Total Pageviews

Tuesday, August 18, 2015

ಉರಿಯ ಮುಂದೆ ದೀಪದ ಪ್ರಶ್ನೆ



       ಕಳೆದ ಒಂದು ವರ್ಷದಿಂದ ನಾನು ಮತ್ತೆ ಮತ್ತೆ ಸಂದರ್ಶಿಸಿದ ಜಿಲ್ಲೆ ಬಾಗಲಕೋಟೆ. ಪುಸ್ತಕ ಬಿಡುಗಡೆ, ಉಪನ್ಯಾಸ, ಸಮ್ಮೇಳನ, ಗೋಷ್ಠಿ ಹೀಗೆ ಏನೇನೊ ಅಂದುಕೊಂಡು ಇಲ್ಲಿ ಸುತ್ತುತ್ತಲೇ ಇದ್ದೇನೆ. ಸಂಸ್ಕøತಿಯಿಂದ ಸಮೃದ್ಧವಾದ ಈ ನೆಲದಲ್ಲಿ ಈ ಪ್ರವಾಸ ಅರ್ಥಹೀನ ಎನ್ನಿಸಿಲ್ಲ ನನಗೆ. ಈಗ ಮತ್ತೊಮ್ಮೆ ಬಂದಿದ್ದೇನೆ, ತಂದು ನಿಲ್ಲಿಸಿದವರು ಕವಿ ಗೆಳೆಯ ಉಮೇಶ ತಿಮ್ಮಾಪುರ. ಸ್ಥಳ: ಸಕ್ರೀ ಕಾಲೇಜು, ಉದ್ದೇಶ: ವಾರ್ಷಿಕ ಕ್ರಿಡಾ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ.
       ಇಡೀ ಉತ್ತರ ಕರ್ನಾಟಕದ ಶೈಕ್ಷಣಿಕತೊಟ್ಟಿಲು ಅಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಗಳು, ನೂರಾರು ವರ್ಷಗಳ ಇತಿಹಾಸವಿರುವ ಈ ಸಂಸ್ಥೆಗಳು ಬಹುಪಾಲು ಮಠಗಳಿಂದ ಪೋಷಿತ, ಶಿಕ್ಷಣವನ್ನೂ ದಾಸೋಹದ, ದಾನದ ನೆಲೆಯಲಲಿ ನೋಡಿ ಮನುಷ್ಯನ ನೆತ್ತಿಗೊಂದು ಬುತ್ತಿ ಕಟ್ಟಿಕೊಟ್ಟರು, ಅಂತಹ ಸಂಸ್ಥೆಗಳಲ್ಲಿ ಒಂದು ಸಕ್ರಿ ಶಿಕ್ಷಣ ಸಂಸ್ಥೆ ಬಾಗಲಕೋಟೆ. ಸುಮಾರು ಎಂಬತ್ತು ವರ್ಷಗಳಷ್ಟು ಹಳೆಯದಾದ ಈ ಸಂಸ್ಥೆಯಲ್ಲಿ, ಸಾವಿರದ ಸಂಖ್ಯೆಯಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳೂ ಇದ್ದಾರೆ.
     ಗೆಳೆಯ ಉಮೇಶ ತಿಮ್ಮಾಪುರರ “ನೀನೆಂದರೆ” ಕಾವ್ಯದಿಂದಲೇ ಭಾಷಣವನ್ನು ಪ್ರಾರಂಭಿಸಿಕೊಂಡ ನನಗೆ ಮುಖ್ಯವಾಗಿ ಹೇಲಬೇಕಾದ ಬಂಜೆತನ ಕುರಿತು, ಬರಿದಾಗುತ್ತಿರುವ ಕುರಿತು, ಈ ವರ್ಷ ಮಳೆ ಹಿಂದೆಂದಿಗಿಂತಲೂ ಕಡಿಮೆಯಾಗಿದೆ. ಬರವಿಟ್ಟಿದೆ ಭೂಮಿ. ಹಳ್ಳ-ಕೊಳ್ಳ ಕೆರೆ-ಕಟ್ಟೆಗಳೆಲ್ಲ ಬರಿದಾಗಿವೆ. ಅಂತರ್ಜಲ ಬತ್ತು ಭೂಮಿಯ ಒಡಲೂ ಬರಿದೋ ಬರಿದು. ಸಿಕ್ಕಸಿಕ್ಕಲ್ಲಿ ಕೊಳವೆ ಕೊರೆದು ಕೊರೆದು  ಭೂಮಿ ಎನ್ನುವುದು ಇಂಜಕ್ಷನ್‍ನಿಂದ ಬಳಲಿದ ಬಾಣಂತಿಯಂತಾಗಿದ್ದಾಳೆ.
