Total Pageviews

Tuesday, March 27, 2012

ಆ ಬಿಸಿಲೇ ಒಂದು ಬೆಸುಗೆ

                                  ಆ ಬಿಸಿಲೇ ಒಂದು ಬೆಸುಗೆ
               

Lecturer on Ambedkar in Gulbarga

"ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ".
                                                             

ಕೆಲವು ದಿನಗಳ ಹಿಂದೆಯಷ್ಟೇ ಓರಿಸ್ಸಾ(orissa) ದವರೆಗಿನ ಅರವತ್ತಾರು ಗಂಟೆಗಳ ಪ್ರವಾಸವನ್ನು ಮುಗಿಸಿಕೊಂಡು ಬಂದಿದ್ದ ನನಗೆ ಸಧ್ಯದಲ್ಲಿಯೇ ಮತ್ತೊಂದು ಧೀರ್ಘ ಪ್ರವಾಸ ಮಾಡುವ ಉತ್ಸಾಹವೂ ಇರಲಿಲ್ಲ, ಸಮಯವೂ ಇರಲಿಲ್ಲ. ಇಂತಹದರಲ್ಲಿ ಗೆಳೆಯ ವಿಜಯಕುಮಾರ ದೊಡ್ಡ ಗಾಣೀಗೇರ್ ತನ್ನ ಕಾಲೇಜಾದ People’s Education Trust ನ ‘Dr.Ambedkar college of atrs and commerce’ ನ ಅಂಬೇಡ್ಕರ್ ವಿಚಾರ ವೇದಿಕೆಯ ಎರಡು ದಿನಗಳ ಕಾರ್ಯಕ್ರಮದ ಉಧ್ಘಾಟನೆಗಾಗಿ ಬರಬೇಕೆಂದು ಪ್ರೀತಿಯ ಹಠ ಹಿಡಿದ. ಹೋಗಲೇಬೇಕಾಯಿತು, ಹಾಗೆ ನೋಡಿದರೆ ನನ್ನನ್ನು ಅನವರತವೂ ಕಾಡುವ ಅನೇಕ ವ್ಯಕ್ತಿ ಮತ್ತು ವಿಚಾರಗಳು ಈ ಗುಲ್ಬರ್ಗಾ ಎನ್ನುವ ಬಿಸಿಲು ನಾಡಿನೊಂದಿಗೆ ಬೆಸೆದುಕೊಂಡಿದೆ. ಹೆಸರಿಸಬೇಕೆಂದರೆ ನಾಲ್ಕಾರನ್ನು ನಮೂದಿಸಬಹುದೇನೋ. ಹದಿನೈದು ವರ್ಷಗಳಷ್ಟು ಹಿಂದಿನ ಧೀರ್ಘ ಕಾಲದ ಗೆಳೆಯ ವಿಜಯ ದೊಡ್ಡ ಗಾಣಿಗೇರ್, ಸಂಸಾರವಿದ್ದೂ ಅದಕ್ಕೆ ವಿಮುಖರಾಗಿ ಧಿಢೀರ್ ಸನ್ಯಾಸ ಘೋಷಿಸಿದ ಮಾತೃ ಪ್ರೀತಿಯ ಜೀವ ಶ್ರೀ ಬಸವಲಿಂಗಪ್ಪ ಹೂಗಾರ್, ಇತ್ತೀಚಿಗಷ್ಟೆ ಬಂದು ಕೇಂದ್ರಿಯ ವಿಶ್ವವಿದ್ಯಾಲಯ ಸೇರಿಕೊಂಡ ಗೆಳೆಯ ಬಸವರಾಜ ಡೋಣುರ, ಹಳೆಯ ಪತ್ರ ಮಿತ್ರ ಜಾನ್‌ಬೋ, ನವ ಕರ್ನಾಟಕ ಪ್ರಕಾಶನದ ಸೊನ್ನದ, ಪ್ರೋ.ಪಾಟೀಲ, ಇವರೆಲ್ಲ ಗುಲ್ಬರ್ಗಾ ಎಂಬ ಭೋಧಿವೃಕ್ಷಕ್ಕೆ ಹುಟ್ಟಿಕೊಂಡ ನೆನಪಿನ ಟೊಂಗೆಗಳು. ಎಲ್ಲಕ್ಕೂ ಮಿಗಿಲಾಗಿ ಆ ಬಿಸಿಲೇ ಒಂದು ಬೆಸುಗೆ. ಅದು ಮಲೆನಾಡಿನ ಬಿಸಿಲಿನಂತೆ ಒಳಗಿನಿಂದ ಭಾಧಿಸುವುದಿಲ್ಲ, ಹೊರಹೊರಗೆ ಉರಿದು,ಒಳಗಿನರಿವಿನ ಪರಿಯನ್ನ ವಿಸ್ತರಿಸುವ ಈ ಬಿಸಿಲಿಗೆ ಒಂದು ವಿಚಿತ್ರ ಶಕ್ತಿ ಇದೆ. ಅಂತೆಯೇ ಕನ್ನಡ ಕಾವ್ಯದ ಕೆನೆ ಎನ್ನಿಸಿಕೊಂಡ ವಚನ, ಅನುಭಾವ ಮತ್ತು ಸೂಫಿ(sufi) ಸಾಹಿತ್ಯ ಇಲ್ಲಿಯೇ ಹುಟ್ಟಿಕೊಂಡಿತು. ರಾಜಕೀಯದ ಅನೇಕ ವಿಪ್ಲವಗಳನ್ನು ಕಂಡ ಈ ನೆಲ ಇಂದಿಗೂ ಅನೇಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಅಂತಹವುಗಳಲ್ಲಿ ಎರಡು ಮಹತ್ವದ ಇತ್ತಚಿನ ದಾಖಲೆಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಒಂದು, ಮಲ್ಲಿಕಾರ್ಜುನ ಖರ್ಗೆ(Mallikarjun Kharge)ಯವರ ನೇತೃತ್ವದಲ್ಲಿ ನಿರ್ಮಾಣವಾದ ಬೌದ್ಧ(Baudha) ವಿಹಾರ, ಮತ್ತೊಂದು ಚೆನ್ನಣ್ಣ ವಾಲೀಕಾರರಿಂದ ರಚನೆಯಾದ “ವ್ಯೋಮಾವ್ಯೋಮ”.

ಎರಡೂ ಬುದ್ಧನನ್ನು ಕುರಿತಾದವುಗಳೇ. ಒಂದು ಸ್ಥಾವರ, ಮತ್ತೊಂದು ಜಂಗಮ. ಭಾರತದಿಂದ ಬೌದ್ಧ ಧರ್ಮದ ೨೨೦೦ ವರ್ಷಗಳ ಧೀರ್ಘ ಕಾಲದ ಅವಸಾನದ ನಂತರ ರಂಗೂನಿನಿಂದ ಬುದ್ಧನ ವಿಗ್ರಹವನ್ನು ತಂದು ಭಾರತದ ಪುಣೆಯಲ್ಲಿ ಸ್ಥಾಪಿಸುವುದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬೌದ್ಧ ಧರ್ಮವನ್ನು  ಪುನರುಜ್ಜೀವನಗೊಳಿಸಿದರು. ಈಗ ಸುಮಾರು ಎಪ್ಪತ್ತು ವರ್ಷಗಳ ನಂತರ ಅದೇ ಕಾರ್ಯ ಎರಡು ಭಿನ್ನ ಮಾರ್ಗಗಳ ಮೂಲಕ ಗುಲ್ಬರ್ಗಾ(Gulbarga)ದಲ್ಲಿ ಪುನರಾವರ್ತನೆಯಾಗಿದೆ. ಪುಷ್ಯಮಿತ್ರಶುಂಗನ ಕಾಲದಲ್ಲಿ ಅನೇಕ ಬೌದ್ಧ ಭಿಕ್ಕುಗಳ ಕೊಲೆಯಾಗಿ ಬೌದ್ಧ ವಿಹಾರಗಳನ್ನು ನಾಶ ಪಡಿಸಿದ್ದಕ್ಕೆ ನಿಟ್ಟುಸಿರಿಟ್ಟಿದ್ದ ಭಾರತ ಈಗ ಗುಲ್ಬರ್ಗಾದಲ್ಲೊಂದು ಬೌದ್ಧವಿಹಾರವನ್ನು ತನ್ನುಡಿಗೆ ಹಾಕಿಕೊಳ್ಳುವ ಮೂಲಕ ನೆಮ್ಮದಿ ಪಡುವಂತಾಗಿರಬಹುದು. ಒಂದು ಕಾಲಕ್ಕೆ ಗುಲ್ಬರ್ಗಾ ಎಂದರೆ ಬಂದೇನವಾಜರ ದರ್ಗಾ ಮತ್ತು ಶರಣಬಸಪ್ಪನ ಮಠ ಎನ್ನಲಾಗುತ್ತಿದ್ದ ಈ ಊರಿಗೊಂದು ಮೂರನೆಯ ದಾರಿ ಹುಟ್ಟಿಕೊಂಡಿದೆ. ಈಗ ಗುಲ್ಬರ್ಗಾ ಎಂದರೆ ಬೌದ್ಧವಿಹಾರ.


