Total Pageviews

Tuesday, September 30, 2014

ಕವಿ ಅಳಿದೂ, ಕವಿತೆ ಉಳಿಯುತ್ತದೆ.



     ಸ್ವಾಭಿಮಾನಿ ಕರ್ನಾಟಕ ವೇದಿಕೆ, ಪುಷ್ಪದೀಪಿಕಾ ಮತ್ತು ಕಣ್ವ ಪ್ರಕಾಶನ ಬೆಂಗಳೂರು - ಈ ಮೂರು ವೇದಿಕೆಗಳ ಆಶ್ರಯದಲ್ಲಿ ದಿನಾಂಕ: 28/09/2014 ರಂದು ಸಂಯುಕ್ತ ಕರ್ನಾಟಕದ ಪ್ರತಿ ಭಾನುವಾರ, ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗುವ ನನ್ನ ‘ಕಾವ್ಯಕ್ಕೆ ಉರುಳು’ ಅಂಕಣದ ಮೊದಲ ಭಾಗದ ಬಿಡುಗಡೆಯ ಸಮಾರಂಭ ಜರುಗಿತು. ಸರಿಯಾಗಿ 11 ಗಂಟೆಗೆ ಪ್ರಾರಂಭವಾದ ಸಮಾರಂಭ ಮಧ್ಯಾಹ್ನ 3.30 ರ ವರೆಗೂ ನಿರಂತರವಾಗಿ ನಡೆದುದು ಬೆಂಗಳೂರಿನಲ್ಲಿ ಒಂದು ಸಾಧನೆಯೇ ಸರಿ. ಯಾಕೆಂದರೆ ಬೆಂಗಳೂರಿಗರ ಪಾಲಿಗೆ ಒಂದು ಮಾತು ಸತ್ಯ. ಎಲ್ಲ ಇರುವ, ಸಿಗುವ ಬೆಂಗಳೂರಿನಲ್ಲಿ ತಣ್ಣಗೆ ಒಂದಿಷ್ಟು ನಿದ್ರೆ, ಮಾತು ಮತ್ತು ಪ್ರೀತಿಗೆ ಸಮಯ ಮಾತ್ರ ಇಲ್ಲ. ಹೀಗೆ ಸಮಯದ ತುಟಾಗ್ರತೆಯಿಂದ ನರಳುವ ಬೆಂಗಳೂರಿಗರನ್ನು ಕೂಡಿಹಾಕಿ ಕೂಡ್ರಿಸುವುದು, ಅದೂ ನಾಲ್ಕೂವರೆ ಗಂಟೆಗಳ ಕಾಲ! ಇದು ಪವಾಡವಲ್ಲದೆ ಮತ್ತೇನು?
      ಸಮಾರಂಭಕ್ಕೆ ಎಲ್ಲಕ್ಕೂ ಮೊದಲು ಬಂದವರು ಪ್ರೊ. ಚಂಪಾ, ಆನಂತರ ನನ್ನ ಕಾಲೇಜು ಶಿಕ್ಷಣ ಇಲಾಖೆಯ ಡೈರೆಕ್ಟರ್ ಡಾ. ಬಿ.ಎಲ್ ಭಾಗ್ಯಲಕ್ಷ್ಮಿ, ಇವರೊಂದಿಗೆ ಹರಟೆಯಲ್ಲಿ ಮಗ್ನನಾಗಿರುವಾಗ ಮೌನವಾಗಿ, ಮುಗ್ಧವಾಗಿ ಎಲ್ಲಿಂದಲೋ ನುಸುಳಿದ್ದ ಮಹಾ ಪುಸ್ತಕ ಮೋಹಿ ಡಾ. ಸಿದ್ಧಲಿಂಗಯ್ಯ ಸದ್ಧಿಲ್ಲದೆ ತಮ್ಮ ಪುಸ್ತಕ ಖರೀದಿಯ ಖುಷಿಯಲ್ಲಿ ವಿಹರಿಸುತ್ತಿದ್ದರು. ರಾತ್ರಿಯೆಲ್ಲ ಬಳ್ಳಾರಿಯ ಪ್ರವಾಸ ಮುಗಿಸಿಕೊಂಡು ಕಳೆದ ಒಂದು ವಾರದಿಂದ ಟೌನ್‍ಹಾಲ್ ಮುಂದೆ ಮುಷ್ಕರದಲ್ಲಿ ನಿರತರಿದ್ದೂ ಬಂದು ಸೇರಿದವರು ಕಾಮ್ರೆಡ್ ಡಾ. ಸಿದ್ಧನಗೌಡ ಪಾಟೀಲ, ಮತ್ತೆ ಬಂದವರು ಸರಕಾರಿ ವ್ಯವಸ್ಥೆಯ ಅದು ರಾಜ್ಯದ ಖಜಾನೆ ಇಲಾಖೆಯಲ್ಲಿದ್ದೂ ಪ್ರಭುತ್ವದ ವಿರುದ್ಧ ಗುಡುಗುವ ಪಾರದರ್ಶಕ ವ್ಯಕ್ತಿತ್ವ ಉಳಿಸಿಕೊಂಡಿರುವ ಶ್ರೀಮತಿ ಭಾಗ್ಯಲಕ್ಷ್ಮಿ ಬಂದರು.
     ಮುಂದುವರೆದಂತೆ, ಮುಂದಿನ ಚುನಾವಣೆಯ ಸ್ಪರ್ದಾಕಾಂಕ್ಷಿ, ಬೆಂಗಳೂರಿನ ಅನಿಕೇತನ ವೇದಿಕೆಯ ಅಧ್ಯಕ್ಷ ಮಾಯಣ್ಣ, ಸ್ವಾಭಿಮಾನದ ಖಜಾಂಚಿ ಗೆಳೆಯ ಗಂಗಾಧರ ಪಂಡಿತ್, ಕರ್ನಾಟಕ ರಾಜ್ಯ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರು, ಜಲಮಂಡಳಿ, ತನಿಖಾ ಇಲಾಖೆ, ಅಂಚೆ ಪ್ರಧಾನ ಕಛೇರಿಯ ಪ್ರಧಾನ ಅಧಿಕಾರಿ, ಬೆಂಗಳೂರು ಮಿರರ್ ಪತ್ರಿಕೆಯ ಸಂಪಾದಕರು ಹಾಗೂ ಬೀದರಿನಿಂದ ಬೆಂಗಳೂರುವರೆಗಿನ ಓದುಗ ಬಳಗ, ಬಹಳ ವರ್ಷಗಳಿಂದ ಬೆಂಗಳೂರು ನಿವಾಸಿಗಳಾದ ನನ್ನ ದೊಡ್ಡಪ್ಪ-ದೊಡ್ಡವ್ವ, ಮೈಸೆಮ್‍ದಲ್ಲಿ ಮಹತ್ವದ ಸ್ಥಾನದಲ್ಲಿರುವ ಸಹೋದರ ಉದಯ, ಮಗ ಶ್ರೀನಿಧಿ, ಮುಖ್ಯವಾಗಿ ಉದಯ ಟಿವಿಯ ಮಾಧ್ಯಮ ಮಿತ್ರರು, ದೂರದ ಗುಲ್ಬರ್ಗಾದಿಂದ ರೊಟ್ಟಿಗಳ ಬಾಕ್ಸ್‍ಗಳನ್ನು ಪ್ರೀತಿಯಿಂದ ತಂದ ಕವಿ ಗೆಳತಿ ಅನುಪಮಾ ಹೀಗೆ ಒಟ್ಟಾರೆ ಪ್ರೀತಿ ಮತ್ತು ಸಂಬಂಧಗಳ ಮಹಾ ಜಾತ್ರೆ ಈ ಸಮಾರಂಭ.
