Total Pageviews

Wednesday, February 13, 2019

ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ 3ನೇ ರಾಜ್ಯ ಮಟ್ಟದ ಕವಿ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ -2ನೇ ಭಾಗ


ಒಕ್ಕೂಟದ ಗೆಳೆಯರಿಗೆ :
ಕವಿ ಮಿತ್ರರೆ, ಇಂದಿನ ರಾಜ್ಯ ಮಟ್ಟದ 3ನೇ ಯುವ ಕವಿ ಸಮ್ಮೇಳನದಲ್ಲಿ ಅನುಭಾವ ಕವಿ ಮಧುರ ಚೆನ್ನ ಹಾಗೂ ಜನಪದ ಕವಿ ಸಿಂಪಿ ಲಿಂಗಣ್ಣ ಪ್ರಶಸ್ತಿಗಳಿಂದ ಪುರಸ್ಕøತರಾದ ಪ್ರತಿಭಾ ಸಂಪನ್ನರೇ, ರಾಜ್ಯ ಯುವ ಬರಹಗಾರರ ಒಕ್ಕೂಟದ ಬೆನ್ನುಲುಬಾಗಿ ನಿಂತಿರುವ ಚಡಚಣದ ಹೃದಯವಂತ ವರ್ತಕ ಬಂಧುಗಳೇ, ಪಟ್ಟಣ ಪಂಚಾಯತ ಸದಸ್ಯರೇ, ಶಿಕ್ಷಣ ಕ್ಷೇತ್ರದ ಸ್ನೇಹಿತರೆ, ಪತ್ರಕರ್ತ ಮಿತ್ರರೇ ಹಾಗೂ ಅಭಿಮಾನಿಗಳೇ, ಹಿಂದೆಂದೂ ಇಲ್ಲದಷ್ಟು ನೂರಾರು ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕದಲ್ಲಿವೆ. ದೇಶದಲ್ಲಿಯೇ ಅತೀ ಹೆಚ್ಚು ಅಂದರೆ 12 ಆಕಾಡೆಮಿಗಳಿರುವ ರಾಜ್ಯ ನಮ್ಮದು, ವಿಶ್ವಕ್ಕೆ ಸಮತಾ ಸಮಾಜದ ಪರಿಕಲ್ಪನೆಯನ್ನು ಕೊಟ್ಟ ವಚನ, ತತ್ವಪದ, ಜನಪದ ಸಾಹಿತ್ಯ ಕೊಟ್ಟ ನಾಡು ನಮ್ಮದು. ಸ್ವಾತಂತ್ರ್ಯ ಸಂಗ್ರಾಮ, ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಸಾಹಿತ್ಯದ ನವೋದಯ, ನವ್ಯ ಬಂಡಾಯ ಚಿಂತನೆಗಳಿಗೂ ನಮ್ಮ ಕೊಡುಗೆ ಸಣ್ಣದೆನಲ್ಲ. ಜಗದ್ಗುರು ಎರಡನೆಯ ಇಬ್ರಾಹಿಂ ಆದಿಲ್ ಷಾನಿಂದ ಪ್ರಚಲಿತ ಶ್ರೀಸಿದ್ಧೇಶ್ವರ ಮಹಾಸ್ವಾಮಿಗಳವರೆಗೂ ಕನ್ನಡ ಸಮಾಜಕ್ಕೆ ಸರ್ವಕಾಲಕ್ಕೂ ಅನ್ವಯವಾಗಬಲ್ಲ ಸಾಹಿತ್ಯ ಇಲ್ಲಿ ರಚನೆಯಾಗಿದೆ. ಇಲ್ಲಿದ್ದುಕೊಂಡು ವಿಶ್ವವನ್ನೊಳಗೊಳ್ಳುವ ಪರಿಯ ತೋರಿಸಿದ ಶರಣ ಹಾವಿನಾಳ ಕಲ್ಲಯ್ಯ ನಮ್ಮೆಲ್ಲರ ಅಭಿಮಾನವಾಗಿದ್ದಾರೆ. ಅವರೊಂದು ವಚನದಲ್ಲಿ ಹೇಳುತ್ತಾರೆ-
ಉರವೇ ಕುರುಕ್ಷೇತ್ರ, ಶಿರವೇ ಶ್ರೀ ಪರ್ವತ
ಲಲಾಟವೇ ಕೇದಾರ, ಬ್ರೂನಾಸಿಕ ಮಧ್ಯವೆ ವಾರಣಾಸಿ
ಹೃದಯವೇ ಪ್ರಯಾಗ, ಸರ್ವಾಂಗವೇ ಸಕಲತೀರ್ಥಂಗಳಾಗಿ
ಮಹಾಲಿಂಗ ಕಲ್ಲೆಶ್ವರನ ಶರಣರ ಸುಳುಹ ಜಗತ್ಪಾವನ
ಇದನ್ನೇ ಉಪನಿಷತ್ತು-
ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೆವಾನುಪಶ್ಯತಿ,
ಚಾತ್ಮಾನಂ ಸರ್ವ ಭೂತೇಷು ತತೋ ವಿಜುಗುಪ್ಸತೆ
ಸಕಲದಲ್ಲಿ ತನ್ನನ್ನು, ತನ್ನೊಳಗೆ ಸಕಲವನ್ನು ಕಾಣಲು ಯಾವನು ಬಲ್ಲನೊ ಅವನನ್ನು ಇನ್ನೂ ಗೋಪ್ಯವಾಗಿರಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.
ಪ್ರತಿಭಾ ಸಂಪನ್ನನಾದ ಕವಿ ಅಂಥ ಒಬ್ಬ ವ್ಯಕ್ತಿ, ಇದೇ ಕಾರಣ ಕವಿಯನ್ನು ರವಿಗೆ ಹೋಲಿಸಿದ್ದಾರೆ. ಹಾವಿನಾಳ ಕಲ್ಲಯ್ಯನವರ ಮಾತುಗಳಲ್ಲೇ ಹೇಳುವುದಾದರೆ ಇಂಥ ವಿಶ್ವಮಾನವ ಕವಿಗೆ-