ಇದು ಕಾಟಾಚಾರಕ್ಕೆ ಕಟ್ಟಿದ ಕಟ್ಟಡವಲ್ಲ. ಸರ್ಕಾರದ ಯಾವ ಧನಸಹಾಯವಿಲ್ಲದೆ ಜಗತ್ತಿನುದ್ದಕ್ಕೂ ಹಬ್ಬಿಕೊಂಡ ಬೌದ್ಧ ಅನುಯಾಯಿಗಳ ಸಹಾಯ ಪಡೆದು, ಪ್ರಪಂಚವೇ ಬೆರಗಾಗುವಂಥಹ ಕಟ್ಟಡ ಇಲ್ಲಿ ತಲೇ ಎತ್ತಿದೆ. ನಿಮಗೊಂದು ಕ್ಷಣ ಸಾಂಚಿಗೆ ಹೋಗಿ ಬಂದ ಖುಷಿಯಾಗುತ್ತದೆ.ದಿ. ೧೭-೩-೨೦೧೨ ರ ಈ ದಿನ ನನ್ನ ಪಾಲಿಗಂತೂ ಇನ್ನೂ ವಿಶೇಷ. ಯಾಕೆಂದರೆ ಪಾಲಿ ಭಾಷೆಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಹತ್ತು ಕೋಟಿ ರುಪಾಯಿಗಳನ್ನು ಗುಲ್ಬರ್ಗಾದ ಈ ಬೌದ್ಧವಿಹಾರಕ್ಕೆ ಬಿಡುಗಡೆ ಮಾಡಿತು. ಇಂಥಹ ಒಂದು ಅರ್ಥಪೂರ್ಣ ನೆನಪು ಮೈ ಎತ್ತಿ ನಿಲ್ಲಲು ಕಾರಣರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ಒಂದು ಕ್ಷಣ ಹೂತ್ಪುರ್ವಕವಾಗಿ ಅಭಿನಂದಿಸಬೇಕಲ್ಲವೇ?


ಇನ್ನೊಂದು ಮಹತ್ವದ ಕಾರ್ಯ, ಬುದ್ಧನನ್ನು ಕುರಿತಾಗಿಯೇ ಇಲ್ಲಿ ನಡೆಯಿತು ಎಂದು ಹೇಳಿದೆ. ಇದು ನನ್ನ ಕಾಲಮಾನದ ಅಚ್ಚರಿ ಎಂದು ನಾನಂತೂ ಕುಣಿದಾಡಿದ್ದೇನೆ. ಬಂದೇನವಾಜರ ದರ್ಗಾದಿಂದ ಬೌದ್ಧವಿಹಾರಕ್ಕೆ ಹೋಗುವ ದಾರಿಯಲ್ಲಿ, ಖರ್ಗೆಯವರ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಒಂದು ಸಾಧಾರಣ ಕಟ್ಟಡದಲ್ಲಿ ಅಸಾಧಾರಣ ಪ್ರತಿಭೆಯ ಜೀವವೊಂದರ ಭೇಟ್ಟಿಯಾಗುತ್ತದೆ. ಅವರೇ ನಮ್ಮ ಚೆನ್ನಣ್ಣ ವಾಲೀಕಾರ(chennanna valikar). ಬಹಳ ಚಿಕ್ಕಂದಿನಿಂದ ಬಸ್ಟ್ಯಾಂಡ್ ಪಕ್ಕದ್ದಲ್ಲಿ ಕದ್ದು ಮುಚ್ಚಿ ಮಾರಾಟವಾಗುತ್ತಿದ್ದ ‘ಓ ರಸಿಕ’, ಲಾವಣ್ಯ’ಗಳಂಥಹ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಇವರ ಪೋಲಿ, ಪೋಲಿ ಕವಿತೆಗಳನ್ನು ಓದಿದ್ದ ನನಗೆ ಈ ಚೆನ್ನಣ್ಣ  ಕರ್ನಾಟಕದ ಕಾರ್ಮಿಕ ಚಳುವಳಿ, ಕಾದಂಬರಿ, ಕಾವ್ಯ, ಜನಪರ ಹೋರಾಟ, ಮಹಾಕಾವ್ಯದ ರಚನೆ, ಸಂಶೋಧನೆ, ಕಡ್ಡಿ ಮುರಿದಂಥಹ ಮಾತುಗಳಿಂದಲೂ ಕಾಡಿದ್ದಾರೆ. ಇಂಥಹ ದೈತ್ಯ ಪ್ರತಿಭೆಯನ್ನು ಕಣ್ಣಾರೆ ನೋಡಿ ಬರಬೇಕು ಎಂಬ ನನ್ನ ಆಶೆ ಇಂದು ಫಲಿಸಿದೆ.


ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಾಂತ ಕುಸನೂರರನ್ನು ಕಾಣಲು ನಾನು ಇತ್ತಿಚಿಗೆ ಬೆಳಗಾವಿಗೆ ಹೋದಾಗ, ಬಳಲುತ್ತ ಮೇಲೆದ್ದ ಕುಸನೂರರು ನನ್ನ ಕೈಗೊಂದು ನೆಗುವಲಾರದ ಪುಸ್ತಕವನ್ನಿಟ್ಟರು. ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೂಳೆ ಮುರಿಯುವುದು ಗ್ಯಾರಂಟಿ. ಯಾವುದೋ ಅಭಿನಂದನಾ ಗ್ರಂಥವೋ, ವಿಶ್ವಕೋಶವೋ, ಇಲ್ಲಾ ಎನಸೈಕ್ಲೊಪಿಡಿಯಾ ಇರಬಹುದೆಂದು ಉಪೇಕ್ಷೆಯಿಂದಲೇ ಎತ್ತಿಕೊಂಡೆ. ಆದರೆ ಸನ್ನಿವೇಶವೇ ಬೇರೆ ಇತ್ತು. ಕೈಗಿಡುತ್ತಾ ಕುಸನೂರರು ಹೇಳಿದರು,”ನಮ್ಮ ಚೆನ್ನಣ್ಣ ಕಳ್‌ಸ್ಯಾನ, ಇದು ಮಹಾಕಾವ್ಯಂತ. ಪುಸ್ತಕದೊಳಗ ನಾನು ಒಂದ ಪಾತ್ರ ಆಗಿ ಅದೀನಂತ. ಒಂದ ಸಾವಿರ ಪುಟ ಅದ ರಾಜಶೇಖರ. ವಾಕ್ಯ ಮೊದಲನೇ ಪುಟದಾಗ ಶುರು ಮಾಡ್ಯಾನ, ಸಾವಿರನೇ ಪುಟಕ್ಕೆ ಬಂದರೂ ಫುಲ್‌ಸ್ಟಾಪೇ ಹಾಕಿಲ್ಲ. ಮಧ್ಯದೊಳಗ ಎಲ್ಲೂ ಒಂದು ಸಣ್ಣ ಕಾಮಾನೂ ಇಲ್ಲ, ಪ್ಯಾರಾಗ್ರಾಫಂತೂ ಇಲ್ಲೇ ಇಲ್ಲ. ಇದರಾಗ ನನ್ನ ಹುಡುಕು ಅಂದ್ರ ಎಲ್ಲಿ ಹುಡುಕ್ಕೋಳ್ಳಿ? ಪುಸ್ತಕ ನೋಡಿನೇ ನನ್ನ ಹೆಣಾ ಬಿದ್ದ ಹೋಗೆದ. ಮತ್ತ ಮ್ಯಾಲ ದಿನಾ ಫೋನ್ ಮಾಡಿ ಓದಿದೇನ? ಅಂತ ಜೀವಾಂ ತಿಂತಾನ, ಬಾಳ ವಿಚಿತ್ರ ಮನಷಾ ಅದಾನ. ಭಯಂಕರ ಶಕ್ತಿ. ಇಷ್ಟ ವರ್ಷ ಕೂಡಿ ಅದೀನಿ, ಅವಾಂ ಎನಂತ ನನಗಂತೂ ತಿಳಿದಿಲ್ಲ. ಅವನಿಗರ ತಿಳದದೋ ಇಲ್ಲೋ ಅವಂಗ ಗೊತ್ತು.” ಎಂದು ಪುಸ್ತಕ ಕೈಗಿಟ್ಟು ಕುಸನೂರರು ಹಾಸಿಗೆಗೊರಗಿದರು. ಹರಟೆ ಒಂದಿಷ್ಟು ಕಾಲ ಗುಲ್ಬರ್ಗಾದ ಅವರ ಹಳೆಯ ನೆನಪುಗಳನ್ನು ಒತ್ತರಿಸಿರಬೇಕು, ನಾನಂತೂ ಚೆನ್ನಣ್ಣ ವಾಲೀಕಾರರ ‘ವ್ಯೋಮಾವ್ಯೋಮ’ವನ್ನು ಹಾಗೊಮ್ಮೆ- ಹೀಗೊಮ್ಮೆ, ಮೇಲೊಮ್ಮೆ-ಕೆಳಗೊಮ್ಮೆ ಎತ್ತಾಡಿ ನೋಡಿ  ಮೊದಲ ಪುಟವನ್ನು ಓದುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಿದೆ. ಓದಬಹುದು ಎನ್ನಿಸಿತು. ಆದರೆ ಇದನ್ನು ಓದುವುದಕ್ಕಿಂತ ಮುಂಚೆ ಈ ಚೆನ್ನಣ್ಣರನ್ನು ಮುಖತಃ ಭೇಟ್ಟಿಯಾಗಬೇಕೆನಿಸಿತ್ತು.


