Total Pageviews

Wednesday, July 15, 2015

ಸಾವಿನಿಂದ ಸಂತನಾಗುವುದಿಲ್ಲ

she was an art herself, shared my art
she shared body in the journey of spirit
her modesty had been revealed page by page
she accompanied me in every crease of the bed
in a way, I was a fire worshipper
she experienced every angle of my garden
she insist on separation now
even my vows of love did not have such intensity
this new found comfort in our shared unfaithfulness
eludes the hearts life-blood and the blossoming color of Henna
ಕಸದಲ್ಲಿಯೂ ಕಾವ್ಯ ಅರಳುತ್ತದೆ, ಕಾಣುವ ಕಣ್ಣಗಳು ಬೇಕಷ್ಟೇ ಎನ್ನುವುದಕ್ಕೆ ಸಾಕ್ಷಿ, ಮೇಲಿನ ಸಾಲುಗಳು. ಕಾಲೇಜಿನ ನನ್ನ ಬ್ಯಾಗಿನಲ್ಲಿ ಕೈಯ್ಯಾಡಿಸುವಾಗ ಸಿಕ್ಕ ಒಂದು ಪಧ್ಯ. ಲೇಖಕ ಗೊತ್ತಿಲ್ಲ. ಬಹುತೇಕ ಅವಶ್ಯಕತೆಯೂ ಇಲ್ಲ. ಸುಗಂಧವನ್ನು ಗ್ರಹಿಸುವಾಗ ಮೂಗಿಗೊಂದು ಮಾಪನದ ಅವಷ್ಯಕತೆ ಇದೆಯೇ?
ನನಗೆ ಇಷ್ಟವಾಗಿದೆ. ನನ್ನ ಕಷ್ಟಗಳೋ ಅಥವಾ ಕವಿಯ ನಷ್ಟವೋ ನಿಮ್ಮದಾದರೆ ನಿಮಗೂ ಇಷ್ಟವಾಗುತ್ತದೆ.

