Total Pageviews

Wednesday, September 17, 2014

ಜಂಗಮನೆಂದರೆ ಜಗಳದ ಜೋಳಿಗೆ



           ಕುಂವಿ ಪದೆ ಪದೆ ಉಲ್ಲೇಖಿಸುವ ಗಾಲಿಬನ್ ಒಂದು ಮಾತು –
 ಬೇಲಿ ಮೇಲಿನ ಸಿಟ್ಟಿಗೆ
                                       ಬೇರಿಗೆ ಬೆಂಕಿ ಇಡಬೇಡ
                                       ಹಬ್ಬಿದ ಬೇಲಿಯೊಳಗೆ ಒಂದಾದರೂ
                                       ಹೂವಿರುವುದನ್ನು ಮರೆಯಬೇಡ.

          ಈ ಕಾರಣಕ್ಕಾಗಿಯೇ ಏನೋ ನಾನು ಮತ್ತೆ ಮತ್ತೆ ಮರಳಿ, ಹೋದ ಸ್ಥಳಗಳಿಗೆ ಹೋಗುತ್ತಿರುತ್ತೇನೆ. ದಿನಾಂಕ: 07/09/2014 ರಂದು ಬಾಗಲಕೋಟೆಯ ಹೊಟೇಲ್ ‘ಅನುಗ್ರಹ’ದಲ್ಲಿ ನಡೆದ ಅಶೋಕ ನರೋಡೆಯವರ ರಾಜ್ಯಮಟ್ಟದ ಸಾಹಿತ್ಯ ವಿಚಾರ ಸಂಕಿರಣಕ್ಕೆ ಹೋದದ್ದು ಈ ಕಾರಣಕ್ಕಾಗಿಯೆ. ‘ಕಳೆದುಕೊಂಡ’ ಊರಲ್ಲಿಯೇ ಪಡೆದುಕೊಳ್ಳಬೇಕು, ಕರುಳು ಮಿಡಿಯುವ ಊರಿಗೆ ಮರಳಿ ಮರಳಿ ಹೋಗಬೇಕು. ಯಾಕೆಂದರೆ ಅದು ನಮ್ಮ ಜೀವಂತಿಕೆಗೆ, ಹೃದಯಪ್ರಾಮಾಣಿಕತೆಗೆ ಸಾಕ್ಷಿಯಾದ ಊರು.
          ದಿನಾಂಕ: 06/09/2014 ರ ಮುಂಜಾವು ಚಿತ್ರದುರ್ಗದಿಂದ  ಬಾಗಲಕೋಟೆಗೆ ಬಂದೆ. ಬಹಳ ದಿನದಿಂದ ನಿದ್ರೆ ಮಾಡಲು ಒಂದು ಪ್ರಶಸ್ತ ಊರು ಬೇಕಾಗಿತ್ತು. ಮುಂಜಾನೆ ಇಳಿಯುತ್ತಲೇ ಓಡಿ ಬಂದ ಕವಿ ಗೆಳೆಯ ಉಮೇಶನಿಗೆ ಯಾರ ಬೇಟಿಯೂ ಬೇಡ ಎಂದು ಹೇಳಿ, ಹೊಟ್ಟೆ ತುಂಬ ಪುರಿ ತಿಂದು ಮಲಗಿದರೆ ಮತ್ತೆ ಏಳುವುದರೊಳಗಾಗಿ ಸಾಯಂಕಾಲದ 4.30. ಆಗಾಗ ಮಳೆ, ಮೋಡಗಳ ಅಬ್ಬರ, ಮಿಂಚು, ಮೊಬೈಲ್ ತುಂಬ 36 ಕರೆಗಳು.