ಈ ಹಿಂದೆ ಬಹಳಷ್ಟು ಬಾರಿ ಹೀಗೆ ಅನಿಸಿದವುಗಳಲ್ಲಿ ಕೆಲವು ಕೈಗೂಡಲಿಲ್ಲ. ಕುವೆಂಪು ಅವರನ್ನ ಕಾಣಬೇಕು, ತೇಜಸ್ವಿ(tejaswi)ಯವರೊಂದಿಗೆ ಕಾಲ ಕಳೆಯಬೇಕು ಎಂಬ ನನ್ನ ಬಯಕೆಗಳು ಬಾಯಿಗೆ ಬರುತ್ತಲೆ ಹುಸಿಯಾಗಿ ಹೋಗಿದ್ದವು. ಆದರೆ ಈ ಬಾರಿ ಹಾಗಾಗಲಿಲ್ಲ. ಅಂಬೇಡ್ಕರನ್ನ ಕುರಿತು ಮಾತನಾಡಲು ಬಂದ ಈ ಸಂದರ್ಭದಲ್ಲಿಯೆ ಚನ್ನಣ್ಣರನ್ನು ಹಿಡಿದುಬಿಟ್ಟೆ. ನಾನು ಅವರ ಮನೆಗೆ ಹೋದಾಗ ಮಧ್ಯಾನ್ಹದ ಎರಡು ಗಂಟೆಯಾಗಿರಬಹುದು. ಮೇಲಿನ ಕೊಣೆಯಲ್ಲಿ ಒಳ್ಳೆ ಏಸಿ ರೂಮ್‌ನಲ್ಲಿ ಕುಳಿತು ಬರಹ ಮಾಡುವವರಂತೆ ಸಹಾಯಕನೊಬ್ಬನನ್ನ ಇಟ್ಟುಕೊಂಡು ಚನ್ನಣ್ಣ ಧ್ಯಾನಸ್ಥರಾಗಿದ್ದರು. ಸಂಸಾರ ಕೆಳಗಿಟ್ಟು ಮೇಲಿನ ಕೊಣೆಯಲ್ಲಿ ಬರಹದಲ್ಲಿ ತೊಡಗಿಕೊಂಡಿದ್ದ ಚನ್ನಣ್ಣರನ್ನು ನೋಡಿ ನಾನೊಂದು ಕ್ಷಣ ಅಶ್ಚರಿಗೊಂಡೆ. ಕಾರಣ ಇಷ್ಟೆ ಅನೇಕ ಬಾರಿ ಕುಸುನೂರರನ್ನು ಇದೇ ತನ್ಮಯತೆಯ ಹಂತದಲ್ಲಿ ನಾನು ನೋಡಿದ್ದೆ. ಬಿಸಿಲು ನಾಡಿನ ಈ ಪ್ರತಿಭೆಗಳೇ ಹೀಗೆ. ಒಮ್ಮೆ ಒಳಗೆ ಇಳಿದರೆ ಮುಗಿಯಿತು ಲೋಕ ಅವರನ್ನು ಬಾಧಿಸುವದಿಲ್ಲ. ಚನ್ನಣ್ಣರ ಮನೆಗೆ ಹೋಗುವಾಗ ಅವರ ಖಾಸಾ ಶಿಷ್ಯರಾದ ಬಸವನಿಂಗಪ್ಪಾ ಹೂಗಾರರನ್ನು ಕರೆದುಕೊಂಡು ಹೋಗಿದ್ದೆ. ಹೀಗಾಗಿ ಸ್ನೇಹ ಇನ್ನೂ ಸಮೀಪವಾಯಿತು. ಬನಿಯನ್ ತೊಟ್ಟು ಬಾಗಿಲವರೆಗೂ ಬಂದು ಆತ್ಮಿಯವಾಗಿ ತಮ್ಮ ಪುಸ್ತಕ ಲೋಕದೊಳಗೆ ನಮ್ಮನ್ನು ಕರೆದೊಯ್ದ ಚನ್ನಣ್ಣ ಮಾತಿಗಿಳಿದರು. ಇವರು ಯಾವ ಪೀಠಿಗಳು ಅಲ್ಲದಿರುವದರಿಂದ ಪ್ರೇಮ ಮತ್ತು ಸಂಘರ್ಷ ಇಲ್ಲಿ ಸಾಧ್ಯ ಎನ್ನುವ ಭರವಸೆ ನನಗೂ ಸಾಧ್ಯವಾಯಿತು. ಈಗ ನಮ್ಮ ಸವಾಲ್ ಜವಾಬಿನ ಸಿಲ್‌ಸಿಲಾ- 

Chennanna Vaalikar in conversation with Ragam

ರಾಗಂ : ಈ ವ್ಯೋಮಾವ್ಯೋಮದ ಹಿನ್ನಲೆ ಏನು ಗುರುಗಳೆ?

ಚ.ವಾ : ಹಿಂಗ, ಒಮ್ಮಿ ಇದ್ದಕ್ಕಿದ್ದಂಗ ನಮ್ಮ ದೇವೆಂದ್ರಕುಮಾರ ಹಕಾರಿ ಹೇಳಿದ ಒಂದು ಮಾತು ನೆನಪಾತು. ಅವ್ರು ಅಂದಿದ್ರು ಮಾನ್ಯಖೇಡ ಎನ್ನುವ ಈ ನಮ್ಮ ಪ್ರದೇಶದೊಳಗ ಹೇಳಿಕೊಳ್ಳುವಂಥ ಒಂದು ಮಹಾನ್ ರಚನೆ ಯಾಕ ಆಗಲಿಲ್ಲ? ಎನ್ ಸಮಸ್ಯೆ ಅದ? ನಮ್ಮೊಳಗ ಆ ಶಕ್ತಿ ಇಲ್ಲೆನು? ಇದೊಂದ ಮಾತು, ತಲ್ಯಾಗ ಯಾವಾಗಲೂ ಹುಳಾ ಸುತ್ತದಂಗ ಸುತ್ತಾಡಲಾಕ ಸುರುಮಾಡತು. ಆಗ ನಾನು ದಿನಾಲೂ ಗುಲ್ಬರ್ಗಾದಿಂದ ರೈಚೂರಿಗೆ ಹೋಗಿ ಬರುತ್ತಿದ್ದೆ. ಟ್ರೆನ್ ಹತ್ತಿ ಕಣ್ಮುಚ್ಚಿದರ ಸಾಕು ಇದ ಪ್ರಶ್ನೆ ಕಾಡತಿತ್ತು. ಏನಾದರು ಆಗಲಿ ಕೈ ಹಾಕೆ ಬಿಡೂನು ಅಂತ ಬುದ್ಧನನ್ನ ತೆಕ್ಕಿ ಹೊಡೆದೆ, ಅಷ್ಟ. ವ್ಯೋಮಾವ್ಯೋಮ ಸಿದ್ಧ ಆಯ್ತು.

ರಾಗಂ : ಸರಿ, ಈ ರೀತಿ ಅಲ್ಪ, ಅರ್ಧ, ಪೂರ್ಣ ವಿರಾಮಗಳಿಲ್ಲದ ಸಾವಿರ ಪುಟಗಳ ಬರಹಕ್ಕೆ ಸ್ಪೂರ್ತಿ ಏನು?

ಚ.ವಾ : ಇಲ್ಲ ರಾಜಶೇಖರ, ಈ ದೇಶದ ಸಾಹಿತ್ಯ ರಚನೆಯಾಗಬೇಕಾದ ಮೂಲ ಶೈಲಿಯೊಳಗ ನಾನು ಈ ಬರಹ ಮಾಡೀನಿ. ವಾಲ್ಮಿಕಿ ವ್ಯಾಸರ ಬರಹದೊಳಗೆಲ್ಲೂ ಈ ಪಂಕ್ಚುವೇಶನ್ಸಗಳ ಪ್ರಶ್ನೆನೆ ಇಲ್ಲ. ಪಂಕ್ಚುವೇಶನ್ಸ ಅನ್ನೊದು ಪಶ್ಚಿಮದ ಪ್ರಶ್ನೆ ನಮ್ಮ ಸಮಸ್ಯೆ ಅಲ್ಲ.

ರಾಗಂ : ಇದನ್ನು ಬರೆಯುಕಿಂತ ಮೊದ್ಲ ಯಾವ ರೀತಿ ತೈಯಾರಿ ಮಾಡ್ಕೊಂದ್ರಿ?

ಚ.ವಾ : ನನ್ನನು ನಾನು ಸಮರ್ಪಿಸಿಕೊಂಡೆ. ಬುದ್ಧ ಎನ್ನುವ ಚೇತನಕ್ಕ ನನ್ನನು ನಾನು ಸಮರ್ಪಿಸಿಕೊಂಡೆ. ಒಂದು ಮಜಾ ಗೊತ್ತಿರಲಿ. ಯಾವುದೇ ಒಂದು ಶಕ್ತಿಗೆ ನಾವು ಸಮರ್ಪಿಸಿಕೊಂಡ್ರ ಅದು ನಮಗ ಅರ್ಪಿಸಿಕೊಳ್ಳತದ. ಈ ಬರಹದ ವಿಷಯದಲ್ಲಿ ಹಂಗ ಆಯ್ತು. ದಿನಾಲೂ ನಸುಕಿನ ಮೂರರಿಂದ ಐದರವರೆಗೆ ಇಪ್ಪತ್ತು ವರ್ಷ ನಿರಂತರವಾಗಿ ಬರೆದೆ. ಅದಕ್ಕ ಪಾಲಿಸಿದ್ದ ನೇಮ ಇಷ್ಟೆ - ಹಗಲು ಗದ್ಯ ರಾತ್ರಿ ಪದ್ಯ
    ಎರಡು ಸಾರಿ ಜಳಕವು
                                    ಬೈಗು ಬೆಳಗು ದೇಹ ದಾರ್ಡ್ಯ
                                    ಎರಡು ಸಾರಿ ಊಟವು

ಜಗತ್ತಿನ ಎಲ್ಲ ತತ್ವಜ್ಞಾನಿಗಳನ್ನ ಓದಿಕೊಂಡೆ. ಹಿಂಗ ಓದಲಾಕ ಒಂದು ಇಪ್ಪತ್ತು ವರ್ಷ ಕಳೆದೀನಿ.

ರಾಗಂ : ಈ ಬರಹ ನಿಮ್ಮ ದೇಹವನ್ನೇನಾದರು ಬಾಧಿಸ್ತೇನು?

