Total Pageviews

Tuesday, December 31, 2019

ಹೊರಟುಬಿಡಬೇಕಿದೆ ಇನ್ನು . . . . .


ಕಡಲಾಚೆಯ ಮಡಿಲೊ                             
ಉರಿದುಂಬಿದ ಕಾಡ ಒಡಲೊ
ಬಿತ್ತಿ, ಬುತ್ತಿಯಾದ ನೆಲವೊ
ನೆತ್ತಿಗಾಸರೆ ಎಂಬ ನೆರಳೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . .  .
 
ಮರಭೂಮಿಯೊಳು ಮೃತ್ಯುವೊ
ಬಾಗಿಲೋರೆಯಾಗಿಟ್ಟ ಬದುಕೊ
ಕನಸು ಕಣ್ಣಿಗೆ ಒರಸಿ
ಅಗ್ಗಿ ಹಾಯಲು ಕರೆವ ಕಾಳ ಕತ್ತಲೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . .
 
ಅಭಯವೊ ಅವಘಡವೊ
ವಿಜಯವೊ ವಿನಾಶವೊ
ಮರುಹುಟ್ಟೊ ಮಹಾಮನೆಯೊ
ಅಲ್ಲಿರುವುದು ಬರೀ ಗುಹೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . .  .  . . . . . . 
 
ನಟ್ಟಿರುಳ ನಿರಾಸೆಯೊ
ದಟ್ಟಿರುಳ ದುರಾಸೆಯೊ
ಮುನ್ನಡೆಸಿದ್ದು ದೈವವೊ
ಹಿಂದೆ ನಡೆಸುದುದೇನು ದೇವರೊ
ಇನ್ನಿಡುವ ಅಡಿಯತ್ತ
ಹುತ್ತ ಎಂಥದೋ ನಿನ್ನೊಳ ಚಿತ್ತ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . . . .
 
ಹಿಂದೆ ರಮಿಸಿದಿರೇಕೊ
ಇಂದು ನಮಿಸುವರೇಕೊ
ಮುಂದೆ ಏನುಂಟೋ ಮಾನಾಪಮಾನ
ಇದ್ದ ಮನೆಯೊಂದು
ಕದ್ದ ಎದೆಯೊಂದು
ಎದ್ದು ನಿಲ್ಲಿಸಿದ್ದೆಲ್ಲಿ, ಯಾರ ಮುಂದೆ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . 
 
ಹೆರಿಗೆ ಇಲ್ಲದ ಹುಟ್ಟು ನಾನು
ನನಗ್ಯಾರು ತಂದೆ-ತಾಯಿ?
ಬೆರಗೆ ನಾನು, ಕ್ಷಣದ ಅರಗೆ?
ಒರೆಗೆ ಹಚ್ಚಲು ನಾನು
ಹೊರಟೇ ಬಿಡಬೇಕು
ಧರೆಗೆ ದಕ್ಕಲು ಇನ್ನು ಮರೆಯಾಗಲೇಬೇಕು . . . . . . . .






ಇವರೆಲ್ಲರನ್ನೂ ನನ್ನ ಸಾಹಿತ್ಯ ಬದುಕಿನ ಒಂದಿಲ್ಲಾ ಒಂದು ಹಂತದಲ್ಲಿ ಸಂಧಿಸಿದ್ದೆ, ಈ ವ್ಯಕ್ತಿ - ಶಕ್ತಿಗಳ ಅಪರೂಪದ ಬೆಳಕಿನಲ್ಲಿ ನನ್ನ ಬಾಳಿನ ಮುಂದಿನ ದಿಕ್ಕು - ದೆಸೆಗಳನ್ನು ರೂಪಿಸಿಕೊಂಡಿದ್ದೆ, ಭೂತಕಾಲಕ್ಕೆ ಜಾರುತ್ತಿರುವ 2019 ಇವರನ್ನು ನಮ್ಮಿಂದ ಭೌತಿಕವಾಗಿ ಅಳಸಿ ಹಾಕಿದೆ. ಆದರೆ ಭಾವಲೋಕದಲ್ಲಿ ನೆನಪುಗಳನ್ನು ಇನ್ನಷ್ಟು ಆಳಗೊಳಿಸಿದೆ. ಸಾವಿನೊಂದಿಗೆ ತಕರಾರವಿಲ್ಲ, ಯಾಕೆಂದರೆ ಸಾವಿಗೆ ಕಿವಿ ಇಲ್ಲ. ಇವರ ಸಾಧನೆಯ ಬೆಳಕು ಮುನ್ನಡೆಸಲಿ ನಮ್ಮನ್ನು. 

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

Thursday, December 19, 2019

ಮಣ್ಣು ಸುರಿಯಬಹುದೆ ಮಣ್ಣಿಗೆ !?


ಇನ್ನೆಷ್ಟು ಉಳಿದಿತ್ತು ಒಡಲಿನಲ್ಲಿ?
ಎಣ್ಣೆ ತೀರಿದ ಹಣತೆ ಅದು
ಮಣ್ಣು ಸುರಿಯಬಹುದೆ
ಮತ್ತೆ ತಣ್ಣಗಾಗಿಸಲು

ಕಣ್ಣ ಕುದಿ ಇದ್ದಿಲಾದಾಗ
ಇನ್ನು ನಿದ್ದೆಯೇ ಕೊನೆಯ ನುಡಿಯಾದಾಗ
ಮಣ್ಣು ಸುರಿಯಬಹುದೆ ಪಣತಿಯೆ?
ಮತ್ತೆ ನಿನ್ನ ತಣ್ಣಗಾಗಿಸಲು
ಸಣ್ಣ ಉಸಿರನು ಕಾಯ್ದ
ದೊಡ್ಡ ಆಲಯ ನೀನು
ಕಣ್ಣ ಬೆಳಕನು ಕಾಯ್ದ
ಹಿರಿಯ ಒಡಲು

ಕನಸುಗಳ ಗಗನ
ಬೀಜ ರೂಪಿ ಮಗನ
ವೇದ-ವೇದಾಂತ
ಕರ್ಮ-ಧರ್ಮಾದಿಗಳ
ನೆನಪನ್ನ, ನಗೆಯನ್ನ
ಸೇರಬೇಕಾದ ನೆಲೆಯನ್ನ
ಕೋಟಿ ಕಡಲುಗಳ ನೋವನ್ನ
ಕಾಪಿಟ್ಟ ಒಡಲೇ
ಕಪ್ಪಿಟ್ಟಾಗ ಈಗ,

