Total Pageviews

Thursday, January 23, 2014

ಹಡಬಡಿಸಿ ಎದ್ದೆ, ಇನ್ನೆಲ್ಲಿಯ ನಿದ್ದೆ

        ನನ್ನ ಬದುಕಿನ ಒಟ್ಟು ವ್ಯಾಪ್ತಿಯಲ್ಲಿ ಅತ್ಯಂತ ವೇಗದಿಂದ ಉರುಳಿಹೋದ ವರ್ಷ 2013. ವರ್ಷದ ತುಂಬೆಲ್ಲವೂ ವಿಚಿತ್ರವಾದ ಏರಿಳಿತಗಳು. ಸೋಲು-ಗೆಲುವು, ಮಾನ-ಅಪಮಾನ, ಒಳಿತು-ಕೆಡಕು, ಸರಿ-ತಪ್ಪು ಹೀಗೆ ಯಾವುದೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡದೆ ನಿರಂತರ ಒತ್ತಡದಿಂದ ನನ್ನನ್ನು ಹಣಿಹಾಕಿ ಹೈರಾಣಾಗಿಸಿದ ವರ್ಷ. ಇಷ್ಟೊಂದು ಸಂಕೀರ್ಣವಾದ ವರ್ಷವನ್ನು ಬದುಕಿನಲ್ಲಿ ನಾನು ಈ ಹಿಂದೆಂದೂ ಎದುರಿಸಲೇ ಇಲ್ಲ. ಆಗೆಲ್ಲವೂ ನಾನು ನನ್ನ ‘ಇರುವಷ್ಟು ಕಾಲ’ ಕಾವ್ಯ ಸಂಕಲನದಲ್ಲಿ ವ್ಯಕ್ತಗೊಂಡ ಭಾವದ ಸೂತ್ರ ಹಿಡಿದುಕೊಂಡು, ಜೀವ ಗಟ್ಟಿಯಾಗಿ ಹಿಡಿದುಕೊಂಡು ಜೀವನದಿಯಲ್ಲಿ ಕೊರಡಿನಂತೆ ಬಿದ್ದುಕೊಂಡವನು. ಸಾವು ಮತ್ತು ಸಮಯ ನನ್ನ ನಿರಂತರ ಶೋಧಗಳು. ಈ ಶೋಧದಲ್ಲಿ ಮುಳುಗಿದಷ್ಟೂ ಸಾಂಗತ್ಯ, ಸಂಸಾರ, ಸ್ನೇಹ ಕೆಲವೊಮ್ಮೆ ಶೂನ್ಯವೂ ಕೂಡ ನನಗೆ ವಿಚಿತ್ರವಾಗಿ ಕಂಡಿದೆ. ನಾನು ನೋವಿನಿಂದ ಅಯ್ಯೋ ಎಂದು ಅರಚುವಾಗ ಪಕ್ಕದಲ್ಲಿದ್ದೂ ದಕ್ಕದವರನ್ನು ನೋಡಿದ್ದೇನೆ. ಹಿಂದಿನ ಯಾವುದೋ ಒಂದು ಭೇಟ್ಟಿಗೆ ನೆನಪಿಟ್ಟುಕೊಂಡು ತಾವು ನಂಬಿದ ದೈವದ ಮುಂದೆ ನನಗಾಗಿಯೂ ಒಂದು ಹರಕೆಯ ದೀಪ ಹಚ್ಚಿಡುವ ಹಂಬಲದವರನ್ನೂ ನೋಡಿದ್ದೇನೆ. ಬಹುತೇಕ ನನ್ನೊಳಗಿನ ನಂಬುಗೆ ನೆಲಕ್ಕಚ್ಚಿದ್ದರೆ ನನ್ನ ನಿರ್ನಾಮ ಎಷ್ಟು ಸಮೀಪ ಎನ್ನುವುದನ್ನೂ ನಾನು ಆಗಾಗ ಗಮನಿಸುತ್ತಿರುತ್ತೇನೆ. ಆಗಾಗ ತಲ್ಲಣಿಸುವ ಮನಸ್ಸಿಗೆ –
ಕೊಂದವರೆ ಬಂದಿಹರು
ಹಾಲು ಕೊಡು ತಾಯಿ
ಕಡಿದವರೆ ಬಂದಿಹರು
ಹೂವ ಕೊಡು ತಾಯಿ
ಕಿಡಿಯಾಗಬೇಡ
ಎಂದು ನನ್ನ ಕವಿತೆಯ ಮೂಲಕ ಸಮಾಧಾನಿಸುತ್ತ ಸಾಗಿಬಂದಿದ್ದೇನೆ.
          ಮುಗಿದು ಹೋಗುವ ವರ್ಷದ ಮುಸ್ಸಂಜೆಯಲ್ಲಿ ನಿರ್ಲಿಪ್ತನಾಗಿ, ಒಂದಿಷ್ಟು ಮೌನವಾಗಿ ಕುಳಿತುಕೊಳ್ಳುವುದು, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು, ಉರುಳಿ ಹೋದುದನ್ನು ಹೊರಳಿ ನೋಡುವುದು ನನ್ನ ಪ್ರೀತಿಯ ರೂಢಿ. ಮೊಬೈಲ್ ಮೌನವಾಗಿರುತ್ತದೆ, ನನ್ನ ಮಾತೂ ಕೂಡ. ಮನಸ್ಸನ್ನು ನಿರಾಳಗೊಳಿಸಿಕೊಳ್ಳುವ ಒಂದು ಯತ್ನ. ಈ ಕೆಲಸಕ್ಕೆ ಹೋದ ವರ್ಷ ನಾನು ಶರೀಫನ ಗದ್ದಿಗೆಯನ್ನು ಆಯ್ದುಕೊಂಡರೆ, ಈ ವರ್ಷ ಶ್ರವಣಬೆಳಗೋಳದ ಬೆಟ್ಟವನ್ನು ಆಯ್ದುಕೊಂಡಿದ್ದೆ. ನನ್ನದು ಈ ದಡ, ಆಚೆ ದಡದಲ್ಲಿ ಶಾಂತಲೆ ಸಲ್ಲೇಖನ ವೃತದಿಂದ ಮೋಕ್ಷ ಪಡೆದ ಚಂದ್ರಗಿರಿ ಬೆಟ್ಟ.
Bhattarak Swamiji
Ragam with Charukirti Bhattarak Swamiji

