Total Pageviews

Thursday, June 6, 2013

ಗೊಡ್ಸೆ ಕೊಂದಿದ್ದು ಯಾರನ್ನು?

 
      ಇತ್ತಿಚಿಗೆ ನಾನು ಓದಿದ ಡಾ.ರಾಜಶೇಖರ ಮಠಪತಿಯವರ(ರಾಗಂ) ಅವರ `ಗಾಂಧಿ: ಅಂತಿಮ ದಿನಗಳು’, ಹಾಗೂ ` ಗಾಂಧಿ: ಮುಗಿಯದ ಅಧ್ಯಾಯ’ ಇವು ವಿಭಿನ್ನ ದೃಷ್ಟಿಕೋನದ ವಿಶಿಷ್ಟ ಕೃತಿಗಳಾಗಿವೆ. ಗಾಂಧಿಯ ಸುತ್ತ ಹುತ್ತಗಟ್ಟಿರುವ ಮಿಥ್‍ಗಳನ್ನು ಒಡೆದು ಮಾನವೀಯ ತುಡಿತ ಮಿಡಿತಗಳಿಂದ ಸರಿಪಡಿಸಿ ಮಿಡಿವ ಹಾಗೆ ಮಿಡಿಯುತ್ತಲೇ ಓದುಗರ ಉಸಿರಿನೊಂದಿಗೆ ಒಂದಾಗಿಬಿಡುವ ಗಾಂಧಿಯೊಳಗಿನ ಅಸಹಾಯಕ ಗಾಂಧಿಯನ್ನು ಭೇಟಿಯಾಗುತ್ತೇವೆ. ಮಠಪತಿಯವರ ಅತ್ಯಪೂರ್ವ ವಾಸ್ತವ ಓಳನೋಟಗಳಿಂದ ಕೂಡಿದ ಈ ಎರಡು ಕೃತಿಗಳು ನಿಸ್ಸಂದೇಹವಾಗಿ ಅಪರೂಪದ ಕೃತಿಗಳಾಗಿವೆ. 
            ಈ ಕೃತಿಗಳನ್ನು ಓದಿದಂತೆ ದೂರದ ಗಾಂಧಿ ನಮಗೆ ಹತ್ತಿರವಾಗುತ್ತಾರೆ. ಹಾಗೆ ಹತ್ತಿರವಾಗುತ್ತಲೇ ಜನರ ನಾಡಿ-ಮಿಡಿತಗಳೊಂದಿಗೆ ಆಪ್ತವಾಗಿ ಮಿಡಿಯುತ್ತಾ ಒಳಚಿಂತನೆಗೆ ಪ್ರೇರೆಪಿಸುತ್ತಾರೆ. ಏಕೆಂದರೆ ಎರಡೂ ಕೃತಿಗಳು ಗಾಂಧಿಯ ಅಂತಿಮ ದಿನಗಳ ಅಸಹಾಯಕ ಸಂಕೀರ್ಣ ಓಳನೋಟಗಳ ಜೇನುಗೂಡಾಗಿವೆ. ರಾಗಂ ತಮ್ಮ ಸರಾಗವಾದ ಸರಳ ಶೈಲಿಯಲ್ಲಿ ಗಾಂಧಿ ಅಂತಿಮ ದಿನಗಳಲ್ಲಿ ಎದುರಾದ ಸಂದಿಗ್ದಗಳನ್ನು ಹಿಡಿದುಕೊಟ್ಟು ಓದುಗರ ಕುತೂಹಲವನ್ನು ಕೆರಳಿಸುತ್ತಾರೆ. ಅವರ ಈ ಚುಂಬಕ ಶಕ್ತಿಯ ಅಭಿವ್ಯಕ್ತಿಯಿಂದಾಗಿ ಗಾಂಧಿಯ ಅಸಹಾಯಕತೆಯ ಕುರಿತು ಓದುಗನನ್ನು ಮತ್ತೆ ಮತ್ತೆ ಚಿಂತನೆಗಿಡು ಮಾಡುತ್ತದೆ. ಅಭಿವ್ಯಕ್ತಿಯ ಶೈಲಿ ಅವ್ರ ಕೈಲಿ ಹೊಸ ಮೈಲಿಗಲ್ಲನ್ನು ತೆರೆದಿದೆ. ಬರವಣಿಗೆಯ ಓಘವಂತೂ ಅಮೋಘ.
         ನಿಸರ್ಗ ನಿಗೂಢಶಕ್ತಿಗಳ ಅಗಣಿತ ಗಣಿ. ಹೆಕ್ಕಿದಷ್ಟೂ ಉಕ್ಕುವ ಅದರ ಉತ್ಸಾಹಕ್ಕೆ ಕೊನೆ ಇಲ್ಲ. ಅದು ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಹವಣಿಸುತ್ತದೆ. ದಾರ್ಶನಿಕರನ್ನು, ಮಹಾನ್ ಸಾಹಿತಿಗಳನ್ನು, ವಿಜ್ಞಾನಿಗಳನ್ನು, ಸಾಹಸಿಗರನ್ನು, ಅದ್ಭುತ ಸಂಗೀತಜ್ಞರನ್ನು, ಕಲಾವಿದರನ್ನು, ಶಿಲ್ಪಿಗಳನ್ನು ಆಯ್ಕೆಮಾಡಿಕೊಂಡು ತನ್ಮೂಲಕ ಹೊರಹೊಮ್ಮುತ್ತದೆ. ಅಂತಹ ಆಯ್ಕೆಗಳಲ್ಲಿ ಗಾಂಧಿಯೂ ಒಬ್ಬರು.
ನಿಜ, ಅದು ಗಾಂಧಿಯನ್ನು ಆಯ್ಕೆ ಮಾಡಿಕೊಂಡು ಜಗತ್ತಿಗೆ ಕರುಣಿಸಿದ ಕಾಣ್ಕೆ ಯಾವುದು? ಆ ಕಾಣ್ಕೆಗಳು ಹಲವಾದರೂ ಪ್ರಧಾನವಾಗಿ ಕಣ್ಮುಂದೆ ಕಡೆದು ನಿಲ್ಲುವುದು ಅಹಿಂಸೆ ಹಾಗೂ ಅಚ್ಚಳಿಯದ ಮಾನವ ಪ್ರೀತಿ.
ಗಾಂಧಿ ಅಹಿಂಸೆಯ ಪ್ರತಿರೂಪವಾಗಿದ್ದರೂ ಅವರು ತಮ್ಮೊಳಗೆ ಅನುಭವಿಸಿದ ಹಿಂಸೆಯ ಸ್ವರೂಪ ಅತ್ಯಂತ ಸೂಕ್ಷ್ಮವಾದುದು, ಸಂಕೀರ್ಣವಾದುದು. ಅಳತೆಗೆಟುಕದ ಅದರದು ಸಾಗರದ ಆಳ. ಆಕಾಶದ ಅಗಲ. ಇದು ಎಲ್ಲ ಸೂಕ್ಷ್ಮ ಜೀವಿಗಳೂ ಅನುಭವಿಸಲೇಬೇಕದ ಅನಿವಾರ್ಯತೆ ಎಂಬ ಸತ್ಯವನ್ನು ಸಾರುತ್ತದೆ. ನಾವು ಯಾವ ಗಾಂಧಿಯನ್ನು ನೋಡಬೇಕು? ಅರೆಬೆತ್ತಲಾಗಿ ಪ್ರಪಂಚದ ಉದ್ದಗಲ ಓಡಾಡಿದ ಆತನ ಬೆತ್ತಲೆ ಎದೆಯನ್ನೇ? ಅಥವಾ ಮಾನವ ಪ್ರೀತಿಯನ್ನೇ ಎದೆಯ ತುಂಬಾ ತುಂಬಿಕೊಂಡು ಅಹಿಂಸೆಯ ಆಗರವಾಗಿದ್ದ ಒಳ ಎದೆಯ ಗಾಂಧಿಯನ್ನೇ? ಎರಡನ್ನೂ ನೋಡಬೇಕು. ನೋಡಿ, ಅವು ಕರುಣಿಸಿದ ಕಾಣ್ಕೆಯನ್ನು ಕಂಡು ಅಪ್ಪಬೇಕು. ಬೆತ್ತಲಾಗಿದ್ದ ಆತನ ಹೊರ ಎದೆ ಕರುಣಿಸಿದ್ದು  ಸರಳತೆಯನ್ನಾದರೆ ಆತನ ಒಳ ಎದೆ ಕರುಣಿಸಿದ್ದು ಸಾರ್ವಕಾಲಿಕ ಸತ್ಯವನ್ನು. ಗಾಂಧಿಯ ಹೆಗ್ಗಳಿಕೆ ಎಂದರೆ ಆತ ಕ್ರೌರ್ಯವನ್ನು ಕರುಣೆಯನ್ನಾಗಿ ಪರಿವರ್ತಿಸಬಲ್ಲ, ಅತ್ಯಂತ ಕಠಿಣ ಎನ್ನುವ ಉಕ್ಕನ್ನೂ ಹೂವಾಗಿಸಬಲ್ಲ, ಅದುವರೆಗೂ ಜಗತ್ತು ಕಂಡರಿಯದ ವಿನೂತನ ಚುಂಬಕ ಶಕ್ತಿ. ಮನುಕುಲ ಬದುಕಿ ಉಳಿಯಬೇಕಾದರೆ ಗಾಂಧಿಯ ಈ ಕಾಣ್ಕೆಗಳನ್ನು ಅರಗಿಸಿಕೊಳ್ಳಬೇಕಾದುದು ಅನಿವಾರ್ಯ.
