Total Pageviews

Thursday, January 7, 2016

ಈಗ ದ್ವಾಪರ ಯುಗ



1
ಹುಟ್ಟು ಹಬ್ಬದ ಹಿಂದಿನ ರಾತ್ರಿ
ಆಕಾಶದ ಗುಡುಗಿನ ಪರಿಗೆ
ಅರಿವಾಗಿತ್ತು ಜಾಜಿಗೆ ಜೋಗಿ ಬರುತ್ತಾನೆ
ಜಂಗಮಯ್ಯ ಬರುತ್ತಾನೆ ಬಿಕ್ಷೆಗೆ
ಭವ ಭವಗಳ ಭಾವದ ಧೂಳು ಬರಿಗಾಲಲ್ಲಿ
ಬರುತ್ತಾನೆ ಬೈರಾಗಿ ಎಂದು

2
ಬಾಯ್ತೆರೆದರೆ ಶಾಪ, ಕಣ್ತುಂಬ ಕೋಪ
ಆತನ ನಿಲುವೋ ಬರೀ ವಿಕೋಪ
ಬೂದಿ ಮೆತ್ತಿದ ಬತ್ತಲೆ ಮಗ
ನೆತ್ತಿಯಲ್ಲೆ ಹೊಡೆಯುತ್ತಾನೆ ಗತ ಗತಗಳ
ಚಿತ್ತ ತೊಯ್ಯುವ ಹಾಗೆ
ಈತನ ಉಸಿರುಸಿರಿಗೂ
ಸ್ಮಶಾನದ ರುದ್ರನರ್ತನ
ಇಂಥವನ ಬೊಗಸೆ-ಬಾಯಿಗೊಂದಿಷ್ಟು
ಅನ್ನ ಹಾಕುತ್ತೇನಲ್ಲ ಧನ್ಯವಾಯಿತು ಬದುಕು
ಹುಟ್ಟುಹಬ್ಬದ ಈ ದಿನವೂ ಪಾವನ
ಎಂದು ಹೂವಾಗುತ್ತಾಳೆ ಜಾಜಿ
3
ಮುಂಗೋಳಿ ಇನ್ನೂ ಮಲಗಿತ್ತು
ಜಾಜಿಯ ಎದೆಯಲ್ಲಿ ಬೆಳಕಾಗಿತ್ತು
ಮಂಗಳದ ಗಾನ ಎಲ್ಲೋ ದೂರದಿಂದ
ಸಿಡಿಲು ಸನ್ಯಾಸಿಯ ನೆನಪಾಗಿ
ಸಟ್ಟನೆದ್ದು ಹಿತ್ತಲೊಲೆಗೆ ಬೆಂಕಿ ಹಾಕಿ
ಪಾಪದ ಕನಸುಗಳ, ಮೈ-ಮುಖಗಳ ಆಚೆ ನೂಕಿ
ಅಂಗದ ರಂದ್ರ ರಂದ್ರಕ್ಕೂ ಎಣ್ಣೆ ಹಾಕಿ
ಮೆದುವಾಗಿ ರೋಮ ರೋಮವೂ ಸೋಕಿ
ಮೈ ತೊಳೆದುಕೊಳ್ಳುತ್ತಾಳೆ ಜಾಜಿ
ಹೂ ಕಿಳುತ್ತಾ ಪುಣ್ಯದ ಲೆಕ್ಕ ಹಾಕುತ್ತಾಳೆ
ಆತನ ಅಂಗಾಲದ ಗೆರೆ ಗೆರೆಗೂ
ಮಕರಂದದ ಮದರಂಗಿ ತೀಡುತ್ತೇನೆಂದುಕೊಳ್ಳುತ್ತಾಳೆ
ರಂಗೋಲಿಯ ರಂಗನೆರೆದು ರಾಧೆಯಾಗುತ್ತಾಳೆ
ಕೃಷ್ಣನಲ್ಲದ ಕಡು ಕೋಪಿಗೆ

