Total Pageviews

Monday, March 5, 2018

ಕಣ್ಣೀರ ಒರಸಿ ಬೆಳಕು ಬೀರುವ ಕೃತಿ


        ಹತ್ತೊಂಬತ್ತನೆಯ ಶತಮಾನದ ಪೂರ್ವಾಧದಲ್ಲಿ ಇಂಗ್ಲಂಡಿನ ಎರಡನೆಯ ತಲೆಮಾರಿನ ರೊಮ್ಯಾಂಟಿಕ್ ಕಾವ್ಯ ಪ್ರಪಂಚದಲ್ಲಿ ಬೆಳಗಿ ಹೋದ ರತ್ನಾತ್ರಯರಲ್ಲಿ ಜಾನ್ ಕೀಟ್ಸ್ನೊಬ್ಬ. ಉಳಿದಿಬ್ಬರು ಲಾರ್ಡ ಬೈರನ್ ಮತ್ತು ಪಿ. ಬಿ. ಶೆಲ್ಲಿ.
ಅಪ್ಪಟ ಕಾವ್ಯ ಕುಶಲಕರ್ಮಿಯಾಗಿದ್ದ ಕೀಟ್ಸ್ನಿಗೆ ಎರಡು ತೀರದ ದಾಹಗಳಿದ್ದವು. ಕಾವ್ಯ ದಾಹ ಮತ್ತು ಪ್ರೀತಿ ದಾಹ. ತನ್ನ ಆಯುಷ್ಯದ ಕೊನೆ ಗಳಿಗೆವರೆಗೂ ಕವಿ ಕಾವ್ಯಯಜ್ಞದಲ್ಲಿ ತನ್ನನ್ನೇ ತಾನು ಹವಿಸ್ಸಾಗಿಸಿಕೊಂಡ ಅಧ್ವನಿ. “ಕಾವ್ಯ ರಾಜ್ಯಗಳಲ್ಲಿ ಸಾಕಷ್ಟು ಸುತ್ತಾಡಿ ಬಂದವನು ನಾನು(Much have I travelled in the realms of gold) ಎಂದು ಹೃದಯ ತುಂಬಿ ನಲಿದಾಡಿದ ಇವನು ಮುಟ್ಟಿದ್ದೆಲ್ಲ ಚಿನ್ನವಾಯ್ತು. ಕಾವ್ಯಾಮೃತವನ್ನು ಮೊಗೆ ಮೊಗೆದು ಕುಡಿದ ಅಮೃತ ಚೇತನನು ತನ್ನ ಓದುಗರಿಗೆ ಕಾವ್ಯ ಕೃತಿಗಳ ಮೂಲಕ ಆನಂದ ಧಾರೆಯೆರೆದಿದ್ದಾನೆ.
ಸಾವಿಲ್ಲದ ಕಾವ್ಯ ನೀಡಿ ಹೋಗಿರುವ ಕೀಟ್ಸ್ ವಿನಯದ ಋಣಿಯಾಗಿದ್ದನು; ತನ್ನದು ಶಾಶ್ವತ ಕೊಡುಗೆಯೆಂಬ ಭ್ರಮೆ ಎಂದೂ ಇರದವನು. ಶುದ್ಧಾಂತಃಕರಣ, ಭಾವ ಶ್ರೀಮಂತಿಕೆ ನಿವ್ರ್ಯಾಜ ಪ್ರೀತಿ, ಆಳವಾದ ಸೌಂದರ್ಯಪ್ರಜ್ಞೆ, ಬುದ್ಧಿಪ್ರಖರತೆ ಅಪ್ರತಿಮ ಕಾವ್ಯಪ್ರತಿಭೆ, ಸ್ವೋಪಜ್ಞತೆ ಇವುಗಳೆಲ್ಲ ಮತ್ತೊಂದು ಹೆಸರು ಕೀಟ್ಸ್ ಎನ್ನಬಹುದು. ಆದರೆ ಅವನು ಅಲ್ಪಾಯುಷಿಯಾಗಿದ್ದದ್ದು ವಿಧಿಯ ವಿಕಟಾಟ. ಅನುವಂಶೀಯವಾಗಿ ಬಂದ ಕ್ಷಯರೋಗದಿಂದಾಗಿ ಈತನ ವಯಸ್ಸು ಕೇವಲ ಇಪ್ಪತ್ತೈದು ವರ್ಷ ಮೂರು ತಿಂಗಳು ಇಪ್ಪನಾಲ್ಕು ದಿನವಾಗಿತ್ತು. ಒಂದು ದಶಕದ ಅವಧಿಯಲ್ಲಿ ಹಲವು ದಶಕಗಳ ಬೃಹತ್ ಸಾಧನೆಯನ್ನು ಹಿಡಿದಿಟ್ಟು ಹೋದ ಮಹಾ ಚೈತನ್ಯವದು.