ಸಣ್ಣಾಗಿ ಕರಗಿ
ಮಣ್ಣಾಗಲು ಹಂಬಲಿಸುವಾಗ
ಮಣ್ಣ ಸುರಿಯಬಹುದೆ?
ಮಣ್ಣನ್ನೆ ಮತ್ತೆ ಮಣ್ಣಾಗಿಸಲು

Sunday, December 1, 2019

ಸಾವು ಎಂಬ ಸವಕಲು ಸತ್ಯ


ವರ್ಷಾಂತ್ಯ ಬಂದರೆ ಚಿಂತೆಯಾಗುತ್ತದೆ. ಅದರಲ್ಲೂ ಡಿಸೆಂಬರ್ ಕೊನೆ ನನ್ನನ್ನು ಭಯ-ದುಗುಡಗಳ ಮುಳ್ಳಾವಿಗೆಯ ಮೇಲೆ ನಿಲ್ಲಿಸಿಬಿಡುತ್ತದೆ. ಛಳಿಗಾಲವನ್ನು, ವಿಶೇಷತಃ ಅದು ಸೃಷ್ಟಿಸುವ ಬಿಸುಪಿನ ಭ್ರಮೆಗಾಗಿ ತುಂಬಾ ಪ್ರೀತಿಸುವ ನಾನು ಅದರೊಳಗೆ ಜರುಗುವ ತಣ್ಣನೆಯ ಸಾವುಗಳಿಗಾಗಿ ಬಹಳ ಶಪಿಸಿದ್ದೇನೆ. ಅಷ್ಟೊಂದು ಅಪರೂಪದವರನ್ನು ನನ್ನಿಂದ ಇನ್ನಿಲ್ಲದಂತೆ ಕಸಿದುಕೊಂಡ ತಿಂಗಳಿದು. ಆದರೆ ವರ್ಷದ ವರಸೆ ಸ್ವಲ್ಪ ಭಿನ್ನವಾಗಿದೆ. ಸಾರಸ್ವತ ಲೋಕದಲ್ಲಿ ಸಾವಿನ ಸರಣಿ ಒಂದು ತಿಂಗಳ ಮುಂಚೆಯೇ ಪ್ರಾರಂಭವಾಗಿದೆ. ಇದರ ಮೊದಲ ಪುಟ ನಮ್ಮ ಪ್ರೀತಿಯ ಚನ್ನಣ್ಣ ವಾಲಿಕಾರ.
ಒಂದು ಬಣ್ಣ (ಕೆಂಪು ಬಣ್ಣದ ಅಂಗಿ ಬಿಟ್ಟು ಮತ್ತ್ಯಾವುದನ್ನೂ ತೊಡಲಿಲ್ಲ), ಒಂದು ಬದ್ಧತೆಯ, ಬದುಕೆಲ್ಲವೂ ಬುದ್ಧನನ್ನೆ ಹಲುಬಿದ ಪ್ರೀತಿಯ ಜೀವ ಚನ್ನಣ್ಣ. ಗುಲ್ಬರ್ಗ, ಹಂಪಿ, ಮೈಸೂರು ದಸರಾ ಕವಿಗೋಷ್ಠಿ ಎಂದು ವಿನಾಕಾರಣ ಸಂಧಿಸಿದವರು ನಾವಿಬ್ಬರು. ನಮ್ಮ ಸ್ನೇಹದ ಅವಧಿ ಸಣ್ಣದು. ಆದರೆ ಆಲೋಚನೆಗಳ ಪ್ರವಾಸ ಅನಂತದ ನೆಲೆಯದ್ದು. ಚನ್ನಣ್ಣ ಇಂದು ನಮ್ಮೊಂದಿಗಿಲ್ಲ ಎಂಬುದೊಂದು ಸವಕಲು ಸತ್ಯ. ಯಾಕೆಂದರೆ, ಅವರೊಂದಿಗಿನ ನನ್ನ ಮೊದಲ ಭೆಟ್ಟಿಯ ಸ್ಮರಣೆಗಳು, ನಾನು ಇಡೀ ಸಂದರ್ಭವನ್ನು ಮತ್ತೊಮ್ಮೆ ನಿಮ್ಮೊಂದಿಗೆ ಮೆಲುಕು ಹಾಕುವಂತೆ ಮಾಡಿವೆ. 
ಹೀಗೆ ಶುರುವಾಗುತ್ತದೆ ಚನ್ನಣ್ಣನವರ ಕುರಿತು ಬರೆದ ನನ್ನ ಹಿಂದಿನ ಲೇಖನ:
ಕೆಲವು ದಿನಗಳ ಹಿಂದೆಯಷ್ಟೇ ಓರಿಸ್ಸಾದವರೆಗಿನ ಅರವತ್ತಾರು ಗಂಟೆಗಳ ಪ್ರವಾಸವನ್ನು ಮುಗಿಸಿಕೊಂಡು ಬಂದಿದ್ದ ನನಗೆ ಸಧ್ಯದಲ್ಲಿಯೇ ಮತ್ತೊಂದು ದೀರ್ಘ ಪ್ರವಾಸ ಮಾಡುವ ಉತ್ಸಾಹವೂ ಇರಲಿಲ್ಲ, ಸಮಯವೂ ಇರಲಿಲ್ಲ. ಇಂತಹದರಲ್ಲಿ ಗೆಳೆಯ ವಿಜಯಕುಮಾರ ದೊಡ್ಡ ಗಾಣೀಗೇರ ತನ್ನ ಕಾಲೇಜಾದ ‘People’s Education Trusts Dr. Ambedkar college of Atrs and Commerce’ ಅಂಬೇಡ್ಕರ್ ವಿಚಾರ ವೇದಿಕೆಯ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನೆಗಾಗಿ ಬರಬೇಕೆಂದು ಪ್ರೀತಿಯ ಹಠ ಹಿಡಿದ. ಹೋಗಲೇಬೇಕಾಯಿತು, ಹಾಗೆ ನೋಡಿದರೆ ನನ್ನನ್ನು ಅನವರತವೂ ಕಾಡುವ ಅನೇಕ ವ್ಯಕ್ತಿ ಮತ್ತು ವಿಚಾರಗಳು ಗುಲ್ಬರ್ಗಾ ಎನ್ನುವ ಬಿಸಿಲು ನಾಡಿನೊಂದಿಗೆ ಬೆಸೆದುಕೊಂಡಿವೆ.
