Total Pageviews

Sunday, March 29, 2020

ಕಳೆಯಬೇಕಿದೆ ಕಳೆದುದೆಲ್ಲವನು ಒಮ್ಮೆ


ನಾನು ಹುಟ್ಟುವ ವೇಳೆಗೆ ಈ ದೇಶ ವಿಭಜನೆಗೊಂಡು ಎರಡೂವರೆ ದಶಕಗಳ ದೀರ್ಘ ಕಾಲ ಉರುಳಿ ಹೋಗಿತ್ತು. ಸಾಮ್ರಾಜ್ಯಷಾಯಿಯ ದುರಾಸೆಯೊ, ನಮ್ಮ ರಾಜಕೀಯ ನೇತಾರರ ಅಪ್ರಭುದ್ಧತೆಯೊ, ದೇಶವಾಸಿಗಳ ಧಾರ್ಮಿಕ ಸಂಕುಚಿತತೆಗಳೊ, ಒಟ್ಟಾರೆ ನಾವು ಸೀಳಿಕೊಂಡು ಆಗಿತ್ತು. ಆ ನಂತರ ಇಡೀ ಒಂದು ದಶಕವನ್ನು ಈ ದೇಶ ವಿಭಜನೆಯ ರಕ್ತ ರಂಜಿತ ಪುಟಗಳನ್ನು ಓದುವುದರಲ್ಲಿಯೇ ಕಳೆದೆ. ಹೀಗೆ ಓದಿದಾಗಲೊಮ್ಮೆ ದಿಗಿಲುಗೊಳ್ಳುತ್ತಿದ್ದ ನನಗೆ, ಇದ್ದಕ್ಕಿದ್ದಂತೆ ನಾಡು ತೊರೆದು, ಬದುಕರಿಸಿಕೊಂಡು, ಬಂದ ನಗರಗಳ ಒಮ್ಮಿಂದೊಮ್ಮೆ ತೊರೆದು ಹೊರಟುಬಿಡುವುದೆಂದರೇನು? ಎನ್ನುವುದರ ಗಂಭೀರತೆ ಅರ್ಥವಾಗಿದ್ದರೂ ವಾಸ್ತವವಾಗಿ ಕಂಡುಂಡ ಅನುಭವಗಳಿರಲಿಲ್ಲ.
ಈಗ ಅದನ್ನು ಸಾಧ್ಯವಾಗಿಸಿದ್ದು ಈ ಕರೋನಾ.
ಮಾರ್ಚ್ 21 ರಿಂದ 24 ರವರೆಗೆ ಬೆಂಗಳೂರೆಂಬ ಮಾಯೆಯ ಬಿಡಿಸಿಕೊಂಡು, ಸಿಕ್ಕದ್ದೇ ದಾರಿ ಎಂದುಕೊಂಡು, ಕಂಡಕಂಡವರ ಮುಖ-ಮಾತುಗಳಲ್ಲಿ ಕರೋನಾದ ಕರಾಳ ಛಾಯೆಯ ಕಲ್ಪಿಸಿಕೊಂಡು, ನನ್ನ ಮಕ್ಕಳು, ಹೆಂಡತಿಯೊಂದಿಗೆ ನನ್ನೂರಿಗೆ ಬಂದು ತಲುಪುವಾಗ ನನ್ನೊಂದಿಗೆ ಲಕ್ಷಾಂತರ ಜನಗಳು ಬೆಂಗಳೂರು ಬಿಟ್ಟು, ಹೀಗೆಯೇ ತಮ್ಮ ತಮ್ಮ ಊರಿಗೆ ಹೊರಟಿದ್ದರು. ಬಸ್ಸು, ಕಾರು, ಲಾರಿ, ಆಟೋ, ಬೈಕ್, ಸೈಕಲ್ ಕೊನೆಗೆ ಪಾದಾಚಾರಿಗಳಾಗಿಯೂ ಹೊರಟ ಜನಗಳನ್ನು ನೋಡಿದರೆ ಕರುಳು ಹಿಂಡಿದ ಅನುಭವ. ಮುಂದೆ ಕತ್ತಲೆ, ಹಿಂದೆ ಕರೋನಾ, ಕೈ ಬೀಸಿ ಕರೆಯುತ್ತಿದ್ದ ಹೈವೇದ ಎರಡೂ ಬದಿಗಳ ಹೋಟೆಲ್ ರೆಸ್ಟಾರೆಂಟ್‍ಗಳ ಮುಂದೆ ನಿಷೇಧದ ಆಜ್ಞೆ.
ಗಾಭರಿಗೊಂಡಿದ್ದ ನನ್ನ ಬಾಳ ಸಂಗಾತಿಯಂತೂ ಪ್ರತಿಕ್ಷಣವೂ ತಲ್ಲಣ್ಣಿಸುತ್ತಿದ್ದಳು. ದೂರದಲ್ಲಿದ್ದ ಮಕ್ಕಳನ್ನು ನೆನೆದು ಹರಕೆ ಹಂಬಲಗಳ ಉಸಿರು ಹಾಕುತ್ತಿದ್ದಳು. ಎಲ್ಲರೂ ಹೊರಟಿದ್ದರು ಹೊರಡಬೇಕಾದ ಅನಿವಾರ್ಯತೆಗೆ. ಎಲ್ಲಿಗೆ? ಯಾತಕ್ಕಾಗಿ? ಎಷ್ಟು ದಿನ? ಒಂದೂ ಗೊತ್ತಿಲ್ಲ. ಅವರೆಲ್ಲರನ್ನೂ ಬರೀ ನೋಟದಿಂದ ಪ್ರಶ್ನಿಸುತ್ತಿದ್ದ ನನ್ನ ಮನಸ್ಸು, ಕೇಳಿದ ಪ್ರಶ್ನೆಗಳೇ ಇಲ್ಲಿಯ ಈ ಕವಿತೆ. ಇಲ್ಲಿರುವ ಸಖಿ ಸಮಗ್ರ ಸಮಾಜ ರೂಪಿಸಿದ ನಿರುತ್ತರೆ!!!  
ಅವಳು ಕೊಡದ ಉತ್ತರವನ್ನು ನೀವಾದರೂ ಕೊಡಬಹುದೇ? ಕೊಟ್ಟರೆ ನಾನು ಸುಖಿ, ಕೊಡದಿದ್ದರೆ ನೀವೂ ನನ್ನ ಸಖಿ.
 