ಅರಿವೆ ಗುರು, ಆಚಾರವೇ ಶಿಷ್ಯ, ಜ್ಞಾನವೇ ಲಿಂಗ
ಪರಿಣಾಮವೇ ತಪ, ಸಮತೆ ಎಂಬುದೇ ಯೋಗದಾಗು ನೋಡಾ

ಇಂಥ ಸಮೃದ್ಧಿ, ಸ್ವಾಭಿಮಾನ ಹಾಗೂ ವಿಶ್ವಾಸದ ಪರಂಪರೆಯಿಂದ ಬಂದ ನಾವು ಎಂಥ ಕಾವ್ಯವನ್ನು ರಚಿಸಬೇಕು ಎನ್ನುವುದರತ್ತ ಗಮನ ಹರಿಸಬೇಕಿದೆ. ನಮ್ಮ ಕಾವ್ಯ ಬರೀ ನಮ್ಮ ಮಾನಸಿಕ ವ್ಯಸನಾಭಿವಕ್ತಿಯ ಫಲಶೃತಿಯಾಗದೆ ಹಸನಾದ ಸಾಮಾಜಿಕತೆಗೆ ಸೋಪಾನವಾಗಬೇಕಿದೆ. ನಮ್ಮ ರೈತರ ನೋವು, ನನ್ನ ನೆಲದ ಸಂವೇದನೆಗಳನ್ನು ಕುರಿತು ಹಾಡಬೇಕಿದೆ. ಬಹುರಾಷ್ಟ್ರೀಯ ವ್ಯಾಪಾರಿಗಳಿಗೆ ಬಲಿಯಾಗುತ್ತಿರುವ ನಮ್ಮ ಅನ್ನದಾತರ ಭೂಮಿಗಳು ನಮ್ಮ ಬಾಲ್ಯದ ತೊಟ್ಟಲುಗಳಾದ ಹಳ್ಳಿಗಳು ನಮ್ಮ ಸಾಮಾಜಿಕತೆಯ ದೀಕ್ಷೆ ಕೇಂದ್ರಗಳಾದ ಶಾಲೆಗಳು, ನಮ್ಮ ಸಾಧನೆ, ಸಮಾಧಿ ಹಾಗೂ ಸದಾಶಯಗಳು ನಮ್ಮ ಕಾವ್ಯದ ವಸ್ತುಗಳಾಗಬೇಕಿದೆ.

