ನನ್ನೂರಲ್ಲಿ ಬೇಡ ಬೇಡವೆಂದರೂ ಬೆನ್ನಟ್ಟಿ ಕಾಡುವ ಭಾಗ್ಯ ಬಿಸಿಲು. ಹೀಗಾಗಿ ಸಾಧ್ಯವಾದಷ್ಟೂ ಬೇಗ ನೆರಳಿರುವ ಯಾವುದಾದರೂ ನೆಲೆಯನ್ನು ಕಂಡುಕೊಳ್ಳಬೇಕೆಂಬ ಹಂಬಲದಿಂದ ಒಂದೊಮ್ಮೆ ಧಾರವಾಡಕ್ಕೆ ಬಂದವನು ನಾನು. ಕೌಟುಂಬಿಕ ಕಾರಣಗಳಿಂದ ಮುಂದೆ ಈ ಧಾರವಾಡದಲ್ಲಿಯೂ ನೆಲೆ ನಿಲ್ಲದೆ ಎಲ್ಲೆಲ್ಲೋ ಹೋದೆ, ಅದು ಬೇರೆ ಮಾತು. ದಿನಾಂಕ:11.05.2018ರ ಸಾಯಂಕಾಲ ಗುರುಗಳಾದ ಪ್ರೊ. ಗಿರಡ್ಡಿ ಗತಿಸಿದ್ದರಿಂದ, ಧಾರವಾಡದ ನನ್ನ ಒಂದು ಕಾಲದ ವಾಸ್ತವ್ಯದ ವಾಸ್ತವ ಅವರಾದುದರಿಂದ, ಈಗ ಅವರ ಕುರಿತು ನಿಮ್ಮೊಂದಿಗೆ ಈ ಮಾತು.
ಶಿರಸಿಯಿಂದ ಧರಣೀಂದ್ರ ಕುರಕುರಿ ಫೋನಾಯಿಸಿ ಮೊದಲಿಗೆ ಈ ಸಾವಿನ ಸುದ್ಧಿಯನ್ನು ತಿಳಿಸಿದರು. ತಕ್ಷಣ ನಾನು ಫೋನಾಯಿಸಿದ್ದು ಪ್ರೊ. ಚಂಪಾ ಅವರಿಗೆ. ಒಂದಿಷ್ಟು ಮಾತಾಗಿ, ಅವರು ಧಾರವಾಡದ ದಾರಿಯಲ್ಲಿರುವುದಾಗಿ ತಿಳಿಸಿದರು. ಮತ್ತೊಂದು ಫೋನು ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಮಾಡಿದೆ, ಅವರು ಈ ಕುರಿತೇ ಬೇರೆ ಸಂಭಾಷಣೆಯಲ್ಲಿದ್ದುದರಿಂದ ಹೇಮಕ್ಕನವರೊಂದಿಗೆ ಮಾತಾಡಿ ಒಂದು ಕ್ಷಣ ಸುಮ್ಮನೆ ಕುಳಿತೆ.
ಗಡಿಯಾರ ನಿಂತ ಅನುಭವ. ರಜೆಗೆ ಹೋದ ಮಕ್ಕಳು, ಮಕ್ಕಳು ನೋಡಲು ಹೋದ ಮಡದಿ. ಈಗ ಬರೀ ನಾನು, ನನ್ನ ಮುಂದೊಂದು ನೆನಪೆಂಬ ಕ್ರಮಿಸಿ ತೀರಲಾಗದ ಗುಹೆ, ಅದರೊಳಗೆ ಲೋಕ ವಿಮುಖರಾಗಿ, ತನ್ನ ವ್ಯಕ್ತಿತ್ವದ ಬೆಳಕನ್ನೇ ಪ್ರಭೆಯಾಗಿಸಿಕೊಂಡು ಹೋಗುತ್ತಿರುವ ಪ್ರೊ. ಗಿರಡ್ಡಿ ಗೋವಿಂದರಾಜ ಎಂಬ ಪಾತ್ರ.
