Total Pageviews

Monday, June 18, 2018

‘ಹಂಗು’ ಹರಿದುಕೊಂಡ ಗಿರಡ್ಡಿ ಮುಂದುವರೆದ ಭಾಗ


ಹಿರಿಯರಾದ ಪ್ರೊ. ಚಂದ್ರಶೇಖರ ಪಾಟೀಲರ ಕುರಿತಾದಚಂಪಾಯಣವನ್ನು ನಾನು ಹಾಗೂ ಡಾ. ಕಮಲಾ ಹೆಮ್ಮಿಗೆ ಸಂಪಾದಿಸಿದೆವು. ಮೈಸೂರಿನ ತನು-ಮನು ಪ್ರಕಾಶನದವರು ಪ್ರಕಟಿಸಿದ ಗ್ರಂಥ ಬಿಡುಗಡೆಯಲ್ಲಿ ಪ್ರೊ. ಗಿರಡ್ಡಿಯವರದು ಮುಖ್ಯ ಭಾಷಣವಿತ್ತು. ಜ್ವರ ಬಂದಿದೆ ಎಂದು ಕಾರಣ ನೀಡಿ ಕಾರ್ಯಕ್ರಮದಿಂದ ದೂರ ಉಳಿದರು. ಅದೇ ರೀತಿ ಮತ್ತೊಮ್ಮೆ ಚಂಪಾ ಅವರಕನ್ನಡ ಕನ್ನಡ ಬರ್ರೀ ನಮ್ಮ ಸಂಗಡಕೃತಿ ಬಿಡುಗಡೆಯ ಸಂದರ್ಭದಲ್ಲಿ, ಅದೇನು ಬೇಸರವಿತ್ತೋ ಅವರು ಹೀಗೆ ಹಲವು ಬಾರಿ ಬರಲಿಲ್ಲ, ಬೆರೆಯಲಿಲ್ಲ. ದೂರ, ದೂರವಾಗುತ್ತಲೇ ಹೋಯಿತು ಬೆಸುಗೆಯ ದಾರಿ.
ಇದೇನು ಹೀಗಾಯಿತಲ್ಲ? ಎಂದುಕೊಳ್ಳುತ್ತಲೇ ಇದ್ದೆ. ಅಷ್ಟರಲ್ಲಿ ನಾನು ಗುಡ್ಡ ಸುತ್ತಿ ಮೈಲಾರಕ್ಕೆ ಎನ್ನುವಂತೆ ಮೈಸೂರು, ಭಟ್ಕಳ, ನೆಲ, ನೆಲ ಎಂದೆಲ್ಲ ಅಲೆದು ಮರಳಿ ಬಾಗಲಕೋಟೆಗೆ ಬಂದೆ. ಕಥೆಗಾರ ಗೆಳೆಯ ಬಾಳಾಸಾಹೇಬ ಲೋಕಾಪೂರ, ಪ್ರೊ. ಮಲ್ಲಿಕಾರ್ಜುನ ಹಿರೇಮಠರ ಕಾರ್ಯಕ್ರಮಗಳಲ್ಲಿ ನಾನು ಪ್ರೊ. ಗಿರಡ್ಡಿಯವರನ್ನು ಮತ್ತೆ ಮತ್ತೆ ಸಂಧಿಸಿದೆ. ಈಗ ಅವರ ದೃಷ್ಟಿಕೋನ ಬದಲಾದಂತಿತ್ತು. ನನ್ನ ಬರಹ, ಸುತ್ತಾಟ ಭಾಷಣಗಳು ಅವ್ಯಾಹತವಾಗಿದ್ದವು. ಇಷ್ಟರಲ್ಲಿ ನನ್ನಗಾಂಧಿ ಅಂತಿಮ ದಿನಗಳುಮಾರುಕಟ್ಟೆಗೆ ಬಂದು, ಅಲ್ಲಲ್ಲಿ ಚರ್ಚೆಗಳಾರಂಭವಾಗಿದ್ದವು.
