Total Pageviews

Wednesday, October 21, 2015

ಮನುಷ್ಯನೆಂಬ ಅಗ್ನಿಕುಂಡ



ಅಗಸ್ಟ್ 27 ರಂದು ನಾನು ಹುನಗುಂದದಲ್ಲಿದ್ದೆ. ರಾತ್ರಿ ಬೆಂಗಳೂರಿನಿಂದ ಹೊರಟಾಗ ನನ್ನ ಕಾಡಿದ ಹುನಗುಂದಕ್ಕೂ, ಬೆಳಗಾದರೆ ಕಂಡದ್ದಕ್ಕೂ ಎಷ್ಟೊಂದು ವ್ಯತ್ಯಾಸವಿತ್ತು. 
 ಒಂದು ಸಮಯ ಈ ಇಡೀ ಊರು ಬೋಳುಬೋಳು. ಒಂದೇ ಒಂದು ಮರ ಕಾಣುತ್ತಿರಲಿಲ್ಲ. ಬಿಸಿಲ ಸುರಿಯುವ ಊರಿನಲ್ಲಿ ಪ್ರತಿ ಮನುಷ್ಯನೂ ನಡೆದಾಡುವ ಅಗ್ನಿಕುಂಡದಂತೆಯೇ ಕಾಣುತ್ತಿದ್ದ. ಬರಗಾಲದ ತೀವ್ರತೆಯನ್ನು ಚಿತ್ರಿಸುವ ಪ್ರೊ. ಮಲ್ಲಿಕಾರ್ಜುನ ಹಿರೇಮಠರ ‘ಅಮೀನಪುರದ ಸಂತೆ’ ಇಲ್ಲಿಯೇ ರಚನೆಯಾದದ್ದು. ಗೆಳೆಯ ವೆಂಕಟಗಿರಿಯೊಂದಿಗೆ ಹತ್ತು ವರ್ಷಗಳ ಹಿಂದೆ ಒಂದು ರಾತ್ರಿ ಇಲ್ಲಿ ಬಂದು, ಇಡೀ ರಾತ್ರಿ ಬಸ್ಟ್ಯಾಂಡಲ್ಲಿ ಕುಳಿತು. ಚರಂಡಿವಾಸನೆ ಕುಡಿಯುತ್ತ, ಸೊಳ್ಳೆ ಕಚ್ಚಿಸಿಕೊಳ್ಳುತ್ತ ಒದ್ದಾಡಿ ಪರಿ ನೆನಪಿದೆ ನನಗೆ. ಆದರೆ ಈ ಸಾರಿಯ ಅನುಭವವೇ ಬೇರೆ.
  27 ರಂದು ಹುನಗುಂದ ಬಂಗ್ಲೋ ಮುಂದಿಳಿದಾಗ ಬೆಳಗಿನ 6. ಗಂಟೆ. ಸ್ವಚ್ಚ ಗಾಳಿ, ನಳನಳಿಸುವ ಬೇವಿನ ಗಿಡಗಳು. 1865ರಲ್ಲಿ  ಕಟ್ಟಲಾದ ಬ್ರಿಟಿಷ್ ಬಂಗ್ಲೋ, ಅದರ ವಿನ್ಯಾಸ, ಊರ ಮಧ್ಯದಿಂದ ಹಾಯ್ದುಕೊಂಡು ಹೋಗುವ ವಿಶಾಲ ಹೈವೇ, ಊರೊಳಗಿನ ದೊಡ್ಡ ದೊಡ್ಡ ಕ್ರಿಡಾಂಗಣಗಳು. ಅಂದು ಒಂದೇ ಊರಲ್ಲಿ ಎರಡು ಸಮಾರಂಭಗಳು. ಒಂದೆಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನನ್ನದಾದರೆ, ಇನ್ನೊಂದೆಡೆ ಖಾಸಗಿ ಸಂಸ್ಥೆಯಲ್ಲಿ ಸ್ನೇಹಿತೆ ತಮಿಳು ಸೆಲ್ವಿಯವರದು.