![]() |
Ragam with Giraddi Govindaraj in Hattimatturu |
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿಯ ಒಂದು ವರ್ಷದ ಉಪನ್ಯಾಸಕ ವೃತ್ತಿಯನ್ನು ಮುಗಿಸಿಕೊಂಡು 1996-97ರ ಸುಮಾರಿಗೆ ನಾನು ಧಾರವಾಡಕ್ಕೆ ಬಂದೆ. ಅಷ್ಟರೊಳಗಾಗಿ ಒಂದು ಕಾಲಕ್ಕೆ ಧಾರಕಾರವಾಗಿ ಸುರಿಯುತ್ತಿದ್ದ ಧಾರವಾಡದ ಮಳೆ ಈಗ ತಟಗುಟ್ಟಲಾರಂಭಿಸಿತ್ತು. ಪುಟ್ಟ ಹಂಚಿನ ತೊಟ್ಟಿ ಮನೆಗಳು ಕಾಂಪ್ಲೆಕ್ಸುಗಳಾಗಿ, ಮಾವಿನ ತೋಪುಗಳೆಲ್ಲ ಬಡಾವಣೆಗಳಾಗಿ, ಪ್ರಶಾಂತ ವಿಶ್ರಾಂತಿಧಾಮವಾಗಿದ್ದ ಸಾಂಸ್ಕøತಿಕ ನಗರ ಧಾರವಾಡ, ದಾಂಗುಡಿಯ ವ್ಯಾವಹಾರಿಕ ನಗರವಾಗಿ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದ ಸಂದರ್ಭ. ಎಲ್ಲ ಒಂದು ರೀತಿಯಿಂದ ಬಯಲು, ಬಯಲಾಗುತ್ತಿದ್ದ ಸಮಯ. ಆ ಸಂದರ್ಭದಲ್ಲಿಯೇ ನನ್ನ ಕವಿತೆ ‘ನನ್ನೂರು ಧಾರವಾಡ ನನ್ನಿಂಗ್ಹ ಕಾಡಬ್ಯಾಡ’ ರಚನೆಯಾಗಿದ್ದು.
ಧಾರವಾಡಕ್ಕೆ ಹೋದ ಮೊದಲಲ್ಲೇ ನನ್ನ ಪ್ರೀತಿಯ ಲೇಖಕ ಶಂಕರ ಮೊಕಾಶಿ ಪುಣೇಕರ ತೀರಿಹೋದರು. ಪಿ.ಹೆಚ್.ಡಿಗಾಗಿ ಕರ್ನಾಟಕ ವಿಶ್ವವಿದ್ಯಾಲಯ ಸೇರಿಕೊಂಡ ಹೊಸದರಲ್ಲಿಯೇ ಚಂಪಾ ಎಂಬ ಚುಂಬಕ ಪಾತ್ರ ಧಾರವಾಡ ಬಿಟ್ಟು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬೆಂಗಳೂರಿಗೆ ಬಂದು ಬಿಟ್ಟಿತು, ನನ್ನೊಂದಿಗೆ ಜಗಳಾಡಿದ ವಿಮರ್ಶಕ ಪ್ರೊ. ಕೀರ್ತಿನಾಥ ಕುರ್ತುಕೋಟಿ ‘ಆ ಮನಿ’ಯನ್ನೇ ತೊರೆದು ಬಿಟ್ಟರು. ಈ ಮಧ್ಯ ಎಳೆಯರಾದ ವೀಣಾ ಕುಲಕರ್ಣಿ, ಹಿರಿಯರಾದ ಹಕಾರಿ, ಕೆಟ್ಟಿತೀ ಕಲ್ಯಾಣನಗರ ಎಂಬಂತೆ ವರುಷಗಳ ಹಿಂದೆ ಡಾ. ಎಂ.ಎಂ. ಕಲಬುರ್ಗಿ, ‘ಬರೆಯುವ ದಾರಿ’, ತೋರಿಸಿದ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಗಾನಲೋಕದ ಪ್ರೊ. ಸದಾನಂದ ಕನವಳ್ಳಿ, ಡಾ ಶಿವಾನಂದ ಗಾಳಿ, ಹಾಗೆಯೇ ಈಗ ಸಾವಿನ ನೇಪತ್ಯಕ್ಕೆ ಪ್ರೊ. ಗಿರಡ್ಡಿ ಗೋವಿಂದರಾಜ.