ಕಾಯಬೇಕಿದೆ ಕಾವ್ಯ. ಗೆಳೆಯರೆ, ಅದು ಅವಸರದ ಹೆರಿಗೆಯಾಗಬಾರದು. ಕಾವ್ಯದ ಬದುಕನ್ನು ಗಟ್ಟಿಗೊಳಿಸುವಷ್ಟು, ದಿಟ್ಟಗೊಳಿಸುವಷ್ಟು ಕಾಲದ ಕಾವು ಹಾಗೂ ಕಾಯುವಿಕೆಗಳೆರಡೂ ಅವಶ್ಯಕವಾಗಿದೆ. ನನ್ನ ಕಾವ್ಯಾರಂಭದ ಗುರುಗಳಾಗಿದ್ದ ಸಿಂಪಿ ಲಿಂಗಣ್ಣನವರು ಒಮ್ಮೆ ಹೇಳಿದ್ದರು. “ಬರೆದುದನ್ನು ಕೆಲವರ್ಷ ಕಾಯ್ದಿಡಿ. ಕಾಲಾಂತರದಲ್ಲಿ ಬರೆದುದನ್ನೇ ಮತ್ತೆ ನೀವೆ ಓದಿ ನೋಡಿ. ಆನಂತರವೂ ಅದು ನಿಮ್ಮನ್ನು ಕಾಡಿದರೆ ಅದನ್ನು ಪ್ರಕಟಿಸಿ. ನಿಮ್ಮನ್ನು ಕಾಡದ ಯಾವುದೇ ಬರಹವನ್ನು ಪ್ರಕಟಿಸಬೇಡಿ. ಏಕೆಂದರೆ- “A Poet is the painter of Soul” ಎಂದು ಹೇಳಿದ್ದಾರೆ. ಒಬ್ಬ ಒಳ್ಳೆಯ ಕವಿಗೆ ಅಷ್ಟೇ ಒಳ್ಳೆಯ ಓದಿನ ಅವಶ್ಯಕತೆಯೂ ಇದೆ, A good Poet is made as well as born” ಎಂದೂ ಹೇಳಿದ್ದಾರೆ.

ಪ್ರೀತಿ ಎಂಬಆತ್ಮಭಾವ
ಪ್ರತಿ ಯುವ ಕಾವ್ಯದಲ್ಲಿಯೂ ವಯೋಸಹಜವಾಗಿ ಪ್ರೀತಿ-ಪ್ರೇಮ-ಪ್ರಣಯ ಕುರಿತಾದ ಸಂವೇದನೆಗಳದ್ದೇ ಸಿಂಹಪಾಲು ಇರುತ್ತದೆ. ಅದು ಇರಬೇಕಾದುದೇ. ಖಂಡಿತವಾಗಿಯೂ ಅದು ಪ್ರತಿ ಯುವಕ-ಯುವತಿಯಲ್ಲಿ ಕೋಲಾಹಲ ಎಬ್ಬಿಸುವ ಸಂಗತಿಯೇ. ಒಮ್ಮೆ ಘಟಿಸುವ ಘಟನೆ ಮಾನವ ಚರಿತ್ರೆಯ ಸಾವಿರ-ಸಾವಿರ ಪುಟಗಳ ಸಾಹಿತ್ಯ-ಯುದ್ಧ ಮತ್ತು ಇತಿಹಾಸಗಳಿಗೆ ಕಾರಣವಾಗಿದೆ. ಪ್ರೇಮ ಎಂಬ ಮಹಾ ಸೆಳೆತವೇ ನಮ್ಮಲ್ಲಿ ಬಂಡಾಯ ಹಾಗೂ ವಿದ್ರೋಹದ ಬೆಂಕಿಯನ್ನು ಹುಟ್ಟಿಸುವುದು. ಅಂಥ ಒಂದು ಪ್ರೇಮವೇ ನಮ್ಮ ಸಾಹಿತ್ಯವನ್ನು ರೂಪಿಸಿದ್ದು. ನಮ್ಮ ಸಾಹಿತ್ಯಕ್ಕೊಂದು ಅನಿವರ್ಚನೀಯ ಆನಂದ, ವೈಶಾಲ್ಯವನ್ನು ತಂದುಕೊಟ್ಟದ್ದು. ಹೆಣ್ಣೆಂಬ ಪೃಥ್ವಿಯ ಸಮಶಕ್ತಿಯನ್ನು ಗೌರವಿಸುವಂತೆ ಮಾಡಿದ್ದು. ಪ್ರೀತಿಯನ್ನು ಕುರಿತು ನಾನೇ ಬರೆದ ಒಂದು ಪದ್ಯ-

ಪ್ರೀತಿ ಒಂದು ಮಧುರ ನೋವು
ಅದಿಲ್ಲದ ಬದುಕು
ನಡು ಕಡಲಿನಲ್ಲಿ
ಒಡಲು ಬಿರಿಯವ ಸಾವು

ತೀರ ಇತ್ತೀಚಿಗೂ ಪ್ರೀತಿ ಕುರಿತು ಒಂದು ಕನವರಿಕೆ-
ಪ್ರೀತಿಗೆ
ಹೆಗಲಾಗುವವರ ಬಗೆಗೆ
ಏನಾದರೂ ಗೊತ್ತೆ ನಿಮಗೆ?