4
ಮಾಡಿಟ್ಟ ಅಡಿಗೆಯ ಮೇಲೆ ಕೆನೆ ಬರುತ್ತದೆ
ಹಂಗಿಗೆ ಹಸಿದವರೆಲ್ಲ ಉಂಡು ಹೋಗುತ್ತಾರೆ
ಸಂಗಾತಿಗಳೆಲ್ಲ ಸೇರಿ ಹುಟ್ಟಿನ ಹಾಡು ಹಾಡಿ
ಸಾವಿನ ಚುಕ್ಕೆ ಇಟ್ಟು ಹೋಗುತ್ತಾರೆ ಕಾಣಿಕೆ ಕೊಟ್ಟು
ಜಾಜಿಗೂ ಕ್ಷಣದ ಸಂಭ್ರಮ
ಎಂಥ ಮರೆವಾಗಿತ್ತು ಆಕೆಗೆ
ಎಲ್ಲ ತೊಟ್ಟು ತಣಿಯಲೆತ್ನಿಸುತ್ತಾಳೆ ಜಾಜಿ
ತನುವಿನೊಳಗಿನ ಬೆಂಕಿ ನಂದುವುದಿಲ್ಲ
ಸಾಲು ಸಾಲು ಬಟ್ಟೆಗಳಲ್ಲಿ ಬತ್ತಲೆ ಬತ್ತಿ ಹೋಗುವುದಿಲ್ಲ
ಹರಕೆಯ ಯಾವ ಕೈಯೂ ತಣ್ಣಗಾಗಿಸುವುದಿಲ್ಲ ನೆತ್ತಿಯ
ಹಸಿಯಾದ ಎದೆಗೆ ನೀರಾಡುವ ನಾಲಿಗೆಗೆ
ಹೋಗಿದ್ದಾರೆ ಎಲ್ಲರೂ ಸಿಹಿಯ ಮೆತ್ತಿ ಮೆತ್ತಿ

5
ಹೊತ್ತು ಜಾರಿ ಸೂರ್ಯ ನೆತ್ತಿಗೆ ಬಂದ
ಸುಳ್ಳಾಗಿತ್ತೆ ನಿನ್ನೆ ಕಂಡ ಜೋಗಿಯ ಕನಸು?
ಆತ ಈಗ ಬರೀ ಕನಸ ಕಂದೀಲೆ?
ಮತ್ತೆ ಹುಳು ಹತ್ತಿ ಜಾಜಿಯ ಚಿತ್ತ ಕೆಟ್ಟಿತು
ನಿದ್ರೆ ಹುಟ್ಟಿತು ಕಾಯ್ದ ಜೀವ ಸೋತು ಸುಣ್ಣಾಗಿ
ಕಣ್ಣೀರಾಯಿತು ಹೆಣ್ಣು ಎದೆಯೂ ಹಣ್ಣಾಗಿ
ಆಸೆ ತಣ್ಣಗಾಯಿತು ಮಣ್ಣು ಮಣ್ಣಾಗಿ ನಿದ್ರೆಗೊರಗಿ

6
ಹರೆಹೊತ್ತಿನ ಮಂಪರು
ಈಗ ಕುಳಿತ ನೆಲವೇ ನಡುಗಿದ ಭಾವ ಭಯ
ಗುಡುಗು ಗರ್ಜನೆ ತಣ್ಣನೆಯ ನೆಲವೂ
ನಡುಗುವ ನಡ

7
ನಿದ್ರೆ ಹೊದ್ದ ಕಣ್ಣು ಅರಳಿದರೆ
ಮಹಾ ಮಾಯಾವಿ
ಎದುರು ನಿಂತಿದ್ದಾನೆ ಮುಳ್ಳಾವಿಗೆಯ ಮೇಲೆ
ಸಾಷ್ಟಾಂಗವೆರಗುತ್ತಾಳೆ ಜಾಜಿ ಅವಳೀಗ ಮುತ್ತುಗದ ಮಾಲೆ
ಬೆಂಕಿಗೂ-ಹೂವಿಗೂ ಬಾಗು-ಬೆಸುಗೆಯ ಭಾಷೆ!
ಇದೆಂಥ ಲೀಲೆ?
ಮಣ್ಣು ಮಣ್ಣಾದವನ ಹೀಗೆ ತುಂಬಿಕೊಳ್ಳುವುದು
ಜಾಜಿಯ ಸೋಲೆ?
ಸುಮ್ಮನಿದ್ದ ಹೊರಗೆ ಸನ್ಯಾಸಿ, ಬೆಂಕಿಯಾಗಿದ್ದ ಒಳಗೆ ಹಸಿವೆಗೆ ದೈನೇಸಿ
ಹುಟ್ಟು ಸಾರ್ಥಕವೆನಿಸಿ ಬಳಕಿಸುತ್ತ ಸೊಂಟ
ಭಿಕ್ಷೆ ತರಲು ಒಳಹೋದಳು ನಗುತ್ತ ತುಂಟ

8
ಬಂಗಾರ ಬಾಂಡ ಬೆಳ್ಳಿ ಚಮಚೆ
ಮೈ-ಮೃಷ್ಠಾನ್ನ ಮುಂದೆ ಮಾಡಿದಳು
ಹಿಮಗಿರಿಯ ಒಡಲಿಂದ ಸಿಡಿದ ಕಿಡಿಯೇ
ಬೆಳಕಾಗಲಿ ಬಾಳು ಎಂದು ಹರಸೋ
ಬೇಡಿಕೊಂಡಳು ಜಾಜಿ
ನಿರ್ಭಾವುಕ ಬಿಕನಾಸಿ ಜೋಗಿ
ಬೆಂಕಿಯಾಗಿಯೇ ಇದ್ದ, ಈಗ ಭುಗಿಲೆದ್ದ
 