          ಬೀಳಗಿಯಿಂದ ಕಾರಿನೊಂದಿಗೆ ಗೆಳೆಯ ಅಪ್ಪಾಜಿಗೋಳ ಬಂದರು. ಬೀಳಗಿಯ ಬಯಲು ಸಿದ್ಧೇಶ್ವರ ಬೆಟ್ಟದಲ್ಲಿ ನಮ್ಮ ಮದುವೆ ಮಾಡಿ, ತಂದೆಯಾಗಿ ನಿಂತು, ಧಾರೆಯೆರೆದ ಅನಾಥನಾಥ ಅವನು. ಶಿಸ್ತಿನ ಮನುಷ್ಯ. ಇತಿಹಾಸ ಉಪನ್ಯಾಸಕ, ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬ.ವಿ.ವ.ಸ ದ ನೌಕರಿಗೆ ರಾಜಿನಾಮೆ ಬಿಸಾಕಿ, ಪ್ರಗತಿಪರ ರೈತನಾಗಿ ಉಳಿದಾತ. ಇಬ್ಬರೂ ಸೇರಿ ಸುರಿವ ಮಳೆಯಲ್ಲಿ ‘ಬಳ್ಳಾರಿ ಬಜಿ’ ಅಂಗಡಿ ಹುಡುಕುತ್ತ ಹೊರಟು, ವಲ್ಲಭಭಾಯಿ ಚೌಕ್‍ನಲ್ಲಿ ಹೊಸದಾಗಿ ಪ್ರಾರಂಭವಾದ ಅಂಗಡಿಯಲ್ಲಿ ಬಜಿ ತಿಂದು, ಬೀಳೂರು ಶ್ರೀ ಗದ್ದುಗೆ, ಬ.ವಿ.ವ ಕ್ಯಾಂಪಸ್, ವಿದ್ಯಾಗಿರಿ, ಮಳಿಯಪ್ಪಯ್ಯನ ಮಠ, ಲಡ್ಡು ಮುತ್ತ್ಯಾನ ಗದ್ದುಗೆ ಸುತ್ತಾಡಿದೆವು. ಈ ಊರಿಗೆ ಈಗ ನಾವಿಬ್ಬರೂ ಹೊರಗಿನವರು, ಆದರೆ ಊರ ಪ್ರಪಂಚಕ್ಕೆ ಹತ್ತಿರದವರು. ಮನಸ್ಸು ಬಿಚ್ಚಿದ ಮಾತು, ಮನಸ್ಸಿದ್ದವರೊಂದಿಗೆ ಮಾತ್ರ ಸಾಧ್ಯ.
           ಏನೆಲ್ಲ ಕೊಟ್ಟ ಬಾಗಲಕೋಟೆಗೆ ನಾನೇನೂ ಕೊಡಲಿಲ್ಲವೇನೊ ಎಂಬ ಅಸಮಾಧಾನ ನನಗೆ ಈಗಲೂ ಇದೆ. ಹೀಗಾಗಿಯೇ ಇರಬಹುದೇನೊ ಇಲ್ಲಿಯ ‘ಗೆಳೆಯರ ಬಳಗ’ಕ್ಕೆ ನಾನು ಮತ್ತೆ ಮತ್ತೆ ನಿಲುಕಿಸಿಕೊಂಡಿದ್ದೇನೆ. ರಾತ್ರಿ ಖಾಡೆ ಸಿದ್ಧಾರೂಢ, ನರೋಡೆ, ವಿನೋದ ಯಡಹಳ್ಳಿ ಮತ್ತು ಮಲ್ಲಿಕಾರ್ಜುನ ಛಲವಾದಿ. ಪಾನಗೋಷ್ಠಿ ಮುಗಿದಾಗ ರಾತ್ರಿ 12.30.
          ಮುಂಜಾನೆ ನನ್ನ ‘ಅರ್ಧ ಬದುಕಿನ ಒಡೆಯ: ಕೆನ್ ಸಾರೊ’ ಸಂಯುಕ್ತ ಕರ್ನಾಟಕದಲ್ಲಿ. ರವಿವಾರ, 07/09/2014, ಅಭಿಮಾನಿಗಳ ಫೋನ್‍ಗಳೇ ಕರೆಗಂಟೆಗಳು. ದಡಬಡಿಸಿ ಎದ್ದರೆ ಬಾಗಿಲಲ್ಲಿ ನಿಂತವಳು ಮಡದಿ ಪದ್ಮಶ್ರೀ. ಎರಡು ದಿನಗಳಿಂದ ಕಾದಂಭರಿಕಾರ ಗೆಳೆಯ ಬಾಳಾಸಾಹೇಬ ಭೇಟ್ಟಿಗಾಗಿ ಹಂಬಲಿಸುತ್ತಿದ್ದರು. ನಾನು, ಪದ್ದು ಬಾಳಾಸಾಹೇಬರ ಕಾರು ಹತ್ತಿ ಹೊಟೇಲ್ ಶಿವಸಂಗಮಕ್ಕೆ. ತಣ್ಣಗೆ ಕುಳಿತು ಚಹಾ ಹೀರಬಹುದಾದ ಸ್ಥಳ ಅದು. 