ದೇವರೆನ್ನುತ್ತೀರಿ, ದೈವವೆನ್ನುತ್ತೀರಿ
ನಿಮ್ಮ ಪ್ರೀತಿಯ ಹೆಣವನೆತ್ತಿ
ಭೂಮಿಗೊ, ಬೆಂಕಿಗೊ ಇಡುವ
ಮನುಷ್ಯರನ್ನೇ ಮರೆಯುತ್ತೀರಿ
ಕಣ್ಣೀರ ಒರೆಸಿ ಹಾಕುತ್ತೀರಿ
ನಿಮ್ಮ ಪ್ರೀತಿಗೆ ಗೋಡೆಯಾದವರ
ಗೂಡು ಶಪಿಸುತ್ತೀರಿ
ಕೊಳ್ಳಿಯಿಟ್ಟ ಕೈಗೆ
ಕರುಳ ಸುತ್ತುವುದ ಮರೆಯುತ್ತೀರಿ
ಕರುಣಾಳು ಕೈಯಿಂದ ವಿಷವೆರೆದವರ
ಪಶುವಂತೆ ಕಾಣುತ್ತೀರಿ
ವಂಶ ಹಳಿಯುತ್ತೀರಿ

ಪ್ರೀತಿ ಚಿವುಟಿದ ಬೆರಳುಗಳ
ಮಾತಲ್ಲೇ ಬೆಂಕಿ ಇಕ್ಕುತ್ತೀರಿ
ಸಾವಿಗೂ, ನೋವಿಗೂ ಸಾಕ್ಷಿಯಾಗುವ
ಮನುಷ್ಯರನ್ನೇ ಮರೆಯುತ್ತೀರಿ
ಪ್ರೀತಿ ಎನ್ನುವ ಮರ
ಗೆದ್ದಲವನೂ ಮರೆಯಬಾರದು!”

ನಮ್ಮ ಸೂರಿಗಳು Who can give a law to lovers?
Love is a greater Law unto itself”

ಎಂದಿದ್ದಾರೆ. ಪ್ರೀತಿ ಬರೀ ಮೋಜಲ್ಲ, ಉಡಾಫೆಯಲ್ಲ. ಕಾಲಹರಣದ ಕಥೆಯಲ್ಲ. ಅಕಾಲಿಕ ಮೃತ್ಯುವಲ್ಲ. ಅವಿವೇಕದ ಹೆಜ್ಜೆಯಲ್ಲ, ಅನವಶ್ಯಕ ವೆಚ್ಚವಲ್ಲ. ಅದು ಜಾತಿಯಲ್ಲ, ಮತ-ಪಂಥ-ಪ್ರತಿಷ್ಠೆಯಲ್ಲ. ಅದು ಬರೀ ಹೆಣ್ಣಲ್ಲ, ಗಂಡಲ್ಲ. ಅದು ಆತ್ಮದ ಒರತೆ. ಇಂಥ ಪ್ರೀತಿಯ ಭಾಷೆ ಎಂಥದ್ದು, ಜವಾಬ್ದಾರಿ ಎಂಥದ್ದು ಎಂದು ವಿವರಿಸುತ್ತ ಕವಿ ಶೇಕ್ಸ್ಪಿಯರ್ ತನ್ನ Loves Labour’s Lost ನಾಟಕದಲ್ಲಿ ಒಂದು ಮಾತು ಹೇಳುತ್ತಾರೆ-
“And when Love speaks
The voice of all the God
Make heaven drowsy
With the harmony”
ಇದೇ ಪ್ರೀತಿಯನ್ನು, "ನಮ್ಮ ವರಕವಿ ಬೇಂದ್ರೆಆತ್ಮಭಾವಎಂದರು. ಎಲ್ಲಿ ಎಲ್ಲವೂ ತನ್ನಿರುವನ್ನು ಮರೆಯುವುದೋ ಅದನ್ನು ಪ್ರೀತಿ ಎಂದರು ಬೇಂದ್ರೆ. ಅವರೇ ಹಾಡಿದರು-
ನಾ ನಿನ್ನ ಕಂಡೆ, ನೀ ನನ್ನ ಕಂಡೆ
ಕಂಡದ್ದು ಯಾರ ಯಾವ?
ನೀ ನನ್ನನುಂಡೆ, ನಾ ನಿನ್ನನುಂಡೆ
ಉಳಿದದ್ದು ಆತ್ಮಭಾವ
ಇದು ನಮ್ಮ ಪ್ರೀತಿ ಮುಟ್ಟುವ ಎತ್ತರವಾಗಬೇಕಿದೆ ಗೆಳೆಯರೆ.

