Total Pageviews

Wednesday, March 25, 2015

ಯುಗಾದಿಯ ಸಿರಿ, ಗಾಂಧಿಗೊಂದು ಗರಿ

ನಾ
ಅಚ್ಚರಿಗಳ ನಂಬಿದವನಲ್ಲ
ನಂಬುಗೆಯ ಮರನೆಟ್ಟು
ಮೈ ಚೆಲ್ಲಿದವನು.
 ಎಲ್ಲ ಬಲಗಳಿಗೂ ಮೀರಿದ ಬಲ ಆತ್ಮಬಲಇವು ಸದಾ ನನ್ನ ತಂದೆ ಬಾಲ್ಯದಲ್ಲಿ ಹೇಳುತ್ತಿದ್ದ ಮಾತು. ಅನಕ್ಷರಿಯಾಗಿದ್ದ ನನ್ನ ದೊಡ್ಡಪ್ಪ ಇದನ್ನುಸುಕ್ರುತ್ಎನ್ನುತ್ತಿದ್ದ. ನಮ್ಮ ದೇಶದ ಆಧ್ಯಾತ್ಮ ಪರಂಪರೆ ಇದನ್ನೇಪುಣ್ಯ ಎಂದಿತೇನೊ. ತಾತ್ಪರ್ಯವಿಷ್ಟೆ ಒಳ್ಳೆಯ ಕಾರ್ಯ ಅರ್ಥಾತ್ ಸುಕೃತ್ಯ.
ಯುಗಾದಿ ಎಂದರೆ ಏನಿರಬಹುದು? ಎಂದು ಪ್ರಶ್ನಿಸಿಕೊಂಡಾಗ ಮೇಲಿನ ಮಾತುಗಳ ಮಾಧುರ್ಯ ಮನಸ್ಸಿನಿಂದ ಹೊರಟಿದ್ದು. ಯುಗಾದಿ ಒಂದು ಪವಾಡದಂತೆ ನಮ್ಮ ಕಣ್ಮುಂದೆ ನಡೆಯುತ್ತದೆ. ಆದರೆ ಪವಾಡವಲ್ಲ. ನಮ್ಮ ಕಣ್ಣುಗಳಿಗೆ ಹೂ-ಹಸಿರು-ಹರುಷದ ಅಚ್ಚರಿಯನ್ನು ತುಂಬುತ್ತದೆ, ಆದರೆ ಅಚ್ಚರಿಯಲ್ಲ. ಇದೊಂದು ನಂಬುಗೆಯ ದೊಡ್ಡ ಸರಣಿಯಂತೆ ಕಾಣಿಸುತ್ತದೆ ನನಗೆ. ಮಣ್ಣೊಳಗೆ ತಣ್ಣಗೆ ಮಲಗಿದ ಬೀಜ, ಟಣ್ಣನೆ ಮೇಲೆದ್ದು ಪಂಚಭೂತಗಳ ತುಂಬಿಸಿಕೊಂಡು ಬೆಳೆದು ವಿಸ್ತಾರಗೊಂಡು, ಹಳೆಯದನ್ನು ಕಳೆದುಕೊಂಡು ಹೊಸದಾಗಲು ಹಂಬಲಿಸುವ ನಂಬುಗೆಯ ಪ್ರಕ್ರಿಯೆ ಯುಗಾದಿ. ಆತ್ಮೋನ್ನತಿಯ ಹಾದಿ.
ನನ್ನ ಜೀವನದ ಬಂಡಿಯನ್ನು ಇಲ್ಲಿ ತಂದು ನಿಲ್ಲಿಸಿದ ನಿಮಗೆಲ್ಲ ಯುಗಾದಿಯ ಶುಭಾಷಯಗಳು.
