Total Pageviews

Sunday, September 30, 2012

ಗಾಂಧಿ : ಜೀವ ಯಾವಾಗಲೂ ಜಂಗಮ


                                               
ದಾವಣಗೆರೆಯ ಸಮಸ್ತ ಸಾಹಿತ್ಯ ಆಸಕ್ತರೆ, ವೇದಿಕೆಯ ಮೇಲಿರುವ ಹಿರಿಯರೆ, ಅಕ್ಟೋಬರ್ ೦೨ ರ ಈ ಕಾರ್ಯಕ್ರಮಕ್ಕೆ ನನ್ನನ್ನು ತಮ್ಮ ಮುಂದೆ ತಂದು ನಿಲ್ಲಿಸಲು ಪ್ರಯತ್ನಿಸಿದ ಅರುಣ್‌ಕುಮಾರ್ ರವರೆ, ಸನ್ಮಾನ್ಯ ಶ್ರೀ ಎಸ್.ಎಸ್.ಪಟೇಲ ರವರೆ, ನ್ಯಾಯಾಧೀಶರುಗಳೆ, ವಕೀಲ ಬಂಧುಗಳೆ, ಪ್ರಥಮಥಃ ಕಾರ್ಯಕ್ರಮದಲ್ಲಿ ಉಪಸ್ಥಿತನಿಲ್ಲದಿರುವುದಕ್ಕೆ ತಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಇದೇ ದಿನ,  ಇದೇ ಸಮಯದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ, ಈ ಕ್ಷಣದಲ್ಲಿ ನೀವೆಲ್ಲರು ಓದುತ್ತಿರುವ “ಗಾಂಧಿ ಅಂತಿಮ ದಿನಗಳು” ಕೃತಿಗಾಗಿ, ‘ಗಾಂಧಿ ಸ್ಮಾರಕ ನಿಧಿ ಪ್ರತಿಷ್ಠಾನದಿಂದ’ ಮಾನ್ಯ ಮುಖ್ಯಮಂತ್ರಿಗಳಿಂದ ನಾನು ಪ್ರಶಸ್ತಿಯನ್ನು ಸ್ವಿಕರಿಸಬೇಕು ಎನ್ನುವ ಆದೇಶ ನನಗೆ ಬಂದಿರುವುದರಿಂದ, ಹಿರಿಯರಾದ ಪಾಟೀಲ ಪುಟ್ಟಪ್ಪ, ಶ್ರೀ ಹೊ.ಶ್ರೀನಿವಾಸಯ್ಯ ಹಾಗೂ ಇತರ ಗಣ್ಯರು ಇಳಿವಯಸ್ಸು ಸಹಜವಾದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಲ್ಲಿ ಬರುತ್ತಿರುವುದರಿಂದ ನಿಮ್ಮೆಲ್ಲರ ಅನುಮತಿಯೊಂದಿಗೆ ನಾನು ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದೇನೆ.
        ರಾಜ್ಯದ ಎರಡು ಮಹತ್ವದ ನಗರಗಳಲ್ಲಿ(ಬೆಂಗಳೂರು, ದಾವಣಗೆರೆ) ಒಂದು ಕಡೆ ಎಸ್.ಎಸ್.ಪಟೇಲ್ ಅವರಂಥಾ ಹಿರಿಯ ಚಿಂತಕರು, ಮತ್ತೊಂದೆಡೆ ಪಾಟೀಲ ಪುಟ್ಟಪ್ಪನವರಂಥ ಹಿರಿಯ ಹೋರಾಟಗಾರರು. ಒಂದೆಡೆ ನನ್ನ “ಗಾಂಧಿ ಅಂತಿಮ ದಿನಗಳು” ಕುರಿತು ಚರ್ಚೆ, ಇನ್ನೊಂದೆಡೆ ಅದೇ ಕೃತಿಗೆ ಪ್ರಶಸ್ತಿ, ಇಂಥ ಒಂದು ಸಂದರ್ಭ ಏಕಕಾಲಕ್ಕೆ ಒಬ್ಬ ಲೇಖಕ, ಒಂದು ಕೃತಿ ಕುರಿತು ಹಿಂದೆಂದು ಘಟಿಸಿರಲಿಕ್ಕಿಲ್ಲ. ಒಬ್ಬ ಲೇಖಕ ಮತ್ತು ಆತನ ಕೃತಿಗೆ ಇದಕ್ಕಿಂತ ಮಿಗಿಲಾದ ಮರ್ಯಾದೆ ಇಲ್ಲ. ಇದು ಜನರ ಕಾರಣ, ಗಾಂಧಿ ಕಾರಣ, ನೆಮ್ಮೆಲ್ಲರ ಕಾರಣದಿಂದಾಗಿಯೆ ಸಾಧ್ಯವಾಗಿದೆ ಎಂದು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ. ನನ್ನ ಮೇಲಿನ ಈ ಪ್ರೀತಿ ಮತ್ತು ಅಭಿಮಾನಕ್ಕೆ ತಮಗೆ ಋಣಿಯಾಗಿದ್ದೇನೆ. ಮತ್ತು ಈ ಕ್ಷಣದಲ್ಲಿ ವೇದಿಕೆಯ ಮೇಲೆ, ಸಭಾಂಗಣದ ಹೊರಗೆ ಚರ್ಚೆಯಲ್ಲಿರುವ, ಇಂದು ವಿಶೇಷವಾಗಿ ಮಾರಾಟಕ್ಕಿರುವ ನನ್ನ “ಗಾಂಧಿ ಅಂತಿಮ ದಿನಗಳು”ನ್ನು ಕೊಂಡುಕೊಂಡು ಓದಿ, ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
        ಎಲ್ಲ ವಾದಗಳು ವ್ಯಕ್ತಿಯನ್ನು ಶಕ್ತಿಯನ್ನಾಗಿಯೋ, ದೇವರನ್ನಾಗಿಯೋ ಅಥವಾ ಅಸಾಮಾನ್ಯನನ್ನಾಗಿಯೋ ಆರಾಧಿಸಲು ಹವಣಿಸುತ್ತವೆ. ಜೀವ ಯಾವಾಗಲೂ ಜಂಗಮ. ಅದು ವಾದವಾದಾಗ  ಸ್ಥಾವರದ ವಿಲಕ್ಷಣತೆಯನ್ನು ಪಡೆದುಕೊಳ್ಳುತ್ತದೆ. ವಾದ, ಬುದ್ಧಿಯ ಪಾರಮ್ಯತೆಯನ್ನು ತೋರಿಸುತ್ತವೆ. ವ್ಯಕ್ತಿಯನ್ನು ಮನುಷ್ಯರ ಲೋಕದಿಂದ ಅತೀತವಾದ ನೋಡುವ ವಾದ, ಜೀವದ ತಳಮಳ ಮತ್ತು ತಲ್ಲಣಗಳನ್ನು ಕುರಿತು ಮಾತನಾಡುವುದಿಲ್ಲ. ಅಂತೆಯೇ ನನ್ನ ಗಾಂಧಿ: ಅಂತಿಮ ದಿನಗಳು ಕೃತಿಯುದ್ದಕ್ಕೂ ಗಾಂಧಿ, ಮಹಾತ್ಮನಲ್ಲದ, ಸಂತನಲ್ಲದ, ರಾಜಕಾರಣಿ, ಯುಗಪ್ರವರ್ತಕ- ಹೀಗೆ ನೀವು ಹೇಳುವ ಯಾವುದನ್ನು ಆಗಲು ಒಲ್ಲದ ಗಾಂಧಿ ಎನ್ನುವ ಜೀವ ಹೇಗೆ ಮಿಡುಕಾಡಿದೆ ಎನ್ನುವುದನ್ನು ಹೇಳಲು ಯತ್ನಿಸಿದ್ದೇನೆ. ಮೂವತ್ನಾಲ್ಕು ಕೋಟಿ ಹಿಂದೂಗಳು, ನಾಲ್ಕು ಕೋಟಿ ಮುಸ್ಲಿಂರು ಪರಸ್ಪರ ಕಿತ್ತಾಡುವಾಗ ಕತ್ತಲಲ್ಲಿ ಕಳೆದುಕೊಂಡ ಕೂಸಿನಂತೆ ಕೊಸರಾಡಿದ ಗಾಂಧಿಯನ್ನು ನಿಮ್ಮ ಮುಂದೆ ನಿಲ್ಲಿಸಿದ್ದೇನೆ. ತನ್ನ ಅಂತ್ಯಕ್ಕೂ ಮುಂಚೆ ಅನೇಕ ಬಾರಿ ಆಕ್ರಮಣಕ್ಕೊಳಗಾಗಿ ನಾನು ಯಾತಕ್ಕಾಗಿ ಬದುಕಿದ್ದೇನೆ? ಎಂದು ಪ್ರಶ್ನಿಸಿಕೊಂಡ, ನೂರಾ ಇಪ್ಪತ್ತೈದು ವರ್ಷ ನಾನು ಯಾವ ಪುರುಷಾರ್ಥಕ್ಕಾಗಿ ಬದುಕಬೇಕು? ಅಥವಾ ಈ ಕ್ಷಣದಲ್ಲಿ ಸಾಯಬೇಕು ಎನ್ನುವುದಾದರೆ ನಾನು ಬದುಕಿನಿಂದ ಪಲಾಯನಗೈಯ್ಯುತ್ತಿರುವೇನೆ? ಎಂದು ಪ್ರಶ್ನಿಸಿಕೊಳ್ಳುವ ಗಾಂಧಿ ನಿಮ್ಮ ಮುಂದೆ ನಿಂತಿದ್ದಾನೆ.
        ಈತ, ಈತನ ಪ್ರಶ್ನೆಗಳು ,ಕಾಳಜಿ-ಭಯಗಳು ನಮ್ಮವಾಗದ ಹೊರತು ಈ ದೇಶದ ಭವಿಷ್ಯ ಏನಾಗಬಹುದು? ಎನ್ನುವ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದೇನೆ. ತನ್ನ ಪ್ರೀತಿಯ ಬಾ ತೀರಿದಾಗ, ಆತನಮಾನಸ ಪುತ್ರನೇ ಆದ ಮಹಾದೇವ ದೇಸಾಯಿ ತೀರಿದಾಗ, ದೇಶದ ವಿಭಜನೆಯ ಹೆಸರಿನಲ್ಲಿ ಹಿಂದೂ-ಮುಸ್ಲಿಂರು ಕಾದಾಡಿದಾಗ ಗಾಂಧಿ ನಲುಗಿದ ರೀತಿ ಇದೆಯಲ್ಲಾ, ಅದು ಆತನಿಗೇ ಗೊತ್ತು.
        ಗಾಂಧಿ: ಅಂತಿಮ ದಿನಗಳುಇದು ನನ್ನ ಮತ್ತು ಗಾಂಧಿ ಧ್ಯದ ವಿಕಿರಣ ಕಾಲದ ಹಂಗು ಹರಿದು ಸ್ಥಾಪನೆಯಾದ ಕರುಳ ಸಂವಾದ. ಈಗಷ್ಟೇ ಮೊದಲ ಭಾಗ ಬಂದಿದೆ. ಇದೇ ದಿನದಿಂದ ಕೃತಿಯ ಎರಡನೆಯ ಭಾಗವಾದಗಾಂಧಿ: ಅಂತಿಮ ಕ್ಷಣಗಳುಗೆ ನಾನು ಸಿದ್ಧನಾಗುತ್ತಿದ್ದೇನೆ. ಒಂದು ಪುಸ್ತಕದ ಗೆಲುವು, ಒಂದು ವಿಚಾರದ ಗೆಲುವೇ. ದೇಶದ ಜೀವಭಾವದಂತೆ ಸಂಚರಿಸುವ ಗಾಂಧಿಯಂತೂ ಇಲ್ಲಿ ಎಲ್ಲ ಕಾಲಕ್ಕೂ ಪ್ರಸ್ತುತ. ಆತ ಹೇಗೆ ಪ್ರಸ್ತುತ ಎನ್ನುವುದನ್ನು ಪುಸ್ತಕ ವ್ಯಾಪಿಸಿಕೊಂಡಿರುವ ರೀತಿಯ ಮೇಲೆಯೇ ನಾವು ಗ್ರಹಿಸಬಹುದು. ಗೆಲುವು ಗಾಂಧಿಯದು ಮತ್ತು ನಿಮ್ಮೆಲ್ಲರದ್ದು.
ಗಾಂಧಿಯದು ಒಂದೇ ವಾದ. “If India fails, Asia dies. Let India remain, and be the hope of all the exploited of the earth, in Asia, in Africa and any other part of the World.” ಯಾವ ಮಾತುಗಳನ್ನು ಗಾಂಧಿ ದೇಶವನ್ನು ಕುರಿತು ಆಡಿದನೋ ಅವೇ ಮಾತುಗಳನ್ನು ನಾವಿಂದು ಗಾಂಧಿಗೂ ಅನ್ವಯಿಸಬೇಕಿದೆ. ಸಹನೆಯ ದೊಡ್ಡ ಸಂಸ್ಕೃತಿಗೆ ಹೇಡಿತನದ ಹೊಲಸು ಸೋಕದಂತೆ ಅದನ್ನು ಸಂಸ್ಕೃತಿಯನ್ನಾಗಿ ಬಿಂಬಿಸಿದ ಗಾಂಧಿ ಇಲ್ಲಿ ಸೋತರೆ ಅಂದೇ ಭಾರತಕ್ಕೆ ದುರಂತದ ದಿನ. ನಾವು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂದು ಯಾವ ಕಾಲಕ್ಕೂ ಜನ ಆಡಿಕೊಳ್ಲುವಂತಾಗಬಾರದು ಎನ್ನುವುದೇ ಗಾಂಧಿಯ ಹೋರಾಟದ ಗುರಿಯಾಗಿತ್ತು. ಇಷ್ಟು ತಿಳಿದುಕೊಂಡರೆ ಸಾಕು, ಅದು ಗಾಂಧಿಗೆ, ದೇಶಕ್ಕೆ, ನಮಗೆ ನಾವೇ ಸಲ್ಲಿಸಿಕೊಳ್ಳುವ ದೊಡ್ಡ ಗೌರವ. ತಮಗೆಲ್ಲ ಮತ್ತೊಮ್ಮೆ ಗಾಂಧಿ ಜಯಂತಿಯ ಶುಭಾಷಯಗಳು. ತಮ್ಮ ಅಭಿಮಾನಕ್ಕೆ ಮತ್ತೊಮ್ಮೆ ನಿಮಗೆಲ್ಲ ಧನ್ಯವಾದಗಳು.