ಒಗಟ್ಟಾಗಿರುವುದೇ ಒಕ್ಕೂಟದ ಗುರಿಯಾಗಿರಬೇಕು:
          ಸಾಹಿತ್ಯಿಕವಾದ ಮತ್ತು ಸಾಂಸ್ಕøತಿಕವಾದ ಇಂಥ ಒಂದು ಒಕ್ಕೂಟಕ್ಕೆ ಕಾರಣವಾದ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಎಲ್ಲ ಪದಾಧಿಕಾರಿಗಳನ್ನು ನಾನು ಹೃದಯದುಂಬಿ ಅಭನಂದಿಸುತ್ತೇನೆ. ನನ್ನನ್ನು ಒಕ್ಕೂಟದ ಚರಿತ್ರೆಯ ಮೂರನೇ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆಯ್ಕೆಯಾಗಿ ಅಭಿಮಾನ ತೋರಿದ್ದಕ್ಕಾಗಿ ನನ್ನ ವೈಯಕ್ತಿಕವಾದ ವಂದನೆಗಳನ್ನು ತಿಳಿಸುತ್ತೇನೆ.

ಸಾಂಸ್ಕøತಿಕವಾಗಿ ಕತ್ತಲಾವರಿಸುತ್ತಿರುವ ಇಂಥ ಗಳಿಗೆಯಲ್ಲಿ ಗಡಿಭಾಗದ ಚಡಚಣದಲ್ಲಿ ಇದರ ಅವಶ್ಯಕತೆ ಇತ್ತು. ಇಲ್ಲಿ ಬರಹ, ಕವಿ-ಕಾವ್ಯ ಕುರಿತಾದ ಚಿಂತನೆಯ ಅವಶ್ಯಕತೆ ಇತ್ತು. ನೀವದನ್ನು ಸರಿಯಾಗಿ ನಿಭಾಯಿಸಿದ್ದೀರಿ. ಆದರೆ ಒಂದು ಘಟನೆ ಇಲ್ಲಿ ಸ್ಮರಣೀಯ. ಬಂಡಾಯ ಲೇಖಕರ ಒಕ್ಕೂಟದ ಮೊದಲ ಸಮಾರಂಭದಲ್ಲಿ ರಾಷ್ಠ್ರಕವಿ ಕುವೆಂಪು ಅವರುಮೊದಲು ನೀವೆಲ್ಲರೂ ನಿಮ್ಮ ತಲೆಗೆ ಗುಂಡು ಹಾಕಿಕೊಳ್ಳಬೇಕು. ಇದು ಸತ್ಯ, ಇಂದಿನ ಯುವ ಬರಹಗಾರರ ಒಕ್ಕೂಟದ ಸಂದರ್ಭಕ್ಕೂ ಇದು ಅನ್ವಯ. ನಮ್ಮ ಬುದ್ಧಿಯಲ್ಲಿರುವ ಸ್ವಾರ್ಥ ಸಂಕುಚಿತತೆಗಳು ಸಾಯದ ಹೊರತು ಒಕ್ಕೂಟ ಯಾವ ಘನ ಉದ್ದೇಶವನ್ನು ಸಾಧಿಸಲು ಸಾಧ್ಯವಿಲ್ಲ. ಸರ್ವರ, ಸರ್ವಕಾಲದ ಒಳಿತಿಗಾಗಿ ಯೋಜನೆಗಳನ್ನು ರೂಪಿಸುವಾಗ ನಮ್ಮ ಆಲೋಚನೆಗಳಲ್ಲಿ ಭಿನ್ನತೆ ಇರಲಿ, ವಿಚಾರ ಭೇಧವಿರಲಿ, ವೈಚಾರಿಕ ಭಿನ್ನತೆ ಹಾಗೂ ಸ್ವಾತಂತ್ರ್ಯವೇ ಸಾಹಿತ್ಯದ ಗುರಿಯಾಗಿದೆ. ಆದರೆ ವಿಚಾರ ಬೇಧ ಎನ್ನುವುದು ಉದ್ದೇಶ ಬೇಧಕ್ಕೆ ಕಾರಣವಾಗಬಾರದು. ವಿಘಟನೆಗೆ ಕಾರಣವಾಗಬಾರದು. ಒಂದು ಒಕ್ಕೂಟದ ಅಪಮೃತ್ಯುವಿಗೆ ಕಾರಣವಾಗಬಾರದು. ಸಂದರ್ಭದಲ್ಲಿ ನಾವು ಠ್ಯಾಗೋರರ Where the Mind is Free’ ಪದ್ಯದ ಸಾಲುಗಳನ್ನು ಸ್ಮರಿಸಬೇಕು-
         “Where the mind is without fear
and the head is held high,
where knowledge is free.
Where the world has not been broken up
into fragments by narrow domestic walls.
Where words come out from the depth of truth,
where tireless striving stretches its arms toward perfection.
Where the clear stream of reason has not lost it's way
into the dreary desert sand of dead habit.
Where the mind is led forward by thee

