Total Pageviews

Tuesday, June 14, 2016

ಬಂದುಬಿಡು ನನ್ನೊಂದಿಗೆ



ಹೆಬ್ಬಂಡೆಗಳ ಜನ್ಮ ದಿನಗಳನ್ನೇ ಅಳಿಸಿ ಹಾಕಿವೆ
ನಿಮ್ಮ ನೆರಳುಗಳು
ನಡುಹಗಲ ಬೆಳಕನ್ನೇ ನುಂಗಿ ಬಿಟ್ಟಿವೆ
ನಿಮ್ಮೆದುರು ಬಿರುಗಾಳಿಯೂ ಸುಳಿಯಲು ಭಯಪಡುತ್ತಿದೆ ಈಗ
ಕರಗಿಹೋಗಿವೆ ಹಿಮಗಿರಿಗಳು ಕಂಗಾಲಾಗಿ
ಸದಾ ನಿಗಿನಿಗಿಯಾದವರು ನಿದ್ರಿಸುವ ಸಮುದ್ರವೇ
ನಿಮ್ಮ ನೆರಳಿಗಂಜಿ ಜಡತ್ವದ ಜೋಗುಳಕ್ಕೊರಗಿ ನಿದ್ರಿಸುತ್ತಿದೆ ಕೂಸಂತೆ,
ಅಂಬೆಗಾಲಿಡುವ ಮಗುವಂತೆ
‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು

       ಸೆಂಟ್ರಲ್ ಅಮೇರಿಕಾದ ಕವಿ ಡಾಲ್ಟನ್ ಗಾರ್ಸಿಯಾನ ಈ ಸಾಲುಗಳು ಜಾಗತಿಕವಾದವುಗಳೆ. ನಿಜಕ್ಕೂ ಎಲ್ಲ ಜನಾಂದೋಲನಗಳು ಜಿಡ್ಡುಗಟ್ಟಿದ, ಜೀವಕಳೆದುಕೊಂಡ ಮತ್ತು ದಾರಿ ತಪ್ಪಿದ ದುರದೃಷ್ಟದ ದಿನಗಳಿವು. ನಮ್ಮ ನಗರಗಳ ಸಂದು ಸಂದುಗಳಲ್ಲಿ ಧರಣಿ, ಸತ್ಯಾಗ್ರಹ ಮತ್ತು ಹೋರಾಟದ ಭಿತ್ತಿ ಪತ್ರಗಳನ್ನು ನಾವು ನಿತ್ಯ ನೋಡುತ್ತೇವೆ. ಆದರೆ ಅಂಥ ಒಂದು ಹೋರಾಟ ನಿಜಕ್ಕೂ ನಡೆದಿದೆ ಎನ್ನುವಷ್ಟು ನಿಸ್ತೇಜಗೊಳ್ಳುತ್ತಲೇ ಹೊರಟಿದೆ ವರ್ತಮಾನ. ಪ್ರತಿ ಪತ್ರಿಕೆಯ ಪುಟ ಪುಟವೂ ರ್ಯಾಲಿ, ಮೋರ್ಚಾಗಳ ಫೋಟೋಗಳಿಂದ ತುಂಬಿ ಹೋಗಿವೆ. ಆದರೆ ಅದು ಯಾವುದರತ್ತ ಕೇಂದ್ರಿಕೃತವಾಗಿದೆ ಮತ್ತು ನಮ್ಮ ಸಮಾಜದ ಯಾವ ವೈಫಲ್ಯವನ್ನು ಸರಿಗೊಳಿಸಿದೆ ಎನ್ನುವುದು ಇಂದಿಗೂ ಬಗೆ ಹರಿಯದ ಪ್ರಶ್ನೆ. ಡಾಲ್ಟನ್ ಗಾರ್ಸಿಯಾ ತನ್ನ ಕ್ರಾಂತಿ ಕವಿತೆಗಳನ್ನು ಹೊಸೆಯುವಾಗ ಇಂಥದೇ ಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೇ ಆತ ವ್ಯಂಗ್ಯವಾಗಿ ಹೇಳುತ್ತಾನೆ, ‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು
ಲ್ಯಾಟಿನ್ ಅಮೇರಿಕಾದ ಅತ್ಯಂತ ಪ್ರಭಾವಿ ಕವಿಗಳ ಪಟ್ಟಿಯನ್ನೆನಾದರೂ ನೀವು ಮಾಡಿದರೆ ಮೊದಲಿಗರಲ್ಲಿ ಬರುವ ಅತ್ಯಂತ ಪ್ರಭಾವಿ ಕವಿ ಡಾಲ್ಟನ್ ಗಾರ್ಸಿಯಾ. ವ್ಯಂಗ್ಯ, ಭಾವ ತೀವ್ರತೆ, ಬದುಕು, ಸಾವು, ಪ್ರೀತಿ, ಹೋರಾಟ ಮತ್ತು ರಾಜಕಾರಣದ ತಾತ್ವಿಕ ಪ್ರಶ್ನೆಗಳನ್ನೆತ್ತಿಕೊಂಡು ಹರಿಯುವ ಅವನ ಕಾವ್ಯಧಾರೆ ಒಂದರ್ಥದಲ್ಲಿ ಅಗ್ನಿಧಾರೆ. ಪ್ರತಿರೋಧ ಮತ್ತು ಪ್ರಶ್ನೆಗಳಿಲ್ಲದ ಅವನ ಒಂದೇ ಒಂದು ಕವಿತೆಯನ್ನು ನೀವು ಓದಲು ಸಾಧ್ಯವಿಲ್ಲ. ಕವಿ ಪತ್ರಕರ್ತನಾಗಿದ್ದ ಗಾರ್ಸಿಯಾನಂಥ ಹೋರಾಟದ ಬದುಕು ಲ್ಯಾಟಿನ್ ಅಮೇರಿಕಾದ ಇತಿಹಾಸದಲ್ಲಿ ಮತ್ತೊಬ್ಬರಿರಲು ಸಾಧ್ಯವಿಲ್ಲ.