      ನನ್ನ ನೋವಿನ ದಿನಗಳಲ್ಲಿ ನಾನು ಕಣ್ಣೀರಿಟ್ಟ ಹೊಲಗಳು, ರಾತ್ರಿ ಸುರಿದ ಮಳೆಯಿಂದ ಒಡ್ಡುಗಳ ಎದೆ ತುಂಬಿಕೊಂಡು, ಹಾಗೆಯೇ ಒರತೆಯಾದ ನೆನಪುಗಳನ್ನು ಸಾಂಡುಗಳ ಮೂಲಕ ಸಣ್ಣಗೆ ಹರಿಬಿಟ್ಟ ರೀತಿಗೆ ನಾನು ಮೌನವಾಗಿದ್ದೆ. ಪದ್ಮಶ್ರೀ ಮತ್ತು ಬಾಳಾಸಾಹೇಬ ಕಾರಿನ ಗತಿಯಲ್ಲಿಯೇ ಮಾತಿನ ರೀತಿಯಲ್ಲಿದ್ದರು.
          ಸಿಡಿಮಿಡಿಗೊಂಡಿದ್ದೆ, ಯಾಕೋ ಗೊತ್ತಿಲ್ಲ. ಸಂಕಟವಿತ್ತು ಎದೆಯೊಳಗೆ ಮುಂಜಾನೆಯಿಂದ ಪ್ರಾರಂಭವಾದ ಆತ್ಮವಂಚೆನೆಯ ಮಾತುಗಳು ಎಲ್ಲೊ ಇಡೀ ವಿಚಾರ ಸಂಕಿರಣದ ಆಶಯವನ್ನು ಕೆಡಿಸುತ್ತಿವೆ, ಬೆಳೆಯಬೇಕಾದ ಲೇಖಕನೊಬ್ಬನ ಪುಣ್ಯತಿಥಿಯಾಗುತ್ತಿದೆಯೇ? ಭಯಗೊಂಡು ಹೊರ ಹೋಗಿ ಹಲವು ಸಾರಿ ಚಹಾ ಕುಡಿದು, ಎಲೆ ತಿಂದು ಎಷ್ಟೇ ಉಗಿದರೂ ಸಮಾಧಾನವಾಗಲಿಲ್ಲ. 
        ನನ್ನ ಮಾತಿನ ಸರದಿ ಬಂದಾಗ, ನನ್ನ ಅಪ್ಪಣೆ ಇಲ್ಲದೆ ಆಕ್ರೋಶ ಸಿಡಿದು ಬಿಟ್ಟಿತು. ಅಗ್ಗಡಿಕೆಯಿಂದ ವಿನಾಶದ ಹೊರತು ಇನ್ನೇನೂ ಸಾಧ್ಯವಿಲ್ಲವೆಂದೇ ನನ್ನ ವಾದ. ಕಾವ್ಯವನ್ನು, ಕಾಮವನ್ನು ಮತ್ತು ಧ್ಯಾನಸ್ಥತೆಯನ್ನು ಹದಗೆಡಿಸುವವರು ಎಂಥವರೇ ಇರಲಿ ಒಪ್ಪಿಕೊಳ್ಳಲಾಗುವುದಿಲ್ಲ ನನಗೆ. ಇವುಗಳ ಹದ ಹಾಳಾದರೆ ಪ್ರಪಂಚದ ಸದಭಿರುಚಿಗಳೆಲ್ಲ ಸತ್ತು ಹೋಗುತ್ತವೆ ಎನ್ನುವ ಸಿಟ್ಟು ನನಗೆ. ಮನುಷ್ಯನ ಒಟ್ಟು ಸೃಜನಶೀಲತೆ ಹುರಿಗೊಳ್ಳಬೇಕಾದ ದಾರಿಗಳಿವು. ಇವುಗಳೇ ಪ್ರಚಾರದ, ಪುಂಡಾಟಿಕೆಯ ಮತ್ತು ಪ್ರತಿಸ್ಪರ್ಧೆಯ ದಾರಿಗಳಾದರೆ ಬದುಕಿನ ಸ್ಥಿತಿ ಎಂತು? ಇದೆಲ್ಲವೂ ಇಲ್ಲಿ ಹದಗೆಡುತ್ತಿದೆ ಎಂದು ಅಬ್ಬರಿಸಿದಾಗ ಇಡೀ ಸಭೆ ಒಂದು ಕ್ಷಣ ಗಂಭೀರ ಮೌನ. ನನ್ನ ವಿಚಾರ ಕಹಿಯಾಗಿತ್ತು ಸತ್ಯ, ಆದರೆ ಅದರೊಳಗೆ ಕೆಡುಕಿರಲಿಲ್ಲ. ನಾನು ಹೇಳಬೇಕಾದುದು ಹೇಳಿಯಾಗಿತ್ತು. ಜಂಗಮ ಮುಂದಿನೂರಿಗೆ ಮೊಗಮಾಡಬೇಕಿತ್ತು. ಗೆಳೆಯ ನರೋಡೆ ಅಪರೂಪದವರು. ಅವರೆಂದರೆ ನನಗೆ ಇಷ್ಟೆ – 