ನಾಲ್ಕಾರನ್ನು ಹೆಸರಿಸಬಹುದೇನೋ. ಹದಿನೈದು ವರ್ಷಗಳಷ್ಟು ಹಿಂದಿನ ದೀರ್ಘ ಕಾಲದ ಗೆಳೆಯ ವಿಜಯ ದೊಡ್ಡ ಗಾಣಿಗೇರ್, ಸಂಸಾರವಿದ್ದೂ ಅದಕ್ಕೆ ವಿಮುಖರಾಗಿ ದಿಢೀರ್ ಸನ್ಯಾಸ ಘೋಷಿಸಿದ ಮಾತೃ ಪ್ರೀತಿಯ ಜೀವ ಶ್ರೀ ಬಸವಲಿಂಗಪ್ಪ ಹೂಗಾರ್, ಇತ್ತೀಚಿಗಷ್ಟೆ ಬಂದು ಕೇಂದ್ರಿಯ ವಿಶ್ವವಿದ್ಯಾಲಯ ಸೇರಿಕೊಂಡ ಗೆಳೆಯ ಬಸವರಾಜ ಡೋಣುರ, ಹಳೆಯ ಪತ್ರ ಮಿತ್ರ ಜಾನ್ಬೋ, ನವ ಕರ್ನಾಟಕ ಪ್ರಕಾಶನದ ಸೊನ್ನದ, ಪ್ರೊ. ಪಾಟೀಲ, ಇವರೆಲ್ಲ ಗುಲ್ಬರ್ಗಾ ಎಂಬ ಬೋಧಿವೃಕ್ಷಕ್ಕೆ ಹುಟ್ಟಿಕೊಂಡ ನೆನಪಿನ ಟೊಂಗೆಗಳು. ಎಲ್ಲಕ್ಕೂ ಮಿಗಿಲಾಗಿ ನಮಗೆಲ್ಲಾ ಬಿಸಿಲೇ ಒಂದು ಬೆಸುಗೆ. ಅದು ಮಲೆನಾಡಿನ ಬಿಸಿಲಿನಂತೆ ಒಳಗಿನಿಂದ ಬಾಧಿಸುವುದಿಲ್ಲ, ಹೊರಹೊರಗೆ ಉರಿದು, ಒಳಗಿನರಿವಿನ ಪರಿಯನ್ನು ವಿಸ್ತರಿಸುವ ಬಿಸಿಲಿಗೆ ಒಂದು ವಿಚಿತ್ರ ಶಕ್ತಿ ಇದೆ. ಅಂತೆಯೇ ಕನ್ನಡ ಕಾವ್ಯದ ಕೆನೆ ಎನ್ನಿಸಿಕೊಂಡ ವಚನ, ಅನುಭಾವ ಮತ್ತು ಸೂಫಿ ಸಾಹಿತ್ಯ ಇಲ್ಲಿಯೇ ಹುಟ್ಟಿಕೊಂಡಿತು. ರಾಜಕೀಯದ ಅನೇಕ ವಿಪ್ಲವಗಳನ್ನು ಕಂಡ ನೆಲ ಇಂದಿಗೂ ಅನೇಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಅಂತಹವುಗಳಲ್ಲಿ ಎರಡು ಮಹತ್ವದ ಇತ್ತೀಚಿನ ದಾಖಲೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಒಂದು, ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ನಿರ್ಮಾಣವಾದ ಬೌದ್ಧವಿಹಾರ, ಮತ್ತೊಂದು ಚನ್ನಣ್ಣ ವಾಲಿಕಾರರಿಂದ ರಚನೆಯಾದ ``ವ್ಯೋಮಾವ್ಯೋಮ''.
ಎರಡೂ ಬುದ್ಧನನ್ನು ಕುರಿತಾದವುಗಳೇ. ಒಂದು ಸ್ಥಾವರ, ಮತ್ತೊಂದು ಜಂಗಮ. ಭಾರತದಿಂದ ಬೌದ್ಧ ಧರ್ಮದ 2200 ವರ್ಷಗಳ ದೀರ್ಘ ಕಾಲದ ಅವಸಾನದ ನಂತರ ರಂಗೂನಿನಿಂದ ಬುದ್ಧನ ವಿಗ್ರಹವನ್ನು ತಂದು ಭಾರತದ ಪುಣೆಯಲ್ಲಿ ಸ್ಥಾಪಿಸುವುದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬೌದ್ಧ ಧರ್ಮವನ್ನು  ಪುನರುಜ್ಜೀವನಗೊಳಿಸಿದರು. ಈಗ ಸುಮಾರು ಎಪ್ಪತ್ತು ವರ್ಷಗಳ ನಂತರ ಅದೇ ಕಾರ್ಯ ಎರಡು ಭಿನ್ನ ಮಾರ್ಗಗಳ ಮೂಲಕ ಗುಲ್ಬರ್ಗಾದಲ್ಲಿ ಪುನರಾವರ್ತನೆಯಾಗಿದೆ. ಪುಷ್ಯಮಿತ್ರಶುಂಗನ ಕಾಲದಲ್ಲಿ ಅನೇಕ ಬೌದ್ಧ ಭಿಕ್ಕುಗಳ ಕೊಲೆಯಾಗಿ ಬೌದ್ಧ ವಿಹಾರಗಳನ್ನು ನಾಶ ಪಡಿಸಿದ್ದಕ್ಕೆ ನಿಟ್ಟುಸಿರಿಟ್ಟಿದ್ದ ಭಾರತ ಈಗ ಗುಲ್ಬರ್ಗಾದಲ್ಲೊಂದು ಬೌದ್ಧವಿಹಾರವನ್ನು ತನ್ನುಡಿಗೆ ಹಾಕಿಕೊಳ್ಳುವ ಮೂಲಕ ನೆಮ್ಮದಿ ಪಡುವಂತಾಗಿರಬಹುದು. ಒಂದು ಕಾಲಕ್ಕೆ ಗುಲ್ಬರ್ಗಾ ಎಂದರೆ ಬಂದೇನವಾಜರ ದರ್ಗಾ ಮತ್ತು ಶರಣಬಸಪ್ಪನ ಮಠ ಎನ್ನಲಾಗುತ್ತಿದ್ದ ಊರಿಗೊಂದು ಮೂರನೆಯ ದಾರಿ ಹುಟ್ಟಿಕೊಂಡಿದೆ. ಈಗ ಗುಲ್ಬರ್ಗಾ ಎಂದರೆ ಬೌದ್ಧವಿಹಾರ.
