Total Pageviews

Sunday, March 9, 2014

ಕನ್ನಡದ ದೈವ, ಸಂಭ್ರಮ ಮತ್ತು ಜಾತ್ರೆ

“ಜಂಬುಖಂಡೆಯ ಎಪ್ಪತ್ತರ ಸೀಮೆಯ ಮುಧವಳಲು ರನ್ನನ ಜನ್ಮಸ್ಥಳ.” 

“ಕೊಂಡು ತಂದು, ಹೊತ್ತು ಮಾರಿ ಹಣ ಗಳಿಸಲು ವಿದ್ಯೆಯೇನು ಬಳೆಯ ಮಾಲಾರವೆ?”
       ಇವು ರನ್ನನನ್ನು ಕುರಿತು ನಾನು ಐದನೆಯ ಇಯತ್ತೆಯಲ್ಲಿದ್ದಾಗ ಓದಿದ ಸಾಲುಗಳು. ಒಂದು ಸಾಕ್ಷಿಗಲ್ಲಿನಂತೆ ನಿಂತ ರನ್ನನ ಜನ್ಮಸ್ಥಳವಾದ ಈ ಮುಧೋಳನ್ನು ಬಳಸಿಕೊಂಡೇ ನನ್ನ ನಾಲ್ಕುವರೆ ದಶಕಗಳ ಬಾಳನ್ನು ಕಳೆದಿದ್ದೇನೆ.ಇಲ್ಲಿ ನಿಂತು ಮಾತನಾಡುತ್ತಿರುವುದು, ಅದು ಸಾರ್ವಜನಿಕವಾಗಿ ಮಾತನಾಡುತ್ತಿರುವುದು, ಸಾಹಿತ್ಯದೊಂದಿಗೆ ಸಂವಾದಿಸುತ್ತಿರುವುದು ಇದೇ ಮೊದಲ ಬಾರಿ. ಕೆಲವು ತಿಂಗಳಗಳ ಹಿಂದಷ್ಟೆ ನನ್ನ ತಮ್ಮನಾದ ಪೈಲವಾನ್ ರತ್ನಕುಮಾರ ಮಠಪತಿ ಮುಧೋಳದ ವಿಶಾಲ ರನ್ನ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳ ಉದ್ಘಾಟಕನಾಗಿ ಪಾಲ್ಗೊಂಡರೆ, ಇಂದು ನಾನು ಪಾಲ್ಗೊಂಡಿರುವುದು ಸಾಹಿತಿಯಾಗಿ. ಜಾಗತೀಕರಣ ಮತ್ತು ಕನ್ನಡದ ಅಸ್ಮಿತೆ ಇದು ನನ್ನ ಈ ದಿನದ ಭಾಷಣದ ವಿಷಯ. ಅಂದಹಾಗೆ ಅದು ಫೆಬ್ರುವರಿ 23, 2014.
  ಮುಂಜಾನೆ ಮುಧೋಳದಲ್ಲಿ ಕಾಲಿಟ್ಟಾಗ  ಮೊದಲ ಫೋನ್ ನನ್ನ ಪ್ರೀತಿಯ ಕವಿ, ಶಂಕರ ಕಟಗಿಯವರದು. ಅವರು ನನ್ನ ಪಾಲಿಗೆ ಸಂಪಿಗೆ ತಾಯವ್ವ, ಗಣಿಯ ನಾದ, ದಟ್ಟಿದಾವಣಿ ಎಲ್ಲವೂ. ಮೊದಲ ಅಪ್ಪುಗೆ ಗೆಳೆಯ ಪ್ರಕಾಶ ಖಾಡೆಯವರದು. ಮೊದಲ ಸ್ವಾಗತ ಡಾ. ವಿಜಯಕುಮಾರ ಕಟಗೀಹಳ್ಳಿಮಠ ಅವರದು. ಬಸ್ಸ್‍ಸ್ಟ್ಯಾಂಡಿನಿಂದ ನೇರ ಖಾಡೆಯವರ ಮನೆಗೆ. ಅಲ್ಲೊಂದು ಜನಪದ ಜೀವ. ಆ ಮನೆ ಯೇ ಜನಪದ. ಗೆಳೆಯ ಪ್ರಕಾಶ ಖಾಡೆಯವರ ತಂದೆ. ಕನ್ನಡದ ಅಪರೂಪದ ಜನಪದ ವಿದ್ವಾಂಸ. ನನ್ನ ಹತ್ತಿರವಿದ್ದದ್ದು ಕೇವಲ ಒಂದು ಗಂಟೆಯ ಸಮಯ. ಆ ಸಮಯವೆಲ್ಲವು ಸಾಹಿತ್ಯದ ಸಂಸಾರಕ್ಕೇ ಮೀಸಲು.
       ಮನೆಯಿಂದ ನೇರ ಮುಧೋಳದ ರನ್ನ ಕ್ರೀಡಾಂಗಣಕ್ಕೆ. ಕನ್ನಡದ ಅಸ್ಮಿತೆಯ ಪ್ರಶ್ನೆಯನ್ನು  ನಾನು ಎತ್ತ ಬೇಕಾದುದೇ ಈ ಗಂಡು ಮೆಟ್ಟಿನ ನೆಲದಲ್ಲಿ. ಅದು ಬಾಗಲಕೋಟ ಜಿಲ್ಲೆಯ 4 ನೇ ಕನ್ನಡ ಸಾಹಿತ್ಯ ಸಮ್ಮೇಳನ. ಸಭೆಯಲ್ಲಿರುವವರೆಲ್ಲರೂ ಸಾಹಿತ್ತಿಕ ದಿಗ್ಗಜರುಗಳೆ. ವೇದಿಕೆಯ ಮುಂದೆ ಡಾ. ಪ್ರಕಾಶ ಖಾಡೆ, ತಿಮ್ಮಾಪುರ, ಮಲ್ಲಿಕಾರ್ಜುನ ಹಿರೇಮಠ, ಹುಲಗಬಾಳಿ, ಕಿಟ್ಟಣ್ಣವರ, ಕೊನೆಸಾಗರ, ವೆಂಕಟಗಿರಿ ದಳವಾಯಿ, ವಾಸಣ್ಣ ದೇಸಾಯಿ, ಮಲ್ಲಿಕಾರ್ಜುನ ಬನ್ನಿ, ಸಿದ್ಧರಾಜ ಪೂಜಾರಿ ಹೀಗೆ ದಂಡು ದಂಡಾಗಿ ಸಾಹಿತಿಗಳು. ನನ್ನೊಂದಿಗೆ ವೇದಿಕೆಯ ಮೇಲೆ ಶ್ರೀ ನಿರುಪಾದಿಶ್ವರರು. ಅದೊಂದು ಅಮೋಘ ಘಳಿಗೆ. ಕೇವಲ ಮೂರು ಗಂಟೆಯ ಉತ್ತರ ಕರ್ನಾಟಕದ ಈ ಭೇಟಿಗೆ ನಾನು ಕಳೆದದ್ದು  ಬರೋಬ್ಬರಿ 16 ಗಂಟೆಗಳ ಪ್ರಯಾಣದ ಸಮಯವನ್ನು. ಮಾತನಾಡಿದ್ದು ಕೇವಲ 45 ನಿಮಿಷಗಳು. ಆದರೆ ಸೇರಿದ ದೈವ, ಅದು ಕನ್ನಡದ ದೈವ, ಕನ್ನಡದ ಸಭ್ರಮ, ಕನ್ನಡಿಗರ ಜಾತ್ರೆ.

No comments:

Post a Comment