ಒಂದು ಮಧ್ಯಾಹ್ನ ಪ್ರೊ. ಗಿರಡ್ಡಿಯವರಿಂದ ಫೋನ್. ಅವರು ನನ್ನ ಗಾಂಧಿಯನ್ನು ಓದಿದ್ದರು. ಹಾಸನ ಜಿಲ್ಲೆಯ ಬೇಲೂರುನಲ್ಲಿದ್ದ ನಾನಾಗ ಅದರ ಎರಡನೇಯ ಭಾಗವಾದಗಾಂಧಿ ಮುಗಿಯದ ಅಧ್ಯಾಯಬರಹದಲ್ಲಿ ತಲ್ಲೀನನಾಗಿದ್ದೆ. ಬಹಳ ಅಭಿಮಾನದ ಪ್ರೋತ್ಸಾಹದ ಮಾತುಗಳನ್ನಾಡಿದ ಗಿರಡ್ಡಿ ಧಾರವಾಡಕ್ಕೆ ಬಂದಾಗ ಮನೆಗೆ ಬರಲು ತಿಳಿಸಿದ್ದರು. ಇಷ್ಟರಲ್ಲಿ ನನ್ನ ಗಾಂಧಿಯ ಎರಡನೇಯ ಭಾಗದ ಕರಡೂ ಸಿದ್ಧವಾದುದರಿಂದ ವಾರಗಳ ಮೊದಲು ಅದನ್ನು ಅವರಿಗೆ ಪೋಸ್ಟ್ ಮಾಡಿ, ಅದಕ್ಕೊಂದು ಬೆನ್ನುಡಿಗಾಗಿ ಕೋರಿಕೊಂಡು ತಿಂಗಳಂತರದಲ್ಲಿ ಅವರಸರೋಜಕ್ಕೆನಾನು ಕಾಲಿಟ್ಟೆ.
ಮೊದಲಿನ ಕಹಿ ಅನುಭವಗಳಿಂದ ಮುದ್ದೆಯಾಗಿದ್ದ ನನಗೆ ಸಾರಿ ನನ್ನಗಾಂಧಿ: ಮುಗಿಯದ ಅಧ್ಯಾಯಕುರಿತಾಗಿ ಅದೇನಾಡುತ್ತಾರೊ ಎಂಬ ಭಯ, ನಿರೀಕ್ಷೆಗಳೆರಡೂ ಇದ್ದವು. ಆದರೆ ಭಿನ್ನರಾಗಿದ್ದರು ಗಿರಡ್ಡಿ. ಮೊದಲ ಬಾರಿಗೆ ಮುಗುಳ್ನಗೆಯೊಂದಿಗೆ ಕಂಪೌಂಡಿನೊಳಗಡೆ ಹೆಜ್ಜೆಗಳೊಂದಿಗೆ ಹೆಜ್ಜೆ ಹಾಕುತ್ತ ಅವರ ಮನೆಯೊಳಗಡೆ ನಾನು ಪ್ರವೇಶಿಸಿದ್ದೆ. ಒಳಗೆ ಕರೆದೊಯ್ದು ಮನೆಯಲ್ಲಿಯ ಪುಸ್ತಕ ವಿಭಾಗ ಮತ್ತೊಂದು, ಮಗದೊಂದು ತೋರಿಸಿ, ಕೂಡ್ರಿಸಿ, ತಿಂಡಿ-ತಿನಿಸು, ಚಹ ಕುಡಿಸಿ ನನ್ನ ಗಾಂಧಿಯನ್ನು ಕೈಗಿಟ್ಟಾಗ ನೋಡಿ ಗಾಬರಿಯಾದೆ.ಕರಡಿನ ಪುಟ-ಪುಟದಲ್ಲಿ ಕಾಳಜಿಯ ಕೈಯಿತ್ತು. ಅದು ದಶಕಗಳ ತನ್ನ ಸೂಕ್ಷ್ಮತೆಯ ಸಂಕೇತಗಳನ್ನು ಬಿಟ್ಟು ಹೋಗಿತ್ತು.