ಕೀಟ್ಸ್ ಚರಿತ್ರಕಾರರಲೊಬ್ಬನಾದ ಸಿಡ್ನಿ ಕೊಲ್ವಿನ್ ಹೇಳುವಂತೆ, ಇವನು ರೋಮದಲ್ಲಿ ಮರಣಶೆಯ್ಯೆಯಲ್ಲಿದ್ದಾಗ, ಸಾವು ಸಮೀಪಿಸುತ್ತಿದ್ದಾಗ, ಮಿತ್ರ ಸೆವರ್ನನು ಆರೈಕೆಯಲ್ಲಿ ತೊಡಗಿದ್ದಾಗ, ತನ್ನ ಸಮಾಧಿಯ ಮೇಲಿನ ಚರಮ ಲೇಖವು (Epitaph) ನೀರ ಮೇಲೆ ಬರೆದ ಹೆಸರಿನವನು ಇಲ್ಲೊರಗಿಹನು(Here lies one whose name was writ in water) ಎಂಬುದುರಬೇಕೆಂದು ಬಯಸಿದನು. ಆದರೆ ಇಂದು ಕೀಟ್ಸ್ ಹೆಸರುಜಲೇ ಲಿಖಿತಾಕ್ಷರಆಗದೆಶಿಲೇ ಲಿಖಿತಾಕ್ಷರಅಷ್ಟೇ ಏಕೆ ಜಗತ್ತಿನ ಕಾವ್ಯ ಪ್ರೇಮಿಗಳ ಹೃದಯ ಲಿಖಿತಾಕ್ಷರ ಆಗಿದೆ. ಕವಿಯ ಆಶಯವನ್ನೇ ಧ್ವನಿಸುವನೀರ ಮೇಲೆ ನೆನಪ ಬರೆದುಶೀರ್ಷಿಕೆಯ ಅಪರೂಪದ ಕೃತಿಯನ್ನು ರಾಗಂ ಕನ್ನಡಿಗರಿಗೆ ನೀಡಿದ್ದಾರೆ.
ಪ್ರಸ್ತುತ ಕೀಟ್ಸ್ ಬಾಳ ಕಥೆ ಎಚ್ಚರದಿಂದ ಓದುವವರಿಗೆ ಹುಚ್ಚು ಹಿಡಿಸುವ ಕೃತಿಯಾಗಿದೆ. ಕೀಟ್ಸ್ ವಿನಯಪೂರ್ವಕ ಸ್ವ-ವಿಮರ್ಶೆಯನ್ನು ಮೆಚ್ಚಿದರೂ ಅವನು ಅಮರತ್ವ ಪಡೆದ ಮಹಾ ಚೈತನ್ಯವೆಂದು ಹೆಜ್ಜೆ ಹೆಜ್ಜೆಗೂ ಪ್ರತಿಪಾದಿಸುತ್ತಾರೆ ರಾಗಂ. ಮಾತನ್ನು ಹೇಳದ ಇಂಗ್ಲಿಷ ಕಾವ್ಯ ವಿಮರ್ಶಕರು ಇಲ್ಲವೆಂದೇ ಹೇಳಬಹುದು. ಕೀಟ್ಸ್ ಮಹಕಾಲೀನ ಇನ್ನೊಬ್ಬ ಧೀಮಂತ ಕವಿ ಶೆಲ್ಲಿ ಅವನ ಸಾವಿನಿಂದ ದುಃಖಿತನಾಗಿ ಎಡೋನೈಸ್ ಎಂಬ ಹೆಸರಿನಿಂದ ಶೋಕಗೀತೆವೊಂದನ್ನು ಬರೆದು ಅದರಲ್ಲಿಸತ್ತದ್ದು ಸಾವು ಅವನಲ್ಲ(Its death is dead, not he) ಎಂದು ಅವನ ಅಮರತ್ವವನ್ನು ಪೋಷಿಸಿದನು.