ಇದು ಕಾಟಾಚಾರಕ್ಕೆ ಕಟ್ಟಿದ ಕಟ್ಟಡವಲ್ಲ. ಸರ್ಕಾರದ ಯಾವ ಧನಸಹಾಯವಿಲ್ಲದೆ ಜಗತ್ತಿನುದ್ದಕ್ಕೂ ಹಬ್ಬಿಕೊಂಡ ಬೌದ್ಧ ಅನುಯಾಯಿಗಳ ಸಹಾಯ ಪಡೆದು, ಪ್ರಪಂಚವೇ ಬೆರಗಾಗುವಂತಹ ಕಟ್ಟಡ ಇಲ್ಲಿ ತಲೆ ಎತ್ತಿದೆ. ನಿಮಗೊಂದು ಕ್ಷಣ ಸಾಂಚಿಗೆ ಹೋಗಿ ಬಂದ ಖುಷಿಯಾಗುತ್ತದೆ. ದಿ. 17-3-2012 ದಿನ ನನ್ನ ಪಾಲಿಗಂತೂ ಇನ್ನೂ ವಿಶೇಷ. ಯಾಕೆಂದರೆ ಪಾಲಿ ಭಾಷೆಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಹತ್ತು ಕೋಟಿ ರೂಪಾಯಿಗಳನ್ನು ಗುಲ್ಬರ್ಗಾದ ಬೌದ್ಧವಿಹಾರಕ್ಕೆ ಬಿಡುಗಡೆ ಮಾಡಿತು. ಇಂಥಹ ಒಂದು ಅರ್ಥಪೂರ್ಣ ನೆನಪು ಮೈ ಎತ್ತಿ ನಿಲ್ಲಲು ಕಾರಣರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ಒಂದು ಕ್ಷಣ ಹೃತ್ಪೂರ್ವಕವಾಗಿ ಅಭಿನಂದಿಸಲೇಬೇಕಲ್ಲವೇ?
ಇನ್ನೊಂದು ಮಹತ್ವದ ಕಾರ್ಯ, ಬುದ್ಧನನ್ನು ಕುರಿತಾಗಿಯೇ ಇಲ್ಲಿ ನಡೆಯಿತು ಎಂದು ಹೇಳಿದೆ. ಇದು ನನ್ನ ಕಾಲಮಾನದ ಅಚ್ಚರಿ ಎಂದು ನಾನಂತೂ ಕುಣಿದಾಡಿದ್ದೇನೆ. ಬಂದೇನವಾಜರ ದರ್ಗಾದಿಂದ ಬೌದ್ಧವಿಹಾರಕ್ಕೆ ಹೋಗುವ ದಾರಿಯಲ್ಲಿ, ಖರ್ಗೆಯವರ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಒಂದು ಸಾಧಾರಣ ಕಟ್ಟಡದಲ್ಲಿ ಅಸಾಧಾರಣ ಪ್ರತಿಭೆಯ ಜೀವವೊಂದರ ಭೆಟ್ಟಿಯಾಗುತ್ತದೆ. ಅವರೇ ನಮ್ಮ ಚನ್ನಣ್ಣ ವಾಲಿಕಾರ ಬಹಳ ಚಿಕ್ಕಂದಿನಿಂದ ಬಸ್ಟ್ಯಾಂಡ್ ಪಕ್ಕದ್ದಲ್ಲಿ ಕದ್ದು ಮುಚ್ಚಿ ಮಾರಾಟವಾಗುತ್ತಿದ್ದ ` ರಸಿಕ', ಲಾವಣ್ಯ'ಗಳಂಥಹ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಇವರ ಪೋಲಿ ಪೋಲಿ ಕವಿತೆಗಳನ್ನು ಓದಿದ್ದ ನನಗೆ ಚನ್ನಣ್ಣ ಕರ್ನಾಟಕದ ಕಾರ್ಮಿಕ ಚಳುವಳಿ, ಕಾದಂಬರಿ, ಕಾವ್ಯ, ಜನಪರ ಹೋರಾಟ, ಮಹಾಕಾವ್ಯದ ರಚನೆ, ಸಂಶೋಧನೆ, ಕಡ್ಡಿ ಮುರಿದಂತಹ ಮಾತುಗಳಿಂದಲೂ ಕಾಡಿದ್ದಾರೆ. ಇಂತಹ ದೈತ್ಯ ಪ್ರತಿಭೆಯನ್ನು ಕಣ್ಣಾರೆ ನೋಡಿ ಬರಬೇಕು ಎಂಬ ನನ್ನ ಆಶೆ ಇಂದು ಫಲಿಸಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಾಂತ ಕುಸನೂರರನ್ನು ಕಾಣಲು ನಾನು ಇತ್ತೀಚಿಗೆ ಬೆಳಗಾವಿಗೆ ಹೋದಾಗ, ಬಳಲುತ್ತ ಮೇಲೆದ್ದ ಕುಸನೂರರು ನನ್ನ ಕೈಗೊಂದು ನೆಗುವಲಾರದ ಪುಸ್ತಕವನ್ನಿಟ್ಟರು. ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೂಳೆ ಮುರಿಯುವುದು ಗ್ಯಾರಂಟಿ. ಯಾವುದೊ ಅಭಿನಂದನಾ ಗ್ರಂಥವೋ, ವಿಶ್ವಕೋಶವೋ, ಇಲ್ಲಾ ಎನಸೈಕ್ಲೊಪಿಡಿಯಾ ಇರಬಹುದೆಂದು ಉಪೇಕ್ಷೆಯಿಂದಲೇ ಎತ್ತಿಕೊಂಡೆ. ಆದರೆ ಸನ್ನಿವೇಶವೆ ಬೇರೆ ಇತ್ತು. ಕೈಗಿಡುತ್ತಾ ಕುಸನೂರರು ಹೇಳಿದರು, “ನಮ್ಮ ಚೆನ್ನಣ್ಣ ಕಳ್ಸ್ಯಾನ, ಇದು ಮಹಾಕಾವ್ಯಂತ. ಪುಸ್ತಕದೊಳಗ ನಾನೂ ಒಂದ ಪಾತ್ರ ಆಗಿ ಅದೀನಂತ. ಒಂದ ಸಾವಿರ ಪುಟ ಅದ ರಾಜಶೇಖರ. ವಾಕ್ಯ ಮೊದಲನೇ ಪುಟದಾಗ ಶುರು ಮಾಡ್ಯಾನ, ಸಾವಿರನೇ ಪುಟಕ್ಕೆ ಬಂದರೂ ಫುಲ್ಸ್ಟಾಪೇ ಹಾಕಿಲ್ಲ. ಮಧ್ಯದೊಳಗ ಎಲ್ಲೂ ಒಂದು ಸಣ್ಣ ಕಾಮಾನೂ ಇಲ್ಲ, ಪ್ಯಾರಾಗ್ರಾಫಂತೂ ಇಲ್ಲೇ ಇಲ್ಲ. ಇದರಾಗ ನನ್ನ ಹುಡುಕು ಅಂದ್ರ ಎಲ್ಲಿ ಹುಡುಕ್ಕೋಳ್ಳಿ? ಪುಸ್ತಕ ನೋಡಿನೇ ನನ್ನ ಹೆಣಾ ಬಿದ್ದ ಹೋಗೆದ. ಮತ್ತ ಮ್ಯಾಲ ದಿನಾ ಫೋನ್ಮಾಡಿ ಓದಿದೇನ? ಅಂತ ಜೀವಾಂ ತಿಂತಾನ, ಬಾಳ ವಿಚಿತ್ರ ಮನಷ್ಯಾ ಅದಾನ. ಭಯಂಕರ ಶಕ್ತಿ. ಇಷ್ಟ ವರ್ಷ ಕೂಡಿ ಅದೀನಿ, ಅವಾಂ ಏನಂತ ನನಗಂತೂ ತಿಳಿದಿಲ್ಲ. ಅವನಿಗರ ತಿಳದದೋ ಇಲ್ಲೋ ಅವಂಗ ಗೊತ್ತು.'' ಎಂದು ಪುಸ್ತಕ ಕೈಗಿಟ್ಟು ಕುಸನೂರರು ಹಾಸಿಗೆಗೊರಗಿದರು. ಹರಟೆ ಒಂದಿಷ್ಟು ಕಾಲ ಗುಲ್ಬರ್ಗಾದ ಅವರ ಹಳೆಯ ನೆನಪುಗಳನ್ನು ಒತ್ತರಿಸಿರಬೇಕು, ನಾನಂತೂ ಚನ್ನಣ್ಣ ವಾಲಿಕಾರರ `ವ್ಯೋಮಾವ್ಯೋಮ'ವನ್ನು ಹಾಗೊಮ್ಮೆ- ಹೀಗೊಮ್ಮೆ, ಮೇಲೊಮ್ಮೆ-ಕೆಳಗೊಮ್ಮೆ ಎತ್ತಾಡಿನೋಡಿಮೊದಲ ಪುಟವನ್ನು ಓದುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಿದೆ. ಓದಬಹುದು ಎನ್ನಿಸಿತು. ಆದರೆ ಇದನ್ನು ಓದುವುದಕ್ಕಿಂತ ಮುಂಚೆ  ಚಣ್ಣರನ್ನು ಮುಖತಃ ಭೇಟ್ಟಿಯಾಗಬೇಕೆನಿಸಿತ್ತು.
ಹಿಂದೆ ಬಹಳಷ್ಟು ಬಾರಿ ಹೀಗೆ ಅನಿಸಿದವುಗಳಲ್ಲಿ ಕೆಲವು ಕೈಗೂಡಲಿಲ್ಲ. ಕುವೆಂಪು ಅವರನ್ನ ಕಾಣಬೇಕು, ತೇಜಸ್ವಿಯವರೊಂದಿಗೆ ಕಾಲ ಕಳೆಯಬೇಕು ಎಂಬ ನನ್ನ ಬಯಕೆಗಳು ಬಾಯಿಗೆ ಬರುತ್ತಲೆ ಹುಸಿಯಾಗಿ ಹೋಗಿದ್ದವು. ಆದರೆ ಬಾರಿ ಹಾಗಾಗಲಿಲ್ಲ. ಅಂಬೇಡ್ಕರನ್ನ ಕುರಿತು ಮಾತನಾಡಲು ಬಂದ ಸಂದರ್ಭದಲ್ಲಿಯೆ ಚನ್ನಣ್ಣರನ್ನು ಹಿಡಿದುಬಿಟ್ಟೆ. ನಾನು ಅವರ ಮನೆಗೆ ಹೋದಾಗ ಮಧ್ಯಾನ್ಹದ ಎರಡು ಗಂಟೆಯಾಗಿರಬಹುದು. ಮೇಲಿನ ಕೊಣೆಯಲ್ಲಿ ಒಳ್ಳೆ ಎಸಿ ರೂಮ್ನಲ್ಲಿ ಕುಳಿತು