    ಪ್ರತಿ ಸಂಭ್ರಮದ ಮೇಲೂ ನೋವಿನ ಒಂದು ಸಣ್ಣ ಮೋಡ. ಇದೇ ದಿನ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಿರಿಯ ಕವಿ ಗೆಳೆಯ ಶಂಕರ ಕಟಗಿ, ಡಾ. ರಾಜೇಶ್ವರಿ ದೊಡ್ಡರಂಗೇಗೌಡ, ಇದೇ ವೇದಿಕೆಯಲ್ಲಿ ಒಂದೊಮ್ಮೆ ನನ್ನ ಪಕ್ಕದವರಾಗಿದ್ದ ಚಿಂತಕ ಅನಂತಮೂರ್ತಿಯವರ ನಿಧನದ ವಾರ್ತೆಗಳು, ನನ್ನ ಸಮಾರಂಭಗಳಲ್ಲಿ ಕಣ್ಣ ಕನ್ನಡಿಯಾಗಿರುತ್ತಿದ್ದ ಅನೇಕ ಗೆಳೆಯ-ಗೆಳತಿಯರು ಹಾಗೆ ತಲೆಯಲ್ಲಿ ಸುತ್ತುತ್ತಿದ್ದರೆ, ಮನದ ಮೂಲೆಯಲ್ಲಿ “ಜೋಕರ್” ಹಾಡುತ್ತಿದ್ದ –
ಕಲ್ ಖೇಲ ಮೇ, ಹಮ್ ಹೊ ನ ಹೊ
ಗರ್ದಿಶ್ ಮೆ ತಾರೆ ರಹೆಂಗೆ ಸದಾ
    ಅತ್ಯಂತ ಗಂಭೀರವಾಗಿದ್ದ ಸಮಾರಂಭವನ್ನು ಹಾಡ-ಹಡಗಿನಲ್ಲಿ ಹಗುರಾಗಿ ತೇಲಿಸಿಕೊಂಡು ಮೂರುವರೆ ಗಂಟೆಗಳ ಕಾಲದ ಕಡಲ ಯಾತ್ರೆಯನ್ನು ಸುಗಮಗೊಳಿಸಿದವರು ಉದಯ ಲಿಟಲ್ ಚಾಂಪಿಯನ್ಸ್‍ನ ಹೀರೋಗಳಾದ ಮಲ್ಲಿಕಾರ್ಜುನ ಹೂಗಾರ ಹಾಗೂ ಆತನ ಸಹೋದರ ಪುಟ್ಟರಾಜ. ಅವರಿಂದಾಗಿ ನಮ್ಮೊಂದಿಗೆ ಬಸವಣ್ಣ, ಸಿ.ಅಶ್ವಥ್, ಜಿ.ಎಸ್.ಎಸ್, ರಾಜಕುಮಾರ ಹೀಗೆ ನೂರಾರು ನೆನಪುಗಳ ಅನಾವರಣ ಭಾವ ತೀರದ ಪಯಣ.
   ನಿರಾಳವಾಗಿತ್ತು ಸಮಾರಂಭ. ಇದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದುದು ಶಂಕರ ಹೂಗಾರ ಅವರಿಗೆ. ಹಾಗೆಯೇ ಒಂದಿಷ್ಟು ಕಣ್ವ ಮತ್ತು ಸ್ವಾಭಿಮಾನಿ ಬಳಗಕ್ಕೂ ಕೂಡ. ಪ್ರಭುತ್ವ ಮತ್ತು ಪ್ರತಿರೋಧದ ಪರಂಪರೆಯನ್ನು ಬಿಚ್ಚಿಟ್ಟವರು ಡಾ.ಸಿದ್ದನಗೌಡ ಪಾಟೀಲ, ಅದೇ ರೀತಿಯಲ್ಲಿ ಉರಿ ಉರಿಯಾದ ಆಲೋಚನೆಗಳನ್ನು, ಬೆಂಕಿ ಹೂಗಳನ್ನು ತಮ್ಮ ಭಾಷಣದ ಮೂಲಕ ಹಾಸಿದವರು ಭಾಗ್ಯಲಕ್ಷ್ಮಿ, ಅಕ್ಷರ ಲೋಕದ ಅದ್ಭುತಗಳನ್ನು ತಬ್ಬಿ ಮಾತಾಡಿದವ ಗೆಳೆಯ ರಾಜು ಮಳವಳ್ಳಿ, ಕರುಳು ತುಂಬ ಕಳ್ಳು, ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ರೆ ಎಂಬ ಬೆಂಗಳೂರಿಗರ ಸಂಡೇ ಸಿಸ್ಟಮ್ ಬದಲಾಗಬೇಕಿದೆ ಎಂದು ಹಂಬಲಿಸಿದ. ನನ್ನ ತಲ್ಲಣ, ತಾಕಲಾಟ ಪದ ವಿಶ್ಲೇಷಣೆಯನ್ನು ಕವಿತೆಯಂತೆ ಸಂಭ್ರಮಿಸಿದವರು ಚಂಪಾ, ಬೆಂಬಲಿಸಿದವರು ಬೆಂಗಳೂರಿನ ಮಾಜಿ ಮೇಯರ್ ಮಗಳು, ಕಾಲೇಜು ಇಲಾಖೆಯ ನಿರ್ದೇಶಕಿ ಡಾ. ಬಿ.ಎಲ್.ಭಾಗ್ಯಲಕ್ಷ್ಮಿ. ಎಲ್ಲದಕ್ಕೂ ಕಳಸವಿಟ್ಟಂತೆ “ಬದುಕಿನಲ್ಲಿ ಪುಸ್ತಕಗಳನ್ನು ಕೊಂಡೋದಿ, ಲೇಖಕನ ಫೋನ್ ಸಂಖ್ಯೆಗಾಗಿ ಅವರಿವರನ್ನು ಸಂಪರ್ಕಿಸಿ, ಪ್ರಥಮವಾಗಿ ನಾನು ಮಾತಾಡಿದ್ದು ರಾಗಂ” ರನ್ನು ಎಂದು ಅಭಿಮಾನಿಸಿ, ಸಂಭ್ರಮ ಪಟ್ಟವರು ಸಿದ್ಧಲಿಂಗಯ್ಯ. ದೊಡ್ಡವರ ಮನಸ್ಸು ದೊಡ್ಡದಾಗಿರುತ್ತದೆ, ಅವರ ಮಾತೂ ಕೂಡ ಎನ್ನುವುದಕ್ಕೊಂದು ಸಾಕ್ಷಿ ಇದು.
 
