Total Pageviews

Saturday, August 18, 2012

ಟಿ.ಎಸ್.ನಾಗಾಭರಣ(T S Nagabharana) ರ `ಬ್ಯಾಂಕರ್ ಮಾರ್ಗಯ್ಯ’ (Financial expert)


                                                                                  
                 
                      ( ನಾಗಾಭರಣರಿಗೆ ಅರವತ್ತು ವರ್ಷ ತುಂಬಿದ ಸಂದರ್ಭ)

Banker Margayya
" ಸಾಲ ಸಲಹೆಗಾರ, ನಶೆ ಪುಡಿ ಮಾರಾಟಗಾರ, ಹಲ್ಲು ಪುಡಿ ಮಾರಾಟಗಾರ, ಪ್ರಕಾಶಕ, ಬ್ಯಾಂಕರ್ ಹೀಗೆ ರೂಪಾಂತರಗೊಳ್ಳುತ್ತ ಹೋದ ಮಾರ್ಗಯ್ಯ ಒಬ್ಬ ಶುದ್ಧ ಲೌಕಿಕ. ಲೌಕಿಕತೆಯ ಆತನ ತಪಸ್ಸನ್ನು ನೀವು ಸಂಶಯಿಸುವಂತಿಲ್ಲ. ಯಾಕೆಂದರೆ ವ್ಯವಹಾರಿಕನಾಗಿ ಏನೆಲ್ಲ ಏರಿಳಿತಗಳನ್ನು ಕಾಣುವ ಆತನಲ್ಲಿ ಸಾಂಸಾರಿಕ ಕಾಳಜಿಯ ವ್ಯಕ್ತಿ ಘನತೆಯ ಬಿರುಕುಗಳಿಲ್ಲ. ತನ್ನ ಗೆಲುವಿನೊಂದಿಗೆ ಸಂಸಾರ ಗೆಲ್ಲಬೇಕು, ತತ್ವ ಗೆಲ್ಲಬೇಕು, ಸಮಾಜ ಗೆಲ್ಲಬೇಕು ಎನ್ನುವುದೇ ಮಾರ್ಗಯ್ಯನ ವ್ಯಕ್ತಿತ್ವಕ್ಕಿರುವ ಸೌಂದರ್ಯ. ಈ ನಿಟ್ಟಿನಲ್ಲಿ ಬ್ಯಾಂಕರ್ ಮಾರ್ಗಯ್ಯ ಕನ್ನಡ ಸಮಾಜ ಎಲ್ಲ ಕಾಲಕ್ಕೂ ಒಪ್ಪಿಕೊಳ್ಳುವ ಒಂದು ಪಾತ್ರ. ಬರೀ ಕಾದಂಬರಿಯ ಚೌಕಟ್ಟಿನಲ್ಲಿ ಉಳಿದುಕೊಂಡಿದ್ದರೆ ಆತ ನಮ್ಮನ್ನು ಕಾಡುತ್ತಿದ್ದನೋ ಏನೋ ಆತ ಸಿನಿಮಾದಲ್ಲಿ ನಾಗಾಭರಣರಿಂದ ಪುನರ್ಜನ್ಮ ಪಡೆದದ್ದು ನಮ್ಮನ್ನು ಎಲ್ಲ ಕಾಲಕ್ಕೂ ಕಾಡಲು ಪ್ರಾರಂಭವಾಗಿದೆ."