ಮರೆಯುವ ಮುನ್ನ. ಹೊಸತಿನ ಬಾಗಿಲಲ್ಲಿ ಹರುಷದ ಒಂದು ವಿಚಾರ. ಈಗ ನನ್ನ ಗಾಂಧಿಗೊಂದು ಗರಿ. 2013 ರಲ್ಲಿ ಪ್ರಕಟವಾದಗಾಂಧಿ: ಮುಗಿಯದ ಅಧ್ಯಾಯಕ್ಕೆ ಡಾ. ಡಿ.ಎಸ್ ಕರ್ಕಿ ಪ್ರಶಸ್ತಿ. ಮೂರು ಮಹಂತರ (ಡಾ.ಶಿವಬಸವ ಸ್ವಾಮಿ, ಶ್ರೀ ಮುರುಗೇಂದ್ರ ಶಿವಯೋಗಿಗಳು ಮತ್ತು ಡಾ. ಡಿ.ಎಸ್.ಕರ್ಕಿ) ಹುಟ್ಟೂರಾದ ಬಾಗೋಜಿಕೊಪ್ಪದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಮ್ಮ ಶುಭಹಾರೈಕೆಗಳು ನನ್ನೊಂದಿಗಿರುತ್ತವೆಂದು ಆಶಿಸುತ್ತೇನೆ.
ಅಂದಹಾಗೆ, ಇದು ಗಾಂಧಿ ಎಂಬ ಶಬ್ಧಕ್ಕೆ ಸಿಕ್ಕ ಸನ್ಮಾನ, ಅದಕ್ಕಿರುವ ಶಕ್ತಿ. ಬದುಕಿದ್ದಾಗಲು ಮತ್ತು ಬದುಕಿನ ನಂತರವೂ ಆತ ಒಂದು ಪವಿತ್ರ ಗಾಳಿ. ಆತ ಸೋಕಿದ ದೇಹಗಳೆಲ್ಲ ಒಂದರ್ಥದಲ್ಲಿ ಪಾಪ ಮುಕ್ತವೆ.
ಶನಿವಾರ ರಾತ್ರಿ ಬಾದಾಮಿ ಸಮಾರಂಬವನ್ನು ಮುಗಿಸಿ ನಿರಂತರವಾಗಿ ಬೆಂಗಳೂರಿಗೆ ಬಂದ ನಾವು, ರವಿವಾರ ಸಾಯಂಕಾಲ 5.30 ಕ್ಕೆ ಸಂಜಯನಗರದ, ರಘೋತ್ತಮ ಸ್ಮಾರಕ ಸಭಾಭವನದಲ್ಲಿರಬೇಕಾಗಿತ್ತು. ವಚನ ಸಾಹಿತ್ಯವನ್ನು ಕುರಿತು ಮಾತನಾಡಬೇಕಾಗಿದ್ದ ನನ್ನೊಂದಿಗೆ ವೇದಿಕೆಯ ಮೇಲಿದ್ದವರು ಬೆಂಗಳೂರಿನ ಗವಿಮಠದ ಶ್ರೀ ಶಾಂತಮುನಿ ಶಿಬಾಚಾರ್ಯರು, ಕಲ್ಪನಾ ಶಾಸ್ತ್ರಿ, ಬಿ.ಸಿ ಸುಧೀರ, ಶ್ರೀ ಬಿ.ಎಸ್.ಯೋಗೀಶ, ಶ್ರೀಮತಿ ಜಯಂತಿ ಹಾಗೂ ಅನೇಕರು. ಸಾಯಂಕಾಲ ಆರು ಗಂಟೆಗೆ ಪ್ರಾರಂಭವಾಗಿ ರಾತ್ರಿ ಹತ್ತರವರೆಗೆ ನಡೆದ ಸಮಾರಂಭದಲ್ಲಿ ಅಪರೂಪಕ್ಕೆ ಸಿಕ್ಕವರು ಶ್ರೇಷ್ಠ ಆಂಗ್ಲ ಬರಹಗಾರ ಮತ್ತು ಎಂ.ಎಲ್.ಸಿಯಾಗಿದ್ದ ದಿವಂಗತ ಬಿ.ಎಸ್.ಗಣಾಚಾರಿಯವರ ಸುಪುತ್ರ. ಅವರೀಗ ಬೆಂಗಳೂರಿನ ಶ್ರೇಷ್ಠ ಕಾನೂನು ತಜ್ಞ.
