Total Pageviews

Wednesday, April 8, 2015

ಒಲವೆತ್ತಿ ತೋರುವಾ ದೀಪ

     “You can go on changing the outer for lives and you will never be satisfied. Unless the inner changes, the outer can never be perfect” ಎಷ್ಟೊಂದು ಆಳವಾದ ಚಿಂತನೆ ಅಲ್ಲವೆ? ಕಾಂತಾವರ ಭಾಷಣ ಮುಗಿಸಿ, ಮಾರ್ಚ್ 28 ಸಾಯಂಕಾಲ ಮೂಡಬಿದರೆಯ ಆಳ್ವಾಸ್ ಗ್ರೌಂಡಿನಲ್ಲಿ, ಮುಳುಗಿದ ಸೂರ್ಯನ ಮಬ್ಬುಗತ್ತಲಲ್ಲಿ ಮೈ ಹಾಸಿಕೊಂಡು ಸುಮ್ಮನೆ ಕುಳಿತು ಎಷ್ಟೆಲ್ಲ ವಿಚಾರಿಸುತ್ತಿದ್ದೆ. ಪಕ್ಕದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಘಂಟೆಗಳ ನಾದ, ಕಾಂತಾವರ ಭಾಷಣದಿಂದ ಹದಗೆಡುತ್ತಿದ್ದ ನನ್ನ ಧ್ವನಿ ಪೆಟ್ಟಿಗೆ, ಮೆಲ್ಲಗೆ ಏರುತ್ತಿದ್ದ ಜ್ವರ, ಮತ್ತೆ ಬೆಳಗಾದರೆ 12 ಗಂಟೆಗಳ ನಿರಂತರ ಡ್ರೈವಿಂಗ್. ಚಾರ್ಮಾಡಿಯ ಆಕರ್ಷಣಿಯೇ ಅದು. ನನ್ನ ಪಾಲಿನ ಜೀವಜಾಲ ಇದು. ಯಾವಾಗಲೂ ನನ್ನ ಕನಸುಗಳಲ್ಲಿ ಪಿಸುಗುಡುತ್ತದೆ ‘Be like an alone peak high in the sky’.
          ಬೆಂಗಳೂರಿಗೆ ಬಂದು ಎಪ್ರಿಲ್ 1 ರಾತ್ರಿ ಮತ್ತೆ ಪಯಣ. ಅನಾರೋಗ್ಯದಿಂದ ಕುಸಿದು ಬೀಳುವ ಭಯ. ಆದರೆ ಬೀಳುವುದಾದರೆ ಬಸ್ಸಿನಲ್ಲೇ ಬೀಳೋಣ, ಗುರಿ ಮಾತ್ರ ತಲುಪೋಣ. ಎರಡು ದಿನಜೋಳಿಗೆಯಲ್ಲಿ ಮಲಗಿದರಾಯಿತು ಎಂದುಕೊಂಡವನಿಗೆ ಆಘಾತಕಾರಿ ಸುದ್ದಿ. ಇನ್ನೂ ಊರು ಮುಟ್ಟಿರಲಿಲ್ಲ ಗೆಳೆಯ ಬಸೀರ್ ಹೃದಯಾಘಾತದಿಂದ ಸೋಲಾಪುರದ ಅಶ್ವಿನಿ ಆಸ್ಪತ್ರೆಗೆ ದಾಖಲಾದ. ಸ್ಥಿತಿ ಸೂಕ್ಷ್ಮವಾಗಿರುವುದರಿಂದ ತಕ್ಷಣ ನಿರ್ಧಾರ ತಿಳಿಸಲು ವೈದ್ಯರ ಆದೇಶ. ಆದರೆ ನಿರ್ಧಾರ ಮಾತ್ರ ಆತ ಮತ್ತು ಆತನ ಬಂಧುಗಳ ಆದಿಯಾಗಿ ನನ್ನ ಮೇಲೆ ಹಾಕಿದರು. ನಾನು ದೇವರಿಗೆ ಋಣಿಯಾಗಿದ್ದೆ. ಖಬ್ರಸ್ಥಾನದಲ್ಲಿ ಇಳಿಯಬೇಕಾಗಿದ್ದ ಗೆಳೆಯ ಉಸಿರಾಡುತ್ತ ಆಸ್ಪತ್ರೆಯಲ್ಲಿದ್ದನಲ್ಲ, ಇದಕ್ಕಿಂತಲು ಭಾಗ್ಯ ಬೇಕೆ.
ತಕ್ಷಣಕ್ಕೆ ಚಡಚಣದಿಂದ ಸೋಲಾಪುರಕ್ಕೆ ಹೋದ ನಾವು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ಈತನ ಹೃದಯದ ಸುತ್ತ, ನಮ್ಮ ಹಂಬಲದ ಹುತ್ತ. ನಲವತ್ತು ಸಾವಿರ ರೂಪಾಯಿಯ ಒಂದೇ ಇಂಜೆಕ್ಷನ್ ಆತನನ್ನು ಬದುಕಿಸಿತ್ತು. ದೇಹ ಮತ್ತೆ ಆಪರೇಶನ್ಗೆ ಸಿದ್ಧವಾಗಬೇಕಿತ್ತು. ಏಪ್ರಿಲ್ 4 ನಸುಕಿನ 4.30 ಕ್ಕೆ ಮತ್ತೆ ಸೋಲಾಪುರಕ್ಕೆ. ಆತನನ್ನು ಸಮಾಧಾನಿಸಿ, ಧೈರ್ಯದಿಂದ ಆತನ ಶರೀರವನ್ನು ಆಪರೇಷನ್ಗೆ ಅಣಿಗೊಳಿಸಿ ನಾವು ಲೋಕಾಪುರದ ಬಳಿಯ ಬಾಗೋಜಿಕೊಪ್ಪಕ್ಕೆ ಬರುತ್ತಿದ್ದೆವು. ಕಾರು ಈಗ ಸದಾ 100 ವೇಗದಲ್ಲಿಯೇ, ಮೈಯೊಳಗಿನ ಜ್ವರ ಮಾತ್ರ ಅದಕ್ಕು ಸ್ವಲ್ಪ ಕಡಿಮೆ.