ಕನ್ನಡಿಗರು ಮರೆಯಬಹುದಾದ ಚಿತ್ರವಲ್ಲ ಬ್ಯಾಂಕರ್ ಮಾರ್ಗಯ್ಯ(Banker Margayaa). ಕಾರಣಗಳು ಅನೇಕ. ಪ್ರಥಮತಹ ಇದು ಟಿ.ಎಸ್.ನಾಗಾಭರಣರ(T S Nagabharana) ನಿರ್ದೇಶನದಲ್ಲಿ ಒಡಮುಡಿದ ಕಲಾ ಕೃತಿ. ಎರಡನೆಯದಾಗಿ ಈ ಚಿತ್ರ ಮೂಲತಃ ಭಾರತೀಯ ಇಂಗ್ಲೀಷ ಸಾಹಿತಿ ಆರ್.ಕೆ.ನಾರಾಯಣ(R K Narayan)ರ ಕಾದಂಬರಿಯನ್ನು ಆಧಾರಿಸಿದ್ದು. ಮೂರನೆಯದಾಗಿ ಈಡಿ ಸಿನಿಮಾ ಕೊಪ್ಪ ಗ್ರಾಮದಲ್ಲಿ ಶೂಟ್ ಆಗಿದ್ದ. ಕೊಪ್ಪ, ಕಳಸ ಹೊರನಾಡಿನ ಆ ಅಗಾಧ ಮೌನವನ್ನು ಇಂದಿಗೂ ಅನುಭವಿಸುವಂತೆ ಮಾಡಿದ್ದು. ಇದೇಲ್ಲದಕ್ಕೆ ಕಳಸಪ್ರಾಯವೆನ್ನುವಂತೆ ನಟ ಲೋಕೆಶ(Actor Lokesh)ರ ಮನೋಜ್ಞ ಅಭಿನಯ.
          ಭಾರತ ಸಾಹಿತ್ಯದಲ್ಲಿಯೂ ಬಹಳಷ್ಟು ಪ್ರಯೋಗಶೀಲವಾದುದ್ದನ್ನು ನೀಡಿತು. ಸಿನಿಮಾದಲ್ಲಿಯೂ ಪ್ರಯೋಗಶೀಲತೆಯ ಸಾಕಷ್ಟು ದೀರ್ಘ ದಾರಿಯನ್ನು ಕ್ರಮಿಸಿತು. ಆದರೆ ಈ ಸಾಹಿತ್ಯ ಮತ್ತು ತಂತ್ರಜ್ಞಾನ ಅತ್ಯಂತ ಯಶಸ್ವಿಯಾಗಿ ಸಮೀಕರಣಗೊಂಡಿದ್ದಕ್ಕೆ ಸಾಕ್ಷಿಗಳು ಕಡಿಮೆ. ಹಿಂದಿ ಚಿತ್ರ ಜಗತ್ತಿಗೆ ಹೋದರೆ ಸಂಗೀತ ಮತ್ತು ಸಿನಿಮಾಕೆ ಸಾಮರಸ್ಯ ಸಾಧ್ಯವಾಗುವುದನ್ನು ನೋಡಬಹುದು. ಆದರೆ ಅದೇ ಪ್ರಮಾಣದಲ್ಲಿ ಕಾದಂಬರಿಕಾರ ಮತ್ತು ಸಿನಿಮಾಕ್ಕೆ, ಕಥೆಗಾರ ಮತ್ತು ಸಿನಿಮಾಕ್ಕೆ ಸಾಮರಸ್ಯ ಒಡಮೂಡಿ ಹೊರಬಂದ ಕಲಾಕೃತಿಗಳ ಲೆಕ್ಕ ನೋಡಿದರೆ ಒಂದು ಶೋಚನೀಯ ಸನ್ನಿವೇಶವೇ ಎದುರಾಗುತ್ತದೆ. ಹಿಂದಿಯಲ್ಲಿ ಸಂಗೀತ ,ಸಾಹಿತ್ಯ ಮತ್ತು ಸಿನಿಮಾ ಮೂರು ಸೇರಿಕೊಂಡು ಎಪ್ಪತ್ತರ ದಶಕದವರೆಗೂ ಚಿತ್ರರಂಗವನ್ನು ಆಳಿದ ಪರಿಯನ್ನು ಯಾರೂ ಮರೆಯುವಂತಿಲ್ಲ. ಆದರೆ ಇಂಥ ಅಮೋಘ ಘಳಿಗೆ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಾಧ್ಯವಾಗಲಿಲ್ಲ. ಸಾಧ್ಯವಾಗಿದ್ದರೂ ಅದು ಕೆಲವರಿಗೆ ಮಾತ್ರ. ಅಂಥ ಕೆಲವರಲ್ಲಿ ಕನ್ನಡದ ನಾಗಾಭರಣರು(T S Nagabharana) ಒಬ್ಬರು.