ಇಹ ಮತ್ತು ಇಹೋತ್ತರಗಳೆರಡನ್ನು, ಕಾಲಾತೀತವನ್ನು ತಬ್ಬಿಕೊಂಡು ಹಬ್ಬಬೇಕು. ‘ಹಿಗ್ಗಬೇಕುಎನ್ನುವ ಉತ್ಕಟ ತವಕದ ಕೀಟ್ಸ್ ಜಾಯಮಾನವೇ ರಾಗಂ ಅವರದು. ಕೀಟ್ಸ್ ಹಾಗೆಯೇ ಕಾವ್ಯಪೀಡಿತ, ಪ್ರೀತಿಪೀಡಿತ  ಕವಿ ರಾಗಂ ಈಗ ಕೀಟ್ಸ್ ಪೀಡಿನಾಗಿರುವುದು ಅಚ್ಚರಿಯಲ್ಲ! ಪ್ರಪ್ರಥಮವಾಗಿ ಕವಿಯಾಗಿರುವ ಲೇಖಕನೊಬ್ಬನು ಇನ್ನೊಬ್ಬ ಕವಿಯ ಜೀವನ ಗಾಥೆಯನ್ನು ಬರೆದರೆ ಅದು ಯಾವ ಸ್ವರೂಪದ್ದಾಗಬಲ್ಲದು ಎನ್ನುವುದಕ್ಕೆ ನಿದರ್ಶನ ಕೃತಿನೀರ ಮೇಲೆ ನೆನಪ ಬರೆದು. ಇದು ಜೀವನ ಕಥನವಷ್ಟೇಆಗಿರದೆ ಒಂದು ಅಸಾಧಾರಣ ವ್ಯಕ್ತಿತ್ವದ ಬಾಳ ಗತಿಯನ್ನು ಕವನವಾಗಿಸಿದ, ಕ್ವಚದಪಿ ಕಣ್ಣಿಗೆ ಬೀಳುವ, ಗದ್ಯ ಕೃತಿ. ಕೇವಲ ಮಾಹಿತಿ ನೀಡುವ ಪುಸ್ತಕವಲ್ಲ; ಒಂದು ಭವ್ಯ ಬಾಳಿನ ಒಳಹೊರಗನ್ನು ಬೆರಗುಗೊಳಿಸುವಂತೆ ತೆರೆದಿಡುವ ರಚನೆ. ದರ್ಶನವಿಲ್ಲದೆ ಶ್ರೇಷ್ಠ ಕಾವ್ಯ ಹುಟ್ಟುವುದಿಲ್ಲ. ಕೀಟ್ಸ್ನದು ನಿತಾಂತ ಸತ್ವದ ದರ್ಶನ ಕಾವ್ಯ. ಸ್ವತಃ ಕವಿತ್ವದ ಕಾರಂಜಿಯಾಗಿರುವ ರಾಗಂ ದರ್ಶನವನ್ನು ಧ್ಯಾನಸ್ಥವಾಗಿ ಅವಗತಮಾಡಿಕೊಂಡು ಇದರಲ್ಲಿ ಹಿಡಿದಿಟ್ಟಿದ್ದಾರೆ.