ಪ್ರೊ. ಗಿರಡ್ಡಿಯವರು ಇಡಿಯಾಗಿ ಕರುಡನ್ನು ಓದಿ, ನನ್ನ ಹಾಗೂ ಮುದ್ರಾ ರಾಕ್ಷಸಿಯ ಅನೇಕ ತಪ್ಪುಗಳನ್ನು ಸರಿಪಡಿಸಿದ್ದರು. ‘ಬೆನ್ನುಡಿ ಬರೆದಿದ್ದರೆ ಸಾಕಿತ್ತು, ತುಂಬಾ ಕೆಲಸವಾಯ್ತು ನಿಮಗೆ ಸರ್ಎಂದುದಕ್ಕೆ ಮುಗುಳ್ನಕ್ಕು, ‘ಹಾಗೇನಿಲ್ಲ ಬಹಳ ಒಳ್ಳೆಯ ಬರಹ, ಅಭಿಮಾನ ಅನಸ್ತದ. ಎಲ್ಲ ಕರಕ್ಷನ್ಸ್ಗಳನ್ನು ಸರಿಯಾಗಿ ಹಾಕಿರಿ, ಇನ್ನೊಂದು ಪ್ರೂಫ್ ತೆಗೊಂಡ್ರ ಛಲೋ ಇರ್ತದಎಂದರು. ಅಲ್ಲಿತೇ ಕುಳಿತು ಇಡಿಯಾಗಿ ಅವರ ಕರಕ್ಷನ್ ರೀತಿಯ ಕಡೆಗೆ ಕಣ್ಣಾಡಿಸಿದೆ. ಗುರುಗಳು ಎಷ್ಟೆಲ್ಲ ಕೆಲಸ ಮಾಡಿದ್ದರು. ಒಂದು ಕ್ಷಣ ಇಂಥದೇ ಕೆಲಸ ಮಾಡುತ್ತ ಸದಾ ನನ್ನ ಬರಹದ ಮಾನ ಕಾಯ್ದ ಪ್ರೊ. ಜಿ.ಬಿ. ಸಜ್ಜನರ, ಸಂಶೋಧನಾ ಗುರುಗಳಾದ ಪ್ರೊ. ಸಿ.ಆರ್.ವಾಯ್ ಅವರ ನೆನಪುಗಳು ಮರುಕಳಿಸಿದವು.
ಭಾಷಾ ಸೂಕ್ಷ್ಮತೆ, ಬರಹದ ಶಿಸ್ತು, ಬದ್ಧತೆಗಳ ದೃಷ್ಟಿಯಿಂದ ಕನ್ನಡ ಸಾರಸ್ವತಕ್ಕೆ ಗಿರಡ್ಡಿಯವರ ನಿರ್ಗಮನ ಖಂಡಿತವಾಗಿಯೂ ತುಂಬಲಾಗದ ಹಾನಿಯೇ ಸರಿ. ಅವರ ಗರಡಿ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ತಲೆಮಾರು ಇನ್ನೂ ಪಳಗಬೇಕಿತ್ತು. ಇನ್ನೊಂದಿಷ್ಟು ಕಾಲಾವಕಾಶ ಬೇಕಾಗಿತ್ತು ನಮಗೆ. ಅವರ ಶೈಕ್ಷಣಿಕ ಶಿಸ್ತು ಒಂದು ಕ್ರಮವಾಗಿ ನಮ್ಮನ್ನು ಆವರಿಸುವ ಮೊದಲೇ ಅವರ ನಿರ್ಗಮನವಾದುದು ಅತ್ಯಂತ ನಿಸ್ಸಹಾಯಕ ಸ್ಥಿತಿ. ಅಂದಿನ ನಮ್ಮ ಭೇಟಿಯಲ್ಲಿ ಗಿರಡ್ಡಿಯವರಿಗೆ ನಮ್ಮೊಂದಿಗೆ ಹೊರಕೋಣೆಯಲ್ಲಿ ಮನೋಹರ ಗ್ರಂಥಮಾಲೆಯ ಸಮೀರ ಜೋಶಿ ಕಾಯುತ್ತಿದ್ದರು ಅನಿವಾರ್ಯವಾಗಿ ನಾನಲ್ಲಿಂದ ಹೊರಟೆ.
