Total Pageviews

Monday, June 23, 2014

ಶಿರಸಿ ಎಂದರೆ ಸಾಯದ ನೆನಪು

ಗೋಜಲು ಗೋಜಲಾಗಿಹ
ಜೀವನದ ದಾರದುಂಡೆಯ
ಬಿಡಿಸುತಿರೆ, ಗಡಸು ಗಡಸಾಗುತಿಹುದು
ಎಳೆ ಎಳೆಯ ಹೆಕ್ಕಿ
ಎಳೆಯುತಿರೆ ಸುಕ್ಕು
ಎಳೆ ಕೊನೆಯ ಸಿಕ್ಕದೇ
ಸುಕ್ಕು ಸುಕ್ಕಾಗುತಿದೆ
                                      ಮನಸು ಕಕ್ಕಾಬಿಕ್ಕಿಯಾಗಿದೆ      ('ಒಡಂಬಡಿಕೆ', ಡಾ.ಪವಾರ)
        2002 ರಲ್ಲಿ ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ, ಒಂದು ವರ್ಷದ ಮಟ್ಟಿಗೆ ಉಪನ್ಯಾಸಕನಾಗಿದ್ದೆ. ಅದೇಕೊ ವ್ಯಾವಹಾರಸ್ಥ, ವ್ಯಾಕರಣಬದ್ಧ ಆ ಜನಗಳಿಗೂ, ಅಲ್ಲಿಯ ಮೈ ನವಿರೇಳಿಸುವ ನಿಸರ್ಗ ಸೌಂದರ್ಯಕ್ಕೂ, ಬೆವರಿಳಿಸುವ ಊರಿನಲ್ಲಿ ಬಿಸಿ ಬಿಸಿಯಾದ ನನ್ನ ಆಲೋಚನಾ ಕ್ರಮಕ್ಕೂ ಹೊಂದಾಣಿಕೆಯಾಗದೆ ಕವಳಾ ಹಾಕುವ ಸುಖಕ್ಕಾಗಿ, ಕಾಲೇಜು ಬಿಟ್ಟೇನು ಕವಳ(ಅವಳ?) ಬಿಡಲಾಗದು ಎಂದು ರಾಜಿನಾಮೆ ಬಿಸಾಕಿ, ಹೊರಟು ಬಂದದ್ದಾಯಿತು. ಆದರೆ ಅವುಗಳ ನೆನಪಿನಲ್ಲಿಯೇ ಅದೆಷ್ಟೋ  ಕಾಲ ನೂಕಿದ್ದಾಯಿತು.

        ಈ ಭಾಗ ಎಂದರೆ ಶುರುವಾಗುತ್ತದೆ ನನ್ನ ಕತೆ ಉಜಿರೆ, ಗುರುವಾಯುವಿನಕೆರೆ, ಮುಡಬಿದ್ರೆ, ಕುಂದಾಪುರ, ಭಟ್ಕಳ, ಸಿದ್ದಾಪುರ ಮತ್ತು ಶಿರಸಿ. ಹಳೆಯ ಮುಸ್ಲಿಂ ಗೆಳತಿಯೊಬ್ಬಳು ಭಟ್ಕಳದಿಂದ ಬಂದು ಶಿರಸಿಯಲ್ಲಿ ಸಂಸಾರ ಹೂಡಿದಳು, ಎಳೆಯ ಗೆಳತಿಯೊಬ್ಬಳು ನರಗುಂದದಿಂದ ಬಂದು ಮುಡಬಿದ್ರೆಯಲ್ಲಿ ಬದುಕು ತೆಯ್ದಳು, ಶಿಷ್ಯನೊಬ್ಬ ಸಿದ್ದಾಪುರದಲ್ಲಿ ಸಂಸಾರದ ಮಠ ಕಟ್ಟಿಕೊಂಡ, ಪ್ರೀತಿಯ ಗೆಳೆಯನೊಬ್ಬ ಭಟ್ಕಳದಲ್ಲಿ ಮಡದಿಯೊಂದಿಗೆ ಸಂಸ್ಥೆಯೊಂದಕ್ಕೆ ಬದುಕನ್ನೇ ಸಮರ್ಪಿಸಿಕೊಂಡ. ಈಗೊಬ್ಬ ಇದ್ದಾನೆ ಅಲೆಮಾರಿಯಂತೆ, ಈ ಮಧ್ಯ ಸಾವಿನೊಂದಿಗೆ ಸೆಣಸಾಡುತ್ತ ನಾನು ಮತ್ತೆ ಮತ್ತೆ ಮುಡಬಿದ್ರೆಗೆ ಬಂದದ್ದೇ ಒಂದು ಕಂತೆ.

    ಮೀನು ತಿನ್ನಲು ಬಾರದ ದಿನಗಳಲ್ಲಿ ಮತ್ಸ್ಯ ಸಾಗರದಲ್ಲಿದ್ದೆ. ಇಲ್ಲಿ ಬಂದಾಗಲೆಲ್ಲ ನನ್ನನ್ನು ಕಾಡುವುದು ಸ್ವಚ್ಚ, ಶಾಂತ, ಖಾಲಿ ಖಾಲಿ ರಸ್ತೆಗಳು, ಮೀನಿನ ಬಾಝಾರುಗಳು, ತೈಲಗಳು, ಕಶಾಯಗಳು, ನನ್ನ ಪ್ರೇಯಸಿಗೆಂದೇ ಒಯ್ಯುತ್ತಿದ್ದ ದಂಡೆ ದಂಡೆ ಹೂಗಳು, ಈ ಹೂವಿಗೆ ನನ್ನ ಪಾಲಿನ ಕೊನೆಯ ಹುಡುಕಾಟದ ಸ್ಥಳ ಈ ಶಿರಸಿ. ಶಿರಸಿ ಎಂದರೆ ಈಗಲೂ ಸಾಕಿಯರ ಸಾಗರವೆ. ಇಂಥ ಶಿರಸಿಗೆ ಅತಿಥಿಯಾಗಿ ಬರುವ ಆಸೆ ಇತ್ತು, ಆದರೆ ಅದಕ್ಕಾಗಿ ಒಂದು ಅವಕಾಶ ಬೇಕಿತ್ತು. ಅದು ಶಿರಸಿಯ ಲಯನ್ಸ್ ಕ್ಲಬ್, ಲಯನೆಸ್ ಎಜುಕೇಶನ್ ಸೊಸೈಟಿ ಹಾಗೂ ಸನ್ಮತಿ ಸಾಹಿತ್ಯ ಪೀಠಗಳ ಸಂಯುಕ್ತ ಆಶ್ರಯದಲ್ಲಿದಿನಾಂಕ 22/06/2014 ರಂದು,
ನಾಡಿನ ಹೆಸರಾಂತ ವೈದ್ಯರಲ್ಲಿ ಒಬ್ಬರಾದ ಡಾ.ಕೆ.ವಿ.ಪವಾರ ಅವರ 'ಹುಡುಕಾಟ' ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳವುದರ ಮೂಲಕ ಸಿಕ್ಕಿತು. ಡಾ.ಎ.ಎಸ್.ಪಟವರ್ಧನ ಸಭಾ ಭವನ, ಶಿರಸಿಯಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕತರಾದ ಡಾ. ಧರಣೇಂದ್ರ ಕುರುಕುರೆ ವಹಿಸಿದ್ದರು. ನಾನು ಪವಾರ ಅವರು ಕಾವ್ಯ ಕ್ರಮಿಸಿದ ರೀತಿಯನ್ನು ಕುರಿತು ಮಾತನಾಡಿದೆ. 'ಗೀತಾಂಜಲಿ', 'ಒಡಂಬಡಿಕೆ' ಹಾಗೂ 'ಹುಡುಕಾಟ' ಕೃತಿಗಳಲ್ಲಿ ಪವಾರ ಕವಿಯಾಗಿ ಬೆಳೆಯುತ್ತಿರುವ ರೀತಿ ವಿವರಿಸಿದೆ. ಕಾರ್ಯಕ್ರಮದಲ್ಲಿ ಪ್ರಭಾಕರ ಹೆಗಡೆ, ತ್ರಿವಿಕ್ರಮ ಪಟವರ್ಧನ, ಗಂಗಾ ಹೆಗಡೆ, ಮಾಧವಿ ಭಂಡಾರಿ, ಕೆರೆಮನೆ ಹೆಗಡೆ, ತಾರಾ ಹೆಗಡೆ, ಶ್ಯಾಮಸುಂದರ ಭಟ್, ಡಿ.ಎಸ್.ನಾಯಕ ಹಾಗೂ ಸ್ಥಳೀಯ ಗಾಯಕರು ಭಾಹವಹಿಸಿದ್ದರು.