ಪುಸ್ತಕವು ಕೀಟ್ಸ್ ಪತ್ರಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿದೆ. ಲೇಖಕರಿಗೆ ಲಭ್ಯವಿರುವ 164 ಪತ್ರಗಳಿಂದ - ಫ್ಯಾನಿ ಬ್ರಾನಳಿಗೆ ಬರೆದ ಪತ್ರಗಳ ಸೇರಿಮಹತ್ವದ ಅಂಶಗಳನ್ನು ಆಯ್ಕೆಮಾಡಿ, ಅದಕ್ಕೆ ಪೂರಕವಾಗಿ ಪುಷ್ಟೀಕರಿಸುವ ಕವನಗಳಿಂದ ಉದ್ಧøತಗಳನ್ನು ಕೊಟ್ಟು, ಅಲ್ಲಲ್ಲಿ ಟಿಪ್ಪಣಿಗಳನ್ನು ನೀಡಿ, ಪತ್ರಗಳಲ್ಲಿ ಮೂಡಿರುವ ಕವಿಗಳ ಅನನ್ಯ ವ್ಯಕ್ತಿತ್ವವನ್ನು ಮನೋಜ್ಞವಾಗಿ ಚಿತ್ರಿಸುತ್ತದೆ. ಜೀವನ ಚರಿತ್ರೆ ಕವಿಯ ಆಪ್ತ ಗೆಳೆಯರಾಗಿದ್ದ ಹೇಡನ್, ರೆನಾಲ್ಡ್ಸ್, ಜೇಮ್ಸ ರೈಸ್, ಲೀ ಹಂಟ್, ಚಾರ್ಲಸ್ ಬ್ರೌನ್, ಬೇಲಿ, ಸಹೋದರ ಜಾರ್ಜ್ ಮತ್ತು ಪ್ರೇಯಸಿ ಫ್ಯಾನಿ ಬ್ರೌನ್ ಇವರೊಡನೆ ವ್ಯವಹರಿಸಿದ ಪತ್ರಗಳಿವು. ಟಿ.ಬಿ ರೋಗದಿಂದ ಬಳಲುತ್ತಿದ್ದಾಗ, ಅಗಲಿದ ತಾಯಿ ಮತ್ತು ಸಹೋದರ ಥೋಮಸ್ಸರ ನೆನಪು ಸದಾ ಕೊರೆಯುತ್ತಿದ್ದಾಗ ತಾನು ಅನುಭವಿಸುತ್ತಿದ್ದ ಖಿನ್ನತೆ, ನಿರಾಸೆ, ದುಗುಡ-ದುಮ್ಮಾನಗಳನ್ನು ಮಿತ್ರರೊಡನೆ ಕೆಲವು ಪತ್ರಗಳಲ್ಲಿ ಹಂಚಿಕೊಂಡಿದ್ದಾನೆ. “ಸ್ನಿಗ್ಧಜನಸಂವಿಭಕ್ತಂ ಹಿ ದುಃಖಂ ಸಹ್ಯವೇದನಂ ಭವತಿಎಂದು ಕವಿ ಕಾಲಿದಾಸನು ಹೇಳುವಂತೆ ಹಾಗೆ ಮಾಡುವುದರಿಂದ ಕವಿಯ ಮನದ ಕ್ಲೇಶ ಸಹನೀಯವೆನಿಸಿರಬೇಕು. ಕೆಲವು ಪತ್ರಗಳಲ್ಲಿ ಪೂರ್ವ ಕವಿಗಳಾದ ಸ್ಪೆನ್ಸರ್, ಶೇಕ್ಸಪಿಯರ್, ಮಿಲ್ಟನ್ರನ್ನು ಗೌರವಪೂರ್ವಕ ಸ್ಮರಿಸಿದರೆ ಇನ್ನು ಕೆಲವು ಓಲೆಗಳಲ್ಲಿ ಸಮಕಾಲೀನ ಕವಿಗಳಾದ ವಡ್ರ್ಸವರ್ಥ, ಕೇಲರಿಜ್, ಬೈರನ್, ಶೆಲ್ಲಿ ಮುಂತಾದವರನ್ನು ಶ್ಲಾಘಿಸಿದ್ದಾನೆ; ಕೆಲವು ಸಂದರ್ಭದಲ್ಲಿ ಇವನು ತನ್ನ ಸಾಹಿತ್ಯಕ ಚಿಂತನೆಗಳನ್ನು ಮತ್ತು ಒಳನೋಟಗಳುಳ್ಳ ವ್ಯಾಖ್ಯೆಗಳನ್ನು ದಾಖಲಿಸಿದ್ದಾನೆ. ಕೀಟ್ಸ್ ಪತ್ರ ಸರಣಿಯಲ್ಲಿ ಮೂಡಿ ಬಂದಿರುವ ಅವನ ಸೃಜನಾತ್ಮಕ, ವೈಚಾರಿಕ ವಸ್ತು ವಿಶೇಷತೆಗಳನ್ನು ಸೋಸಿ ತೆಗೆದು ತನ್ಮೂಲಕ ಕವಿ ಕೀಟ್ಸ್ ನಿಜವಾದ ವ್ಯಕ್ತಿತ್ವವನ್ನು ತೋರಿಸುವ ಕೃತಿ ಸಾರ್ಥಕ ರೀತಿಯಲ್ಲಿ ಸುವರ್ಣ ಸ್ಮಾರಕ ಸೌಧವನ್ನು ನಿರ್ಮಿಸಿದೆ.