ಆಶೆ ಇರಲಿ, ಅತೃಪ್ತಿ, ಅಸಮಾಧಾನಗಳು ಬೇಡ:
   ಗೆಳೆಯರೆ, ಇಂದು ಕರ್ನಾಟಕದ ಮೂಲೆ-ಮೂಲೆಯಲ್ಲೂ ಸಾಹಿತ್ಯದ ಹಬ್ಬ ಉತ್ಸವ, ಜಾತ್ರೆಗಳು ನಡೆಯುತ್ತಿವೆ. ಇದು ಸಂತಸಕರವಾದ ಸಂಗತಿಯೆ. ಆದರೆ, ಅಸಮಾಧಾನಕರ ಸಂಗತಿ ಎಂದರೆ, ಇಂಥ ಸಂದರ್ಭಗಳಲ್ಲಿ ಸಾಹಿತಿಕ ಚರ್ಚೆಗಳು ಕಡಿಮೆಯಾಗಿ ಇಡೀ ವೇದಿಕೆ ಹಾರ-ತುರಾಯಿ, ಪ್ರಶಸ್ತಿ-ಸನ್ಮಾನಗಳ ಅಖಾಡಗಳಾಗಿ ಬಿಡುತ್ತಿವೆ. ರಾಜ್ಯದ ಆಕಾಡೆಮಿ, ಪರಿಷತ್ತುಗಳಲ್ಲಿಯೂ ಕೂಡಾ ಪ್ರಶಸ್ತಿಗಳು ಸ್ಪರ್ಧೆ ಹಾಗೂ ಪ್ರತಿಷ್ಠೆಯ ವಿಷಯಗಳಾಗಿವೆ. ಕೆಲವು ಪ್ರಶಸ್ತಿಗಳು ಕೇವಲ ಸಂದರ್ಭಕ್ಕಾಗಿ ಮಾತ್ರ ಹುಟ್ಟಿ ಸಾಯುತ್ತಿವೆ. ಅಂತೆಯೆ ಬಸವಣ್ಣನವರು – ‘ಹೊಗಳಿಹೊಗಳಿ ಹೊನ್ನ ಶೂಲಕ್ಕೆರಿಸದಿರಯ್ಯಎಂದು ವಿನಂತಿಸಿಕೊಂಡಿದ್ದಾರೆ. ಇಂದು ಒಕ್ಕೂಟವೂ ನನ್ನನ್ನು ಒಳಗೊಂಡಂತೆ ಹನ್ನೊಂದು ಜನರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ. ಆದರೆ ಪ್ರಶಸ್ತಿಗಳು ಯಾರಿಗೆ? ಯಾತಕ್ಕಾಗಿ? ಎಂಬ ಪ್ರಶ್ನೆಯನ್ನು ನಾನು, ನೀವುಗಳೆಲ್ಲ ಹಾಕಿಕೊಳ್ಳುತ್ತ ಭಾರತೀಯ ಸಾಹಿತ್ಯ ಇತಿಹಾಸದ ಒಂದು ಘಟನೆಯನ್ನು ಸಮರಿಸಿಕೊಳ್ಳುವುದು ಒಳ್ಳೆಯದೆಂದುಕೊಳ್ಳುತ್ತೇನೆ.
ಗುರುದೇವ ಠ್ಯಾಗೋರರಿಗೆ ನೊಬೆಲ್ ಪ್ರಶಸ್ತಿ ಬಂದಿತ್ತು. ಅದು ಭಾರತಿಯ ಕವಿಯೊಬ್ಬನಿಗೆ ವಿಶ್ವದ ಮನ್ನಣೆ. ಎಲ್ಲೆಲ್ಲೂ ಸಂಭ್ರಮವೇ ಸಂಭ್ರಮ. ಇದ್ದಕ್ಕಿದಂತೆ ಕಲ್ಕತ್ತೆಯ ಅಕ್ಕ-ಪಕ್ಕದಲ್ಲಿದ್ದವರೆಲ್ಲ ಹಾರ-ತುರಾಯಿಗಳನ್ನು ತೆಗೆದುಕೊಂಡು ಬಂದು ರವೀಂದ್ರರನ್ನು ಸನ್ಮಾನಿಸಲಾರಂಭಿಸಿದರು. ಮತ್ತೆ ಕೆಲವರು