       ಜಗತ್ತಿಗೆ ಬಂದ ದಾರ್ಶನಿಕರು ಎರಡು ದುರಂತಗಳಿಗೆ ಒಳಗಾಗಿಬಿಡುತ್ತಾರೆ. ಒಂದೋ ಆರಾಧನೆಗೆ ಇಲ್ಲಾ ಅವಜ್ಞೆಗೆ. ಇದು  ಮಾನವ ಇತಿಹಾಸದ ಕಟು ವ್ಯಂಗ್ಯ. ಭಾರತೀಯ ಮನಸ್ಸೆಂಬುದಂತೂ ಅರಿತು ಆಚರಿಸುವ ಗುಣದ್ದಲ್ಲ, ಬದಲಿಗೆ ಪೂಜಿಸುವುದು ಇಲ್ಲ ತ್ಯಜಿಸಿಬಿಡುವುದು ಅದರ ಹುಟ್ಟುಗುಣ. ದಿನಕಳೆಂದಂತೆ ಗಾಂಧಿ ಈ ಎರಡೂ ದುರಂತಗಳಿಗೆ ಬಲಿಯಾಗುತ್ತಿದ್ದಾರೆ.
       ಬಂದೂಕಿನ ಬಲ ಹೊಂದಿದ್ದ ಬ್ರಿಟಿಷರನ್ನು ಒಲಿಸಿಕೊಂಡ ಗಾಂಧಿಯ ಶಕ್ತಿಗೆ ಭಾರತದ ಹಿಂದೂ-ಮುಸ್ಲಿಂ ನಡುವಿನ ಬಿರುಕನ್ನು ಬೆಸೆಯಲಾಗಲಿಲ್ಲ. ಕಾರಣ ಬ್ರಿಟಿಷರ ನಡೆ ಅರಿವಿನದ್ದಾದರೆ ಭಾರತೀಯರ ನಡೆ ಅಮಲಿನದು. ಧರ್ಮದ ಅರಿವಿನಿಂದ ದೂರವಾದ ಹಿಂದೂ-ಮುಸ್ಲಿಂ ಮನಸ್ಸುಗಳು ಮತೀಯ ಅಮಲನ್ನು ಅಪ್ಪಿ ಹಿಡಿದಿದ್ದವು. ಅಪ್ಪಿ-ತಪ್ಪಿಯೂ ಆ ಅಮಲಿನ ಅಪ್ಪುಗೆಯಿಂದ ಹೊರಳಲಿಲ್ಲ. ಗಾಂಧಿ ತನ್ನ ಅಂತಿಮ ದಿನಗಳಲ್ಲಿ ಅಡಿಯಿಂದ ಮುಡಿವರೆಗೆ ಅನುಭವಿಸಿದ್ದು ಈ ಮತೀಯ ಸಂಘರ್ಷದ ಕಹಿ ಒಂದಾದರೆ ಮತ್ತೊಂದು ಚರಕವನ್ನು ಬೆಂಬಲಿಸುತ್ತಲೇ `ಬೃಹತ್ ಗಿರಣಿಗಳನ್ನು ತಮ್ಮ ಅಂತರಂಗದಲ್ಲಿ ಅಪ್ಪಿ ಹಿಡಿದಿದ್ದ ಸ್ವಾರ್ಥ ಹಿಂಬಾಲಕರನ್ನು . ಅಧಿಕಾರವನ್ನೇ ಆತ್ಮವಾಗಿಸಿಕೊಂಡಿದ್ದ ಈ ಹಿಂಬಾಲಕರು ಭಾರತೀಯ ಹೃದಯವನ್ನು ಛಿದ್ರಗೊಳಿಸುವಲ್ಲಿ ಹಿಂದೆ-ಮುಂದೆ ನೋಡಲಿಲ್ಲ.
    ಗಾಂಧಿಯದು ಎಲ್ಲವೂ ಸರಿ ಎಂದಲ್ಲ. ಆದರೆ ವಿಶ್ವವ್ಯಾಪಕವಾದ ಅವರ ಮಾನವೀಯ ಹೃದಯದ ಪ್ರೀತಿಯನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತೆಯೂ ಇಲ್ಲ. ವಿಶ್ವ ಭಾತೃತ್ವವನ್ನು ಬಿತ್ತಲೆತ್ನಿಸಿದ ಅವರ ಅಹಿಂಸಾತತ್ವ ಹಿಂಸೆಯಿಂದಲೇ ಅಂತ್ಯಗೊಂಡಿದ್ದು ಒಂದು ದುರಂತವೇ ಸರಿ. ಸರ್ವಧರ್ಮಗಳನ್ನು ಸಮಾನವಾಗಿ ಪ್ರೀತಿಸಿ, ನಿರಾಶ್ರೀತರಿಗೆ ಆಶ್ರಯವನ್ನು ನೀಡಿದ ಹಾಗೂ ನೀಡುತ್ತಿರುವ ಸರ್ವಧರ್ಮ ಸಮನ್ವಯದ ಒಂದು ರಾಷ್ಟ್ರ ಭೂಮಿಯ ಮೇಲಿದ್ದರೆ ಅದು ಭಾರತ ಒಂದೇ. ಅದರ ಆ ಹೃದಯ ವೈಶಾಲ್ಯತೆಯನ್ನು ಮತೀಯ ಕತ್ತಲೆ ಮತ್ತೆ ಕಬಳಿಸದಿರಲಿ ಎಂಬ ಎಚ್ಚರವನ್ನು ಈ ಕೃತಿಗಳು ಕರುಣಿಸುತ್ತವೆ.
        ಇತಿಹಾಸವನ್ನು ಅಮೂಲಾಗ್ರ ಅರಿತಿದ್ದ ವಿವೇಕಾನಂದರು,` ಸ್ವಮತಾಭಿಮಾನ, ಅನ್ಯಮತ ದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದಲೂ ಆವರಿಸಿಕೊಂಡಿರುವುದು. ಹಲವು ವೇಳೆ ನರರಕ್ತದಿಂದ ತೋಯಿಸಿರುವುದು. ಸಂಸ್ಕೃತಿಯನ್ನು ನಾಶಮಾಡಿರುವುದು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುದು. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದೆಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು.’ ಎಂದು ವಿಶ್ವವೇದಿಕೆಯಲ್ಲಿ ಮೊಳಗಿಸಿದ ಎಚ್ಚರದ ನುಡಿಗಳು ಮತೀಯ ಅಮಲಿನ ಈ ಹುಚ್ಚರನ್ನು ಎಚ್ಚರಿಸಲಾಗಲಿಲ್ಲ. ಹೀಗಾಗಿ ಗಾಂಧಿ, ಅಹಿಂಸೆಯನ್ನು ಜಗತ್ತಿಗೆ ಸಾರಿದ ಗಾಂಧಿ ಅಂತಿಮವಾಗಿ ಗೋಡ್ಸೆಯ ಗುಂಡಿಗೆ  ತೆತ್ತರು. 