ಪತ್ರಗಳು ಸ್ಪಷ್ಟಪಡಿಸುವ ಇನ್ನೊಂದು ಸತ್ಯವು ಗಮನಾರ್ಹವಾಗಿದೆ. ಬಹಳ ಜನ ವಿಮರ್ಶಕರು ತನ್ನ ಕಾಲವನ್ನು ಕಡೆಗಣಿಸಿ ಕೀಟ್ಸ್ ಗತಕಾಲಕ್ಕೆ (ಗ್ರೀಕ ಮತ್ತು ಮಧ್ಯಯುಗೀನ ಕಾವ್ಯ, ಇತಿಹಾಸ, ಸಂಸ್ಕøತಿಗೆ) ಪಯಣಿಸುವ ಪಲಾಯನವಾದಿ ಕವಿ ಎಂದು ಟೀಕಿಸಿದ್ದಾರೆ. ಅದು ಸರಿಯಾದ ವಿಮರ್ಶೆ ಅಲ್ಲವೆಂದು ಪತ್ರಗಳನ್ನು ಓದಿದರೆ ಗೊತ್ತಾಗುತ್ತದೆ. ಕೀಟ್ಸ್ನು ತನ್ನ ಕಾಲಕ್ಕೆ ಸ್ಪಂದಿಸುತ್ತ ತನಗೆ ದಕ್ಕಿದ ಬಾಳನ್ನು ಹೇಗೆ ಅರ್ಥಪೂರ್ಣವಾಗಿ ಬಾಳಿದನೆಂಬುದನ್ನು ರಾಗಂ ಪರಿಣಾಮಕಾರಿಯಾಗಿ ತೋರಿಸಿಕೊಟ್ಟಿದ್ದಾರೆ.