   ಸಾಲುಗಳನ್ನು ಗುನುಗುನಿಸುತ್ತಾ ನಾನು ಬಷೀರ್ ಭದ್ರನನ್ನು ಕೈಗೆತ್ತಿಕೊಂಡೆ. ಆತ ಒಂದೆಡೆ ಬರೆಯುತ್ತಾನೆ-
ವಕ್ತ ಗುಜರತೆ ಹೈಂ ಬಲೇ
ಮುಝೇ ಮಾಲೂಮ್ ನಹೀಂ
ಹಮ್ ಕಹಾ ಫಲೇ
ಬೇ ಅಬರೂ ಜೌರ್ ನಫರತ್ ಕೀ ತಲೇ
ಚಲೇ ಚಲೇ ಹಮ್ ಚಲೇ ತೆ
ಬೆಹಾಲ್ ಚಲೇ ತೆ.
      ಈ ಬೆಹಾಲ್ ಒಂದು ಸುಂದರ ಮೊಹಾವರಾ. ಆದರೆ ಅದು ಬೇ ಹಯಾ ಅಲ್ಲ. ಅದರರ್ಥ ಬೇಜವಾಬ್ದಾರಿಯೂ ಅಲ್ಲ. ನನ್ನ ನೋವಿನ ಅರಿವನ್ನೂ ನನ್ನ ಹೃದಯಕ್ಕೆ ತಂದು ಘಾಸಿಗೊಳಿಸಿಕೊಳ್ಳದಂತೆ ಬದುಕಿನಿಂದ ಎದ್ದು ಹೊರಟುಬಿಡುವುದು. ಇದು ಬುದ್ಧನ ನಿರ್ಗಮನವಲ್ಲ, ಬದಲಾಗಿ ಗಾಯದೊಂದಿಗೆ ಮುಖಾ ಮುಖಿಯಾದ ಕೃಷ್ಣನ ಕೊನೆ. ಬೇಹಾಲ್ ಎನ್ನುವುದು ಉಮರ್ ಮತ್ತು ಗಾಲಿಬ್ ಸಂಕಟ. ಬಹಳ ದೂರ ಹೋಗುವುದು ಬೇಡ, ಯಾಕೆಂದರೆ ನಾನು ನಿಮ್ಮನ್ನು ಕವಿಯೊಬ್ಬನ ಕೈ ಹಿಡಿದು ಮುಧುಶಾಲೆಗೆ ಕರೆದೊಯ್ಯಬೇಕಿದೆ. ಪೀಠಿಕೆಯನ್ನು ಹಾಕಿದೆ, ಕಾರಣವಿಷ್ಟೆ ನನ್ನ ಸಾಕಿಯೊಬ್ಬಳು ಹೇಳುತ್ತಿದ್ದಳು ಉಮರ್ ಹೆಂಡದಂಗಡಿಗೆ ಹೋಗಿ ಕಗ್ಗ ಕೇಳಬಾರದು. ಅದೊಂದು ರೀತಿ ಸೊಂಟವಿಲ್ಲದ ಹೆಂಗಸಿಗೆ ಘಂಟೆಯಿಲ್ಲದ ಗಂಡಸು ಹಂಬಲಿಸಿದಂತೆ.
ಎನ್ ಪ್ರಹ್ಲಾದರವರ ಒಂದು ಕವಿತೆ-
ಒಲುಮೆ ಬೀರು
ಲೋಕ ಬಾರು
ಬಾಳೇ ಒಂದು ಕ್ಯಾಬರೆ.
ಇಂಥ ಕಾವ್ಯ ಕನ್ನಡದಲ್ಲಿ ಅಪರೂಪಕ್ಕೊಮ್ಮೆ ಘಟಿಸಿದೆ.
    2000ದಿಂದ 2001 ರವರೆಗೆ ನಾನು ಗುಳೇದ ಗುಡ್ಡದಲ್ಲಿದ್ದೆ. ಅವು ನನ್ನ ಪ್ರೇಮದ ಭರಪೂರ್ ದಿನಗಳು. ಬೆಳಗಾದರೆ 10 ರೂಪಾಯಿಯಲ್ಲಿ ಹೊಟ್ಟೆತುಬಾ ತಿಂಡಿ, ದಿನವಿಡೀ ಕನಸು ಗಣ್ಣಿನ ವಿಧ್ಯಾರ್ಥಿಗಳ ಮುಂದೆ ಇಂಗ್ಲೀಷ್ ಕಥೆ-ಕಾವ್ಯದ ನೃತ್ಯ. ದೇವಾಲಯದಲ್ಲಿ ಘಂಟೆ ಬಾರಿಸಿದಂತೆ, ಸಂಜೆಯಾಗುತ್ತಲೇ ಮನೆ ದೀಪ ಹಚ್ಚಿದಮತೆ ಬರುತ್ತಿದ್ದ ನನ್ನ ಪದ್ದಿಯ ಫೋನ್ಗಳು, ಇದರ ಮಧ್ಯೆ ಕುಡಿದ ಖಾಲಿ ಬಾಟಲ್ ಸದ್ದಿನ ಒಬ್ಬ ಕವಿ, ಹೆಸರು ಮಹಾದೇವ ಕಣವಿ
