Total Pageviews

Tuesday, March 27, 2012

ಆ ಬಿಸಿಲೇ ಒಂದು ಬೆಸುಗೆ

                                  ಆ ಬಿಸಿಲೇ ಒಂದು ಬೆಸುಗೆ
               

Lecturer on Ambedkar in Gulbarga

"ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ".
                                                             

ಕೆಲವು ದಿನಗಳ ಹಿಂದೆಯಷ್ಟೇ ಓರಿಸ್ಸಾ(orissa) ದವರೆಗಿನ ಅರವತ್ತಾರು ಗಂಟೆಗಳ ಪ್ರವಾಸವನ್ನು ಮುಗಿಸಿಕೊಂಡು ಬಂದಿದ್ದ ನನಗೆ ಸಧ್ಯದಲ್ಲಿಯೇ ಮತ್ತೊಂದು ಧೀರ್ಘ ಪ್ರವಾಸ ಮಾಡುವ ಉತ್ಸಾಹವೂ ಇರಲಿಲ್ಲ, ಸಮಯವೂ ಇರಲಿಲ್ಲ. ಇಂತಹದರಲ್ಲಿ ಗೆಳೆಯ ವಿಜಯಕುಮಾರ ದೊಡ್ಡ ಗಾಣೀಗೇರ್ ತನ್ನ ಕಾಲೇಜಾದ People’s Education Trust ನ ‘Dr.Ambedkar college of atrs and commerce’ ನ ಅಂಬೇಡ್ಕರ್ ವಿಚಾರ ವೇದಿಕೆಯ ಎರಡು ದಿನಗಳ ಕಾರ್ಯಕ್ರಮದ ಉಧ್ಘಾಟನೆಗಾಗಿ ಬರಬೇಕೆಂದು ಪ್ರೀತಿಯ ಹಠ ಹಿಡಿದ. ಹೋಗಲೇಬೇಕಾಯಿತು, ಹಾಗೆ ನೋಡಿದರೆ ನನ್ನನ್ನು ಅನವರತವೂ ಕಾಡುವ ಅನೇಕ ವ್ಯಕ್ತಿ ಮತ್ತು ವಿಚಾರಗಳು ಈ ಗುಲ್ಬರ್ಗಾ ಎನ್ನುವ ಬಿಸಿಲು ನಾಡಿನೊಂದಿಗೆ ಬೆಸೆದುಕೊಂಡಿದೆ. ಹೆಸರಿಸಬೇಕೆಂದರೆ ನಾಲ್ಕಾರನ್ನು ನಮೂದಿಸಬಹುದೇನೋ. ಹದಿನೈದು ವರ್ಷಗಳಷ್ಟು ಹಿಂದಿನ ಧೀರ್ಘ ಕಾಲದ ಗೆಳೆಯ ವಿಜಯ ದೊಡ್ಡ ಗಾಣಿಗೇರ್, ಸಂಸಾರವಿದ್ದೂ ಅದಕ್ಕೆ ವಿಮುಖರಾಗಿ ಧಿಢೀರ್ ಸನ್ಯಾಸ ಘೋಷಿಸಿದ ಮಾತೃ ಪ್ರೀತಿಯ ಜೀವ ಶ್ರೀ ಬಸವಲಿಂಗಪ್ಪ ಹೂಗಾರ್, ಇತ್ತೀಚಿಗಷ್ಟೆ ಬಂದು ಕೇಂದ್ರಿಯ ವಿಶ್ವವಿದ್ಯಾಲಯ ಸೇರಿಕೊಂಡ ಗೆಳೆಯ ಬಸವರಾಜ ಡೋಣುರ, ಹಳೆಯ ಪತ್ರ ಮಿತ್ರ ಜಾನ್‌ಬೋ, ನವ ಕರ್ನಾಟಕ ಪ್ರಕಾಶನದ ಸೊನ್ನದ, ಪ್ರೋ.ಪಾಟೀಲ, ಇವರೆಲ್ಲ ಗುಲ್ಬರ್ಗಾ ಎಂಬ ಭೋಧಿವೃಕ್ಷಕ್ಕೆ ಹುಟ್ಟಿಕೊಂಡ ನೆನಪಿನ ಟೊಂಗೆಗಳು. ಎಲ್ಲಕ್ಕೂ ಮಿಗಿಲಾಗಿ ಆ ಬಿಸಿಲೇ ಒಂದು ಬೆಸುಗೆ. ಅದು ಮಲೆನಾಡಿನ ಬಿಸಿಲಿನಂತೆ ಒಳಗಿನಿಂದ ಭಾಧಿಸುವುದಿಲ್ಲ, ಹೊರಹೊರಗೆ ಉರಿದು,ಒಳಗಿನರಿವಿನ ಪರಿಯನ್ನ ವಿಸ್ತರಿಸುವ ಈ ಬಿಸಿಲಿಗೆ ಒಂದು ವಿಚಿತ್ರ ಶಕ್ತಿ ಇದೆ. ಅಂತೆಯೇ ಕನ್ನಡ ಕಾವ್ಯದ ಕೆನೆ ಎನ್ನಿಸಿಕೊಂಡ ವಚನ, ಅನುಭಾವ ಮತ್ತು ಸೂಫಿ(sufi) ಸಾಹಿತ್ಯ ಇಲ್ಲಿಯೇ ಹುಟ್ಟಿಕೊಂಡಿತು. ರಾಜಕೀಯದ ಅನೇಕ ವಿಪ್ಲವಗಳನ್ನು ಕಂಡ ಈ ನೆಲ ಇಂದಿಗೂ ಅನೇಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಅಂತಹವುಗಳಲ್ಲಿ ಎರಡು ಮಹತ್ವದ ಇತ್ತಚಿನ ದಾಖಲೆಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಒಂದು, ಮಲ್ಲಿಕಾರ್ಜುನ ಖರ್ಗೆ(Mallikarjun Kharge)ಯವರ ನೇತೃತ್ವದಲ್ಲಿ ನಿರ್ಮಾಣವಾದ ಬೌದ್ಧ(Baudha) ವಿಹಾರ, ಮತ್ತೊಂದು ಚೆನ್ನಣ್ಣ ವಾಲೀಕಾರರಿಂದ ರಚನೆಯಾದ “ವ್ಯೋಮಾವ್ಯೋಮ”.