Saturday, June 21, 2014

ಹತ್ತು ರೂಪಾಯಿಗೆ ಹಾದಿ ತಪ್ಪುವ ಬದುಕು

       ವರುಷಗಳ ಹಿಂದಿನ ಮಾತು. ಗೆಳತಿಯೊಬ್ಬಳಿಗೆ ಹಿಂದಿ ಚಿತ್ರ ಒಂದರ ಕತೆ ಹೇಳುತ್ತಿದ್ದೆ, ಚಪ್ಪಲಿ ಅಂಗಡಿಯೊಂದರಲ್ಲಿ ಪಕ್ಕದ ತಲೆ ಹಿಡುಕಿಯೊಬ್ಬಳಿಂದ ಇಪ್ಪತ್ತು ರೂಪಾಯಿ ಉದಾರವಾಗಿ ಪಡೆಯುವ ಉಪನ್ಯಾಸಕನ ಹೆಂಡತಿ, ಬರೀ ಹೊಗಳಿಕೆಗಳಿಗೆ ಮರುಳಾಗುತ್ತ ಹಾದಿ ತಪ್ಪಿ ಹಾಸಿಗೆಯಿಂದ ಹಾಸಿಗೆಗೆ ಹರಿಯುತ್ತ ಹದ ತಪ್ಪುತ್ತಾಳೆ. ಬದುಕಿಯೂ ಅಪರಾಧಿ ಪ್ರಜ್ಞೆಯ ಹೆಣವಾಗುತ್ತಾಳೆ. ಹೆಣ್ಣಿಗೆ ಹೊಗಳಿಕೆ, ಸಂಶಯ, ದುಸ್ಸಾಹಸಗಳೆ ವೈರಿಗಳು.

   ಇಂಥದೇ ಒಂದು ಘಟನೆಗೆ ನಾನು ಮುಖಾಮುಖಿಯಾದೆ. ಇದು ಕತೆಯಲ್ಲ ನಿತ್ಯ ಉರಿದ ಚಿತೆ.

       ರಾತ್ರಿ ಕಡೂರಿಂದ ರೈಲಿಗೆ ಹೊರಟ ನನಗೆ ಯುವಕನೊಬ್ಬ ಸಿಕ್ಕ. ಮಾತಿಗಿಳಿದೆ. ಕತೆ ಅನಾವರಣವಾಯಿತು. ಈತ ಕಳೆದ ಮೂರು ದಿನಗಳಿಂದ ಟ್ರೇನಿನಲ್ಲಿ ಹೇಗೆ ಓಡಾಡುತ್ತಿದ್ದಾನೆಂದು ಕೇಳಿ ಗಾಭರಿಯಾದೆ. ಎರಡು ಖಾಲಿ ಕೊಡ, ಒಂದು ಕೈ ಚೀಲು, ಒಳಗೊಂದು ದೇವರ ಫೋಟೊ, ತಾಯಿಗಾಗಿ ಬಳೆಗಳ ಕಟ್ಟು, ತಂಗಿಗೆ ಚುರುಮುರಿ, ಏನೇನೊ. ಆತನಿಗೆ ಮರಳಿ ಮನೆ ಸೇರುವ ಆಸೆ ಆದರೆ ಅಪ್ಪನೊಂದಿಗೆ  ಸುಳ್ಳು ಹೇಳಿದ, ಜಗಳಾಡಿದ, ಓಡಿಬಂದ ಭಯ. ಮನಸ್ಸು ಬಾಗಲು, ಮಾಗಲು ಸಿದ್ಧವಿಲ್ಲ. ಅದುದಿಷ್ಟೇ ಅಪ್ಪನ ಜೇಬಿನಿಂದ ಈತ ಹತ್ತು ರೂಪಾಯಿ ಕದ್ದಿದ್ದಾನೆ. ಹೊರಳಿ ಹೋಗಲು ಮುಖವಿಲ್ಲ, ಓಡಿ ಹೋಗಲು ಮನಸ್ಸಿಲ್ಲ. ರಾತ್ರಿಯೆಲ್ಲ ಬೋಗಿಯಲ್ಲಿದ್ದವರೆಲ್ಲ ಹೇಳಿ ಹೇಳಿ ಸೋತು ಹೋದರು. ಬೆಳಗಿನ ಸಮಯ, ಆಲಮಟ್ಟಿಯಿಂದ ಒಬ್ಬ ಶಾಲಾ ಶಿಕ್ಷಕಿ ಟ್ರೇನು ಹತ್ತಿದರು. ಅವರೂ ಈತನ ಕತೆಗೆ ಕಿವಿಯಾದರು, ತಕ್ಷಣ ಆತನ ಕೆನ್ನೆ ಹಿಡಿದು, ತಲೆ ತೀಡಿ ನನಪ್ಪ, ಹೆತ್ತವರ ಜೀವಾ ಉರಸಬ್ಯಾಡ ನಿಮ್ಮಪ್ಪಗ ಹತ್ತು ರೂಪಾಯಿ ನಾ ಕೊಡ್ತೀನಿ. ಬಸ್ ಚಾರ್ಜ್ ಕೊಡ್ತೀನಿ ಮನೆಗೆ ಹೋಗು ಇಲ್ಲಾ ಅಂದ್ರ ಪೋಲಿಸರಿಗೆ ಕೊಡ್ತೀನಿ ಎಂದು ಗದರಿಸಿದರಷ್ಟೆ, ಯುವಕ ಕಣ್ಣೀರಾಗಿ ಇಳಿದುಕೊಂಡ. ನಾನು ಆ ತಾಯಿಯ ಕೈ ಹಿಡಿದು ಆತ್ಮಸ್ಥೈರ್ಯ ಪಡೆದುಕೊಂಡೆ.

         ನನ್ನ ಕತೆಯೂ ಹಾಗೆಯೇ ಇತ್ತು ಮೇ 12 ರಿಂದ. ಆನಂತರ ತೊರೆದ ಮನೆಯ ಕಿಡಕಿಯ ಪರೆದೆಗಳು ಸರಿದಾಡಿ, ದೀಪ ಬೆಳಗಿ, ದೇಹ ಹರಿದಾಡುವುದನ್ನು ಕಂಡ ಮೇಲೆ ನಾನು ಅಲ್ಲಿಂದ ತಣ್ಣಗೆ ದೂರ ಸರಿದೆ.  

     ಎಲ್ಲ ಕಾಯುವಿಕೆ, ಕೂಡಿಸುವಿಕೆ, ಮತ್ತೆ ಮತ್ತೆ ಕ್ಷಮಿಸುವಿಕೆಗಳ ಹಿಂದೆ ಬರೀ ಕಾಸಿನ, ಕಾಮದ, ಲಾಭದ ಲೆಕ್ಕಾಚಾರಗಳೇ ಇರುವುದಿಲ್ಲ. ಪ್ರಪಂಚದಲ್ಲಿ ವಿನಾ ಕಾರಣ ಪ್ರೀತಿಸುವವರಿದ್ದಾರೆ. ಅವರೆಲ್ಲ ಬರೀ ಗಂಡಸರಲ್ಲ. ಅವರೊಳಗಿನ ತಾಯಿ ಅವರ ದೌರ್ಬಲ್ಯವಲ್ಲ. ಇಂಥ ಪ್ರೀತಿಯನ್ನು ಉಡಾಫೆ ಎಂದುಕೊಳ್ಳುವುದು ಉಡಿಯಲ್ಲಿ ಪಾಪ ಕಟ್ಟಿಕೊಳ್ಳುವುದು ಎರಡೂ ಒಂದೇ. ಇದು ಇನ್ನಾವುದೋ ಜನ್ಮಕ್ಕೆ ಕೈ ಕಳೆದುಕೊಳ್ಳುವ ಸುಳಿವು. 