 ನನ್ನೊಂದಿಗೆ ವೇದಿಕೆ ಮೇಲಿದ್ದವರು ಅಲ್ಲಿಯ ಶಾಸಕ ವಿಜಯ ಕಾಶಪ್ಪನವರ, ವಿದ್ಯಾರ್ಥಿ ಮಿತ್ರ ಪ್ರೊ. ಶರಣು ಪಾಟೀಲ, ಕಾಲೇಜಿನ ಪ್ರಾಂಶುಪಾಲರು, ಊರಿನ ಪ್ರಮುಖರು ಮತ್ತು ಕಾಲೇಜು ಅಭಿವೃದ್ಧಿ ಕಮೀಟಿಯ ಸದಸ್ಯರು. ನಾನು ವರ್ತಮಾನದ ಮಾಹಿತಿ ಆಧಾರಿತ ಶಿಕ್ಷಣ ಹಾಗೂ ಭೂತದ ಜ್ಞಾನಾಧಾರಿತ ಶಿಕ್ಷಣ ಕುರಿತು ಒಂದು ಗಂಟೆ ಮಾತಾಡಿ, ಭಾರ ಇಳಿಸಿ ನಿರಾಳನಾಗಿ ಬಂಗ್ಲೋಕ್ಕೆ ಬಂದಾಗ ಲೇಖಕ ಮಿತ್ರ ಎಸ್ಕೆ ಕೊನೆಸಾಗರ ನನಗಾಗಿ ಕಾಯುತ್ತಿದ್ದರು. ಅವರ ಕೈಯಲ್ಲಿ ನನ್ನ ಪ್ರಕಟಿತ ಲೇಖನದ ಒಂದು ಪುಸ್ತಕವಿತ್ತು. ಅದ್ಯಾವಾಗ ಅವರಿಗೆ ಲೇಖನ ಕಳುಹಿಸಿದ್ದೇನೋ ಏನೊಂದೂ ನೆನಪಿರಲಿಲ್ಲ.
  ಸಾಯಂಕಾಲವಾಗುತ್ತಲೇ ಹಿರೇಬಾಗೇವಾಡಿಯ ಗುದ್ಲಿ ಕಾಯಕಯೋಗಿ ಹಾದಿಮನಿ ಬಸವಪ್ಪ ಶರಣರ ಸಮಾಧಿಯ ಸುತ್ತ ತಿರುಗಾಡಿ, ಮಧ್ಯಾಹ್ನ ನಂದವಾಡಗಿ ಅಲ್ಲಿ ಇಲ್ಲಿ ಎಂದಲೆದಾಡಿದ್ದ ದಣಿವಾರಿಸಿಕೊಂಡು ಆತ್ಮದ ತೃಷೆ ಹಿಂಗಿಸಿಕೊಳ್ಳುತ್ತಿದ್ದೆ. ಕರದಂಟಿನ ನಾಡಿನಲ್ಲಿ ನಾಲಿಗೆ ಒದ್ದೆಯಾಗಿ ಮನದ ಹಕ್ಕಿ ಹಳೆಯ ನೆನಪುಗಳ ಗುಟುಕರಿಸುತ್ತಿತ್ತು. ಮನದ ಮೂಲೆಯಲೆಲ್ಲೋ ನನ್ನ ಕವಿತೆಯ ಸಾಲುಗಳು –
 ಗೊಲ್ಲೆರಾಯ ಗುಲ್ಲೆಬ್ಬಿಸಬೇಡೊ
ನನ್ನ ಹೊಕ್ಕುಳದ ಗಲ್ಲಿ ಗಲ್ಲಿಗಳಲ್ಲಿ