         ಗಮನಿಸಬೇಕು, ನಾಗಭರಣರೊಬ್ಬರೇ ಎಂದು ನಾನು ಹೇಳುತ್ತಿಲ್ಲ ಇವರದೊಂದು ದೊಡ್ಡ ಪರಂಪರೆ ಕನ್ನಡದಲ್ಲಿದೆ. ಸತ್ಯಜೀತ್‌ರೆ(Satyajith re),  ಶ್ಯಾಂ ಬೆನಗಲ್( Shyam Benagal), ಕೆ.ಎ.ಅಬ್ಬಾಸ್(K A Abbas), ಬಟ್ಟಾಚಾರ್ಯ(Bhattacharya)ರಂತೆಯೆ ಕನ್ನಡದಲ್ಲಿಯೂ ಪುಟ್ಟಣ್ಣ ಕಣಗಾಲ್(Puttanna Kanagal), ಎಂ.ಎಸ್.ಸತ್ಯು(M S Satyu), ಕಾಸರವಳ್ಳಿ(Girish Kaasaravalli), ನಾಗತೀಹಳ್ಳಿ(Naagatihalli Chandrasekhar), ಗಿರೀಶ ಕಾರ್ನಾಡ(Girish karnad) ಹಾಗೂ ನಾಗಾಭರಣ(Nagabharana)ರಂಥವರ ದೊಡ್ಡ ಪಡೆಯೇ ಬಂತು. ಓದಿನ ದೊಡ್ಡ ಹರವು, ಪ್ರಾದೇಶಿಕ ಭಾಷೆ ಸಾಹಿತ್ಯಿಕ ಅರಿವು, ಸಮಕಾಲೀನ ಪ್ರಜ್ಞೆ, ಭವಿಷ್ಯದ ಕಾಳಜಿ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದ ಇವರು ಇದುವರೆಗೆ ನೀಡಿದ ಕಲಾಕೃತಿಗಳು ಎಲ್ಲ ಕಾಲಕ್ಕೂ ಸಲ್ಲುವಂಥವುಗಳೇ. ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಒಲಯಗಳಲ್ಲಿಯೂ ಗಂಭೀರವಾಗಿ ಚರ್ಚೆಗೊಳಗಾಗಬೇಕಾದವುಗಳೇ. ಆದರೆ ಆಗಿಲ್ಲವಲ್ಲ ಎನ್ನುವುದು ಮಾತ್ರ ಖೇದದ ಸಂಗತಿ.