        ವಿನಾಲ್ ಡಾಲ್ಟನ್ ಮತ್ತು ಮಾರಿಯಾ ಗಾರ್ಸಿಯಾರ ಅನೈತಿಕ ಸಂಬಂಧದ ಸಂತಾನ ಈ ರೋಕ್ ಗಾರ್ಸಿಯಾ. ಇತಿಹಾಸಕಾರರು ಈತ ಒಂದು ಅಕ್ರಮ ಸಂತಾನ ಎಂದು ದಾಖಲಿಸಲು ಹೇಳುವ ಕಥೆ ಅತ್ಯಂತ ಸರಳವಾಗಿದೆ. ಯಾವಾಗಲೂ ಕಾನೂನು ಬಾಹೀರವಾಗಿಯೇ ಬದುಕಿದ ಡಾಲ್ಟನ್ ಸಹೋದರರಲ್ಲಿ ಒಬ್ಬನಾದ ವಿನಾಲ್ ಡಾಲ್ಟನ್, ಮದುವೆಯಾಗಿದ್ದು ಮಕ್ಕಳೊಂದಿಗಿನ ಒಬ್ಬ ಕುಟುಂಬಸ್ಥ. ಕುಟುಂಬ ಕದನವೊಂದರಲ್ಲಿ ಸಾಮೂಹಿಕ ಹತ್ಯೆಯಲ್ಲಿ ಬದುಕಿ ಉಳಿದ ಈತ ಆಸ್ಪತ್ರೆ ಸೇರುತ್ತಾನೆ. ಈತನ ಆರೈಕೆಗೆಂದೇ ನಿಯುಕ್ತಳಾದ ನರ್ಸ್ ಮಾರಿಯಾಳೊಂದಿಗೆ ದೈಹಿಕ ಸಂಬಂಧ ಮಾಡಿ ಈತ ರೋಕ್ ಡಾಲ್ಟನ್ ಗಾರ್ಸಿಯಾನಿಗೆ ಜನ್ಮ ನೀಡಿ ತಂದೆಯಾಗುತ್ತಾನೆ.
      ತಂದೆಯ ಕರ್ಮಕಾಂಡಗಳೇನೆ ಇರಲಿ, ಅವುಗಳ ಬಗೆಗೆ ಎಂದೂ ಚಿಂತಿಸದೆ ಮಗನ ಮನಸ್ಸನ್ನು ಅದರತ್ತ ಎಂದೂ ಗಮನ ಹರಿಸದೆ ಅತ್ಯಂತ ಪರಿಶ್ರಮದಿಂದ ದುಡಿದು ಓರ್ವ ಸಭ್ಯಸ್ಥ ತಾಯಿಯಾಗಿ ಜೀವನವನ್ನು ರೂಪಿಸಿದವಳು ಮಾರಿಯಾ ಗಾರ್ಸಿಯಾ. ಸೆಲ್ವೆಡರ್‍ನ ಪ್ರತಿಷ್ಠಿತ ಶಾಲೆ-ಕಾಲೇಜುಗಳಲ್ಲಿಯೇ ಮಗನ ಶಿಕ್ಷಣವನ್ನು ಪೂರೈಸಲು ಪ್ರಾಣವನ್ನೆ ಪಣಕ್ಕಿಟ್ಟವಳಿವಳು. ಮಗ ರೋಕ್ ಗಾರ್ಸಿಯಾನೂ ಅಷ್ಟೆ. ಶಾಲಾ ದಿನಗಳಲ್ಲಿ ಅತ್ಯಂತ ತೀಕ್ಷ್ಣ ಮತಿಯೂ ಹಾಗೂ ಸೂಕ್ಷ್ಮ ಮನಸ್ಸಿನವನೂ ಆಗಿದ್ದವ.
        ಎಷ್ಟೇ ಪ್ರಯತ್ನಿಸಿದರೂ ಸಮಾಜದ ಮೂದಲಿಕೆಯಿಂದ ಮಾತ್ರ ರೋಕ್ ಗಾರ್ಸಿಯಾನಿಗೆ ಹೊರಬರಲು ಆಗಲೇ ಇಲ್ಲ. ಶ್ರೀಮಂತ ವಿದ್ಯಾರ್ಥಿಗಳ ಬಗೆಗೆ ಶಿಕ್ಷಕರಿಗಿದ್ದ ಆಸೆ, ಅಕ್ರಮ ಮಕ್ಕಳನ್ನು ಅವರು ವ್ಯಂಗ್ಯ ಮಾಡುತ್ತಿದ್ದ ರೀತಿ, ಈತನ ಹುಟ್ಟಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸದಾ ಸಂಶಯದಿಂದ ನೋಡಿದ ಸ್ನೇಹಿತರು ಹಾಗೂ ಸಮಾಜ ಗಾರ್ಸಿಯಾನಲ್ಲಿ ಒಬ್ಬ ಅಪರೂಪದ ಕವಿ ಸಂಗಾತಿಗೆ ಹುಟ್ಟು ನೀಡಿತು. ಚಿಲಿಯ ಸ್ಯಾಂಟಿಗೋ ವಿಶ್ವವಿದ್ಯಾಲಯದಲ್ಲಿ ಹಾಗೂ ಯುನಿವರ್ಸಿಟಿ ಆಫ್ ಸೆಲ್ವೆಡಾರ್‍ನಲ್ಲಿ ಶಿಕ್ಷಣವನ್ನು ಪಡೆಯುತ್ತಲೇ ತನ್ನ ಕಾವ್ಯ ಸಂವೇದನೆಗಳನ್ನು ಗಾರ್ಸಿಯಾ ತೀಕ್ಷ್ಣಗೊಳಸಿಕೊಂಡ. ಈ ಸಂದರ್ಭದ ಒಂದು ಕವಿತೆಯ ಅವನ ಈ ಸಾಲುಗಳನ್ನು ನೀವು ಓದಲೇಬೇಕು -