Thursday, October 15, 2015

ಬಾಯಿ ಇಲ್ಲದ ಸಂಕಟವಿದು!!!



ನೀರವ ರಾತ್ರಿಗಳ ಆಳ ಕತ್ತಲೆಯಲ್ಲಿ
ನನ್ನ ಬದುಕ ಕನಸುಗಳ ಬಿಚ್ಚಿಡುವೆ ನಿನಗೆ
ನಿನ್ನ ಅಂಗೈಯಲ್ಲೇ ನಡುಗುವ ನನ್ನಾತ್ಮಕ್ಕೆ
ನಿನ್ನ ಹೆಗಲ ಹೊರೆಯಾದ ನನ್ನ ಶಿಲುಬೆಗೆ
ನೀನೊಬ್ಬನೇ ದಿಕ್ಕು ಕೊನೆಗೆ

ಬಾಳ ಸಾಧನೆಗಳೆಲ್ಲ ಒಂಟಿಯೆ
ನಡುಗುವ ಕಡು ಶೀತ-ಸಾವುಗಳ ಮಧ್ಯ, ನಡೆದವರ ಹಾಡದು
ಆತ್ಮದಗ್ನಿಯ ಎಳೆತಕ್ಕೆ ಸೆಳೆತಕ್ಕೆ ಚಾಚಿದ ಕೆನ್ನಾಲೆಗಳು
ಕಂಡವರಿಗೆ ಖುಷಿ ಕೊಟ್ಟು ನನ್ನನ್ನು ಕಲ್ಪನಾ ಲೋಕದ
ಕಡು ಸುಂದರಿಯಾಗಿಸುವುದು ಒಂದು ದುರಂತ!

ಪರಮ ರಹಸ್ಯ ಒಂದನ್ನು ಬಿಚ್ಚಿಡುವೆ ನೋಡು
ಹಾಡಾಗಿಸುತ್ತೇನೆ ಕೇಳು
ನೀನಿಚ್ಚಿಸಿದರೆ ಮಾತ್ರ ನನ್ನ ಸಮಾಧಾನಿಸಬಲ್ಲೆ
ನಿನ್ನಾಳದ ಮೌನ ಲೋಕದ ಜೋಗುಳವ ಹಾಡಿ ಅರಸಿಯಾಗಿಸಬಲ್ಲೆ
ದಟ್ಟ ಪ್ರೀತಿಯ ಕಾಡು ಕಾಡಾಗಿ ಕಾಡಿನಲಿ ಹೂವಾಗಿ ಚೆಲ್ಲಬಲ್ಲೆ
ಸತ್ಯವನ್ನು ಕುಡಿದ ನಾನು ಕನಸುಗಳಲಿ ಕೊನೆಯುಸಿರೆಳುತ್ತೇನೆ
ನಿನ್ನ ವಸಂತದ ಶುದ್ಧ, ಶಾಂತ ಸುಗಂಧದ ಹುಡಿ ನಾನು
ನನಗೆ ಗೊತ್ತು, ನಿನ್ನೆದೆಯ ಕಾರಂಜಿ ಚಿಮ್ಮಿದರೆ ಮಾತ್ರ
ತೃಷೆ ಹಿಂಗಿದ ಹೂ-ಬಳ್ಳಿಯಾಗಬಲ್ಲೆ ನಾನು

ಮರುಮಾತನಾಡದವನೆ, ನಿನ್ನ ಮೌನದ ಸಮಾಧಿಯ ಮುಂದೆ
ನೀರಾದ ನನ್ನ ಪ್ರೀತಿಯನ್ನೊಮ್ಮೆ ಕಲ್ಪಿಸಿಕೊಳ್ಳಬಲ್ಲೆಯೊ?
ಬದುಕು, ಕನಸುಗಳನ್ನು ಮೀರಿ ಹಬ್ಬಿದ ಅದರ ಅಗಾಧವನ್ನು ತಬ್ಬಬಲ್ಲೆಯೊ?
ಎಲ್ಲೆಡೆ ಹಬ್ಬಿಯೂ ಮತ್ತೆ ನಿನ್ನಡಿಯ ಭೂಮಿಯಾದ ಅದರ ನಡೆ ಬಲ್ಲೆಯೊ?