ನವ್ಯದ ಭರಾಟೆಯಲ್ಲಿಯೇ ಕಣ್ಣರಳಿಸಿದ ಹತ್ತಿಮತ್ತೂರಿನ ಚಂಪಾ, ಅಬ್ಬಿಗೇರಿಯ ಗಿರಡ್ಡಿ, ಮನ್ಸೂರು-ಮನಗುಂಡಿಯ ಸಿದ್ಧಲಿಂಗ ಪಟ್ಟಣಶೆಟ್ಟಿ ಅದ್ಭುತ ಸಂಘಟನಾ ಚತುರೂ ಕೂಡಾ. ನಿಟ್ಟಿನಲ್ಲಿ ನಮ್ಮ ತಲೆಮಾರು ಹಿರಿಯ ಮೂವರಿಂದಲೂ ಕಲಿಯಬೇಕಾದುದು ಬಹಳ. ಇದು ಎಷ್ಟು ಬರೆದರೂ ಅದಕ್ಕೂ ಮಿಕ್ಕಿ ಉಪನ್ಯಾಸ, ವಿಚಾರ ಸಂಕಿರಣ ಎನ್ನುತ್ತ ನಾಡು ಸುತ್ತಿದ್ದರು. ಸಂಕ್ರಮಣ, ಸಂಕಲನ ಹಾಗೂ ಸಮಾಹಿತ ಪತ್ರಿಕೆಗಳನ್ನು ಹುಟ್ಟುಹಾಕಿ ತಮ್ಮ ಗಟ್ಟಿ ವ್ಯಕ್ತಿತ್ವವನ್ನು ಜಂಗಮವಾಗಿಸಿಕೊಂಡರು. ‘ಧಾರವಾಡ ಸಾಹಿತ್ಯ ಸಂಭ್ರಮವನ್ನು ರೂಪಿಸಿದ ಮಹತ್ವದ ಪ್ರತಿಭೆ ಪ್ರೊ. ಗಿರಡ್ಡಿ ಗೋವಿಂದರಾಜ. ಇಂಥದರಲ್ಲಿ ನನ್ನನ್ನೂ ಒಂದು ಸಂಭ್ರಮಕ್ಕೆ ಆಹ್ವಾನಿಸಿ, ಎಲ್ಲ ಸೌಲಭ್ಯಗಳನ್ನೂ ನೀಡಿ ಕೈ ತುಂಬ ಸಂಭಾವನೆಯನ್ನು ನೀಡಿ ಕಳುಹಿಸಿದ್ದ ನನ್ನಂಥವನಿಗೆ ಬಹಳ ಮಹತ್ವದ್ದೆನ್ನಿಸಿದೆ. ಯಾಕೆಂದರೆ ಸಾಹಿತ್ಯ, ಭಾಷಣ, ತಿರುಗಾಟಗಳು ತೆವಲಿನ ತುತ್ತೂರಿಗಳಾಗದೆ, ಪುಕ್ಕಟೆ ಮನೋರಂಜನೆಗಳಾಗದೆ ಗಂಭೀರ-ರಚನಾತ್ಮಕ ವೇದಿಕೆಗಳಾಗಬೇಕು. ಲೇಖಕ ಮತ್ತು ಓದುಗರೀರ್ವರೂ ಗೌರವಿಸಲ್ಪಡಬೇಕು ಎನ್ನುವುದು ನನ್ನ ವಾದ. ಪ್ರೊ. ಗಿರಡ್ಡಿ ಇದನ್ನು ನಂಬಿದಂತಿತ್ತು.