ಈಗಂತೂ ಧಾರವಾಡದಿಂದ ಒಂದು ಫೋನೆಂದರೆ ಮೃತ್ಯು ಮನೆಯತ್ತ ಹೊರಟವನ ಕುರಿತೊಂದು ಡಂಗುರ ಎನ್ನುವಷ್ಟು ಭಯ, ಆತಂಕ ಹಾಗೂ ಖಾಲಿತನದ ಕರಾಳ ಕತ್ತಲು.
ಧಾರವಾಡದ ನನ್ನ ಬದುಕಾರಂಭವಾದುದು ವಿಶ್ವವಿದ್ಯಾಲಯಕ್ಕೇ ಅಂಟಿಕೊಂಡ ಪ್ರದೇಶ ನವೋದಯ ನಗರದಲ್ಲಿ. ಮೊದ ಮೊದಲಿಗೆ, ಆಗ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ. ಎಂ.ಐ. ಸೌದತ್ತಿಯವರ ಮನೆಯಲ್ಲಿ, ನಂತರದ್ದು ಪ್ರೊ. ಬಿದರಕೊಪ್ಪರ ‘ಕಾತ್ಯಾಯಿನಿ’ಯಲ್ಲಿ.
ಆ ಮನೆಯ ಟರ್ರೇಸ್ ಮೇಲಿದ್ದ ನನ್ನ ಕೋಣೆಯಿಂದ ನೋಡುತ್ತಿದ್ದರೆ ಕಾಣುವವರು ಸದಾ ಓದು ಹಾಗೂ ಬರಹಗಳಲ್ಲಿ ತೊಡಗಿಕೊಂಡ ಪ್ರೊ. ಜಿ.ಎಸ್. ಅಮೂರ. ಕೋಣೆಯಿಂದ ಕೆಳಗಿಳಿದು ಚಹಾ ಕುಡಿಯಲು ಬಂದರೆ ಕ್ಯಾಂಟಿನ್ ಮುಂದೆ ಸಿಗರೇಟು ಸೇದುತ್ತ ನಿಲ್ಲುತ್ತಿದ್ದ ಪ್ರೊ. ಗಿರಡ್ಡಿ ಗೋವಿಂದರಾಜ. ರೇಲ್ವೆ ಸ್ಟೇಶನ್ ಅಥವಾ ಬಾರಾಕೋಟ್ರಿಯಿಂದ ವಿಶ್ವವಿದ್ಯಾಲಯಕ್ಕೆ ಬಂದರೆ, ಆ ಏರಿಯ ಒಂದೆಡೆಗೆ ಪ್ರೊ. ಗಿರಡ್ಡಿಯವರ ಮನೆ ‘ಸರೋಜ’, ಮತ್ತೊಂದೆಡೆ ಆಗ ನಳನಳಿಸುತ್ತಿದ್ದ ಮಾವಿನ ತೋಪು, ಜೀರುಂಡೆಯ ಹಾಡು, ಈಗ ಅದೆಲ್ಲ ಮಾತು, ಕಾಲದ ಕಗ್ಗಕ್ಕೆ ನೇತು ಬಿದ್ದ ನೆನಪಿನ ಹೆಣ.
