ಬಹುರೂಪಿಯಲ್ಲದ
ಕಾಲನ ಕಾಲಿಗೆ ಗೆಜ್ಜೆಗಳಿಲ್ಲ
ಹುಟ್ಟುತ್ತಾನೆ
ಜಡೆಗಂಟಿಗೊಂಡ ಹಿಡಿ-ಹಿಡಿ ಮಣ್ಣು ಜಾಡಿಸಿಕೊಂಡು
ಮರೆತ ಮೌಲ್ಯಗಳ ಮತ್ತೆ ಮೆಲುಕಿಸಿಕೊಂಡು
ಸಾವಿಗೂ ಸಾವಿರ ನೆನಪ ನಿಲುಕಿಸಿಕೊಂಡು
ಎತ್ತರಕೆ ಮೊಗ ಮಾಡಿ
ನೆತ್ತರಕೂ ನಗೆ ಹಾಡಿ
ಹಿಂದಿರುಗಿ ನೋಡದೆ
ಹೊರಟುಬಿಡಬೇಕಷ್ಟೇ
ನೆತ್ತಿ-ಬುತ್ತಿಯಲೂ
ನಿಲ್ಲದ ಕೆಲಸಗಳೇ
ಕಂದನ ಜಡೆಯನೊಯ್ದು
ಹಿಮಾಲಯದ ತೊಡೆಯಿಳಿದು ಬರುವ
ನದಿ-ನಾರಿಯರ ಛಳಿಗೆ ಹೊದಿಕೆಯಾಗಿಸಬೇಕು
ಸಂಘಮಿತ್ರೆಯ ಸಾಂತ್ವನಕ್ಕೆ
ದಾರಿ ಸಿಗಬೇಕಿಲ್ಲಿ ಸಂತರಲ್ಲಿ
ಯಶೋಧೆ-ರಾಹುಲರ ಮುಗ್ಧತೆಗೆ
ಧೀರ್ಘವಾಗಿರಲಿ ನಿದ್ರೆ
ಇನ್ನೂ ಬಸಿರಾಗದ ಬದುಕಿನಲ್ಲಿ
ನಗುತಿರಲಿ ಮಗಳ ನಗೆ
ಮುಗಿಲ ನಕ್ಷತ್ರಗಳಂತೆ
ಬೀಸುವ ಕೈ, ಭಾರವಾದ ಎದೆ
ಏನೆಲ್ಲ ಬಿತ್ತಿಯೂ ಬೀಸಾಣಕ್ಕೆ ಬಾರದ ಬಳಗ
ಎಲ್ಲ ಹೀಗಿರುವಾಗ
ಹೀಗೆ ಇರುವಾಗ
ಸಾಗುವ ದಾರಿ
ಮುಗಿಯುದಿಲ್ಲ, ಮಾಗುವುದಿಲ್ಲ
ನಗುವುದು ಇಲ್ಲ
ಈ ನೆತ್ತಿ ಗಂಟೆನ್ನುವುದು
ವಿಕ್ರಮಾದಿತ್ಯನ ಹೆಗಲ ಹೆಣವಲ್ಲ
ಆದರೆ, ಬುತ್ತಿಯೂ ಅಲ್ಲವಲ್ಲ
No comments:
Post a Comment