        ಯುವಕ ಈಗ ಮನೆ ಸೇರಿರಬಹುದು. ಈಗ ಆ ಮನೆಯಲ್ಲೇನು ನಡೆಯುತ್ತಿದೆ? ಅದು ನನ್ನ ಕುತೂಹಲವಾಗಬಾರದು, ವ್ಯಸನವಾಗಬಾರದು, ಈಗ ಅಲ್ಲಿ ಕೈ ಕೈ ಕೂಡಿರಬಹುದು, ಅಪ್ಪಿ ಕಣ್ಣೀರಾಗಿರಬಹುದು, ತಪ್ಪಿ ಕುದಿಯುತ್ತಿರಬಹುದು ಅದು ನಮ್ಮ “ಬುದ್ಧಿಯಾಚೆಗಿನ ಮಾತು. ಪ್ರೀತಿಯಂಥ ವಸ್ತು ಜಗದಲ್ಲಿ ಕಾಣೆ, ಮನಗಂಡ ಮಾತು”

Saturday, June 14, 2014

ಕಣ್ಣು ಕೋರೈಸುವ ಕಂಪ್ಯೂಟರ್ ಕಣ್ಣೀರೊರೆಸುವುದಿಲ್ಲ

ಹಳೆಮನೆ: ಒಂದು ನೆನಪು    
ವರ್ತಮಾನದ ಬಿಕ್ಕಟ್ಟುಗಳು
 ದಿನಾಂಕ: 14/06/2014    ಸ್ಥಳ: ಶ್ರೀರಂಗ ಸಭಾಂಗಣ, ರಂಗಾಯಣ
ಭಾಷೆಯನ್ನು ಕುರಿತು ಮಾತನಾಡುವಾಗಲೆಲ್ಲಾ ಅಲ್ಲಮನ ಒಂದು ಸಾಲನ್ನು ಹಳೆಮನೆ ಪದೇ ಪದೇ ಹೇಳುತ್ತಿದ್ದ ನೆನಪು. 'ಪದವನರ್ಪಿಸಬಹುದಲ್ಲದೆ ಪದಾರ್ಥವನ್ನರ್ಪಿಸಲಾಗದು'. ಈಗ ಈ ಮಾತನ್ನು ಬದಲಿಸಿ ನಾನು ಹೇಳಬೇಕು, `ಪದವನ್ನೂ ಅರ್ಪಿಸಲಾಗದು ಹಳೆಮನೆಯವರೆ.’ ಪದ, ಪದಾರ್ಥಗಳೆಲ್ಲವೂ ಮೌನದೀಚೆಗಿನ ವ್ಯಾವಹಾರಿಕ ತಳಮಳಗಳಷ್ಟೇ. ಅದನ್ನು ಮೀರಿದ ಮೇಲೆ ಮೌನದ್ದೇ ಸಾಮ್ರಾಜ್ಯ.
ಸತ್ತ ವ್ಯಕ್ತಿಯ ಸತ್ಯದ ಮೂಲಗಳನ್ನು ತಡಕಾಡುವುದು ಅಸಾಧ್ಯವೂ ಮತ್ತು ಅಸತ್ಯವೂ ಕೂಡ. ದಿನಾಂಕ 12/06/11ರ ಸಾಯಂಕಾಲದ ಆರು ಗಂಟೆಗೆ ರಂಗಾಯಣದ “ಭೂಮಿಗೀತ”ದಲ್ಲಿ ರಂಗಚಿಂತಕರು, ಮೈಸೂರಿನ ಒಡನಾಡಿಗಳು ಹಮ್ಮಿಕೊಂಡ “ಹಳೆಮನೆಯವರಿಗೆ ಶೃದ್ಧಾಂಜಲಿ” ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಳಿತು ಈ ಲೇಖನದ ಮುಕ್ತಾಯದ ಸಾಲುಗಳನ್ನು ಬರೆಯುತ್ತಿದ್ದೇನೆ. ಆ ಕೆಟ್ಟ ಕಾರ್ಯಕ್ರಮದಲ್ಲಿ ‘ಜನ್ನಿ’ಯೊಬ್ಬನವೇ ಮಾತುಗಳು. ಒಂದು ರೀತಿಯಲ್ಲಿ ‘ಜ್ಯೂಲಿಯಸ್ ಸೀಜರ್’ ನಾಟಕದಲ್ಲಿ ಮಾರ್ಕ್ ಎಂಟನಿಯ ಮಾತುಗಳಂತೆ. ಅದೇ ವೇಳೆಗೆ ಸರಿಯಾಗಿ ‘ಪ್ರಜಾವಾಣಿ’ಯ ಸಹೋದರಿ ಸುಶೀಲಾ ಡೋಣೂರ ಒಂದು ಎಸ್. ಎಂ. ಎಸ್ ಕಳುಹಿಸಿದ್ದಾಳೆ. “Being frank is always better than being falsely sweet. Because by being frank in life, we may get a lot of true enemies but surely not untrue friends
 ನಮ್ಮ ಸುತ್ತಲಿನ ಸತ್ಯವನ್ನು ದೂರಿಕರಿಸಿ ದೂರದ ಅವಾಸ್ತವವನ್ನು ನಂಬುವ ವರ್ತಮಾನದ ಯುವ ಜನಾಂಗ, ಕಾರ್ಪೊರೇಟ್ ವಲಯದ ಬಳಸಿ ಬಿಸಾಡುವ ಸಿದ್ಧಾಂತಕ್ಕೆ ಮರುಳಾಗಿದ್ದಾರೆ. ಅವಕಾಶಗಳ ಭ್ರಮೆಯನ್ನು ಹುಟ್ಟಿಸುವ ಈ ಬಿಕ್ಕಟ್ಟು, ಅದೇ ಕಾರ್ಪೊರೇಟ್ ವಲಯದಿಂದ, ಮತ್ತೆ ಅದೇ ಸಿದ್ಧಾಂತದಿಂದ ಮೋಸಕ್ಕೆ ಹೋಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತಿದೆ. ಓಡಿಹೋಗಲಾಗದ, ನಿಂತು ಬದುಕಲಾಗದ ಆದರೆ ನಿರಂತರ ಹುಚ್ಚು ಹುಡುಕಾಟಕ್ಕೆ ಹಚ್ಚುವ ಈ ಹವ್ಯಾಸ, ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ನಂಬಿಕೊಂಡಿರುವವರಿಗೆ ಹುಡುಗಾಟವೆನ್ನಿಸಿದೆ. ಕಣ್ಣು ಕೋರೈಸುವ ಟ್ಯಾಬ್, ಮೋಬೈಲ್, ಕಂಪ್ಯೂಟರ್‍ಗಳು ಕಣ್ಣೀರೊರೆಸುವುದಿಲ್ಲ. ಫ್ಯಾಶನ್‍ನನ್ನು ಕುರಿತು ಮಾತಾಡುವ ಈ ಲೋಕ ಪ್ಯಾಶೆನ್ ಕುರಿತು ಮನುಷ್ಯನನ್ನು ಕೇಂದ್ರಿಕರಿಸುವುದಿಲ್ಲ. ಸಹನೆಯಂತೂ ಸತ್ತುಹೋದ ವಿಚಾರ. ಸಾಮಾಜಿಕ ತಾಣಗಳೆಂದು ಗುರುತಿಸಲ್ಪಡುವ ಈ ಅಂತರ್‍ಜಾಲ ತಾಣಗಳು ನಿಜವಾದ ಸಾಮಾಜಿಕತೆಯ ಮನುಷ್ಯ ಸೌಂದರ್ಯವನ್ನು ಕೊಂದು ಇರುವ ಮನೆಯಲ್ಲಿಯೇ ಒಬ್ಬ ಇನ್ನೊಬ್ಬನೊಂದಿಗೆ ಮಾತನಾಡದಂತೆ ಮಾಡಿ ಆತನನ್ನು ಭ್ರಮೆಗಳಿಂದ ತುಂಬುತ್ತದೆ. ನಾವು ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುವ ಈ ಮಾರ್ಗ ನಾನು ಏನಾಗಬೇಕು ಎನ್ನುವುದಕ್ಕೆ ಕನ್ನಡಿ ಹಿಡಿಯುವುದಿಲ್ಲ. ಎಲೆಕ್ಟ್ರಾನಿಕ್ ಜಗತ್ತು ನಮ್ಮಲ್ಲಿ ಧೈರ್ಯವನ್ನು ಬೆಳೆಸಲಿಲ್ಲ, ಹೇಸಿ ಧೈರ್ಯವನ್ನ, ಭಂಡ ಧೈರ್ಯವನ್ನ ಬೆಳೆಸಿತು. ಆಳ ಅಧ್ಯಯನದ ಅವಶ್ಯಕತೆಯನ್ನು ದೂರಿಕರಿಸಿ ಮುಂಜಾನೆ ಕುಡಿಯುವ ಚಹಾ ಕುರಿತಾದ ತಿಳುವಳಿಕೆಗೂ ತನ್ನನ್ನು ಮೊರೆ ಹೋಗುವಂತೆ ಮಾಡಿತು. ದುಡ್ಡು, ಅವಕಾಶ ಎನ್ನುವ ಪದಗಳ ಬೆನ್ನು ಹತ್ತಿ ಆತ್ಮವನ್ನು ಧಿಕ್ಕರಿಸಿ ಅನ್ಯರ ಭಾವನೆಗಳನ್ನು ಅವಹೇಳಿಸಿ ಓಡಿಹೋಗುವ ನಿರ್ಲಜ್ಜತೆಯನ್ನು ಬೆಳೆಸಿತು. 
ಮುಂದಿನ ಮರೀಚಿಕೆಯನ್ನು ಮೆಚ್ಚಿಕೊಂಡವರು ಹಿಂದಣ ಅನಂತವನ್ನು ಅಸಹ್ಯಗೊಳಿಸುವ ಆತ್ಮ ಭ್ರಷ್ಟತೆಯನ್ನು ಬೆಳೆಸಿತು. ಈ ರೀತಿ ಬುಡವಿಲ್ಲವಾಗಿರುವ ಈ ನನ್ನ ಎಳೆಯ ಜಗತ್ತನ್ನು ನಾನು ವಾಟೆವರ್ ಜನರೇಶನ್ ಎನ್ನುತ್ತೇನೆ, ಎನ್ನುತ್ತಾರೆ ನನ್ನೊಂದಿಗಿದ್ದ ಗೆಳೆಯ ನವೀನ್. ಇದೊಂದು ಶೇಮ್‍ಲೆಸ್ ಸೋಸಾಯಿಟಿ ಎನ್ನುತ್ತಾರೆ ಹಿರಿಯ ಚಿಂತಕಿ ಡಾ.ಇಂದಿರಾ. ಈ ಬಿಕ್ಕಟ್ಟೆ ನಮ್ಮ ಮೂಲ. ಏಕೆಂದರೆ ವರ್ತಮಾನದ ಹೂಗಳನ್ನು ಧಿಕ್ಕರಿಸಿ ಭವಿಷ್ಯದ ಹಣ್ಣುಗಳ ಕನಸು ಕಾಣಲಾಗುವುದಿಲ್ಲ ಹಾಗೆಯೇ ನಮ್ಮ ಮುಂದೆಯೇ ನಾಶವಾಗುವ ಯುವಜನಾಂಗವನ್ನು ನಿರ್ಲಕ್ಷಿಸಿ ಭವಿಷ್ಯದ ಭವ್ಯ ಭಾರತವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ.