ನಮ್ಮ ವಚನ ಸಾಹಿತ್ಯ ಕುರಿತು ಆಧುನಿಕ ಆಲೋಚನಾ ಕ್ರಮ ಅವಶ್ಯ ಎನ್ನುವುದು ನನ್ನ ಅಂದಿನ ವಾದ. ಕಾಲಕ್ಕೆ ಅನ್ವಯಿಸುವ ಉಪಕ್ರಮ ನಮಗೆ ಬೇಕಾಗಿದೆ. “ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ, ಶರೀರದೊಳಗೆ ಆತ್ಮನ ಯಾರೂ ಕಾಣದಂತಿರಿಸಿದೆ.” ಎನ್ನುವ ದಾಸಿಮಯ್ಯನ ಸಾಲು ಓದಿದಾಗ ನಾನು ಕೇಳಿಕೊಂಡ ಪ್ರಶ್ನೆ, ‘ಇಷ್ಟೊಂದು ಲೋಕದ ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ರಚನೆಯಾದ ಬೇರೊಂದು ಸಾಹಿತ್ಯ ಪ್ರಪಂಚದಲ್ಲಿದೆಯೇ? ಇರಬಹುದೆನೊ. ಆದರೆ ನಾ ಕಂಡ ಪ್ರಪಂಚದಲ್ಲಿ ಮಾತ್ರ ಇಲ್ಲ. ಆದರೆ ನನ್ನ ವ್ಯಾಪ್ತಿಯ ಪ್ರಪಂಚವೆ ಒಂದು ಶ್ರೇಷ್ಠ ಸಾಹಿತ್ಯದ ಮಿತಿಯಾಗಬೇಕಿಲ್ಲ.
ಫ್ರೆಂಚನ ಚಿಂತಕ, ನಮ್ಮ ಶ್ರೀರಾಮಕೃಷ್ಣರ ಮಹಾ ಆರಾಧಕ ಮ್ಯಾಕ್ಸ್ಮುಲ್ಲರ್ ವಚನ ಸಾಹಿತ್ಯವನ್ನು ಕುರಿತು ಅದ್ಭುತವಾಗಿ ಹೇಳಿದ್ದಾನೆ – “Whatever legend may say about Basava, the fact is fully clear that he was the first Indian free thinker. He might be called the Luther of India.”
ದೊಡ್ಡ ಮಾತು, ಆದರೆ ಯಾವ ವೈಚಾರಿಕ ಸಾಹಿತ್ಯವನ್ನು ಬೋಧಿಸುತ್ತ ಶರಣ ಚಳುವಳಿ ಬೆಳಕಿಗೆ ಬಂತೊ, ಅದೇ ಕೊನೆಗೆ ತನ್ನ ಮೆರವಣಿಗೆಯ ಮಾಯೆಗೆ ಬಲಿಯಾಯಿತು. ವೈದಿಕತೆಯ ವಿರುದ್ಧ ಸಿಡಿದೆದ್ದ ಗುಂಪು ಕಾಲಾಂತರದಲ್ಲಿ ವೈಧಿಕತೆಯ ಕರ್ಮಠತನಕ್ಕೇ ಬಲಿಯಾಯಿತು. ಶರಣರೂ ದೇವರಾದರು. ಅವರ ಸಮಾಧಿಗಳು ಹೊಟ್ಟೆಬಾಕರ ತಾಣಗಳಾದವು. ಇಂಥ ತಾಣಗಳು ಮುಂದೆ ಮಠ ಎನ್ನಿಸಿಕೊಂಡು ರಾಜಕೀಯ ಕೇಂದ್ರಗಳಾಗಿ ಪರಿವರ್ತನೆಗೊಂಡವು. ಇದು ಖೇದದ ಸಂಗತಿಯೊ, ಅಭಿಮಾನದ ಸಂಗತಿಯೊ ಕಾಲವೆ ಉತ್ತರಿಸಬೇಕು.