ಚ.ವಾ : ಈಗ ನನಗ ವಯಸ್ಸು ಅರವತ್ತೆಂಟು. ನನಗೇನು ಇದರಿಂದ ತೊಂದರಿ ಆಗ್ಯಾದ ಅಂತ ಅನಿಸಿಲ್ಲ. ಹಂಗ ನೋಡಿದ್ರ ಈ ಬರಹದಿಂದ ನನ್ನ ಆರೋಗ್ಯ ಸುಧಾರಿಸ್ತು.

ರಾಗಂ : ಬರಹವನ್ನ ಮೊದಲಿಗೆ ಯಾರಿಗೆ ತೋರಿಸಿದ್ರಿ?

ಚ.ವಾ : ಯಾರಿಗೂ ತೋರಿಸಲಿಲ್ಲ. ಬರಗೂರು, ಕೀ.ರಂ ಭಾಳ ಕಾಡತಿದ್ರು, ಅದೇನ್ರ ಬರೆದಿದೀ ನಮಗೂ ಒಂದಿಷ್ಟು ತೋರ್ಸ್ರು ಅಂತಿದ್ರು. ನಾನು ಯಾರಿಗೂ ತೋರಿಸಲಿಲ್ಲ. ನೋಡಿ ಏನರ ಅಂದ ಬಿಟ್ಟರ ಎಲ್ಲಿ ನನ್ನ ಬರಹ ನಿಂತು ಹೋದೀತೂ ಅಂತ ಭಯ ಇತ್ತು ನನಗ. ಹಿಂಗಾಗಿ ಯಾರಿಗೂ ತೋರಿಸಲಿಲ್ಲ. ಕೊನೆಗೊಮ್ಮ ಒಯ್ದು ಕೀ.ರಂ ಮುಂದಿಟ್ಟೆ. ಅವ್ರು ನೋಡಿ ಗಾಭರ್‍ಯಾದ್ರು. ಏನೂ ಮಾತಾಡ್ಲಿಲ್ಲ. ಉದ್ದೇಶ ಇಷ್ಟ ತಾನು ತಾನಾಗಬೇಕು. ಹಂಗ ಆಗು ವ್ಯಾಳ್ಯಾಕ ಅದೆಲ್ಲೂ ಹೋರಬೀಳಬಾರ್‍ದು.

ರಾಗಂ : ಬಿಡುಗಡೆಯ ಸಂದಂರ್ಭ ಭಾಳ ಮಜಾ ಇತ್ತು ಅಂತ ಕೇಳೀನಿ.

ಚ.ವಾ : ಹೌದು, ಪುಸ್ತಕ ಬಂತು ಅನಂತಮೂರ್ತಿ(Anantamurthi)ಯವರಿಗೆ ಫೋನ್ ಮಾಡ್ದೆ. ಅವ್ರು ಅಂದ್ರು ‘ನೀನು ನನ್ನ ಪ್ರೀತಿಯ ಮನುಷ್ಯ ನಾ ಬಂದ$ ಬರ್‍ತೀನಿ. ಮುಂದ ಪುಸ್ತಕಾ ಕಳಸ್ದೆ. ತಪಾಸ ಇಲ್ಲ. ಏನೋ ಒಂದು ಸಣ್ಣದು ಕಳಸ್ತನ ಅಂತ ಅವರು ತಿಳಿದಿದ್ರು.  ಇದ್ದಕ್ಕಿದ್ದಂಗ ವಲ್ಲೆ ಅಂದ್ರ ನಾ ಹ್ಯಾಂಗ ಬಿಡುದು? ಮತ್ತ ಫೋನ್ ಮಾಡ್ದೆ, ಹೇಳ್ದೆ. ನನ್ನ ಪುಸ್ತಕ ನಿವೇನು ಪೂರಾ ಓದಬಾಡ್ರಿ, ನಿಮಗಾದಷ್ಟು ಓದ್ರಿ. ಕಡೀಗಿ ಒಂದೇ ಪೇಜ್ ಓದಿ ಮಾತಾಡ್ರಿ. ಅವರೆಲ್ಲಾ ದೊಡ್ಡೊರು. ಓದಿ ಹೇಳದ್ರ ನಾನು ಮತ್ತೊಂದಿಷ್ಟು ಸುಧಾರಿಸ್ಕೋತೀನಿ. ಆದರ ಅವ್ರು ಒಪ್ಪಲಿಲ್ಲ. ಇದ್ದ ವಿಷ್ಯಾನ ಕೀ.ರಂಗೆ ಹೆಳ್ದೆ. ಅಂವ ಅನಂತಮೂರ್ತಿಯವರನ್ನ ತರಾಟೆಗೆ ತೊಗೊಂಡ. ಕಡೀಗಿ ಅವರು ಒಪ್ಪಿಕೊಂಡ್ರು. ಅವ್ರು ಹೇಳಿದ್ರು ‘ಖರೆ ಹೇಳಬೇಕಂದ್ರ ಕೀ.ರಂ ನಾನು ಆ ಪುಸ್ತಕಾನ ಓದಿಲ್ಲ. ನನ್ನಿಂದ ಓದಾಕೂ ಆಗುದಿಲ್ಲ. ಅದು ಭಯಂಕರ ಅದ$’ ನಾನು ಅಷ್ಟ ಸಾಕ ಅಂದೆ. ಅನಂತಮೂರ್ತಿಯವರು ಖರೆ ಮಾತಾಡ್ಯಾರಲ್ಲಾ ಅಷ್ಟೆ ಸಾಕು ಅಂದೆ.

ರಾಗಂ : ಹಂಗಾದ್ರ ಕೃತಿ ಬಿಡುಗಡೆ ಏನಾಯ್ತು?

ಚ.ವಾ : ಕೃತಿ ಬಿಡುಗಡೆ ಅಂತು ಆಯ್ತು. ಕಲ್ಬುರ್ಗಿ ಅದ್ಯಕ್ಷತೆಯೊಳಗ ಸಿ.ಎನ್.ರಾಮಚಂದ್ರನ್(C.N.R) ಪುಸ್ತಕ ಬಿಡುಗಡೆ ಮಾಡಿದ್ರು. ಎಚ್.ಎಸ್.ರಾಘವೇಂದ್ರರಾವ್ ಕೃತಿ ಕುರಿತು ಮಾತಾಡದ್ರು ಬಾಳ ಛಲೋ ಆಯ್ತು. ನಾ ಹೇಳುದು ಏನು ಇರಲಿಲ್ಲ. ಗಾಲಿಬ್ ಒಂದಕಡೆ ಹೇಳ್ತನ ‘ಗಾಲಿಬ್ ಹೇಳೂದು ಹೇಳಿ ಬಿಟ್ಟಾನ, ಅವನಕಿಂತಲೂ ಛಲೋ ಹೇಳವ್ರು ಹೇಳಬಹುದು.’ ನನ್ನದೂ ಇದೇ ವಾದ. ಇಪ್ಪತ್ತು ವರ್ಷ ಓದಿ, ಇಪ್ಪತ್ತು ವರ್ಷ ಬರೆದು ನಾನು ಏನ್ ಹೇಳಬೇಕ ಅಂದಿದ್ನಿ ಅದೆಲ್ಲನೂ ಹೇಳಿ ಬಿಟ್ಟಿನಿ. ಬಾಕಿ ಉಳಿದವ್ರು ಹೇಳ ಬೇಕು.

ರಾಗಂ : ಜ್ಞಾನಪೀಠದ ಪ್ಲ್ಯಾನ್ ಇದ್ರ ನಮ್ಮಲ್ಲಿ ಮಹಾ ಕಾವ್ಯ ಹುಟ್ಟತಾವ. ಇಲ್ಲ ಯಾರಿಗೋ ಒಬ್ಬರಿಗೆ ಜ್ಞಾನಪೀಠ ಕೊಡಬೇಕಾಗಿದ್ರ ಅವರ ಅಭಿನಂದನಾ ಗ್ರಂಥಗಳೂ ಮಹಾಕಾವ್ಯದಂಗ ಚರ್ಚೆ ಆಗತಾವ. ಇದರೋಳಗ ನಿಮ್ಮದು ಯಾವ ದಾರಿ?

ಚ.ವಾ : ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ.
ಕುಳಿತಿದ್ದರೆ ಇನ್ನು ಮಾತನಾಡುತ್ತಿದ್ದರೆನೋ ಚನ್ನಣ್ಣ ಆದರೆ ಕಾಲದ ಪರಿಧಿಯೊಳಗೆ ಸುತ್ತುವ ಮನುಷ್ಯ ಸ್ವತಂತ್ರನಲ್ಲ. ಅಂದಹಾಗೆ ತಡವಾಗಿಯಾದರೂ ಚಿಂತೆಯಿಲ್ಲ ಚನ್ನಣ್ಣನವರ ವ್ಯೋಮಾವ್ಯೋಮದ ತುಲನಾತ್ಮಕ ಅಧ್ಯಯನ ಕುವೆಂಪು ಅವರ ರಾಮಾಯಣ ದರ್ಶನಂ, ಗೋಕಾಕರ ಭಾರತ ಸಿಂಧೂ ರಶ್ಮಿ ಹಾಗೂ ಇನ್ನೂ ಅನೇಕ ಕೃತಿಗಳೊಂದಿಗೆ ನಾಡಿನುದ್ದಕ್ಕೂ ಇಷ್ಟರಲ್ಲಿಯೆ ಶುರು ಆಗೊದಿದೆ.
ಒಂದೇ ಮಾತು ಗುಲ್ಬುರ್ಗಾದ ಬಿಸಿಲು ಬಾಡುವುದಿಲ್ಲ ಹಾಗೆಯೆ ಚನ್ನಣ್ಣನವರ ವ್ಯೋಮಾವ್ಯೋಮ ಎಚ್ಚರಾಗಿರುವ, ಮುಕ್ತವಾಗಿರುವ ಯಾವ ಮನಸ್ಸನ್ನೂ ಕಾಡದೇ ಇರುವುದಿಲ್ಲ.