Tuesday, June 10, 2014

ಸಾಧು ಸಂಗ ಕೊಟ್ಟು ಎನಗೆ ಪಾರುಗಾಣಿಸಯ್ಯ ಕೊನೆಗೆ.....


     ಪೂಜ್ಯ ಮತ್ತು ಪೂಜಕ ಈರ್ವರೂ ಈಗ ಒಂದೇದ್ವೈತಕ್ಕೆ ಇಂಬಿಲ್ಲವಯ್ಯಾ.
ಕರ್ಪುರವು ಉರಿಯಲು ನಿಶ್ಯೂನ್ಯವಾಹುದಯ್ಯಾ
ಅಂತೆಯೇ ನಿಮ್ಮ ಚೇತನವು ಅಪ್ಪುದಯ್ಯಾ  

                                                       
                                                             - ಬುರಹಾನ್ ಅಲ್-ದಿನ್

     ಮೇ 12 ರಿಂದ ಜೂನ್ 12 ರ ವೇಳೆ ನನ್ನ ಬದುಕಿನ ಅತ್ಯಂತ ಮಹತ್ವದ ಘಳಿಗೆ. ಇದೊಂದು ರೀತಿ ಆತ್ಮಾವಲೋಕನದ, ದೇಹಾವಲೋಕನದ ಸ್ಥಿತಿ ಎಂದೇ ಹೇಳಬೇಕು. ಈಗೆಲ್ಲ ನನ್ನ ಕೈ ಹಿಡಿದುದು ರಿಚರ್ಡ ಈಟನ್ ಅವರ ಸೂಫೀಜ್ ಆಫ್ ಬಿಜಾಪುರ ಕೃತಿ. ಮಹತ್ವದ ಸಾಲೊಂದನ್ನು ಓದಿಬಿಟ್ಟೆ, 'ಬಿಜಾಪುರ ಸೂಫಿಗಳನ್ನು ಹುಗಿದ ಸ್ಥಳಗಳ, ಕಟ್ಟಿದ ಕಟ್ಟಡಗಳ ಸಂಖ್ಯೆ ಮೂನ್ನುರರ ಸಮೀಪ.' ವಾಕ್ಯ ಓದುತ್ತಲೇ ಕುಟುಂಬ ಕಟ್ಟಿಕೊಂಡು ಓಡಿಯೇ ಬಿಟ್ಟೆ ನನ್ನೂರಿಗೆ, ಅದನ್ನು ತನ್ನ ಗರ್ಭದಲ್ಲಿರಿಸಿಕೊಂಡ ಬಿಜಾಪುರಕ್ಕೆ. ಬೇಡವಾಗಿದ್ದ ಭಾರಗಳನ್ನು ಚಿತಾಸಾಕ್ಷಿಯಾಗಿ ಹಿಡಿದ ಕಾರಣಕ್ಕೆ ನಿಭಾಯಿಸಲು ಇಂದಿಗೂ ಹೆಣಗಾಡಿದಂತೆ ಅಂದು ನಮ್ಮಪ್ಪನ ಒಂದು ಕಾಲ ಕನಸಿನ ಹೆಗಲಾಗಿದ್ದೆ ನಾನು. ಇಂಗ್ಲೀಷ್ ಸಾಹಿತ್ಯ ಓದಬೇಕು, ಅದರೊಳಗೇ ಮಹತ್ವದ ಸಾಧನೆಯನ್ನು ಮಾಡಬೇಕು ಎನ್ನುವ ಆತನ ಕನಸಿಗೆ ಆಸರೆಯಾಗಿ ನಿಂತವರು, ನನ್ನನ್ನು ಆ ಸಾಧನೆಗೆ ಅಣಿಯಾಗಿಸಿದವರು ಇದೇ ಸೂಫಿಗಳು ಮತ್ತು ಅವರ ದರ್ಗಾಗಳು. ಬೆಳಗಿನ ಆರು ಗಂಟೆಗೆ ಬಂದು ಈ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದ ನಾನು ಮಧ್ಯಾಹ್ನದ ಮೂರು ಗಂಟೆಗೆ ಕೋಣೆ ಸೇರುತ್ತಿದ್ದೆ. ಅಂದು ನನ್ನ ಜೊತೆಯಾದ ಸೂಫಿಗಳು ಇಂದಿಗೂ ನನ್ನ ಆತ್ಮದ ಕನವರಿಕೆಯಾಗಿದ್ದಾರೆ.  