          ವರ್ಷದ ಕೊನೆಯಲ್ಲಿ ನಾನು ಹಾತೊರೆದದ್ದು ಬರೀ ನಿದ್ರೆಗಾಗಿ. ನಿರಂತರ ಒಂದು ತಿಂಗಳಿಂದ ನಿದ್ರಾಹೀನನಾಗಿ ಸಮಾರಂಭ, ಸುತ್ತಾಟ, ಸಮಾರಾಧನೆಗಳಲ್ಲಿ ಮುಳುಗಿದ್ದ ನನಗೆ ಶ್ರವಣಬೆಳಗೋಳದ ವಾತಾವರಣ ಹಿತವೆನ್ನಿಸಿತ್ತು. ನನಗೆ ನಿದ್ರಿಸಲು ಒಳ್ಳೆಯ ಸ್ಥಳ ಸೂಚಿಸುತ್ತೇನೆಂದು ಕರೆದುಕೊಂಡು ಹೋದವರು ಗೆಳೆಯ ಬಿ.ಎಸ್.ದೇಸಾಯಿ(B.S.Desai). ಚಿತ್ರಕಲಾ ಕಾರ್ಯಾಗಾರ ಒಂದು ತನ್ನ ಪಾಲಿಗೆ ತಾನು ಮುಕ್ತಾಯ ಸಮಾರಂಭವನ್ನು ಏರ್ಪಡಿಸಿತ್ತು. ನಾನು ಆ ಸಭೆಯ ಮೂಲೆಯಲ್ಲಿ  ದೂರದಲ್ಲಿ ಕುಳಿತು ನಿದ್ರೆಯ ಸುಖದಲ್ಲಿದ್ದಾಗ ಅತ್ಯಂತ ಗೌರವದಿಂದ ನನ್ನನ್ನು ಗಮನಿಸಿ ವೇದಿಕೆಗೆ ಎಳೆದವರು ಚಾರುಕೀರ್ತಿ  ಭಟ್ಟಾರಕ ಸ್ವಾಮಿಜಿ(Charukirti Bhattaraka Swamiji). ಹಡಬಡಿಸಿ ಎದ್ದೆ, ಇನ್ನೆಲ್ಲಿಯ ನಿದ್ದೆ.