ಉಪ್ಪು ಉಪ್ಪಾದ ಜ್ಞಾನವನ್ನು ಹುಗಿದಿಟ್ಟುಕೊಂಡಿದೆ ಸಮುದ್ರ
ಬೆಂಕಿಯಿಲ್ಲದ ಬೆಳಕು ಜಗವನಾವರಿಸಿದೆ
ಮೊಗವೆತ್ತಲು ಯತ್ನಿಸುವ ಸತ್ಯವೊಂದು ಇಡೀ ಆಕಾಶವನ್ನೇ ಘಾಸಿಗೊಳಿಸಿದೆ
ನಿಸ್ಸೋತ ದಡಗಳ ತೋಳುಗಳಲ್ಲಿ ಬಿದ್ದು ಬಿಟ್ಟಿದೆ ಸಮುದ್ರ

        ಇದೇ ಅವಧಿ, ಕವಿ ಗಾರ್ಸಿಯಾ ಕಮ್ಯುನಿಸ್ಟ ಪಾರ್ಟಿಯ ಸದಸ್ಯನಾಗಿ ಚಳುವಳಿಗೂ ಇಳಿದ. ಕ್ಯೂಬಾದ ಕ್ರಾಂತಿಯ ದಿನಗಳಲ್ಲಿ ಈತ ಒಬ್ಬ ಕಟ್ಟರ್ ಕಮ್ಯುನಿಸ್ಟ. ವಿದ್ಯಾರ್ಥಿಗಳನ್ನು ಹಾಗೂ ರೈತರನ್ನು ಕ್ರಾಂತಿಗೆ ಪೂರಕವಾಗಿ ಒಗ್ಗೂಡಿಸಿದ ಆಪಾದನೆಯ ಮೇರೆಗೆ ಪ್ರಭಲ ರಾಜಕಾರಣಿಗಳು ಹಾಗೂ ಭೂ ಮಾಲೀಕರೆಲ್ಲ ಸೇರಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಈತನನ್ನು ಎರಡು ಬಾರಿ ಬಂಧಿಸಿ ಜೈಲಿಗಟ್ಟಿದರು. ಸಾರ್ವಜನಿಕ ಸ್ಥಳದಲ್ಲಿ ಸ್ಕಡ್ ಹಾರಿಸಿದ ಆಪಾದನೆಯ ಮೇರೆಗೆ ಕೆಲಕಾಲ ದೇಶದಿಂದ ಗಡಿಪಾರುಗೊಳಿಸಿದರು. ಹದ್ದು ಮೀರಿ ಬಂದ ಈತನನ್ನು ಜೈಲೊಂದರಲ್ಲಿ ಬಂಧಿಸಿಟ್ಟರು. ಆದರೆ ಲಾವಾರಸವನ್ನು ಯಾರೂ ನಿಲ್ಲಿಸಲಾಗದು ಎನ್ನುವಂತೆ ಭೀಕರ ಭೂಕಂಪವಾಗಿ ಈತನನ್ನು ಬಂಧಿಸಿಟ್ಟ ಜೈಲು ಕುಸಿದು ಬಿದ್ದಿತು. ಬಂಧ ಮುಕ್ತನಾದ ಗಾರ್ಸಿಯಾ ಇಲ್ಲಿಂದ ಓಡಿಹೋಗಿ ಮತ್ತೆ ಕ್ಯೂಬಾ ಮತ್ತು ಪೆರಿಗ್ವೆಗಳಲ್ಲಿ ಹೋರಾಟಕ್ಕಿಳಿದುಕೊಂಡ.
     1973ರಲ್ಲಿ ಸೆಲ್ವಿಡಾರ್‍ಗೆ ಬಂದು ಭೂಗತನಾಗಿದ್ದುಕೊಂಡೇ ಕ್ರಾಂತಿಯ ಕನಸನ್ನು ಕಾಪಿಟ್ಟುಕೊಂಡ. ತನ್ನಲ್ಲಿರುವ ಕವಿತೆಗೆ ಆತ ಅಭಿವ್ಯಕ್ತಿ ಕೊಟ್ಟಿದ್ದು ಕೂಡ ಮೆಕ್ಸಿಕೋದ ತನ್ನ ಪಲಾಯನದ ದಿನಗಳಲ್ಲಿ. ಈ ಸಂದರ್ಭದಲ್ಲಿ ಆತ ಅನೇಕ ಕ್ಯೂಬನ್ ಮತ್ತು ಲ್ಯಾಟಿನ್ ಅಮೇರಿಕನ್ ಉಚ್ಛಾಟಿತ ಕವಿಗಳ ಸಂಪರ್ಕಕ್ಕೆ ಬಂದ. ತಲೆಮರೆಸಿಕೊಂಡವನಾಗಿದ್ದುಕೊಂಡೇ ಏನೆಲ್ಲ ಮಾಡಬೇಕೆಂದುಕೊಂಡಿದ್ದ ಗಾರ್ಸಿಯಾನಿಗೆ ನಿರೀಕ್ಷಿಸಿದಷ್ಟು ಸಮಯ ಸಿಗಲಿಲ್ಲ. ಈತ ಅಡಗಿದ ತಾಣದ ಪತ್ತೆಯಾಗಿ ಇವನನ್ನು ಹೊರಗೆಳೆದು ಮತ್ತೆ ಜೈಲಿಗೆ ಅಟ್ಟುವವರೆಗೆ ಸರ್ಕಾರ ನಿದ್ರಿಸಲಿಲ್ಲ.
        ಸ್ಥಾಪಿತ ಶಕ್ತಿಗಳ ನಿದ್ರೆಗೆಡಿಸಿದಂತೆ ಬದುಕಿದವನು ಗಾರ್ಸಿಯಾ. ಬದುಕಿನ ಪುಟ ಪುಟವೂ ಪ್ರಚಂಡ ಶಕ್ತಿಯ ಆಸ್ಫೋಟ. ಆದರೂ ಇಂಥ ಸ್ಪುರದ್ರೂಪಿ ಕ್ರಾಂತಿಕಾರಿ ಕವಿ ಬರೆದ ಪ್ರೀತಿ ಕುರಿತಾದ ಒಂದು ಕವಿತೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ-