ನನಗೆ ನನ್ನ ಜನ, ನನ್ನ ಸಂಸ್ಕೃತಿ ಅಸಹ್ಯಕ್ಕೊಳಪಡುವುದು ಸಹಿಸಲಾಗದ ವಿಚಾರ. ಬಿಜಾಪುರದ ನನ್ನ ಸಾಧನೆಯ ಸ್ಥಳಗಳು, ನನ್ನ ಏಕಾಂತದ ಅಸಹಾಯಕ ಕ್ಷಣಗಳು ಎಲ್ಲ ವಿವರಿಸುತ್ತ ಶಿಶುನಾಳಕ್ಕೆ ಬಂದಾಗ ಮಬ್ಬುಗತ್ತಲೆ. ಅವನ ಕೆಲವು ಸಾಲುಗಳು -
ಬಹಳೊಂದು ಚೆಲ್ವಿಕೆ ನನ್ನ ಹೆಂಡತಿ
ಅಳು ತಾಪ ಕೇಳಿಸಿದಿ ನನ್ನ ಹೆಂಡತಿ
ಕೀಳು ಮಾತೆಲ್ಲ ಜಗದೊಳಗೆ ಮೋಹಿಸಿ
ಸೂಳೆಯೆಂದೆನಿಸಿದಿ ನನ್ನ ಹೆಂಡತಿ


 ಏಟ್ಸನ 'ಪ್ರೇಯರ್ ಟು ಮಾಯ್ ಡಾಟರ್' ನೆನಪಿಸುವ ಈ ಸಾಲುಗಳು ವರ್ತಮಾನವನ್ನು ವ್ಯಂಗಿಸುತ್ತಲೇ ನಮ್ಮ ಬದುಕುಗಳನ್ನು ತಿದ್ದುವ ಶರೀಫ, ಬದುಕಿದ್ದಾಗಲೂ ಶಿಕ್ಷಕ, ಗತಿಸಿದ ಮೇಲೂ ಶಿಕ್ಷಕ ಎನ್ನುವುದನ್ನು ಖಾತರಿ ಪಡಿಸುತ್ತವೆರ ಹೆಂಡತಿಯಾದವಳು ಹೊಸ್ತಿಲೊಳಗೆ ಇರಬೇಕಾದುದರ ಸುಖವನ್ನು ವಿವರಿಸುತ್ತದೆ.   

      ಒಂದು ವಾರದ ಅಲೆದಾಟದ ನಂತರ ಊರಿಗೆ ಬಂದಾಗ ಎಷ್ಟೊಂದು ತಾಯಂದಿರ, ಅಭಿಮಾನಿಗಳ ಹರಕೆ ಮತ್ತು ಕಾಣಿಕೆ. ಝಾನ್ಸಿ, ಮುಂಬಯಿ, ಗೋಕರ್ಣ, ಚಿಂತಾಮಣಿ ಸಾಲು ಸಾಲಾಗಿ ಹರಕೆಗಳು, ಹಾರೈಕೆಗಳು ಮತ್ತು ಕೊಡುಗೆಗಳು. ಇದನ್ನೊಂದು ಶಾಲುಗಳ ಸಂತೆಯೇ ಎನ್ನಬೇಕು. ಇನ್ನು ಹರಕೆಯ ಈ ಶಾಲುಗಳು ನನ್ನ ಬದುಕಿನ ಭಾಗಗಳೇ ಆಗಬೇಕು. ಅಷ್ಟೊಂದು ಬಂದಿವೆ, ಕೆಲವು ನಿಮ್ಮೊಂದಿಗಿವೆ. ನಿಮ್ಮ ಅಭಿಮಾನದ ಧೂಳಿನ ಕಣವಾದ ನಾನು ಅಹಂಕಾರದ ಸಂಕೇತವಾಗದೆ ಹೋದರೆ ಸಾಕು ನಾನು ಈ ದೇಶದ ಸೂಫಿಗಳನ್ನು, ಸಾಧು-ಸಂತರನ್ನು ಗೌರವಿಸಿದ್ದೇನೆ ಎಂದುಕೊಂಡಿದ್ದೇನೆ.






Wednesday, May 21, 2014

ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ

      
     2012, ಜುಲೈ ತಿಂಗಳ ಮೊದಲ ಮಳೆಗಳ ಮಣ್ಣಿನ ವಾಸನೆಯೊಂದಿಗೆ ಮೈದಾಳಲಾರಂಭಿಸಿದರು ನನ್ನ ಸಾಕಿಯರು. ಉತ್ತರ ಕರ್ನಾಟಕದ ವಾಡೆಯಂಥ ಸಕಲೇಶಪುರದ ಹಳೆಯ ಮನೆ, ಕಾಲು ಕೆದರುತ್ತ ಸುತ್ತಲು ಸುಳಿದಾಡುವ ಕೋಳಿ, ನಾಯಿ, ಅಪರೂಪಕ್ಕೊಮ್ಮೆ ಕಪ್ಪೆ ಹಿಡಿಯಲು ಬರುತ್ತಿದ್ದ ಹಾವು, ಮನೆಗೆ ಸುತ್ತುವರಿದು ಹುಟ್ಟುತ್ತಿದ್ದ ಕಾಡುಕಾಡಾದ ಹೂ, ಹುಲ್ಲು ಗರಿಕೆಯ ಮೇಲೆ ಮಗಳ ರೆಪ್ಪೆಯಂಚಿನಲ್ಲಿ ಹೊಳೆಯುವ ಕಣ್ಣೀರ ಹನಿಯಂಥ ತುಂತುರು, ಎಲ್ಲ ಈ ಸಾಕಿಯರಂತೆ. ಲೆಕ್ಕಕ್ಕೆ ಸಿಗುವುದಿಲ್ಲ, ಒಕ್ಕಣಿಕೆಗೆ ಒಳಗಾಗುವುದಿಲ್ಲ. ಇದು ಮೋಡ ತೆಕ್ಕೆ ಹೊಡೆಯುವ ವಿಫಲ ಯತ್ನ. 
         ನಾನು ಇವರ ಕುರಿತು ಮಾತಾಡುತ್ತ ಹೊರಟೆ, ಅವಳು ಹರಿಯುವ ಮಾತಿಗೆ ಲಿಪಿಯ ಕಟ್ಟೆ ಕಟ್ಟುತ್ತ ಪಾತ್ರಗಳಾಗಿ ನಿಲ್ಲಿಸಿ ಬಿಟ್ಟಳು. ಗೆಳೆಯ ರಾಜು ಮಳವಳ್ಳಿ "'ಸಿಹಿ ಗಾಳಿ'ಗಾಗಿ ಏನಾದರೂ ವಿಶೇಷ ಕೊಡಿ ಸಾಹೇಬರೆ" ಎಂದು ಕೇಳಿದ್ದೇ ಸಾಕಾಯಿತು, ನವೆಂಬರ್ ತಿಂಗಳ ವಿಶೇಷಾಂಕದಲ್ಲಿ ಬಯಲಿಗೆ ಬಿದ್ದ ನನ್ನ ಸಾಕಿಯರು 14 ತಿಂಗಳು ನಿರಂತರ ಹಾಡಿದ್ದೇ ಹಾಡು. ಈ ಹಾಡುಗಳು ಕೆಲವರಿಗೆ ಇಷ್ಟ ಮತ್ತೆ ಕೆಲವರಿಗೆ ಕನಿಷ್ಟ. ಕೆಲವರಿಗೆ ಆತ್ಮದ ಆಲಾಪ ಮತ್ತೆ ಕೆಲವರಿಗೆ ರೋಚಕ ರಂಜನೀಯ ಓದು. ಯಾರು ಏನಾದರೂ ಅಂದುಕೊಳ್ಳಲಿ ಬರಬೇಕಾದವರು ಬಂದುಬಿಟ್ಟಿದ್ದಾರಷ್ಟೆ.