ಸೌಂದರ್ಯ ಕುರಿತ ಕೀಟ್ಸ್ ಸುಪ್ರಸಿದ್ಧ ಉಕ್ತಿಯನ್ನು (Beauty is truth, truth beauty) ಪ್ರಸ್ತಾಪಿಸುತ್ತ ಕವಿಯ ಆಳವಾದ ಸೌಂದರ್ಯ ಪ್ರಜ್ಞೆಯನ್ನು ಇಲ್ಲಿ ಚರ್ಚಿಸಲಾಗಿದೆ. ಅದು ಭೌತಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಚತುರ್ಮುಖ ಸೌಂದರ್ಯ ದೃಷ್ಟಿ, ಸಮಗ್ರ ಸೌಂದರ್ಯದೃಷ್ಟಿ. ಸಮಗ್ರ ದೃಷ್ಟಿಯಿದ್ದ ಕಲಾವಿದನು ಮಾತ್ರ ತಾನು ಚಿತ್ರಿಸುತ್ತಿರುವ ವಸ್ತುವಿನೊಡನೆ ತಾದಾತ್ಮ್ಯ ಸಾಧಿಸಿಯೂ ಅದರಿಂದ ಹೊರಗೆ ನಿಲ್ಲಬಲ್ಲನು, ಕಮಲ ಪತ್ರದ ಮೇಲಿರುವ ನೀರಿನ ಹನಿಯಂತೆ. ಇದೇ ಅರ್ಥದಲ್ಲಿ ಅವನು ಸಾಹಿತ್ಯ ಸೃಷ್ಟಿಯನ್ನು ಕುರಿತು ಆಡಿದ ಮಾತೊಂದುಂಟು. ಅದು Negative capability. ಅಂದರೆ ಶ್ರೇಷ್ಠ ಕವಿಯದು ಅವನಿಗಂಟದ ನಿರ್ಲಿಪ್ತ ಭಾವ, ಒಂದು ಬಗೆಯ ಸೃಜನಾತ್ಮಕ ಸಾಕ್ಷಿ-ಭಾವ; ನಿಜವಾದ ಸಾಹಿತ್ಯ ಸೃಷ್ಟಿಯ ಸಾರೋಕ್ತಿ ಇದು. ಐಂದ್ರಿಕ ಜಗತ್ತನ್ನು ಸೃಷ್ಟಿಸುತ್ತಲೇ ಅದರಾಚೆಗಿನ ಹೊಳಹುಗಳನ್ನು, ನಿಗೂಢತೆಗಳನ್ನು ಮಿಂಚಿಸುತ್ತದೆ ಕೀಟ್ಸ್ ಕಾವ್ಯ. ಅವನಲ್ಲಿ ವೈರುಧ್ಯಗಳು ಸಂಧಿಸುವ ಬಿಂದು ಒಂದುಂಟು. ಅದು ಸೂಕ್ಷ್ಮ ಓದುಗನನ್ನು ಸೆಳೆದು ನಿಲ್ಲಿಸುತ್ತದೆ. ವಿಶಿಷ್ಟ ಕಾವ್ಯ ಗುಣವನ್ನು ಗುರುತಿಸುತ್ತ ಲುಯಿ ಮ್ಯಾಕ್ನೀಸ ಎಂಬ ವಿಮರ್ಶಕನು ಹೇಳುತ್ತಾನೆ- “ಕೀಟ್ಸ್ನೊಬ್ಬ ಇಂದ್ರಿಯಾನಂದದ ಅನುಭಾವಿ(A sensuous mystic) ಪುಸ್ತಕದಲ್ಲಿ ಉದ್ಧರಿಸಿರುವ ಕಾವ್ಯ ಕುರಿತು ಕೀಟ್ಸ್ ಮಾತನ್ನು ಪರಾಂಬರಿಸಬೇಕು: “ಅದು ಕಾವ್ಯ ಎಲ್ಲವೂ ಆಗಿದೆ ಮತ್ತು ಏನೂ ಇಲ್ಲ(It is everything and nothing) ಇದೊಬ್ಬ ಸಂತನಾಡುವ ಮಾತಿನಂತಿದೆ. ಆಧ್ಯಾತ್ಮದ ಆತ್ಮಭಾವದ ಒಳಹರಿವನ್ನು ಕೀಟ್ಸ್ ಕಾವ್ಯದಲ್ಲಿದ್ದಂತೆ ಅವನ ಪತ್ರಗಳಲ್ಲೂ ಇರುವುದನ್ನೂ ಪುಸ್ತಕದಲ್ಲಿ ಚೆನ್ನಾಗಿ ಗುರುತಿಸಲಾಗಿದೆ.