ಪ್ರೊ. ಗಿರಡ್ಡಿ ಗೋವಿಂದರಾಜರ ‘ಸರೋಜ’
ಮನೆಯ ಹೆಸರು ನನಗೆ ನನ್ನ ತಂದೆ ಹೇಳುತ್ತಿದ್ದ ಹಿಂದಿಯ ಮಹಾಕವಿ ನಿರಾಲಾರ ‘ಸರೋಜ ಸ್ಮøತಿ’ ಎಂಬ ಕೃತಿಯನ್ನು ನೆನಪಿಗೆ ತರುತ್ತಿತ್ತು. ಪ್ರೊ. ಗಿರಡ್ಡಿಯವರ ಹೆಂಡತಿಯ ಹೆಸರು ಅವರ ಮನೆಗೆ. ನಿರಾಲಾರ ಮಗಳ ಹೆಸರು ‘ಸರೋಜ’ ಅವರ ಕೃತಿಗೆ. ಮನೆಯ ಕಂಪೌಂಡಿಗೊಂದು ಚಿಕ್ಕ ಬೋರ್ಡು, ‘ಪ್ರೊ. ಗಿರಡ್ಡಿ ಗೋವಿಂದರಾಜ’. ಕೈ ಬರಹದಂತಿದ್ದ ಆ ಬೋರ್ಡು ಅಪರೂಪದ್ದಾಗಿತ್ತು. ಕ್ರಮೇಣ ನಾಟಕ ನನ್ನ ಹಾಗೂ ಅವರ ಮಗನ ಮಧ್ಯದ ಸ್ನೇಹಕ್ಕೆ ಕಾರಣವಾಗಿತ್ತು. ಆಗೊಮ್ಮೆ, ಈಗೊಮ್ಮೆ ಈಚೆ ಬದಿಯಲ್ಲಿಯೇ ನಿಂತು ನಾನು ಮಾತನಾಡಿಸಿದಾಗ ಆಚೆ ಬದಿಯಲ್ಲಿ ನಿಂತು, ಅಂತರದ ನಗೆ ನಕ್ಕು ವಿಶ್ ಹೇಳುತ್ತಿದ್ದರು ನಮ್ಮ ಗಿರಡ್ಡಿ. ನನಗೆ ಗಿರಡ್ಡಿ ಅಂತರದ ಆತ್ಮೀಯರು, ಅಂತರಂಗಕ್ಕೆ ನುಗ್ಗಲೇ ಇಲ್ಲ.
ಅವರೊಂದಿಗಿನ ನನ್ನ ಸಂಬಂಧ ಡಿಪಾರ್ಟಮೆಂಟ್ನಲ್ಲೂ ಇಂಥದ್ದೇ ಒಂದು. ಒಂದಿಷ್ಟು ಮಹಾಕವಿ ಏಲಿಯಟ್ನ ಮಹಾಕಾವ್ಯ ‘ವೇಸ್ಟ ಲ್ಯಾಂಡ್’ ಹಾಗೂ ರೀಸರ್ಚ್ ಮೆಥಡಾಲಾಜಿಗೆ ಸಂಬಂಧಿಸಿದಂತೆ ಪಾಠಗಳನ್ನು ಬಿಟ್ಟರೆ ಅವರಿಂದ ಹೆಚ್ಚೇನೂ ಕೇಳಲಿಲ್ಲ ನಾನು. ಆಗ ಕಾಡಿದ ಬಹಳ ದೊಡ್ಡ ಪ್ರಶ್ನೆ ನನ್ನ ಹುಡುಕಾಟದ ಗಿರಡ್ಡಿ ಗೋವಿಂದರಾಜ ಇರುವುದು ಇಷ್ಟೇನಾ? ಅಥವಾ ಇದರಾಚೆಗಿರುವ ಗಿರಡ್ಡಿ ನನಗೆ ನಿಲುಕುತ್ತಿಲ್ಲವೊ? ಅನೇಕ ಬಾರಿ ಈ ಕಾರಣಕ್ಕಾಗಿ ನನಗೂ ಸಹೋದರ ಬಸವರಾಜ ಡೋಣೂರರಿಗೆ ವಾಗ್ವಾದಗಳಾಗುತ್ತಿದ್ದವು. ಗಿರಡ್ಡಿಯ ಅಭಿಮಾನಿ ಬಳಗದಲ್ಲಿಯೇ ಭಕ್ತ ನಿಷ್ಠೆಯ ಅಭಿಮಾನಿ ಸಹೋದರ ಬಸವರಾಜ ಡೋಣೂರ.