                   (ದಾವಣಗೆರೆ ಸಮಾರಂಭಕ್ಕೆ ಅಕ್ಟೋಬರ ೨ಕ್ಕಾಗಿ ಕಳುಹಿಸಿಕೊಟ್ಟ ಭಾಷಣ)










Saturday, September 29, 2012

ಗಾಂಧಿವಾದವನ್ನಲ್ಲ, ಗಾಂಧಿಯನ್ನು ಓದಿ..


Dr.R G Mathapati's (RAGAM)"Gandhi:Antima Dinagalu

On the occasion of 
Gandhi Smaraka nidhi Awrad for the my "Gandhi-Anthima ksanagalu" for 2012-13. 



    ದು ಕಥೆಯಲ್ಲ. ಗಾಂಧಿಯ ಸತ್ಯವನ್ನು ಗುರಿಯಾಗಿಸಿಕೊಂಡು, ನಿಮ್ಮ ರೋಚಕತೆಯನ್ನು ಕೆದಕಲು ಹೊಸ ಸಾಲುಗಳಲ್ಲ ಇವು. ಇದೊಂದು ನಿತಾಂತ ಓದು. ೧೯೯೬ ರಲ್ಲಿ ನಾನು ಸಂಶೋಧನಾ ವಿಧ್ಯಾರ್ಥಿಯಾಗಿ ಭಾರತದ ಹೆಸರಾಂತ ಸಾಹಿತಿ, ಚಿತ್ರ ನಿರ್ದೇಶಕ ಖ್ವಾಜಾ ಅಹಮ್ಮದ್ ಅಬ್ಬಾಸರ ಸಾಹಿತ್ಯವನ್ನು ಓದಿಗಾಗಿ ಎತ್ತಿಕೊಂಡಂದಿನಿಂದ ಗಾಂಧಿ ಕುರಿತಾದ ಓದು ನನಗೆ ಅನಿವಾವಾಯಿತು. ಕಾರಣವಿಷ್ಟೇ, ದೇಶದ ಸ್ವತಂತ್ರದ ಆಚೆ ಈಚೆ ಇದ್ದ  ಒಟ್ಟು ಭಾರತೀಯ ಆಂಗ್ಲ ಸಾಹಿತ್ಯದ, ಸಾಹಿತಿಗಳ ಆಶಯಗಳು, ಬರಹದ ಉದ್ದೇಶಗಳು ರೂಪುಗೊಂಡಿದ್ದೇ ಈ ಗಾಂಧಿ ಯುಗದಲ್ಲಿ. ಆತನ  ಪ್ರಭಾವವಿಲ್ಲದ ಯಾವುದೇ ಬರಹಗಾರನನ್ನು, ಕೃತಿಯನ್ನು ಆ ಸಂದರ್ಭದಲ್ಲಿ ನಾವು ನೋಡುವುದೇ ಕಷ್ಟ. ಸೃಜನಶೀಲವಾಗಿ ಬದುಕಿದ್ದ ಗಾಂಧಿ, ಸೃಜನಶೀಲ ಸಾಹಿತ್ಯವನ್ನೇನೂ ಬರೆಯಲಿಲ್ಲ. ಆದರೆ ಆ ಕಾಲದ ಇಡೀ ಸೃಜನಶೀಲ ಸಾಹಿತ್ಯವನ್ನೆಲ್ಲಾ ಆತ ವ್ಯಾಪಿಸಿ ಬಿಟ್ಟ. ಹಾಗೆಯೇ ಕೆ ಎ ಅಬ್ಬಾಸರನ್ನು.
ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ, ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆ ಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ. ಹ್ಞಾಂ, ಅಂದಹಾಗೆ ಗಾಂಧಿ ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‌ಗಳನ್ನಿಟ್ಟುಕೊಳ್ಳದೇ  ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ. ಗಾಂಧಿ ವಾದವನ್ನೊದುವವರಿಗೆ ಗಾಂಧಿ ಅರ್ಥವಾಗುವುದಿಲ್ಲ.
ನಟಲ್‌ನಿಂದ ನೌಖಾಲಿಯವರೆಗೆ ಸಾಗಿದ ಗಾಂಧಿಯನ್ನೊಬ್ಬ ಮಹಾತ್ಮನನ್ನಾಗಿಯೋ, ರಾಜಕಾರಣಿಯನ್ನಾಗಿಯೋ ಓದಿದ ನಾವು, ಈ ದೇಶದ ಸಾಮಾನ್ಯರು ಅರ್ಥೈಸಿಕೊಂಡ ಗಾಂಧಿಯನ್ನು ಅರಿಯಲಿಲ್ಲವೇನೊ. ಒಂದು ಸಂಗತಿ ಕೇಳಿ- ಅಬ್ಬಾಸರ ಅಜ್ಜಿಯ ಹೆಸರು ಹಕ್ಕೂ, ಬರೀ ಗಾಂಧಿ ಎಂಬ ಪದ ಮಾತ್ರದಿಂದ ಈಕೆ ವೈರಾಗ್ಯ ಮೂರ್ತಿಯಾದವಳು. ತನ್ನ ಅಮೂಲ್ಯ ಆಭರಣಗಳನ್ನೆಲ್ಲಾ ದೇಶೊದ್ಧಾರಕ್ಕಾಗಿ ಈ ಗಾಂಧಿಯ ಜೋಳಿಗೆಗೆ ಸುರಿದು ಚರಕದ ದೀಕ್ಷೆ ಪಡೆದವಳು. ನಡು ಯೌವ್ವನದಲ್ಲಿ ನೂಲುತ್ತಾ ಮೀರಾಳಂತೆ ಗಾಂಧಿ ಫರಿಸಾಎಂದು ಪೂಜಿಸುತ್ತಾ, ಖಾದಿಯ ಖಫನ್‌ದಲ್ಲಿಯೇ ಇಹವನ್ನು ತ್ಯಜಿಸಿದವಳು. ಇದೆಲ್ಲಾ ಓದಿದಾಗ ತಟ್ಟನೆ ನನಗೆ ನೆನಪಾದದ್ದು ಟಾಲ್‌ಸ್ಟಾಯ್‌ನ ಮಾತು-ಶೃದ್ಧೆಯಿಂದಲೇ ಜೀವನ, ಶೃದ್ಧೆಯೇ ಜೀವನ.
ಗಾಂಧಿ ಕುರಿತಾದ ನನ್ನ ಓದಿನ ಮಿತಿಯೊಳಗೇ ಹೇಳಬೇಕೆಂದರೆ ಗಾಂಧಿ ಓದಿದ್ದು ಕಡಿಮೆ. ಆದರೆ ಅರ್ಥೈಸಿಕೊಂಡದ್ದು ಹೆಚ್ಚು. ಮತ್ತೊಂದಷ್ಟು ಓದಿದ್ದರೂ ಅದು ಆತನ ಆಗಾಗಿನ ಅವಶ್ಯಕತೆಗಳ ಹಿನ್ನಲೆಯಲ್ಲಿ. ಹಾಗೇಯೇ ಓದಿದೆಲ್ಲವನನು ಆತ ಹಂಚಿಯೂಬಿಟ್ಟ. ಬರಹದ ವಿಚಾರದಲ್ಲಿಯೂ ಅಷ್ಟೇ, ಕಾಲಾತೀತವಾಗಿ ಹಲವು ತಲೆಮಾರುಗಳಿಂದ ಬರಹದ ಒರೆಗತುತ್ತಾದ ಗಾಂಧಿ ಸಾಹಿತ್ಯ ಬರೆಯಲಿಲ್ಲ. ಆದರೆ ಆತ ಬರೆದಿಲ್ಲವೂ ಶತಮಾನಗಳು ಮೆಲಕು ಹಾಕಬೇಕಾದ ಸಾಹಿತ್ಯವಾಯಿತು. ಬಹುತೇಕ ಗಾಂಧಿಯಷ್ಟು ಕಡಿಮೆ ಓದಿದ ರಾಜಕೀಯ ನೇತಾರು ವಿರಳ. ಹಾಗೆಯೇ ಗಾಂಧಿಯಂಥ ಮನುಷ್ಯನೂ ವಿರಳ.
ಗಾಂಧಿ ನಮಗೆ ಏನು ಹೇಳುತ್ತಾನೆ? ಎಂಬ ಒಂದು ಸಣ್ಣ ಕುತೂಹಲ ನನ್ನನ್ನು ಹದಿನಾಲ್ಕು ವರುಷ ಆತನ ಬೆನ್ನು ಬೀಳುವಂತೆ ಮಾಡಿತು. ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧಿವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಪುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಠಿಯ ವೈಚಿತ್ರವೇ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ ಪ್ರಪಂಚದ ಸಂವೇದನೆಗಳೊಂದಿಗೆ.
ಗಾಂಧಿ ಕುರಿತಾದ ನನ್ನ ಓದನ್ನು ಅವನ ಬದುಕಿನ ಓಂದು ಘಟ್ಟಕ್ಕೆ ಸೀಮಿತಗೊಳಿಸಿಕೊಂಡಿರುವುದರಿಂದ ಈ ಕೃತಿಗೆ ಗಾಂಧಿ: ಅಂತಿಮ ಕ್ಷಣಗಳುಎಂದು ಕರೆದಿದ್ದೇನೆ. ಈ ದೇಶದ ರಾಜಕೀಯ ಪರ್ವ, ಗಾಂಧಿಯ ಬದುಕಿನ ಪರ್ವವಾಗಿರುವುದು ಒಂದು ಆಕಸ್ಮಿಕ ಮತ್ತು ಆಶ್ಚರ್ಯಕರ ಬೆಳವಣಿಗೆ. ಗಾಂಧಿ ಕೊಲೆಗೆ ಕೆಲವೇ ಅವಧಿ ಮುನ್ನ ರಾಜಕೀಯವಾಗಿ ಸ್ವತಂತ್ರವಾಗುವ ಈ ದೇಶ ಗಾಂಧಿಯ ಕೊಲೆಯೊಂದಿಗೆ ಇನೊಂದು ರೀತಿಯ ಪರಾಧಿನತೆಗೆ ಒಳಗಾಗುತ್ತದೆ. ಸರಿ, ಇದೆಲ್ಲವೂ ಸಾಕಷ್ಟು ಚರ್ಚಿಸಿಯಾಗಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೆಕಾದುದಿಷ್ಟೇ, ಬಾಳಿನ ಮುಸ್ಸಂಜೆಯಲ್ಲಿ,ಮಾಗಿದ ಮನಸ್ಸೊಂದು ಕ್ರಿಯಾಶೀಲವಾಗಿದ್ದ ರೀತಿಯನ್ನು ತಿಳಿಯುದಷ್ಟೇ ನನ್ನ ಬರಹದ ಕುತೂಹಲ ಮತ್ತು ಗುರಿ. ಈ ಕುತೂಹಲದ ಮೊದಲ ಭಾಗ ಈಗ ನಿಮ್ಮ ಕೈಯಲ್ಲಿದೆ.