     ಗೊಬ್ಬರ, ಕೀಟನಾಶಕಗಳ ಬಳಸಿ ಬಳಸಿ ನೆಲದಾಯಿಯ ನೆಚ್ಚಿಗೆಯನ್ನೆಲ್ಲ ಆಚೆ ಹಿರಿದೊಗೆದಿದ್ದೇವೆ. ಈಗ ಕುಡಿಯಲು ನೀರಿಲ್ಲ. ಮೂವತ್ತು ರೂಪಾಯಿ ನೀಡಿದರೂ ದನಗಳಿಗೆ ತಿನ್ನಲು ಹಿಡಿ ಮೇವು ಸಿಗುವುದಿಲ್ಲ. ಫ್ಯಾಕ್ಟರಿಗಳ ಕಾಸಿನ ಕಾರ್ಬನ್ನಿನಲ್ಲಿ ಉಸಿರುಗಟ್ಟಿಸಿಕೊಂಡ ರೈತ, ದುಂದಿನ ಬೆಳೆ ಬೆಳೆದು, ಮಾರುಕಟ್ಟೆ ನೆಲಕಚ್ಚಿದಾಗ ನೆಮ್ಮದಿಯಿಂದ ನೇಣು ಹಾಕಿಕೊಳ್ಳಲು ಕೂಡ ಆತನ ಹೊಲದಲ್ಲಿ ಒಂದು ಮರವಿಲ್ಲ. 
       ಹೀಗಾಗಿ ಮತ್ತೆ ಸಾಲ, ಸಾಲದಲ್ಲಿಯೇ ಕುಡಿತ, ಆನಂತರ ಕೊನೆಯುಸಿರು. ಉರಿ ಉರಿಯುವ ಊರುಗಳಲ್ಲಿ ಬದುಕಿನ ದೀಪ ಹಚ್ಚಿಕೊಳ್ಳುವುದು ಕಷ್ಟವೆನ್ನಿಸುತ್ತಿದೆ. ಇದೊಂದು ಸಂದಿಗ್ಧ.
      ಈ ಸಂದಿಗ್ಧ ನಮ್ಮ ಶಿಕ್ಷಣದ ಸಮಸ್ಯೆಯೂ ಕೂಡ. ತಾಂತ್ರಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಮಾರುಕಟ್ಟೆಯಾಧಾರಿತ ಶಿಕ್ಷಣ, ನಮ್ಮ ಸಂಸ್ಕøತಿಯಲ್ಲಿಯ ನಮ್ಮ ಬೇರುಗಳನ್ನೇ ಸಡಿಲುಗೊಳಿಸಿತು. ಯುವಕರಿಗೆ ಎಲ್ಲವೂ ವಿರೋಧಾಭಾಸ. ಮೊಬೈಲ್ ತೋರಿಸುವ ಲೋಕಕ್ಕೂ, ಮನೆ ಹೇಳುವ ಪಾಠಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಮುಂದೆ ಹೋದಷ್ಟೂ ಹಿಂದಿನ ಅನಂತ ಕಾಡುತ್ತದೆ. ಹಿಂದೆ ನೋಡಿದಷ್ಟೂ ಮುಂದಿನ ಪ್ರಪಂಚಕ್ಕೆ ನಾವು ಹೊಂದಾಣಿಕೆಯಾಗುವುದು ಹೇಗೆ? ಎನ್ನುವ ಪ್ರಶ್ನೆ ಕಾಡುತ್ತದೆ. ಉತ್ತರ ಸಿಗುತ್ತಿಲ್ಲ. ಯಾಕೆಂದರೆ ಪ್ರಶ್ನೆಯೇ ಇನ್ನೂ ತಾರಕವನ್ನು ಮುಟ್ಟಿಲ್ಲ. ಇದು ನನ್ನ ಅಭಿಪ್ರಾಯ. ನಿಮ್ಮದು ಭಿನ್ನವಾಗಿದ್ದರೆ ಪ್ರಜಾಪ್ರಭುತ್ವ ಬದುಕಿದೆ ಎನ್ನುತ್ತೇನೆ. ನೀವೂ ನನ್ನೊಂದಿಗಿದ್ದರೆ ಸಮತಾವಾದವನ್ನು ಒಪ್ಪಿಕೊಂಡಿದ್ದೇವೆ ಎಂದುಕೊಳ್ಳೋಣ ಅಲ್ಲವೆ?

No comments:

Post a Comment