       ಗಾಂಧಿಯ ಸಾವು ಎಂತಹ ಸಾವು? ` ನಾನು ರಾಜಕೀಯ ವೇಷ ಧರಿಸಿದ್ದರೂ ನಿಜವಾಗಿಯೂ ಅಂತರಂಗದಲ್ಲಿ ಧಾರ್ಮಿಕ ವೃತ್ತಿಯವನು’ ಎಂದು ಗಾಂಧಿ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ದಾರ್ಶನಿಕ ಗಾಂಧಿಯೊಳಗೆ ಅಪೂರ್ಣ ರಾಜಕೀಯ ವ್ಯಕ್ತಿತ್ವದ ಗಾಂಧಿ ಸೇರಿಕೊಂಡು ಅತ್ತ ಬುದ್ಧನ ಪರಿಪೂರ್ಣ ದಾರ್ಶನಿಕ ವ್ಯಕ್ತಿತ್ವವಾಗಲಿ ಇಲ್ಲಾ ಮಾವೋತ್ಸೆ ತುಂಗನ ರಾಜಕೀಯ ಮುತ್ಸದ್ಧಿತನವಾಗಲೀ ಇಲ್ಲದೇ ಗಾಂಧಿ ಅಪೂರ್ಣವಾಗಿ ನಿಲ್ಲುತಾರೆ. ಹೀಗಾಗಿ ಗೋಡ್ಸೆ ಕೊಂದದ್ದು ರಾಜಕೀಯ ಗಾಂಧಿಯನ್ನೋ ಇಲ್ಲಾ ದಾರ್ಶನಿಕ ಗಾಂಧಿಯನ್ನೋ? ರಾಜಕೀಯ ಗಾಂಧಿಯ ಕೊಲೆಯಾಗಿದ್ದರೆ ಅದು ದುರಂತ. ದಾರ್ಸನಿಕ ಗಾಂಧಿಯ ಕೊಲೆಯಾಗಿದ್ದರೆ ಅದು ಅಮರ. ಇಬ್ಬರ ಕೊಲೆಯಾಗಿದ್ದರೆ ಅದು ಇತಿಹಾಸದ ವ್ಯಂಗ್ಯ.
ಸಂಕೀರ್ಣ ಮನಸ್ಸಿನ ಈ ಗಾಂಧಿ ಜನಕ್ಕೆ ಅರ್ಥವಾಗಲೇ ಇಲ್ಲ. ಆತ ತನ್ನ ಅಂತಿಮ ದಿನಗಳಲ್ಲಿ ಪಟ್ಟ ಪರಿಪಾಟಲುಗಳನ್ನು ಡಾ.ರಾಜಶೇಖರ ಮಠಪತಿಯವರು ಮನ ಕಲುಕುವಂತೆ, ಹೃದಯ ಅಲುಗುವಂತೆ ತಾಯಿ ಪ್ರೀತಿಯ ಭಾಷೆಯಲ್ಲಿ ಕಡೆದುಕೊಟ್ಟಿದ್ದಾರೆ. ಯಾರೇ ಆಗಿರಲಿ ಅವರು ನೆಲ ಸೇರುವ ಮುನ್ನ ಓದಿದರಾದರೆ ಅವರಿಗೆ ಅದರ ಫಲ, ಇಲ್ಲವಾದರೆ ವಿಫಲ.

ಹಾಸನ                                                                                                 ಜಹೊನಾ
30-50-13                                                                                    ಮೊ-948037033
ಜ.ಹೊ. ನಾರಯನಸ್ವಾಮಿ
†064ಅ,`ಮಾನವ’
ಉತ್ತರ ಬಡಾವಣೆ
ಹಾಸನ


Sunday, May 19, 2013

ಬೋಧಿ ನೆರಳಿನ ದಾರಿಯಲ್ಲಿ….




      ಬೋಧಿ, ಬೋಧಿಸತ್ವ ಮತ್ತು ಬುದ್ಧ ಇವು ಭಾರತದ ಒಟ್ಟು ಇತಿಹಾಸವನ್ನು ಆವರಿಸಿಕೊಂಡಿರುವ ಅಮೋಘ ಪದಗಳು. ಇವು ಒಬ್ಬ ಬುದ್ಧನನ್ನು ಗಿರಕಿ ಹೊಡೆದ ಆಲೋಚನೆಗಳು ಎಂದು ನಾವು ತಿಳಿದುಕೊಳ್ಳುವುದಾದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಬುದ್ಧನಾಗುವ, ಬುದ್ಧರಾಗುವ ನಿರಂತರ ಪ್ರಯತ್ನವೇ ಭಾರತೀಯ ಬದುಕಿನ ಒಟ್ಟು ಸೌಂದರ್ಯ. ವಯಸ್ಸು ಮತ್ತು ವ್ಯಕ್ತಿಗತ ತಾತ್ಕಾಲಿಕ ಅವಶ್ಯಕತೆಗಳಿಗಾಗಿ ಯಾವುದೇ ಮಿತಿಯೊಳಗೆ ನಿಂತು ಮಾತನಾಡಿದರೂ ಯಾವುದೋ ನಿರ್ದಿಷ್ಟ ಧರ್ಮ, ಚಿಂತನೆ, ಪಂಗಡಕ್ಕೆ ಒಳಗಾಗಿದ್ದರೂ ಅಂತಿಮ ಉದ್ದೇಶ ಮಾತ್ರ ಈ `ಭೋಧಿ ನೆರಳಿನ ದಾರಿ’ಯನ್ನು ಅರಸುವುದೇ ಆಗಿದೆ. ಚೆನ್ನಪಟ್ಟಣದ ಪಲ್ಲವ ಪ್ರಕಾಶನ ಹೊರತಂದ, 2012 ನೇ ಸಾಲಿನ `ತೇಜಸ್ವಿ ಕಟ್ಟೀಮನಿ ಪ್ರಶಸ್ತಿ’ಗೆ ಭಾಜನವಾದ ಗೆಳೆಯ ವಿಠ್ಠಲ ದಳವಾಯಿಯವರ ಕಾವ್ಯ ಸಂಕಲನ `ಭೋದಿ ನೆರಳಿನ ದಾರಿ’ ನನ್ನ ಈ ಮೇಲಿನ ವಾದದ ಒಟ್ಟು ತಿರುಳಾಗಿ ಮೂಡಿಬಂದಿದೆ. ಹೃದ್ಯ ಕಾವ್ಯದ ಪ್ರೀತಿಯ ಕವಿಯಾದ ದಳವಾಯಿ ಸಮಕಾಲೀನ ತಲ್ಲಣಗಳಾದ ಭೂ ಸ್ವಾಧೀನ, ಆತ್ಮವಂಚನೆಗೊಳಗಾಗುತ್ತಿರುವ ರೈತ ಸಮುದಾಯ, ಜಾಗತೀಕರಣಗಳನ್ನು ಕುರಿತು ಗಂಭೀರವಾಗಿ ಇಲ್ಲಿ ಕವಿತೆಗಳನ್ನು ಹೆಣೆದಿದ್ದಾರೆ. ದಲಿತ ಕಾವ್ಯದ ಸಿಟ್ಟು, ಒತ್ತಡ, ಹತಾಶೆಗಳ ಹಸಿ-ಹಸಿ ಭಾಷೆಗಳಿಂದ ಹೊರಬಂದು ಸಮಷ್ಠಿ ಪ್ರಜ್ಞೆಯ ಗಂಭೀರ ಕವಿಯಾಗಿ ಹೊರ ಹೊಮ್ಮಿದ್ದಾರೆ ಎನ್ನಲು ಅವರ ಎರಡು ಕವಿತೆಗಳ ಈ ಎರಡು ಪದ್ಯಗಳನ್ನು ನೋಡಿ-

ಹಗಲಿರಳು ದುಡಿದರೂ
ಹೊಸತಾಗದ ಬನಿಯನ್ನಿನಲ್ಲಿ
ಮೂಡಿದ ಭಾರತ ನಕಾಶೆ
ನನ್ನಪ್ಪನ ಕಪ್ಪು ಬೆನ್ನನ್ನು ಬೆತ್ತಲಾಗಿಸುತ್ತದೆ  (ಅಪ್ಪ ನೆನಪಾಗುತ್ತಿಲ್ಲ)
**************