ಅತ್ಯುತ್ಸಾಹದಿಂದ ಅವರೊಂದಿಗೆ ಫೋಟೊಗಳನ್ನು ತೆಗೆದುಕೊಳ್ಳಲಾರಂಭಿಸಿದರು. ಠ್ಯಾಗೋರರು ಮಾತ್ರ ಎಲ್ಲದಕ್ಕೂ ನಿರ್ಭಾವುಕರಾಗಿದ್ದರು. ಒಂದಿಷ್ಟೂ ಸಂಭ್ರಮವಿರಲಿಲ್ಲ ಅವರಲ್ಲಿ. ಇದನ್ನು ಗಮನಿಸುತ್ತ ಯುವಕನೊಬ್ಬ, “ ಗುರುಗಳೇ, ಮುಂಜಾನೆಯಿಂದ ದಿಂಡೋಪದಿಂಡಿನಲ್ಲಿ, ತಂಡ-ತಂಡವಾಗಿ ಜನಗಳು ಬಂದು ನಿಮ್ಮನ್ನು ಗೌರವಿಸುತ್ತಿದ್ದಾರೆ, ಸನ್ಮಾನಿಸುತ್ತಿದ್ದಾರೆ. ನೀವು ಮಾತ್ರ ಎಲ್ಲದಕ್ಕೂ ನಿರ್ಮೋಹಿಯಾಗಿದ್ದೀರಿ, ತನ್ಮಯರಾಗಿದ್ದೀರಿ, ಯಾಕೆ? ಎಂದು ಪ್ರಶ್ನಿಸಿದ. ಮುಗುಳ್ನಕ್ಕು ಠ್ಯಾಗೋರ್ ಹೇಳಿದರು, “ಇಷ್ಟೆಲ್ಲಾ ಜನಗಳು ಇಲ್ಲಿಗೆ ಬಂದು ಸನ್ಮಾನಿಸುತ್ತಿರುವುದು ಯಾರನ್ನು? ಠ್ಯಾಗೋರರನನೋ ಅಥವಾ ಠ್ಯಾಗೋರರಿಗೆ ಸಿಕ್ಕ ಪ್ರಶಸ್ತಿಯನ್ನೊ? ಅವರ ಅಭಿನಂದನೆಗಳು ಠ್ಯಾಗೋರರಿಗೊ, ಕವಿ ರವೀಂದ್ರನಾಥ ಠ್ಯಾಗೋರರಿಗೊ? ಇನ್ನೂ ಮುಂದೊರೆದು ಕೇಳುವುದಾದರೆ ನೊಬೆಲ್ ಪ್ರಶಸ್ತಿ ಬಂದಿರುವುದು ಗೀತಾಂಜಲಿಗೊ ಅಥವಾ ಠ್ಯಾಗೋರರಿಗೊ? ನನಗನಿಸುತ್ತದೆ, ಎಲ್ಲ ಸಂಭ್ರಮ ನಡೆದಿರುವುದು ಗೀತಾಂಜಲಿಯ ಸುತ್ತ, ನನ್ನ ಸುತ್ತಲ್ಲ.
ಇದು ಪ್ರಶಸ್ತಿ  ಸ್ವೀಕರಿಸಿದ ನಾವುಗಳೆಲ್ಲ ಹಾಗೂ ಮುಂದಿನ ಪ್ರಶಸ್ತಿ ಪುರಸ್ಕಾರಗಳಿಗೆ ಅಣಿಯಾಗುತ್ತಿರುವ ನೀವುಗಳೆಲ್ಲ ನೆನಪಿನಲ್ಲಿಡಬೇಕಾದ ಘಟನೆ ಎಂದುಕೊಳ್ಳುತ್ತೇನೆ.
ಪ್ರಯಾಣ ಪ್ರಾರಂಭಿಸಿದ್ದೇನೆ. ಯಾವುದೋ ಒಂದು ಗುರಿಯನ್ನು ಮುಟ್ಟೇ ಮುಟ್ಟುತ್ತೇನೆ ಎಂಬ ಭರವಸೆ ಇರಲಿ. ಕವಿ ಸಾಹಿರ್ ಹೇಳಿದ್ದಾರೆ-
ರಾತ್ ಕಿ ರಾಹಿ ತಕ ಮತ್ ಜಾನಾ
ಸುಬಹ್ ಕಿ ಮಂಜಿಲ್ ದೂರ್ ನಹಿ”