ನೆರಳುಗಳ ನಡಿಗೆ ಹಿಡಿಯಲಾಗದೊ ಒಡೆಯ
ಬಾಯಿ ಇಲ್ಲದ ಸಂಕಟವದು, ಒಳಗುದಿಯ ಗುದುಮುರಿಗೆ
ಮೌನದಲ್ಲಿ ಮಾತ್ರ ನನ್ನಾತ್ಮ ನಿನ್ನ ಸಾಮಿಪ್ಯದಲ್ಲಿ
ನಾನೊಂದು ಬರೀ ಬತ್ತಲೆ ಕನ್ನಡಿ ನಿನ್ನ ಸನ್ನಿಧಿಯಲ್ಲಿ

ನನ್ನ ಪ್ರೀತಿಯನ್ನೊಮ್ಮೆ ಕಲ್ಪಿಸಿಕೊ
ಅಸಾಧ್ಯದ ಬದುಕಿಗೆ ಹಾತೊರೆಯುವ ಈ ಪ್ರೀತಿಯನ್ನೊಮ್ಮೆ ತಬ್ಬಿಕೊ
ಇದು ಭಾರ ಮತ್ತು ಬತ್ತಲಾರದ ಮರೀಚಿಕೆ ಅದು ನನಗೆ ಗೊತ್ತು
ಆದರೆ ನಿನ್ನ ಮಾಂಸದೊಳಗೇ ಅದಕ್ಕೊಂದು ಸದ್ಗತಿ ಇತ್ತು
ಹಾರಿದ ಆತ್ಮಗಾನದ ಹಕ್ಕಿ ನಿನ್ನೆದೆಯ ಸಾಗರದಲ್ಲಿ ಮಿಂದು
ಒದ್ದೆಯಾದ ರೆಕ್ಕೆಯೊಂದಿಗೆ ಸೂರ್ಯನಿಗೆದುರಾದರೆ
ಹನಿ ಹನಿಯ ಹೊಟ್ಟೆಯಲ್ಲೂ ಹುಡಿಯಂತೆ ಕಾಮನಬಿಲ್ಲು
ಗೊತ್ತು, ನನಗಾಗಿ ನಿನ್ನೆದೆಯೂ ಹಸಿಯಾಗಿದೆ ಸ್ವಲ್ಪ ನಿಲ್ಲು

ಕಲ್ಪಿಸಿಕೊ, ತಬ್ಬಿಕೊ ತಬ್ಬಲಾಗದ್ದನ್ನು
ಬೆಳಕನ್ನು, ಭ್ರಮೆಯನ್ನು, ದೇವರನ್ನು, ಸೂರ್ಯನನ್ನು
ಗಾಳಿಯನ್ನು, ನನ್ನೊಳಗಿನ ಗವಿಯನ್ನು, ನನ್ನೆದೆಯ ಸುಧೆಯನ್ನು
ಬಾಚಿಕೊ ಬದುಕೆಲ್ಲ, ಯಾಕೆಂದರೆ ಅದು ಬದುಕು

ನನ್ನ ಕಣ್ಣೀರುಗಳ ಕ್ಷಮಿಸು, ರಮಿಸು
ನನ್ನಾನಂದದ ಆತಂಕಕೆ ಅಭಯ ನೀಡು, ಶುಭ ಹಾಡು
ಕಣ್ಣೀರಲಿ ಕಳೆದ ನಗೆಯನು ನಿರೋಗಿಯಾಗಿಸು
ಸೂರ್ಯನನು ಮುಳುಗಿಸುವ ನನ್ನ ಗೆಂದುಟಿಗಳಲಿ ಬದುಕ ಅರಳಿಸು

