಶೇಷ ಕಾಳಜಿಯಿಂದ, ಯುಜಿಸಿ ಸೆಲ್ ಪ್ರಾರಂಭವಾಗಿ, ನಾನು ಘಟಕದ ಸಂಯೋಜನಾಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದು, ಕಾಲೇಜುಗಳು 2(ಎಫ್) ಮತ್ತು 12(ಬಿ) ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕುರಿತು ವಿಷಧವಾಗಿ ತಿಳಿಸಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಮಾಹಿತಿಯನ್ನು ಪಡೆಯಲು www.ugc.ac.in ವೆಬ್‍ಸೈಟ್‍ನ್ನು ಸಂಪರ್ಕಿಸಲು ತಿಳಿಸಿದೆ. ಇದರೊಂದಿಗೆ ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಹೊಂದಿದ್ದರೆ ಕಾ.ಶಿ.ಇಲಾಖೆಯ ಇಮೇಲ್: ugccell2014@gmail.com ಗೆ ಸಂಪರ್ಕಿಸಲು ತಿಳಿಸಿದೆ.
  ಒಂದು ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ, “ಜ್ಞಾನ-ವಿಜ್ಞಾನ ವಿಮುಕ್ತಯೆ” ಎನ್ನುವ ಧ್ಯೇಯ ವಾಖ್ಯದೊಂದಿಗೆ, 28 ಡಿಸೆಂಬರ್ 1953 ರಲ್ಲಿ ಪ್ರಾರಂಭವಾದ ಯುಜಿಸಿಯು ಡಿಪಾರ್ಟ್‍ಮೆಂಟ್ ಆಫ್ ಹೈಯರ್ ಎಜುಕೇಷನ್ ಹಾಗೂ ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋಸ್ ಡೆವಲಪ್‍ಮೆಂಟ್ ಇಲಾಖೆಗಳ ಸಹಯೋಗತ್ವದಲ್ಲಿ ಸಾಗಿ ಬಂದು, ಕೋಆರ್ಡಿನೇಷನ್, ಡಿಟರ್ಮಿನೇಷನ್ ಹಾಗೂ ಮೆಂಟೇನನ್ಸ್ ಎಂಬ ವಿಚಾರಗಳನ್ನು ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಿತು ಎಂಬುದನ್ನೂ ವಿವರಿಸಿದೆ.
       ದೇಶದ ಆರು ಪ್ರಮುಖ ನಗರಗಳಾದ ಪುಣೆ, ಭೂಪಾಲ, ಕಲ್ಕತ್ತಾ, ಹೈದ್ರಾಬಾದ್ ಹಾಗೂ ಬೆಂಗಳೂರುಗಳಲ್ಲಿರುವ ಯುಜಿಸಿಯ ಉಪಶಾಖೆಗಳ ಮೂಲಕ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿರುವ ಮೂರು ಕಛೇರಿಗಳ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು, 28 ಡಿಸೆಂಬರ್ 2002 ರಲ್ಲಿ ಅದು ಹೇಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು ಎಂಬುದನ್ನು ತಿಳಿಸಿದೆ.
      21 ನೇ ಶತಮಾನದಲ್ಲಿ ಶಿಕ್ಷಣರಂಗದಲ್ಲಿ ಆಗುತ್ತಿರುವ ಮಹತ್ವದ ಬೆಳವಣಿಗೆಗಳನ್ನು ಗಮನಿಸಿ, ಯುಜಿಸಿಯು ತನ್ನ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎನ್ನುವ ವಿಚಾರವನ್ನು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಪಡಿಸಿ, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್‍ನನ್ನು ಯುನಿವರ್ಸಿಟಿ ಎಜುಕೇಷನ್ ಡೆವಲಪ್‍ಮೆಂಟ್ ಕಮಿಷನ್ ಎಂದು ಪರಿವರ್ತಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹೀಗೆ ಇಲಾಖೆಯ ಇತಿಹಾಸ ದೊಡ್ಡದು, ಈಗ ವಿಭಾಗದ ಇತಿಹಾಸ ರಚಿಸಬೇಕಾದ ಜವಾಬ್ದಾರಿ ನನ್ನದು.
       ಇಷ್ಟು ತಿಳಿಸಿ, ಸ್ಟುಡಿಯೋದಿಂದ ಹೊರಬಂದಾಗ 90 ಕರೆಗಳು ಹಾಗೂ 19 ಪ್ರಶ್ನೆಗಳು. ಒಂದು ಗಂಟೆಯ ಸ್ಟುಡಿಯೋ ಅನುಭವ, ಹೀಗೆ ನಮ್ಮನ್ನು ಜನಮುಖಿಯಾಗಿಸುವುದಾದರೆ ಮುಂದೊಮ್ಮೆ ಬದುಕೇ ಸ್ಟುಡಿಯೋದಲ್ಲಿ ಕಳೆಯುವುದಾದರೆ ನನ್ನ ಗತಿ ಏನು? ಅಬ್ಬಾ, ಕಲ್ಪನೆಗೂ ಬೇಡ. 
    ಈ ದಿನದ ವಿಶೇಷತೆಯೇ ವಿಶೇಷತೆ. ನಾನೊಂದೆಡೆ ಹೀಗೆ ಹೊರಟರೆ, ಇನ್ನೊಂದೆಡೆ ಪ್ರೀತಿಯ ಪದ್ದಿ ಇಂದಿನಿಂದ ಎನ್.ಹೆಚ್.ಆರ್.ಸಿಗೆ. ದೇವರೆ ಒಂದು ಅವಕಾಶ ನೀಡು ಎಂದು ಮೊರೆ ಹೊಕ್ಕಾಗ ಕೆ.ಎಚ್.ಆರ್.ಸಿಗೆ ತಂದಿಟ್ಟವ ಮೂರೇ ತಿಂಗಳಲ್ಲಿ ಎನ್.ಹೆಚ್.ಆರ್.ಸಿಯ ಬಾಗಿಲಲ್ಲಿ ನಿಲ್ಲಿಸಿದಾಗ ಹೇಗಂತ ಅರಗಿಸಿಕೊಳ್ಳುವುದು? ಏನಂತ ದೈವಕ್ಕೆ ಧನ್ಯವಾದ ಹೇಳುವುದು?