        
        ಇಂಥ ನೀಚ ಬದುಕುಗಳು ಯಾವ ಕಾರಣಕ್ಕಾಗಿ ಬರೆಯಲ್ಪಡಬೇಕು? ಇವು ಕೊಡುವ ಸಂದೇಶವಾದರೂ ಏನು? ಕಾಮದ ಕಮನೀಯತೆಯನ್ನು ಕತ್ತಲೊಳಗಷ್ಟೆ ಖುಷಿಯಾಗಿಸಿಕೊಳ್ಳುವುದು ಒಳಿತಲ್ಲವೆ? ಎಂದು ಕೆಲವರು ಜರಿದರೆ, ಮತ್ತೆ ಕೆಲವರು ಇದು ಬದುಕು ಸಾಗಿದ ರೀತಿ. ಇಂಥ ಬದುಕುಗಳಿಗೆ ಯಾವ ಲಯ, ಬದ್ಧತೆ ಹಾಗೂ ವ್ಯಾಕರಣಗಳು ಇರುವುದಿಲ್ಲ. ಇದ್ದಂತೆ ಇರಲಿ ಬಿಡಿ ಎಂದು ಸಮಾಧಾನಿಸಿದವರು ಮತ್ತೆ ಕೆಲವರು. ಬರಹ ಮುಗಿದು, ಮುದ್ರಣ ಮನೆ ಸೇರಿ, ಅಲ್ಲಿಂದ ಮನೆಮಾತಾಗಿ, ಮತ್ತೆ ಒಂದು ಪುಸ್ತಕ ರೂಪದಲ್ಲಿ ಕಟ್ಟಿಕೊಡುತ್ತಿರುವ ಈ ವೇಳೆಯಲ್ಲಿ, ಇನ್ನೂ ನಾನು ಅದೇ ದ್ವಂದ್ವದಲ್ಲಿದ್ದೇನೆ. ಸತ್ತವರನ್ನು ನೆನಪಾಗಿ ಎಬ್ಬಿಸಿ, ಸಮಾಜಕ್ಕೆ ಭೂತವಾಗಿ ಬೆನ್ನಟ್ಟಿಸುವ ನನ್ನ ಈ ಕ್ರಿಯೆ ಎಷ್ಟರ ಮಟ್ಟಿಗೆ ಸೂಕ್ತ? ಹೀಗಾಗಿಯೇ ಇರಬಹುದು, ಗೆಳತಿಯೊಬ್ಬಳ ಪರಿಶ್ರಮದಿಂದ ಸಂಪೂರ್ಣಗೊಂಡು, ಹಲವು ತಿಂಗಳಿಂದ ನನ್ನ ಟೇಬಲ್ಲಿನ ಮೇಲೆ ಬಿದ್ದುಕೊಂಡಿದ್ದ ಈಕೆಯನ್ನು ಮತ್ತೆ ಛೇಡಿಸಿದವರು, ಪೀಡಿಸಿದವರು ಚಿತ್ರ ಕಲಾವಿದ ಗೆಳೆಯ ಶ್ರೀ ಬಿ.ಎಸ್.ದೇಸಾಯಿ.
        ಬರೆದು ಬಿಟ್ಟಿದ್ದೇನೆ, ತೆರೆದೂ ಬಿಡುತ್ತೇನೆ. ತೆಕ್ಕೆಯೋ, ಧಿಕ್ಕಾರವೋ: ಸಾಂತ್ವಾನವೋ, ಸಾವೋ ಎಲ್ಲ ನಿಮಗೇ ಸೇರಿದ್ದು. ಕೃತಿಯ ಮುಖಪುಟವನ್ನು ನಿಮಗೆ ತೋರಿಸುತ್ತಿದ್ದೇನೆ. ಕೇವಲ ಒಂದು ತಿಂಗಳು ಕಾಯಿರಿ, ಬರುತ್ತಾರಿವರು ಬೆಳಕಾಗಿ, ಕೊಳಕಾಗಿ, ಎದೆ ಕಲಕುವ ಕಥೆಗಳಾಗಿ.




Thursday, May 15, 2014

ಕಣ್ಣೊದ್ದೆಯಾದಾಗ ಬುದ್ಧನೊಬ್ಬನೇ ಇದ್ದ!!!


        ನನ್ನ ಮನೆಗೆ ಬುದ್ಧ ಬರುವ ಕಾಲ, ಸಿದ್ಧತೆ ನಡೆದಿತ್ತು ನನ್ನ ಮನೆಯೊಳಗೆ ಹಾಗೂ ಮನದೊಳಗೆ. ದಿನಾಂಕ 10, ಮಧ್ಯರಾತ್ರಿ ಎರಡು ಗಂಟೆಯ ಸಮಯ ಏನೋ ಓದಿಬಿಟ್ಟೆ. ನಮ್ಮ ಬೆನ್ನು ಹಿಂದೆಯೇ ನಮ್ಮ ಎದೆ ಸೀಳುವ ಮೋಸದ ಆಲೋಚನೆ ಹೆಪ್ಪುಗಟ್ಟುತ್ತದೆ ಎನ್ನುವುದು ಎಷ್ಟೊಂದು ಆಘಾತಕಾರಿ! ಬೇಸರ, ಸಿಟ್ಟು ಮತ್ತು ಮನುಷ್ಯ ಜಾತಿಯ ಬಗ್ಗೆ ಅಸಹ್ಯ ಎಲ್ಲ ಮಡುಗಟ್ಟಿದವು ಮನಸ್ಸಿನಲ್ಲಿ. ಬಿಕ್ಕಳಿಕೆ ಉಮ್ಮಳಿಸಿ ಕಣ್ಣೊದ್ದೆಯಾದವು. ಆನಂತರ ಬರೀ ಮೌನ.
ಹೊರಗೆ ಕತ್ತಲು ಕರಗುತ್ತಲಿತ್ತು ಆದರೆ ನಸುಕಿನ ನಿದ್ರೆಯೊಳಗೆ ಬುದ್ಧ ಬರುತ್ತಲಿದ್ದ. ಅವನು, ಅವನೊಂದಿಗೆ ಕಬೀರ, ಅಕ್ಕಮಹಾದೇವಿ, ಸಾಕ್ರೆಟಸ್, ಸೂಳೆ ಸಂಕವ್ವ, ಮೀರಾ ಸಾಲು ಸಾಲಾಗಿ ಸಾಂತ್ವಾನದ ಕೈಗಳು, ನನ್ನ ದಡ್ಡತನಕ್ಕೆ ಮುಗುಳ್ನಗುವ ಮೈ ಮುಖಗಳು. ಹೇಸಿ ಮೋಹದ ಮೇಲಿಯೂ ಮಲ್ಲಿಗೆಯ ಹಾಸಿ, ನಿರ್ಭಾವುಕನಾಗಿ ಎದ್ದು ಹೆಂಡತಿಯೊಂದಿಗೆ ಬುದ್ಧನ ಬರುವಿಗಾಗಿ ಕಾಯಲು ಸಿದ್ಧನಾದೆ.