ನಿರಂತರ ಕಾರ್ಯಕ್ರಮಗಳ, ಮಾತು-ಹಾರ-ಚಪ್ಪಾಳೆಗಳಿಂದ ಯುಗಾದಿಯಿಂದ ಹೊರಬರಬೇಕು, ಬುದ್ಧ ಎಂಬ ಮೌನದ ಬದ್ಧತೆಗೆ ಜಾರಬೇಕು ಎಂದುಕೊಂಡು ನಾನು ಯುಗಾದಿಯ ಮುಂಜಾವು ಹೊರಬಂದರೆ ರಾಜಾಜಿನಗರದ ಬೀದಿಯೆಲ್ಲ, ಕಿಲೋಮೀಟರಗಳವರೆಗೆ ರಂಗೋಲಿಯ ಚಿತ್ತಾರ, ಮಾವು-ಬೇವುಗಳ ಸಂಭ್ರಮ, ಕಳೆದ ಎಂಟು ವರ್ಷಗಳಿಂದ ನಾ ಕಳೆದ ಯುಗಾದಿಗಳ ನೆನಪಿನ ಪುಳಕ, ಒಂದಿಷ್ಟು ಬೇಸರದ ಅಲೆ. ರಸ್ತೆ ಬದಿ ನಿಂತು ಡಬ್ಬದಂಗಡಿಯಲ್ಲಿ ಚಹಾ ಹೀರುವಾಗ ಚಿಕ್ಕವರಿದ್ದಾಗ ಯುಗಾದಿಯ ದಿನ ರತ್ನಪಕ್ಷಿಯ ತೋರಿಸುವ ಆಸೆಯಿಂದ ಹೊಲ-ಹೊಲಗಳನ್ನು ಓಡಾಡಿಸುತ್ತಿದ್ದ ನನ್ನ ತಂದೆಯ ನೆನಪು. ಎಲ್ಲವೂ ಪುಣ್ಯ, ನೆನಪುಗಳು ಪವಿತ್ರವಾಗಿದ್ದರೆ ಬದುಕೇ ಧನ್ಯ.
ಐಟಿ-ಬಿಟಿಯ ಒಂದಿಷ್ಟು ಅಪದ್ದ ಜನರನ್ನು ಬಿಟ್ಟರೆ, ಇಡೀ ಬೆಂಗಳೂರೆಂಬ ಬೆಂಗಳೂರು ಒಳಗೊಳಗೆ ಎಷ್ಟೊಂದು ಧಾರ್ಮಿಕ! ಇದು ಮಹಾ ಹಳ್ಳಿಯೆ! ಹೆಜ್ಜೆ ಹೆಜ್ಜೆಗೂ ದೇವಾಲಯ-ಜಾತ್ರೆ-ಉತ್ಸವ ಮತ್ತು ಪರಸೆ. ಜಡೆ ತುಂಬಾ ಹೂ, ಅರಿಶಿಣ-ಕುಂಕುಮದ ತಾಯಂದಿರಿಗೇನೂ ಕೊರತೆ ಇಲ್ಲ ನಾಡಿನಲ್ಲಿ.