   ರಾತ್ರಿ ಕವಿಯತ್ರಿ ಸುಜಾತಾ ವಿಶ್ವನಾಥ, ಅಂತರ್ ರಾಷ್ಟ್ರೀಯ ಸಾಫ್ಟ್‍ವೇರ್ ಕಂಪನಿಯಲ್ಲಿದ್ದುಕೊಂಡು ಬೆಂಗಳೂರಿನ ಯುವಕ-ಯುವತಿಯರು ನಮ್ಮ ವಚನಕಾರರ ಗೆಳೆಯ-ಗೆಳತಿಯರಾಗಬೇಕು, ಅದನ್ನು ನಿಮ್ಮ ಭಾಷಣ ಮಾಡುತ್ತದೆ., ಕಾರಣ ನವೆಂಬರ್ ಎರಡನೇ ಶನಿವಾರ ರಾಜಾಜಿನಗರದ, ಬಸವೇಶ್ವರ ಕಾಲೇಜಿನ ಸಂಜೆ ಬೆಳದಿಂಗಳಲ್ಲಿ ನನ್ನ ‘ನರಸಾಯದ ಸಖಿ-ಸಾಕಿ’ ಅಕ್ಕಮಹಾದೇವಿಯ ಕುರಿತು ಮಾತನಾಡಿಸಲು ದುಂಬಾಲು ಬಿದ್ದ ರೇಣುಕಾಪ್ರಸಾದ್, ‘ಕಾವ್ಯಕ್ಕೆ ಉರುಳಿ’ನ ಭಾಷೆಯ ಮೋಹಕ್ಕೆ ಬಿದ್ದ ಕನ್ನಡದ ಹಿರಿಯ ನಟರೂ, ಅರ್ಜುನ್‍ಸರ್ಜಾ ಅವರ ಮಾವನವರೂ ಆದ ನಟ ರಾಜೇಶ್ ಎಲ್ಲ ಒಂದು ಪ್ರವಾಹ.
ರಾತ್ರಿಯಾಗಿದೆ, ಈಗ ನಿಶ್ಯಬ್ದ. ನಾನು-ರಾತ್ರಿ-ಬಿಸಿಹಾಲು ಸಕ್ಕರೆಯ ಸಂಬಂಧ. ನಾವಿಬ್ಬರೂ ಮಾತನಾಡುತ್ತಲೇ ಇರುತ್ತೇವೆ. ಬಾದಾಮಿಯ ಕವಿ ಮಿತ್ರನೊಬ್ಬನ ಸಾಲುಗಳು ನೆನಪಾಗುತ್ತಿವೆ

ಪಠ್ಯ ಪಾಠವಿಲ್ಲ, ಗೋಡೆಗಳಿಲ್ಲ, ಮೌನವೇ ಎಲ್ಲ.
ಅಸಲಿಗೆ ಅದರೆದುರು ನಾನೇ ಇಲ್ಲ
ಅದು ಕಲಿಸುತ್ತದೆ, ನಾನು ಕಲಿಯುತ್ತಿದ್ದೇನೆ.
   ಸಭೆ ಮುಗಿಸಿ ನಾನು ಮನೆಗೆ ಬರುತ್ತೇನೆ, ಲೋಕದ ಚಿಂತೆ-ಸಂತೆ ಮುಗಿಸಿದ ಗೆಳೆಯ ಶಂಕರ ಕಟಗಿಯ ಸಂಪಿಗೆ ತಾಯವ್ವನ ಹೆಣ ರಾಜಧಾನಿಯಿಂದ ಹಳ್ಳಿಗೆ ಹೊರಡುತ್ತದೆ. ಕವಿ ಅಳಿಯುತ್ತಾನೆ, ಕವಿತೆ ಉಳಿಯುತ್ತದೆ.
ಟೂಟ್ ಗಯಿ ಮರ್ಕತ್ ಕಿ ಪ್ಯಾಲಾ
ಖಾಲಿ ಹೋಗಯಿ ಮಧುಶಾಲಾ