          ಕಲೆ, ಸಾಹಿತ್ಯ, ಪ್ರಾಚ್ಯಶಾಸ್ತ್ರ, ಬಣ್ಣಗಳನ್ನು ಕುರಿತು ಇಷ್ಟೊಂದು ಕಾಳಜಿಯಿಂದ ಮತ್ತು ಕರಾರುವಕ್ಕಾಗಿ ಮಾತನಾಡುವ ಮತ್ತೊಬ್ಬ ಸನ್ಯಾಸಿಯನ್ನು ನಾನು ನೋಡಿಲ್ಲವೆಂದೇ ಹೇಳಬೇಕು. ಬಟಾ ಬೆತ್ತಲೆ ಗೊಮ್ಮಟನಂತೆಯೇ ಅತ್ಯಂತ ಸರಳ ಮನಸ್ಸಿನ ದೊಡ್ಡ ಮನುಷ್ಯರಂತೆ ನನಗೆ ಆ ದಿನ ಅವರು ಕಂಡರು. ಈ ಸನ್ಯಾಸಿಯ ಸಾನಿಧ್ಯದಲ್ಲಿ ಹಳೆಯ ವರ್ಷ ಉರುಳಿ ಹೋಯಿತೋ, ಹೊಸ ವರ್ಷ ಆರಂಭವಾಯಿತೋ ಎನ್ನುವ ಲೆಕ್ಕಾಚಾರದ ಗೊಡವೆಯೂ ಬೇಡ ಎನಿಸಿತು ನನಗೆ. ಯಾಕೆಂದರೆ, ಅಲ್ಲಿ ಇರುವಷ್ಟು ಕಾಲ ನನ್ನನ್ನು ಎಚ್ಚರಿಸಿ, ಬಳಿ ಕರೆದು ಕರುಣೆಯಿಂದ ಹರಸಿದ ಜೀವ ಅದು.