                                                              ರಾಗಂ

Friday, September 28, 2012

ಗಣೇಶನ ನೆಪ:ಕಿಟ್ಟು ಮನೆ


ಹಿಂದೊಮ್ಮೊ ಗಾಂಧಿಯ ನೆಪದಲ್ಲಿ ಸೇರಿದ್ದ ನಾವು ಈಗ ಗಣೇಶನ ನೆಪದಲ್ಲಿ ಸೇರೋಣ ಎಂದು ಪ್ರೀತಿಯ ಫರ್ಮಾನ ಹೊರಡಿಸಿದವರು ಗುರುಗಳಾದ ಚಂಪಾ. ಆಜ್ಞೆಯಂತೆ ಕಲಹ ಭಯಂಕರರೆಲ್ಲ ಬೆಂಗಳೂರಿನ ಕಿಟ್ಟು ಮನೆಯಲ್ಲಿ ದಿನಾಂಕ ೧೯/೦೯/೧೨ ರಂದು ಸರಿಯಾಗಿ ಗಣೇಶನನ್ನು ಪ್ರತಿಷ್ಟಾಪಿಸುವ ವೇಳೆಗೆ ಸೇರಿಕೊಂಡೆವು. ಅಂದಹಾಗೆ ಈ ಕಿಟ್ಟು ಮನೆ ಎಂದರೇನು ಮೊದಲು ಹೇಳಿಬಿಡುತ್ತೇನೆ. ನವೋದಯದವರ ಗೆಳೆಯರ ಬಳಗ, ಗೋಕಾಕರ ನವ್ಯದ ಕಮಲಕುಂಜ ಹೀಗೆ ಇನ್ನ್ಯಾವುದೇ ವೇದಿಕೆಗಳಿದ್ದರೆ ಅಂಥವುಗಳ ಪ್ರತಿಬಿಂಬ ಈ ಕಿಟ್ಟು ಮನೆ. ಇದೊಂದು ವೇದಿಕೆ ಪುಸ್ತಕ ಬಿಡುಗಡೆಯಿಂದ ಹಿಡಿದು ಪುಣ್ಯತಿಥಿಯವರೆಗೆ ಏನೆಲ್ಲವನ್ನೂ ಆಚರಿಸಿಕೊಳ್ಳಬಹುದು. ರಾಷ್ಟ್ರ-ರಾಜ್ಯ ರಾಜಕಾರಣ, ಸಾಹಿತ್ಯ, ಸಂಸ್ಕೃತಿದಿಂದ ಹಿಡಿದು ಮ್ಯಾಜಿಸ್ಟಿಕ್‌ನಲ್ಲಿ ಬಂದ ಹೊಸ ಸಿನಿಮಾದವರೆಗೆ ಏನೆಲ್ಲ ಮಾತಾಡಬಹುದು. ಸ್ಮಶಾನವಾಸಿ, ಪ್ರಳಯ ಭಯಂಕರ ಶಿವನಿಂದ ಹಿಡಿದು ಸಾಯಿಬಾಬಾರವರೆಗೆ ಯಾರೆಲ್ಲರನ್ನು ಜಾಲಾಡಬಹುದು. ನಿಯಮ ಒಂದೆ. ವಿಸ್ಕಿಯೋ, ವೈನೋ, ರಮ್ಮೋ ಅವರವರ ಶಕ್ಯತೆ ಮತ್ತು ಯೋಗ್ಯತೆಗನುಸಾರ ಹಿರುತ್ತಲೇ ಇರಬೇಕು. ಕೊನೆಗೆ ಕಿಟ್ಟು ಮನೆಯ ಪ್ರೀತಿಯ ಭೋಜನ ಸವಿಯಬೇಕು.
ಕಿಟ್ಟು ಮನೆ ಎಂದರೆ ಕೃಷ್ಣಮೂರ್ತಿ ರಾವ್ ಅವರ ಮನೆ. ಈ ವಿಶಾಲ ಕರ್ನಾಟಕದ ಹಸುಗೂಸಿನಂಥ ಈ ಮನುಷ್ಯ ಸಂಗೀತ, ಸಾಹಿತ್ಯ ಮತ್ತು ರಾಜಕಾರಣದ ದಿಗ್ಗಜರ ಸಲುಗೆಯನ್ನಿಟ್ಟುಕೊಂಡವರು. ಮೂವತ್ತು-ನಲವತ್ತು ವರ್ಷಗಳವರೆಗೆ ಅರಬ್ ರಾಷ್ಟ್ರಗಳಲ್ಲಿ ಇಂಗ್ಲೀಷ ಕಲಿಸುತ್ತಾ ಕಳೆದು ಹೋದ ಇವರನ್ನು ನಮಗೆ ದೊರಕಿಸಿಕೊಟ್ಟವರು ಚಂಪಾ. ಬೆಂಗಳೂರಿನ ಸಂಜಯ ನಗರದ ಸುರಭಿಯಲ್ಲಿ ವಾಸವಿರುವ ಕೃಷ್ಣಮೂರ್ತಿರಾವ್ ಎಂದಿಗೂ ಒಬ್ಬಂಟಿಗರಲ್ಲ. ಹೆಂಡತಿ ತಿರಿಹೋಗಿ ವರುಷಗಳೇ ಗತಿಸಿವೆ, ಮಕ್ಕಳು ವಿದೇಶಗಳಲ್ಲಿದ್ದಾರೆ, ಆದರೆ ಅವರ ನೆನಪುಗಳೊಂದಿಗೆ ನಮ್ಮನ್ನೆಲ್ಲ ಸೇರಿಸಿಕೊಂಡು ಒಂದು ಅವಿಭಕ್ತ ಸಂಸಾರವನ್ನೇ ಹೂಡಿದ ಈ ಮನೆಯೇ ನಮ್ಮ ‘ಕಿಟ್ಟು ಮನೆ’.
ನನಗೂ ಕಿಟ್ಟು ಮನೆಗಂತು ಅವಿನಾಭಾವ ಸಂಬಂಧ. ನನ್ನ ‘ಗಾಂಧಿ ಅಂತಿಮ ದಿನಗಳು’ ಪುಸ್ತಕವನ್ನು ಇಲ್ಲಿಯೆ ಬಿಡುಗಡೆ ಮಾಡಿದ್ದೇವು. ಗೆಳೆಯ ಗಿರಿರಾಜು ಅವರ ಮನೆ ‘ಕಾಲ ಕನಸು’ ಮತ್ತು ಈ ‘ಕಿಟ್ಟು ಮನೆ’ ಗೌಜಗದ ಗೂಡಾದ ಬೆಂಗಳೂರಿನಲ್ಲಿ ನಾನು ಕಂಡುಕೊಂಡ ನೆಮ್ಮದಿಯ ತಾಣಗಳು. ಸಂಗೀತ ಅದರಲ್ಲೂ ಹಿಂದುಸ್ತಾನಿ ಸಂಗೀತ ನನ್ನನ್ನು ಈ ‘ಕಿಟ್ಟು ಮನೆ’ಯೊಂದಿಗೆ ಇನ್ನೂ ಗಾಢವಾಗಿ ಬೆಸೆದು ಬಿಟ್ಟಿದೆ. ಕೃಷ್ಣಮೂರ್ತಿರಾವ್ ಪಂಡಿತ್ ತರಾನಾಥರ ಶಿಷ್ಯರಾದರೆ ನಾನು ಭಿಮಸೇನ ಜೋಶಿ ಮತ್ತು ಮೆಹದಿ ಹಸನರ ಗಾನಗಂಗೆಯಲ್ಲಿ ಮಿಂದೆದ್ದವನು. ಹೀಗಾಗಿ ಈ ಮಿಲನಗಳಿಗೆ ಬಹಳ ಅರ್ಥವಿದೆ ಎಂದುಕೊಂಡಿದ್ದೇನೆ. ಅಂದಹಾಗೆ ಈ ಗಣೇಶ ಚತುರ್ಥಿಯ ಕುರಿತು ನಾನು ನಿಮಗೆ ಹೇಳಬೇಕಿತ್ತು. ಇತ್ತಿಚಿಗಷ್ಟೆ ಕೆನಡಾದಿಂದ ಮರಳಿದ ಕೃಷ್ಣಮೂರ್ತಿರಾವ್ ನಮಗಾಗಿ ಒಂದಿಷ್ಟು ಸ್ಪೆಷಲ್ ಕ್ಯಾಪ್ಸಿಕಾರನ್‌ಗಳನ್ನ ಮತ್ತು ವಿಶೇಷ ಪೇಯಗಳನ್ನ ತಂದಿದ್ದರು. ಕಾಗೆಯಂತೆ ಬಳಗ ಕಟ್ಟಿಕೊಂಡು ಬಾಳುವ ಕೃಷ್ಣಮೂರ್ತಿರಾವ್ ಮತ್ತು ಚಂಪಾ ನಮ್ಮನ್ನೆಲ್ಲ ಸೇರಿಸಿದರು. ನಾನು ದೇವರಾಜ ಅರಸು ಮತ್ತು ಅವರ ಸಮಕಾಲೀನ ಅನೇಕ ಹಿರಿಯ ರಾಜಕಾರಣಿಗಳೊಂದಿಗೆ ಆತ್ಮೀಯ ಸಂಬಂಧವಿರಿಸಿಕೊಂಡ ಮಂಡ್ಯದ ಮಾಹಿಗೌಡ, ಕೆ.ಎಸ್.ಭಗವಾನ್, ನಾಗೇಶ, ಎಲ್.ಹನುಮಂತಯ್ಯ, ಪುಸ್ತಕ ಮನೆ ಹರಿಹರಪ್ರಿಯ ಹಾಗೂ ಕಣ್ವದ ರೂವಾರಿ ಗೆಳೆಯ ಎಮ್.ಆರ್.ಗಿರಿರಾಜು ಈ ಕೂಟದಲ್ಲಿದ್ದು ಆನಂದಿಸಿದ ರೀತಿಯನ್ನು ನೀವು ಗಮನಿಸಬೇಕೆ? ಈ ಚಿತ್ರಗಳನ್ನು ನೋಡಿ.  
  