ಬಾಗೋಜಿಕೊಪ್ಪಕ್ಕೆ ಹೋಗುವುದರೊಳಗಾಗಿ ಸಾಕಷ್ಟು ತಡವಾಗಿತ್ತು. ಊರೆಲ್ಲ ಹಬ್ಬದ ವಾತಾವರಣ.
    ‘ಹಚ್ಚೇವು ಕನ್ನಡದ ದೀಪ,
    ಕರುನಾಡ ದೀಪ, ಸಿರಿನುಡಿಯ ದೀಪ
    ಒಲವೆತ್ತಿ ತೋರುವಾ ದೀಪ
ಎಂದು ಹಾಡಿದ ಕವಿಯ ಊರಿನ ರಸ್ತೆಗಳ ತುಂಬ ನಾನು ದೀಪಗಳ ಹುಡುಕುತ್ತಿದ್ದೆ. ಆದರೆ ಕಾಲಿಟ್ಟಲ್ಲಿ ತಿಪ್ಪೆಯ ಗುಂಡಿಗಳೇ ಸಿಕ್ಕವು. ರೈತಾಪಿ ಊರು, ಕಿರಿದಾದ ರಸ್ತೆಗಳು, ಸುಡು ಬಿಸಿಲು ಮತ್ತೇನು ಬೇಕು ರೋಗ ಉಲ್ಬಣಿಸಲು.
ಸಭೆಯ ಕ್ಷಮೆ ಕೇಳಿ ನಾನು ವೇದಿಕೆ ಹತ್ತಿದೆ. ಆದರೆ ನಮ್ಮ ಹಳ್ಳಿಗರ ಹೃದಯ ಸಂಸ್ಕಾರವೇ ಭಿನ್ನ. ತಕ್ಷಣವೇ ನನ್ನ ಪಕ್ಕ ಇನ್ನೊಂದು ಕುರ್ಚಿ ಹಾಕಿ ನನ್ನ ಹೆಂಡತಿಯನ್ನು ಪಕ್ಕದಲ್ಲೇ ಕೂಡಿಸಿದರು. ನಾನೊಂದು ಕ್ಷಣ, ನನ್ನ ಎಂಥ ಪ್ರಮಾದವನ್ನು ಹಳ್ಳಿಗರು ಸರಿಪಡಿಸಿದರೆಂದು ಒಳಗೊಳಗೇ ಖುಷಿ ಪಡುತ್ತಿದ್ದೆ.
ಗಾಂಧಿಯನ್ನು ನಾನೊಬ್ಬನೇ ಬರೆದು ತೀರಿಸಲಿಲ್ಲ. ಅದರಲ್ಲೂಗಾಂಧಿ: ಮುಗಿಯದ ಅಧ್ಯಾಯಎಂಬ ನಿಗಧಿತ ಅವಧಿಯ ರಚನೆಗೆ ನನ್ನ ಹೆಂಡತಿ ಪದ್ಮಶ್ರೀಯ ಕೊಡುಗೆ ಅಪಾರ. ಮುಖವಾಣಿಯಾಗಿಯೇ ಬಂದ ಕೃತಿಯನ್ನು ಒಂದು ಲ್ಯಾಪ್ಟಾಪ್ ಸಹಾಯದಿಂದ ಬರೆದು ತೀರಿಸಿದವಳು ಪದ್ಮಶ್ರೀ. ಕೊನೆಯ ಭಾಗಕ್ಕೆ ಅಷ್ಟೇ ಮುತುವರ್ಜಿಯಿಂದ ಕೈಹಚ್ಚಿದವಳು ನಮ್ಮ ಗೌರಿ. ಹೀಗಾಗಿ ವೇದಿಕೆಯಲ್ಲಿ ನನ್ನ ಪಕ್ಕದ ಖುರ್ಚಿ ಅವಳದಾಗಿರಬೇಕಾದುದು ಅಪೇಕ್ಷಿತ. ಪ್ರಶಸ್ತಿ ಹೀಗೆ ಸಹಕರಿಸಿದವರಿಗೆಲ್ಲ ಸಮರ್ಪಿತ.
ಸಣ್ಣ, ಸರಳ ಸಮಾರಂಭ. ಮೈಸೂರು ಪೇಟದ ನನ್ನ ಮೊದಲ ಸನ್ಮಾನ ಇರಬಹುದೇನೊ. 10,0000/- ರೂಗಳ ನಗದು. ದೊಡ್ಡ ಮೊತ್ತ. ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರೊ. ಅಂಗಡಿಯವರೂ ಪ್ರಶಸ್ತಿಯನ್ನು ನನ್ನೊಂದಿಗೆ ಹಂಚಿಕೊಂಡಿದ್ದರಿಂದ ಅರ್ಧ ಮೊತ್ತ ನಮ್ಮದಾಗಿತ್ತು. ಆದರೆ ಶ್ರಮಕ್ಕೆ ಸಂಧ ಗೌರವಕ್ಕಾಗಿ ಸಂತಸವಿತ್ತು. ಮನದ ಮೂಲೆಯಲ್ಲಿ ಷಣ್ಮುಖಶಿಯೋಗಿಗಳ ಸಾಲೊಂದು ತೇಲುತ್ತಿತ್ತು
ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ
ಮನ ಅಚ್ಚೊತ್ತಿದಂತಿರಬೇಕು ಕಾಯಕದಲ್ಲಿ
ಇಂತೀ ಗುಣವುಳ್ಳಾತನೇ ಸಾಧಕ ನೋಡಾ ಅಖಂಡೇಶ್ವರಾ.
 