9
ಜಡೆ ಬಿಚ್ಚಿ ಕಿಡಿಯಾದ
ಶತಮಾನ ಕಾಯ್ದಿತ್ತು ತಾಯೆ ನನ್ನೊಡಲು
ನಿನ್ನ ಬೊಗಸೆ ಭಿಕ್ಷೆಯೇ ನನ್ನ ಇಡೀ ಬದುಕ ಬಯಕೆ ನೀಗಿಸುವ ಕಡಲು
ಅನ್ನ ಕೊಡು ತಾಯಿ, ಎಚ್ಚರವಿರಲಿ
ತುತ್ತು ಅನ್ನಕ್ಕೆ ತೊತ್ತಿನ ಮೊತ್ತವಿರಬಾರದು
ಹುಟ್ಟ ಬಟ್ಟೆಯಲಿ ಹಿಟ್ಟು ಅಟ್ಟು ನೀಡುವ ಹಠವಿಲ್ಲದವಳು
ನಮ್ಮಥವರಿಗೆ ಭಿಕ್ಷೆ ನೀಡುವ ಕನಸು ಕಾಣಬಾರದು
ತುತ್ತಿಗಾಗಿ ತೊಟ್ಟು ಮೆಚ್ಚುವವರಲ್ಲ ನಾವು
ಕೆಟ್ಟದಿಲ್ಲವೋ ಜಗದೊಳಗೆ ಮಗನೆ
ಮೈ ಮಥಿಸ ಬಾ, ಮದಿಸ ಬಾ
ಎಂದ ತಾಯಿಗಳ ಗರಡಿಯಲಿ
ಗರ್ವದ ಗಾಳಿಯಿಂದಲೇ ಬೆಳೆದ ಪವನ ಪುತ್ರರು ನಾವು
ಊಟ ನೀಡವ್ವ ತಾಯಿ ತಾಟಿಲ್ಲದೆ
ಬೆಂಕಿ, ಬಾಂಡ, ಬೀಜಗಳ ತನುವಿಲ್ಲದೆ
ನೆನಪುಗಳ ನಂಜು, ಪಶ್ಚಾತಾಪದ ಕಣ್ಣೀರ ಮಂಜುಗಳ ಹಂಗಿಲ್ಲದೆ
ಮೃಷ್ಠಾನ್ನ ಬೇಡ
ಮುಷ್ಠಿ ಅನ್ನಕ್ಕೆ ಮೃತ್ಯು ಲೇಪನ ಬೇಡ
ಕೈಯೊಡ್ಡಿದ್ದೇನೆ ಕರುಣಿಸವ್ವ

10
ಹಿರಿ ಆಸೆಗಳ ಕಿರಿ ಜೀವ ಜಾಜಿ
ಹಂಚಿಕೊಂಡವಳು ಜಗದ ಸಂತೆಯಲಿ
ಆಸೆಗಳ ಇಂಚು ಇಂಚಾಗಿ
ಒಗಟು ಒಗಟಾದವನ ಒಡಲ ತಳಮಳ
ಅರ್ಥವಾಯಿತೋ? ಎಲ್ಲ ನಿರರ್ಥಕವಾಯಿತೊ?
ಹುಟ್ಟುಹಬ್ಬದ ಹುಟ್ಟಡಗಿಸಿತೊ?
11
ಕಣ್ಣೀರಾದ ಜಾಜಿ
ರೆಪ್ಪೆಯಗಲಿಸಿ ನೋಡುವುದರೊಳಗೆ ಜೋಗಿ ಇಲ್ಲ!
ಆತ ನಿಂತ ನೆಲದಲ್ಲಿ ಮೂಡಿದ ಪಾದಗಳೇ ಈಗ ಎಲ್ಲ

12
ಹತ್ತಿರ ಹೋಗಿ, ಹಿಡಿ ಮಣ್ಣ ಎತ್ತಿದರೆ
ಉಸಿರೇ ಮಲಗಿಸಿದ್ದ ಮಗ
ಈಗವಳ ಕಿಬ್ಬೊಟ್ಟೆಯಲಿ ದ್ವಾರಕೆಯ ಕೊಡ ಉರುಳಿದ ಅನುಭವ
ಕೃಷ್ಣ ಕೊಳಲನ್ನಿಟ್ಟಿದ್ದ ಮಣ್ಣಲ್ಲಿಗ ದ್ವಾಪರ ಯುಗ








No comments:

Post a Comment