ಬೆಳಕಿನ ದೀವಟಿಗೆ ಹಿಡಿಯದೆ
ಆ ಕಪ್ಪು ಬೆಟ್ಟದಿಂದ
ನೀನಿಂದು ಬರುವಾಗ
ಬೆತ್ತಲೆ, ಬರೀ ಬೆತ್ತಲೆ ಇತ್ತು
ನಮ್ಮ ಮಧ್ಯ

ರಕ್ತ ಕಣೀರಿನಲ್ಲಿ ಅದ್ದಿಹೋದ ನಮ್ಮ ಗತವನ್ನು
ಅದೆಷ್ಟೊಂದು ಬಾರಿ ನೆನಪಿಸುತ್ತಿತ್ತು!
ಪ್ರೀತಿ ಹುಟ್ಟಿದ ಈ ಕ್ಷಣದಲ್ಲಿ
ಎಷ್ಟೊಂದು ಮೃದು-ಮಾಧುರ್ಯ-ಮೌನದ ಬೆಸುಗೆ ಇತ್ತು
ಮಾತೂ ಸಿಡಿಯುತ್ತಿತ್ತು ಸ್ಪೋಟಗೊಂಡ ಶಬ್ಧದಂತೆ
ನಮ್ಮ ಇಂದ್ರಿಯಗಳೊ
ಕಿರಣಗಳಿಗೆ ಮೊಗಮಾಡಿದ ಸೂರ್ಯಕಾಂತಿ ಹೂಗಳು

ನನ್ನ ಪ್ರೀತಿಯೆ,
ಹಿಂದಿನ ರಾತ್ರಿಯ ಮಳೆಯ ಕೊಳೆಯನ್ನು
ತೊಳೆದುಕೊಳ್ಳಲು ನಾನು ಸ್ನಾನಕ್ಕೆ ಹೋಗಿದ್ದೇನೆ
ಅದೇಕೊ ನಿತ್ಯ ಹಾಡುತ್ತಿದ್ದ ಸಮುದ್ರ ಹಕ್ಕಿಯ ಹಾಡು ಮರೆತಿದ್ದೇನೆ
ದಿಂಬಗಳ ಮೇಲೆ ನಿನ್ನ ಗಲ್ಲಗಳ ಮುದ್ರೆ ಮೂಡುವ ಮುನ್ನ
ಬಂದುಬಿಡು ನನ್ನೊಂದಿಗೆ
ನಾನು ಕಾಯುತ್ತಿದ್ದೇನೆ ನಿನಗಾಗಿ ಮುಂಗೋಳಿಯಂತೆ