ನಿನಗಷ್ಟೇ ಗೊತ್ತು ನನ್ನೊಡೆಯಾ
ಈ ಹೂ ರಾತ್ರಿಯನೂ ಬದಿಗಿರಿಸಿ ಸಾಗುವ ನಮ್ಮಿಬ್ಬರ ಪಯಣದ ದಾರಿ
ನಿರ್ಭಯದ ನಾಡಿನಲ್ಲಿ ನಾಡಿ ಮೀಟಿ, ನೀ ನನ್ನ ಕೇಳುವಿ
ನನ್ನೆದೆಗೆ ಹೇಳುವಿ, ನನ್ನಾಲೆ ಅಗಲಿಸುವಿ, ವಾಲೆ ಕವಿಗಳ ಕಚ್ಚಿ ಜೋಲಾಡುವಿ
ಬದುಕ ಬಯಕೆ ಹಿಂಗಿಸುವಿ

ನೆಲೆಯಿಲ್ಲದ ನಿಶೆಯಲ್ಲಿ ನಾವು ನಡೆಯುತ್ತಲೇ ಇರೋಣ
ಭಯ ಬೇಡ, ನನ್ನೊಡಲಲ್ಲಿ ನಿನೊಂದು ಪ್ರತಿಧ್ವನಿಗೊಳ್ಳದ ಹಾಡು
ನಿನ್ನಂಥ ನವಿರಾದ ಹೂವಿಗೆ ನಾನೊಂದು ನೆರಳು ಹಾಸುವ ಕಾಡು
ಬಾ, ಮೈನೆರೆಯುತ್ತೇನೆ ನಿನಗಾಗಿಯೇ ತೆರೆದುಕೊಂಡು ಹೂ ಜಾಡು


ಮೂಲ: ಡೆಲ್ಮಿರಾ ಅಗಸ್ಟಿನ್
ಕನ್ನಡಕ್ಕೆ: ರಾಗಂ

Wednesday, October 7, 2015

ಮರೆತ ರಾಗ!!!

ಗೋಧೂಳಿಯ ಸಮಯ
ಎಣ್ಣೆ ಎಷ್ಟುಳಿದಿದೆ ಎಂದು
ತಳ ಇಣುಕುತ್ತಾಳೆ ತಳವಿಲ್ಲದವಳು
ತೂತು ತಳದಲ್ಲಿ!!!
ತೆವಲುಗಳೆಲ್ಲ ಸೋರಿ ಸೋರಿ
ದೀಪ ತಣ್ಣಗಾಗುವ ತಲ್ಲಣ!!!

ಓಡಿ ಹೋಗುತ್ತಾಳೆ
ಕಾಡಿ ಎದೆಯ ಕಳವಳ
ಭಯದ ಬಿಕ್ಕಳಿಕೆ ಬಂದು
ಬಿಂಬವಾಗುತ್ತಾಳೆ ಕನ್ನಡಿಯೊಳು
ಮೈ ಇಲ್ಲದ ಕೈ ಹೊರ ಬಂದು
ಮುಪ್ಪಿಗೆ ಬಣ್ಣ ಸವರಿ
ಬಿಳುಚು ರೆಪ್ಪೆಗೆ ಕಪ್ಪ ಸವರಿ
ಮತ್ತೆ ಬರಲಾಗದು
ಒಪ್ಪಿಕೊ ಸತ್ಯವನ್ನು
ಎಂದು ಸಂತೈಸಿ ಸರಿದುಬಿಡುತ್ತದೆ
ಅಭಯದ, ಕ್ಷಣದ, ಮೈ ಹಿಂದಿನ
ಭಯಗ್ರಸ್ಥ ಬೆಳಕಿನಲ್ಲಿ
ಬೆತ್ತಲಾಗಿಸುತ್ತದೆ ಆಕೆಯನ್ನು