ಅವಧೂತರ ಆತುಮಗಳು ಅಡ್ಡಾಡುವ
ಈ ಅವನಿಯಲ್ಲಿ ಕಾಲಿಡಲಾಗದಷ್ಟು
ಅವಮಾನ ಮರಾಮೋಸದ ಮಗ್ಗುಲ ಮುಳ್ಳೆದ್ದು
ರಕ್ತಸಿಕ್ತ ಹೆಜ್ಜೆಜಾಡು ಮೂಡಿದೆ  (ಅವಧೂತರ ನೆಲದಲ್ಲಿ)
***************

         ದಳವಾಯಿಯವರ ಮೊದಲ ಪದ್ಯ ರೈತನಾದ ತನ್ನ ತಂದೆಯನ್ನು ಕುರಿತೇ ಹಾಡಿದ್ದರೂ ಅದರೊಳಗಿನ ಹಸಿವು ಮತ್ತು ಬಡತನ ಮಾತ್ರ ಸರ್ವವ್ಯಾಪಿಯಾದವುಗಳು. ಈ ಸಾಲುಗಳು ತಟ್ಟನೆ ಒಂದು ಕ್ಷಣ ಸಿದ್ಧಯ್ಯ ಪುರಾಣಿಕರ `ಸಲಾಂ ಸಾಬ್’ ಪದ್ಯವನ್ನು ನೆನಪಿಸುತ್ತವೆ. `ಜಡ ತನುವಿಗಿರಬಹುದು, ಬಡತನಕ್ಕೆ ಕುಲವುಂಟೆ’ ಎಂದು ಮಾತನಾಡಿದ ಪುರಾಣಿಕರ ಜಾಡಿನಲ್ಲಿಯೇ ದಳವಾಯಿಯವರ `ಅಪ್ಪ ನೆನಪಾಗುತ್ತಿಲ್ಲ’ ಕವಿತೆ ಸಾಗಿ ಹೋಗುತ್ತದೆ. ಹಾಗೆಯೇ ಅವರ `ಅವಧೂತರು ನಡೆದ ನೆಲದಲ್ಲಿ’ ಕವಿತೆಯೂ ಕೂಡ. ಕವಿ ಬಿ.ಆರ್. ಪೋಲಿಸ ಪಾಟೀಲರ `ಎಂಥ ಚೆಂದಿತ್ತ ಹಿಂದೂಸ್ಥಾನ’ ಕವಿತೆಯನ್ನು ಈ ಕವಿತೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಓದಬೇಕು. ಪಾಟೀಲರು ಲಾವಣಿಯ ಶೈಲಿಯಲ್ಲಿ ಹೇಳುತ್ತಾರೆ, `ತ್ಯಾಗಿ ಮಾಡಿದ ಮಂಚದ ಮ್ಯಾಲ ಗೂಗಿ ಕುಂತಾವಲ್ಲ, ಮೈಲಾರ ಲಿಂಗ’. ಇದನ್ನೇ ದಳವಾಯಿ `ಅವಧೂತರ ಆತುಮಗಳು ಅಡ್ಡಾಡುವ ... ...’ ಎನ್ನುವ ಸಮಕಾಲೀನ ಭಾಷೆಯಲ್ಲಿ ಪುನರುಚ್ಛರಿಸಿದ್ದಾರೆ.
       ಕಾವ್ಯದ ವಸ್ತು ಆಯ್ಕೆಯ ಸೂಕ್ಷತೆಯನ್ನು ಸೂಚಿಸುವ ದಳವಾಯಿಯವರ ಎರಡು ಕವಿತೆಗಳು `ಕಡಲ ತಡಿಯಲ್ಲೊಬ್ಬ ಬಡ ಜೋಗಿ’ ಹಾಗೂ `ಅವಸರವಿದ್ದರೂ’ . ಈ ಕೆಳಗಿನ ಪದ್ಯಗಳನ್ನು ಓದಿ-
ಒಲವಿನ ಮಾನಿನಿಯರೆ
ಸಾಕಿನ್ನು ಏಳಿ ಸೂರ್ಯಸ್ನಾನ
ಬಡಜೋಗಿಯು ನಾನು
ಒಂಚೂರು ಕೇಳಿ ಎದೆಯ ಗಾನ   (ಕಡಲ ತಡಿಯಲ್ಲೊಬ್ಬ ಬಡ ಜೋಗಿ)
****************

ಅದೆಷ್ಟೇ ಅವಸರವಿದ್ದರೂ
ಅಡ್ಡಾಡುವ ಕೋಳಿಮರಿ
ನೋಡಿಕೊಂಡೇ ಗಾಡಿ ಓಡಿಸು
ಗೆಳೆಯಾ
ಇರುವಂತೆಯೇ ದಾಟಿಸಲಾಗದು ಮುಟ್ಟಿಸಲಾಗದು
ಒಳ ಹುಟ್ಟಿ ಹೊರಳಾಡುವ ಹಸಿ ಮಾತುಗಳ  (ಅದೆಷ್ಟೇ ಅವಸರವಿದ್ದರೂ)
*******************
      
        ಕವಿ ವಿಠ್ಠಲ ದಳವಾಯಿಯವರ `ಬಡ ಜೋಗಿಯ ಹಾಡು’ ಅದೊಂದು ರೀತಿಯಲ್ಲಿ ಎದೆಯ ಗಾನ. ಊರ್ಜ್ವ ಸಂಸ್ಕೃತಿಯೊಂದಿಗೆ ಮುಖಾಮುಖಿ. ಸುಖ ಮತ್ತು ಶ್ರಮ ವರ್ಗಗಳ ಮಧ್ಯದ ವಾಗ್ವಾದ. ಕಾಸ್ಮೆಟಿಕ್ ಸಂಸ್ಕೃತಿಯನ್ನು ಧಿಕ್ಕರಿಸಿ ನೆಲಕ್ಕೆ ಬನ್ನಿ, ಮಹಲುಗಳನ್ನು ಮಗ್ಗಲಿರಿಸಿ ಮನುಷ್ಯರಾಗಲು ಕಾತರಿಸಿ ಎನ್ನುವ ವಿಚಾರಗಳನ್ನು ಆವರಿಸಿಕೊಂಡ ಮಹತ್ವದ ಕವಿತೆ.  ಹಾಗೆಯೇ ಎರಡನೆಯ ಕವಿತೆಯೂ ಕೂಡಾ. ಅದ್ಯಾವ ಓಟಕ್ಕೆ ಸಿಕ್ಕು ಸಂಸಾರದಲ್ಲಿ ಸಿಗುವ ಸಹಜ ಸುಖವನ್ನು ಮರೆತಿರುವನೋ ಮನುಷ್ಯ, ಅವನಿಗೊಂದಿಷ್ಟು ಸಾವಧಾನದ, ಸಮಾಧಾನದ ಸಿಂಚನ ಇಲ್ಲಿದೆ. ಷೇರ್ ಮಾರ್ಕೆಟು, ಕಾಂಕ್ರಿಟ್ ಕಟ್ಟಡಗಳು, ಚುನಾವಣಾ ಪ್ರಣಾಳಿಕೆಗಳು ಹೀಗೆ ಪ್ರಗತಿಯ ಹೆಸರಿನಲ್ಲಿ ಪಾಪಿಯಾಗುತ್ತಿರುವ ಮನುಷ್ಯನಿಗೆ `ಕೋಳಿ ಮರಿ ನೋಡಿಕೊಂಡೇ ಗಾಡಿ ಓಡಿಸು ಗೆಳೆಯಾ’ ಎಂದು ಹೇಳುವ ಮೂಲಕ ಸಮಾಜವನ್ನು ಮಾನವೀಯಗೊಳಿಸುವ ಮಹತ್ವದ ಕೆಲಸವನ್ನು ಕವಿ ಇಲ್ಲಿ ಪೂರೈಸಿದ್ದಾರೆ.