ನಾನು ಕರ್ನಾಟಕ ಸಾಹಿತ್ಯ ಅಕಾಡೆಯಿಂದ ಸದಸ್ಯನಾದ ಮೇಲೆ ಅಧ್ಯಕ್ಷರಾದ ಪ್ರೊ. ಮಾಲಗತ್ತಿ ನೇತೃತ್ವದಲ್ಲಿ ರೂಪಗೊಂಡ ಮಹತ್ವದ ಯೋಜನೆ ಬಂಗಾರದ ಎಲೆಗಳು ಹಾಗೂ ವಜ್ರದ ಬೇರುಗಳ ಕನ್ನಡ ಸಾಹಿತ್ಯದ ಎಲ್ಲ ಅಭಿಜಾತ ಸಾಹಿತ್ಯ ಪ್ರಕಾರಗಳ ಕುರಿತಾದ ವಜ್ರದ ಬೇರುಗಳಿಗೆ ಮುಖ್ಯ ಸಲಹೆಗಾರರಲ್ಲೊಬ್ಬರು ಪ್ರೊ. ಗಿರಡ್ಡಿ ಗೋವಿಂದರಾಜ. ನಮ್ಮ ಯೋಜನೆ ಕುರಿತು ಅಭಿಮಾನ ಪಟ್ಟು ನಮ್ಮ ಆಹ್ವಾನ ಮನ್ನಿಸಿ ಬೆಂಗಳೂರಿಗೆ ಬಂದಾಗ ಪ್ರವಾಸದಲ್ಲಿದ್ದ ನಾನು ಅವರೊಂದಿಗೆ ಕುಳಿತು ಸುದೀರ್ಘವಾಗಿ ಮಾತನಾಡುವ ಅವಕಾಶ ಕಳೆದುಕೊಂಡಿದ್ದೆ.
ನನ್ನ ಗಿರಡ್ಡಿಯವರ ಕೊನೆಯ ನೋಟ-ಮಾತು-ಮೌನ ಎಲ್ಲ ನಡೆದದ್ದು ದಿನಾಂಕ:15.04.2018 ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತ್ರೀವಳಿ ಸರಣಿಯ ಲೇಖಕ-ಗೆಳೆಯ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಆತ್ಮಕಥೆ ಮೊದಲ ಭಾಗಗಿರಿಜವ್ವನ ಮಗಬಿಡುಗಡೆಯ ಸಮಾರಂಭಕ್ಕೆ ಶ್ರೀಯುತ ರಾಘವೇಂದ್ರ ಪಾಟೀಲರೊಂದಿಗೆ ಅವರು ಬಂದಿದ್ದರು. ಶಿಷ್ಯನಾಗಿ ವೇದಿಕೆಯಿಂದ ಇಳಿದು ಹೋಗಿ ನಾನು ಅವರ ವಿಭಯಕುಶಲೋಪರಿ ಕೇಳಿದ್ದೆ. ಮುಗುಳ್ನಗುತ್ತ ಮಾತಾಡಿದ್ದ ಅವರು ನನ್ನ ಭಾಷಣದ ಕೊನೆಯವರೆಗೂ ಇರಲಿಲ್ಲ. ಮಾತಿನ ಯಾವುದೋ ತಿರುವಿನಲ್ಲಿ ಅವರನ್ನು ನಾನು ಹುಡುಕಿದಾಗ ಅವರು ಮರೆಯಾಗಿದ್ದರು. ಅಂದು ಮರೆಯಾದವರು ಇನ್ನೂ ತಿಂಗಳು ತುಂಬುವುದರಲ್ಲಿ ಸಂಪೂರ್ಣ ಮರೆಯಾಗಿ ಬಿಟ್ಟರು.
ಬದುಕಿಗೆ ಅಂಟಿಸಲಾಗದ ಎಲ್ಲ ಅರ್ಥಗಳನ್ನೂ ಸಾವಿಗೆ ಅಂಟಿಸಬಹುದು.

No comments:

Post a Comment