                                                                                   

Sunday, March 25, 2012

ಜೀವನಾವರ್ತನ ಗೀತೆಗಳು ಮತ್ತು ಹೂ ಹಕ್ಕಿ ಮಕ್ಕಳು


ಜೀವನಾವರ್ತನ ಗೀತೆಗಳು ಮತ್ತು ಹೂ ಹಕ್ಕಿ ಮಕ್ಕಳು
                          (ಕೃತಿಗಳ ಬಿಡುಗಡೆ ಸಮಾರಂಭ ,ದಿನಾಂಕ: ೧೨/೦೩/೨೦೧೨, ಸರಕಾರಿ ಕಲಾ ಕಾಲೇಜು, ಹಾಸನ)


ಡಾ.ಹಂಪನಹಳ್ಳಿ ತಿಮ್ಮೇಗೌಡರ "ಜೀವನಾವರ್ತನ ಗೀತೆಗಳು" ಮತ್ತು ಮೇಟಿಕೆರೆ ಹಿರಿಯಣ್ಣನವರ "ಹೂ ಹಕ್ಕಿ ಮಕ್ಕಳು" ಎರಡೂಜೀವನ್ಮುಖಿ ಕೃತಿಗಳೇ. ಇರ್ವರೂ ಜೀವನ ಶ್ರದ್ಧೆಯ ಲೇಖಕರುಗಳೇ. ಒಬ್ಬರದು ಸಂಗ್ರಹ, ಇನ್ನೊಬ್ಬರದು ಸೃಜನಶೀಲ. ಒಂದು ಜಿಲ್ಲೆಯಲ್ಲಿ ಹೀಗೆ ಒಂದಿಷ್ಟು ಸಾಹಿತ್ಯವನ್ನೇ ತಪಸ್ಸಾಗಿಸಿಕೊಂಡ ಲೇಖಕರುಗಳೊಂದಿಗೆ ಒಡನಾಡುವುದೇ ಛಂದ. ಹೀಗೆಯೆ ಕೃತಿಗಳ ಬಿಡುಗಡೆಯ ಸಮಾರಂಭದಲ್ಲಿ ಮೂರು ತಲೆಮಾರುಗಳಿಗೆ ಸಾಕ್ಷಿಯಾಗಿರುವ .ಹೊ.ನಾರಾಯಣಸ್ವಾಮಿಯವರಂಥ ಹಿರಿಯ ಚಿಂತನಶೀಲ ಲೇಖಕರು ನಮ್ಮೊಂದಿಗಿರುವುದು ಛಂದಕ್ಕೂ ಛಂದ. ಹೀಗೆ ಹೇಳಿದರೆ ಅತೀಶಯೊಕ್ತಿಯಾಗಬಾರದು. ಹಾಸನ ಎಂದರೆ ಹೊಟ್ಟೆ ತುಂಬುವಷ್ಟು ರಾಜಕಾರಣ. ಸಾರ್ವಜನಿಕ ಸ್ಥಳಗಳಿಂದ ಕಾಲೇಜಿನ ಕಾರಿಡಾರ್ಗಳವರೆಗೆ ರಾಜಕಾರಣವೆಂಬ ಅಕ್ಟೋಪಸ್ ತನ್ನ ಮೈ ಚಾಚಿದೆ. ಇಲ್ಲಿ ಎಲ್ಲೆ ನಿಂತು ಒಂದು ಕಲ್ಲು ಒಗೆದರೂ ಅದು ಒಂದಿಲ್ಲಾ ಒಂದು ರೀತಿಯ, ರೂಪದ ರಾಜಕಾರಣಿಯ ಮೇಲೆಯೇ ಬೀಳುತ್ತದೆ. ಇಂಥಹದರ ಮಧ್ಯ ನಿರ್ಲಿಪ್ತತೆಯನ್ನ ಘೋಶಿಸಿಕೊಂಡು ಸಂಸ್ಕೃತಿಮುಖಿಯಾಗುವುದು, ಜೀವನ್ಮುಖಿಯಾಗುವುದು ಒಬ್ಬ ಲೇಖಕನ ಜೀವಂತಿಕೆಯ ಲಕ್ಷಣ.   ಹಿನ್ನೆಲೆಯಲ್ಲಿ ಕೃತಿಗಳ ಲೋಕಾರ್ಪಣೆ ಒಂದುಅರ್ಥಪೂರ್ಣ ಕಾರ್ಯ.
ನಾನು ಒಂದೆರಡು ವರ್ಷ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಅಧ್ಯಯನ ಸಂಸ್ಥೆಯಲ್ಲಿ ಡಾ.ಜನಿಫರ್ ಬೇಯರ್ ಹಾಗೂ ಪ್ರೊ.ಕಿಕ್ಕೆರಿನಾರಾಯಣರೊಂದಿಗೆ ಸೇರಿಕೊಂಡು ಜೇನುಕುರುಬರ ಸಾಹಿತ್ಯ ಸಂಗ್ರಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಇಂದು ಕೃತಿಗಳ ಬಿಡುಗಡೆಗೆ ನನಗೊಂದು ಅರ್ಹತೆಯನ್ನು ಒದಗಿಸಿವೆ ಎನ್ನುವ ಭರವಸೆಯೊಂದಿಗೆ ಕೃತಿಗಳ ಬಿಡುಗಡೆ ಮಾಡಿ ಮಾತನಾಡುವ ಧೈರ್ಯ ಮಾಡಿದ್ದೇನೆ.
ಡಾ.ಹಂಪನಹಳ್ಳಿ ತಿಮ್ಮೇಗೌಡರಿಂದ ಸಂಪಾದಿತ 'ಜೀವನಾವರ್ತನ ಗೀತೆಗಳು' ಕುರಿತು ಬರೆಯುತ್ತ ಪ್ರೊ.".ಸಿ.ರಾಮಚಂದ್ರೇಗೌಡರು ಮಹತ್ವದ ಚರ್ಚೆಯನ್ನು ಎತ್ತಿದ್ದಾರೆ. 'ಆಧುನಿಕ' ಮತ್ತು 'ಪುರಾತನ' ಎಂಬ ಎರಡು ಪದಗಳನ್ನು ಬಳಸುವುದರ ಮೂಲಕ ಜ್ಞಾನದ, ಅದರಲ್ಲೂ ಜನಪದದ ಅಪಮೌಲೀಕರಣ ಹೇಗಾಯಿತು ಎನ್ನುವುದನ್ನು ಬಹಳ ಸಮರ್ಥವಾಗಿ ವಿಶ್ಲೇಸಿದ್ದಾರೆ. " ಕಾಲದ ಪರಿಸ್ಥಿತಿ ಹೊರಗಿನಿಂದ ಬಂದಜ್ಞಾನ 'ಆಧುನಿಕ', ನಮ್ಮದೆಂಬುದು 'ಪುರಾತನ' ಎಂದು ಮನಸೋತು ಒಪ್ಪಿಕೊಂಡು ಬಿಟ್ಟಿತು. ಭಾರತೀಯ ಉತ್ಪಾದನೆಯಲ್ಲಿ ಹೊಸತು ಮತ್ತು ಹಳತು ಎಂಬ ವಿಭಜಿತ ಧೋರಣೆ ಎಲ್ಲರ ಮನದೊಳಗೆ ದಾಖಲಾಗಿತ್ತು. ಕಾರಣದಿಂದ ಮೇಲಿಂದ ನಮ್ಮ ಸಂಸ್ಕೃತಿ ಮತ್ತು ಜನಪದ ಸಾಹಿತ್ಯ ನಮ್ಮ ಹಳ್ಳಿಗಳಂತೆ ಹಳೆಯದು ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ." ಇಂಥದೇ ಒಂದು ಹೇಳಿಕೆಯನ್ನ ಅನಂತಮೂರ್ತಿಯವರಿಂದಲೂ ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು. ವ್ಯತ್ಯಾಸವಿಷ್ಟೆ, ಅವರು ಪೂರ್ವ ಮತ್ತು ಪಶ್ಚಿಮದ ಹಿನ್ನೆಲೆಯಿಂದ ವಿವರಿಸಿದ್ದಾರೆ. ಅವರು ಬರೆಯುತ್ತಾರೆ "ಭಾರತದ ಸತ್ವ ಸುಪ್ತವಾಗಿದ್ದ ಕಾಲದಲ್ಲಿ ಪಾಶ್ಚಾತ್ಯಲೋಕ ಎಚ್ಚೆತ್ತು ವ್ಯಕ್ತಿಧರ್ಮವನ್ನೇ ಎತ್ತಿ ಹಿಡಿದು ಅದೃಶ್ಯ ಶಕ್ತಿಗಳನ್ನು ಬೀಳ್ಗಳೆದು, ಸಮಾಜಧರ್ಮವನ್ನು ರೂಢಿಸಿಕೊಳ್ಳದೆ ಇಂದ್ರಿಯಗಮ್ಯವಾದ ಪದಾರ್ಥ ಲೋಕವೊಂದನ್ನೇ ನೆಚ್ಚಿ ವಿಜ್ಞಾನದ ಮಂತ್ರಕಂಬದ ಮೇಲೆ ಕುಳಿತು ಮೈದಾಸನ ಸ್ವರ್ಣ ಹಸ್ತದಿಂದ ಮುಟ್ಟಿದ್ದನ್ನೆಲ್ಲ ಚಿನ್ನ ಮಾಡುವೆನೆಂದು ಹೊರಟಿತು. ಅದರ ಸಾಧನೆ ಬೆರಗುಗೊಳಿಸುವಂಥದಾದರೂ ಅದರ ಸಿದ್ಧಿಯಲಿ ಮನುಷ್ಯ ಅಂತರಂಗಲೋಕದ, ಧರ್ಮಲೋಕದ, ಅದೃಶ್ಯಲೋಕದ ಅರಿವಿ ಅಭಾವ ವಿಜ್ಞಾನ ಧರ್ಮಮಾರಕವಾಗಲೂ ಕಾರಣವಾಟಿತು. 