    ಸಂಕಲನದ ಶೀರ್ಷಿಕೆ ಪದ್ಯ `ಭೋಧಿ ನೆರಳಿನ ದಾರಿ’ ಮನುಷ್ಯನ ವಿವಶತೆಗೆ, ಹತಾಶೆಗೆ ಹಿಡಿದ ಕನ್ನಡಿ. ಈ ಸಾಲುಗಳನ್ನು ನೋಡಿ- 


ಕೆಲಸವಿಲ್ಲದಿದ್ದರೆ ನಿಮ್ಮ ಕೈ
ಜಾಲಿಮುಳ್ಳಿನ ಜಾತ್ರೆಯಲ್ಲಿ
ಜೋಲಿ ಹೊಡೆಯುವ ಕುರಿಗಳು
ಹುಲ್ಲುಗಾವಲು ಹುಡುಕಾಡುವ ಚಿತ್ರ
ನಿಮ್ಮ ಕಣ್ಣಿಗೆ ಖಾರದ ಬಣ್ಣ ತರುತ್ತದೆ 
      (ಭೋಧಿ ನೆರಳಿನ ದಾರಿ)
  
           ಇದು ಇಡೀ ಸಂಕಲನದಲ್ಲಿರುವ, ಜಾತಿ ಮತ್ತು ವರ್ಗ ಸಂಘರ್ಷವನ್ನು ಢಾಳು ಢಾಳಾಗಿ ಬಿಂಬಿಸುವ ಏಕೈಕ ಪದ್ಯ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೆಚ್ಚು ಪ್ರಸ್ತುತವೆನಿಸಬಹುದಾಗಿದ್ದ ಈ ಸಾಲುಗಳಲ್ಲಿ ಅದೇ ಕೇರಿ ಮತ್ತು ಉಚ್ಛ ಜಾತಿಗಳ ಮಧ್ಯದ ತಿಕ್ಕಾಟವನ್ನು ನೋಡಬಹುದಾಗಿದೆ. ಶೋಷಿತ, ಅವಮಾನಿತ, ತುಳಿತಕ್ಕೊಳಗಾದ ಜಾತಿಗಳ ಪ್ರತಿನಿಧಿಯಾಗಿ ಆಕ್ರೋಶದ ಮಾತನಾಡುವ ಕವಿ ದಳವಾಯಿ ತಮ್ಮ ಈ ಆಕ್ರೋಶವನ್ನು ಅತ್ಯಂತ ಯುನಿವರ್ಸಲ್ ಆಗಿ ಹೇಳುವ ಉತ್ತಮ ಪದ್ಯ ಅವರ `ಅಕಾಲ ಹಣು’್ಣ. ಕಾವ್ಯ ಕಟ್ಟುವಿಕೆಯ ಈ ಕವಿಯ ಸಾಮರ್ಥ್ಯಕ್ಕೆ ಸಾಕ್ಷಿ ಪದ್ಯದ ಈ ಎರಡು ಸಾಲುಗಳು-

ಹೌದು ನಾನು ಹಣ್ಣಾದೆ
ನೀನು ಉಣ್ಣದೆ ಮಣ್ಣಿಗೆಸೆದೆ   (ಅಕಾಲ ಹಣ್ಣು)


         ಇಲ್ಲಿ ಆಲೋಚಿಸಿದಷ್ಟು ಅರ್ಥಗಳು, ಮನಸ್ಸು ಮತ್ತು ಮನುಷ್ಯನ ಆಲೋಚನೆಗಳು ಹೊರಳಿದಷ್ಟು ಅರ್ಥದ ಹೊಸ ಪದರುಗಳು. ಸ್ತ್ರೀ ವಾದವನ್ನು ಒಳಗೊಂಡು ಅಧ್ಯಾತ್ಮಿಕ ಅನುಭವಗಳವರೆಗೂ ಅರ್ಥ ಸಾಧ್ಯತೆಗಳನ್ನು ಹೊರಹೊಮ್ಮಿಸುವ ಶಕ್ತಿ ಈ ಪದ್ಯಕ್ಕಿದೆ. ಕವಿ ಹೇಳಿಕೊಂಡಂತೆ ಪುಟ್ಟ ಜೀವವೊಂದರ ಆಕಸ್ಮಿಕ ಸಾವಿನ ಹಿನ್ನೆಲೆಯನ್ನಿಟ್ಟುಕೊಂಡು ಈ ಕವಿತಯನ್ನು ಬರೆದಿದ್ದರೂ ಸಾವಿನಷ್ಟೇ ಸರ್ವವ್ಯಾಪಿ ಮತ್ತು ಸಾರ್ವತ್ರಿಕ ವೈಶಾಲವನ್ನು ಸಾಧಿಸಿವೆ, ಸಿದ್ಧಿಸಿವೆ. ಹೀಗೆ ಸಂಕಲನದುದ್ದಕ್ಕೂ ಹರಳುಗಟ್ಟುವ ಅದೆಷ್ಟೋ  ಅನುಭವಗಳನ್ನು `ಭೋಧಿ ನೆರಳಿನ ದಾರಿ’ಯಲ್ಲಿ ಕಾವ್ಯಾಸಕ್ತರು ಪಡೆಯಬಹುದಾಗಿದೆ.

        ಬಡತನವನ್ನು ಚಿಂತಿಸುತ್ತ ಹುಟ್ಟಿನಿಂದ ತನಗೆ ಬಂದ ಕಪ್ಪುಕಪ್ಪಾದ ವರ್ಣದ ಬಗ್ಗೆ ಹಿಂಜರಿಯುತ್ತ ನಮ್ಮ ದಲಿತ ಕವಿಗಳು ಪ್ರೇಮದಂತಹ ಅನುಭವಗಳಿಂದ ಮತ್ತು ಅವುಗಳಿಗೆ ತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಿ ಕೊಡುವುದರಿಂದ ದೂರವೇ ಉಳಿದರು ನಮ್ಮ ಕುಂವೀ ಅವರ ವಾದ. ಆದರೆ ಇದಕ್ಕೆ ಅಪವಾದ ಕವಿ ವಿಠ್ಠಲ ದಳವಾಯಿ. ಅವರ ಈ ಅಪವಾದವೇ ಈ ಪಂಥದ ಕವಿಗಳಿಂದ ಅವರನ್ನು ಒಂದು ಹೆಜ್ಜೆ ಮುಂದೊಯ್ದು ನಿಲ್ಲಿಸುವುದು ಕೂಡ. ಅವರ ಈ ಸಂಕಲನದ `ಕಪ್ಪು ದಾಸವಾಳದ ಕನವರಿಕೆ’ ನಾವೆಲ್ಲ ಓದಲೇಬೇಕಾದ ಮಹತ್ವದ ಪ್ರೇಮಗೀತೆ. 


ಸಾಲಿಯ ಬೀದಿಯಲಿ
ನಿನ್ನ ನಗುವಿನ ಬಸಿರ ಹೊತ್ತು
ಹೂ-ಹಣ್ಣು ಹೆತ್ತ ಮರ
ನನ್ನ ಕಂಡೊಡನೆ ತಲೆತಗ್ಗಿಸುತ್ತದೆ
ನನ್ನಾಳದ ಅಳಲಿಗೆ ತೊಳಲುವ
ಕೃತಜ್ಞತೆಗೆ ಎರಡು ಕಂಬನಿ ಮೀಸಲಿವೆ
ಸೇತುವೆ ಮರದ ಪಥದಲಿ
ಸರಿದು ಹೋದ ನೀನು
        ಹೊರಳಿ ನಿರುಕಿಸುವುದು ಸರಿಯೇನು ಸಖಿ?
  ಅಮವಾಸೆ ನಾನು
            ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?  
  (ಕಪ್ಪು ದಾಸವಾಳದ ಕನವರಿಕೆ)