Wednesday, January 22, 2014

ಕೃಷ್ಣನೆಂದರೆ ಕುಂಚ, ಕೋಲಾಹಲ ಮತ್ತು ಶಾಂತಿ



“Why do you study so much? What secret are you looking for? Life will reveal it to you very soon. I already know everything, without reading or writing. Not very long ago, maybe only a few days back, I was a girl going her way through a world of precise and tangible colors and forms. Everything was mysterious, and something was always hidden; guessing at nature was a game for me. If only I had know how hard it is to gain knowledge so suddenly, as though the Earth had been elucidated by a single ray of light! Now I live on a planet of pain, transparent like ice. It is as if I’d understood everything all at once, in a matter of seconds. My best friends and the girls I know have slowly become women. I grew old in a few seconds, and now everything is blamed and flat. I know that there is nothing else, because if there were, I would see it.”
                        -     Frida Khalo
      ಫ್ರಿದಾ ಕಾಹ್ಲೊ ಒಬ್ಬ ಶ್ರೇಷ್ಠ ಮೆಕ್ಸಿಕನ್ ಚಿತ್ರಕಲಾವಿದೆ. ಬಣ್ಣ ಮತ್ತು ಬದುಕಿನ ಅನುಭವದಲ್ಲಿ ಇವಳು ನಮ್ಮ ಅಮೃತ್ ಶೇರ್‍ಗಿಲ್ರನ್ನು ನೆನಪಿಸುತ್ತಾಳೆ. ಈ ಮೇಲೆ ಉದ್ಧರಿಸಿದ ನನ್ನ ಮಾತುಗಳು ಆಕೆ ತನ್ನ ಮೊದಲ ಪ್ರಿಯಕರನಿಗೆ ಬರೆದ ಪತ್ರಗಳಿಂದ ಆಯ್ದುಕೊಂಡವುಗಳು. ಸಾಂಪ್ರದಾಯಿಕ ಚಿಂತನೆಯಲ್ಲಿ ಅನುಭವ ಮಾಗಲು ವಯಸ್ಸಿನ ಲೆಕ್ಕಾಚಾರ ಬಹಳ ಮುಖ್ಯವಾಗುತ್ತದೆ. ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾಳೆ ಫ್ರಿದಾ. ತೊಂಬತ್ತು ವರ್ಷದ ಒಬ್ಬ ಕಲಾವಿದ ಅಥವಾ ಲೇಖಕನಿಗೆ ಸಾಧ್ಯವಾಗದ ಒಂದು ಅನುಭವ ಹತ್ತೊಂಬತ್ತು ವರ್ಷದ ಒಬ್ಬ ಎಳೆಯನಿಗೆ ಸಾಧ್ಯವಾಗಬಹುದು. ಅನುಭೂತಿಗೆ ಆತ್ಮದ ತೀವ್ರತೆ ಮುಖ್ಯವಾಗುತ್ತದೆಯೇ ವಿನಹ ದೇಹವನ್ನು ಹೈರಾಣಾಗಿಸುವ ವಯಸ್ಸಲ್ಲ.
ದಿನಾಂಕ 17/11/2013 ರಿಂದ 19/11/2013 ರವರೆಗೆ, ಹಾಸನಾಂಬಾ ಕಲಾಕ್ಷೇತ್ರದಲ್ಲಿ ನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುತ್ತ, ಕುಮಾರಿ ಐಶ್ವರ್ಯಳನ್ನು ಮುಂದಿಟ್ಟುಕೊಂಡು ನಾನು ಈ ಮಾತುಗಳನ್ನು ಹೇಳಬೇಕಾಯಿತು. ಈ ದಿನದ ವಿಚಿತ್ರ ನೋಡಿ, ಇದನ್ನು ನೀವು ವಿಶೇಷ ಎಂದುಕೊಳ್ಳಲೂಬಹುದು. ಇದೆ ಕಲಾಕ್ಷೇತ್ರದ ಇನ್ನೊಂದು ಮಗ್ಗುಲಲ್ಲಿ ‘ಕುರುಕ್ಷೇತ್ರ’ದಂತಹ ನಾಟಕ ಪ್ರದರ್ಶನಗೊಳ್ಳುತ್ತಿದೆ. ಕುರುಕ್ಷೇತ್ರವೆಂದರೆ ಯುದ್ಧ, ರಕ್ತಪಾತ ಮತ್ತು ಕೋಲಾಹಲ. ಇದು ಕುಂಚದ ಕುಸುರಿಯಂತಹ ನವಿರಾದ ಕ್ರಿಯೆಗೆ ಬಾಹ್ಯದಲ್ಲಿ ಸಂಪೂರ್ಣ ವಿರುದ್ಧ ಎನ್ನುವಂತೆ ಭಾಸವಾಗುತ್ತದೆ. ಆದರೆ ಅದು ನಮ್ಮ ಮೇಲಸ್ತರದ ಓದಷ್ಟೆ.
        ಇವು ಒಂದು ಇನ್ನೊಂದರಲ್ಲಿ ಎರಕ ಹೊಯ್ದುಕೊಂಡಿವೆ. ಕುಂಚಕ್ಕು ಕೋಲಾಹಲವನ್ನೆಬ್ಬಿಸುವ ಶಕ್ತಿ ಇದೆ. ಕುರುಕ್ಷೇತ್ರಕ್ಕೂ ಶಾಂತಿಯ ಸಂದೇಶವನ್ನು ನೀಡುವ ಮುಕ್ತ ಮಾರ್ಗವಿದೆ. ಇವೆರಡರ ಹಿಂದೆಯೂ ಒಂದೇ ಶಕ್ತಿ, ಒಬ್ಬನೇ ವ್ಯಕ್ತಿ ಆತ ಕೃಷ್ಣ. ಕೃಷ್ಣನೆಂದರೆ ಬಣ್ಣ, ಬೆಳಕಿನ ಕಣ್ಣು, ಬಣ್ಣಗಳ ಗೋಕುಲಾಷ್ಟಮಿ, ಹಸಿ ಮಣ್ಣು ಮತ್ತು ಆಸೆಯಿಂದ ಹಂಬಲಿಸುವ ಮನಸ್ಸು ಎನ್ನುವುದು ಎಷ್ಟು ಸತ್ಯವೋ ಆತನೆಂದರೆ ಕುರುಕ್ಷೇತ್ರ ಎನ್ನುವುದು ಕೂಡ ಅಷ್ಟೇ ಸತ್ಯ. ಈ ಆಲೋಚನೆಯ ಬೆಳಕಿನಲ್ಲಿ ಇಂದಿನ ನನ್ನ ಉದ್ಘಾಟನಾ ಭಾಷಣ ಮುಂದುವರೆಯಿತು.
     