Tuesday, September 23, 2014

ಮನುಷ್ಯರನ್ನು ಬಿಟ್ಟು ಬದುಕಲಾಗದು ನನಗೆ



     ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ದಿನಾಂಕ: 21/08/2014 ರಂದು ಬೆಂಗಳೂರಿನ ಅಧಿಕೃತ ನಿವಾಸಿ ಹಾಗೂ ವೃತ್ತಿ ದಾಖಲಾದ ನನಗೆ, ಸಪ್ಟೆಂಬರ್ 21 ರಂದು ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಗಂಣದ ಸೆಮಿನಾರ್ ಹಾಲ್‍ನಲ್ಲಿ, ಅತಿಥಿಯಾಗಿ ಉಪಸ್ಥಿತನಿದ್ದು ಭಾಷಣ ಮಾಡಲು ಹಚ್ಚಿದವರು ಬಸವಕೇಂದ್ರ ಮತ್ತು ಅನಿಕೇತನ ಕನ್ನಡ ಬಳಗ ಬೆಂಗಳೂರು. 
    ಸೆಂಟ್ರಲ್ ಕಾಲೇಜಿನ ಆವರಣ ಸಾಕಷ್ಟು ಸಾಹಿತ್ಯದ ಮತ್ತು ಸಾಂಸ್ಕತಿಕ ಘಟಾನುಘಟಿಗಳನ್ನು ಕಂಡ ನೆಲ. ಈ ವೇದಿಕೆಯನ್ನು ಹತ್ತಬೇಕಾದರೆ ನನ್ನೊಳಗೆ ಭಯ, ದುಗುಡ ಮತ್ತು ಭಕ್ತಿ. ಕಾರಣ, ಇಂದು ನನ್ನ ಉಪನ್ಯಾಸದ ಕೇಳುಗ ವಲಯದಲ್ಲಿರುವವರು ಹಿರಿಯರಾದ ದೇ ಜವರೇಗೌಡ, ಡಾ. ಎಂ ವೀರಪ್ಪ ಮೊಯ್ಲಿ, ಪ್ರೊ. ಎಚ್.ಎಸ್.ಪಟೇಲ್, ಡಾ. ಮಲ್ಲಿಕಾರ್ಜುನಪ್ಪ, ಸಂಸ್ಕತ ವಿಶ್ವವಿದ್ಯಾಲಯ ಕುಲಪತಿ ಮಲ್ಲೇಪುರಂ, ಶೂದ್ರ, ಗುಡಿಹಳ್ಳಿ, ಜಿ.ಪ್ರಶಾಂತ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಭಾಸ್ಕರ್ ಶೆಟ್ಟಿ (ಟೈಮ್ಸ್ ಆಫ್ ಕರ್ನಾಟಕ), ಶ್ರೀ ಕೆ.ವಿ. ಪ್ರಭಾಕರ, ನೀತು ತುಳಸಿಧರನ್, ಚಿತ್ರ ನಿರ್ದೇಶಕ ಜಿ. ಮೂರ್ತಿ, ಬಸವ ಸಮಿತಿಯ ಕಾಶಿನಾಥ ಕಾಡಾದಿ, ಬೆಲ್‍ನ ಚೀಪ್ ಎಕ್ಸಿಕ್ಯೂಟಿವ್ ವಾಯ್. ಮೃತ್ತುಂಜಯ ಹಾಗೂ ಇತರರು.
     ಕಳೆದ ಅನೇಕ ವರ್ಷಗಳಿಂದ ಸಾಹಿತಿ ಮತ್ತು ಸಾಂಸ್ಕತಿಕ ವಲಯದ ಹಲವು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹೈ ಕರ್ನಾಟಕ, ಕರಾವಳಿ ಕರ್ನಾಟಕ ಮಂಡಲಗಳನ್ನು ದಾಟಿಕೊಂಡು ಬರುತ್ತ ಬರುತ್ತ ಬೆಂಗಳೂರಿಗೂ ಬಂದಿದ್ದೆ. ಆದರೆ ಮತ್ತೆ ಮರಳಿಯೂ ಹೋಗಿದ್ದೆ. ಈ ಊರಲ್ಲೊಂದು ವಿಳಾಸಕ್ಕಾಗಿ ಬಾಲ್ಯದಿಂದಲೂ ದೇವರಿಗೆ ಮೊರೆ ಹೊಕ್ಕಿದ್ದೆ. ಒಂದು ಕೇಳಿದೆ ಆತ ಮೂರು ನೀಡಿದ. ನೀಡುವ, ನೀಗಿಸುವ ಕೈಗಳ ಮುಂದೆ ಬೇಡಬೇಕಂತೆ. ಕೊಲವೊಮ್ಮೆ ಬೇಡುವ, ನೀಡುವ ವ್ಯವಹಾರದಲ್ಲಿ ಯಾರೊಬ್ಬರೇ ಅಯೋಗ್ಯವಾದರೂ ಸಾಕು ಪ್ರಾರ್ಥನೆ ಹದಗೆಡುತ್ತದೆ.
     ಈ ದಿನದ ವಿಶೇಷವೂ ಇದೆ. ಇಂದು ಬೆಂಗಳೂರಿನ ಎರಡು ಕಾರ್ಯಕ್ರಮಗಳಲ್ಲಿ ಇರಬೇಕಾದವನು ನಾನು. ಖಂಡಿತವಾಗಿಯೂ ಇದ್ದೆ. ಒಂದರಲ್ಲಿ ಆಲೋಚನೆಯಾಗಿ ಮತ್ತೊಂದರಲ್ಲಿ ವ್ಯಕ್ತಿಯಾಗಿ. ವೃತ್ತಿ ನಿರತ ಪತ್ರಕರ್ತರ ಸಮಾರಂಭ ಪ್ರೆಸ್ ಕ್ಲಬ್‍ನಲ್ಲಿ ನಡೆದಿದ್ದು, 40 ಜನ ಸಾಧಕರನ್ನು ಗೌರವಿಸುವ ಕಾರ್ಯ ನೆರವೇರಿಸಬೇಕಿತ್ತು. ಆದರೆ ಆ ಕಾರ್ಯವನ್ನು ಪ್ರಕಾಶಕ ಮಿತ್ರ ಎಂ.ಆರ್ ಗಿರಿರಾಜು ಅವರಿಗೆ ವಹಿಸಿ, ನಾನು ಪುಸ್ತಕಗಳ ಲೋಕಾರ್ಪಣೆಯ ಈ ಸಮಾರಂಭದ ಮೊದಲ ಗೋಷ್ಠಿಯಲ್ಲಿ ಶ್ರೀಗಳ ಕಾವ್ಯ ಕುರಿತು ವಿಚಾರಗಳನ್ನು ಮಂಡಿಸಲು ಅಣಿಯಾದೆ. ಕಿಕ್ಕಿರಿದ ಸಭಾಂಗಣ, ಅದರೊಳಗೆ ನನ್ನ ಮೌನದಲೆಯ ಮಾತುಗಳು.
      “ರಾಮಾಯಣ ಮಹಾನ್ವೇಷಣೆಯನ್ನು ನಾನು ಬರೆದದ್ದು ನನ್ನೊಳಗಿನ ಶೋಧಕ್ಕಾಗಿ, ಹಾಗೆನೋಡಿದರೆ ಇಡಿಯಾಗಿ ಸಾಹಿತ್ಯದ ಒಟ್ಟು ಉದ್ದೇಶವೇ ನಾವು ಹಾಗೂ ನಮ್ಮೊಳಗಿನ ಶೋಧ. ಅದು ಸಾಧಿಸಿದಾಗ ನಮಗೆ ಯಾವುದೂ ವಿರುದ್ಧವಾಗಿ ಕಾಣುವುದಿಲ್ಲ. ಇಂದು ಹಿಂದೂಗಳು ತಮ್ಮ ವೈರಿಗಳೆಂದು ಪರಿಗಣಿಸುತ್ತಿರುವ ಮುಸ್ಲಿಂರು ವೈರಿಗಳಲ್ಲ. ನಿಜವಾದ ವಿಷಯವೆಂದರೆ ನಮಗೆ ‘ಹಿಂದೂ’ ಎಂಬ ಪದಕೊಟ್ಟವರೆ ಮಹಮ್ಮದೀಯರು.” ಎಂದು ಒಬ್ಬ ಚಿಂತಕನಂತೆ ಮಾತನಾಡಿದ ವೀರಪ್ಪ ಮೋಯ್ಲಿ ಮುಂದಿನ ನಮ್ಮೆಲ್ಲರ ಭಾಷಣಗಳಿಗೆ, ವಿಚಾರಗಳಿಗೆ ಒಂದು ಮುಕ್ತ ವಾತಾವರಣ ಸೃಷ್ಠಿಸಿಕೊಟ್ಟರು. ಅಂದಿನ ಅವರ ಆ ಭಾಷಣದಲ್ಲಿಯೂ ಅವರು ಅನ್ವೇಷಣೆಯ ಆ ದಾರಿಯನ್ನು ಬಿಟ್ಟುಕೊಡಲಿಲ್ಲ.
     ಶ್ರೀಗಳ ಎರಡು ವಚನ ಸಂಕಲನಗಳಾದ ‘ವಚನಸಿರಿ’ ಮತ್ತು ‘ವಚನಕ್ರಾಂತಿ’ಯನ್ನು ಕುರಿತು ಮಾತನಾಡಿದ ನನಗೆ, ಕವಿಯೊಬ್ಬನನ್ನು ಮುಂದೆ ಕೂಡ್ರಿಸಿಕೊಂಡು ಅವನ ಕಾವ್ಯ ಕುರಿತಾಗಿ ಮಾತನಾಡುವ ಮುಜುಗರದ ಸಂದರ್ಭ. ವೈಚಾರಿಕತೆ, ವಾಸ್ತವವಾದ, ಸ್ತ್ರೀ ಶೋಷಣೆ, ಮಾನವೀಯತೆ, ಬಡತನ, ಸಾಮಾಜಿಕ ನ್ಯಾಯ ಕುರಿತಾಗಿ ಸಾರುವ, ಶ್ರೀಗಳ ವಚನಗಳು ಆರಂಭದಲ್ಲಿ ಬಂಧದಲ್ಲಿ ಅತ್ಯಂತ ಸಡಿಲು, ಜಾಳು, ವಾಚಾಳಿಯಾಗಿದ್ದು, ವಚನಕ್ರಾಂತಿ, ಅವರ ಎರಡನೆ ಸಂಕಲನಕ್ಕೆ ಬರುವುದರೊಳಗಾಗಿ ಅವು ಸಾಕಷ್ಟು ಹುರಿಗೊಂಡದ್ದನ್ನು ಕಾಣಬಹುದು.