     ಅವರ 3 ಕವಿತಾ ಸಂಕಲನಗಳು ಮುಟ್ಟಲು ಮುರುಕಿ, ಕಲ್ಕಿ ಮತ್ತು ತಾಯಿ ಬೇರುಗಳೆಲ್ಲವೂ ಅದ್ಭುತವಾದವು ಎಂದು ಹೇಳಿದರೆ ಆತ್ಮವಂಚನೆ ಮಾಡಿಕೊಂಡಂತೆ. ಆದರೆ ಅವರ ಧೋಭಿಕಾ ಕುತ್ತಾ, ಕಿಳ್ಳಿಕ್ಯಾತರ ಗೊಂಬೆ, ಭ್ರಮೆ, ಏಸು, ಗೋರಿಗಳ ನಡುವೆ, ನಮ್ಮ ಕವಿತೆ, ಸಾಂದ್ರತೆ, ವಿಶ್ವವಿದ್ಯಾಲಯ, ಸಂಭವಕ್ಕ ಕೊಟ್ಟದ್ದು ಇವುಗಳನ್ನು ನೀವು ಓದದೇ ಹೋದರೆ ಖಂಡಿತವಾಗಿಯೂ ನೀವು ಏನನ್ನೋ ಕಳೆದುಕೊಂಡಂತೆ.
     ಭಂಡಾರಿ ಕಾಲೇಜಿನಲ್ಲಿ ನನ್ನೊಂದಿಗಿದ್ದ ಕವಿ ಕಣವಿ, ತೀರಿ ಹೋಗಿ ಈಗ 8 ವರ್ಷವಾಗಿದೆ. ತಾನೊಬ್ಬ ನಿರುಪದ್ರವಿ ಕುಡುಕ ಎಂದು ಘೋಷಿಸಿಕೊಂಡ ಕವಿ, ಸಾವಿನಿಂದ ಸಂತನಾಗುವುದಿಲ್ಲ. ಬದಲಾಗಿ ಸಂಭ್ರಮದ ವ್ಯಕ್ತಿಯಾಗುತ್ತಾರೆ. ಶೆರೆಯನ್ನು ಕುಡಿದಷ್ಟೇ ತೀವ್ರವಾಗಿ ಕಣವಿ ಕಾವ್ಯವನ್ನೂ ಕುಡಿದರು. ಮಗಳಿಗೆ ಮಗನಾಗಿ ಕಾಡಿದರು, ಉತ್ತರ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಜಗಳದ ಜೋಗುಳ ಹಾಡಿದರು. ವ್ಯಸನದಿಂದ ಪ್ರಾಪ್ತಿಯಾದ ಅವರ ಬದುಕಿನ ಅಂತ್ಯಕ್ಕೆ ಅವರಿಗೆ ನಮ್ಮ ಸಂತಾಪವೇನೂ ಬೇಕಿಲ್ಲ. ಆದರೆ ಅವರೊಂದಿಗೆ ಸಾಯಬಾರದಾದ ಅವರ ಸಾಹಿತ್ಯಕ್ಕೆ ನಮ್ಮ ಸಹೃದಯತೆ ಬೇಕಿದೆ.
    ಬಾದಾಮಿಯ ವಿಶ್ವಚೇತನ ವೇದಿಕೆ 12-7-2015ರಂದು ಕಣವಿ ಕುರಿತಾಗಿಯೇ ಅಂತರಂಗ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಸಹೃದಯತೆಯನ್ನು ಮೆರೆದಿದ್ದಾರೆ. ತಮ್ಮ ಹೃದಯ ಸಂಸ್ಕಾರವನ್ನು ಸಾಹಿತ್ಯದೊಂದಿಗೆ ಬೆರೆಸಿ ಸಾರ್ವಕಾಲಿಕವಾಗಿದ್ದಾರೆ. ಮರೆತು ಹೋಗಬಹುದಾದ ಕವಿಯೊಬ್ಬನನ್ನು ಮರೆಯದ ಹಾಡಾಗಿಸಿದ್ದಾರೆ
    ಹಾಡು ಕೇಳಲು ನಾನಿದ್ದೆ, ನನ್ನೊಂದಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಮುಕ್ತ ವಿಶ್ವವಿದ್ಯಾಲದ ನಿರ್ದೇಶಕ ಗೆಳಯ ಪ್ರಶಾಂತ್ ನಾಯಕ್, ಹಂಪಿ ವಿಶ್ವ ವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ವೀರೇಶ್ ಬಡಿಗೇರ್ ಹಾಗೂ ಕಣವಿಯ ಗೆಳೆಯ ಮಲ್ಲಿಕಾರ್ಜುನ್ ಬನ್ನಿ ಇದ್ದರು. ಹಾಡು ಕೇಳಲು ಬಾದಾಮಿಯ ಜನತೆ ಸಾಕ್ಷಿಯಾಗಿದ್ದರು.

No comments:

Post a Comment