         ನಾಗಾಭರಣರ(Nagabharana)  ಬ್ಯಾಂಕರ್ ಮಾರ್ಗಯ್ಯ (Banker Margayya)ನಾಲ್ಕೇ ಸಾಲುಗಳನ್ನು ಬರೆಯಿಸಿಕೊಳ್ಳುವ ಸಿನಿಮಾ ಅಲ್ಲ. ಕೋಮಲ್ ಪ್ರೊಡಕ್ಶನ್ ಅರ್ಪಿಸಿದ, ಆರ್.ಕೆ.ನಾರಾಯಣರವರ ಫೈನಾನ್‌ಸಿಯಲ್ ಎಕ್ಸಪರ್ಟ್(Financial Expert)  ಕಾದಂಬರಿಯಾಧಾರಿತ ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಅಪ್ಪಟ ಕಲಾವಿದರೆಂದೇ ಖ್ಯಾತರಾದ ಲೊಕೇಶ(Lokesh), ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ (Musuri krishnamurthi) ಮತ್ತು ಜಯಂತಿ(Jayanti) ಸೇರಿಕೊಂಡಿದ್ದಾರೆ. ಈ ಆಯ್ಕೆಯೇ ಸಾಕು ನಿರ್ದೇಶಕ ಟಿ.ಎಸ್.ನಾಗಾಭರಣ(T S Nagabharana)ರ ಸಿನಿಮಾ ಓದಿನ ಸೂಕ್ಷ್ಮತೆಯನ್ನ ಗಮನಿಸಲು. ಯಾವ ಪಾತ್ರಕ್ಕೆ ಯಾವ ನಟ, ಎಷ್ಟರ ಮಟ್ಟಿಗಿನ ನ್ಯಾಯ ಒದಗಿಸಬಲ್ಲ ಎನ್ನುವುದನ್ನು ತಿಳಿಯಲಾಗದ ನಿರ್ದೇಶಕ ಎಷ್ಟು ಸಿನಿಮಾಗಳನ್ನು ಮಾಡಿದರೂ ಅಷ್ಟೆ. ಅವನೂ ಒಬ್ಬ ನಿರ್ದೇಶಕನಾಗಿರುತ್ತಾನೆ ಆದರೆ ಜನಾಂಗದ ಕಣ್ಣನ್ನು ತೆರೆಯುವ ನಿರ್ದೇಶಕನಾಗಲು ಸಾಧ್ಯವಿಲ್ಲ.
ಆರ್.ಕೆ.ನಾರಾಯಣ(R K Narayan)ರ ಕಾದಂಬರಿಯನ್ನು ಆಧರಿಸಿ ಹಿಂದಿಯ ದೇವಾನಂದರು `ಗೈಡ್’(Guide) ಸಿನಿಮಾ ಮಾಡಿದ್ದಾರೆ. ಆದರೆ ಕಲಾತ್ಮಕತೆಯ ಜಾಡಿನಿಂದ ಜಾರಿ ಅಪ್ಪಟ ವ್ಯಾಪಾರಿ ಸಿನಿಮಾ ಆದ ಅಲ್ಲಿ ನಿರ್ದೇಶಕ ಮೂಲ ಕಾದಂಬರಿಕಾರನನ್ನು ಸಮಾಧಾನಪಡಿಸುವುದಾಗಿಲ್ಲ. ಆದರೆ ಇಂಥ ಒಂದು ಅವಿಶ್ವಾಸವನ್ನು ಲೇಖಕನಿಂದ ಗಳಿಸಿಕೊಳ್ಳದೇ ನಾಗಾಭರಣರು ಬ್ಯಾಂಕರ್ ಮಾರ್ಗಯ್ಯ(Financial expert)  ಮಾಡಿರುವುದು ಅವರ ನೈಪುಣ್ಯಕ್ಕೆ ಹಿಡಿದ ಕನ್ನಡಿ. ನಿರ್ದೇಶಕನ ಸಂಕಟಗಳು ನೂರಾರು. ಆದರೆ ಆ ಸಂಕಟಗಳಿಂದ ಗೆದ್ದವರು ಮಾತ್ರ ಕೆಲವೇ ಜನ. ತ.ರಾ.ಸು (Ta.Ra.Su)ಅವರ ನಾಗರ ಹಾವು(Nagarahaavu), ಆಕಸ್ಮಿಕ(Akasmika),  ಕುವೆಂಪು (Kuvempu) ಅವರ ಕಾನೂನು ಸುಬ್ಬಮ್ಮ ಹೆಗ್ಗಡತಿ(Kanuru subbamma heggadati) ಹೀಗೆ ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ, ವಿಚಾರವಿಷ್ಟೆ ಇವುಗಳನ್ನು ಆಧಾರಿಸಿದ ಸಿನಿಮಾಗಳು ಲೇಖಕನಿಗೆ ಸಮಾಧಾನವನ್ನು ತರಲಿಲ್ಲ. ನಾಗಾಭರಣರ `ಬ್ಯಾಂಕರ್ ಮಾರ್ಗಯ್ಯ’ (Banker Margayya)ಈ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ ಬದಲಾಗಿ ಸಮಾಧಾನದ ಪಟ್ಟಿಗೆ ಸೇರಿಕೊಳ್ಳುತ್ತದೆ.
