Total Pageviews

Wednesday, January 13, 2016

ದೇವರಿಗೆ ವಿಶೇಷಣವಿಲ್ಲ



ಬಹಳ ಬರೆದವನಲ್ಲ ಬಿಲ್ಲಿ ಕಾಲಿನ್ಸ್. ದೊಡ್ಡ ಕವಿಯಂತು ಅಲ್ಲವೇ ಅಲ್ಲ. ಆದರೆ ಕವಿತೆಯೊಂದನ್ನು ಹೇಗೆ ಓದಬೇಕು? ಹೀಗೆ ಓದುವದರಿಂದ ಸಿಗುವ ಸುಖವೇನು? ಎನ್ನುವುದನ್ನು ತನ್ನ ಕವಿತೆಯೊಂದರಲ್ಲಿಯೇ ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾನೆ.
I ask them to take a poem
and hold it up to the light
like a color slide
or press any year against its hive
I say drop a mouse into a poem
and watch him probe his way out
or walk inside the poems room
and feel the walls for a light switch
ನನ್ನಂತೆಯೇ ಆಲೋಚಿಸುವ, ಮಾತನಾಡುವ ಮನಸ್ಸೊಂದು ಸಿಕ್ಕಾಗ ಅದು ನಮಗೆ ಹತ್ತಿರವಾಗಿಬಿಡುತ್ತದೆ. ಆಶ್ಚರ್ಯವೆಂದರೆ ಸಂಪೂರ್ಣ ನಮ್ಮ ವಿರುದ್ಧವಾಗಿ ತಾತ್ವಿಕ ನೆಲೆಯಲ್ಲಿ ಗಟ್ಟಿಯಾದ ಪಾತ್ರ ಸಿಕ್ಕಾಗಲೂ ಅದು ನಮ್ಮ ಗೌರವಕ್ಕೆ ಪಾತ್ರವಾಗುತ್ತದೆ. ನನಗೆ ಹೀಗೆಯೇ ದಕ್ಕಿದವನು ಈ ಬಿಲ್ಲಿ ಕಾಲಿನ್ಸ್. ಈ ಮಾಗಿಯ ಚಳಿಯಲ್ಲಿ ಕವಿತೆ ಕುರಿತಾದ ಅವನ ಮಾತು ಮುದ ನೀಡುತ್ತಿವೆ.
ಅಂದಹಾಗೆ, ಬೆಂಗಳೂರಿನಲ್ಲೀಗ ವಿಪರೀತ ಚಳಿ. ಒಂದು ಕ್ಷಣ ನಮ್ಮ ಬೇಲೂರು-ಸಕಲೇಶಪುರಗಳ ಚಳಿಯನ್ನೂ ಮೀರಿಸುತ್ತದೆ ಎನ್ನಿಸುತ್ತದೆ. ಈ ಚಳಿ ನನಗೆ ಇಷ್ಟವೆ. ಹಾಗೆ ನೋಡಿದರೆ ಈ ಚಳಿ, ಚಳಿ ಮುದಗೊಳಿಸುವ ಶೆರೆ, ಸ್ನೇಹ, ಸಾಹಿತ್ಯ, ಸಂಗೀತ ಮತ್ತು ಮೌನಗಳು ನನಗೆಂದೂ ಭಾರವಾಗಿಲ್ಲ. ವರ್ಷವೆಲ್ಲವೂ ಚಳಿಗಾಲವೇ ಆಗಿದ್ದರೆ ಎಂಥ ಚಂದ ಅಂದುಕೊಳ್ಳುವುದರಲ್ಲಿ ಬಾಲ್ಯದಲ್ಲಿ ಓದಿದ ‘ಅಣು ಚಳಿಗಾಲ ಅಡಗಲು ಸ್ಥಳವೆಲ್ಲಿ?’ ಎನ್ನುವ ವೈಜ್ಞಾನಿಕ ಲೇಖನ ನೆನಪಾಗುತ್ತದೆ. ನಾಗೇಶ ಹೆಗಡೆ ಬರೆದ ಈ ಲೇಖನ ಓದುವಾಗ ಒಂದು ಕ್ಷಣ ನನ್ನೂರು ಚಡಚಣ ಮೃತ್ಯು ತೆಕ್ಕೆಗೆ ಬಿದ್ದು ನಾನೊಬ್ಬನೆ ಜೀವಂತವಾಗಿದ್ದು ಬೆಂಕಿ ಪೊಟ್ಟಣಕ್ಕೆ ತಡಕಾಡಿದ ಕನಸು ಬಿದ್ದಿತ್ತು.