ಎರಡೂ ಬುದ್ಧನನ್ನು ಕುರಿತಾದವುಗಳೇ. ಒಂದು ಸ್ಥಾವರ, ಮತ್ತೊಂದು ಜಂಗಮ. ಭಾರತದಿಂದ ಬೌದ್ಧ ಧರ್ಮದ ೨೨೦೦ ವರ್ಷಗಳ ಧೀರ್ಘ ಕಾಲದ ಅವಸಾನದ ನಂತರ ರಂಗೂನಿನಿಂದ ಬುದ್ಧನ ವಿಗ್ರಹವನ್ನು ತಂದು ಭಾರತದ ಪುಣೆಯಲ್ಲಿ ಸ್ಥಾಪಿಸುವುದರ ಮೂಲಕ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಬೌದ್ಧ ಧರ್ಮವನ್ನು  ಪುನರುಜ್ಜೀವನಗೊಳಿಸಿದರು. ಈಗ ಸುಮಾರು ಎಪ್ಪತ್ತು ವರ್ಷಗಳ ನಂತರ ಅದೇ ಕಾರ್ಯ ಎರಡು ಭಿನ್ನ ಮಾರ್ಗಗಳ ಮೂಲಕ ಗುಲ್ಬರ್ಗಾ(Gulbarga)ದಲ್ಲಿ ಪುನರಾವರ್ತನೆಯಾಗಿದೆ. ಪುಷ್ಯಮಿತ್ರಶುಂಗನ ಕಾಲದಲ್ಲಿ ಅನೇಕ ಬೌದ್ಧ ಭಿಕ್ಕುಗಳ ಕೊಲೆಯಾಗಿ ಬೌದ್ಧ ವಿಹಾರಗಳನ್ನು ನಾಶ ಪಡಿಸಿದ್ದಕ್ಕೆ ನಿಟ್ಟುಸಿರಿಟ್ಟಿದ್ದ ಭಾರತ ಈಗ ಗುಲ್ಬರ್ಗಾದಲ್ಲೊಂದು ಬೌದ್ಧವಿಹಾರವನ್ನು ತನ್ನುಡಿಗೆ ಹಾಕಿಕೊಳ್ಳುವ ಮೂಲಕ ನೆಮ್ಮದಿ ಪಡುವಂತಾಗಿರಬಹುದು. ಒಂದು ಕಾಲಕ್ಕೆ ಗುಲ್ಬರ್ಗಾ ಎಂದರೆ ಬಂದೇನವಾಜರ ದರ್ಗಾ ಮತ್ತು ಶರಣಬಸಪ್ಪನ ಮಠ ಎನ್ನಲಾಗುತ್ತಿದ್ದ ಈ ಊರಿಗೊಂದು ಮೂರನೆಯ ದಾರಿ ಹುಟ್ಟಿಕೊಂಡಿದೆ. ಈಗ ಗುಲ್ಬರ್ಗಾ ಎಂದರೆ ಬೌದ್ಧವಿಹಾರ.