ಹಿಡಿ ಮಲ್ಲಿಗೆಗೆ ಕೈ ಹಾಕುತ್ತಾಳೆ
ಸುಡಬೇಡ ಬಿಡೆ, ಇಡು ಇಲ್ಲೆ
ನಿನ್ನ ಕೆಮಿಕಲ್ ಕೇಶ ಕಾರ್ಮೋಡದಲ್ಲಿ
ನನ್ನ ಸುಂಗಧದ ಬೆಳಕ ನಂದಿಸಬೇಡ
ನಿನ್ನ ಸಂದುಗಳೀಗ
ಸಾವೂ ಸುಳಿಯದ ಸಂದಿಗಳು
ಹಂದಿ ಸುಳಿದಾಡದ ಸಂದಿಗಳಲ್ಲಿ
ಬದುಕ ನಂದಿಸಬೇಡ ತಾಯಿ
ಕಾಲ ಕಸವಾಗಿ, ಮಣ್ಣಾಗಿ
ಕಣ್ಣರಳಿಸುವ ನಮ್ಮ ಭಾಗ್ಯ ತಪ್ಪಿಸಬೇಡ

ಕಣ್ಣೀರಾಗುತ್ತಾಳೆ
ಹಗಲ ಉರಿ ಬಿಸಿಲಲ್ಲಿ
ಬಾರದ ಗೊಲ್ಲನಿಗೆ
ಕಲ್ಲ ಸಂದು ಸರಿಸಿಕೊಂಡು
ನಾರಿಯಾಗುತ್ತಾಳೆ
ಕಂದೀಲು ಹಿಡಿದು
ಕೃಷ್ಣನಿಗೆ ಕನಸು ಹಾಸುತ್ತಾಳೆ
ನಿಶ್ಯಕ್ತ ಕಾಲುಗಳು ಕೈ ಮುಗಿಯುತ್ತವೆ
ಜಗನವೆಂಬ ಜಗ ಸುಟ್ಟು, ಕರಳು ಉಮ್ಮಳಿಸಿ
ಹುಟ್ಟಿದ ಹೊಗೆ ಆತ್ಮ ಆವರಿಸಿ
ವಿಲಿವಿಲಿಯಾಗುತ್ತದೆ, ಮುಖವಿಲ್ಲದ
ಮನುಷ್ಯನ ಮುಗುಳ್ನಗೆ
ಪಾವಿತ್ರ್ಯದ ತಟ್ಟೆಯಲ್ಲಿ
ಪಿಂಡದ ಉಂಡೆಯನಿಸುತ್ತದೆ
ಕಣ್ಣಿಗೆ ಕತ್ತಲಾವರಿಸಿ
ಅವಳೀಗ ಕುಸಿದು ಕೋಟಿ ವರ್ಷಗಳಾಗಿವೆ
ಕನಸೆಂಬ ಕಾಂಡವದ ಬೆಂಕಿ ತಾಂಡವವಾಡಿ
ತನ್ನ ಹೆಣ್ಣಾಗಿಸಿದ ಮುರುಳಿ
ಅದೆಲ್ಲೊ ಕಾಡಲ್ಲಿ ಮಲಗಿದಲ್ಲಿಯೇ
ಉದುರಿ ಬಿದ್ದ ಎಲೆಯಾಗಿ
ಇವಳ ಯಾವ ಕೂಗಿಗೂ
ಮಾರುತ್ತರಿಸದ ಉಲಿಯಾಗಿ
ಅವಳ ಎದೆ ಈಗ
ಅರೆಸುಟ್ಟ, ಅರೆಬೆಂದ, ಕಿರಿಕಿರಿ ಜೀವಗಳ
ಹಸ್ತಿನಾಪುರ
ಇದೇ ಹಾದಿಗಳಲ್ಲಿ
ಕಚ್ಚೆ ಸರಿಪಡಿಸುತ್ತ, ಕಣ್ಣಲ್ಲೇ ಕರೆಯುತ್ತ
ಸುಳಿದಾಡುತ್ತಿದ್ದ ಕೃಷ್ಣ
ಈಗ ತಂತಿ ಹರಿದ
ತಂಬೂರಿಯೇ ಮರೆತ ರಾಗ