     ತತ್ವಚಿಂತನೆಯೂ ಅವರ ಕಾವ್ಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದ್ದು, ವೇದಗಳ ಕಾಲದಿಂದ ಅಧುನಿಕ ಕಾಲದವರೆಗೂ ನಮ್ಮ ತತ್ವ ಚಿಂತನಾ ಪರಂಪರೆ ಕಾವ್ಯದ ಕೈಹಿಡಿದುಕೊಂಡೇ ಬಂದಿದೆ. ಎಲ್ಲ ತತ್ವ ಚಿಂತಕರೂ ತಮ್ಮ ಪ್ರಖರ ಚಿಂತನೆಗಳನ್ನೂ ಈ ಏಳೂ ಕಾಲಘಟ್ಟಗಳಲ್ಲಿ ಕಾವ್ಯದ ಮೂಲಕವೇ ಅಭಿವ್ಯಕ್ತಿಸಿದ್ದಾರೆ. ಇದಕ್ಕೆ ಹೊರತಾದವರಲ್ಲ ಶ್ರೀಗಳು. ಅವರ ಕೆಲವು ಮಹತ್ವದ ವಚನಗಳು –
 

ಅನುಭವವೆಂಬುದು ಬೀಜದೊಳಗಣ ವೃಕ್ಷ ಕಾಣಿರೊ,
ಮುಗಿಲ ಮರೆಯ ಮಿಂಚು, ಸಿಂಪಿನೊಳಗನ ಮುತ್ತು,
ಹಾಲಿನೊಳಗಣ ನವನೀತ, ರುಚಿಯೊಳಗಣ ತೃಪ್ತಿ,
ದೇಹದೊಳಗಣ ಪ್ರಾಣ,
ಅನುಭವವನು ಅನುಭಾವವಾಗಿಸಿಕೊಂಡಿಹ
ಮಹಾನುಭಾವಿಯ ತೋರಿ ಬದುಕಿಸಾ!
ಬಸವಪ್ರಿಯ ಮುರುಘರಾಜೇಂದ್ರ ಪ್ರಭುವೆ.
                *****
 ಅಯ್ಯಾ, ನಮ್ಮದು ಗುಡಿ ಸಂಸ್ಕತಿಯಲ್ಲವಯ್ಯ,
ಮಡಿ ಸಂಸ್ಕತಿಯಲ್ಲವಯ್ಯ, ಕಡಿ ಸಂಸ್ಕತಿಯಲ್ಲವಯ್ಯ,
ನುಡಿ ಸಂಸ್ಕತಿಯಲ್ಲವಯ್ಯ, ಬಸವಪ್ರಿಯ
ಮುರುಘರಾಜೇಂದ್ರ ಪ್ರಭುವೆ,
 ನಮ್ಮದು ಶರಣ ಸಂಸ್ಕತಿಯಯ್ಯ
          ***** 
ಶರಣರು ಜಾತಿವಾದಿಗಳಲ್ಲ
ಜ್ಯೋತಿ ಸ್ವರೂಪಿಗಳಯ್ಯ
ಸಂಕುಚಿತ ಮತಿಗಳಲ್ಲ
ವಿಶಾಲ ಮತಿಗಳಯ್ಯ
ಸರ್ವಾಧಿಕಾರಿಗಳಲ್ಲ
ಸೇವಾಧಿಕಾರಿಗಳಯ್ಯ
ಮುರುಘರಾಜೇಂದ್ರ ಪ್ರಭುವೆ,
ಶರಣರು ವಿಲಾಸಜೀವಿಗಳಲ್ಲ
ಕಾಯಕ ಜೀವಿಗಳಯ್ಯ
 