      ಜೊತೆಗಿದ್ದವರು ಐಶ್ವರ್ಯಳ ಗುರು ಶ್ರೀ ಬಿ.ಎಸ್.ದೇಸಾಯಿ, ವಾರ್ತಾ ಇಲಾಖೆಯ ನಿರ್ದೇಶಕರು, ಹಿರಿಯ ಪತ್ರಕರ್ತ ಮಿತ್ರ ಆರ್.ಪಿ.ವೆಂಕಟೇಶಮೂರ್ತಿ ಹಾಗೂ ಕಲಾವಿದರ ಬಳಗ.

Sunday, January 19, 2014

ತುಳುಕುವುದೆಲ್ಲವೂ ಕವಿತೆಯಲ್ಲ


“ಕಾವ್ಯ ಕೈಯಲ್ಲಿ ಹಿಡಿದುಕೊಂಡು ಅರ್ಥ ಹುಡುಕಾಡಬಾರದು,
ಅದರಂಥ ಅನರ್ಥ ಕ್ರಿಯೆ ಮತ್ತೊಂದಿಲ್ಲ.
ಹಾಡಿಬಿಡಬೇಕು ಹಾಡುತ್ತ ಹಾಡುತ್ತಲೇ ನಾವೂ ಹಾಡಾಗಬೇಕು.
ಹಾಡಾಗಲಾರದವನು ಕವಿತೆಯನ್ನು ಹಿಡಿಯಬಾರದು.
ಇದು ಕವಿತೆಯೊಂದಿಗಿನ ಮೂರು ದಶಕಗಳ ನನ್ನ ಅನುಭವ.
ಮನಸ್ಸು ಮುಕ್ತ ಮತ್ತು ಭಕ್ತನಾಗಿದ್ದಾಗ ಮಾತ್ರ ಕವಿತೆ ಘಟಿಸುತ್ತದೆ.
ಅದು ಬರೆಯುವುದಲ್ಲ, ಬರೆಯಿಸಿಕೊಳ್ಳುವುದು.
ಅದು ಮುದುಕರ ಸ್ವತ್ತಲ್ಲ,
ಹಾಗಂತ ಯುವಕ-ಯುವತಿಯರಲ್ಲಿ ತುಳುಕುವುದೆಲ್ಲವೂ ಕವಿತೆಯಲ್ಲ.”
         