ಇದು ಕಾಟಾಚಾರಕ್ಕೆ ಕಟ್ಟಿದ ಕಟ್ಟಡವಲ್ಲ. ಸರ್ಕಾರದ ಯಾವ ಧನಸಹಾಯವಿಲ್ಲದೆ ಜಗತ್ತಿನುದ್ದಕ್ಕೂ ಹಬ್ಬಿಕೊಂಡ ಬೌದ್ಧ ಅನುಯಾಯಿಗಳ ಸಹಾಯ ಪಡೆದು, ಪ್ರಪಂಚವೇ ಬೆರಗಾಗುವಂಥಹ ಕಟ್ಟಡ ಇಲ್ಲಿ ತಲೇ ಎತ್ತಿದೆ. ನಿಮಗೊಂದು ಕ್ಷಣ ಸಾಂಚಿಗೆ ಹೋಗಿ ಬಂದ ಖುಷಿಯಾಗುತ್ತದೆ.ದಿ. ೧೭-೩-೨೦೧೨ ರ ಈ ದಿನ ನನ್ನ ಪಾಲಿಗಂತೂ ಇನ್ನೂ ವಿಶೇಷ. ಯಾಕೆಂದರೆ ಪಾಲಿ ಭಾಷೆಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಹತ್ತು ಕೋಟಿ ರುಪಾಯಿಗಳನ್ನು ಗುಲ್ಬರ್ಗಾದ ಈ ಬೌದ್ಧವಿಹಾರಕ್ಕೆ ಬಿಡುಗಡೆ ಮಾಡಿತು. ಇಂಥಹ ಒಂದು ಅರ್ಥಪೂರ್ಣ ನೆನಪು ಮೈ ಎತ್ತಿ ನಿಲ್ಲಲು ಕಾರಣರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ನಾವು ಒಂದು ಕ್ಷಣ ಹೂತ್ಪುರ್ವಕವಾಗಿ ಅಭಿನಂದಿಸಬೇಕಲ್ಲವೇ?


ಇನ್ನೊಂದು ಮಹತ್ವದ ಕಾರ್ಯ, ಬುದ್ಧನನ್ನು ಕುರಿತಾಗಿಯೇ ಇಲ್ಲಿ ನಡೆಯಿತು ಎಂದು ಹೇಳಿದೆ. ಇದು ನನ್ನ ಕಾಲಮಾನದ ಅಚ್ಚರಿ ಎಂದು ನಾನಂತೂ ಕುಣಿದಾಡಿದ್ದೇನೆ. ಬಂದೇನವಾಜರ ದರ್ಗಾದಿಂದ ಬೌದ್ಧವಿಹಾರಕ್ಕೆ ಹೋಗುವ ದಾರಿಯಲ್ಲಿ, ಖರ್ಗೆಯವರ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಒಂದು ಸಾಧಾರಣ ಕಟ್ಟಡದಲ್ಲಿ ಅಸಾಧಾರಣ ಪ್ರತಿಭೆಯ ಜೀವವೊಂದರ ಭೇಟ್ಟಿಯಾಗುತ್ತದೆ. ಅವರೇ ನಮ್ಮ ಚೆನ್ನಣ್ಣ ವಾಲೀಕಾರ(chennanna valikar). ಬಹಳ ಚಿಕ್ಕಂದಿನಿಂದ ಬಸ್ಟ್ಯಾಂಡ್ ಪಕ್ಕದ್ದಲ್ಲಿ ಕದ್ದು ಮುಚ್ಚಿ ಮಾರಾಟವಾಗುತ್ತಿದ್ದ ‘ಓ ರಸಿಕ’, ಲಾವಣ್ಯ’ಗಳಂಥಹ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಇವರ ಪೋಲಿ, ಪೋಲಿ ಕವಿತೆಗಳನ್ನು ಓದಿದ್ದ ನನಗೆ ಈ ಚೆನ್ನಣ್ಣ  ಕರ್ನಾಟಕದ ಕಾರ್ಮಿಕ ಚಳುವಳಿ, ಕಾದಂಬರಿ, ಕಾವ್ಯ, ಜನಪರ ಹೋರಾಟ, ಮಹಾಕಾವ್ಯದ ರಚನೆ, ಸಂಶೋಧನೆ, ಕಡ್ಡಿ ಮುರಿದಂಥಹ ಮಾತುಗಳಿಂದಲೂ ಕಾಡಿದ್ದಾರೆ. ಇಂಥಹ ದೈತ್ಯ ಪ್ರತಿಭೆಯನ್ನು ಕಣ್ಣಾರೆ ನೋಡಿ ಬರಬೇಕು ಎಂಬ ನನ್ನ ಆಶೆ ಇಂದು ಫಲಿಸಿದೆ.


ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಾಂತ ಕುಸನೂರರನ್ನು ಕಾಣಲು ನಾನು ಇತ್ತಿಚಿಗೆ ಬೆಳಗಾವಿಗೆ ಹೋದಾಗ, ಬಳಲುತ್ತ ಮೇಲೆದ್ದ ಕುಸನೂರರು ನನ್ನ ಕೈಗೊಂದು ನೆಗುವಲಾರದ ಪುಸ್ತಕವನ್ನಿಟ್ಟರು. ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೂಳೆ ಮುರಿಯುವುದು ಗ್ಯಾರಂಟಿ. ಯಾವುದೋ ಅಭಿನಂದನಾ ಗ್ರಂಥವೋ, ವಿಶ್ವಕೋಶವೋ, ಇಲ್ಲಾ ಎನಸೈಕ್ಲೊಪಿಡಿಯಾ ಇರಬಹುದೆಂದು ಉಪೇಕ್ಷೆಯಿಂದಲೇ ಎತ್ತಿಕೊಂಡೆ. ಆದರೆ ಸನ್ನಿವೇಶವೇ ಬೇರೆ ಇತ್ತು. ಕೈಗಿಡುತ್ತಾ ಕುಸನೂರರು ಹೇಳಿದರು,”ನಮ್ಮ ಚೆನ್ನಣ್ಣ ಕಳ್‌ಸ್ಯಾನ, ಇದು ಮಹಾಕಾವ್ಯಂತ. ಪುಸ್ತಕದೊಳಗ ನಾನು ಒಂದ ಪಾತ್ರ ಆಗಿ ಅದೀನಂತ. ಒಂದ ಸಾವಿರ ಪುಟ ಅದ ರಾಜಶೇಖರ. ವಾಕ್ಯ ಮೊದಲನೇ ಪುಟದಾಗ ಶುರು ಮಾಡ್ಯಾನ, ಸಾವಿರನೇ ಪುಟಕ್ಕೆ ಬಂದರೂ ಫುಲ್‌ಸ್ಟಾಪೇ ಹಾಕಿಲ್ಲ. ಮಧ್ಯದೊಳಗ ಎಲ್ಲೂ ಒಂದು ಸಣ್ಣ ಕಾಮಾನೂ ಇಲ್ಲ, ಪ್ಯಾರಾಗ್ರಾಫಂತೂ ಇಲ್ಲೇ ಇಲ್ಲ. ಇದರಾಗ ನನ್ನ ಹುಡುಕು ಅಂದ್ರ ಎಲ್ಲಿ ಹುಡುಕ್ಕೋಳ್ಳಿ? ಪುಸ್ತಕ ನೋಡಿನೇ ನನ್ನ ಹೆಣಾ ಬಿದ್ದ ಹೋಗೆದ. ಮತ್ತ ಮ್ಯಾಲ ದಿನಾ ಫೋನ್ ಮಾಡಿ ಓದಿದೇನ? ಅಂತ ಜೀವಾಂ ತಿಂತಾನ, ಬಾಳ ವಿಚಿತ್ರ ಮನಷಾ ಅದಾನ. ಭಯಂಕರ ಶಕ್ತಿ. ಇಷ್ಟ ವರ್ಷ ಕೂಡಿ ಅದೀನಿ, ಅವಾಂ ಎನಂತ ನನಗಂತೂ ತಿಳಿದಿಲ್ಲ. ಅವನಿಗರ ತಿಳದದೋ ಇಲ್ಲೋ ಅವಂಗ ಗೊತ್ತು.” ಎಂದು ಪುಸ್ತಕ ಕೈಗಿಟ್ಟು ಕುಸನೂರರು ಹಾಸಿಗೆಗೊರಗಿದರು. ಹರಟೆ ಒಂದಿಷ್ಟು ಕಾಲ ಗುಲ್ಬರ್ಗಾದ ಅವರ ಹಳೆಯ ನೆನಪುಗಳನ್ನು ಒತ್ತರಿಸಿರಬೇಕು, ನಾನಂತೂ ಚೆನ್ನಣ್ಣ ವಾಲೀಕಾರರ ‘ವ್ಯೋಮಾವ್ಯೋಮ’ವನ್ನು ಹಾಗೊಮ್ಮೆ- ಹೀಗೊಮ್ಮೆ, ಮೇಲೊಮ್ಮೆ-ಕೆಳಗೊಮ್ಮೆ ಎತ್ತಾಡಿ ನೋಡಿ  ಮೊದಲ ಪುಟವನ್ನು ಓದುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಿದೆ. ಓದಬಹುದು ಎನ್ನಿಸಿತು. ಆದರೆ ಇದನ್ನು ಓದುವುದಕ್ಕಿಂತ ಮುಂಚೆ ಈ ಚೆನ್ನಣ್ಣರನ್ನು ಮುಖತಃ ಭೇಟ್ಟಿಯಾಗಬೇಕೆನಿಸಿತ್ತು.