ನನಗಿಂತ ಹಿರಿಯರಾಗಿದ್ದ ಡೋಣೂರರ ವಾದ ಸರಿ ಇರಬಹುದೆಂದುಕೊಂಡು ಮತ್ತೆ ಮತ್ತೆ ಗಿರಡ್ಡಿಯವರ ಸಾಹಿತ್ಯವನ್ನು ಓದಿದೆ. ಆದರೆ ಇಂದಿಗೆ ನೆನಪಿಗುಳಿದದ್ದು ಒಂದು ‘ಮರ್ಲಿನ್ ಮುನ್ರೊ’
ಮತ್ತೊಂದು ‘ಆ ಮುಖ, ಈ ಮುಖ ಮತ್ತು ಮಣ್ಣು’. ಒಂದೊಮ್ಮೆ ನಾನು ಶಾಂತಿನಾಥ ದೇಸಾಯಿಯವರ ‘ಕೂರ್ಮಾವತಾರ’
ಹಾಗೂ ಗಿರಡ್ಡಿಯವರ ‘ಹಂಗು’ ಮತ್ತು ಇತರ ಕಥೆಗಳು ಕುರಿತೊಂದು ದೀರ್ಘ ಲೇಖನವನ್ನೂ ಬರೆದಿದ್ದೆ. ಪುಟ್ಟಣ್ಣ ಕಣಗಾಲ್ರ ಕಥಾಸಂಗಮ ಚಲನಚಿತ್ರದಲ್ಲಿ ಒಂದು ಮಹತ್ವದ ನಿರೂಪಣೆಯಾದ ಗಿರಡ್ಡಿಯವರ ಕಥೆ ಆ ಸಾಂಸ್ಕøತಿಕ ಸಂದರ್ಭದ ಒಂದು ರೋಮಾಂಚನಕಾರಿ ಬೆಳವಣಿಗೆ ಎಂಬುದನ್ನು ನಾವು ತಳ್ಳಿ ಹಾಕಲಾಗದು. ಆದರೆ ಕಾವ್ಯಕ್ಕೆ ಆಗಲೇ ಮುಕ್ತಾಯ ಹಾಡಿದ್ದ ಗಿರಡ್ಡಿ ಇದ್ದಕ್ಕಿದ್ದಂತೆ ಕಥೆಯನ್ನೂ ಬಿಟ್ಟು ವಿಮರ್ಶೆಗೆ ಕೈ ಹಾಕಿದರಲ್ಲ ಅದು ಅವರನ್ನು ಎಲ್ಲೂ ಒಯ್ದು ನಿಲ್ಲಿಸಲಿಲ್ಲ, ಸಮಾಧಾನಿಸಲಿಲ್ಲ, ಸಾಂತ್ವಾನಿಸಲಿಲ್ಲ.
ಆ ದಿನಗಳಲ್ಲಿಯೇ ಅವರ ‘ವಚನ ವಿನ್ಯಾಸ’
ಕೃತಿ ಪ್ರಕಟವಾಯಿತು. ಕೆಲವು ಆಯ್ದ ವಚನಗಳನ್ನಿಟ್ಟುಕೊಂಡು ಭಿನ್ನ ನೆಲೆಯಲ್ಲಿ ಅರ್ಥೈಸುವ ಅವರ ಪ್ರಯತ್ನ ಸಫಲವಾಗಿರಲಿಲ್ಲ. ಹಾಗಂತಲೇ ಒಂದು ದೀರ್ಘ ಪತ್ರ ಬರೆದಿದ್ದ ನನ್ನನ್ನು ಮನೆಗೆ ಕರೆಯಿಸಿಕೊಂಡು ವಚನಗಳ ಕುರಿತಾದ ತಮ್ಮ ಹೊಸ ದೃಷ್ಟಿಕೋನವನ್ನು ವಿವರಿಸಿದ್ದರಾದರೂ ನನಗದು ದಕ್ಕಲಿಲ್ಲ. ಬಹುತೇಕ ಪ್ರೊ. ಗಿರಡ್ಡಿಯವರಿಗೂ ಅದು ಹಾಗೆಯೇ ಅನ್ನಿಸಿತ್ತೇನೊ.