            `ಭೋಧಿ ನೆರಳಿನ ದಾರಿ’ ಒಂದು ಉತ್ತಮ ಕಾವ್ಯ ಸಂಕಲನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನೊಂದು ಅತ್ಯುತ್ತಮ ಸಂಕಲನವನ್ನಾಗಿ ಇನ್ನೂ ಮಾಡಬಹುದಿತ್ತಲ್ಲವೇ? ಎನ್ನುವ ಪ್ರಶ್ನೆಯನ್ನು ಕವಿ ಹಾಕಿಕೊಳ್ಳುವುದಾದರೆ ಈಗ ಬಳಸಿರುವ ಪದಗಳ ಅರ್ಧ ಸಂಖ್ಯೆಯಲ್ಲಿಯೇ ಈ ಸಂಕಲನವನ್ನು ಇನ್ನೂ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು. ಪದವೇ ಕವಿತೆಗೆ ದಾರಿಯಾಗಿರುವಂತೆ ಅದುವೇ ತಪ್ಪಿದಲ್ಲಿ ಕಾವ್ಯದ ಒಟ್ಟೂ ಸೌಂದರ್ಯಕ್ಕೆ ಭಂಗ ಎನ್ನುವುದು ಕೂಡ ತಿಳಿದುಕೊಳ್ಳುವುದು ಮುಖ್ಯ. ಉದಾಹರಣೆಗೆ `ಅವಧೂತರು ನಡೆದ ನೆಲದಲ್ಲಿ’ ಬದಲಾಗಿ `ಅವಧೂತರ ನೆಲದಲ್ಲಿ’ ಸಾಕಾಗಿತ್ತು. ಮತ್ತೊಂದು ಕಡೆ `ಅಮವಾಸೆ ನಾನು ನನ್ನ ಬೆಳದಿಂಗಳ ರಾತ್ರಿಗಳ ಹೇಗೆ ಹೇಳಲಿ ಸಖಿ?’ ಎನ್ನುವ ಬದಲಾಗಿ `ಅಮವಾಸೆ ನಾನು, ಬೆಳದಿಂಗಳ ಹೇಗೆ ಹೇಳಲಿ ಸಖಿ’ ಎನ್ನಬಹುದಿತ್ತು. ಹೀಗೆ ಸಂಕಲನದುದ್ದಕ್ಕೂ ಹತ್ತಾರು ಉದಾಹರಣೆಗಳ್ನ್ನು ಎತ್ತಿಕೊಳ್ಳಬಹುದು. ಖಂಡಿತ ಈ ಅಭಿವ್ಯಕ್ತಿ ಪ್ರೌಢಿಮೆಯನ್ನು ತಮ್ಮ ಮುಂದಿನ ಸಂಕಲನಗಳಲ್ಲಿ ಕವಿ ದಳವಾಯಿ ಸಾಧಿಸುತ್ತಾರೆ ಎಂದು ಆಶಿಸುತ್ತೇನೆ.

Wednesday, April 24, 2013

“ಬಿಟ್ವಿನ್ ಬಾರ್ಕಿ ಆಂಡ್ ಬೇಜವಾಡಾ ಬಾಯ್ಸ್” (Between barki and Bhejwada Boys)





             ಈ ದಿನಗಳಲ್ಲಿ ರಾಜಸ್ಥಾನಕ್ಕೊ, ಹೈದರಾಬಾದಿಗೊ, ಗುಲ್ಬರ್ಗಾಕ್ಕೊ ಹೋಗುವುದೆಂದರೆ ಹೇಗಿರುತ್ತದೆ? ಇಂಥ ಊಹೆಯೇ ಭಯಂಕರ ಅಲ್ವೇ? ಆದರೆ ಮಾಗಿಯ ಮುಖವನ್ನು ಛಳಿಗಾಲದಲ್ಲಿಯೇ ನೋಡುವಂತೆ ಬಿಸಿಲುನಾಡಿನ ಬದುಕನ್ನು ಈ ಬೇಸಿಗೆಯಲ್ಲಿಯೇ ನೋಡಬೇಕು. ಇಂಥದನ್ನು ಅನುಭವಿಸುವ ಅದರ ಪರಿಣಾಮಗಳನ್ನು ತಡೆದುಕೊಳ್ಳುವ ಆರೋಗ್ಯ ಭಾಗ್ಯ, ವಿಸ್ತೃತ ಸ್ನೇಹಲೋಕವೂ ನಮಗಿರಬೇಕು. ಈ ವಿಚಾರದಲ್ಲಿ ಭಾಗ್ಯವಂತ ನಾನು.
          ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ(Usmania Univaersity)  ದ ಗೆಳೆಯ ಪ್ರೊ.ಲಿಂಗಣ್ಣ ಗೋನಾಳ, ಕರ್ನಾಟಕದ ಪ್ರೊ.ತೇಜಸ್ವಿ ಕಟ್ಟಿಮನಿ(Tejaswi Kattimani) ವೇದಿಕೆಯ ಕಾರ್ಯದರ್ಶಿ ಗೆಳೆಯ ಪ್ರೊ. ಬಸವರಾಜ ಡೋಣುರರು ಜಂಟಿಯಾಗಿ ಹಮ್ಮಿಕೊಂಡ `ಕನ್ನಡ ದಲಿತ, ಬಂಡಾಯ ಮತ್ತು ತೆಲುಗು ದಲಿತ ದಿಗಂಬರ ವಿಪ್ಲವ ಕಾವ್ಯ’ ಕುರಿತ ಒಂದು ದಿನದ ವಿಚಾರ ಸಂಕಿರಣ ನನಗೆ ಈ ಮೇಲೆ ಚರ್ಚಿಸಿದ ಭಾಗ್ಯವನ್ನು ಅನುಭವಿಸಲು ಕಾರಣವಾಯಿತು. ಇಂಥ ಬಿಸಿಲಲ್ಲೂ ಎಷ್ಟೊಂದು ಗಂಭೀರ ಚರ್ಚೆ ಮತ್ತು ಆಲೋಚನೆ ಸಾಧ್ಯವಾಯಿತು.
ಹೈದ್ರಾಬಾದ್‍ನ ಈ ಬಾರಿಯ ಸಂದರ್ಶನ ಇನ್ನೂ ಅರ್ಥಪೂರ್ಣ ಎನ್ನಿಸಲು ಮುಖ್ಯ ಕಾರಣ ಕವಿ, ಉದ್ಯಮಿ ಮಿತ್ರ ಧರ್ಮದಾಸ್ ಬಾರ್ಕಿ. 
   ಅಲ್ಲಿಗೆ ಹೋದ  ಹಿಂದಿನೆರಡು ದಿನದಿಂದ ಮರಳಿ ಬೇಲೂರಿಗೆ ಬರುವವರೆಗೂ ಅವರು ತೆಗೆದುಕೊಂಡ ಕಾಳಜಿ, ತೊರಿದ ಪ್ರೀತಿ, ಆ ಮುತುವರ್ಜಿ ಮರೆಯ ಬಹುದಾದ ಪುಟಗಳೇ ಅಲ್ಲ. ಬೆಂಗಳೂರಿಂದ ಬಂದು ಈ ಹೈದ್ರಾಬಾದಿನಲ್ಲಿ  ನೆಲೆಸಿರುವ ಬಾರ್ಕಿ ಪಾಲಿಗೆ ಆಂದ್ರ ಮತ್ತು ಹೈದ್ರಾಬಾದಗಳೆಂದರೆ ಮತ್ತೇನೂ ಅಲ್ಲ ಬರೀ ಪ್ರೀತಿ. ಆಗಾಗ ಅವರುಹೇಳುವ ಮಾತು, “Hyderabad is hot but people are warm, Bangalore is cool but people are cold” ಅಮೇರಿಕಾ, ಮೆಕ್ಸಿಕೊ, ಭಾರತ-ಪಾಕಿಸ್ತಾನ, ಭಾರತ-ಬಾಂಗ್ಲಾದೇಶ ಹೀಗೆ ದೇಶ-ದೇಶಗಳ ಮಧ್ಯದ ಗಡಿಗಳಲ್ಲಿ ಶಾಂತಿಯ, ಸೌಹಾರ್ದದ ಒಂದು ಬಿಲಿಯನ್ ಸೋಲಾರ್ ದೀಪಗಳನ್ನು ಹಚ್ಚುವ ಕನಸು ಕಂಡಿರುವ ಈ ಗೆಳೆಯ ಹೇಳುವ ಮಾತುಗಳಲ್ಲಿ ನಾನು ಅಪ್ರಾಮಾಣಿಕತೆಯನ್ನು ಹುಡುಕುವುದಿಲ್ಲ. ನಮ್ಮದು ಒಂದು ರೀತಿ ಬೆರಕಿ ಮತ್ತು ಹಡಬೆರಿಕಿ ಸ್ನೇಹ.
        28-03-2013 ರಂದು ಬೆಂಗಳೂರಿನಿಂದ ಹೊರಟು ಹೈದರಾಬಾದಿನಲ್ಲಿ ಇಳಿದುಕೊಂಡಿದ್ದು 29 ರ ಮುಂಜಾವು. ಬಸ್ಸಿನಿಂದ ಇಳಿಯುತ್ತಲೇ ಗೆಳೆಯ ಧರ್ಮದಾಸ ಬಾರ್ಕಿ(Dharmadas Barki) ಯವರ ಕಾರು ಸಿದ್ಧ. ಆದರೆ ಹೈದರಾಬಾದಿನ ಇರಾನಿ ಶೈಲಿಯ ಚಹಾ ಸವಿಯದೇ ದಿನವನ್ನು ಆರಂಭಿಸುವುದೆಂದರೆ ನಮಗೆ ಈ ದೇಶ ಅರ್ಥವಾಗಿಲ್ಲವೆಂದೇ ಅರ್ಥ. ಆನಂತರ ಮುಂಜಾವಿನ ಮೂರು-ನಾಲ್ಕು ಗಂಟೆ ಉಸ್ಮಾನಿಯಾ ವಿಶ್ವ ವಿದ್ಯಾಲಯದ(Usmania Univaersity) ಗೆಸ್ಟ್ ಹೌಸ್‍ನಲ್ಲಿ ಧರ್ಮದಾಸರ ಮಾತು ಮತ್ತು ಕಾವ್ಯದ ನಿರಂತರ ಧಾರೆ. ಈ ಮನುಷ್ಯನನ್ನು ಮಾತು, ಕವಿತೆ ಮತ್ತು ಕನಸುಗಳಿಂದ ಹೊರತುಪಡಿಸಿ ಕಲ್ಪಿಸಿಕೊಳ್ಳುವುದೇ ಅಸಾಧ್ಯ, ಹಾಗಲ್ಲ ಅಪೂರ್ಣ. ಮುಂಜಾನೆಯ ತಿಂಡಿಯ ನಂತರ ಬಾರ್ಕಿಯವರ ಕನಸಿನ ಕೂಸಾದ ಸಿದ್ಧಾರ್ಥ್(Siddharth) ಸಿನಿಮಾದ ಲೋಕೆಷನ್‍ಗಳ ವಿಸಿಟ್. ಆನಂತರ ಮತ್ತೂ ಎರಡು ಗಂಟೆಗಳ ಮಾತು.

