Total Pageviews

Tuesday, July 15, 2014

ಗೂಡುಗಳನ್ನು ಗುಡಿಗಳಾಗಿಸಿದವಳು

   ಪ್ರಾರ್ಥನೆಯೊಂದು ನನ್ನ ಪಾಲಿಗೆ ಬೆಳಕಾಗಿ ಬಂದು, ಉಸಿರಾಗಿ ಉಳಿದುಕೊಂಡಿದೆ. ಅಪರೂಪಕ್ಕೊಮ್ಮೆ ಹೀಗಾಗುತ್ತದೆ. ಇದನ್ನು ಕಲಿಸಿದ ತಾಯಿಯ(?) ದೇಹ, ಧ್ವನಿ ಅದನ್ನು ಹೇಳುವಾಗ ಪ್ರಕಟಗೊಳ್ಳುತ್ತಿದ್ದ ‘ಆ ಕ್ಷಣದ’ ವಾಣಿ-ವಿಣಾಪಾಣಿ ಎಲ್ಲವೂ ಕಣ್ತುಂಬಿ, ಶುದ್ಧ ಶಾಂತಿ ಮೈಯೆಲ್ಲ ಆವರಿಸಿಕೊಳ್ಳತ್ತದೆ. ಹೀಗಾಗಿ ಅವಳಿಂದ ನನ್ನ ಅಂತ್ಯಕ್ಕೂ ನನ್ನೊಂದಿಗುಳಿಯುವ ಒಂದು ಶ್ರೀಮಂತ ವಸ್ತು ಈ ಪ್ರಾರ್ಥನೆ. ಅದರ ಮೂರು ಸಾಲು ಹೀಗಿವೆ-
              ಭ್ರಷ್ಟನೆನಿಸ ಬೇಡ ಕೃಷ್ಣ,
ಇಷ್ಟು ಮಾತ್ರ ಬೇಡಿಕೊಂಬೆ.
     ಶಿಷ್ಟರೊಳಗೆ ಇಟ್ಟು ಸಲಹೊ. . . .
     ಈ ಸಾಲುಗಳಲ್ಲಿಯ ಬೇಡಿಕೊಳ್ಳುವಿಕೆಗೆ ಮೌಲ್ಯ ಬಂದುದು ಏನನ್ನು ಕೇಳುತ್ತಿದ್ದೇವೆ ಎನ್ನುವುದರ ಮೇಲೆ. ಬಾಳಿನಲ್ಲಿ ಏನೇ ತಪ್ಪಿಸಿದರು ಇಂಥ ಬೇಡುವಿಕೆಯನ್ನು ನಿರಂತರವಾಗಿಸಿಕೊಂಡ ಇಬ್ಬರು ಪೂಜ್ಯರು: ಶ್ರೀ ರಾಮಕೃಷ್ಣ ಮತ್ತು ಗಾಂಧಿ. ಗೊತ್ತಿದೆ, ಪ್ರಾರ್ಥನೆಯಿಂದ ಕರ್ಮ ತಪ್ಪಿಸಲಾಗದು, ಆದರೆ ಅದರ ವ್ಯಾಪ್ತಿಯನ್ನು ವಿಸ್ತರಿಸಬಹುದು, ಅಧೋಮುಖಿಯಾಗಬಹುದಾಗಿದ್ದ ಬಾಳನ್ನು ಊಧ್ವðಮುಖಿಯಾಗಿಸಿಕೊಳ್ಳಬಹುದು.
       ನನ್ನ ಬಾಲ್ಯದ ಹಂಬಲ ಶ್ರೀ ರಾಮಕೃಷ್ಣ, ನನ್ನ ಯೌವ್ವನದ ಕುತೂಹಲ ಮಿ.ಗಾಂಧಿ. ಈ ಮಧ್ಯ ಖಯಾಮನ ಮೆಹಖಾನೆಯಲ್ಲಿಯೂ ಹೆಂಡ-ಹೆಂಗಸರೊಂದಿಗೆ ಮಾತು, ಪ್ರೀತಿ, ಜಗಳ, ಸಹನಶೀಲರಿಗೆ ಒಂದಿಷ್ಟು ಜೀವನ. ಹೇಳಬೇಕಾದುದು - ಸಾಹಿತ್ಯ ನನ್ನನ್ನು ಈ ರೀತಿ ಸಮಾಜಮುಖಿಯಾಗಿಸಿದ ಪರಿ. ನನ್ನ ಗಾಂಧಿ ಕುರಿತಾದ ಎರಡೂ ಕೃತಿಗಳು ಹೂವಿನೊಂದಿಗೆ ನಾರೂ ಸ್ವರ್ಗಕ್ಕೆ ಎನ್ನುವ ನಾಣ್ನುಡಿಯ ಅರ್ಥ ವಿಸ್ತಾರವಷ್ಟೆ. ಈ ಕೃತಿಗಳ ಸುತ್ತ ಏನೆಲ್ಲ ನಡೆದುಹೋಯಿತು. ಇದಕ್ಕೆಲ್ಲ ಕಾರಣ ನಾನೇ ಎನ್ನುವುದು ದುರಹಂಕಾರದ ಮಾತು.