ಮಲೆನಾಡ ಚಳಿಗೆ ಮೂರು ದಿನ ಮೈಯೊಡ್ಡಿ ಬೆಂಗಳೂರಿಗೆ ಬಂದರೆ ಈ ಚಳಿಯಲ್ಲಿ ಗಾಳಿಯೂ ಸೇರಿಕೊಂಡು, ತಂಪಾಗಿ ನನ್ನೆದೆಯ ಗೂಡನ್ನು ನಡುಗಿಸಿ ಬಿಟ್ಟಿದೆ. ಗೂಡಿನಲ್ಲಿದ್ದ ಕವಿತೆ, ಕನಸು ಮತ್ತು ಮಾತು ಎಲ್ಲ ನಿಬ್ಬಾಗಿವೆ. ಕಳೆದ ನಾಲ್ಕು ದಿನಗಳಿಂದ ಮಾತಾಡಲಾಗದಷ್ಟು ಖೆಮ್ಮು. ವರ್ಷಕ್ಕೊಮ್ಮೆ ಭಕ್ತನಂತೆ ನನ್ನ ದೇಹವೆಂಬ ದೇಗುಲಕ್ಕೆ ಬಂದು ಹೋಗುವ ಈ ಖೆಮ್ಮಿಗೆ ನಾನು ವಾರೊಪ್ಪತ್ತು ಇರಿಸಿಕೊಂಡು, ಬೆಚ್ಚಗಿನದೆಲ್ಲವನ್ನು ತಿನಿಸಿ, ಕುಡಿಸಿ ಕಳುಹಿಸುತ್ತೇನೆ. ಇದು ಕಳೆದ ಅರ್ಧ ದಶಕದ ನಂಟು. ಬಿಟ್ಟೀನೆಂದರು ಬಿಡದ ಮಾಯೆ. ಈ ಮಾಯೆಯ ಕರೆದುಕೊಂಡೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ತರಾವರಿಯ ರಂಗೋಲಿಯಾಗಿ ಹರಡಿದ ಸಂಕ್ರಾಂತಿಯ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದೇನೆ. 
 ಕಳೆದ ಮೂರು ದಿನಗಳಿಂದ ಕೈಯಲ್ಲಿ ‘ದೇಹವೆಂಬ ದೇವವೀಣೆ’ ಪುಸ್ತಕವಿದೆ. ಡಾ. ವಸಂತ ಕುಲಕರ್ಣಿಯವರ ಈ ಸರಳ ಪುಸ್ತಕ ನನ್ನ ಸಮಸ್ಯೆಗೆ ಪರಿಹಾರ ಸೂಚಿಸಿತೆ? ಎಂದು ಕಣ್ಣಾಡಿಸುತ್ತಿದ್ದೇನೆ. ಟೇಬಲ್ ಮೇಲೆ ಶಿರಸಿಯ ತಾರಾ ಹೆಗಡೆಯವರ ‘ಚೆಲ್ಲಿದ ಹೂಗಳು’ ಕಾವ್ಯಸಂಕಲನ ಮುನ್ನುಡಿಗಾಗಿ ಕಾಯುತ್ತಿದೆ. ಮೂರನೆಯ ಮಗುವಿಗಾಗಿ ಮಡದಿ ತವರಿಗೆ ಹೋಗಿದ್ದಾರೆ. ಮನೆಯ ಹಿಂಬದಿಯಲ್ಲಿ ತಿಂಗಳುಗಳ ಹಿಂದೆ ಹುಟ್ಟಿದ ಕೂಸು ಹಾಡುತ್ತದೆ, ಕಾಡುತ್ತದೆ, ಕಾಲದ ಅನಂತ ಲೋಕದಲ್ಲಿ ಕೃಷ್ಣನಂತೆ ಕರೆದುಕೊಂಡು ಹೋಗುತ್ತದೆ. ಇತ್ತೀಚಿಗಂತು ನಸುಕಿನ ನನ್ನ ನಿದ್ರೆಗೆ ಅದರ ಜೋಗುಳವಿರಲೇಬೇಕು.
ಹೀಗೆ ಬದುಕು ಜೀವವಾಗಿ ಜನಿಸಿ ಜೋಗುಳ ಹಾಡಿದರೆ, ಮತ್ತೊಂದೆಡೆ ಮೃತ್ಯು ನಿತ್ಯ ಅಟ್ಟಹಾಸ ಮಾಡಿ ನೆಮ್ಮದಿಯ ರಂಗೋಲಿಯ ಅಂದಗೆಡಿಸುತ್ತದೆ. ಧಾರವಾಡದ ಡಿ.