Monday, September 24, 2012

Foreword To Dr.Nagesh’s ‘Bend and Mend’





It’s a book that you cannot easily classify by genre. It’s a journey into human mind, experiences and psychology. It’s a collection, matter of factly speaking write-ups which the author is publishing in the form of book. Content –wise the book is a kind of autobiography. For, he talks on all those thoughts and notions which generally have bothered every individual. Human integrity in general and individual’s mental integrity in particular is the constant concern of Dr Nagesh.A.M. Through his argument, he establishes’ integrity as a precious thing above all the riches of mankind. It is a poor man’s capital. An unorganized individual will not achieve any goal. Integrity gives credit, safety and power.  Dr Nagesh’s book is a journey towards life, hope and happiness.
The author is of the opinion that the life itself is ultimate aim and achievement of life. Human existence is inseparable. Its something which is beyond our mathematics. The world would be better and brighter says Dr Nagesh, if people were taught the method of being happy, as well as the happiness of understanding ourselves. To be healthy and happy ourselves is a most effectful contribution to the happiness of others. Cheerful people, who look on the bright side of the picture, and who are ever ready to snatch victory from defeat, are always popular. They are not only happy in themselves, but the cause of happiness to others says Dr Nagesh. No doubt a man of happiness lives long in our memory. But, how to live with a smile on face? Read the book, here is your friend, philosopher and guide.
            It is wrong to say the book is only a psychological study of man. Because each line and paragraph of the book is an assurance. Dr Nagesh keeps on consoling you saying, don’t fret, we shall ultimately come to the light if we look upward, work upward. “The seed in the earth does not doubt that it will sometime develop into stem, bud, leaf, flower and fruit. It does not ask how it is ever to get up through this mass of earth above it. It does not complain because there are stones and turf in its way, built gently pushes and pushes its tender head up between the stones and against the cold, and by the very persistence of growing, breaks out into the light, buds, flowers and fruits.” Each individual’s growth is the story of the seed says Dr Nagesh. Ultimately the world is in need of man not God. Read the novel interpretation of GOD by the author, “what G stands for? It stands for geological, then O, read as organized, then what D meant for? It meant as developed, now combine all three and see. Leaving beings are geologically organized and developed organisms”.
In Dr Nagesh’s analysis of human personality each notion of man is treated with due respect. When he talks of anger he says, not to fight with anger or no anger, truth or no truth,  Just accept the truth and also the anger. Live with that and be at truth. Ultimately what are the teachings of our life. Does it not teach us courage to be honest? courage to resist temptation? courage to speak the truth ?and not to pretend to be what we are not? Courage to live honestly within our means, and not dishonesty upon the means of others? These questions were asked by the author at many important junctures of his writing in the book.
The book besides being the wonderful study of man it throughs light on various contemporary echo related questions i.e “ we forget our mother earth, we spit, and we tear her cloths and put plastic cover. We suffocate her, we suck water from her and we allow her to starve. We systematically destroyed her minerals. What sort of bone she can have? She just cripples and she is suffering from osteoporosis. We should be spiritual to overcome this”.
All said and done, Dr.Nagesh’s book is, one must admit, un-put-down-able. Its a collection of wonderful insights into human psyche. You are not satisfied until you have read it from line to line and cover to cover. And as soon as you have put it down, you feel like taking it up again, to confirm and compare with him some of your observations on the same subjects.
Dr.Nagesh.A.M deserves our congratulations for his scientific, humane and empathic study of man. It is indeed welcome that this book is being printed as a common man’s edition, which will make it available at a reasonable price.        

Wednesday, September 19, 2012

‘ಅಮಲಾಪುರಂ’ದ ಅಮಲು!