    ಈ ದೇಶದ ಊಟದ ಹದವರಿತ ಮನುಷ್ಯ ಎಲ್ಲೆಲ್ಲೊ, ಏನೇನೋ ತಿಂದು ಹೊಟ್ಟೆಯೆಂಬ ಚೀಲವನ್ನು ತುಂಬಿಸಿಕೊಳ್ಳಲಾರ. ಇಲ್ಲಿಯ ಭಕ್ಷಗಳನ್ನು ಸವಿದು ಮುಗಿಸಲು ಖಂಡಿತವಾಗಿಯೂ ಈ ಒಂದೇ ಜನ್ಮವಂತೂ ಸಾಕಾಗದು. ನಮ್ಮ ಮಧ್ಯಾನ್ಹದ ಊಟದ ಹೆಸರನ್ನು ಎಲ್ಲಿ ಬರೆಯಬೇಕು ಎನ್ನುವ ನಿರ್ಧಾರ ಮತ್ತೆ ಬಾರ್ಕಿಯವರದೇ. ಯಾಕೆಂದರೆ `ಖಾನೆವಾಲೆ ಕೆ ನಾಮ್ ದಾನೆ ದಾನೆ ಪರ್’ ಅಲ್ವೆ? ಹೈದರಾಬಾದಿಗೆ ಹೋಗಿ ಬಿರಿಯಾನಿ ತಿನ್ನದೆ ಬಂದೆ ಎನುವುದು ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡದೆ ಬಂದೆ ಎನ್ನುವಷ್ಟೇ ಮೂರ್ಖತನದ್ದು. ಇತಿಹಾಸ ಪ್ರಸಿದ್ಧ ಹೈದರಾಬಾದಿನಲ್ಲಿ ಅಷ್ಟೇ ಇತಿಹಾಸ ಪ್ರಸಿದ್ಧ ಹೊಟೆಲ್ `ಪ್ಯಾರಡೈಸ್’(Paradaise) ಇದೆ. ನೀವು ಮಾಂಸಾಹಾರಿಗಳು ಹೌದೋ ಅಲ್ಲವೋ ಆದರೆ ಇತಿಹಾಸ ಪ್ರಜ್ಞೆ ಇರುವ ಇಷ್ಟೊಂದು ದೊಡ್ಡ ಪ್ರಮಾಣದ ಹೊಟೆಲ್‍ಗಳು ಭಾರತದಲ್ಲಿ ಇವೆ ಎಂದು ತಿಳಿದುಕೊಳ್ಳಲಾದರೂ ನೀವು ಇಲ್ಲಿ ಒಮ್ಮೆ ಹೋಗಿ ಬರಲೇಬೇಕು.

    ಇಲ್ಲಿಂದ ನೇರ ರವಿತೇಜ(Ravitej)ರ ಬಳಿ. ಇವರು ತೆಲುಗಿನ ಮಹತ್ವದ ಚಿಂತಕ. ಷಾಫೆನವರ್, ನಿಶೆ(Nishthe), ಜೆಕೆ(GK) ಹಾಗೂ ಒಶೋ(Osho) ರ ಆಲೋಚನೆಗಳನ್ನು ಚರ್ಚಿಸುತ್ತಾ, ಒರೆಗೆ ಹಚ್ಚುತ್ತಾ ಪ್ರಪಂಚ ಸುತ್ತಿದ ಮನುಷ್ಯ. ಬಹಳ ಬರೆಯದೇ ಇದ್ದರೂ ಬರಹ ಮತ್ತು ಬರಹಗಾರನ ನಾಡಿ ಮಿಡಿತವನ್ನು ಬಲ್ಲ ಸೂಕ್ಷ್ಮಜ್ಞ. ಇವರೊಂದಿಗೆ ಒಂದು ಗಂಟೆಯ ಹರಟೆಯ ನಂತರ ಹೊದದ್ದು ಹೈದರಾಬಾದಿನ ಪ್ರತಿಷ್ಠಿತ ಜ್ಯುಬಿಲಿ ಹಿಲ್ಸಿ(Jubli hills)ಗೆ. ತೆಲುಗು ಚಿತ್ರರಂಗ(Telagu Industry)ದ ಬಹುಪಾಲು ಚಿತ್ರ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರುಗಳು ವಾಸವಿರುವುದು ಇಲ್ಲಿಯೇ. ನಮ್ಮ ಭೆಟ್ಟಿ ಇದ್ದದ್ದು ಸ್ಕಾಯ್ ಲೈನ್ ಪ್ರೊಡಕ್ಷನ್(Sky line production)ನ `ಬೇಜವಾಡಾ ಬಾಯ್ಸ್’(Bajawada Boys) ಗಳೊಂದಿಗೆ.
         