ಎರಡು ಭಿನ್ನ ಹಿನ್ನೆಲೆಂದ ಹೊರಟ ಎರಡೂ ಹೇಳಿಕೆಗಳ ಕಾಳಜಿ ಒಂದೇ ಮತ್ತು ಉದ್ದೇಶವುಧ್ಯಾನಸ್ಥ ಸ್ಥಿತಿಯ ಭಾರತದ ಸಂಸ್ಕೃತಿ, ಸಾಹಿತ್ಯ ಬದಲಾಗುವ ರೀತಿ ಭಿನ್ನ. ಅದರ ಲಯ ಗತಿಗಳೂ ಭಿನ್ನ. ಜ್ಞಾನದ ಹೊಳವೂ ಭಿನ್ನ. ಹೀಗಾಗಿ ನೂರಾರು ವರ್ಷಗಳವರೆಗೆ ಪಶ್ಚಿಮದ ತೆಕ್ಕೆಗೆ ಬಿದ್ದ ದೇಶ, ಅದರ ಜನಪದ, ಸಂಸ್ಕೃತಿ, ಮತ್ತು   ಧರ್ಮ ಒಂದು ರೀತಿಯಿಂದ ಭಗ್ನಗೊಂಡಿತು ಎನ್ನುವುದನ್ನು ಹೇಳಿಕೆಗಳು ಸ್ಪಷ್ಟಪಡಿಸುತ್ತವೆ. ಪೂರ್ವ ಪಶ್ಚಿಮದ ತಿಕ್ಕಾಟದಲ್ಲಿ, ಪಶ್ಚಿಮ ಪ್ರಣೀತ ವಿಜ್ಞಾನ, ಪೂರ್ವ ಪ್ರಣೀತ ಜ್ಞಾನಗಳ ಮಸೆತದಲ್ಲಿ, ಜನಪರವಾದ, ಜನಪದೀಯವಾದ, ಅದರಲ್ಲೂ ಮುಖ್ಯವಾಗಿ ಮೌಖಿಕವಾದ ಬಹಳಷ್ಟು ಸಾಹಿತ್ಯ ಇನ್ನಿಲ್ಲದಷ್ಟು ಹಾನಿಗೊಳಗಾತು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ನಾವು ಒಪ್ಪಿಕೊಳ್ಳದಿದ್ದರೆನಂತೆ, ಡಾ.ಹಂಪನಹಳ್ಳಿ ತಿಮ್ಮೇಗೌಡರ ಜೀವನಾವರ್ತನ ಗೀತೆಗಳಂಥ ಸಂಪಾದನೆಗಳು ಇದನ್ನು ಒಪ್ಪುವಂತೆ ಮಾಡುತ್ತವೆ. ಬರಹವನ್ನು ಸಾಕ್ಷಿಯಾಗಿಸಿಕೊಂಡ ಲಿಖಿತ ಅಥವಾ ಶಿಷ್ಟ ಸಾಹಿತ್ಯ ಕಾಲಾಂತರದಲ್ಲಿಯೂ ಕಾದಾಡಲು ಸಮರ್ಥವಾಗಿದೆ. ಆದರೆ ಜನಪದದ ಸಮಸ್ಯೆಯೆ ಬೇರೆ. ಅದು ಮುಖವಾಣಿ. ಎಲ್ಲದರ ತಾಯಿಬೇರು. ಕಾರಣ ಅದಕ್ಕೆ ಬೇರೆಯದೇ ಆದ ಕಾಳಜಿಗಳು ಬೇಕು. ಡಾ.ತಿಮ್ಮೇಗೌಡರು ಬರೆಯುತ್ತಾರೆ "ನಮ್ಮ ಸಾಹಿತ್ಯ ಪರಂಪರೆಯನ್ನು ನೋಡಿದಾಗ ಶಿಷ್ಟ ಸಾಹಿತ್ಯಕ್ಕೆ ಪ್ಠು ನೀಡಿ ನೀರೆರೆದು ಬೆಳೆಸಿರುವುದು ಮೌಖಿಕ ಸಾಹಿತ್ಯ. ಆದರೆ ಶಿಷ್ಟ ಸಾಹಿತ್ಯಕ್ಕೆ ದೊರಕಿರುವಷ್ಟು ಪುರಸ್ಕಾರ, ಗೌರವ, ಆದರಗಳು ಮೌಖಿಕ ಸಾಹಿತ್ಯಕ್ಕೆ ಸಿಕ್ಕಿಲ್ಲ." ಇದು ವಿಷಾದದ ಸಂಗತಿಯಾಗಿರುವಂತೆ ಸಂಸ್ಕೃತಿ ವಿನಾಶದ ಅಂಚಿನಲ್ಲಿರುವುದನ್ನೂ ಸೂಚಿಸುತ್ತಿದೆ. ಒಂದು ರೀತಿಯ ಅವಜ್ಞೆ ಬೆಳೆಯುತ್ತಿದೆ. ಡಾ.ತಿಮ್ಮೇಗೌಡರು ಹೇಳಿದಂತೆ, "ಇಂದು ನಾವು ಭಾರತೀಯ ಸಂಸ್ಕೃತಿಯಲ್ಲಿರುವ ದೇಸಿ ಜ್ಞಾನವನ್ನುಅಲಕ್ಷಿಸುತ್ತಾ, ಅನ್ಯ ಸಂಸ್ಕೃತಿಯ ಜ್ಞಾನಕ್ಕೆ ಹಾತೊರೆಯುತ್ತಿದ್ದೇವೆ. ಈಗ ವಸ್ತು ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ಜ್ಞಾನ ಸಂಸ್ಕೃತಿಯ ಕಡೆ ಅಲಕ್ಷ್ಯ ಭಾವನೆ ತಳೆಯುತ್ತಿದ್ದೇವೆ. ನಮ್ಮಲ್ಲಿರುವ ಜಾನಪದ ಸಂಪತ್ತು ಸ್ಥಳೀಯ ಜ್ಞಾನದ ಗಣಿ. ಅದನ್ನು ಬಗೆದಷ್ಟು ಅಪಾರಜ್ಞಾನ ಚಿನ್ನದಂತೆ ದೊರಕುತ್ತಿರುತ್ತದೆ."
'ನಮ್ಮಲ್ಲಿರುವ ಜಾನಪದ ಸಂಪತ್ತು ಸ್ಥಳೀಯ ಜ್ಞಾನದಗಣಿ.' ಎನ್ನುವ ತಿಮ್ಮೇಗೌಡರ ಹೇಳಿಕೆಯ ವ್ಯಾಪ್ತಿ ದೊಡ್ಡದು.ಇಡೀ ಜೀವನಾವರ್ತನವನ್ನು ಅದರ ಒಟ್ಟು ಸೊಗಡಿನೊಂದಿಗೆ ಸೂಚಿಸುವಂಥದ್ದು. ಅದು ನಮ್ಮ ದೇಶಿಯ "ಜ್ಞಾನ, ಧರ್ಮ, ಜೀವನ ಶೈಲಿ, ವನಸ್ಪತಿ, ಉಡುಗೆ, ಆಚರಣೆಗಳೆಲ್ಲವನ್ನು ಸಮಾವಿಷ್ಟಗೊಳಿಸಿಕೊಂಡ ಮಹಾನ್ ಸಾಗರ, ಜೀವ ನದಿ. ಮಹತ್ವವನ್ನು ತಿಳಿದುಕೊಂಡೇ ಶಿಷ್ಟ ಸಾಹಿತ್ಯದ ಅನೇಕ ಪ್ರಾಜ್ಞರು ನಮ್ಮಜಾನಪದ ಸಾಹಿತ್ಯವನ್ನು ಸಂಗ್ರಹಿಸುವತ್ತ ಕಾರ್ಯೋನ್ಮುಖರಾದರು. ಅಂಥವರ ಒಂದು ದೊಡ್ಡ ಪಟ್ಟಿಯನ್ನು ಸಂಗ್ರಹದ ಆರಂಭದಲ್ಲಿ ರಾಮೇಗೌಡರು ಸೂಚಿಸಿದ್ದಾರೆ. ಕನ್ನಡದ ಪಾಲಿಗೆ ಇರುವಂತೆ ರಾಷ್ಟ್ರಮಟ್ಟದಲ್ಲಿಯೂ ಜನಪದ ಸಂಗ್ರಹಕಾರರ ಒಂದು ದೊಡ್ಡ ಪಡೆಯೇ ಇದೆ.ಅವರಲ್ಲಿ ಪ್ರಮುಖವಾಗಿ ಏಳೆಂಟು ಹೆಸರುಗಳು ನನಗಿಲ್ಲಿ ದಾಖಲಿಸಬೇಕು ಎನಿಸುತ್ತಿದೆ.