ಪುಸ್ತಕದ ಇಪ್ಪತ್ತೊಂದು ಅಧ್ಯಾಯಗಳಲ್ಲಿ ಒಂದಿಲ್ಲ ಒಂದು ಪರಿಯಲ್ಲಿ ದಾಂಗುಡಿಯಾಗಿ ಹಬ್ಬಿದ್ದುಪ್ರೀತಿಎಂಬ ಬಳ್ಳಿ. ಮೊದಲೇ ಹೇಳಿದಂತೆ ಕವಿ ಕೀಟ್ಸನನ್ನು ಆವರಿಸಿದ್ದು ಕಾವ್ಯವೊಂದೇ ಅಲ್ಲ, ಪ್ರೀತಿಯೆಂಬ ಅವನ ಜೀವದುಸಿರೂ ಕೂಡ. ಅವನ ಜೀವನುದ್ದಕ್ಕೂ ಸಾಗಿರುವ ಅದರ ಜಾಡು ಹಿಡಿದು ರಾಗಂ ಸಾಗಿದ್ದು ವಿಸ್ಮಯವೆನಿಸುತ್ತದೆ, ಕಲಾಜನ್ಯ ಸಂತಸ ನೀಡುತ್ತದೆ. ತಾಯಿಯ ಮೇಲಿನ ಎಲ್ಲಿಲ್ಲದ ಪ್ರೀತಿ, ಸಹೋದರರು ಮತ್ತು ಸಹೋದರಿಯ ಮೇಲಿರುವ ಕಕ್ಕುಲತೆ, ಮಿತ್ರರತ್ತ ಸೆಳೆವ ಸ್ನೇಹ, ಪ್ರೇಯಸಿ ಫ್ಯಾನಿಯ ಮೇಲಿರುವ ಅನುರಾಗ, ಪ್ರಾಣಿ-ಪಕ್ಷಿ-ನೆಲ-ಜಲ-ಗುಡ್ಡ-ಬೆಟ್ಟ ಆಕಾಶ ಎಲ್ಲವನ್ನೊಳಗೊಂಡ ಸಮಸ್ತ ನಿಸರ್ಗವನ್ನಪ್ಪಿಕೊಳ್ಳುವ ಅವನ ಒಲವು, ಪ್ರೇಮ ಇದೆಲ್ಲ ಬಹಿಪ್ರ್ರಾಕಟ್ಯಗೊಂಡದ್ದು ಆತನ ಹೃದಯ ತುಂಬಿದ ಧವಳ ಪ್ರೀತಿಗಂಗೋತ್ರಿಯಿಂದ. ಪ್ರೀತಿಯ ಹೊರಬಣ್ಣ ಯಾವುದೇ ಇದ್ದರೂ, ಅದು ಯುವ ಆಯಾಮದಲ್ಲಿ ಸಂಚರಿಸಿದರೂ, ಅದರ ಮೂಲ ಬಣ್ಣ ಶ್ವೇತ. ಕೀಟ್ಸ್ ಹತ್ತಿರ ಕೃತ್ರಿಮತೆ ಎಂದೂ ಸುಳಿಯಲಿಲ್ಲ; ಅವನದು ದೇವತಾ ಸ್ವಭಾವ, ದೇವತಾ ಚರ್ಯೆ. ಪ್ರೀತಿ ತ್ರೋತಸ್ಸು ಕೀಟ್ಸನ ಪತ್ರಗಳಲ್ಲಿ ಅನುಸ್ಯೂತವಾಗಿ ಹರಿದು ಬಂದದ್ದನ್ನು ಕೃತಿಯಲ್ಲಿ ನೋಡಬಹುದು. ಸ್ತ್ರೀಯ ವಿಷಯಕ್ಕೆ ಅವನಿದ್ದ ಧೋರಣೆಯನ್ನು ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಸ್ತ್ರೀಯರನ್ನೂ ಗೌರವ ಭಾವದಿಂದ ನೋಡುವ ಕವಿಗೆ ಯಾಕೋ ಒಂದು  ಬಗೆಯ ಗೊಂದಲವಿದ್ದಂತೆ ತೋರುತ್ತದೆ: ಒಮ್ಮೆ ಆಕರ್ಷಣೆ, ಮತ್ತೊಮ್ಮೆ ವಿಕರ್ಷಣೆಯ ಭಾವವಿತ್ತು. ಇರಲಿ.