        ನನ್ನಪ್ಪನಿಂದಾಗಿ ನಾನು ಕಬೀರನ ಕೈ ಹಿಡಿದೆ. ನನ್ನ ಓದಿನಿಂದಾಗಿ ನಾನು ಬುದ್ಧನ ಬಾಗಿಲಿಗೆ ಬಂದೆ. ಈ ಮಧ್ಯ ಎಷ್ಟೆಲ್ಲ ಓದಿದ್ದರೂ ಬದುಕಿಗೆ ಬೆಂಗಾವಲಾಗಿ ನಿಂತವರು ಇವರಿಬ್ಬರೆ. ಹಾಗಾದರೆ ಅದ್ಯಾವ ಬೋಧ ಸುಧೆ ನನಗಿವರು ಉಣ್ಣಿಸಿರಬಹುದು? ಸರಳವಾಗಿದೆ ಉತ್ತರ. ಮಡದಿಯೇ ಮತ್ತೊಬ್ಬನಿಗಾಗಿ ಮಿಡುಕಾಡುತ್ತಿದ್ದುದು ಗೊತ್ತಿದ್ದು, ಕಬೀರ ಆಕೆಗೆ ನಾವಿಕನಾಗಿ, ತಾನು ವಿರ್ಭಾವುಕನಾಗಿ ಬಿಟ್ಟು ಬಂದ. ಇನ್ನು ಬುದ್ಧ ತಾನುಣ್ಣುವ ಹಂದಿ ಮಾಂಸದ ಭೋಜನವೆ ತನ್ನ ಬದುಕಿನ ಕೊನೆಯ ಊಟವಾಗುತ್ತದೆ ಎಂದು ಗೊತ್ತಿದ್ದೂ ಅದನ್ನ ಆತ ನಿರಾಕರಿಸಲಿಲ್ಲ. ಹೀಗೆ ಇಬ್ಬರೂ ಈ ಬದುಕು ನೀಡುವ ಉರಿ ಇರಲಿ, ಸಿರಿ ಇರಲಿ ತಮ್ಮೆದುರೇ ಮೋಸದ ಮಹಾ ಮುಖವಿರಲಿ ಅವುಗಳನ್ನು ಮನಸಾರೆ ಸವರಿ, ಮುತ್ತಿಟ್ಟು ಮನುಷ್ಯರನ್ನಾಗಿಸಲು ಯತ್ನಿಸಿದವರು. ಇಂಥ ಬುದ್ಧರು ಬರುವ ಕಾಲ ನಾನು ಎದ್ದು ನಿಲ್ಲಲೇ ಬೇಕಿತ್ತು ಶಿರ ಬಾಗಿ ನಮಸ್ಕರಿಸಿ ಬೆಳಕನ್ನು ಬರಮಾಡಿಕೊಳ್ಳಬೇಕಿತ್ತು. ಕಬೀರನಂತೆ ಮೌನಿಯಾಗಲೇಬೇಕಿತ್ತು ನಾನು, ಮತ್ತೆ ಬುದ್ಧನಂತೆ ಶಾಪಗಳ ಕೂಪದಲ್ಲಿ ಬಿದ್ದವರಿಗೂ ಸನ್ಮಂಗಲವೇ ಆಗಲಿ ಎಂದು ಹರಸಿ ಮುಗುಳ್ನಗಬೇಕಿತ್ತು. 
        ಬೌದ್ಧ ಪೂರ್ಣಿಮೆಯ ತುಣುಕು ಬೆಳಕಿನಂತೆ ಹುಟ್ಟಿದವಳು ನನ್ನ ಮಗಳು. ಯಾವ ವೈಶಾಖ ಪೂರ್ಣಿಮೆಯ ದಿನ ಬುದ್ಧ ಈ ಪ್ರಪಂಚಕ್ಕೆ ¨ಂದು, ಇದೇ ದಿನದಂದು ಜ್ಞಾನೋದಯ ಹೊಂದಿ ಮತ್ತೆ ಇದೇ ದಿನ ನಿರ್ವಾಣ ಹೊಂದಿದನೋ ಅದೇ ದಿನದಲ್ಲಿ ನನಗೆ ಮಗಳು ಹುಟ್ಟಿದ್ದು. ಈ ದಿನದ ಬಗೆಗಿನ ನನ್ನ ವಿಚಿತ್ರ ಮೋಹಕ್ಕೆ ಇದೂ ಒಂದು ಕಾರಣ. ಅವಳ ಕಣ್ಣು ರೆಪ್ಪೆಗಳಲ್ಲಿ ನಾನು ಬುದ್ಧನ ಅಬಾಧಿತ, ಶಾಂತ ನಿದ್ರೆಯನ್ನು ಕಂಡಿದ್ದೇನೆ. ಹೀಗಾಗಿ ಇಂಥ ಘಳಿಗೆಯನ್ನು ಕಳೆದುಕೊಳ್ಳುವುದೆಂದರೆ ಬೆಳಕಿನಿಂದ ಮುಖ ಮುಚ್ಚಿಕೊಂಡಂತೆ. ಬೇಲೂರಿನ ವೇಲಾಪುರಿ ಸಾಹಿತ್ಯ ವೇದಿಕೆಯ 20 ನೆಯ ಮನೆ ಮನೆ ಸಾಹಿತ್ಯ ಗೋಷ್ಠಿಯನ್ನು ಈ ಬೌದ್ಧ ಪೂರ್ಣಿಮೆಯ ಮತ್ತು ಮಗಳ ಜನ್ಮ ದಿನದ ಕಾರಣಾರ್ಥ ಹಮ್ಮಿಕೊಂಡೆ. ಬುದ್ಧನ ನಗೆಯಂತೆ ಈ ಸಮಾರಂಭ ಇರಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಮಾತಿರಬಾರದು, ಗೊಡ್ಡು ಪಾಂಡಿತ್ಯದ ಪ್ರದರ್ಶನವಿರಬಾರದು, ಮಕ್ಕಳು ಮಹಿಳೆಯರು, ತಿಳಿದವರು ತಿಳಿಯದವರೂ ಆನಂದಿಸುವ ಸರಳ ಸಭೆ ಇದಾಗಿರಲಿ ಎಂದುಕೊಂಡು ರಂಗ ಗೀತೆಗಳನ್ನು ಹಾಡಿಸಿ, ಆ ಮೂಲಕ ಬುದ್ಧನ ಬೆಳಕನ್ನು ಆಹ್ವಾನಿಸಿ ಅವಳನ್ನು ಹರಸಬೇಕೆನ್ನುವುದು ನನ್ನ ತಹತಹಿಕೆ. ಹಾಗೆಯೇ ಆಯಿತು. ಸೇರಿದ ಮೂವತ್ತು ಜನರಲ್ಲಿ ಹತ್ತಾರು ಜನ ಹಾಡಿ ನನ್ನ ಮನೆ ಮನಗಳನ್ನ ಚೇತೊಹಾರಿಯಾಗಿಸಿದರು. ಸಾಯಂಕಾಲ 5 ಗಂಟೆಯಿಂದ ರಾತ್ರಿಯ 2 ಗಂಟೆಯವರೆಗೂ ವೈಶಾಖ ಪೂರ್ಣಿಮೆಯ ಬೆಳಕಿನಲ್ಲಿ ಹಸುಳೆಯನ್ನು ಹುಡುಕಿಕೊಂಡು ಹಾರೈಸಲು ಬುದ್ಧ ಬರುತ್ತಲೇ ಇದ್ದ, ಗೆಳೆಯನಾಗಿ, ಹಿರಿಯನಾಗಿ ಮತ್ತು ಹೆಂಗಸಾಗಿ.

ಬರುತ್ತಿರಲಿ ಬುದ್ಧ ಹಿಗೆಯೇ, ಕಾಡಿಸುತ್ತ ಪಿಡಿಸುತ್ತ, ಹಂಗಿಸುತ್ತ ಮುಗುಳ್ನಗೆಯಿಂದ ವ್ಯಂಗಿಸುತ್ತ. ಅವನೆಷ್ಟು ಸಾರಿ ಬಂದರೂ, ಯಾವ ರೂಪದಲ್ಲಿ ಬಂದರೂ ನಾನು ಮತ್ತೆ ಮತ್ತೆ ಕರೆಯುತ್ತೇನೆ, ಈ ಬಾಗಿಲುಗಳನ್ನು ಹಿಗೆಯೇ ತೆರೆದಿಟ್ಟುಕೊಂಡು ಕುಟುಂಬ ಸಮೇತನಾಗಿ ಆಹ್ವಾನಿಸುತ್ತಲೇ ಇರುತ್ತೇನೆ ಬಾ ಬುದ್ಧನೆ ನಮ್ಮ ಬೆಳಕಾಗು ಎಂದು.