ಎಂ ಹಿರೇಮಠರ ಕುಟುಂಬದಲ್ಲಿ ಇತ್ತೀಚೆಗೆ ನಡೆದ ಮೃತ್ಯು ನರ್ತನ ನನ್ನ ನೆಮ್ಮದಿಯನ್ನು ಕೆಡಿಸಿದೆ. ನುಗ್ಗೀಕೆರೆ ಕ್ರಾಸಿನಲ್ಲಿ ನಿಂತ ಕಾರಿಗೆ ಬಂದಪ್ಪಳಿಸಿದ ಮತ್ತೊಂದು ವಾಹನ ಇದರಲ್ಲಿ ಬಾಳಿ ಬದುಕಬೇಕಾದ ಹಿರೇಮಠರ ಮಗ ಮತ್ತು ಸೊಸೆಯ ಸಾವು ಯಾರ ಕುಟುಂಬದಲ್ಲಿ ಯಾವ ಕ್ಷಣದಲ್ಲೂ ನಡೆಯಬಹುದಾದುದೆ. ನಾಲ್ಕು ದಿನದ ಹಿಂದೆ ಕಾರು ಹತ್ತಿ ಮಂಗಳೂರಿಗೆ ಹೋಗಿ ಬಂದ ನನ್ನೊಂದಿಗೂ ಇದು ನಡೆಯಬಾರದು ಎಂದು ಏನಾದರು ಶಾಸನವಿದೆಯೆ? 2015ರಲ್ಲಿ ಅಪಘಾತದ ರುಚಿ ಕಂಡ ಜೀವ ನಮ್ಮದು.
ಅಪಘಾತಗಳು ಜರಗುತ್ತಲೇ ಇರುತ್ತವೆ. ದಾರಿಯಲ್ಲಿ, ಆಲೋಚನೆಯಲ್ಲಿ, ನಂಬಿಕೆಯಲ್ಲಿ ಮತ್ತು ಭಾವನೆಗಳಲ್ಲಿ. ಆದರೆ ಈ ಅಪಘಾತಗಳೊಂದಿಗೆ ಬದುಕಬೇಕಾದುದು, ಬಂದ ಬದುಕನ್ನು ಬಾಚಿ ತಬ್ಬಿಕೊಳ್ಳಬೇಕಾದುದು ಬಹಳ ಹಿತವೆನಿಸಿದೆ ನನಗೆ. ಇಲ್ಲಿ ನನಗೆ ನನ್ನ ಪ್ರೀತಿಯ ಮುದುಕ ನೆನಪಾಗುತ್ತಾನೆ. ಬಹಳ ಸುಂದರ ಮನಸ್ಸು ಆತನದು. ಆತನಿಗೆ ಗಾಂಧಿ ಎಂಬ ಹೆಸರಿನ ಬಿಲ್ಲೆ ಇದೆ. ಒಂದೆಡೆ ಹೇಳುತ್ತಾನೆ – “ನಾನು ಜನರನ್ನು ನಂಬುತ್ತೇನೆ. ನಂಬಿಕೆಯಿಂದ ಯಾವುದೆ ಭಯಂಕರ ಹಾನಿಯಾಗುತ್ತದೆ ಎಂದು ನಾನು ತಿಳಿದುಕೊಂಡಿಲ್ಲ. ನನ್ನನ್ನು ಜನರು ನಂಬಬೇಕು ಎಂದು ನಾನು ಹೇಗೆ ಆಶಿಸುತ್ತೇನೆಯೋ ಹಾಗೆಯೇ ಜನರನ್ನೂ ನಂಬುತ್ತೇನೆ. ನಂಬಿಕೆಯೇ ಜನರನ್ನು ಪ್ರೀತಿಸುವ ಸರಿಯಾದ ಪಥ ಎಂದು ನನ್ನ ತಿಳುವಳಿಕೆಯಾಗಿದೆ. ಯಾರು ಯಾರನ್ನೂ ನಂಬಿ ಮೋಸ ಹೋಗಲು ಸಾಧ್ಯವಿಲ್ಲ. ನಮ್ಮ ನಂಬಿಕೆ ಪ್ರಾಮಾಣಿಕವಾಗಿದ್ದರೆ ಮೋಸಗಾರರೇ ಮೋಸಗೊಳ್ಳುತ್ತಾರೆ. ಗೊತ್ತಿರಲಿ, ಯಾರನ್ನು ನಂಬಿ ನಾನು ಯೋಜನೆಗಳನ್ನು ಪ್ರಾರಂಭಿಸಿದೆನೋ ಹಾಗೆಯೇ ನನ್ನನ್ನೂ ನಂಬಿ ನಾನು ಅಡಿ ಇಟ್ಟಿದ್ದೇನೆ. 
 ಒಳ್ಳೆಯತನವೆ ದೇವರು, ದೇವರೇ ಜೀವ, ಜೀವವೇ ದೇವರು. ಒಳಿತು ಎನ್ನುವುದು ದೇವರಿಗೆ ವಿಶೇಷಣವಲ್ಲ. ಒಳಿತನ್ನು ಹೊರತುಪಡಿಸಿದ ದೇವರು, ಬದುಕು ಮೃತ್ಯುವಿನ ಆವ್ಹಾನವಷ್ಟೆ. ಇಂಥ ದೇವರುಗಳು ಮತ್ತು ಬದುಕುಗಳು ಹುಚ್ಚು ಕಲ್ಪನೆಯಲ್ಲಿ ಸೃಷ್ಠಿಯಾಗುತ್ತವೆ.”
ಎಷ್ಟೊಂದು ಬೆಚ್ಚಗಿದೆಯಲ್ಲ ಈ ಮಾತು.

No comments:

Post a Comment