ಈ ಹಿಂದೆ ಬಹಳಷ್ಟು ಬಾರಿ ಹೀಗೆ ಅನಿಸಿದವುಗಳಲ್ಲಿ ಕೆಲವು ಕೈಗೂಡಲಿಲ್ಲ. ಕುವೆಂಪು ಅವರನ್ನ ಕಾಣಬೇಕು, ತೇಜಸ್ವಿ(tejaswi)ಯವರೊಂದಿಗೆ ಕಾಲ ಕಳೆಯಬೇಕು ಎಂಬ ನನ್ನ ಬಯಕೆಗಳು ಬಾಯಿಗೆ ಬರುತ್ತಲೆ ಹುಸಿಯಾಗಿ ಹೋಗಿದ್ದವು. ಆದರೆ ಈ ಬಾರಿ ಹಾಗಾಗಲಿಲ್ಲ. ಅಂಬೇಡ್ಕರನ್ನ ಕುರಿತು ಮಾತನಾಡಲು ಬಂದ ಈ ಸಂದರ್ಭದಲ್ಲಿಯೆ ಚನ್ನಣ್ಣರನ್ನು ಹಿಡಿದುಬಿಟ್ಟೆ. ನಾನು ಅವರ ಮನೆಗೆ ಹೋದಾಗ ಮಧ್ಯಾನ್ಹದ ಎರಡು ಗಂಟೆಯಾಗಿರಬಹುದು. ಮೇಲಿನ ಕೊಣೆಯಲ್ಲಿ ಒಳ್ಳೆ ಏಸಿ ರೂಮ್‌ನಲ್ಲಿ ಕುಳಿತು ಬರಹ ಮಾಡುವವರಂತೆ ಸಹಾಯಕನೊಬ್ಬನನ್ನ ಇಟ್ಟುಕೊಂಡು ಚನ್ನಣ್ಣ ಧ್ಯಾನಸ್ಥರಾಗಿದ್ದರು. ಸಂಸಾರ ಕೆಳಗಿಟ್ಟು ಮೇಲಿನ ಕೊಣೆಯಲ್ಲಿ ಬರಹದಲ್ಲಿ ತೊಡಗಿಕೊಂಡಿದ್ದ ಚನ್ನಣ್ಣರನ್ನು ನೋಡಿ ನಾನೊಂದು ಕ್ಷಣ ಅಶ್ಚರಿಗೊಂಡೆ. ಕಾರಣ ಇಷ್ಟೆ ಅನೇಕ ಬಾರಿ ಕುಸುನೂರರನ್ನು ಇದೇ ತನ್ಮಯತೆಯ ಹಂತದಲ್ಲಿ ನಾನು ನೋಡಿದ್ದೆ. ಬಿಸಿಲು ನಾಡಿನ ಈ ಪ್ರತಿಭೆಗಳೇ ಹೀಗೆ. ಒಮ್ಮೆ ಒಳಗೆ ಇಳಿದರೆ ಮುಗಿಯಿತು ಲೋಕ ಅವರನ್ನು ಬಾಧಿಸುವದಿಲ್ಲ. ಚನ್ನಣ್ಣರ ಮನೆಗೆ ಹೋಗುವಾಗ ಅವರ ಖಾಸಾ ಶಿಷ್ಯರಾದ ಬಸವನಿಂಗಪ್ಪಾ ಹೂಗಾರರನ್ನು ಕರೆದುಕೊಂಡು ಹೋಗಿದ್ದೆ. ಹೀಗಾಗಿ ಸ್ನೇಹ ಇನ್ನೂ ಸಮೀಪವಾಯಿತು. ಬನಿಯನ್ ತೊಟ್ಟು ಬಾಗಿಲವರೆಗೂ ಬಂದು ಆತ್ಮಿಯವಾಗಿ ತಮ್ಮ ಪುಸ್ತಕ ಲೋಕದೊಳಗೆ ನಮ್ಮನ್ನು ಕರೆದೊಯ್ದ ಚನ್ನಣ್ಣ ಮಾತಿಗಿಳಿದರು. ಇವರು ಯಾವ ಪೀಠಿಗಳು ಅಲ್ಲದಿರುವದರಿಂದ ಪ್ರೇಮ ಮತ್ತು ಸಂಘರ್ಷ ಇಲ್ಲಿ ಸಾಧ್ಯ ಎನ್ನುವ ಭರವಸೆ ನನಗೂ ಸಾಧ್ಯವಾಯಿತು. ಈಗ ನಮ್ಮ ಸವಾಲ್ ಜವಾಬಿನ ಸಿಲ್‌ಸಿಲಾ- 

Chennanna Vaalikar in conversation with Ragam

ರಾಗಂ : ಈ ವ್ಯೋಮಾವ್ಯೋಮದ ಹಿನ್ನಲೆ ಏನು ಗುರುಗಳೆ?

ಚ.ವಾ : ಹಿಂಗ, ಒಮ್ಮಿ ಇದ್ದಕ್ಕಿದ್ದಂಗ ನಮ್ಮ ದೇವೆಂದ್ರಕುಮಾರ ಹಕಾರಿ ಹೇಳಿದ ಒಂದು ಮಾತು ನೆನಪಾತು. ಅವ್ರು ಅಂದಿದ್ರು ಮಾನ್ಯಖೇಡ ಎನ್ನುವ ಈ ನಮ್ಮ ಪ್ರದೇಶದೊಳಗ ಹೇಳಿಕೊಳ್ಳುವಂಥ ಒಂದು ಮಹಾನ್ ರಚನೆ ಯಾಕ ಆಗಲಿಲ್ಲ? ಎನ್ ಸಮಸ್ಯೆ ಅದ? ನಮ್ಮೊಳಗ ಆ ಶಕ್ತಿ ಇಲ್ಲೆನು? ಇದೊಂದ ಮಾತು, ತಲ್ಯಾಗ ಯಾವಾಗಲೂ ಹುಳಾ ಸುತ್ತದಂಗ ಸುತ್ತಾಡಲಾಕ ಸುರುಮಾಡತು. ಆಗ ನಾನು ದಿನಾಲೂ ಗುಲ್ಬರ್ಗಾದಿಂದ ರೈಚೂರಿಗೆ ಹೋಗಿ ಬರುತ್ತಿದ್ದೆ. ಟ್ರೆನ್ ಹತ್ತಿ ಕಣ್ಮುಚ್ಚಿದರ ಸಾಕು ಇದ ಪ್ರಶ್ನೆ ಕಾಡತಿತ್ತು. ಏನಾದರು ಆಗಲಿ ಕೈ ಹಾಕೆ ಬಿಡೂನು ಅಂತ ಬುದ್ಧನನ್ನ ತೆಕ್ಕಿ ಹೊಡೆದೆ, ಅಷ್ಟ. ವ್ಯೋಮಾವ್ಯೋಮ ಸಿದ್ಧ ಆಯ್ತು.