ವೇರಿಯರ್ಎಲ್ವಿನ್ ಬಗೆಗೆ ನಿಮಗೆ ಗೊತ್ತಿರಬಹುದು. ೧೯೦೨ ಮತ್ತು ೬೪ರ ಅವಧಿಯಲ್ಲಿ ಬದುಕಿದ್ದ ಈತ ಮಾನವ ಶಾಸ್ತ್ರಜ್ಞನಾಗಿರುವಂತೆ, ಗುಡ್ಡಗಾಡು, ಜನಪದ ಸಂಗ್ರಹಕಾರನೂ ಆಗಿದ್ದ. ಭಾರತಕ್ಕೆ ಕ್ರೈಸ್ತಮತ ಪ್ರಚಾರಕನಾಗಿ ಬಂದ ಗಾಂಧಿಯೊಂದಿಗೆ ಭಾರತೀಯರ ಕಾಂಗ್ರೆಸ್ಸಿಗೆ ಸೇವೆ ಸಲ್ಲಿಸುವಗೊಸ್ಕರ ತನ್ನ ವೃತ್ತಿಗೆ ರಾಜಿನಾಮೆಕೊಟ್ಟ ವಿಚಿತ್ರ ಮನುಷ್ಯ. ಮುಂದೊಂದು ಕಾಲಕ್ಕೆ ಶಿಲ್ಲಾಂಗ್, ಓರಿಸ್ಸಾ ಮತ್ತು ಮಧ್ಯಪ್ರದೇಶಗಳಲ್ಲಿ ಜನಪದ ಸಾಹಿತ್ಯ ಸಂಗ್ರಹಿಸುವ ಆಲೋಚನೆಯಿಂದ ಗಾಂಧಿ ಮತ್ತು ಆತನ ಕಾಂಗ್ರೆಸ್ಸನ್ನು ಬಿಟ್ಟ. ಇನ್ನೊಬ್ಬಳಿದ್ದಾಳೆ  ಜಾನ್ ಮೇರಿಯಮ್ಮ, ದಲಿತರ ಪಾಲಿನ ಅಜ್ಜಿಯಂದೇ ಖ್ಯಾತಳಿವಳು. ಕೇರಳದಲ್ಲಿ ತೊಂಬತ್ತು ವರ್ಷ ಜನಪದ ಸಾಹಿತ್ಯದ ಸಂಗ್ರಹ ಮಾಡಿದ ಈಕೆ ಕೊಟ್ಟಾಯಮ್ಮ್ ಮೀಪದ  ಕಾಲೇಜೊಂದರಲ್ಲಿ ಕಸ ಗೂಡಿಸುವ ಕೆಲಸದಲ್ಲಿದ್ದಳು. ಆದರೆ ಕೇರಳದ ಜನಪದವನ್ನು ಇನ್ನೆಂದೂ ಸಾಯದಂತೆ ಕಟ್ಟಿಕೊಟ್ಟಳು. ಕಲಕತ್ತೆಯ ಚಂದ್ರಕುಮಾರ ಕೂಡ ಅಷ್ಟೇ ಮಹತ್ವದ ಜನಪದ ಸಂಗ್ರಹಕಾರ. ಕಿರಾಣಿ ಅಂಗಡಿಯೊಂದರಲ್ಲಿ ಒಂದು ರೂಪಾಯಿ ಸಂಬಳದೊಂದಿಗೆ ಜೀವನ ಪ್ರಾರಂಭಿಸಿ, ಮುಂದೆ ತಾಲೂಕಾಫೀಸಿನಲ್ಲಿ ಎರಡು ರೂಪಾಯಿ ಸಂಬಳ ಪಡೆದು, ಎಂಟು ರೂಪಾಯಿ ಸಂಬಳ ಪಡೆಯುವಷ್ಟರಲ್ಲಿ ಹಳ್ಳಿಗಳಿಗೆ ಹೋಗಿ ತೆರಿಗೆ ಸಂಗ್ರಹಿಸುವ ಅಧಿಕಾರಿಯಾದ. ಇದೆ ಆತನ ಪಾಲಿಗೆ ಜನಪದವನ್ನು ಸಂಗ್ರಹಿಸಲು ದಾರಿಯಾತು. ಮುಂದೊಂದು ಕಾಲಕ್ಕೆ ಕಲಕತ್ತಾ ವಿಶ್ವವಿದ್ಯಾಲಯದಲ್ಲಿ ಎಪ್ಪತ್ತು ರೂಪಾಯಿ ಸಂಬಳದೊಂದಿಗೆ ದೊಡ್ಡಜನಪದ ಸಂಗ್ರಹಕಾರನಾಗಿ ಬೆಳೆದ. ಬಂಗಾಲದ ಮಹಾನ್ಜನಪದ ತಜ್ಞನೆನಿಸಿಕೊಂಡ.
ಹಾಗೆಯೆ ಕೇರಳದ ಕಿ.ರಾಜನಾರಾಯಣ್, ಕೋಮಲ್ ಸ್ವಾಮಿನಾಥನ್, ರಾಜಸ್ಥಾನದ ಕೋಮಲ್ಕೊಠಾರಿ, ದೇವಿಲಾಲ ಸಮರ್, ಗುಜರಾತಿನ ಭಗವಾನ್ದಾಸ ಪಟೇಲ್ ,ಹೀಗೆಯೆ ಅನೇಕರನ್ನು ಹೆಸರಿಸಬಹುದು.
ನಮಗೆ ಖುಶಿಯಾಗಬೇಕು, ಇದೆ ದಾರಿಯನ್ನು ಕ್ರಮಿಸಿದ ಡಾ.ಹಂಪನಹಳ್ಳಿ ತಿಮ್ಮೇಗೌಡ  ಮತ್ತು ಮೇಟಿಕೆರೆ ಹಿರಿಯಣ್ಣ ನಮ್ಮೊಂದಿಗಿದ್ದಾರೆ. ಐದು ಪ್ರಮುಖ ಭಾಗಗಳಲ್ಲಿ ವಿಂಗಡಿಸಲ್ಪಟ್ಟ ಹಂಪನಳ್ಳಿಯವರ ಕೃತಿ ಜೀವನ ಶ್ರದ್ಧೆಗೊಂದು ಸಾಕ್ಷಿ. ಪುಸ್ತಕ ನಮ್ಮ ಮನೆಯ ಗ್ರಂಥಾಲಯದಲ್ಲಿರುವುದು ಒಂದು ಶ್ರೀಮಂತಿಕೆ. ಪ್ರತಿ ಸಾಲು ಉದ್ದರಣೆಗೆ ಯೋಗ್ಯ. ಉದಾಹರಣೆಗೆ-'ನಿದ್ರೆಗೆ ಮದ್ದುಂಟೆ ವಜ್ರಕ್ಕೆ ಬೆಲೆಯುಂಟೆ', 'ಸಂಜೆ ದೇವತೆ ತಾಯೆ ಕಂದನ ತಲೆ ಕಾಯೆ', 'ಅತ್ತೆಯೆಂಬ ಬಾಯಿಗೆ ಮುತ್ತ ತಂದು   ತುಂಬುವೆ', 'ಹಾಗಾಲಕಾಯನ್ನು ಹೇಗೆ ಅಟ್ಟರೂ ಹಿಯೆ', 'ಗಂಜಿಯ ಕುಡಿದರೂ ಗಂಡನ ಮನೆ ಲೇಸು' ಹೀಗೆ ಒಂದೇ, ಎರಡೇ, ಸಾವಿರಾರು ಸಾಲುಗಳನ್ನು ಉದ್ಧರಿಸಬಹುದು. ಜನಪದದಷ್ಟು ಉದ್ಧರಣಯೋಗ್ಯವಾದ ಸಾಹಿತ್ಯ ಬೇರೆ ಇನ್ಯಾವುದು ಇಲ್ಲವೆನ್ನುವುದನ್ನು ನಿರ್ವಿವಾದಿತವಾಗಿ ಒಪ್ಪಿಕೊಳ್ಳಬೇಕು. ಜಾನಪದ ಬೌದ್ಧಿಕ ಕಸರತ್ತಿನಿಂದ ಹುಟ್ಟಿಕೊಂಡದ್ದಲ್ಲ. ಅದು ಬುದ್ಧಿ ಪಾರಮ್ಯದ ಸಾಹಿತ್ಯವೂ ಅಲ್ಲ. ಒಂದು ರೀತಿಯಲ್ಲಿ ಅನುಭಾವಕ್ಕೆ ಮೀಪವಾದ ಜನಾಂಗದ ತಲೆಮಾರುಗಳ ಸ್ವಾನುಭವದ ಕೆನೆ. ನಿತ್ಯಜಂಗಮವಾದ ಜಾನಪದ ಕಾಠಿಣ್ಯದ ಮಾತುಗಳಾಡುವುದಿಲ್ಲ. ಬದಲಾಗಿ ನಮ್ಮನ್ನು ಮಾನವ ಕಾರುಣ್ಯಕ್ಕೆ ಕರೆದೊಯ್ಯುತ್ತದೆ. ಕಾರಣಗಳಿಂದಾಗಿಯೇ ಜನಪದ ಕಾಲಾತೀತವಾಗಿ ಬದುಕುತ್ತದೆ.
ಸುಮಾರು ಐದನೂರು ಪುಟಗಳ ಇಂಥ ಒಂದು ಜನಪದ ಸಂಪಾದನೆಯನ್ನು ಮಾಡಿಕೊಡುವ ಮೂಲಕ ಡಾ.ತಿಮ್ಮೇಗೌಡರು ಸಂಸ್ಕೃತಿ ಮತು ಜೀವನ ಕಾಳಜಿಯನ್ನು ಮೆರೆದಿದ್ದಾರೆ. ನಾನಿಲ್ಲಿ ಅಲೆಗ್ಸಾಂಡರ್ ಪೋಪನನ್ನ ನೆನಪಿಸಿಕೊಳ್ಳಬೇಕು. ಆತ ಹೇಳಿದ್ದ, "ಸಾಹಿತಿಯಾದವನು ಹೊಸದೇನನ್ನು ಹೇಳಬೇಕಾದುದಿಲ್ಲ. ಇದುವರೆಗೂ ಹೇಳದ ಯಾವ ಹೊಸತು ಯಾವ ಲೇಖಕನಿಗೂ ಸಾಧ್ಯವಿಲ್ಲ. ಇರುವದನ್ನೇ ಸಂಗ್ರಹಿಸಿಕೊಟ್ಟರೂ ಅದು ಹೊಸತೇ." ಮಾತು ತಿಮ್ಮೇಗೌಡರ ಸಂಗ್ರಹದಲ್ಲಿ ಸಾಧ್ಯವಾಗಿದೆ. ಒಂದರ್ಥದಲ್ಲಿ ತಿಮ್ಮೇಗೌಡರು ಸಾಹಿತ್ಯದ ಕೆರೆಯ ನೀರನ್ನು ಕೆರೆಗೇ ಚಲ್ಲಿ ವರವ ಪಡೆದ ಧನ್ಯರು.