ತಾಯಿಯ ಹಾಗೆಯೇ ತಮ್ಮನ ಸಾವಿನಿಂದ ತ್ರಸ್ತನಾಗಿದ್ದರೂ, ಟಿ.ಬಿ ರೋಗದ ಕಾರಣದಿಂದ ಫ್ಯಾನಿಯೊಡನೆ ಮಾಡಿಕೊಂಡಿದ್ದ ಮದುವೆಯ ನಿಶ್ಚಿತಾರ್ಥ ಮುರಿದು ಹೋದದ್ದರಿಂದ ಘಾಸಿಗೊಂಡವನಾಗಿದ್ದರೂ, ಸ್ವತಃ ರೋಗದ ಕೆಂಡವನ್ನೊಡಲೊಳಗಿಟ್ಟುಕೊಂಡು ಸಾವಿನ ನೆರಳಲ್ಲಿ ಬದುಕಿದ್ದರೂ ಕೊನೆ ಗಳಿಗೆವರೆಗೆ ಕಾವ್ಯ ರಚನೆಯಲ್ಲಿ ತೊಡಗಿದ್ದನೆನ್ನುವುದು ಕೀಟ್ಸನ ಸಮಚಿತ್ತವನ್ನು, ಅವನ ತಿತಿಕ್ಷೆಯನ್ನು ನಾವು ಕೇವಲ ಊಹಿಸಬಹುದಷ್ಟೆ.
ಪುಸ್ತಕವನ್ನು ಪ್ರವೇಶಿಸುತ್ತಿದ್ದಂತೆಯೇ ಓದುಗನನ್ನು ಅಯಸ್ಕಾಂತದಂತೆ ಸೆಳೆದು ಬಿಡುವ ಸಂಗತಿಯೆಂದರೆ ಭಾಷೆ ಮತ್ತು ನಿರೂಪಣಾ ಶೈಲಿ: ಚಿಕ್ಕ ಚಿಕ್ಕದಾದ ವಾಕ್ಯಗಳು, ಸುಂದರ ನುಡಿಗಟ್ಟು, ಆಪ್ತವೆನಿಸುವ ಮಾತಿನ ವೈಖರಿ ಹೊಸತನವನ್ನೂ, ಮೆರಗನ್ನೂ ತಂದಿವೆ. ಕುತೂಹಲ ಕುದುರೆ ನಮ್ಮನ್ನು ಕೂರಿಸಿಕೊಂಡು ಹೊಸ ಹೊಸ ಮಜಲುಗಳನ್ನು ದಾಟಿಸುತ್ತ ಓಡುತ್ತದೆ; ಇದೊಂದು ಮುದ ನೀಡುವ ಓದು ಯಾನ.
ನೀರ ಮೇಲೆ ನೆನಪ ಬರೆದು. . .’ ಕೀಟ್ಸ್ ಜೀವನ ಚರಿತ್ರೆ ನಿಸ್ಸಂದೇಹವಾಗಿ  ಕನ್ನಡ ಸರಸ್ವತಿಯ ಮುಡಿಗೇರಿಸಿದ  ಹೊಚ್ಚ ಹೊಸ ಮಲ್ಲಿಗೆ; ಕನ್ನಡ ಓದುಗರ ಸಾಹಿತ್ಯ ಜ್ಞಾನವನ್ನು, ಸಂಸ್ಕøತಿಯನ್ನು, ಸಂತೋಷವನ್ನು ವರ್ಧಿಸುವ ಕೃತಿ.
ಕೃತಿಕಾರ ರಾಗಂ ಅವರಿಗೆ ಅನಂತ ಅಭಿನಂದನೆಗಳು. ಅವರ ಲೇಖನಿಯಿಂದ ಇನ್ನೂ ಹೆಚ್ಚು ಸಮೃದ್ಧವಾದ ಫಸಲು ಕನ್ನಡಕ್ಕೆ ಒದಗಿ ಬರಲೆಂದು ಹಾರೈಸುತ್ತೇನೆ.


ಡಾ. ಆರ್.ಕೆ. ಕುಲಕರ್ಣಿ
ವಿಶ್ರಾಂತ ಇಂಗ್ಲಿಷ ಪ್ರಾಧ್ಯಾಪಕರು
ವಿಜಯಪುರ – 586103
ಬುಧವಾರ: 07.02.2018
 


No comments:

Post a Comment