ರಾಗಂ : ಸರಿ, ಈ ರೀತಿ ಅಲ್ಪ, ಅರ್ಧ, ಪೂರ್ಣ ವಿರಾಮಗಳಿಲ್ಲದ ಸಾವಿರ ಪುಟಗಳ ಬರಹಕ್ಕೆ ಸ್ಪೂರ್ತಿ ಏನು?

ಚ.ವಾ : ಇಲ್ಲ ರಾಜಶೇಖರ, ಈ ದೇಶದ ಸಾಹಿತ್ಯ ರಚನೆಯಾಗಬೇಕಾದ ಮೂಲ ಶೈಲಿಯೊಳಗ ನಾನು ಈ ಬರಹ ಮಾಡೀನಿ. ವಾಲ್ಮಿಕಿ ವ್ಯಾಸರ ಬರಹದೊಳಗೆಲ್ಲೂ ಈ ಪಂಕ್ಚುವೇಶನ್ಸಗಳ ಪ್ರಶ್ನೆನೆ ಇಲ್ಲ. ಪಂಕ್ಚುವೇಶನ್ಸ ಅನ್ನೊದು ಪಶ್ಚಿಮದ ಪ್ರಶ್ನೆ ನಮ್ಮ ಸಮಸ್ಯೆ ಅಲ್ಲ.

ರಾಗಂ : ಇದನ್ನು ಬರೆಯುಕಿಂತ ಮೊದ್ಲ ಯಾವ ರೀತಿ ತೈಯಾರಿ ಮಾಡ್ಕೊಂದ್ರಿ?

ಚ.ವಾ : ನನ್ನನು ನಾನು ಸಮರ್ಪಿಸಿಕೊಂಡೆ. ಬುದ್ಧ ಎನ್ನುವ ಚೇತನಕ್ಕ ನನ್ನನು ನಾನು ಸಮರ್ಪಿಸಿಕೊಂಡೆ. ಒಂದು ಮಜಾ ಗೊತ್ತಿರಲಿ. ಯಾವುದೇ ಒಂದು ಶಕ್ತಿಗೆ ನಾವು ಸಮರ್ಪಿಸಿಕೊಂಡ್ರ ಅದು ನಮಗ ಅರ್ಪಿಸಿಕೊಳ್ಳತದ. ಈ ಬರಹದ ವಿಷಯದಲ್ಲಿ ಹಂಗ ಆಯ್ತು. ದಿನಾಲೂ ನಸುಕಿನ ಮೂರರಿಂದ ಐದರವರೆಗೆ ಇಪ್ಪತ್ತು ವರ್ಷ ನಿರಂತರವಾಗಿ ಬರೆದೆ. ಅದಕ್ಕ ಪಾಲಿಸಿದ್ದ ನೇಮ ಇಷ್ಟೆ - ಹಗಲು ಗದ್ಯ ರಾತ್ರಿ ಪದ್ಯ
    ಎರಡು ಸಾರಿ ಜಳಕವು
                                    ಬೈಗು ಬೆಳಗು ದೇಹ ದಾರ್ಡ್ಯ
                                    ಎರಡು ಸಾರಿ ಊಟವು

ಜಗತ್ತಿನ ಎಲ್ಲ ತತ್ವಜ್ಞಾನಿಗಳನ್ನ ಓದಿಕೊಂಡೆ. ಹಿಂಗ ಓದಲಾಕ ಒಂದು ಇಪ್ಪತ್ತು ವರ್ಷ ಕಳೆದೀನಿ.

ರಾಗಂ : ಈ ಬರಹ ನಿಮ್ಮ ದೇಹವನ್ನೇನಾದರು ಬಾಧಿಸ್ತೇನು?

ಚ.ವಾ : ಈಗ ನನಗ ವಯಸ್ಸು ಅರವತ್ತೆಂಟು. ನನಗೇನು ಇದರಿಂದ ತೊಂದರಿ ಆಗ್ಯಾದ ಅಂತ ಅನಿಸಿಲ್ಲ. ಹಂಗ ನೋಡಿದ್ರ ಈ ಬರಹದಿಂದ ನನ್ನ ಆರೋಗ್ಯ ಸುಧಾರಿಸ್ತು.

ರಾಗಂ : ಬರಹವನ್ನ ಮೊದಲಿಗೆ ಯಾರಿಗೆ ತೋರಿಸಿದ್ರಿ?