     ಎಲ್ಲ ಸಂದರ್ಭದಲ್ಲಿಯೂ ಕವಿ ಮತ್ತು ಕಾವ್ಯವನ್ನು ನೆಪಗಳು ಎಂದು ಪರಿಗಣಿಸಿದವನು ನಾನು. ಮನೆಯ ಒಂದು ಕಿಡಕಿ ನಿಸರ್ಗದ ಅನೇಕ ಶಕ್ತಿಗಳು ನಮ್ಮೊಳಗೆ ಬರಲು ಕಾರಣವಾಗುವಂತೆ, ನಮ್ಮ ಮಧ್ಯದ ಒಬ್ಬ ಕವಿ ಅನೇಕ ಸಾರಿ ಕಾವ್ಯ ಪರಂಪರೆಯ ಸಾವಿರಾರು ಪ್ರತಿಭೆಗಳ ಮರುದರ್ಶನಕ್ಕೆ ಕಾರಣವಾಗುತ್ತಾನೆ. ಅಂತೆಯೆ, ಇಂದು ಶ್ರೀಗಳ ಬರಹವೂ ಕೂಡಾ. ಅವರ ಕಾವ್ಯದ ಮೂಲಕ, ಶ್ಯಾಮ್ ತಬ್ರೀಜಿ, ಸರ್ಮದ್, ಕನಕದಾಸ, ಬಸವಣ್ಣ ನಮ್ಮವರು, ಹೊರಗಿನವರು ಹೀಗೆ ವೈಚಾರಿಕವಾಗಿ ಹತ್ತಿರವಾಗಿಸುವ, ಸೇರಿಸುತ್ತ ಸೇರಿಸುತ್ತ ಪರಂಪರೆಯ ಒಂದು ಹೂಹಾರವನ್ನು ನಿರ್ಮಿಸುವ ಶಕ್ತಿ ಕಾವ್ಯಕ್ಕಿದೆ. ಶ್ರೀಗಳ ಕಾವ್ಯ ಹೀಗೆ ಪ್ರಪಂಚದ ಹಲವಾರು ದಾರ್ಶನಿಕರ ಆಲೋಚನೆಗಳ ಒಂದು ಪವಣಿಸುವಿಕೆ.


    ನನ್ನ ಭಾಷಣ 35 ನಿಮಿಷ. ಆದರೆ ಅಂದು ಅದು ಬೆಂಗಳೂರಲ್ಲಿ ಕಟ್ಟಿಕೊಟ್ಟ ಬಳಗ ಮಾತ್ರ ದೊಡ್ಡದು. Swan Group ನ ಕೃಷ್ಣಮೂರ್ತಿ, ಸುಶೀಲಾಗೌಡ, ವಾಜ್‍ಮಯಿ ಎಲ್ಲವೂ ಅಂದು ಅರಳಿದ ಹೊಸ ಸಂಬಂಧಗಳು. ಕೆಲವೊಮ್ಮೆ ನಾನು ಒಂದು ಕ್ಷಣ ಮನಿಸಬಹುದುದೇನೊ, ಆದರೆ ಈ ಮನುಷ್ಯರನ್ನು ಬಿಟ್ಟು ಬದುಕಲಾಗದು ನನಗೆ.

       