ಬರಹ ಮಾಡುವವರಂತೆ ಸಹಾಯಕನೊಬ್ಬನನ್ನ ಇಟ್ಟುಕೊಂಡು ಚನ್ನಣ್ಣ ಧ್ಯಾನಸ್ಥರಾಗಿದ್ದರು. ಸಂಸಾರ ಕೆಳಗಿಟ್ಟು ಮೇಲಿನ ಕೋಣೆಯಲ್ಲಿ ಬರಹದಲ್ಲಿ ತೊಡಗಿಕೊಂಡಿದ್ದ ಚನ್ನಣ್ಣರನ್ನು ನೋಡಿ ನಾನೊಂದು ಕ್ಷಣ ಅಚ್ಚರಿಗೊಂಡೆ. ಕಾರಣ ಇಷ್ಟೆ ಅನೇಕ ಬಾರಿ ಕುಸನೂರರನ್ನು ಇದೇ ತನ್ಮಯತೆಯ ಹಂತದಲ್ಲಿ ನಾನು ನೋಡಿದ್ದೆ. ಬಿಸಿಲು ನಾಡಿನ ಪ್ರತಿಭೆಗಳೇ ಹೀಗೆ. ಒಮ್ಮೆ ಒಳಗೆ ಇಳಿದರೆ ಮುಗಿಯಿತು, ಲೋಕ ಅವರನ್ನು ಬಾಧಿಸುವದಿಲ್ಲ. ಚನ್ನಣ್ಣರ ಮನೆಗೆ ಹೋಗುವಾಗ ಅವರ ಖಾಸಾ ಶಿಷ್ಯರಾದ ಬಸವಲಿಂಗಪ್ಪ ಹೂಗಾರರನ್ನು ಕರೆದುಕೊಂಡು ಹೋಗಿದ್ದೆ. ಹೀಗಾಗಿ ಸ್ನೇಹ ಇನ್ನೂ ಸಮೀಪವಾಯಿತು. ಬನಿಯನ್ ತೊಟ್ಟು ಬಾಗಿಲವರೆಗೂ ಬಂದು ಆತ್ಮಿಯವಾಗಿ ತಮ್ಮ ಪುಸ್ತಕ ಲೋಕದೊಳಗೆ ನಮ್ಮನ್ನು ಕರೆದೊಯ್ದ ಚನ್ನಣ್ಣ ಮಾತಿಗಿಳಿದರು. ಇವರು ಯಾವ ಪೀಠಿಗಳು ಅಲ್ಲದಿರುವದರಿಂದ ಪ್ರೇಮ ಮತ್ತು ಸಂಘರ್ಷ ಇಲ್ಲಿ ಸಾಧ್ಯ ಎನ್ನುವ ಭರವಸೆ ನನಗೂ ಸಾಧ್ಯವಾಯಿತು. ಈಗ ನಮ್ಮ ಸವಾಲ್ ಜವಾಬಿನ ಸಿಲ್ಸಿಲಾ-
ರಾಗಂ : ವ್ಯೋಮಾವ್ಯೋಮದ ಹಿನ್ನಲೆ ಏನು ಗುರುಗಳೇ?
.ವಾ : ಹಿಂಗ, ಒಮ್ಮಿ ಇದ್ದಕ್ಕಿದ್ದಂಗ ನಮ್ಮ ದೇವೆಂದ್ರಕುಮಾರ ಹಕಾರಿ ಹೇಳಿದ ಒಂದು ಮಾತು ನೆನಪಾತು. ಅವ್ರು ಅಂದಿದ್ರು ಮಾನ್ಯಖೇಡ ಎನ್ನುವ ನಮ್ಮ ಪ್ರದೇಶದೊಳಗ ಹೇಳಿಕೊಳ್ಳುವಂಥ ಒಂದು ಮಹಾನ್ ರಚನೆ ಯಾಕ ಆಗಲಿಲ್ಲ? ಎನ್ ಸಮಸ್ಯೆ ಅದ? ನಮ್ಮೊಳಗ ಶಕ್ತಿ ಇಲ್ಲೆನು? ಇದೊಂದ ಮಾತು, ತಲ್ಯಾಗ ಯಾವಾಗಲೂ ಹುಳಾ ಸುತ್ತದಂಗ ಸುತ್ತಾಡಲಾಕ ಸುರುಮಾಡತು. ಆಗ ನಾನು ದಿನಾಲೂ ಗುಲ್ಬರ್ಗಾದಿಂದ ರೈಚೂರಿಗೆ ಹೋಗಿ ಬರುತ್ತಿದ್ದೆ. ಟ್ರೆನ್ ಹತ್ತಿ ಕಣ್ಮುಚ್ಚಿದರ ಸಾಕು ಇದ ಪ್ರಶ್ನೆ ಕಾಡತಿತ್ತು. ಏನಾದರು ಆಗಲಿ ಕೈ ಹಾಕೇ ಬಿಡೂನು ಅಂತ ಬುದ್ಧನನ್ನು ತೆಕ್ಕಿ ಹೊಡೆದೆ, ಅಷ್ಟ. ವ್ಯೋಮಾವ್ಯೋಮ ಸಿದ್ಧ ಆಯ್ತು.
ರಾಗಂ : ಸರಿ, ರೀತಿ ಅಲ್ಪ, ಅರ್ಧ, ಪೂರ್ಣ ವಿರಾಮಗಳಿಲ್ಲದ ಸಾವಿರ ಪುಟಗಳ ಬರಹಕ್ಕೆ ಸ್ಪೂರ್ತಿ ಏನು?
.ವಾ : ಇಲ್ಲ ರಾಜಶೇಖರ, ದೇಶದ ಸಾಹಿತ್ಯ ರಚನೆಯಾಗಬೇಕಾದ ಮೂಲ ಶೈಲಿಯೊಳಗ„„„ ನಾನು ಬರಹ ಮಾಡೀನಿ. ವಾಲ್ಮಿಕಿ ವ್ಯಾಸರ ಬರಹದೊಳಗೆಲ್ಲೂ ಪಂಕ್ಚುವೇಶನ್ಸಗಳ ಪ್ರಶ್ನೆನೇ ಇಲ್ಲ. ಪಂಕ್ಚುವೇಶನ್ಸ ಅನ್ನೊದು ಪಶ್ಚಿಮದ ಪ್ರಶ್ನೆ ನಮ್ಮ ಸಮಸ್ಯೆ ಅಲ್ಲ.
ರಾಗಂ : ಇದನ್ನು ಬರೆಯುಕಿಂತ ಮೊದ್ಲ ಯಾವ ರೀತಿ ತಯ್ಯಾರಿ ಮಾಡ್ಕೊಂಡಿದ್ರಿ?