Thursday, May 1, 2014

ಕಾವಲು ನಿಲ್ಲಿಸಿದ್ದೇನೆ ಕಾವ್ಯವನ್ನು


     ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕದಳಿ ಮಹಿಳಾ ವೇದಿಕೆ, ತಾಲೂಕಾ ಶರಣ ಸಾಹಿತ್ಯ ಪರಿಷತ್, ಜಲಮಿತ್ರ ರಂಗ ವೇದಿಕೆ, ಚುಟುಕು ಸಾಹಿತ್ಯ ಪರಿಷತ್, ಮರುಳ ಸಿದ್ಧೇಶ್ವರ ಯುವಕ ಮಂಡಳಗಳ ಸಹಕಾರದೊಂದಿಗೆ ಗೆಳೆಯ ಉಮೇಶ ತಿಮ್ಮಾಪುರ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜನಲ್ಲಿ ದಿನಾಂಕ 20/04/2014 ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ನನ್ನೊಂದಿಗೆ ಕುಂ.ವೀರಭದ್ರಪ್ಪ, ಮುಖ್ಯ ಅತಿಥಿಯ ಪಾತ್ರಕ್ಕೆ ನಾನು. ಗೋಷ್ಠಿ ಒಂದರಲ್ಲಿ ಗೆಳೆಯರಾದ ಪ್ರಕಾಶ ಖಾಡೆ, ವಿದ್ಯಾ ಕುಂದರಗಿ, ಸಾವಿತ್ರಿ ಮುಜುಂದಾರ ಕವಿಗೋಷ್ಠಿಯಲ್ಲಿ ವಡ್ಡಗೆರೆ ನಾಗರಾಜಯ್ಯ, ರಾಜೇಶ್ವರಿ.ಎನ್ ಹಾಗೂ ಉಳಿದ ಇಪ್ಪತ್ನಾಲ್ಕು ಕವಿಗಳು, ಸಮಾರೋಪಕ್ಕೆ ಗೆಳೆಯರಾದ ಡಾ.ಬಾಳಾಸಾಹೇಬ ಲೋಕಾಪೂರ, ವೆಂಕಟಗಿರಿ ದಳವಾಯಿ, ಡಾ. ನಿಂಗು ಸೊಲಗಿ ಹಾಗೂ ಜೋಳದ ಕೂಡ್ಲಿಗಿ.


     ಚಿಕ್ಕಮಂಗಳೂರು, ಹರಿಹರ, ಹೂವಿನ ಹಡಗಲಿ ಮಾರ್ಗವಾಗಿ ಹಿಂದಿನ ದಿನ ಮುಂಡರಗಿಯನ್ನು ತಲುಪಿದ ನಾನು ಸರಿಯಾಗಿ ಎರಡು ರಾತ್ರಿ ಉತ್ತರ ಕರ್ನಾಟಕದ ಊಟ, ವಿಚಾರ ಹಾಗೂ  ಪ್ರೀತಿಯ ಜಾತ್ರೆಯಲ್ಲಿ ಇದ್ದೆ ಎಂದೇ ಹೇಳಬೇಕು. 
ಕಾವಲು ನಿಲ್ಲಿಸಿದ್ದೇನೆ
ಕಾವ್ಯವನ್ನು, ಸತ್ಯ ಸಂಘರ್ಶಗಳ
ಬೆನ್ನಿಗೆ ಪದ ಗುಚ್ಚಗಳನ್ನೇರಿಸಿ
ಜಾತಿ-ಮತದ ಗಡಿಯಲಿ
ಸಾಲು ಕಟ್ಟಿದ್ದೇನೆ ಸಮಾನತೆಯ
ಅಸಮಾನತೆಯ ಕಟುಸಂಕೋಲೆಯ
ಲಾಂಛನ ಕಿತ್ತೆಸೆದು
        ಹೀಗೆ ಕವಿತೆಗೊಂದು ಕಾಯಕ ಕಟ್ಟಿ ‘ಬಿರಿದ ನೆನಪುಗಳು’, ‘ಮೆಘಧ್ವನಿ’, ‘ತ್ವಯ್ದ ಬದುಕಿನ ಸಾಲು’. ‘ಒರತೆ’, ‘ಕಾಡುದಾರಿಯ ಕಂದಿಲುಗಳು’, ‘ನಡುಹಗಲ ಸಂಜೆ’, ‘ಸಮುಕ್ಷ’, ‘ಕಥಾಲೋಕ’ ಹತ್ತು ಹಲವಾರು ಕೃತಿಗಳನ್ನು ರಚಿಸಿ, ನನ್ನೊಂದಿಗೆ ನಮ್ಮವನಾಗಿ ಎಲ್ಲರನ್ನು ‘ಅಣ್ಣಾ’ ಎನ್ನುವ ಸಂಬೋಧನೆಯಿಂದಲೇ ಬಾಚಿ ತಬ್ಬುವ ಉಮೇಶನ ಸಾಹಿತ್ಯದ ವಿಮರ್ಶೆಗೆ ಇನ್ನೂ ದೀರ್ಘವಾದ ದಾರಿಯಿದೆ, ಸಮಯವೂ ಇದೆ. ಆದರೆ ಬರಹವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಎತ್ತಿಕೊಂಡಿರುವ ಇಂಥ ಗೆಳೆಯನನ್ನು ಪ್ರೋತ್ಸಾಹಿಸಬೇಕಾದುದು ನಮ್ಮ ಧರ್ಮವಾಗಿದೆ. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಉಮೇಶ ಇದೇ ಮುಂಡರಗಿ ತಾಲೂಕಿನ ಕೆಲುರು ಗ್ರಾಮದವ. 42 ವಯಸ್ಸಿನ ಈ ನನ್ನ ಗೆಳೆಯನಿಗೆ ಸಾವಿರಾರು ಕನಸುಗಳು ಇವೆ. ಅವುಗಳನ್ನು ಕಾಪಾಡಿಕೊಂಡರೆ ಸಾಗಿದಷ್ಟು ದಾರಿಯೂ ಇದೆ. ಅವನ ಕಾವ್ಯ ಕುರಿತು ಮುಂಡರಗಿಯಲ್ಲಿ ಮಾತನಾಡುತ್ತ ನಾನು ಒಂದು ಮಾತನ್ನು ಹೇಳಿದೆ : With the magnanimity of innocence poets take birth, but alas! With individual hypocrisy they die. ಇದೊಂದು ಸ್ಥಳೀಯ ರೋಗ. ಎಷ್ಟೆಲ್ಲ ಪ್ರತಿಭೆ ಇರುವ ಅದೆಷ್ಟೋ ಬರಹಗಾರರು ಇದರಿಂದ ಬಿಡಿಸಿಕೊಳ್ಳುವದಾಗಿಲ್ಲ. ಪರಸ್ಪರ ಕಾಲೆಳೆಯುವದರಲ್ಲಿ ಯೇ ಕಾಲ ಕರಗಿ ಹೋಗಿದೆ. 
     ಸಂತೋಷದ ಸಂಗತಿ ಇದರಿಂದ ಹೊರತಾದವನು ಗೆಳೆಯ ಉಮೇಶ ತಿಮ್ಮಾಪೂರ. ಇವನ ಅನೇಕ ರಚನೆಗಳಲ್ಲಿ ನನಗೆ ಇಷ್ಟವಾದ ಒಂದು ರಚನೆ ನಿಮ್ಮೊಂದಿಗೆ. . . . .

ನೀನೆಂದರೆ
ಮೈಮುರಿದು ಮಲಗಿದ ಬೆಟ್ಟ
ಸುಖ ಸ್ಪರ್ಶ ನೀಡುವ
ತಂಗಾಳಿ
ತಲೆಯ ತೆವಲಿನ ತುರುಬ
ಬತ್ತಿ ಹೆಣೆದ ಜಡೆಗೆ
ತೀಡಿ ಮಾಡಿದ
ಮುತ್ತು ಮಾಲೆ

ನೀನೆಂದರೆ. .
ಕಾಡು ತೋಪಿನ ಮಾವು
ರೆಂಬೆಗಿಳಿದಾ ಗೊಂಚಲು
ಹಸಿದ ಹೊಟ್ಟೆ ತಣಿದ
ರಸಪಾಕ

ನೀನೆಂದರೆ. .
ಹರಿವ ನೀರ್ಝೆರೆ
ತುಳುಕಿ ದಡ ಸೇರುವ
ತೆರೆ
ಸರಿದ ಕತ್ತಲಿನ
ಸೆರಗ ಮುಡಿಯಲಿ ತುಂಬುವ
ಹಗಲ ಬೆಳಕಿನ
ಕಣ್ಣ ಮಂಜು

ನೀನೆಂದರೆ. .
ಒಡಲು ಬಿರಿದ
ನೆಲದೊಡತಿಯ
ಮಳೆಯ ಮುಂಜಾವ
ಎದೆಯೊಳಗ
         ಪುಳಕಗೊಂಡ ಜಲಕನ್ಯ