ತಲೆ ತುಂಬ ಸೆರಗು
ರೂಪಾಯಗಲ ಕುಂಕುಮ
****
ನೀನೊಲಿದು ಬರಲು
ನೀಲಾಗಸವೆಲ್ಲ ಕಾಮನ ಬಿಲ್ಲು
ಕಾರ್ಮೋಡದಿ ಕೋಲ್‍ಮಿಂಚಿನ ಗೊಂಚಲು
****
ನೀನೆ ನೀನೆ
ನನಗೇಲ್ಲ ನೀನೆ
ಬೆಂಕಿಯೂ ನೀನೆ
ಬುತ್ತಿಯೂ ನೀನೆ
ತುತ್ತಿನ ತಾಯಿಯೂ ನೀನೆ
****
 ಏಳು ಗೆಳೆಯ
ನನ್ನ ನೊಸಲ ಮೇಲೆ
ನಿನ್ನ ಬಿಸಿ ನೆತ್ತರ
ರಕ್ತ ತಿಲಕವಿಡು
ಹೀಗೆ ಏನೇನೊ. ಕೊನೆಗೆ ಅವರ ಕೃತಿಯೊಂದಕ್ಕೆ ಬರೆದ ಸಾಲುಗಳನ್ನು ಮತ್ತೆ ನೆನಪಿಸಬೇಕೆನಿಸುತ್ತದೆ – “ಸಾವಿನೊತ್ತಡದ ನಿನ್ನ ಒಳ ತುಡಿತ ಅಭಿವ್ಯಕ್ತಿಗೆ ಆಸಿಸದ ಹೊರತು ಪೆನ್ನು ಹಿಡಿಯಬೇಡ. ನಿನ್ನೊಂದಿಗೆ ಕಾದಾಡದೆ ನಿನ್ನ ಕವಿತೆಯನ್ನು ಓದುಗರ ಮುಂದಿಡಬೇಡ. ಸಂಕಲನದಿಂದ ಸಂಕಲನಕ್ಕೆ ಭವಿಷ್ಯವನ್ನು ಗೌರವಿಸು, ನವೀಕರಿಸು, ಅಕ್ಕಮಹಾದೇವಿಯಂತೆ ಅದನ್ನು ಒಪ್ಪಗೊಳಿಸು ಮತ್ತು ಉತ್ಸವದಂತೆ ಆಚರಿಸು.
          ಜಗಳಾಡಿಯೂ ನಾನು ನಿನ್ನ ಜೊತೆಗಿದ್ದೇನೆ. ಈ ಜಂಗಮನೆಂದರೆ ಜಗಳದ ದೊಡ್ಡ ಜೋಳಿಗೆ
         

No comments:

Post a Comment