Sunday, September 21, 2014

ಆಲೋಚನೆ – ಅಡ್ಡಮಳೆ – ಅಭಿಮಾನ



     11 ನೇ ತಾರೀಖು, ಇನ್ನೊಂದೇ ದಿನ ಹುಟ್ಟುಹಬ್ಬಕ್ಕೆ. ರಾತ್ರಿಯಲ್ಲ ಕುಳಿತು ವರ್ಷಗಳ ನೆನಪುಗಳನ್ನು ವ್ಯವಸ್ಥಿತವಾಗಿ ವಿಭಜಿಸಿ ಕಡತಗಳಲ್ಲಿ ಕಟ್ಟಿಡುತ್ತಿದ್ದೆ. ಆಗಷ್ಟ 21 ರಂದು ಬಂದು ವೆಸ್ಟಆಫ್ ಕಾರ್ಡರೋಡ್‍ನ ಮಂಜುನಾಥ ನಗರದ ನನ್ನ ಮನೆ ಎದುರಿನ ಗಿಡದ ನೆರಳಿನಲ್ಲಿ ನಿಂತ ನನ್ನ ಪ್ರೀತಿಯ ನಿರುಪದ್ರವಿ, ಉಭಯ ಉಪಕಾರಿ(ಝೆನ್ ಕಾರ್) 15 ದಿನಗಳವರೆಗೂ ಆ ಸ್ಥಳ ಬಿಟ್ಟು ಕದಲಿರಲಿಲ್ಲ. ರಾತ್ರಿಯೆ ಗಂಡ-ಹೆಂಡತಿ ಇಬ್ಬರೂ ಅದನ್ನು ಸ್ವಚ್ಛಗೊಳಿಸಿ, ಸಮಾಧಾನಿಸಿ, 12 ರ ಮಧ್ಯಾಹ್ನ, ಅರ್ಧ ದಿನದ ರಜಾ ಅನುಮತಿಯ ಮೇರೆಗೆ ಎಂ.ಎಸ್ ಬಿಲ್ಡಿಂಗ್‍ನಿಂದ ಪ್ರವಾಸ ಪ್ರಾರಂಭಿಸಿದರೆ ಯಾರ್ಯಾರಿಗೊ ಆತಂಕ. ಹುಟ್ಟುಹಬ್ಬ ಹುಷಾರಾಗಿ ಕಾರು ಚಲಾಯಿಸು ಎನ್ನುವ ಎಚ್ಚರಿಕೆಗಳು ಗೆಳೆಯರಿಂದ, ಹೆತ್ತವರಿಂದ, ಬಂದುಗಳಿಂದ ಕೊನೆಗೆ ನನ್ನ ಮಕ್ಕಳಿಂದಲೂ. ಆದರೆ ಹಿಂದಿನ ದಿನವಷ್ಟೇ ಎಂ.ಎಸ್ ಬಿಲ್ಡಿಂಗ್‍ನ Principal secretary ಇರುವ 6 ನೇ ಮಹಡಿಯಿಂದ ಕೆಳನೋಡುತ್ತ ನನ್ನ ಹೆಣವನ್ನು ಹುಡುಕಾಡಿದನುಭವದ ಕವಿತೆಯೊಂದನ್ನು, ಹೆಂಡತಿ ಕೊಡಿಸಿದ ವಿಶೇಷ ಬಟ್ಟೆಗಳನ್ನು ತೊಟ್ಟು, ತೆಗೆದುಕೊಂಡ ಫೋಟೊದೊಂದಿಗೆ ಫೇಸ್‍ಬುಕ್‍ಗೆ ರವಾನಿಸಿದ್ದೆ. 
     ಭಯ, ಬೇಸರ, ಆತಂಕಗಳೊಂದಿಗೆಯೇ ನಾನು ಈ ಬೆಂಗಳೂರಿಗೆ ಬಂದದ್ದು. ಕೇವಲ 15 ದಿನಗಳಲ್ಲಿ ಇಲ್ಲೊಂದು ಪ್ರೀತಿಯ ಮನೆ, ಬಳಗ, ಜಗಭಂಡರ ಗುಂಪು ಕಟ್ಟಿಕೊಂಡು ಹಬ್ಬಲಾರಂಭಿಸಿದ್ದು. ಬೆಂಗಳೂರಿಗೆ ನನ್ನ ಆಗಮನವನ್ನು ಸಂಭ್ರಮಿಸಿದ ಹಿರಿಯರು ಕೃಷ್ಣಮೂರ್ತಿರಾವ್, ಚಂಪಾ, ಜಿ.ಪಿ.ಬಸವರಾಜು, ಮುಕ್ತಾ, ಪ್ರಾನ್ಸಿಸ್, ರಂಗನಾಥ, ಪಂಡಿತ, ಬೆಂಗಳೂರು ಕೇಂದ್ರ ಖಜಾನೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಭಾಗ್ಯಲಕ್ಷ್ಮಿ(ಕೆ.ಎ.ಎಸ್), ಚೀಪ್ ಗೌವರ್ನರ್ ಸೆಕ್ರೆಟರಿ ಶ್ರೀ ವಿಜಕುಮಾರ್ ತೋರಗಲ್ಲ, ರೋರಿಚ್-ದೇವಿಕಾರಾಣಿ ಫೌಡೇಶನ್‍ನ ಶ್ರೀ ಮನು ಬಳಿಗಾರ ಜೊತೆಗೆ ‘ಕಾವ್ಯಕ್ಕೆ ಉರುಳು’ ಓದುಗ ಬಳಗದ ಬೆಂಗಳೂರು ನಿವಾಸಿಗಳು ಹಾಗೂ ಇದಕ್ಕೆ ಕಾರಣರಾದ ಸಂಪಾದಕ ಮಿತ್ರ ರಾಜು ಮಳವಳ್ಳಿ. ನನ್ನ ಬೆಳೆಸಿದ ಹಿರಿಯ ಜೀವ ಸಿಂಪಿ ಲಿಂಗಣ್ಣ, ಒಂದು ಪದ್ಯ ಪದೇ ಪದೇ ಹೇಳುತ್ತಿದ್ದರು – 
 ಊರೆಲ್ಲ ನೆಂಟರು
ಕೇರಿಯೆಲ್ಲವೂ ಬಳಗ
ಧಾರಣಿಯೇ ದೈವವಾಗಿರಲು
ಯಾರನ್ನು ನೆನೆಯಲಿ?
     ಒಂದಿಷ್ಟು ತಗ್ಗಿದ ಬಿಸಿಲಿನಲ್ಲಿ ನನ್ನ ಸತಿ-ಸಾರಥಿ ಪದ್ದಿಯ ನಿರ್ದೇಶನಕ್ಕನುಸಾರ ನೆಲಮಂಗಲದತ್ತ ನನ್ನ ಕಾರು ಓಡುತ್ತಿದ್ದರೆ, ಮನಸ್ಸು ಧರ್ಮ-ಕರ್ಮಗಳ ವಿಚಾರ ಮಾಡುತ್ತಿತ್ತು. ಬಹಳ ದಿನಗಳಿಂದ ಬೆಂಗಳೂರಿಗೆ ಬಂದಾಗಲೆಲ್ಲ ಇಳಿದುಕೊಳ್ಳುತ್ತಿದ್ದ ಸ್ಥಳ ‘ಬಾಲಾಜಿ ರೆಸಿಡೆನ್ಸ್’, ಅದರ ಹಿಂದುಗಡೆಯೆ ನಾನೊಂದು ಮನೆ ಮಾಡುತ್ತೇನೆ, ನಿತ್ಯ ರಾಜಾಜಿನಗರ, ಇಎಸ್‍ಐ, ಸುಜಾತಾ, ಮಲ್ಲೇಶ್ವರಂ, ರೇಸ್‍ಕೋರ್ಸ್ ಕೊನೆಗೆ ಮಹಾರಾಣಿ ಕಾಲೇಜ ಮತ್ತೆ ಸಾಯಂಕಾಲವಾಗುತ್ತಲೇ ಇಲ್ಲಿಂದ ಅಲ್ಲಿಗೆ ಹೀಗೊಂದು ಪರಿಭ್ರಮಣದ ಬದುಕು ನಾವಿಲ್ಲಿ, ಇಷ್ಟು ಬೇಗ ಪ್ರಾರಂಭಿಸುತ್ತೇವೆ ಎಂದು ಎಂದೂ ಅಂದುಕೊಂಡಿರಲಿಲ್ಲ. 