      ಕವಿತೆಯೋ, ಪತ್ರಿಕೆಯೊಂದರ ಅಂಕಣವೊ ಯಾವುದಾದರೂ ಸರಿ, ಈತನೆಂದರೆ ಪ್ರತಿ ಕ್ಷಣವೂ ಎಚ್ಚರಿಕೆ. ತನ್ನ ವಿಚಾರಗಳ ಕಾರಣ ಹಲವು ಸಾರಿ ಬಂಧನಕ್ಕೊಳಗಾಗಿ ಎರಡು ಸಾರಿ ಗಲ್ಲು ಶಿಕ್ಷೆಗೊಳಗಾಗಿದ್ದ ಗಾರ್ಸಿಯಾ, ಎಂಟೇ ಎಂಟು ಅಪರೂಪದ ಕಾವ್ಯಸಂಕಲನಗಳನ್ನು ರಚಿಸಿದ್ದಾನೆ. 1970ರಲ್ಲಿ ಆತನ ಕೊನೆಯ ಕಾವ್ಯ ಸಂಕಲನ ಪ್ರಕಟಗೊಂಡರೆ, 1974ರಲ್ಲಿ ಈತನ ಕೊನೆಯ ಅಂಕಣ ಪ್ರಕಟಗೊಂಡಿದೆ.
       ಬದುಕಿನಲ್ಲಿ ಏನೆಲ್ಲ ಏರಿಳಿತಗಳನ್ನು ಕಂಡಿದ್ದ ಗಾರ್ಸಿಯಾ, ತನ್ನ ಕವಿತೆಗಳ ಮೂಲಕವೇ ರಾಜಕೀಯ ವೈರಿಗಳನ್ನು ಸೃಷ್ಠಿಸಿಕೊಂಡಿದ್ದ ಎನ್ನುತ್ತಾರೆ ಇತಿಹಾಸಕಾರರು. ತನ್ನ ಜೀವನದ ನಲವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮುನ್ನಾದಿನ ಅಂದರೆ, 10 ಮೇ 1975ರಲ್ಲಿ ರಾಜಕೀಯ ವೈರಿಯೊಬ್ಬನಿಂದ ಹತ್ಯೆಗೊಳಗಾಗುತ್ತಾನೆ. ಮೇ ತಿಂಗಳಲ್ಲಿಯೇ ಹುಟ್ಟಿ, ಮೇ ತಿಂಗಳಲ್ಲಿಯೇ ಮೃತ್ಯುಕೂಪಕ್ಕೆ ಜಾರಿದ ಗಾರ್ಸಿಯಾನ ಸಾವು ಒಂದು ರಾಷ್ಟ್ರೀಯ ದುರಂತ ಎಂದು ಸಾರುವುದರೊಂದಿಗೆ ಸರ್ಕಾರ ಸ್ಟಾಂಪ್ ಪ್ರಕಟಿಸಿ ಸಾವಿನ ಲೆಕ್ಕವನ್ನು ಸರಿದೂಗಿಸುತ್ತದೆ.
      

ದೊಡ್ಡ ದೊಡ್ಡ ಜೈಲುಗಳು, ಗಲ್ಲಿನ ಆದೇಶಗಳು, ಗಡಿಪಾರಿನ ಸಂದರ್ಭಗಳು ಹಾಗೂ ಸಾರ್ವಜನಿಕ ಆಕ್ರಮಣಗಳು ಗಾರ್ಸಿಯಾನ ಬದುಕನ್ನು ಎಂದೂ ಬಾಧಿಸಲಿಲ್ಲ ಅಥವಾ ಅದಕ್ಕೊಂದು ಭಯಾನಕ ಅಂತ್ಯವನ್ನು ಹಾಡಲಿಲ್ಲ. ಬದಲಾಗಿ ರಾಜಕಾರಣ ಈತನ ಬದುಕನ್ನು ಮುಗಿಸಿತು, ಕವಿತೆಯಾಗಿದ್ದ ಈತನ ಕತ್ತು ಹಿಸುಕಿತು ಎನ್ನುವುದು ಪ್ರಪಂಚದ ಯಾವುದೇ ದೇಶದ ಪದ ಸಂಸ್ಕøತಿಗೆ, ಪ್ರಶ್ನೋತ್ತರ ಪರಂಪರೆಗೆ ದೊಡ್ಡ ಭೀತಿ ಎನ್ನುವುದನ್ನು ಸಾಬೀತು ಪಡಿಸುತ್ತದೆ ಅಲ್ಲವೆ? ಈ ಸತ್ಯವೆ ಈ ಸಮಾಜದ ದುರಂತ.


No comments:

Post a Comment