 ಮೂವತ್ತನ್ನು ಮೀರದ ಈ ಎಳೆಯ ಗೆಳೆಯರ ಮಧ್ಯ ಮುಪ್ಪಿಗೆ ಆಸ್ಪದವಿಲ್ಲ. ಸದಾ ಒಂದು ಕಾಲು ಹಾಲಿವುಡ್(Hollywood)ನಲ್ಲಿಯೇ ಇಟ್ಟುಕೊಂಡು ಕೆಲಸ ಮಾಡುವ ಇವರಿಗೆ ಭಾರತೀಯ ಚಿತ್ರರಂಗದೊಂದಿಗೆ, ಅದರ ಗುಣಾತ್ಮಕತೆಯೊಂದಿಗೆ ಬಹಳಷ್ಟು ತಕರಾರಿದೆ. ತೆಲುಗು ಚಿತ್ರರಂಗ(Telagu Industry)ದ ಮೋಸ, ವಂಚನೆಗಳಿಂದಲಂತೂ ಇವರು ಸೋತುಹೋಗಿದ್ದಾರೆ. ಹೀಗಾಗಿ ಇವರದೇನಿದ್ದರೂ ಅಂತರಾಷ್ಟ್ರಿಯ ವ್ಯವಹಾರ. ವಿಶ್ವಸುಂದರಿಯಾದ ಸ್ಪ್ಯಾನಿಷ್ ದೇಶದ ಬೊಲಿವಿಯಾ(Bolivia)ಳನ್ನು ಹಾಕಿಕೊಂಡು ಇವರು ನಿರ್ಮಿಸಿರುವ ಅನಾಥ ಮಕ್ಕಳ ಕುರಿತ ಹತ್ತು ನಿಮಿಷದ ಒಂದು ಸಾಂಗ್ ಸಿಕ್ವೆನ್ಸ್ ನೀವು ನೋಡಿದರೆ ಗೊತ್ತಾಗುತ್ತದೆ ಅವರ ಕೆಲಸದ ಸೂಕ್ಷ್ಮತೆ. ಒಂದುವರೆ ಕೋಟಿ ರೂಪಾಯಿ ವೆಚ್ಚದ ಈ ಕೆಲಸವನ್ನು ಅವರು ಕೇವಲ 25 ಲಕ್ಷ ರೂಪಾಯಿಗಳಲ್ಲಿ ಮುಗಿಸಿದ್ದಾರೆ. ಜೊತೆಗೆ ಸುಂದರಿಯೊಬ್ಬಳನ್ನು ಬಳಸಿಕೊಂಡು ಮಾನವನ ಹೃದಯ ಶ್ರೀಮಂತಿಕೆಗೊಂದು ಕನ್ನಡಿ ಹಿಡಿದಿದ್ದಾರೆ. ಇವರೊಂದಿಗಿನ ಕಾರ್ಯಾತತ್ಪರತೆಯ, ಸಿನಿಮಾ ನಿಷ್ಠೆಯ ಮಾತುಗಳಿಗೆ ನಾನೂ ಸಮ್ಮತಿಸಿದ್ದೇನೆ.
           ಮರುದಿನ ಕಾರ್ಯದ ಒತ್ತಡದಿಂದಾಗಿ ತಮಗೆ ಬರಲಾಗದು ಎಂದು ಹೇಳಿ ಹೋಗಿದ್ದ ಬಾರ್ಕಿ ಉಸ್ಮಾನಿಯಾ ವಿಶ್ವವಿದ್ಯಾಲಯದ ನನ್ನ ಭಾಷಣ ಮುಗಿಯುತ್ತಲೇ ಕಾರಿನೊಂದಿಗೆ ಮತ್ತೆ ಸಿದ್ಧವಾಗಿದ್ದರು. ಅಲ್ಲಿಂದ ನೇರ ಚಾರ್‍ಮಿನಾರ್(Charminar))ಗೆ. ಇದನ್ನು ಹೋಲುವ ಅನೇಕ ಇಸ್ಲಾಮಿಕ್ ಕಟ್ಟಡಗಳನ್ನು ನೀವು ಭಾರತದ ಅನೇಕ ಕಡೆಗೆ ನೋಡಬಹುದಾಗಿದೆ. ಆದರೆ ಅದರ ಸುತ್ತಲಿನ ಬದುಕನ್ನು ಮಾತ್ರ ಹೈದರಾಬಾದಿನಲ್ಲಿಯೇ ನೋಡಿ ಅನುಭವಿಸಬೇಕು. ಇದು ಮಹಿಳೆಯರ ಪಾಲಿನ ಸ್ವರ್ಗವೇ ಸರಿ. ಭಾರತದ ಕೋಗಿಲೆ ಸರೋಜಿನಿ ನಾಯ್ಡು(Sarojini Naidu) ಈ ಬಾಜಾರಕ್ಕೆ ಬೆರಗಾಗಿ ಎಷ್ಟೆಲ್ಲಾ ಕವಿತೆಗಳನ್ನು ಬರೆದಿದ್ದಾರೆ. ಕೈ ಬಳೆಯಿಂದ ಹಿಡಿದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಿವಿಯೊಲೆಯ ವ್ಯವಹಾರ ನಡೆಯುವುದು ಇಲ್ಲಿಯೇ. ಅಂದ ಹಾಗೆ ಕೋಹಿನೂರಿನ(Kohinoor) ಕತೆ ಪ್ರಾರಂಭವಾಗುವುದೇ ಈ ಹೈದರಾಬಾದಿನಿಂದ ಅಲ್ಲವೇ?
     ರಾತ್ರಿಕ್ಕೆ ಇಲ್ಲಿಯ ಲಕಡಿ ಕಾ ಪೂಲ್‍ನಿಂದ ಪ್ರವಾಸ ಪ್ರಾರಂಭಿಸಬೇಕಾದ ನಾವಿಬ್ಬರು ಗೆಳೆಯರು ಅಗಲುವ ಅರೆಕ್ಷಣವನ್ನೂ ಬಳಸಿಕೊಳ್ಳುತ್ತಿದ್ದೇವು. ಇಲ್ಲಿಯೇ ಸಮೀಪದ ಸ್ಟಾರ್ ಹೊಟೆಲಾದ `ಯಾತ್ರಿ ನಿವಾಸ’ದಲ್ಲಿ ನಾವು ಹೊಟ್ಟೆ ತುಂಬಾ ಬೀರು ಹೀರುತ್ತಿದ್ದರೆ ಮಗ ಸಿದ್ಧಾರ್ಥ್ ಮತ್ತು ಪದ್ಮಶ್ರಿ ಇಲ್ಲಿಯ ಆಟಗಳಲ್ಲಿ ಮಗ್ನ. ಒಂದುವರೆ ಗಂಟೆಯ ಇಲ್ಲಿಯ ಮಾತುಕತೆಗಳಲ್ಲಿ ನಾವು ನಮ್ಮ ಇಡೀ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದೆ. ಹಾಡಬೇಕಿದೆ, ಹಂಚಿಕೊಳ್ಳಬೇಕಿದೆ. ಹೊಸ ಯುಗದ ಮುನ್ನುಡಿಯನ್ನು ಬರೆಯಬೇಕಿದೆ. ಕನಸು ದೊಡ್ಡದಾಯಿತು ಆದರೆ ಹೊರೆಯಾಗಿಲ್ಲ. ಇನ್ನು ಬಸ್ಸು ಹತ್ತುವ ತವಕ ನನಗೆ, ಇಲ್ಲ ಹೈದರಾಬಾದಿನ ನೆಕ್ಲೆಸ್ ರೋಡನ್ನು ನಾನು ನಿಮಗೆ ತೋರಿಸದೇ ಹೋದರೆ ನನಗೇ ಹೈದರಾಬಾದ್ ಅರ್ಥವಾಗಿಲ್ಲ ಎಂದಾಗುತ್ತದೆ ಎಂದು ಸುಮಾರು ಹತ್ತು ಸುತ್ತಳತೆಯ ನಗರದ ಹೃದಯ ಭಾಗದಲ್ಲಿಯ ಈ ಕೆರೆಯನ್ನು ರಾತ್ರಿ ತೋರಿಸಿದರು ಬಾರ್ಕಿ. ನಗರದ ಒಟ್ಟು ಆಚರಣೆಗಳು ಇದರ ಸುತ್ತಲೂ. ಇಲ್ಲಿ ಹಗಲು ರಾತ್ರಿಗಳ ಭೇದ ಎಣಿಸಲಾಗದು. ಅಂತಹ ಜೀವಂತಿಕೆ ಇಲ್ಲಿ ನಿರಂತರವಾಗಿರುತ್ತದೆ.
          ಈಗ ಕೊನೆ ಕೊನೆಯ ಪೋಲಿ ಪೋಲಿ ಮಾತುಗಳು. `ಮಾಮೊಚೆ, ಬಾತೊಚೆ ಮತ್ತು ತುತೊಚೆ’ ಎಂದರೆ ಏನು ಹೇಳಿ ರಾಗಂ? ಇದು ಬಾರ್ಕಿ ಪ್ರಶ್ನೆ. ನನಗೆ ಗೊತ್ತಿಲ್ಲ, ಬಹುತೇಕ ಮಕ್ಕಳ ಭಾಷೆಯಿರಬಹುದು, ಇದು ನನ್ನ ಊಹೆ, ಆದರೆ ಧರ್ಮದಾಸ್ ಕೊಡುವ ವಿವರಣೆ ಕೇಳಿದರೆ ಮತ್ತೆ ಹದಿನೆಂಟರ ತುಂಟತನ ಇಣುಕು ಹಾಕುತ್ತದೆ. ಅವರ ವಿವರ ಕೇಳಿ ನಕ್ಕಿದ್ದೇ ನಕ್ಕಿದ್ದು. ಇದನ್ನೇ ಅಲ್ಲವೇ ಹೆಸ್(Hes) ಹೇಳುವುದು `The true lovers never separate  without appreciating each other’.