                             
Two days national seminar at Amalapuram
     ನನಗೂ ಆಂಧ್ರಕ್ಕೂ ಜೀವ-ಭಾವದ ಸಂಬಂಧ. ವರ್ಷಕ್ಕೆ ಮೂರು-ನಾಲ್ಕು ಬಾರಿ  ನನ್ನ ಜೀವವನ್ನು ಹೇಗೋ ಒಂದು ದಾರಿ ಮಾಡಿಕೊಂಡು ಆಂದ್ರದೇಶಂ ಎಳೆದುಕೊಂಡೇ ಬಿಡುತ್ತದೆ. ಇದ್ದಕ್ಕಿದ್ದಂತೆ ಅಮಲಾಪುರಂನಿಂದ ರಾಷ್ಠ್ರಿಯ ವಿಚಾರ ಸಂಕಿರಣವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬರಲು ಅಹ್ವಾನ ಬಂತು. ‘ಆ ಅಂಟೆ ಅಮಲಾಪುರಂ’ ಎನ್ನುತ್ತಾ ನಾನು ಮಗುವಾಗಿಬಿಟ್ಟೆ. ಗೆಳತಿ ರಾಜೇಶ್ವರಿಯ ಸಹಾಯದಿಂದ ಪ್ರಯಾಣದ ವ್ಯವಸ್ಥೆಗಳನೆಲ್ಲಾ ಮಾಡಿಕೊಂಡು ಪ್ರಯಾಣಕ್ಕೆ ಸಿದ್ಧವಾಗಿಯೇಬಿಟ್ಟೆ. ನನಗೆ ಆಂದ್ರ ಎಂದರೆ ತುಂಬು ತಾಯಂದಿರ ನೆನಪು. ಪೊದೆ-ಪೊದೆಯಾದ ಕೂದಲು, ಬಟ್ಟಲುಗಣ್ಣು, ಎರಡು ಕೈಯಲ್ಲಿ ಹಿಡಿದು ತುಟಿಯಂಚಿನಿಂದ ಸುರಿದು ಬರುವಷ್ಟು ಹಾಲು ಹಿಂಡುವ ಮೊಲೆ, ಕಪ್ಪು ನೆಲದ ಬಣ್ಣ, ಬೆಟ್ಟದಂಥ ಜಘನಗಳು, ಅಬ್ಬಾ! ಇವರೆಂದರೆ ಶುದ್ಧ ದಕ್ಷಿಣ ಭಾರತ. ಒಪ್ಪುತ್ತೀರಾ? ನೆಲದಂತೆಯೇ ಹೆಣ್ಣು. ಈ ಭಾರ ಉತ್ತರದ ಹೆಣ್ಣಿಗೆ ಸಾಧ್ಯವಿಲ್ಲ. ಅದೇನಿದ್ದರೂ ಸಪೂರಾದ ಸಮತಟ್ಟಾದ ನೆಲ.
`RAGAM' with guests
ನನ್ನ ಇಂಗ್ಲಿಷ್ ಭಾಷಣದಲ್ಲಿ ಅಮಲಾಪುರಂದಲ್ಲಿ ನಾನು ಅದಕ್ಕೆಂದೇ ಹೇಳಿದೆ, ‘ನನ್ನ ಪಾಲಿಗೆ ಆಂದ್ರವೆಂದರೆ ಹೊಟ್ಟೆ ತುಂಬಾ ಊಟ, ಮುಗ್ಧ ನಗೆ, ರಾತ್ರಿ ಹರಿಯುವ ಕನಸುಗಳು’. ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕನ ತಂಗಿಯಾದ ಕಾರಣಕ್ಕೆ ನನ್ನವ್ವ ನನಗೆ ಆಂದ್ರಪ್ರದೇಶವನ್ನು ಪರಿಚಯಿಸಿದಳು. ಅಲ್ಲಿ ಉಂಡು ಬೆಳೆದ ನಾನು ನನ್ನ ಸೃಜನಶೀಲತೆಯಿಂದಾಗಿ ಆಂದ್ರದ ನಿರಂತರ ಅತಿಥಿಯಾದೆ. ನನಗೂ ಆಂದ್ರಕ್ಕೂ ನಲವತ್ತು ವರ್ಷದ ನಂಟು. ಇಲ್ಲಿಯ ಶ್ರೀ ಶ್ರೀ ನನ್ನ ಅತ್ಯಂತ ಪ್ರೀತಿಯ ಸಾಹಿತಿ ಆಂದ್ರದ ಶಿವಾರೆಡ್ಡಿಯ ಕವಿತೆಗಳನ್ನು ಕುರಿತು ಮಾತನಾಡಿದವನು ನಾನು. ವಾಣಿಶ್ರೀ, ಎನ್ ಟಿ ಆರ್, ಬಾಲಸುಬ್ರಮಣ್ಯಂ, ಪುಂಡರೀಕ ಅಕ್ಷಯ ನಾನು ಬಾಲ್ಯದಲ್ಲಿದ್ದಾಗ ಶ್ರೀಶೈಲದ ನನ್ನ ಮನೆಯಲ್ಲಿ ಕಂಡ ಘಟಾನುಘಟಿಗಳು. ಹೈದರಾಬಾದಿನ ಬಾಝಾರಿನಲ್ಲಿ ನನ್ನ ಕನಸುಗಳಿವೆ. ನನ್ನ ಸಾಹಿತ್ಯದ ಅಭಿಮಾನಿ ಗೆಳೆಯ ಧರ್ಮದಾಸ ಬಾರ್ಕಿ ಹಾಗೂ ಹಿತೈಶಿ ಪ್ರೊ. ತೇಜಸ್ವಿ ಕಟ್ಟಿಮನಿ ಇಲ್ಲೆ ಎಲ್ಲೊ ಕಳೆದುಕೊಂಡಿದ್ದಾರೆ. 
`Ragam with Shrinivas Rao
    ಎನೇನೋ ಹೇಳಿದೆ, ಹೇಳಬೇಕಾದುದು ಅಮಲಾಪುರಂ ಕುರಿತು. ರಾಜಮಂಡ್ರಿಯಲ್ಲಿ ಇಳಿದು ಗೋದಾವರಿ-ಗಾಯತ್ರಿಗಳನ್ನು ದಾಟಿ, ೮೦ ಕಿಲೋಮೀಟರ್ ಸಾಗಿದರೆ ಅಮಲಾಪುರಂ ಸಿಗುತ್ತದೆ. ಎಂತಹ ಚೆಂದದ ಊರು. ಬರಡು-ಬರಡಾದ ತೆಲಂಗಾಣ, ಬೆವರು ಸುರಿಸುವ ರಾಯಲ್‌ಸೀಮೆಗಳಿಂದ ಬೆಸತ್ತಿದ್ದ ನನಗೆ ಕೊಣಸೀಮಾದ ಈ ಅಮಲಾಪುರಂ ಎಂತಹ ಅಮಲೇರಿಸಿತ್ತು ಎನ್ನುತ್ತೀರಾ?
A view of East Godavri River
 ನಾನು ಉತ್ತರದಲ್ಲಿ ನರ್ಮದೆಯ ವ್ಯಾಪ್ತಿಯನ್ನು  ನೋಡಿ ಗಾಬರಿಯಾಗಿದ್ದೆ. ಅದರಷ್ಟೇ ಅಗಲ ದಕ್ಷಿಣದ ನಮ್ಮ ಗೋದಾವರಿ. ಅಮಲಾಪುರಂ ಶದ್ಧ ಸಾಂಪ್ರದಾಯಿಕ ಊರು. ಪಕ್ಕದಲ್ಲಿಯೇ ನಿಮ್ಮ ಹೆಂಡದಿರನ್ನು ಹುಚ್ಚು ಹಿಡಿಸುವ ಸೀರೆಗಳನ್ನು ನೇಯುವ ‘ಭಂಡಾರುಲಂಕಾ’ ಇದು ಸಂಪೂರ್ಣ ಬ್ರಾಹ್ಮಣರ ದ್ವೀಪ. ಈಗ ನನಗಲ್ಲೊಬ್ಬ ಗೆಳೆಯ ಸುಬ್ಬಾರಾವ್. ಆ ಮನೆಗಳನ್ನು ನೀವು ನೋಡಿಯೇ ಅನುಭವಿಸಬೇಕು. ನಾನು ಅಮಲಾಪುರಂಕ್ಕೆ ಹೋದದ್ದು ಕೂಡ ಆಂದ್ರದ ಅತ್ಯಂತ ಹಳೆಯ ಬ್ರಾಹ್ಮಣ ಸಂಸ್ಥೆಯ ಅತಿಥಿಯಾಗಿಯೇ. ಈ ದೇಶ ಅನುಭವಿಸಲು ಮೈಮರೆಯಬೇಕಷ್ಟೆ. 
      ಅಂದಹಾಗೆ ಗೋದಾವರಿ-ಗಾಯತ್ರಿಯೊಂದಿಗೆ ನನ್ನ ಮತ್ತು ‘ಆಕೆ’ಯ ಅಪರೂಪದ ಚಿತ್ರಗಳಿವೆ. ಆಂದ್ರದಲ್ಲಿ ಹಂಬಲಿಸಿ ನನಗೆ ಚಿಕನ್ ತಿನ್ನಿಸುವ ಅಮ್ಮಂದಿರಿದ್ದಾರೆ. ಪ್ರೊ. ವಿಶ್ವನಾಥ ರಾವ್, ಸಂಜಯರಾವ್‌ರಂತಹ ಗುರು-ಬಂಧುಗಳಿದ್ದಾರೆ.
ಕಾಲ ಅನುಮತಿಸಿದರೆ ಅಮಲಾಪುರಂದ ಅಮಲನ್ನು ನೀವು ಒಮ್ಮೆ ಅನುಭವಿಸಿ. ಯಾಕೆಂದರೆ ಇದು ಆಂದ್ರದ ಹೊಟ್ಟೆಯೊಳಗಿರುವ ಕೇರಳ. ನಾವಿರುವುದು ೧+೧ ದ ಜಮಾನದಲ್ಲಿ ಅಲ್ಲವೇ?       


ಚಲಂ: ಇವನೊಂದು ರೀತಿ ಅಜೂಬಾ


ಚಲಂ: ಇವನೊಂದು ರೀತಿ ಅಜೂಬಾ

 

                                                                                                
ಗ ಸಾಹಿತ್ಯಕ್ಕೆ ತನ್ನ ಸಾಂಪ್ರದಾಯಿಕ ನಡಿಗೆಯಲ್ಲಿ ವಿಶ್ವಾಸವಿಲ್ಲ. ನವೋದಯಕ್ಕೆ, ಪ್ರಗತಿಶೀಲ, ನವ್ಯ, ಬಂಡಾಯದಂತಹ ಸಾಹಿತ್ಯಿಕ ಸಂದರ್ಭಗಳಲ್ಲಿಯೂ ಒಂದೊಂದು ನಿರ್ದಿಷ್ಠ ಸಾಹಿತ್ಯ ಪ್ರಕಾರ ಬರಹಗಾರನ ಅಭಿವ್ಯಕ್ತಿಗೆ ಸರ್ವಸಮ್ಮತ ದಾರಿಯಾಗಿ ಬೆಳೆದಿರುವುದನ್ನು ನಾವು ನೋಡುತ್ತೇವೆ. ಈಗ ಹಾಗಲ್ಲ, ಪ್ರಕಾರ ನೆಪ ಮಾತ್ರ. ಇನ್ನೂ ಮುಂದು ಹೋಗಿ ಕೆಲವು ಸೃಜನಶೀಲರಂತೂ ಪ್ರಕಾರದೊಳಗೊಂದು ಪ್ರಕಾರ, ಅನೇಕ ಪ್ರಕಾರಗಳನ್ನು ಸೇರಿಸಿ ಒಂದು ಪ್ರಕಾರದಂತಹ ಪ್ರಯೋಗಶೀಲತೆಗೆ ತೊಡಗಿರುವುದನ್ನು ನಾವು ಗಮನಿಸಿದ್ದೇವೆ. ಎಲ್ಲವೂ ಸಂಕೀರ್ಣ. ಬಾಹ್ಯದ ಈ ಸಂಕೀರ್ಣತೆ ಕೆಲವೊಮ್ಮೆ ನಮ್ಮ ಆಂತರಿಕ ತೊಳಲಾಟದ ಪ್ರತಿರೂಪವೇ ಆಗಿರುತ್ತದೆ. ಷೇಕ್ಸ್‌ಪಿಯರ್ ಇದನ್ನೇ ಕೇಳಲಿಲ್ಲವೇ? “”ಯುದ್ಧ ಒಳಗೆ ನಡೆಯದ ಹೊರತು ಹೊರಗೆ ಘೋಷಣೆಯಾಗುವುದುಂಟೇ?”  ನನ್ನ ಈ ಯಾವ ಮಾತುಗಳು ಹೊಸದೆಂದುಕೊಳ್ಳುವುದಿಲ್ಲ ನಾನು,ಪ್ರಕಾರಗಳ ಪರಿಮಿತಿಗಳನ್ನು ಬಹಳ ಹಿಂದೆಯೇ ಕ್ರಮಿಸಿ ಹೋದವರು ರವೀಂದ್ರನಾಥ  ಠ್ಯಾಗೋರ್. ಆದಾಗ್ಯೂ ಐದಾರು ದಶಕಗಳ ಒಟ್ಟು  ದಾರಿಯಲ್ಲಿ ಕನ್ನಡ ಸಾಹಿತ್ಯ ಒಂದಷ್ಟು ಸಾಂಪ್ರದಾಯಿಕ ದಾರಿಯಲ್ಲಿಯೇ ಸಾಗಿ ಬಂದು ಈಗ ತೀರ ಭಿನ್ನವಾಗುತ್ತಿರುವ ಲಕ್ಷಣಗಳನ್ನು ಸ್ಪಷ್ಟವಾಗಿಸುತ್ತದೆ.