ನಮ್ಮೊಂದಿಗೆ ಇನ್ನೊಬ್ಬರಿದ್ದಾರೆ ಮೇಟಿಕೆರೆ ಹಿರಿಯಣ್ಣ. ಆಕಾರದಲ್ಲಿ ಮತ್ತು ಆಲೋಚನೆಯಲ್ಲಿ ಅವರು ಹಿರಿಯಣ್ಣನೇ. ಅರವತ್ತರ ಅಂಚನ್ನು ದಾಟಿ ಹಿರಿಯಣ್ಣ ತೊಡಗಿಸಿಕೊಂಡ ಲೋಕ ಮಾತ್ರ ಮಕ್ಕಳದ್ದು. ಇದು ತುಂಬಾ ಕಷ್ಟದ ಕೆಲಸ. ಮನುಷ್ಯ ಮಗುವಾಗುವುದು ಇನ್ನೂ ಪ್ರಯಾಸ. ಅವರ ಬ್ಯಾ ಬ್ಯಾ ಕುರಿಗಳೇ, ದೀವಳಿಗೆ, ಚಿಲಿಪಿಲಿ, ಬಿಸಿಬಿಸಿ ಕಜ್ಜಾಯ ಎಲ್ಲ ಮಕ್ಕಳ ಲೋಕವೇ. ಈಗ `ಹೂ ಹಕ್ಕಿ ಮಕ್ಕಳು' ಅದರ ಮುಂದುವರಿಕೆ.
ಕೃತಿಯ ಮುನ್ನುಡಿಯನ್ನು ಬರೆಯುತ್ತಾ ಡಾ.ಸಿದ್ದಲಿಂಗಯ್ಯ ಕನ್ನಡದಲ್ಲಿ ಶಿಶುಸಾಹಿತ್ಯದ ಶೈಶವಾವಸ್ಥೆಯ ಬಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಕನ್ನಡದಲ್ಲಿ ಶಿಶುಸಾಹಿತ್ಯಕ್ಕೆ ಅಂತಹ ಪುರಾತನತೆಯೇನು ಇಲ್ಲ. ಸುಮಾರು ೧೨೦೦ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳು ಒಂದನೂರು ವರ್ಷ ಹಳೆಯದಷ್ಟೆ. ಪ್ರೌಢಸಾಹಿತ್ಯದ ಒಂದು ಭಾಗವಾಗಿ ಮಕ್ಕಳಿಗಾಗಿ ನೀತಿಕತೆಗಳು ಬಂದಿರುವುದನ್ನು ಬಿಟ್ಟರೆ, ಇಪ್ಪತ್ತನೇ ಶತಮಾನದ ಆದಿಭಾಗಕ್ಕೆ ಮೊದಲು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಇಲ್ಲವೇ ಇಲ್ಲ ಎನ್ನಬಹುದು. ಪಂಜೆ, ಹೊಯ್ಸಳ, ರಾಜರತ್ನಂ ಮುಂತಾದವರು ದಕ್ಷಿಣಕರ್ನಾಟಕದ ಭಾಗದಲ್ಲಿ, ಅದೇ ರೀತಿ ಮುಂದೆ ಶಂ.ಗು.ಬಿರಾದಾರ, .ಕೆ.ರಾಮೇಶ್ವರ ಮುಂತಾದವರು ಗಣನೀಯ ಪ್ರಮಾಣದಲ್ಲಿ ಉತ್ತರಕರ್ನಾಟಕದಲ್ಲಿ ಶಿಶುಸಾಹಿತ್ಯವನ್ನು ರಚಿಸಿದವರು. ಇಂದು ವಿದ್ಯಾವಂತರ ಮಕ್ಕಳು ನಿಜವಾಗಿ ಕನ್ನಡದ ಪದ್ಯಗಳಿಂದ, ಸಂಸ್ಕೃತಿಯಿಂದ   ದೂರವಾಗುತ್ತಿದ್ದಾರೆ. ಈಗ್ಗೆ ೪೦-೫೦ ವರ್ಷಗಳ ಹಿಂದೆ ತಾಯಂದಿರು ಮಕ್ಕಳಿಗೆ ಹೇಳುತ್ತಿದ್ದ ಜಾನಪದ ಕತೆ, ಕವನಗಳು, ಸಂಪ್ರದಾಯದ ಹಾಡುಗಳು ಕಣ್ಮರೆಯಾಗಿವೆ. ಜಾಗಕ್ಕೆ ಇಂಗ್ಲೀಷ ರೈಮ್ಸ್ ಬಂದಿವೆ; ಜೊತೆಗೆ ಮಕ್ಕಳ ಇಂಗ್ಲೀಷ ಪದ್ಯಗಳ ಪುಸ್ತಕ, ಸಿ.ಡಿ ದೊರಕುವ ಪ್ರಮಾಣದಲ್ಲಿ ಕನ್ನಡದಲ್ಲಿ ದೊರಕುತ್ತಿಲ್ಲ."
ಸಿದ್ಧಲಿಂಗಯ್ಯನವರ ಹೇಳಿಕೆ ಒಪ್ಪುವಂಥದೇ. ಆದರೆಇಂತದರಲ್ಲೂ ಕಂಚಾಣಿ ಶರಣಪ್ಪ, .ಬಾ.ಚಿಕ್ಕಮಣ್ಣುರ, ಹುಲ್ಲೆಪ್ಪನವರಮಠ ಹಾಗೂ ಮೇಟಿಕೆರೆ ಹಿರಿಯಣ್ಣನವರಂಥ ಲೇಖಕರು ಮಕ್ಕಳ ಸಾಹಿತ್ಯಕ್ಕೆ ಗಂಭೀರವಾಗಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಬೇಕಾದುದೆ. ಶಿಶುಸಾಹಿತ್ಯ ಮನಸ್ಸಿಗೆ ಸಂಬಂಧ ಪಟ್ಟ ಪ್ರಶ್ನೆ. ಅದು ಎಲ್ಲರಿಗೂ ದಕ್ಕುವಂಥದಲ್ಲ. ಮಕ್ಕಳ ಸಾಹಿತ್ಯ ರಚನೆಗೆ ಬೇರೆಯದೇ ಮನಸ್ಥಿತಿ ಬೇಕಾಗುತ್ತದೆ.ಸರಳವಲ್ಲದ ಮನಸ್ಸು ಸಾಹಿತ್ಯವನ್ನು   ಸೃಜಿಸಲು  ಸಾಧ್ಯವಿಲ್ಲ. ಮೇಟಿಕೆರೆ ಹಿರಿಯಣ್ಣ ಸರಳತೆಯನ್ನು ಸಿದ್ಧಿಸಿಕೊಂಡ ಹಿರಿಯ ಮನುಷ್ಯ. ಸಂಕಲನದ ಮೂರು ನಾಮದ ದಾಸಯ್ಯ, ಅಮ್ಮನ ಹೂ ತೋಟ, ನಿಸರ್ಗ, ಮಗು ಮತ್ತು ಮೋಡ ವಿತೆಗಳು ಅವುಗಳ ಸರಳ ಭಾಷೆ, ವಿಚಾರ ಮತ್ತು ಪದಗಳ ಲಾಲಿತ್ಯದಿಂದಾಗಿ ನಿಮ್ಮನ್ನು ಕಾಡದೆ ಇರುವುದಿಲ್ಲ.
ಒಟ್ಟಾರೆ ಹಾಸನ ಜಿಲ್ಲೆಯ ಇಬ್ಬರು ಮಹತ್ವದ ಜಾನಪದ ಚಿಂತಕರು, ಸಂಗ್ರಹಕಾರರು ವಿಷ್ಯದ ಕಾಳಜಿಗಳೊಂದಿಗೆ ಸಾಹಿತ್ಯ ಸೃಷ್ಟಿಯಲ್ಲಿ  ತೊಡಗಿಕೊಂಡು ವರ್ತಮಾನದ ಅನೇಕ ವಿಚಾರಗಳಿಗೆ ಮುಖಾಮುಖಿಯಾಗುತ್ತಿರುವುದು ಜಿಲ್ಲೆಯ ಅಳಿದುಳಿದ ಸೃಜನಶೀಲ ಆರೋಗ್ಯತೆಗೆ ಸಾಕ್ಷಿ ಎಂದು ಹೇಳುತ್ತಾ ಎರಡು ಮಹತ್ವದ ಕೃತಿಗಳನ್ನು ನೀಡಿದ ಇಬ್ಬರು ಹಿರಿಯರನ್ನು ಹುತ್ಪೂರ್ವಕವಾಗಿ ಅಭಿನಂದಿಸುತ್ತೇನೆ.