Total Pageviews

Saturday, December 31, 2011

ಬಸವಳಿದ ಗ್ರೀಸ್ : ಬೆಳೆಯುತ್ತಿರುವ ಭಾರತ


 ದಿನಾಂಕ 31/12/2011 ರ ವರ್ಷದ ಕೊನೆಯ ದಿನ ಮೈಸೂರು ಮಾರ್ಗವಾಗಿ ಬೇಲೂರಿಗೆ ಬಂದಿದ್ದ ಗ್ರೀಸ್ ದೇಶದ ಮಹಿಳೆ ಓಲ್ಗಾ ಹಾಗೂ ಅವರ ಪತಿ ಡಿಮಿಟ್ರಿಯಸ್(ಮಿಮ್) ಬೇಲೂರಿನ ಖ್ಯಾತ ಸಾಹಿತಿಗಳು, ರಂಗ ಚಿಂತಕರು ಆದ ಡಾ.ರಾಜಶೇಖರ ಮಠಪತಿಯವರೊಂದಿಗೆ ಬದಲಾಗುತ್ತಿರುವ ಎರಡು ಮಹಾನ್ ದೇಶಗಳಾದ ಭಾರತ ಮತ್ತು ಗ್ರೀಸ್ಗಳ ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸಿದರು. ಗ್ರೀಸ್ ದೇಶದಲ್ಲಿ ಜರ್ಮನ್ ಶಿಕ್ಷಿಯಾದ ಓಲ್ಗಾ, ಸ್ಪ್ಯಾನಿಷ್ ಶಿಕ್ಷಕನಾದ ಡಿಮಿಟ್ರಿಯಸ್, ಭಾರತದಲ್ಲಿ ಇಂಗ್ಲೀಷ ಶಿಕ್ಷಕರಾದ ಡಾ.ಮಠಪತಿ ಭಾಷಿಕ ಕಾರಣಗಳಿಂದಾಗಿ ವ್ಯಕ್ತಿ ಬೇರುಗಡಿತನಾಗುವ ತಲ್ಲಣಗಳನ್ನು ಕುರಿತು ಮುಖ್ಯವಾದ ಚರ್ಚೆಗಳನ್ನು ಮಾಡಿದರು. ಗ್ರೀಸ್ ಹಾಗೂ ಅವರ ಸುತ್ತಲಿನ ರಾಷ್ಟ್ರಗಳಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆ, ಮಾಧ್ಯಮಗಳ ಹೊಣೆಗೇಡಿತನ, ಇಸ್ಲಾಂದ ಮೂಲಭೂತತನ, ಹಾಗೂ ಅದು ಉಂಟುಮಾಡಿರುವ ಭೀತಿ, ಒಂದು ಕಾಲಕ್ಕೆ ಜಗತ್ತಿಗೇ ಮಾರ್ಗದರ್ಶಿಯಾಗಿದ್ದ ಅಥೆನ್ಸ್ದ ಅಧಃ ಪತನ, ಗ್ರೀಸ್ ದೇಶದಲ್ಲಿ ನಶಿಸುತ್ತಿರುವ ಶೈಕ್ಷಣಿಕ ಕಾಳಜಿ ಮತ್ತು ಅಲ್ಲಿಯ ಸರಕಾರದ ಬೇಜವಾಬ್ದಾರಿತನಗಳನ್ನು ಪ್ರಮುಖವಾಗಿ ಚರ್ಚಿಸಿದರು. ಒಂದು ದೇಶ ಎಂದರೆ ಪುಸ್ತಕ ಸಂಸ್ಕೃತಿ, ಒಂದು ಕಾಲಕ್ಕೆ ಇಡೀ ಯೂರೋಪಿಗಷ್ಟೇ ಅಲ್ಲ, ಪೂರ್ವದ ದೇಶಗಳಿಗೂ ಗ್ರಂಥ ಸಂಸ್ಕೃತಿಗೆ ಮಾದರಿಯಾಗಿದ್ದ ಗ್ರೀಸ್ ದೇಶ ಈಗ ಸಾಹಿತ್ಯ ಸೃಷ್ಠಿಯಲ್ಲಿ ಎಷ್ಟೊಂದು ಹಿಂದೆ ಉಳಿದಿದೆ ಹಾಗೂ ಸಾಹಿತಿಗಳ ಸ್ಥಿತಿ ಎಷ್ಟೊಂದು ಚಿಂತಾಜನಕವಾಗಿದೆ ಎನ್ನುವ ವಾಸ್ತವಗಳನ್ನು ಅವರು ಬಿಚ್ಚಿಟ್ಟರು. ಡಾ.ಮಠಪತಿ ಅವರು ಹೇಳಿದ ರಂಗ ಚಟುವಟಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಗ್ರೀಸ್ ದೇಶದ ಪುನರುತ್ಥಾನಕ್ಕೆ ಈಗ ಉಳಿದಿರುವ ಎಕೈಕ ದಾರಿ ರಂಗಭೂಮಿ ಎಂದು ಓಲ್ಗಾ ದಂಪತಿಗಳು ಉತ್ತರಿಸಿದರು.
 ಸಾಯಂಕಾಲದ ನಾಲ್ಕು ಗಂಟೆಯಿಂದ ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೆ ಡಾ.ಮಠಪತಿಯವರೊಂದಿಗಿದ್ದ ಈ ತಂಡ ಭಾರತದ ಶೈಕ್ಷಣಿಕ ಕ್ರಾಂತಿ, ಮುಕ್ತ ಮನಸ್ಸು, ಆತಿಥ್ಯದ ಪರಿ, ಸಾಮಾಜಿಕ ಸೌಖ್ಯ ಮತ್ತು ಈ ಶತಮಾನದಲ್ಲಿ ಭಾರತ ಬೆಳೆಯುತ್ತಿರುವ ರೀತಿಯನ್ನು ಮುಕ್ತವಾಗಿ ಹೊಗಳಿದರು. ಅಮೇರಿಕಾ, ಇಂಗ್ಲೆಂಡ್, ಪೆರು, ಉರುಗ್ವೆ, ದಕ್ಷಿಣ ಆಫ್ರಿಕಾಗಳನ್ನು ಸುತ್ತಿದ ಈ ಚಿಂತಕರು ಭಾರತವನ್ನು ನೋಡದೆ ಹೋದರೆ ಬಹುತೇಕ ಈ ಪ್ರಪಂಚವನ್ನು ಅವರು ತಪ್ಪಾಗಿ ಬಿಂಬಿಸುತ್ತಿದ್ದರು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಹೊಸ ವರ್ಷದ ಮೊದಲ ಕ್ಷಣವನ್ನು ಭಾರತದಲ್ಲಿ ಅತ್ಯಂತ ಆತ್ಮತೃಪ್ತಿಯಿಂದ ಅನುಭವಿಸಿದ ಈ ದಂಪತಿಗಳು ಇದು ವರ್ಷದುದ್ದಕ್ಕೂ ನಿರಂತರವಾಗಿರಲಿ ಎಂದು ಚೆನ್ನಕೇಶವನಲ್ಲಿ ಪ್ರಾರ್ಥಿಸಿದರು. 



No comments:

Post a Comment