ಅಲ್ಬರ್ಟ ಕಾಮುನ ಮೆಟಾಮಾರ್ಪಸಿಸ್ ನೀವು ಓದಿರದೇ ಇದ್ದರೆ ಚಿಂತೆ ಇಲ್ಲ. ಯಾಕೆಂದರೆ ಮನುಷ್ಯ ರೂಪಾಂತರಗೊಳ್ಳುತ್ತ ಹೋಗುವ ಮತ್ತು ಆ ಮೂಲಕ ಮಾಗುವ ಒಂದು ಮಹತ್ವದ ಕಥೆಯನ್ನು ಆತ ಹೇಳುತ್ತಾನಷ್ಟೆ. 

 

ನಾಗಾಭರಣರ `ಬ್ಯಾಂಕರ್ ಮಾರ್ಗಯ್ಯ’ ಇದನ್ನೆ ಪುನರುಚ್ಚರಿಸುತ್ತದೆ.
ಸಿನಿಮಾ ಪ್ರಾರಂಭವಾದಾಗ ಮಾರ್ಗಯ್ಯನ ಪಾತ್ರದಲ್ಲಿರುವ ಲೊಕೇಶ ಹಳ್ಳಿಗರಿಗೆ ಸೋಸೈಟಿಯೊಂದರಿಂದ ಸಾಲ ಎತ್ತುವ ಪಾಠಕಲಿಸುವ ಒಬ್ಬ ಮನುಷ್ಯ. ಮುರುಕು ಪೆಟ್ಟಿಗೆ, ಅಕ್ಷರ ಜ್ಞಾನ ಬಿಟ್ಟರೆ ಈ ಮಾರ್ಗಯ್ಯನ ಬಳಿ ಮತ್ತೇನು ಇಲ್ಲ. ಆತನ ಬಂಡವಾಳವೇ ಆತನ ತಲೆ. ಈ ತಲೆಯೊಂದಿದ್ದರೆ ಸಾಕು ಈ ಪ್ರಪಂಚವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು ಎಂದು ನಂಬಿರುವ ಇ ಮನುಷ್ಯ ರೂಪಾಂತರಗೊಳ್ಳುತ್ತ ಹೋಗುವುದನ್ನ ನಾಗಾಭರಣ ಅದ್ಭುತವಾಗಿ ಚಿತ್ರಿಸಿದ್ದಾರೆ. ಸೋಸೈಟಿಯೊಂದರ ಮುಂದೆ ಬೇವಿನ ಮರದ ಕೆಳಗೆ ಕುಳಿತು ಹಣ ಗಳಿಸುವ ದಾರಿಗಳನ್ನು ಹುಡುಕುವ ಮಾರ್ಗಯ್ಯ ಸ್ವತಃ ಮಾರ್ಗವೊಂದರ ಶೋಧದಲ್ಲಿರುವ ಪಾತ್ರ. ಆದರೆ ತನ್ನ ಈ ಸತ್ಯ ಶೋಧನೆಗೆ ಸಮಾಜ, ಧರ್ಮ, ಕುಟುಂಬ ಏನೆಲ್ಲವನ್ನು ಬಳಸಿಕೊಳ್ಳುತ್ತ ಹೋಗುತ್ತಾನೆ. ಬಡವನಾಗಿ ಹುಟ್ಟಿದ ಆತನಿಗೆ ಬಡವನಾಗಿ ಸಾಯುವ ಹೇಡಿತನವಿಲ್ಲ. ಬದುಕಿನ ಈ ಪಂದ್ಯವನ್ನ ಹೇಗಾದರೂ ಗೆಲ್ಲಬೇಕು ಎನ್ನುವುದು ಆತನ ಹವಣಿಕೆ ಅಲ್ಲ. ಯಶಸ್ವಿಯಾಗಿಯೇ ಗೆಲ್ಲಬೇಕೆನ್ನುವುದು ಆತನ ಹಠ. ಅದಕ್ಕಾಗಿ ಆತ ಯಾವ ತಪಸ್ಸು, ಪೂಜೆ, ನಿಗ್ರಹ ಮತ್ತು ತ್ಯಾಗಕ್ಕೂ ಸಿದ್ಧ.