               ಕಾಲದ ಈ ಸಂಕೀರ್ಣತೆಯ ಹೊಕ್ಕಳಲ್ಲಿ ಹುಟ್ಟಿದ ನನ್ನ ಸಮಕಾಲೀನ ಅನೇಕ ಗೆಳೆಯ-ಗೆಳತಿಯರಿದ್ದಾರೆ. ಇವರೆಲ್ಲ ಹಿಂದಣ ಅನಂತದ ಪರಿಕಲ್ಪನೆಯೊಂದಿಗೆ ವರ್ತಮಾನದ ವೈಚಿತ್ರ್ಯಕ್ಕೆ ಮನಸೋತವರು ಮತ್ತು ಮುಖಾಮುಖಿಯಾದವರು. ಬೇಕೆಂದರೆ ಒಂದಿಷ್ಟು ಹೆಸರುಗಳನ್ನು ಸೂಚಿಸಬಹುದು. ವೀಣಾ ಬನ್ನಂಜೆ, ರವಿ ಬೆಳಗೆರೆ,ಜೋಗಿ, ಜ.ನಾ.ತೇಜಶ್ರೀ, ರಾಜೇಶ್ವರಿ ಎನ್, ಚಲಂ ಮತ್ತೆ ಹತ್ತಾರು. ಇವರು ಯಾವ ಪ್ರಕಾರದಲ್ಲಿ ಬರೆಯುತ್ತಾರೆ? ಏನನ್ನು ಬರೆಯುತ್ತಾರೆ? ಎನ್ನುವುದಕ್ಕಿಂತ ಮನಸೋಲುವಂತೆ ಬರೆಯುತ್ತಾರೆ ಎನ್ನುವುದು ಮುಖ್ಯ. ಬರಹಕ್ಕಾಗಿ ಬರೆಯುತ್ತಾರೆ ಎನ್ನವುದು ಇನ್ನೂ ಮುಖ್ಯ. ಮತ್ತೂ ವಿಶೇಷ ಎನಾದರೂ ಇದೆಯಾ? ಎಂದು ಕೇಳಿದರೆ ಸ್ವಾನುಭವ ಮತ್ತು ಸಮಕಾಲೀನ ಸಂದರ್ಭಗಳಿಂದ ಆರೊಗ್ಯಕರ ಅಂತರದಲ್ಲಿ ನಿಂತು ಬರೆಯುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ. ನಿಮ್ಮ ಸಾಹಿತ್ಯಿಕ ಮಾನದಂಡಗಳು, ವಿಮರ್ಶೆ, ಪ್ರಚಾರ ಮತ್ತು ಪ್ರಶಸ್ತಿಗಳು ಇಂತಹ ಕೆಲವು ಲೇಖಕರನ್ನು ಭಾದಿಸುವುದಿಲ್ಲ.ಭಾದಿಸಬಾರದು ಎಂದೇ ನನ್ನ ಆಶಯ. ಈ ಗುಂಪಿನಲ್ಲಿ ಈಗ ನಾನು ಮಾತನಾಡಲು ಕುಳಿತಿರುವುದು ಈ ಚಲಂ ಎಂಬ ‘ಚಂಚಲ‘ನ ಕುರಿತು.
                    ಇವನೊಂದು ರೀತಿ ಅಜೂಬಾ. ಹಾಸನದ ಯಾವುದೋ ಸಭೆ, ರಸ್ತೆ, ಬಸ್ಟ್ಯಾಂಡು, ಮುಂಗಟ್ಟಿನ ಮುಂದೆ ಧುತ್ತನೆ ಭೇಟ್ಟಿಯಾಗಿ ತಟ್ಟನೆ ಮರೆಯಾಗುತ್ತಾನೆ. ಸದಾ ಸಮಯದ ಕೊರತೆಯಿಂದ ಕಕ್ಕಾಬಿಕ್ಕಿಯಾದ ಹುಡುಗ. ಹಾಗಂತ ಈತ ನಮ್ಮ ರಂ.ಶ್ರೀ.ಮುಗಳಿಯಂತೆ ಅಥವಾ ಎಮ್.ಕೆ.ನಾಯಕರಂತೆ ಎಲ್ಲವನ್ನೂ ಅವಧಿಗೆ ನಿಗದಿತಗೊಳಿಸಿದವನು ಎಂದುಕೊಳ್ಳಬೇಡಿ. ಮಹಾ ಸೋಂಬೇರಿ. ಮತ್ತೇ ಕೆಲವೊಮ್ಮೆ ಭೂಮಿ-ಆಕಾಶವನ್ನು ಒಂದು ಮಾಡಿ ಹಾರಾಡಿ ಬಿಡುವ ಕನಸು. ಇವನ ತಲೆ ಎನ್ನುವುದು ಮೂಡುಬಿದಿರೆಯ ಗಿರಿಗಿಟ್ಲೆಯ ಪಾತ್ರೆಯಂತೆ. ಒಟ್ಟಾರೆ ಅದರೊಳಗೆ ಏನೇನೋ ಹಾಕಿ ತಿರುವಿ ಕೈಗೊಂದು ಪೊಟ್ಟಣ ಕೊಟ್ಟುಬಿಡುತ್ತಾನೆ.   ತಿಂದವರಿಗೆ ಪ್ರಾಣಾಪಾಯವೇನೂ ಇಲ್ಲ. ಯಾಕೆಂದರೆ ಈತ ಒಂದು ರೀತಿಯ ವಿಚಿತ್ರ ಭರವಸೆ, ನಂಬಿಕೆ ಮತ್ತು ಹೊಸತನ. ಈತನನ್ನು ಕಂಡಾಗಲೆಲ್ಲಾ ನನ್ನನ್ನು ಕಾಡಿದ ಪ್ರಶ್ನೆ ,ನನಗೆ ಮುಪ್ಪಾಯಿತೇ? ಯಾವ ಕ್ಷಣದಲ್ಲಿಯೂ ಯಾವ ವೃತ್ತಿ/ವ್ಯಕ್ತಿ/ವಿಚಾರ ಮತ್ತು ಸ್ಥಳಗಳನ್ನು ಧಿಕ್ಕರಿಸಿ ಓಡಿಹೋಗಿ ಏನನ್ನೂ ಮಾಡಬಲ್ಲೆ ಎನ್ನುವ ಛಲದ ಮಾತನಾಡುವ ಈ ಚಲಂ, ನನಗೆ ಈ ಕಾರಣಕ್ಕಾಗಿಯೇ ಕಾಡುತ್ತಾನೆ.
                    ಯಾರು ಏನಾದರೂ ಹೇಳಿಕೊಳ್ಳಲಿ, ವಿಕ್ಷಿಪ್ತತೆಯ ಬೇರುಗಳನ್ನು ಕಳೆದುಕೊಂಡ ಬರಹಗಾರ ತನ್ನ ಬರಹದಲ್ಲಿ ಬೆಂಕಿಯ ಹೂಗಳನ್ನು ಅರಳಿಸುವುದಿಲ್ಲ. ಇಂತಹ ಹೂಗಳಿಲ್ಲದ ಬರಹ ಬರಹವೇನೋ ಸತ್ಯ, ಆದರೆ ಬದುಕಿಗೆ ಅದರ ಕೊಡುಗೆ ಮಾತ್ರ ಶೂನ್ಯ. ತುಂಬಿ ಹರಿಯುವ ಹೊಳೆಯಲ್ಲಿ ಬಿದ್ದ ಹೆಣಗಳಂತೆ ಬರುವ ಲೇಖಕ ಮತ್ತು ಪುಸ್ತಕಗಳಿಗೇನೂ ಇಂದು ಕೊರತೆಯಿಲ್ಲ. ಆದರೆ ಈ ವಿಕ್ಷಿಪ್ತತೆಯನ್ನು ಅನವರತವೂ ಕಾಯ್ದುಕೊಂಡು ಹೊಸದಕ್ಕಾಗಿ ತಹತಹಿಸುತ್ತಿರುವ ಲೇಖಕರ ಕೊರv  ಖಂಡಿತವಾಗಿಯೂ ಇದೆ. ‘ಜನತಾ ಮಾಧ್ಯಮ‘ದಂತಹ ಸಣ್ಣ ಪತ್ರಿಕೆಯಲ್ಲಿ ಒಂದು ಓದಿನ ಮನೆಯನ್ನು ಕಟ್ಟಿಕೊಂಡು ಮಾತನಾಡುವ ಚಲಂ ಇತ್ತೀಚಿಗೆ ನನ್ನ ಸ್ನೇಹದ ತೆಕ್ಕೆಗೆ ಬಂದ ಒಬ್ಬ ವಿಕ್ಷಿಪ್ತ. ಅವನಿಗೆ ಸಮಾಧಾನವಿಲ್ಲ.  ಹುಡುಕಾಟದ ಭಯಾನಕ ಹಸಿವು. ತೇಜಸ್ವಿಯೊಬ್ಬರೇ  ಈತನನ್ನು ಸಮಾಧಾನವಾಗಿಸುವಲ್ಲಿ ಯಶಸ್ವಿಯಾದವರು. ಸಧ್ಯ ನನ್ನ ಬರಹವನ್ನು ಮೋಹಿಸುತ್ತಿರುವುದಂತೂ ಸತ್ಯ. ಆದರೆ ನಂಬಿರಲಿಕ್ಕಿಲ್ಲ ಎನ್ನುವ ಗುಮಾನಿ ನನಗೂ ಇದೆ. ಈ ಗುಮಾನಿ ಜೀವಂತವಾಗಿರುವವರೆಗೆ ನಾವು ಒಬ್ಬರಿನ್ನೊಬ್ಬರಿಗೆ ಜೇಡದಂತೆ ಬಲೆ ನೇಯ್ದುಕೊಳ್ಳುವುದಿಲ್ಲ.