          ವೇದಿಕೆ ಇಳಿಯುತ್ತಲೇ ಗೆಳೆಯನ ಆಪರೇಷನ್ ಯಶಸ್ಸಾದ ಸುದ್ಧಿ. ಇತ್ತ ಸಮಾರಂಭ ಸಂರ್ಪೂಗೊಂಡ ಸಮಾಧಾನ. ಯರಗಟ್ಟಿಯಡೆಗೆ ನನ್ನ ಕಾರು. ಆನಂತರದ್ದು ನಿರಾಳ ನಿದ್ರೆ.
   ಬೆಂಗಳೂರಲ್ಲಿ ಸಂಭ್ರಮಕ್ಕೆ ಹಕ್ಕುದಾರರ್ಯಾರು? ಎಂದಾಗ ನೆನಪಾದದ್ದು ನನ್ನ ಕಮೀಷನರ್ ಆದ ಬಿ.ಜಿ.ನಂದಕುಮಾರ. ಯಾವುದೇ ಪುಟ್ಟ ಸಾಧನೆಯನ್ನೂ ಬೆಟ್ಟವನ್ನು ನೋಡುವ ಬೆರಗಿನಿಂದ ವಿಕ್ಷಿಸಿ ಪ್ರೋತ್ಸಾಹಿಸುವ ದೊಡ್ಡಗುಣ ಅವರದು. ಕಾರ್ಯಕ್ರಮದ ದಿನವೂ ನನಗೆ ಅಭಿನಂದನೆಗಳನ್ನು ಹೇಳಿ ಆಶಿರ್ವದಿಸಿದ್ದರು. ಇನ್ನೊಂದು ಅರ್ಥದಲ್ಲಿ ಬೆಂಗಳೂರಿನ ನಮ್ಮ ಅಸ್ತಿತ್ವಕ್ಕೆ ಕಾರಣನೇ ಅವರು. ಹೀಗಾಗಿ ಪ್ರಶಸ್ತಿ ಫಲಕಗಳೊಂದಿಗೆ ನೇರ ಹೋಗಿದ್ದು ಅವರ ಬಳಿಯೇ. ಕಾಂತಾವರದ ಸ್ಮರಣಿಕೆಯನ್ನು ಹಾಗೂ ಗಾಂಧಿಯ ಪ್ರಶಸ್ತಿ ಫಲಕವನ್ನು ನೋಡಿ ನನ್ನನ್ನು ಅಭಿನಂದಿಸುವಾಗ ಅವರ ಕಣ್ಣೊಳಗೆ ಅಭಿಮಾನವಿತ್ತು.
          ಹೃದಯಧನವಿದ್ದವರಿಗೆ ಮಣ್ಣೂ ಹೊನ್ನಾಗಿ ಕಾಣುತ್ತದೆ.
     ಇಷ್ಟು ಸಾಕು, ಬಾರಿಯ ಬೆಸಿಗೆ ಬೆಂಕಿ ಮಳೆಗರಿಯುತ್ತಿದೆ, ನೆರಳಿನ ಕೈಗಳನ್ನು ಕಾಯ್ದುಕೊಳ್ಳಿ.



No comments:

Post a Comment