ನಿನ್ನಾಜ್ಞೆ –
ಬದುಕಿದವಳ ಪತಿಯಾಗಿಯೂ
‘ವಿಧುರ’ನಂತಿರಬೇಕು,
ಹೋರಾಟದ ಬದುಕನ್ನು ‘ಸುಖದ
ಸಂತೆ’ ಎಂದು ಮರೆತುಬಿಡಬೇಕು,
ಮೈ-ಮುಖ ಕಳೆದುಕೊಂಡು
‘ಆಲೋಚನೆ’ಯಾಗಿರಬೇಕು.
ಇಗೋ ನನ್ನ ಭರವಸೆ –
ನಾನು ಮೌನವಾಗಿರುತ್ತೇನೆ
ಮತ್ತು ನಿನ್ನಾಜ್ಞೆ ಪಾಲಿಸುತ್ತೇನೆ
ಹೆಪ್ಪುಗಟ್ಟಿದ ಹಿಮವೆಲ್ಲ
ಕರಗಿ ದ್ವೇಷ ನಾಮಾವಶೇಷವಾಗುವವರೆಗೆ
ಜಗದ ಬಾಗಿಲುಗಳು ತೆರೆದು
ಬೆಳಕೇ ಬದುಕಾಗುವವರೆಗೆ
ತಪ್ಪಿ, ಮಿಂಡರ ಮೈಯಲ್ಲಿ
ಮುಳುಗಿದ ಹೆಂಗಸರು ಮಹಿಳೆಯರಾಗುವವರೆಗೆ
ನಾನು ಸಾಯತ್ತೇನೆ, ಬಾ
ನನ್ನ ಮೈ ಮುರಿ, ಮತ್ತೆ ಮಾತನಾಡೆನ್ನುವವರೆಗು
ನಿನ್ನ ಬೊಗಸೆ ತುಂಬಿದ
ಕಣ್ಣೀರ ಹನಿಗಳು
ಮಿನುಗುವ ಚುಕ್ಕೆಗಳಾಗಿ
ನನ್ನ ನಗೆಸುವವರೆಗು
ಗೂಡು ಬಿಟ್ಟೋದ ಹಕ್ಕಿ
ತನ್ನ ಮನೆ-ಮರಿಗಳ ನೆನೆದು
ಮತ್ತೆ ಮರಳುವವರೆಗು
ನಾನು ನಿಶ್ಯಬ್ಧನಾಗಿರುತ್ತೇನೆ, ಶಬ್ದಗಳಾಚೆಯ ಸತ್ಯವಾಗಿರುತ್ತೇನೆ
ಯಾಕೆಂದರೆ ಗಿಬ್ರಾನ್
ಹೇಳುತ್ತಾನೆ –
ನಿನ್ನನ್ನು ಅಳೆದು ನೋಡುವ,
ಸಂಶಯಿಸುವ,
ತೂಕ ಮಾಡುವವರಿಂದ ದೂರವಿರು
No comments:
Post a Comment