                    ನಾನು ಈತನ ‘ಪುನರಪಿ‘ಯನ್ನು ಓದಿದ್ದೇನೆ.ಇದನ್ನು ಕುರಿತು ಏನು ಹೇಳಬೇಕೆನ್ನುವುದು ಒಂದು ಪ್ರಶ್ನೆಯೇ. ಕಥಾ ಸಂಕಲನ ಎಂದು ಚಲಂ ಹೇಳಿರುವುದರಿಂದ,  ಇಲ್ಲಿಯ ವಿಚಾರಗಳು ಕಥೆಯ ಚೌಕಟ್ಟಿನಲ್ಲಿ ಅನಾವರಣಗೊಂಡಿದ್ದರಿಂದ ಇವು ಕಥೆಗಳು ಎಂದು ಹೇಳಬಹುದು. ಆದರೆ ಗೊತ್ತಿರಲಿ, ಕಥೆಯ ಶಿಸ್ತಿಗೆ ಸಂಪೂರ್ಣವಾಗಿ ಒಳಪಟ್ಟವು ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸುಳಿದು ಹೋಗುವ ಮಹತ್ವದ ಪಾತ್ರಧಾರಿ ಚಲಂನೇ. ಆದರೆ ಲಂಕೇಶರಂತೆ ಕಥೆಯೊಳಗಿನ ಪಾತ್ರಗಳ ಹೆಗಲಿಗೆ ಹೊರೆಯಾದವನಲ್ಲ. ಕಲ್ಪನೆಯ  ಸರಳ ಬೆರಿಕೆಯೊಂದಿಗೆ ವಾಸ್ತವದ ಗಂಭಿರತೆಯನ್ನು ಸ್ಪಷ್ಟಪಡಿಸುವ ಕ್ರಿಯೆ ಈ ಕಥೆಗಳಲ್ಲಿ ನಿರಂತರವಾಗಿ ನಡೆದಿದೆ. ಆಕಾಶಕ್ಕೆ ಏಣಿ ಕಟ್ಟುವ ಬಹುಪಾಲು ಪಾತ್ರಗಳಿಗೆ ವಾಸ್ತವದ ಬಾಲಂಗೋಚಿಯಂತೆ ಜೊತೆಯಾಗಿರುವ ಲೇಖಕ ಯಾವುದನ್ನೂ ಬದುಕಿನ ವ್ಯಾಪ್ತಿ ಪ್ರದೇಶದಿಂದ ಹೊರತಾಗುವುದನ್ನು ತಪ್ಪಿಸುತ್ತಾನೆ. ಈ ಕಾರಣಕ್ಕಾಗಿ ಚಲಂ ಒಬ್ಬ ಕಥೆಗಾರನಾಗಿ ನನಗೆ ಪ್ರೀತಿಯವನಾಗುತ್ತಾನೆ.
                    ಇಡೀ ಸಂಕಲನದಲ್ಲಿ ನನ್ನನ್ನು ವಿಚಿತ್ರವಾಗಿ ಕಾಡಿದ ಕಥೆ ‘ದೇವರ ಹಳ್ಳಿಯ ಸಾವಿನ ನ್ಯಾಯ‘. ಇಂತಹ ಒಂದು ಕಲ್ಪನೆಯೇ ವಿಚಿತ್ರ. ಇದನ್ನು ಚಲಂ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಕನ್ನಡಕ್ಕೆ ನಲವತ್ಮೂರು ಕೃತಿಗಳನ್ನು  ಬರೆದು ಸುರಿದ ನನ್ನ ಬುದ್ಧಿಗೆ ಇಂತಹ ಒಂದು ಯೋಚನೆಯೇ ಬರಲಿಲ್ಲವಲ್ಲಾ? ಎಂದು ನಾನು ಮತ್ಸರಗೊಂಡಿದ್ದೇನೆ. ಈ ಕಥೆಯನ್ನು ಕುರಿತು ಅಥವಾ ಅದರ ತಂತ್ರ, ವಿಚಾರ, ವಿನ್ಯಾಸ ಹಾಗೂ ವಸ್ತುಗಳನ್ನು ಕುರಿತು ನಾನು ಮಾತನಾಡಿದರೆ ಇದುವರೆಗಿನ ನಮ್ಮ ವಿಮರ್ಶಕ ಪುಂಡರು ಮಾಡಿದ ಬುದ್ಧಿಗೇಡಿತನವನ್ನೇ ನಾನೂ ಪ್ರದರ್ಶಿಸಿದಂತಾದೀತು ಎಂದು ಕೈ ಬಿಟ್ಟಿದ್ದೇನೆ. ಕಥೆಯೋ, ಕವಿತೆಯೋ ಯಾವುದೋ ಒಂದು ಬರಹವೋ ,ಕೂಸಿನಂತೆ  ಬಳಿ ಬಂದಾಗ ಸುಮ್ಮನೆ ಅಪ್ಪಿಕೊಳ್ಳಬೇಕು. ಆ ಅಪ್ಪಿಕೊಳ್ಳುವಿಕೆಯೇ ಅದಕ್ಕೆ ಸಲ್ಲುವ ದೊಡ್ಡ ‘ಅಪ್ರಿಸಿಯೇಶನ್‘. ಅದನ್ನು ಬಿಟ್ಟು ಅದರ ಸಿಂಬಳ ಮೂಗು, ಒದ್ದೆ ಚಡ್ಡಿಯ ಕುರಿತು ವಿಮರ್ಶೆಗಿಳಿಯಬಾರದು. ಹಾಗೊಂದು ವೇಳೆ ನಾವು ಇಳಿಯುವುದಾದರೆ ಹಸೂಗೂಸಿನ ಹಾಲು ವಾಸನೆಯ ಉಸಿರ ಹಿತ  ಕಳೆದುಕೊಂಡ ಪಿಂಡಗಳಾಗುತ್ತೇವೆ.ಚಲಂನ ‘ದೇವರ ಹಳ್ಳಿಯ ಸಾವಿನ ನ್ಯಾಯ‘ ಎಂಥ ಕಥೆ ಅಂತೀರಾ. ‘ಪುನರಪಿ‘ಯನ್ನು ಇಡೀಯಾಗಿ ಓದುತ್ತಿರೋ ಇಲ್ಲವೋ ಈ ಕಥೆಯನ್ನು ಮಾತ್ರ ಬಿಡಬೇಡಿ.
                    ‘ಬೇಗೂರಿನ ಬಾನಗಡಿಗಳು‘ ನಮ್ಮ ಸಮಾಜ ನಿಷ್ಠ ಶ್ರದ್ಧೆಗೆ ಸಿಗುವ ಗೆಲುವನ್ನು ಕುರಿತು ಬರೆದಾದುದು. ನವೋದಯದವರ ಶ್ರದ್ಧೆ , ಪ್ರಗತಿಶೀಲರ ಹೋರಾಟ ಎರಡನ್ನೂ ಸಮೀಕರಿಸಿಕೊಂಡು ಸಮಾಜಮುಖಿಯಾಗಿ ಹರಿಯುವ ಯುವ ಪಡೆಯೊಂದು ಬೇಗೂರಿಗೆ ಬೆಳಕಾಗುವ ಪರಿಯೇ ಈ ಕಥೆಯ ಹರವು. ಅತ್ಯಂತ ಸರಳವಾಗಿ ನಿಮ್ಮನ್ನು ಮುಟ್ಟುತ್ತದೆ. ಆದರೆ ‘ಕಥೆಗಾರನ ಬಲಿ‘ ಕಥೆ ಹಾಗಲ್ಲ. ಈ ಇಡೀ ಕಥೆಯೇ ಒಂದು ಕವಿತೆ. ಕವಿತೆಯನ್ನು ಗೆಲ್ಲಿಸುವುದೇ ಕಥೆಗಾರನ ಗುರಿ. ಹೆಣ್ಣಿನ ವ್ಯಾವಹಾರಿಕತೆಯಿಂದ ಹೊರಗಿಟ್ಟು ಕವಿತೆಯನ್ನು ನೋಡಬೇಕೆನ್ನುವುದು ಆತನ ಹಟ. ಕವಿತೆಯನ್ನು ಹೆಣ್ಣಿಗೆ ಆರೋಪಿಸುವವರ ಸಾಲಿನಲ್ಲಿ ಈತ ಇಲ್ಲ -