       ಮನೆಗೆ ಹೊರಟಾಗ ನಮ್ಮ ಇಲಾಖೆಯ ಎಡಬದಿಯಲ್ಲಿರುವ ರಾಜ್ಯ ಸಿಐಡಿ ಕಛೇರಿಯಲ್ಲಿ ಶಿಷ್ಯರ ಬಳಗೊಂದು ಕಾಯುತ್ತಿತ್ತು. ಪೋಲಿಸ್ ಅಧಿಕಾರಿಗಳಾಗಿ(ಪಿಎಸ್‍ಐ) ಅನೇಕ ಕಡೆ ಕೆಲಸ ಮಾಡುತ್ತಿರುವ ಇವರೆಲ್ಲ ಸಿಐಡಿ ಕಛೇರಿಯಲ್ಲಿ ನಾಲ್ಕು ದಿನದ ಸೈಬರ್ ಕ್ರೈಂ ಕುರಿತಾದ ತರಬೇತಿಗಾಗಿ ಬಂದಿದ್ದರು. ಇವರೆಲ್ಲರ ಮುಖಂಡ ನನ್ನ ಪರಮ ಶಿಷ್ಯ ಪ್ರಭುಲಿಂಗಯ್ಯ. ಗುಳೇದಗುಡ್ಡದಲ್ಲಿ ವಾರನ್ನ ಉಂಡು ಬೆಳೆದ ಬಡವರ ಕುಡಿ. ಶಿಷ್ಯಳೊಬ್ಬಳು ಆನಂದರಾವ್ ಸರ್ಕಲ್‍ದಲ್ಲಿ ಕಾಯುತ್ತಿದ್ದಳು. ಇದೇ ದಿನ ಎಕ್ಸ್‍ಸೈಜ್ ಇಲಾಖೆಯ ಅಂತಿಮ ಸುತ್ತಿನ ಸರ್ಟಿಫಿಕೇಟ್ ವೆರಿಫಿಕೇಷನ್ ಮುಗಿಸಿಕೊಂಡುಬಂದ ಅವಳಿಗೆ ಸ್ವರ್ಗ ಮೂರೇ ಗೇಣು. ಖುಷಿಯಾಗುತ್ತದೆ, ಬಿಸಿಲು ನಾಡಿನ ಬಸವಳಿದ ಬದುಕುಗಳು ಎದೆಯ ತುಂಬ ಭರವಸೆಯ ಬೆಳಕು ತುಂಬಿಕೊಂಡು ಕುಣಿಯುವಾಗ ನನಗೆ ಕೃಷ್ಣನ ಗೋಕುಲಾಷ್ಠಮಿ ನೆನಪಾಗುತ್ತದೆ. 
  ಮನೆಗೆ ಬಂದಾಗ ನಮಗಿಬ್ಬರಿಗೂ ಅತಿಯಾದ ಆನಂದದಿಂದ ಬಂದ ಮೈ-ಕೈ ನೋವು. ಏನೂ ತಿನ್ನಬೇಕೆನ್ನುವ, ಕುಡಿಯಬೇಕೆನ್ನುವ ವಾಂಛೆಗಳಿಲ್ಲ. ಸಾಯಂಕಾಲದ ಚಹಾ ಕೂಡ ಬೇಡವಾಗಿತ್ತು ಬಾಯಿಗೆ. ಮಧ್ಯ ರಾತ್ರಿಯೂ ನಿದ್ದೆಯಿಂದೆದ್ದು ಚಹಾ ಕುಡಿದು ಮಲಗುವ ನನಗೆ ಚಹಾ ಬೇಡಾಯಿತೆಂದರೆ! ಆಕೆಗೆ ಹೇಳಿದೆ, ಈ ಬೆಂಗಳೂರಿನಲ್ಲಿ ಅಪರೂಪಕ್ಕೆ ಈ ಬೇಸರ ಬಂದಿದೆ. ಅದರೊಂದಿಗೂ ಒಂದಿಷ್ಟು ಮಾತನಾಡೋಣ, ತಲೆ ಕೆನ್ನೆ ನೇವರಿಸಿ ಸಂತೈಸೋಣ. 4 ತಿಂಗಳಾಯಿತು ನಾವಿಬ್ಬರೂ ಹೀಗೆ ಕುಳಿತು. ಬೇಲೂರಿನಲ್ಲಿದ್ದಾಗ ಬೇಸರಕ್ಕೆ ಎಷ್ಟೊಂದು ಬಳಗ. ಅತ್ತ ಹೋದರೆ ಮಲಯಮಾರುತ, ಇತ್ತ ಚಾಚಿದರೆ ಚನ್ನರಾಯಪಟ್ಟಣ-ಚಂದ್ರಗಿರಿಬೆಟ್ಟ. ಮಧ್ಯ ನಾದವಾಗಿ ನಮ್ಮ ಮೇಹಂದಿ ಹಸನ್. ಈ ಬದುಕಿನಲ್ಲಿ ಹಾಡು ಎಂದೂ ಹಳೆಯದಾಗುವುದಿಲ್ಲ, ಸುಂದರ ನೆನಪುಗಳು ಎಂದೂ ಅಂದಗೆಡುವುದಿಲ್ಲ. ಅಲ್ಲವೆ?