ಹಿಂದಿನ ರಾತ್ರಿಯಿಂದ ಮರುದಿನ ಮುಂಜಾನೆ ಹತ್ತರವರೆಗೂ ಯುಗಾದಿಯ ಎಲ್ಲ ಪೂಜಾ-ಕ್ರಿಯಾ-ವಿಧಿ-ವಿಧಾನಗಳನ್ನು ಮುಗಿಸಿಕೊಂಡು ಪದ್ದಿಯ ಹೊಸ ಗಾಡಿಯ ಮೇಲೆ ಹಿಂದೆ ಕುಳಿತು ಹೊರಬಿದ್ದದ್ದು ವೈಟ್ಫೀಲ್ಡ್ ಕಡೆಗೆ. ಅವಳ ಗಾಡಿ ಹೆಬ್ಬಾಳು, ಮಾರತಹಳ್ಳಿ, ಕುಂದನಹಳ್ಳಿಗಳನ್ನು ದಾಟಿ ನಾವು ವಾಸ್ಥವ್ಯ ಹೂಡಬೇಕಾದಡ್ರೀಮ್ಮೆಡೋಸ್ದೆಡೆಗೆ ಹೊರಟಿದ್ದರೆ ನನ್ನ ಮನಸ್ಸು ಬಾಗಲಕೋಟೆ, ನರಗುಂದ, ಸಕಲೇಶಪುರ, ಚನ್ನರಾಯಪಟ್ಟಣದೆಡೆಗೆ ಹಿಮ್ಮುಖವಾಗಿ ಹರಿಯುತ್ತಿತ್ತು. ನೆನಪಿನ ಬಂಡಿ ಓಡಿಸುವುದನ್ನು ತಪ್ಪಿಸಲು ಒಂದಿಷ್ಟು ಪುಸ್ತಕ ಮತ್ತು ಬಳಗದ ಮೊರೆ ಹೊಕ್ಕೆ. ಇಂದಿನ ನಮ್ಮ ಒಂದು ದಿನದ ವಾಸ್ಥವ್ಯಕ್ಕೆ ಎಷ್ಟೊಂದು ಯೋಜನೆಗಳ ಠಿಸಿಲು.

ಸಿನಿಮಾ ಸೆಟ್ಟು ಹಾಕಿದಂತಿದ್ದ ಇಲ್ಲಿ ಕ್ಯಾಮರಾ ಹಿಡಿದುಕೊಂಡು ನಾ ಸುಮ್ಮನೆ ತಿರುಗುತ್ತಿದ್ದೆ. ಪಕ್ಕದ ಗೆಳೆಯನೊಬ್ಬ ನನಗೆ ವಿಪಶನದ ಬಗೆಗೆ ಹೇಳುತ್ತಿದ್ದ. ಮತ್ತೊಬ್ಬ ಬಂಧು ದೇಹದ ಶಕ್ತಿಯ ಕುರಿತು ವಿವರಿಸುತ್ತಿದ್ದ. ನಾನು ಮಾತ್ರ ನನ್ನ ವಿರಾಮದ ಕಟ್ಟಡದ ಚಲುವನ್ನು ಕಣ್ಣುತುಂಬಿಸಿಕೊಳ್ಳುತ್ತಿದ್ದೆ.

ನಮ್ಮೊಂದಿಗೇ ಸಂಭ್ರಮಿಸಿ ಸಣ್ಣಗಾಗುವ ಮನೆ ಇದು. ಭಗವಂತ ಅನುಗ್ರಹಿಸಿದರೆ ಕಾಡಿನೊಳಗೆ ತುಂಡು ನೆಲ ಮಾಡಿಕೊಂಡು, ಇಂಥದೊಂದು ಗೂಡು ಕಟ್ಟಿಕೊಂಡರೆ ಎಂಥ ಮನುಷ್ಯನೂ ಮಹಂತನಾಗಲಾರನೇ? ಖಂಡಿತಾ ಸಾಧ್ಯ. ಆದರೆ ಮನಸ್ಸಿನೊಳಗೆ ನಿತ್ಯ ವಸಂತ, ಆತ್ಮಕ್ಕೆ ಸದಾ ಯುಗಾದಿಯ ಹಸಿವು ಇರಬೇಕಷ್ಟೆ.