ಬೆಳಕು ಬಂದೇ ಬರುತ್ತದೆ. ಸಾಹಿತ್ಯದ ಇತಿಹಾಸದಲ್ಲಿ ನಿಮಗಾಗಿ ಒಂದು ಪ್ರಶಸ್ತಿ ಇದೆಯೊ, ಇಲ್ಲವೋ ನಿಮ್ಮದೂ ಒಂದು ಸಾಧನೆಯ ಪುಟ ಮಾತ್ರ ಖಂಡಿತವಾಗಿಯೂ ಇದೆ. ಇದೀಗ ನಿಮ್ಮ ಸಾಧನೆಗೆ ಮಹತ್ವದ ವೇದಿಕೆಯೊಂದು ಸಿದ್ಧವಾಗುತ್ತಿದೆ ಎಂಬ ಭರವಸೆ ಇರಲಿ. ಅಸಮಾಧಾನ ಅತೃಪ್ತಿ ಹಾಗೂ ಭಾವ ದಾರಿದ್ರ್ಯಗಳು ಬೇಡ. ಬಡತನವನ್ನು ಶ್ರಮದಿಂದ ನೀಗಿಸಿಕೊಳ್ಳಬಹುದು. ಆದರೆ ದಾರಿದ್ರ್ಯವನ್ನು ಯಾವುದರಿಂದಲೂ ನಿಭಾಯಿಸಿಕೊಳ್ಳಲಾಗದು ಗೆಳೆಯರೆ,
ನಮ್ಮೊಳಗಿನ ಕವಿ-ಕಾವ್ಯ ಲೋಕದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬೇಕಿದೆ. ಸಂಪೂರ್ಣ ಮರವಾಗಿ ವಿಸ್ತರಿಸಿಕೊಳ್ಳಬೇಕಿದೆ. ಇತ್ತೀಚಿಗಷ್ಟೇಪದ್ಮಶ್ರೀ ಪ್ರಶಸ್ತಿಯನ್ನು ಧಿಕ್ಕರಿಸಿದ ಶ್ರೀ ಸಿದ್ಧೇಶ್ವರರು ನಮ್ಮೊಳಗಿನ ಕವಿಗೆ ಆದರ್ಶವಾಗಬೇಕಿದೆ. ಇದೆಲ್ಲವನ್ನೂ ಮೀರಿ ನಮ್ಮೊಳಗಿನ ಕವಿ ಚೇತನಕ್ಕೆ ಸಿದ್ಧಯ್ಯ ಪುರಾಣಿಕರ ವಚನವನ್ನು ವೇದ್ಯಗೊಳಿಸಬೇಕಿದೆ-

ನೀನು ಹರಿ, ನೀನು ಹರ
ನೀನು ಸಿದ್ಧ, ನೀನು ಬುದ್ಧ
ನೀನು ಯಹ್ವ, ನೀನು ಮಜ್ಜ
ನೀನು ತಾವೋ, ನೀನು ದೇವ
ನೀನು ಅಲ್ಲಾ, ನೀನು ಎಲ್ಲಾ
ನೀನು ಸರ್ವನಾಮಿಕ, ನೀನು ಅನಾಮಿಕ
ನೀನು ಸರ್ವಗತ, ನೀನು ಸರ್ವಭರಿತ
ನೀನು ಅನುಪಮೇಯ, ನೀನು ನಿರಾಮಯ
ನೀನು ಸ್ವತಂತ್ರಧೀರ ಸಿದ್ಧೇಶ್ವರ

No comments:

Post a Comment