2000ನೇ ವರ್ಷದಲ್ಲಿ ನೀಲಪರ್ವತ ಪ್ರಕಾಶನದಿಂದ ನನ್ನ ಕೃತಿ ‘ನನ್ನೊಳಗಿನ ನಾನು’ ಪ್ರಕಟವಾಗಿ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಧಾರವಾಡದ ವಿದ್ಯಾವರ್ಧಕ ಸಭಾಭವನದಲ್ಲಿ ಹಮ್ಮಿಕೊಂಡವರು ಪ್ರೊ. ಬಸವರಾಜ ಡೋಣೂರ, ಕೃತಿ ಬಿಡುಗಡೆ ಮಾಡಿ ಪ್ರೊ. ಗಿರಡ್ಡಿ ಮಾತನಾಡಿದರು. ಅದ್ಯಾವ ಬೇಸರ ಹಾಗೂ ಸಿಟ್ಟಿಗೆ ಅವರು ಆ ತೆರನಾಗಿ ಮಾತನಾಡಿದರೊ ಇಡಿಯಾಗಿ ಕೃತಿ ಕುರಿತಾದ ಅವರ ನಿಲುವು ನಕಾರಾತ್ಮಕವಾಗಿತ್ತು. ಆದರೆ ಅದೇ ವೇದಿಕೆಯಲ್ಲಿ ಕೃತಿ ಕುರಿತೆಂದೇ ಮಾತನಾಡಲು ಬಂದಿದ್ದ ಹಿರಿಯ ಗೆಳೆಯ ಪ್ರಲ್ಹಾದ ಅಗಸನಕಟ್ಟೆಯವರ ನಿಲುವು ಗಿರಡ್ಡಿಯವರಿಗೆ ವಿರುದ್ಧವಾಗಿತ್ತು. ಒಂದು ಹಂತಕ್ಕೆ ಮುಂದೊರೆದು ಗೆಳೆಯ ಪ್ರಲ್ಹಾದ, ಗಿರಡ್ಡಿಯವರಿಗೆ ‘ನಿಮ್ಮ ಅಭಿಪ್ರಾಯಗಳು ಪೂರ್ವಾಗ್ರಹ ಪೀಡಿತವಾಗಿವೆ’ ಎನ್ನುವ ಮಾತನ್ನೂ ಹೇಳಿದರು. ಸಭೆ ಮುಗಿಸಿಕೊಂಡು ಹೋದ ಗಿರಡ್ಡಿಯವರಿಗೂ ನನಗೂ ಆನಂತರ ವರ್ಷಗಳ ಅಂತರ. ತಪ್ಪಿ ಎಲ್ಲಿಯಾದರೂ ನಾವಿಬ್ಬರೂ ಸೇರಿದರೆ ಸಮಾಂತರ, ಸಮ ಅಂತರ. ಒಟ್ಟಾರೆ ಅಂತರ.
ಸೂಕ್ಷ್ಮಜ್ಞರಾಗಿದ್ದ ಗಿರಡ್ಡಿ ಗೋವಿಂದರಾಜರಿಗೆ ಸಮಾಜವಾದಿ ವಿಚಾರಗಳೇ ಬೇರುಗಳಾಗಿದ್ದರೂ, ಒಳಗಿನ ಸಂಕಟ ಹಾಗೂ ಅಸಮಾಧಾನಗಳಿಗೆ ಕಲಾತ್ಮಕ ಅಭಿವ್ಯಕ್ತಿ ನೀಡಲಾಗದೆ ಹಳಿತಪ್ಪಿದ ಬಂಡಿಯಂತೆ ಅವರ ಸಾಹಿತ್ಯಕ ರಾಯಭಾರತ್ವ ಮುಂದೊರೆದಿತ್ತು ಎಂದು ನನಗೆ ಅನೇಕ ಬಾರಿ ಅನ್ನಿಸಿದ್ದುಂಟು. ಇದು ಅವರೊಂದಿಗಿನ ನನ್ನ ಒಡನಾಟದಿಂದ ನನಗೆ ವೇದ್ಯವಾದ ಮಾತು.
ಲೇಖನ ಮುಂದುವರೆಯುವುದು. . . .
No comments:
Post a Comment