 ಸುಖಾಸುಮ್ಮನೆ ಸಡೆದಿದ್ದ ಆತನ ವ್ಯವಹಾರದ ಪುಸ್ತಕವೊಂದು ಮಗನ ಅಚಾತುರ್ಯದಿಂದಾಗಿ ಚರಂಡಿಗೆ ಬಿಳುತ್ತದೆ. ಅದರೊಂದಿಗೆ ಮಾರ್ಗಯ್ಯನ ಮೊದಲ ವ್ಯವಹಾರಗಳು ಚರಂಡಿ ಸೇರುತ್ತದೆ. ಇನ್ನೆನು ಮಾಡಬೇಕು ಎಂದು ಹತಾಶನಾಗಿ ಕುಳಿತಿದ್ದ ಮಾರ್ಗಯ್ಯನಿಗೆ ಪೂಜಾರಿಯೊಬ್ಬ ನಲವತ್ತೆಂಟು ದಿನಗಳ ಕಠಿಣ ವೃತವನ್ನು ಬೋಧಿಸಿ ಶ್ರೀಮಂತನಾಗುವ ದಾರಿ ತೋರಿಸುತ್ತಾನೆ. ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನಿಯೊಬ್ಬ ಬೇಟ್ಟಿಯಾಗಿ ತಾನು ಬರೆದ ಲೈಂಗಿಕತೆಯ ಪುಸ್ತಕವನ್ನ ಮಾರ್ಗಯ್ಯನ ಕೈಗಿಡುತ್ತಾನೆ. ಅದನ್ನು ಮುದ್ರಿಸಿದರೆ ಕೋಟ್ಯಾಂತರ ಹಣವನ್ನು ಮಾಡಬಹುದು ಎಂದು ಬೇರೆ ತಿಳಿಸುತ್ತಾನೆ. ಬಡತನದಿಂದ ಕಂಗೆಟ್ಟು ಹೋದ ಮಾರ್ಗಯ್ಯನಿಗೆ ಹೇಗಾದರೂ ಸರಿ ಹಣ ಬಂದರೆ ಸಾಕಾಗಿದೆ. ಆಗ ಆತ  ಆ ಕೃತಿಯನ್ನು ಪ್ರಕಟಿಸುತ್ತಾನೆ. ಇದ್ದಕ್ಕಿದ್ದಂತೆ ನೂರಾರು ಮುದ್ರಣವನ್ನು ಕಂಡ ಆ ಕೃತಿಯ ಪರಿಣಾಮದಿಂದಾಗಿ ಮಾರ್ಗಯ್ಯ ದಿಢೀರ್ ಶ್ರೀಮಂತನಾಗುತ್ತಾನೆ. ತುತ್ತು ಅನ್ನಕ್ಕೂ ಗತಿಯಿಲ್ಲದ ಈತ ಶಿಕ್ಷಣ ತಜ್ಞನಾಗುತ್ತಾನೆ. ಕಾರ್‌ನಲ್ಲಿ ಸುತ್ತಾಡುವಷ್ಟು ಶ್ರೀಮಂತನಾಗುತ್ತಾನೆ. ಆದರೆ `ದೀಪದ ಬುಡದಲ್ಲಿಯೇ ಕತ್ತಲೆ’ ಎನ್ನುವಂತೆ ಆತ ಪ್ರಕಟಿಸಿದ ಈ ಪುಸ್ತಕ ಆತನ ಸಂಸಾರಕ್ಕೇ ಮುಳುವಾಗುತ್ತದೆ. ಮಗ ಲಂಪಟನಾಗುತ್ತಾನೆ. ಅಪ್ಪನ ಈ ಪುಸ್ತಕವನ್ನು ಓದುತ್ತಾ  ತಾನು ಓದಬೇಕಾದ ಪುಸ್ತಕಗಳನ್ನು ಮರೆಯುತ್ತಾನೆ. ಈಗ ಮಾರ್ಗಯ್ಯ ತಬ್ಬಿಬ್ಬಾಗುತ್ತಾನೆ.