.ವಾ : ನನ್ನನು ನಾನು ಸಮರ್ಪಿಸಿಕೊಂಡೆ. ಬುದ್ಧ ಎನ್ನುವ ಚೇತನಕ್ಕ ನನ್ನನು ನಾನು ಸಮರ್ಪಿಸಿಕೊಂಡೆ. ಒಂದು ಮಜಾ ಗೊತ್ತಿರಲಿ. ಯಾವುದೇ ಒಂದು ಶಕ್ತಿಗೆ ನಾವು ಸಮರ್ಪಿಸಿಕೊಂಡ್ರ ಅದೂ ನಮಗ ಅರ್ಪಿಸಿಕೊಳ್ಳತದ. ಬರಹದ ವಿಷಯದಲ್ಲಿ ಹಂಗ ಆಯ್ತು. ದಿನಾಲೂ ನಸುಕಿನ ಮೂರರಿಂದ ಐದರವರೆಗೆ ಇಪ್ಪತ್ತು ವರ್ಷ ನಿರಂತರವಾಗಿ ಬರೆದೆ. ಅದಕ್ಕ ಪಾಲಿಸಿದ್ದ ನೇಮ ಇಷ್ಟೆ -
ಹಗಲು ಗದ್ಯ ರಾತ್ರಿ ಪದ್ಯ
ಎರಡು ಸಾರಿ ಜಳಕವು
ಬೈಗು ಬೆಳಗು ದೇಹ ದಾಡ್ರ್ಯ
ಎರಡು ಸಾರಿ ಊಟವು
ಜಗತ್ತಿನ ಎಲ್ಲ ತತ್ವಜ್ಞಾನಿಗಳನ್ನ ಓದಿಕೊಂಡೆ. ಹಿಂಗ ಓದಲಾಕ ಒಂದು ಇಪ್ಪತ್ತು ವರ್ಷ ಕಳೆದೀನಿ.
ರಾಗಂ : ಬರಹ ನಿಮ್ಮ ದೇಹವನ್ನೇನಾದರು ಬಾಧಿಸ್ತೇನು?
.ವಾ : ಈಗ ನನಗ ವಯಸ್ಸು ಅರವತ್ತೆಂಟು. ನನಗೇನು ಇದರಿಂದ ತೊಂದರಿ ಆಗ್ಯಾದ ಅಂತ ಅನಿಸಿಲ್ಲ. ಹಂಗ ನೋಡಿದ್ರ ಬರಹದಿಂದ ನನ್ನ ಆರೋಗ್ಯ ಸುಧಾರಿಸ್ತು.
ರಾಗಂ : ಬರಹವನ್ನ ಮೊದಲಿಗೆ ಯಾರಿಗೆ ತೋರಿಸಿದ್ರಿ?
.ವಾ : ಯಾರಿಗೂ ತೋರಿಸಲಿಲ್ಲ. ಬರಗೂರು, ಕೀ.ರಂ ಭಾಳ ಕಾಡತಿದ್ರು, ಅದೇನ್ರ ಬರೆದಿದೀ ನಮಗೂ ಒಂದಿಷ್ಟು ತೋರ್ಸು ಅಂತಿದ್ರು. ನಾನು ಯಾರಿಗೂ ತೋರಿಸಲಿಲ್ಲ. ನೋಡಿ ಏನರ ಅಂದ ಬಿಟ್ಟರ ಎಲ್ಲಿ ನನ್ನ ಬರಹ ನಿಂತು ಹೋದೀತೂ ಅಂತ ಭಯ ಇತ್ತು ನನಗ. ಹಿಂಗಾಗಿ ಯಾರಿಗೂ ತೋರಿಸಲಿಲ್ಲ. ಕೊನಿಗೊಮ್ಮ ಒಯ್ದು ಕಿ.ರಂ ಮುಂದಿಟ್ಟೆ. ಅವ್ರು ನೋಡಿ ಗಾಬರ್ಯಾದ್ರು. ಏನೂ ಮಾತಾಡ್ಲಿಲ್ಲ. ಉದ್ದೇಶ ಇಷ್ಟ, ತಾನು ತಾನಾಗಬೇಕು. ಹಂಗ ಆಗು ವ್ಯಾಳ್ಯಾಕ ಅದೆಲ್ಲೂ ಹೋರಬೀಳಬಾರ್ದು.
ರಾಗಂ : ಬಿಡುಗಡೆಯ ಸಂದರ್ಭ ಭಾಳ ಮಜಾ ಇತ್ತು ಅಂತ ಕೇಳೀನಿ.
.ವಾ: ಹೌದು, ಪುಸ್ತಕ ಬಂತು. ಅನಂತಮೂರ್ತಿಯವರಿಗೆ ಫೆÇೀನ್ ಮಾಡ್ದೆ. ಅವ್ರು ಅಂದ್ರು `ನೀನು ನನ್ನ ಪ್ರೀತಿಯ ಮನುಷ್ಯ ನಾ ಬಂದ ಬರ್ತೀನಿ. ಮುಂದ ಪುಸ್ತಕಾ ಕಳಸ್ದೆ. ತಪಾಸ„„„ ಇಲ್ಲ. ಏನೋ ಒಂದು ಸಣ್ಣದು ಕಳಸ್ತಾನ ಅಂತ ಅವರು ತಿಳಿದಿದ್ರು.  ಇದ್ದಕ್ಕಿದ್ದಂಗ ವಲ್ಲೆ ಅಂದ್ರ ನಾ ಹ್ಯಾಂಗ ಬಿಡುದು? ಮತ್ತ ಫೆÇೀನ್ ಮಾಡ್ದೆ, ಹೇಳ್ದೆ. ನನ್ನ ಪುಸ್ತಕ ನಿವೇನು ಪೂರಾ ಓದಬಾಡ್ರಿ, ನಿಮಗಾದಷ್ಟು ಓದ್ರಿ. ಕಡೀಗಿ ಒಂದೇ ಪೇಜ್ ಓದಿ ಮಾತಾಡ್ರಿ. ಅವರೆಲ್ಲಾ ದೊಡ್ಡೊರು. ಓದಿ ಹೇಳದ್ರ ನಾನು ಮತ್ತೊಂದಿಷ್ಟು ಸುಧಾರಿಸ್ಕೋತೀನಿ. ಆದರ ಅವ್ರು ಒಪ್ಪಲಿಲ್ಲ. ಇದ್ದ ವಿಷ್ಯಾನ ಕೀ.ರಂಗೆ ಹೆಳ್ದೆ. ಅಂವ ಅನಂತಮೂರ್ತಿಯವರನ್ನ ತರಾಟೆಗೆ ತೊಗೊಂಡ. ಕಡೀಗಿ ಅವರು ಒಪ್ಪಿಕೊಂಡ್ರು. ಅವ್ರು ಹೇಳಿದ್ರು `ಖರೆ ಹೇಳಬೇಕಂದ್ರ ಕೀ.ರಂನಾನು ಪುಸ್ತಕಾನ ಓದಿಲ್ಲ. ನನ್ನಿಂದ ಓದಾಕೂ ಆಗುದಿಲ್ಲ. ಅದು ಭಯಂಕರ ಅದ'. ನಾನು ಅಷ್ಟ ಸಾಕ ಅಂದೆ. ಅನಂತಮೂರ್ತಿಯವರು ಖರೆ ಮಾತಾಡ್ಯಾರಲ್ಲಾ ಅಷ್ಟೆ ಸಾಕು ಅಂದೆ.