ಸಖಿಯೆ ಕಂಡ ಕನಸುಗಳನೆಲ್ಲ
ಅಳುಕಿಸುವದು ಹೇಗೆ ಈ ಕಣ್ಣುಗಳಿಂದ?
ಕ್ಷಣದ ಹಿಂದಿನ ಮರಣ
ಶತಮಾನಗಳ ಅನುರಣನ
ಸಖಿಯೆ, ಎಲ್ಲ ತುಂಬಿದ ಕಣ್ಣೆಂಬ ಈ ಹಡಗ ಸರಕನು
ಕ್ಷಣದಲಿ ಖಾಲಿ ಮಾಡುವುದು ಹೇಗೆ?

ಸ್ಪರ್ಶಕ್ಕೂ ಕಣ್ಣುಂಟು
ಶಬ್ಧಕ್ಕೆ ವಾಸನೆಯ ನಂಟಿದೆ
ಎಂದು ಹೇಳುವುದು ಹೇಗೆ ಕಿವಿ ಇಲ್ಲದವರಿಗೆ?
ಸಖಿಯೆ, ಕಳೆಯಬೇಕಿದೆ ಕಳೆದುದೆಲ್ಲವನು ಒಮ್ಮೆ
ಸಲ್ಲಬೇಕಿದೆ ಮತ್ತೆ ಮಗುವಿನಂತೆ
ಅರಳಬೇಕಿದೆ ನಿನ್ನ ನಗುವಿನಂತೆ.
ನನ್ನ ನೋವಿನ ನೂರು ಕನವರಿಕೆಗೆ
ರೆಕ್ಕೆ-ಗಳಿದ್ದಿದ್ದರೆ ಸಖಿಯೆ, ಹೊತ್ತೊಯುತ್ತಿದ್ದೆ ನಿನ್ನ
ಹೊತ್ತೆ ಮುಳುಗದ ನಾಡಿಗೆ, ಮತ್ತೆ ಮರಳದಂತೆ.
ಮೇಲೆ ಮೇಲೆ ಮೇಲಕೇರುವ ರೆಕ್ಕೆಗಳಿದ್ದಿದ್ದರೆ
ಹಾರಿಸುತ್ತಿದ್ದೆ ಪ್ರೀತಿ ಪತಾಕೆಯ ಗಗನದ ತುಂಬ
ಹೇಳಿಬಿಡು ಸಖಿ ಒಮ್ಮೆ, ನಾನು
ಏನು ಕುಡಿದರೆ ತೀರದ ಕಡಲು, ಮುಗಿಯದ ಆಗಸವ
ಸುತ್ತಾಡಿಸಬಹುದು ನಿನ್ನ?

ದಿಕ್ಕು ತೋಚುತ್ತಿಲ್ಲ, ರೆಕ್ಕೆ ಮೂಡುತ್ತಿಲ್ಲ
ಮುರಿದ ಹಡಗಿದು ಕಡಲ ಕ್ರಮಿಸುವದೆಂತು?
ತಿಳಿಯುತ್ತಿಲ್ಲ.
ಸುತ್ತ ಸುಳಿಯುವುದೆಲ್ಲ ಸತ್ತ ಹಕ್ಕಿಗಳ ವಾಸನೆ
ನಿಂತ ಹಡಗಿಗೆ ಮೃತ್ಯು ಕತ್ತಲೆಯ ಸೂತಕ
ಸಖಿಯೆ, ಹೇಳು ನನಗೆ ನರಕದ ನೆರಳಿಂದ
ಬಿಡುಗಡೆ ಇನ್ನೆಂದು?
ಒಂದು ಹಗಲಿನ ಹಾಡು ಮತ್ತೆ ಕೇಳುವುದೆಂದು?
ಕೂಡಿ ನಾವಿಬ್ಬರೂ ಮಾತನಾಡುವುದೆಂದು?



No comments:

Post a Comment