         ಶುದ್ಧ ಸಂಸಾರಿಯಾದ ಮಾರ್ಗಯ್ಯನಿಗೆ ಈಗ ಮತ್ತೊಂದು ಪ್ರಶ್ನೆ. ತನ್ನ ಸಂಸಾರವನ್ನು ಉಳಿಸಿಕೊಳ್ಳುವುದು. ಮತ್ತೆ ಅದೇ ಸಮಾಜ ವಿಜ್ಞಾನಿಯೊಂದಿಗೆ ಸೇರಿಕೊಂಡು ಬ್ಯಾಂಕ್ ಶುರುಮಾಡುತ್ತಾನೆ. ಈಗ ಆತ ಬ್ಯಾಂಕರ್ ಮಾರ್ಗಯ್ಯ. ಈ ಎಲ್ಲ ಬದಲಾವಣೆಗಳ ಮಧ್ಯ ಆತ ಕಾಯ್ದುಕೊಂಡು ಬಂದ ಏಕೈಕ ಆಸ್ತಿ ಜನರ ವಿಶ್ವಾಸ. ಅದುವೇ ಆತನ ಬಂಡವಾಳ. ಆತ ಸ್ವತಃ ಎನನ್ನು ಹಾಕುತ್ತಿಲ್ಲ. ಬ್ಯಾಂಕರ್ ಮಾರ್ಗಯ್ಯನಾಗಿ ಆತ ಗೆಲ್ಲುವುದೂ ಹೀಗೆ. ಆದರೆ ಮಾರ್ಗಯ್ಯನ ಮಗನನ್ನೇ ಬಳಸಿಕೊಂಡು ಸಮಾಜ ವಿಜ್ಞಾನಿ ಮಾರ್ಗಯ್ಯನ ಸಂಸಾರದ ಐಕ್ಯತೆಗೆ, ವ್ಯಕ್ತಿತ್ವಕ್ಕೆ ಕೊಳ್ಳೆ ಇಡುತ್ತಾನೆ. ವಯಸ್ಸಿಗೆ ಬಂದ ಮಗ ಮದುವೆಯ ನಂತರವು ಸೊಸೆಯನ್ನು ದಿಕ್ಕರಿಸಿ ಸೂಳೆಯರ ಪಾಲಾಗುವುದು ಮಾರ್ಗಯ್ಯನ ಕರುಳು ಹಿಂಡುತ್ತದೆ. ಒಂದು ಕಾಲಕ್ಕೆ ನಶೆ ಹಿಂಡಿಯನ್ನು ಮಾರಿ ಹಣ ಗಳಿಸಬೇಕೆಂದು ಆಲೋಚಿಸಿದ ಮಾರ್ಗಯ್ಯ ಈಗ ತನ್ನ ಮಗನನ್ನು ನಶೆಯಿಂದ ಹೇಗೆ ಹೊರಗೆ ತರುವುದು ಎಂದು ಆಲೋಚಿಸುತ್ತಾನೆ.