“ನನ್ನ ಎದೆಯ ಮೇಲೆ
ನಿನ್ನ ಗೋರಿಯ ಕಟ್ಟಿ
ತಾಜಮಹಲ್ ಎಂದು ಬೀಗುವ
ನಾನು ಜಗತ್ತಿನ ದೊಡ್ಡ ಮೂರ್ಖ”
                     ಎಂದು ಹೇಳುವ ಮೂಲಕ ಕಥೆಗಾರ ಏನನ್ನು ಧಿಕ್ಕರಿಸುತ್ತಿದ್ದಾನೆ ಎಂದು ನಾನು ವಿವರಿಸಬೇಕಿಲ್ಲ. ಈ ಕಥೆಯ ಒಂದೇ ದೃಶ್ಯ- ತಾನು ಭಯಾನಕವಾಗಿ ಪ್ರೀತಿಸುವ ಇಂಚರ ಎನ್ನುವ ಹುಡುಗಿಯನ್ನು ಕುರಿತು ಹುಡುಗ ಕೇಳುತ್ತಾನೆ ‘ನಾನು ಪತ್ರಿಕೆಗಳಲ್ಲಿ ತಣ್ಣನೆಯ ರಕ್ತದ ಹಂತಕರನ್ನು ಕುರಿತು ಓದಿದ್ದೆ. ನಿನ್ನ ಮೈಯಲ್ಲೂ ಆ ರಕ್ತ ಹರಿಯುತ್ತಿದೆಯಾ?‘ ಇದು ಹೆಣ್ಣಿನ ನವಿರತೆಯೊಳಗೆ ಹುದುಗಿಕೊಂಡ ಒಂದು ಮುಖಕ್ಕೆ ಕಥೆಗಾರನ ಅದ್ಭುತ ಕನ್ನಡಿ.
                    ‘ಉದ್ದನೆಯ ಜಡೆಯ ಹುಡುಗಿ‘ ಮತ್ತು ‘ಶಾರದಾನ್ವೇಷಣೆ‘  ತುಂಬಾ  ಶಿಥಿಲ  ರಚನೆಯೊಳಗೆ ಒಡಮೂಡಿದ್ದರೂ ಕಥೆಯೊಂದು ಮುಕ್ತಾಯದಲ್ಲಿ ಬಿಚ್ಚಿಡಬೇಕಾದ ಅಚ್ಚರಿಗೇನೂ ಕೊರತೆಯಿಲ್ಲ. ಲೇಖಕ ಹರಳುಗಟ್ಟದ ವಿಚಾರವಸ್ತುಗಳ ಸುತ್ತ ಸ್ವಲ್ಪ ಹೆಚ್ಚು ಸುತ್ತಾಡಿದ್ದೇ ಈ ಶಿಥಿಲತೆಗೆ ಕಾರಣ. ಕಥೆಯ ಸೂಕ್ಷ್ಮತೆಯೇ ಇದು. ಉದ್ದೇಶವಿಲ್ಲದ ಕಾಡುಹರಟೆಗೆ ಅಲ್ಲಿ ಅವಕಾಶವಿರುವುದಿಲ್ಲ.
‘ಉದ್ದನೆಯ ಜಡೆಯ ಹುಡುಗಿ‘ ಕೊನೆಯಲ್ಲಿ ಬರುವ ‘ ಉದ್ದನೆಯ ಗ್ಲಾಸಿನಲ್ಲಿ ಬಿಯರ್ ಉಕ್ಕುತ್ತಿತ್ತು‘ ಎನ್ನುವ ವಾಕ್ಯವೇ ಇಡೀ ಕಥಾನಕದ ಉದ್ದೇಶ. ಇದಕ್ಕೆ ಆರು ಪುಟಗಳ ವ್ಯಾಪ್ತಿ ಬೇಕಿರಲಿಲ್ಲ. ಪದ ಕಡಿಮೆಯಾದಷ್ಟು ಕಥೆಯ ಮೆರುಗೇ ಬೇರೆ.  ‘ಶಾರದಾನ್ವೇಷಣೆ‘ ಯೂ ಅಷ್ಟೇ. ಈ ಕಥೆಯ ಕೊನೆಯಲ್ಲೊಂದು ಅಚ್ಚರಿಯಿದೆ. ಕಥಾನಾಯಕ ಅಕ್ಷಯನಿಗೆ ತನ್ನ ತಮ್ಮ ಅರುಣನೇ ತಾನು ಹುಡುಕುತ್ತಿರುವ ಹುಡುಗಿಯನ್ನು ಒಡಿಸಿಕೊಂಡು ಹೋದ ವಿಚಾರ ಗೊತ್ತಿಲ್ಲ. ಇದೊಂದು ವಿಷಾದ, ಈ ವಿಷಾದಕ್ಕೆ ಏಳು ಪುಟಗಳ ವಸ್ತು-ವಿಚಾರಗಳ ವಿವರಣೆ ಭಾರವಾಗಿದೆ. ವಿಷಾದದ ಈ ಘಟ್ಟ ಮುಟ್ಟುವುದರೊಳಗಾಗಿ ಕಥೆಗಾರನಿಗೆ ತನ್ನ ದಾರಿಯ ಸ್ಪಷ್ಟ ಹೊಳಹು ಸಿಗಬೇಕಾಗಿತ್ತು, ಅದೂ ಆತನಿಗೆ ದಕ್ಕದೆ ಹೋಗಿದೆ. ಒಂದಷ್ಟು ವಿವರಣೆಗಳನ್ನು ಕತ್ತರಿಸಿದರೆ ಇವೆರಡು ಗಮನಾರ್ಹ ಶಿಲ್ಪಗಳಾಗಬಹುದಾಗಿತ್ತು.
                    ನನ್ನನ್ನು ಆವರಿಕೊಂಡ ಕಥೆಗಳಲ್ಲಿ ಚಲಂ ಅವರ ‘ಬಿಳಿ ಎಕ್ಕದ ಗಿಡದ ಮದುವೆ‘ ಮಹತ್ವದ್ದು. ಮದುವೆ, ಅದಕ್ಕೊಂದು ಮಹೂರ್ತ, ಮನುಷ್ಯನ ವಯೋಸಹಜವಾದ ಈ ಆಸೆಗಳೊಂದಿಗೆ ಬ್ರೋಕರ್‌ಗಳು ನಡೆಸುವ ವ್ಯವಹಾರ. ನಿರಂತರ ಇದ್ದು ಮನುಷ್ಯನ ಯಾವ ನಿಲುವಿಗೂ ನೆಲೆಯಾಗದ ದೇವರು, ಕೈಗೆಟುಕದೆಯೂ ಸಂಸಾರದ ಕೈ ಸುಡುವ ನಕ್ಷತ್ರಗಳು, ಇವುಗಳ ಕುರಿತ ಕಥೆಗಾರನ ಹತಾಶತೆ, ವ್ಯಂಗ್ಯ, ವೈಚಾರಿಕತೆ, ಎಲ್ಲವೂಗಳು ಎಷ್ಟೊಂದು ಅದ್ಭುತವಾಗಿ ಈ ಕಥೆಯಲ್ಲಿ ಮೈ ಹಾಸಿವೆ. ಇದರ ವ್ಯಾಪ್ತಿಯೇ ಅಷ್ಟು ದೊಡ್ಡದು. ಚಲಂ ಇಲ್ಲಿ ಇನ್ನೊಂದಿಷ್ಟು ಲಂಬಿಸಿದ್ದರೂ ಹಾನಿ ಇರಲಿಲ್ಲ . ಇಲ್ಲಿ ಒಂದು ಪ್ರಶ್ನೆ- ದೇವರೇ ಪ್ರಸಾದ ಕೊಡುವುದಾದರೆ ಜೋತಿಷಿ ಯಾಕೆ ಬೇಕು?  ಈ ಪ್ರಶ್ನೆಯೇ ಇಡೀ ಕಥೆಯ ಹುಡುಕಾಟ. ಜೋತಿಷಿಯ ಭವಿಷ್ಯ - ಹುಡುಗಿ ಹೋಗುವಲ್ಲಿ ಅತ್ತೆ ಇರಬಾರದು. ಇದು ಸಾಧ್ಯವೇ? ಇದನ್ನು ಸಾಧ್ಯವಾಗಿಸುವುದೇ ಜೋತಿಷ್ಯದ ಅಸ್ತಿತ್ವ. ರಾಜಕಾರಣ ಮತ್ತು ಜೋತಿಷ್ಯ ಮನುಷ್ಯರ ಆಶೆಗಳನ್ನೇ ಕುಡಿದು ಉನ್ಮಾದ ಅನುಭವಿಸುವ ಸಿದ್ಧಾಂತಗಳು. ಇಲ್ಲಿ ಮಲೆನಾಡಿಗರ ಬದುಕಿನ ಭಾಗವೇ ಆಗಿರುವ  ಶಿಕಾರಿಯ ಕುರಿತು  ಚಲಂ ಎಷ್ಟೊಂದು ಸೊಗಸಾಗಿ ಬರೆದಿದ್ದಾರೆ. ಇದು ನಾವು ಮರೆಯಲಾಗದ ಕಥೆ.
                    ಉಳಿದಂತೆ ‘ಬಿಡುಗಡೆ‘, ‘ಪುನರಪಿ‘ ,‘ಬೇಲಿ‘, ‘ಸರಿಯದ ಪರದೆ‘, ‘ಗುಣಶೇಖರನ ದಂಡಯಾತ್ರೆ‘ ಗಳಲ್ಲಿ  ‘ಪುನರಪಿ‘ ಓದುಗನನ್ನು ತಡೆದು ನಿಲ್ಲಿಸುತ್ತದೆ. ಇದು ಗಾಂಧಿ ವಿಚಾರಧಾರೆಯನ್ನು ಪ್ರತಿಪಾದಿಸುತ್ತಾ ಫ್ರೆಂಚ್‌ನ ಶ್ರೇಷ್ಠ ಕಥೆಗಾರ ಮೊಪಾಸನ ‘ವೈಯಲನ್ಸ್‘ ಕಥೆಯನ್ನು ನೆನಪಿಗೆ ತರುವ ಒಂದು ಸಿದ್ಧಾಂತ ಪ್ರಧಾನ ಕಥಾನಕ. ಕ್ಯಾಂಪಸ್ ರಾಜಕೀಯವೇ ಇದರ ಹರವು ಇದರ ವಿಚಾರಧಾರೆ. ಪತ್ರಿಕೆ ಮತ್ತು ಬಳಗದ ಗೆಲುವೇ ಇಲ್ಲಿಯ ಸಂದೇಶ. ಮನುಷ್ಯನ ಆಂತರಿಕ ಸೌಂದರ್ಯಕ್ಕೆ ಮಾರುಹೋಗುವ ಸೌಮ್ಯತೆ ಚಲಂ ಅವರ ‘ಕಥೆಗಾರನ ಬಲಿ‘ ಕಥೆಯಲ್ಲಿ ಬರುವ  ಇಂಚರಳಿಗೆ ಮುಖಾಮುಖಿಯಾಗಿ ನಿಲ್ಲುವ ಒಂದು ಸಮರ್ಥ ಪಾತ್ರ. ಜೀವನವನ್ನು  ಆಶಾದಾಯಕವಾಗಿ ನೋಡುವ ಅನೇಕ ವಿಚಾರ ಮತ್ತು ವ್ಯಕ್ತಿಗಳ ಒಂದು ದೊಡ್ಡ  ಗ್ಯಾಲರಿಯನ್ನು  ‘ಪುನರಪಿ‘ಯಲ್ಲಿ ಸೃಷ್ಟಿಸಿದ್ದಾರೆ.
                    ಒಟ್ಟು ಸಂಕಲನ ನಮ್ಮ ಸಮಾಜವನ್ನು ಕಟ್ಟಿಕೊಡುವ ಒಂದು ಅದ್ಭುತ ಪ್ರಯತ್ನ. ಕುತೂಹಲದ ಬೆನ್ನು ಹತ್ತಿ  ಓಡುವುದರಕ್ಕಿಂತಲೂ ಯಥಾರ್ತತೆಯ ಅನಾವರಣ ಕಥೆಗಾರನ ಉದ್ದೇಶ. ಕಥೆಗಾರ ಚಲಂನ ಬರಹ ಚಲಂನಂತೆಯೆ. ಕಾಡುಕಾಡಾಗಿ ಹರಿಯುವ ಈತನ ಕುರುಚಲು ಗಡ್ಡದ ಮುಖ ಪದ-ಪದಗಳಲ್ಲಿಯೂ ನಿಮಗೆ ಕಾಣಸಿಗುತ್ತದೆ. ವ್ಯಕ್ತಿಯಲ್ಲಿಯ ಸಮಷ್ಠಿಯ ಅನಾವರಣ. ಇದು ಒಂದು ಇನ್ನೊಂದರಿಂದ ವಿಭಜಿಸಿ ನೋಡಲಾಗದ ಕರ್ಮ. ಆದರೆ ಇದು ಅಥವಾ ಇಂತಹ ಬಾಂಧವ್ಯ ಎರಕ ಹೊಯ್ದುಕೊಂಡವರು  ತೀರ  ಅಪರೂಪ. ಕೆಲವರಿಗೆ ಸಾಹಿತ್ಯ ಬೇರೆ, ಬದುಕು ಬೇರೆ. ಕಲ್ಪನೆಯಲ್ಲಿ ಹುಟ್ಟಿ, ಪುಟಗಳಲ್ಲಿ ಅನಾವರಣಗೊಂಡು ರಂಜಿಸುವ ಬರಹ ಬಾಳುವುದಿಲ್ಲ. ಈ ಚಲಂ ಇಂತಹ ಲೇಖಕರ ಸಾಲಿನಲ್ಲಿ ಇಲ್ಲ ಎನ್ನುವುದೇ ಈ ಗೆಳೆಯನ ಗೆಲುವು. ಈಗಷ್ಟೇ ಕಥೆ ಶುರುವಾಗಿದೆ, ಈತ ಹೇಳಬೇಕಾದುದು  ಇನ್ನೂ ಬಹಳಷ್ಟಿದೆ.