ರಾಗಂ : ಹಂಗಾದ್ರ ಕೃತಿ ಬಿಡುಗಡೆ ಏನಾಯ್ತು?
.ವಾ: ಕೃತಿ ಬಿಡುಗಡೆ ಅಂತು ಆಯ್ತು. ಕಲ್ಬುರ್ಗಿ ಅಧ್ಯಕ್ಷತೆಯೊಳಗ ಸಿ.ಎನ್.ರಾಮಚಂದ್ರನ್ ಪುಸ್ತಕ ಬಿಡುಗಡೆ ಮಾಡಿದ್ರು. ಎಚ್.ಎಸ್.ರಾಘವೇಂದ್ರರಾವ್ ಕೃತಿ ಕುರಿತು ಮಾತಾಡದ್ರು. ಬಾಳ ಛಲೋ ಆಯ್ತು. ನಾ ಹೇಳುದು ಏನು ಇರಲಿಲ್ಲ. ಗಾಲಿಬ್ ಒಂದ ಕಡೆ ಹೇಳ್ತನ `ಗಾಲಿಬ್ ಹೇಳೂದು ಹೇಳಿ ಬಿಟ್ಟಾನ, ಅವನಕಿಂತಲೂ ಛಲೋ ಹೇಳವ್ರು ಹೇಳಬಹುದು.' ನನ್ನದೂ ಇದೇ ವಾದ. ಇಪ್ಪತ್ತು ವರ್ಷ ಓದಿ, ಇಪ್ಪತ್ತು ವರ್ಷ ಬರೆದು ನಾನು ಏನ್ ಹೇಳಬೇಕ ಅಂದಿದ್ನಿ ಅದೆಲ್ಲನೂ ಹೇಳಿ ಬಿಟ್ಟಿನಿ. ಬಾಕಿ ಉಳಿದವ್ರು ಹೇಳಬೇಕು.
ರಾಗಂ : ಜ್ಞಾನಪೀಠದ ಪ್ಲ್ಯಾನ್ ಇದ್ರ ನಮ್ಮಲ್ಲಿ ಮಹಾಕಾವ್ಯ ಹುಟ್ಟತಾವ. ಇಲ್ಲ ಯಾರಿಗೋ ಒಬ್ಬರಿಗೆ ಜ್ಞಾನಪೀಠ ಕೊಡಬೇಕಾಗಿದ್ರ ಅವರ ಅಭಿನಂದನಾಗ್ರಂಥಗಳೂ ಮಹಾಕಾವ್ಯದಂಗ ಚರ್ಚೆ ಆಗತಾವ. ಇದರೊಳಗ ನಿಮ್ಮದು ಯಾವ ದಾರಿ?
.ವಾ : ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಪೀಠ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ‘ವ್ಯೋಮಾವ್ಯೋಮ ಮುಂದಿನ ಭಾಗಆತ್ಮಾ ಅನಾತ್ಮಾ ತಯಾರಿ ನಡೆದದ. ಕನಿಷ್ಠ ಎರಡು ಸಾವಿರ ಪುಟ ಆಗಬಹುದು. 2013 ರಕ್ಕ ಹೋರಗ ಬರಬಹುದು. ಅಂದಗ್ಹ ಮೇ 1 ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ವಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ.
ಕುಳಿತಿದ್ದರೆ ಇನ್ನು ಮಾತನಾಡುತ್ತಿದ್ದರೇನೋ ಚನ್ನಣ್ಣ ಆದರೆ ಕಾಲದ ಪರಿಧಿಯೊಳಗೆ ಸುತ್ತುವ ಮನುಷ್ಯ ಸ್ವತಂತ್ರನಲ್ಲ. ಅಂದಹಾಗೆ ತಡವಾಗಿಯಾದರೂ ಚಿಂತೆಯಿಲ್ಲ ಚನ್ನಣ್ಣನವರವ್ಯೋಮಾವ್ಯೋಮ ತುಲನಾತ್ಮಕ ಅಧ್ಯಯನ ಕುವೆಂಪು ಅವರರಾಮಾಯಣ ದರ್ಶನಂ’, ಗೋಕಾಕರಭಾರತ ಸಿಂಧೂ ರಶ್ಮಿಹಾಗೂ ಇನ್ನೂ ಅನೇಕ ಕೃತಿಗಳೊಂದಿಗೆ ನಾಡಿನುದ್ದಕ್ಕೂ ಇಷ್ಟರಲ್ಲಿಯೆ ಶುರು ಆಗೊದಿದೆ.
ಒಂದೇ ಮಾತು, ಗುಲ್ಬರ್ಗಾದ ಬಿಸಿಲು ಬಾಡುವುದಿಲ್ಲ ಹಾಗೆಯೆ ಚನ್ನಣ್ಣನವರವ್ಯೋಮಾವ್ಯೋಮಎಚ್ಚರಾಗಿರುವ, ಮುಕ್ತವಾಗಿರುವ ಯಾವ ಮನಸ್ಸನ್ನೂ ಕಾಡದೇ ಇರುವುದಿಲ್ಲ.”