         ಕಾವ್ಯದ ಬಗೆಗೆ ಇಂಥ ಒಂದು ನಿಲುವು ತಳೆದಿರುವ ನನ್ನ ಇತ್ತೀಚಿನ ಆರನೆಯ ಕಾವ್ಯ ಸಂಕಲನ ‘ಇರುವಷ್ಟು ಕಾಲ’ ಎರಡನೆಯ ಬಾರಿ ಧಾರವಾಡದ ಗೆಳೆಯರೊಂದಿಗೆ ಚರ್ಚೆಗೆ ಕಾರಣವಾಯಿತು. ಸಂಕಲನವನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದವರು, ಮಾತನಾಡಿದವರು ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ. ಅಂದಿನ ಅವರ ಭಾಷಣ ನಮ್ಮ ವಿಶ್ವವಿದ್ಯಾಲಯದ ವರ್ತಮಾನದ ಉಪನ್ಯಾಸಕರುಗಳಿಗಿಂತ ಎಷ್ಟೋ ಪ್ರಮಾಣದಲ್ಲಿ ಸಂಶೋಧಾತ್ಮಕವಾಗಿತ್ತು ಹಾಗೂ ಅನೇಕ ಹೊಸ ಹೊಳಹುಗಳಿಂದ ತುಂಬಿತ್ತು. ಅವು ಬುದ್ಧಿ ಪ್ರದರ್ಶನಕ್ಕಾಗಿ ಹೊರಟ ಮಾತುಗಳಾಗಿರಲ್ಲಿಲ್ಲ. ಬದಲಾಗಿ ಹೃದಯ ಸಂವಾದದ ಅಲೆಗಳಾಗಿದ್ದವು. ಈ ನನ್ನ ಸಂಕಲನವನ್ನು ಕುರಿತು ಮಾತನಾಡಲು ಒಪ್ಪಿಕೊಳ್ಳುವುದಕ್ಕು ಮುಂಚೆ ಅವರು ನನ್ನ ಸಾಹಿತ್ಯದ ಓದುಗರಾಗಿದ್ದಾರೆ ಎಂದು ಅವರಿಂದಲೇ ಕೇಳಿದಾಗ ನನಗೆ ಅಚ್ಚರಿ. ಗೆಳೆಯ ರಾಜು ಮಳವಳ್ಳಿಯವರ ‘ಸಿಹಿ ಗಾಳಿ’ ಸಾಹಿತ್ತಿಕ ಮಾಸಿಕ, ಅವರ ಮನೆಯನ್ನೂ ತಲುಪುತ್ತಿದ್ದು, ಅದರಲ್ಲಿಯ ‘ಈ ಸಾಕಿಯರ ಕೈ ಸೋಕಿ’ ನನ್ನ ಸ್ಥಿರ ಅಂಕಣದ ಖಾಯಂ ಓದುಗರಲ್ಲಿ ಅವರೂ ಒಬ್ಬರಂತೆ. ಸಾಹಿತಿ ಒಬ್ಬನ ಧನ್ಯತೆ ಇರುವುದೇ ಇಂಥದರಲ್ಲಿ. ಮುಖ ನೋಡದೆ, ಪರಸ್ಪರ ಭೇಟಿಯಾಗದೇ ಪತ್ರಿಕೆಗಳ ಮೂಲಕ, ಅವುಗಳೊಳಗಿನ ಬರಹದ ಮೂಲಕ ಓದುಗನೊಂದಿಗೆ ಒಂದು ಸಂಬಂಧ ಏರ್ಪಟ್ಟಾಗ ಅದು ಎಷ್ಟೆಲ್ಲ ಆಪ್ಯಾಯವೆನಿಸುತ್ತದೆ.
'Eruvastu Kaala', Book Releasing 