ಚ.ವಾ : ಯಾರಿಗೂ ತೋರಿಸಲಿಲ್ಲ. ಬರಗೂರು, ಕೀ.ರಂ ಭಾಳ ಕಾಡತಿದ್ರು, ಅದೇನ್ರ ಬರೆದಿದೀ ನಮಗೂ ಒಂದಿಷ್ಟು ತೋರ್ಸ್ರು ಅಂತಿದ್ರು. ನಾನು ಯಾರಿಗೂ ತೋರಿಸಲಿಲ್ಲ. ನೋಡಿ ಏನರ ಅಂದ ಬಿಟ್ಟರ ಎಲ್ಲಿ ನನ್ನ ಬರಹ ನಿಂತು ಹೋದೀತೂ ಅಂತ ಭಯ ಇತ್ತು ನನಗ. ಹಿಂಗಾಗಿ ಯಾರಿಗೂ ತೋರಿಸಲಿಲ್ಲ. ಕೊನೆಗೊಮ್ಮ ಒಯ್ದು ಕೀ.ರಂ ಮುಂದಿಟ್ಟೆ. ಅವ್ರು ನೋಡಿ ಗಾಭರ್‍ಯಾದ್ರು. ಏನೂ ಮಾತಾಡ್ಲಿಲ್ಲ. ಉದ್ದೇಶ ಇಷ್ಟ ತಾನು ತಾನಾಗಬೇಕು. ಹಂಗ ಆಗು ವ್ಯಾಳ್ಯಾಕ ಅದೆಲ್ಲೂ ಹೋರಬೀಳಬಾರ್‍ದು.

ರಾಗಂ : ಬಿಡುಗಡೆಯ ಸಂದಂರ್ಭ ಭಾಳ ಮಜಾ ಇತ್ತು ಅಂತ ಕೇಳೀನಿ.

ಚ.ವಾ : ಹೌದು, ಪುಸ್ತಕ ಬಂತು ಅನಂತಮೂರ್ತಿ(Anantamurthi)ಯವರಿಗೆ ಫೋನ್ ಮಾಡ್ದೆ. ಅವ್ರು ಅಂದ್ರು ‘ನೀನು ನನ್ನ ಪ್ರೀತಿಯ ಮನುಷ್ಯ ನಾ ಬಂದ$ ಬರ್‍ತೀನಿ. ಮುಂದ ಪುಸ್ತಕಾ ಕಳಸ್ದೆ. ತಪಾಸ ಇಲ್ಲ. ಏನೋ ಒಂದು ಸಣ್ಣದು ಕಳಸ್ತನ ಅಂತ ಅವರು ತಿಳಿದಿದ್ರು.  ಇದ್ದಕ್ಕಿದ್ದಂಗ ವಲ್ಲೆ ಅಂದ್ರ ನಾ ಹ್ಯಾಂಗ ಬಿಡುದು? ಮತ್ತ ಫೋನ್ ಮಾಡ್ದೆ, ಹೇಳ್ದೆ. ನನ್ನ ಪುಸ್ತಕ ನಿವೇನು ಪೂರಾ ಓದಬಾಡ್ರಿ, ನಿಮಗಾದಷ್ಟು ಓದ್ರಿ. ಕಡೀಗಿ ಒಂದೇ ಪೇಜ್ ಓದಿ ಮಾತಾಡ್ರಿ. ಅವರೆಲ್ಲಾ ದೊಡ್ಡೊರು. ಓದಿ ಹೇಳದ್ರ ನಾನು ಮತ್ತೊಂದಿಷ್ಟು ಸುಧಾರಿಸ್ಕೋತೀನಿ. ಆದರ ಅವ್ರು ಒಪ್ಪಲಿಲ್ಲ. ಇದ್ದ ವಿಷ್ಯಾನ ಕೀ.ರಂಗೆ ಹೆಳ್ದೆ. ಅಂವ ಅನಂತಮೂರ್ತಿಯವರನ್ನ ತರಾಟೆಗೆ ತೊಗೊಂಡ. ಕಡೀಗಿ ಅವರು ಒಪ್ಪಿಕೊಂಡ್ರು. ಅವ್ರು ಹೇಳಿದ್ರು ‘ಖರೆ ಹೇಳಬೇಕಂದ್ರ ಕೀ.ರಂ ನಾನು ಆ ಪುಸ್ತಕಾನ ಓದಿಲ್ಲ. ನನ್ನಿಂದ ಓದಾಕೂ ಆಗುದಿಲ್ಲ. ಅದು ಭಯಂಕರ ಅದ$’ ನಾನು ಅಷ್ಟ ಸಾಕ ಅಂದೆ. ಅನಂತಮೂರ್ತಿಯವರು ಖರೆ ಮಾತಾಡ್ಯಾರಲ್ಲಾ ಅಷ್ಟೆ ಸಾಕು ಅಂದೆ.

ರಾಗಂ : ಹಂಗಾದ್ರ ಕೃತಿ ಬಿಡುಗಡೆ ಏನಾಯ್ತು?