    ಅಪಾತ್ರರಿಗೆ ಸಲಾಮು ಹೊಡೆದೊ, ಯಾವುದೋ ಅನೈತಿಕ ಒಪ್ಪಂದ ಮಾಡಿಕೊಂಡೊ ಬರುವ ಜಾಯಮಾನ ನನ್ನದಲ್ಲ. ಮಧುರಚನ್ನ ಹಾಡಿದಂತೆ “ಬಯಕೆ ಬರುವುದರ ಕಣ್ಸನ್ನೆ”. ಬಯಕೆ ಹುಟ್ಟಿತ್ತು, ಎಲ್ಲವೂ ಇಷ್ಟರಲ್ಲಿಯೇ ಬದಲಾಗಬಹುದು ಎಂದುಕೊಂಡೆದ್ದೆ, ಆಯಿತಷ್ಟೆ. ಜೊತೆಗೆ ಎದೆಯಲ್ಲಿ ಆಗಲೇ ಮತ್ತೊಂದು ಎಚ್ಚರಿಕೆಯ ಗಂಟೆ ಬೆಂಗಳೂರಲ್ಲಿ ಬಹಳ ದಿನವಿರಬಾರದು. ಇಲ್ಲಿಯ ಟ್ರಾಫಿಕ್ ಸಂತೆಯಲಿ ಕೆಪ್ಪನಾಗಬಾರದು ನಾನು. ಕಾರ್ಬನ್ ಕುಡಿತಕ್ಕೆ ಕಪ್ಪಾಗಬಾರದು ನನ್ನ ಬಾಳು. ಹಿಮಗಿರಿಯ ಸಾಲುಗಳನ್ನು ಹಿಡಿದು ಹೊರಟುಬಿಡಬೇಕು ಅಲೆಮಾರಿ. ‘ಗುರು’ ಕೃಪೆಯಾದರೆ ಯಾವದೂ ಅಸಾಧ್ಯವಲ್ಲ.
  ಆಲೋಚನೆಗಳ ಅಡ್ಡಮಳೆಯಲ್ಲಿ ತೋಯ್ಯಿಸಿಕೊಳ್ಳುತ್ತ ನಾನು, ನನ್ನ ಕಾರು ಎರಡು ಗಂಟೆಗಳ ಕಾಲ ವಿರಮಿಸಿದ್ದು ಚನ್ನರಾಯಪಟ್ಟಣದಲ್ಲಿ. ಈ ಸಪ್ಟೆಂಬರ್‍ನ ಬೃಹತ್ ಶಿಕ್ಷಕರ ದಿನಾಚರಣೆಯಂದು ಇಲ್ಲಿ ಅತಿಥಿಯಾಗಬೇಕಾದವನು ನಾನು. ಚಿತ್ರದುರ್ಗದ ಕಾರ್ಯಕ್ರಮದ ಪೂರ್ವ ನಿಗಧಿತವಾದುದರಿಂದ, ನನ್ನ ಪಾತ್ರವನ್ನಿಲ್ಲಿ ಹಾಸನ ಆಕಾಶವಾಣಿಯ ಗೆಳೆಯ ವಿಜಯ ಅಂಗಡಿ ನಿಭಾಯಿಸಿದರು. ವಿಚಿತ್ರ ಬದುಕು. ಊರು ಬಿಟ್ಟ ಮೇಲೆಯೇ ನೂರೊಂದು ಸತ್ಯಗೊತ್ತಾಗುತ್ತವೆ. ಚನ್ನರಾಯಪಟ್ಟಣದಲ್ಲಿ ನನ್ನ ಅಭಿಮಾನಿಗಳ ಒಂದು ದೊಡ್ಡ ದಂಡಿದೆ ಎಂದು ಗೊತ್ತಾದುದೆ ಇತ್ತೀಚಿಗೆ. ಇಲ್ಲಿಯ ‘ಶಿವಾ ಕಾಫಿ’ ನಮ್ಮ ಮೆಚ್ಚಿನ ಸ್ಥಳ. ಅಲ್ಲಿಯೇ ಎಲ್ಲರನ್ನು ಸೇರಿಸಿ, ಕ್ಷಮೆಕೇಳಿ ಹುಟ್ಟುಹಬ್ಬಕ್ಕೆ ಬೇಲೂರು ತಲುಪಿದರೆ ರಾತ್ರಿ 9. ತಿಂಗಳುಗಳಿಂದ ಪೊರಕೆ ಕಾಣದ ಮನೆಗೆ, ಆಕಾರ ಕೊಡಲು ಬಂದವ ಚನ್ನೇಗೌಡ.
   ಒಂದೆಡೆ ಹುಟ್ಟುಹಬ್ಬಕ್ಕೆ ಮನೆ, ಮಡದಿ-ಮಕ್ಕಳು ಸಿದ್ಧಗೊಳ್ಳುತ್ತಿದ್ದರೆ ಇನ್ನೊಂದೆಡೆ ಊಟದೊಂದಿಗೆ ಸಿದ್ಧವಾದ ಗೆಳೆಯರ ಬಳಗ. ಕೆಲವೊಮ್ಮೆ ಪ್ರೀತಿಯ ರಾತ್ರಿಗಳನ್ನು ನಿಭಾಯಿಸುವುದು ಎಷ್ಟೊಂದು ಕಷ್ಟ ಅಲ್ಲವೆ? ಗೆಳೆಯರೊಂದಿಗೆ ಕೆಲ ಗಂಟೆಗಳು ಕಳೆದು ಬರುವುದರೊಳಗಾಗಿ ಮಧ್ಯರಾತ್ರಿಯವರೆಗೂ ಕೇಕ್-ಕ್ಯಾಂಡಲ್‍ಗಳೊಂದಿಗೆ ಕಾಯುತ್ತಿದ್ದ ವಿದ್ಯಾರ್ಥಿ ಬಳಗ. ಅಬ್ಬಾ! ಈ ಹುಟ್ಟುಹಬ್ಬ ಇಷ್ಟೊಂದು ಸಂಪ್ರದಾಯ ಬದ್ಧವಾಯಿತಲ್ಲ? ಇರಲಿ, ಉರಿ ಬರಲಿ ಸಿರಿ ಬರಲಿ
ಬಂದುದೆಲ್ಲವೂ ‘ಗುರುರಾಯ’ನ
ಪಾದಕರ್ಪಿತವಾಗಲಿ.
     ಎಲ್ಲರೂ ಹೋದಾಗ ಮಧ್ಯರಾತ್ರಿ ಮೂರು ಗಂಟೆ. ಮಡದಿ-ಮಕ್ಕಳು ನಿದ್ರೆಯಲ್ಲಿ. ಗ್ಲಾಸಿನ ಕೊನೆಯ ರೌಂಡಿಗೆ ಚೀಯರ್ಸ್ ಹೇಳಲು ಇನ್ನ್ಯಾರಿದ್ದಾರೆ? Hello out there? Yes. ಕಣ್ಣುಮಿಟುಕಿಸುವ ದೊಡ್ಡದೊಂದು Teddy beare.