        ‘ಇರುವಷ್ಟು ಕಾಲ’ ದಿನಾಂಕ 12/12/2013 ರಂದು ಧಾರವಾಡ ಕಟ್ಟೆಯ ಮೂಲಕ ಮತ್ತೆ ಲೋಕಾರ್ಪಣಗೊಂಡು ಅದಕ್ಕೆ ಸಾಕ್ಷಿಯಾದವರು ಗೆಳೆಯ ಡೋಣುರ, ವನದುರ್ಗಾ, ಪೋತೆ, ದಿಬ್ಬದ, ಹಿರೇಮಠ, ಬಸೀರ್ ಹಾಗೂ ಹಿರಿಯರಾದ ವೃ.ಸ್ವಾಮಿ ಮತ್ತು ಧಾರವಾಡದ ಸಮಸ್ತ ಸಾಹಿತ್ಯಾಸಕ್ತರ ಬಳಗ.
        ಈ ಸಂಕಲನದಲ್ಲಿ ನನ್ನ ಪ್ರೀತಿಯ ಅದೆಷ್ಟೋ ಕವಿತೆಗಳಿವೆ ಆದರೆ ಅಂದಿನ ಮುಖ್ಯ ಭಾಷಣಕಾರರಾಗಿದ್ದ ಪ್ರಜ್ಞಾ ಹೇಳುವಂತೆ ‘ರೆಪ್ಪೆಯ ತೆಪ್ಪದಲ್ಲಿ’ ಅವರಿಗೆ ಅತ್ಯಂತ ಪ್ರೀತಿಯ ಕವಿತೆ. ಹೀಗಾಗಿ ಅದರ ಕೊನೆಯ ಕೆಲವು ಸಾಲುಗಳು ಇಲ್ಲಿ ನಿಮಗಾಗಿ

          ಸಂತೆಯಲ್ಲಿ ಕೈ ಬಿಟ್ಟು ಸಂಕಟಪಡುವವಳವಳೇ

ಸಂಸಾರದೊಳಗಿಟ್ಟು, ದೀಪ ಹಚ್ಚಿಟ್ಟು
ಹಚ್ಚಡದೊಳು ಹೂಗಳ ತಂದು
ರಾತ್ರಿ ಮುಡಿಗೆರಿಸಲು ಮುಗುಳ್ನಗುವವಳೂ ಅವಳೆ

ನನ್ನ ಬಾಳಿನ ಮುಂಜಾನೆಯ ಇಬ್ಬನಿ
ಮಿಡಿ ಹಗಲ ರಂಗೋಲಿ
ದೂರ ತೇಲುವ ಸುಪ್ರಭಾತ
ಲೆಕ್ಕವಿಲ್ಲದೆ ಸುರಿವ ಪಾರಿಜಾತ
ಎಲ್ಲ ಎಲ್ಲ ಎಲ್ಲವೂ ಅವಳೆ
ಕೆಲವೊಮ್ಮೆ ಅವಳೇ ಅತೀತ

ಇವಳ ಹೇಳಲು ಹೋಗಿ
ನನ್ನ ನುಡಿ ತಪ್ಪುತ್ತವೆ
ಹಿಡಿಯಲು ಹೋಗಿ
ನಡೆ ತಪ್ಪುತ್ತದೆ

                   ಈಗ ನಾನು ತೆಪ್ಪಗಾಗುತ್ತೇನೆ
                            ಯಾಕೆಂದರೆ
                    ಇವಳ ಕಣ್‍ರೆಪ್ಪೆಯ ತೆಪ್ಪದಲಿ
                 ಸಮುದ್ರವೂ ಸಣ್ಣ ದಾರಿಯೆನಿಸುತ್ತದ
                    ತೆಪ್ಪ ತಪ್ಪಿ ತಳಕ್ಕಿಳಿದರೆ ಸಾವೂ
                       ಹೊಸ ಬದುಕೆನಿಸುತ್ತದೆ