ಚ.ವಾ : ಕೃತಿ ಬಿಡುಗಡೆ ಅಂತು ಆಯ್ತು. ಕಲ್ಬುರ್ಗಿ ಅದ್ಯಕ್ಷತೆಯೊಳಗ ಸಿ.ಎನ್.ರಾಮಚಂದ್ರನ್(C.N.R) ಪುಸ್ತಕ ಬಿಡುಗಡೆ ಮಾಡಿದ್ರು. ಎಚ್.ಎಸ್.ರಾಘವೇಂದ್ರರಾವ್ ಕೃತಿ ಕುರಿತು ಮಾತಾಡದ್ರು ಬಾಳ ಛಲೋ ಆಯ್ತು. ನಾ ಹೇಳುದು ಏನು ಇರಲಿಲ್ಲ. ಗಾಲಿಬ್ ಒಂದಕಡೆ ಹೇಳ್ತನ ‘ಗಾಲಿಬ್ ಹೇಳೂದು ಹೇಳಿ ಬಿಟ್ಟಾನ, ಅವನಕಿಂತಲೂ ಛಲೋ ಹೇಳವ್ರು ಹೇಳಬಹುದು.’ ನನ್ನದೂ ಇದೇ ವಾದ. ಇಪ್ಪತ್ತು ವರ್ಷ ಓದಿ, ಇಪ್ಪತ್ತು ವರ್ಷ ಬರೆದು ನಾನು ಏನ್ ಹೇಳಬೇಕ ಅಂದಿದ್ನಿ ಅದೆಲ್ಲನೂ ಹೇಳಿ ಬಿಟ್ಟಿನಿ. ಬಾಕಿ ಉಳಿದವ್ರು ಹೇಳ ಬೇಕು.

ರಾಗಂ : ಜ್ಞಾನಪೀಠದ ಪ್ಲ್ಯಾನ್ ಇದ್ರ ನಮ್ಮಲ್ಲಿ ಮಹಾ ಕಾವ್ಯ ಹುಟ್ಟತಾವ. ಇಲ್ಲ ಯಾರಿಗೋ ಒಬ್ಬರಿಗೆ ಜ್ಞಾನಪೀಠ ಕೊಡಬೇಕಾಗಿದ್ರ ಅವರ ಅಭಿನಂದನಾ ಗ್ರಂಥಗಳೂ ಮಹಾಕಾವ್ಯದಂಗ ಚರ್ಚೆ ಆಗತಾವ. ಇದರೋಳಗ ನಿಮ್ಮದು ಯಾವ ದಾರಿ?

ಚ.ವಾ : ನಮ್ಮದು ಬುದ್ಧನ ದಾರಿ. ಬಿದ್ದು ಬಿದ್ದು ಒದ್ದಾಡಿ ಜ್ಞಾನಪೀಠ, ಆ ಪೀಠ ಈ ಪೀಠ ಇವುಗಳ ಹಿಂದ ಎಂದೂ ಹೋಗಾಂವಲ್ಲಾ. ನಾ ಹೋಗುವ ದಾರಿ ಇನ್ನು ದೀರ್ಘ ಅದ. ವ್ಯೋಮಾವ್ಯೋಮದ ಮುಂದಿನ ಭಾಗ ಆತ್ಮಾ ಅನಾತ್ಮಾದ ತಯಾರಿ ನಡೆದದ. ಕನಿಷ್ಟ ಎರಡು ಸಾವಿರ ಪುಟ ಆಗಬಹುದು. ೨೦೧೩ ರಕ್ಕ ಹೋರಗ ಬರಬಹುದು. ಅಂದಗ್ಹ ಮೇ ೧ ನೇ ತಾರಿಕಿಗೆ ಜಾಗತಿಕ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಐತಿ. ಆವತ್ತಿನ ನನ್ನ ಪಾತ್ರ ಒಂದನಾರ್ಪಣೆ, ನೀವೂ ತಪ್ಪಿಸಬ್ಯಾಡ್ರಿ.
ಕುಳಿತಿದ್ದರೆ ಇನ್ನು ಮಾತನಾಡುತ್ತಿದ್ದರೆನೋ ಚನ್ನಣ್ಣ ಆದರೆ ಕಾಲದ ಪರಿಧಿಯೊಳಗೆ ಸುತ್ತುವ ಮನುಷ್ಯ ಸ್ವತಂತ್ರನಲ್ಲ. ಅಂದಹಾಗೆ ತಡವಾಗಿಯಾದರೂ ಚಿಂತೆಯಿಲ್ಲ ಚನ್ನಣ್ಣನವರ ವ್ಯೋಮಾವ್ಯೋಮದ ತುಲನಾತ್ಮಕ ಅಧ್ಯಯನ ಕುವೆಂಪು ಅವರ ರಾಮಾಯಣ ದರ್ಶನಂ, ಗೋಕಾಕರ ಭಾರತ ಸಿಂಧೂ ರಶ್ಮಿ ಹಾಗೂ ಇನ್ನೂ ಅನೇಕ ಕೃತಿಗಳೊಂದಿಗೆ ನಾಡಿನುದ್ದಕ್ಕೂ ಇಷ್ಟರಲ್ಲಿಯೆ ಶುರು ಆಗೊದಿದೆ.
ಒಂದೇ ಮಾತು ಗುಲ್ಬುರ್ಗಾದ ಬಿಸಿಲು ಬಾಡುವುದಿಲ್ಲ ಹಾಗೆಯೆ ಚನ್ನಣ್ಣನವರ ವ್ಯೋಮಾವ್ಯೋಮ ಎಚ್ಚರಾಗಿರುವ, ಮುಕ್ತವಾಗಿರುವ ಯಾವ ಮನಸ್ಸನ್ನೂ ಕಾಡದೇ ಇರುವುದಿಲ್ಲ.


                                                                                   

No comments:

Post a Comment