      ಮಾಜಿ ಮುಖ್ಯ ಮಂತ್ರಿಯೊಬ್ಬರ ಮುಖ್ಯ ಸಚೇತಕರೊಬ್ಬರು ಈ ಗಾಂಧಿಯಿಂದಲೇ ನನ್ನ ಅಭಿಮಾನಿಯಾಗಿ, ಆ ಕಾರಣಕ್ಕಾಗಿ ನನ್ನ ಪ್ರಕಾಶಕ ಮಿತ್ರರನ್ನೂ ಸೇರಿಸಿಕೊಂಡು, ತಮ್ಮ ಕಛೇರಿಗೆ ಕರೆಯಿಸಿಕೊಂಡು ಬಾಳೆ ಎಲೆಯ ಊಟ ಹಾಕಿಸಿ, ಹೃದಯ ಶ್ರೀಮಂತಿಕೆಯನ್ನು ಮೆರೆದರು. ನಿವೃತ್ತಿಯ ಹಂತದಲ್ಲಿದ್ದ ಅವರಿಗೆ ನನಗೆ ಏನಾದರೂ ಸಹಾಯ ಮಾಡಬೇಕೆನ್ನುವ ಹಂಬಲ. ಪಕ್ಕದಲ್ಲಿದ್ದ ನನ್ನ ಪ್ರೀತಿಯ ಪದ್ದಿಯನ್ನು ತೋರಿಸಿ ಇವಳಿಗೇನಾದರು ಸಹಾಯ ಮಾಡಬಹುದೇ ಎಂದೆ? ಪ್ರಶ್ನೆಗೆ ಉತ್ತರ ಊರಿಗೆ ಬಂದ ಒಂದೇ ವಾರದಲ್ಲಿ.
      ಎಲ್ಲವು ಅವರು ಅಂದುಕೊಂಡಂತೆ ನಡೆದಿದ್ದರೆ, ಜೂನ್ ತಿಂಗಳ 24 ರಂದು ಈ ಪದ್ದಿ Karnataka State Human Rights Comission, Bangalore £À°è Junior Assistant Engineer ಆಗಿರಬೇಕಿತ್ತು. ಕೈಗೆ ಬಂದ ತುತ್ತು ಬಾಯಿಗಿಲ್ಲ. ಬೇಸರವಾಯಿತು, “ಸರಕಾರಿ ವೃತ್ತಿ ಎನ್ನುವುದೇ ನನ್ನ ಭಾಗ್ಯದಲ್ಲಿಲ್ಲ, ಹಣೆಬರಹವೇ ಇಷ್ಟು, ಬಿಟ್ಟು ಬಿಡಿ, ನಿಮ್ಮ ಸಾಹಿತ್ಯದ ಪರಿಚಾರಕಿಯಾಗಿರುತ್ತೇನೆ” ಎಂದು ಕಣ್ಣೀರಾದಳು ಪದ್ದಿ.
       ಸೋತವರು ಸೋಲಬಾರದು, ಒಮ್ಮೆ ಸತ್ತವರು ಮತ್ತೆ ಸಾಯಬಾರದು. ಇದು ನನ್ನ ಹಠ. ಯಾಕೆಂದರೆ, ಸೋಲಿನ ನಂತರ ಗೆಲುವು, ಸಾವಿನ ನಂತರ ಹುಟ್ಟು ಎನ್ನುವ ಪದಗಳಿವೆ. ಅವು ಇಂಥವರಿಗೇ ಅನ್ವಯಿಸಬೇಕಾದವು. ಇದು ನಮ್ಮ-ನಿಮ್ಮೆಲ್ಲರ ಹೊಣೆಗಾರಿಕೆಯೂ ಕೂಡ. ದಿನಾಂಕ 8 ಜುಲೈ ರಂದು, ಮತ್ತೆ ಅದೇ Karnataka State Human Rights Comission, BangaloreDeputy Director ರಿಂದ ತುರ್ತು ಕರೆ. ಎನ್ ವಿಜಯನ್ ಎಂಬುವವರು ವೃತ್ತಿಗೆ ರಾಜಿನಾಮೆ ಕೊಟ್ಟ ಹಿನ್ನೆಲೆಯಲ್ಲಿ ಮತ್ತೆ ತೆರವಾದ ಅವಕಾಶ. ದಿನಾಂಕ 09/07 ಸಂದರ್ಶನ, 10/07 ಆಯ್ಕೆ, ಆದೇಶ ಮತ್ತು ವೃತ್ತಿಯ ಮೊದಲ ದಿನದಾರಂಭ. ಪದ್ದಿಗಿರುವ ಖುಷಿ ಇದೆಲ್ಲವು ಘಟಿಸಿದ್ದು ಗುರುವಾರದಂದು. ಈ ಗುರುವಾರವೇ ನಮ್ಮ ಬದುಕಿನ ಪವಾಡ.