         ಸಾಲ ಸಲಹೆಗಾರ, ನಶೆ ಪುಡಿ ಮಾರಾಟಗಾರ, ಹಲ್ಲು ಪುಡಿ ಮಾರಾಟಗಾರ, ಪ್ರಕಾಶಕ, ಬ್ಯಾಂಕರ್ ಹೀಗೆ ರೂಪಾಂತರಗೊಳ್ಳುತ್ತ ಹೋದ ಮಾರ್ಗಯ್ಯ ಒಬ್ಬ ಶುದ್ಧ ಲೌಕಿಕ. ಲೌಕಿಕತೆಯ ಆತನ ತಪಸ್ಸನ್ನು ನೀವು ಸಂಶಯಿಸುವಂತಿಲ್ಲ. ಯಾಕೆಂದರೆ ವ್ಯವಹಾರಿಕನಾಗಿ ಏನೆಲ್ಲ ಏರಿಳಿತಗಳನ್ನು ಕಾಣುವ ಆತನಲ್ಲಿ ಸಾಂಸಾರಿಕ ಕಾಳಜಿಯ ವ್ಯಕ್ತಿ ಘನತೆಯ ಬಿರುಕುಗಳಿಲ್ಲ. ತನ್ನ ಗೆಲುವಿನೊಂದಿಗೆ ಸಂಸಾರ ಗೆಲ್ಲಬೇಕು, ತತ್ವ ಗೆಲ್ಲಬೇಕು, ಸಮಾಜ ಗೆಲ್ಲಬೇಕು ಎನ್ನುವುದೇ ಮಾರ್ಗಯ್ಯನ ವ್ಯಕ್ತಿತ್ವಕ್ಕಿರುವ ಸೌಂದರ್ಯ. ಈ ನಿಟ್ಟಿನಲ್ಲಿ ಬ್ಯಾಂಕರ್ ಮಾರ್ಗಯ್ಯ ಕನ್ನಡ ಸಮಾಜ ಎಲ್ಲ ಕಾಲಕ್ಕೂ ಒಪ್ಪಿಕೊಳ್ಳುವ ಒಂದು ಪಾತ್ರ. ಬರೀ ಕಾದಂಬರಿಯ ಚೌಕಟ್ಟಿನಲ್ಲಿ ಉಳಿದುಕೊಂಡಿದ್ದರೆ ಆತ ನಮ್ಮನ್ನು ಕಾಡುತ್ತಿದ್ದನೋ ಏನೋ ಆತ ಸಿನಿಮಾದಲ್ಲಿ ನಾಗಾಭರಣರಿಂದ ಪುನರ್ಜನ್ಮ ಪಡೆದದ್ದು ನಮ್ಮನ್ನು ಎಲ್ಲ ಕಾಲಕ್ಕೂ ಕಾಡಲು ಪ್ರಾರಂಭವಾಗಿದೆ.
          ಟಿ.ಎಸ್.ನಾಗಾಭರಣ(T S Nagabhrana) ಕನ್ನಡ ಸಿನಿಮಾ ಕಂಡ ಒಂದು ಅಪರೂಪದ ವ್ಯಕ್ತಿತ್ವ. ಇಂಥ ಸಿನಿಮಾಗಳು ಅವರಿಂದ ಮಾತ್ರ ಸಾಧ್ಯ. ಒಂದು ಕಾಲಕ್ಕೆ ಈ ನಾಗಾಭರಣ ರಂಗವನ್ನ ನಿರ್ಗಮಿಸಬೇಕಾದುದು ಅನಿವಾರ್ಯವೇ ಆದರೆ ಈ ಮಾತು ಅವರ ಪಾತ್ರಗಳಿಗೆ ಅನ್ವಯವಾಗುವುದಿಲ್ಲ ಸಿನಿಮಾ ಇರುವವರೆಗೂ ಅವರ ಈ ಪಾತ್ರಗಳು ಉಳಿದುಕೊಳ್ಳುತ್ತವೆ.
                                                                        



No comments:

Post a Comment