   ಮೊದಲು ಅಭಿನಂದನೆ ಹೇಳಿ ಸ್ವಾಗತಿಸಿದವರು ಮೂಲ ಸರನ್‍ಪುರ, ಉತ್ತರ ಪ್ರದೇಶ ನಿವಾಸಿ ಮಧು ಶರ್ಮಾ(IFS, Secretory, Karnataka State Human Rights Comission, Bangalore) ಹಿಂದಿ ಸಾಹಿತ್ಯ ಹಿನ್ನಲೆಯ ಅಪರೂಪದ, ಮಾತೃಕಾರುಣ್ಯದ ಮಹಿಳೆ. ನಂತರದವರು ಹಿರಿಯರಾದ ನಾಗರಾಜ್(PA, Secretory, Karnataka State Human Rights Comission, Bangalore) ಆನಂತರದವರು, ನಿರ್ದೇಶಕಿ ಶ್ರೀಮತಿ ಮೀರಾ ಸಕ್ಸೇನಾ (IAS, Director and Chairman of Karnataka State Human Rights Comission, Bangalore) ಅಷ್ಟೇ ತೂಕದ ಮಹಿಳೆ. ತದನಂತರ ಆಶೀರ್ವದಿಸಿದವರು ಸಂಬರಗಿ, ಶೀಲಾ ಗಣಪತಿ ಭಟ್ಟ, ಆನಂದ ರಾವ್, ಭಾರ್ಕೆಕರ್, ಮಾಲತಿ ಹಾಗೂ ಇತರರು. ಸಂದೇಶಿಸಿದವರು ಡಾ.ಐ.ಎಂ.ಮೋಹನ, ಶ್ರೀ. ಬಿ.ಎಸ್.ದೇಸಾಯಿ, ಧರಣೇಂದ್ರ ಕುರುಕುರೆ, ತಾರಾ, ಜಯಣ್ಣ, ಸತೀಶ, ಹೆತ್ತವರು, ಬಂಧು-ಬಳಗ ಹಾಗೂ ಚಂಪಾ. ಹೀಗೆ ಐವತ್ತರ ಆಸುಪಾಸಿನ ಹಿರಿಯರೆಲ್ಲ ಸೇರಿ ಮಿತಭಾಷಿಯಾದ ನನ್ನ ಪದ್ದಿಯನ್ನು ಅಭಿನಂದಿಸುವಾಗ ನಾಚಿಕೆಯಿಂದ ಕೆನ್ನೆ ಕೆಂಪಾಗಿ, ಕಣ್ಣ ಬಟ್ಟಲು ಕಣ್ಣೀರು ಕಡಲಾಗಿ, ಯಾರನ್ನೋ ಸ್ಮರಿಸಿಕೊಂಡಳು. ಆದೇಶ ಪತ್ರವನ್ನು ನನಗೆ ತೋರಿಸಿ, ಕಛೇರಿಯ, ಅಲ್ಲಲ್ಲ ನೆನಪಿನ ಗೂಡು ಸೇರಿದಳು.
     ಅಂದಿನಿಂದ ಅದ್ಯಾವ ಜನ್ಮದ ಋಣವೊ, ನಟಿ ಪದ್ಮಾ ಉಡುಪರ ರಾಜಾಜಿನಗರದ ಮನೆ ನಮ್ಮ ಮನೆಯಾಯಿತು. ಈಗ ಪ್ರಶ್ನೆ ಮಕ್ಕಳದ್ದು. ವರ್ಷಕ್ಕೊಂದು ಊರು, ಶಾಲೆ ಎಂದು ಒದ್ದಾಡಿದ್ದ ಇವುಗಳೀಗ ಈ ಸಾರಿ ಮಾತ್ರ ಎಲ್ಲಿಯೂ ಬೇಡ ಎಂದು ಎಷ್ಟೆಲ್ಲ ತಯಾರಿ ಮಾಡಿಕೊಂಡಿದ್ದ ಘಳಿಗೆಯಲ್ಲಿಯೇ ಹೀಗಾಯಿತಲ್ಲ ಎಂದು ಚಿಂತಿಸುವಾಗ, ಇಡಿಯಾಗಿ ಅವರನ್ನು ದತ್ತು ತೆಗೆದುಕೊಳ್ಳಲು ಮುಂದಾದವರು ಇಬ್ಬರು ತಾಯಂದಿರು. ಅವರಲ್ಲಿ ಒಬ್ಬಳಂತೂ ದೊಡ್ಡ P.W.D ಇಂಜಿನೀಯರರ ಹೆಂಡತಿ. ಸರಿ, ಹಡೆದವ್ವನನ್ನು ನೋಡಿದ್ದ, ಪಡೆದವ್ವಳ ಎಂಟು ವರ್ಷದ ಅಪಾರ ಮಮತೆ ಅನುಭವಿಸಿದ್ದ, ಈ ಮಕ್ಕಳಿಗೀಗ ಇಬ್ಬರು ಜಗದವ್ವಗಳ ಆಸರೆ.
           ಹದಿನಾಲ್ಕು ವರ್ಷಗಳ ಹಿಂದೆ, ಬರೀ ವಿಶಾಲವಾದ ನನ್ನೆದೆಯ ಪ್ರೀತಿಯನ್ನು ನಂಬಿ, ನನ್ನ ಬದುಕೆಂಬ ಖಾಲಿ ಕಡಲಿನಲ್ಲಿ ತನ್ನ ಬಾಳಿನ ಪುಟ್ಟ ದೋಣಿಯನ್ನು ನಂಬಿಕೆಯಿಂದ ತೇಲಿ ಬಿಟ್ಟ ಪದ್ದಿ ಎಂಬ ಈ ಜೀವ, ಅನುಭವಿಸಿದ್ದು ಅಷ್ಟಿಷ್ಟಲ್ಲ. ಈಕೆ ಎಂದೂ ಪ್ರತ್ಯುತ್ತರವಾಡಲಿಲ್ಲ, ಬಿರುನುಡಿಯಲಿಲ್ಲ, ಕನಸಿನಲ್ಲಿಯೂ ಹೊಲಸಿಗೆ ಬಾಯಿ ಹಾಕಲಿಲ್ಲ, ಇವಳ ಮೌನಕ್ಕೆ ಸೋತ ನಾನು ಕಂಡ ದೇವರಿಗೆ ಕೈ ಮುಗಿದಾಗಲೆಲ್ಲ ಇವಳಿಗಾಗಿಯೂ ಒಂದು ಅವಕಾಶಕ್ಕಾಗಿ ಕೋರಿಕೊಳ್ಳದೇ ಇರಲಿಲ್ಲ. ಇವಳ ಕುರಿತು ಬರೆದಷ್ಟು ಕವಿತೆಗಳನ್ನು ದೇವರ ಕುರಿತೂ ಬರೆಯಲಿಲ್ಲ. ಕರೆದಲ್ಲಿ ಬಂದು ನಾನು ಕೈ ಹಿಡಿದವರನ್ನೆಲ್ಲ ಒಡಹುಟ್ಟಿದವರಂತೆ ತಬ್ಬಿ, ತನ್ನಿಂದ ಸಾಧ್ಯವಾದುದನ್ನು ನೀಡಿ, ನಿರ್ಮೋಹಿಯಾದವಳು. ಹೋದಲೆಲ್ಲ ಕಸ ಗುಡಿಸಿ, ಹೂ-ಗಿಡ ನೆಟ್ಟು, ಪ್ರಾರ್ಥನೆ-ಪೂಜೆಗಳನ್ನು ಮಾಡಿ ಗೂಡುಗಳನ್ನು ಗುಡಿಗಳಾಗಿಸಿದವಳು. ಖಂಡಿತ, ಇವಳ ಬಾಳೆನ್ನುವುದು ಹಲವರು ಸುರಿದ ಭಿಕ್ಷೆ, ಅಷ್ಟೆ ಸತ್ಯ ಆ ಭಿಕ್ಷೆಯಿಂದ ಅವಳು ಅವರಿಗೆ ನೀಡಿದ ನೆಮ್ಮದಿಯ, ಮರ್ಯಾದೆಯ, ಮೈ-ಮಾನದ ಅನ್ನ.

      ಹರಿದ ಹಾದಿಯ 14 ವರ್ಷಗಳ ಹೀಗೆ ನೆನೆದು ಬೆಂಗಳೂರೆಂಬ ಬೆಂಗಳೂರಿನಲ್ಲಿ, ಅವಳ ಬಿಟ್ಟು ಬರುವಾಗ ಕಣ್ತುಂಬ ನಿದ್ರೆ ಇತ್ತು, ಮನದ ಮೂಲೆಯಲ್ಲಿ ಸುತ್ತುತ್ತಿತ್ತು-

ಫಿರ್ ಚಲಾ ಕಬೀರಾ ಲುಕಾಟೆ ಹಾಥ್



No comments:

Post a Comment