ಗೋಜಲು ಗೋಜಲಾಗಿಹ
ಜೀವನದ ದಾರದುಂಡೆಯ
ಬಿಡಿಸುತಿರೆ,
ಗಡಸು ಗಡಸಾಗುತಿಹುದು
ಎಳೆ ಎಳೆಯ ಹೆಕ್ಕಿ
ಎಳೆಯುತಿರೆ ಸುಕ್ಕು
ಎಳೆ ಕೊನೆಯ ಸಿಕ್ಕದೇ
ಸುಕ್ಕು ಸುಕ್ಕಾಗುತಿದೆ
ಮನಸು ಕಕ್ಕಾಬಿಕ್ಕಿಯಾಗಿದೆ ('ಒಡಂಬಡಿಕೆ', ಡಾ.ಪವಾರ)
2002 ರಲ್ಲಿ ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ,
ಒಂದು ವರ್ಷದ ಮಟ್ಟಿಗೆ ಉಪನ್ಯಾಸಕನಾಗಿದ್ದೆ. ಅದೇಕೊ ವ್ಯಾವಹಾರಸ್ಥ, ವ್ಯಾಕರಣಬದ್ಧ ಆ ಜನಗಳಿಗೂ, ಅಲ್ಲಿಯ
ಮೈ ನವಿರೇಳಿಸುವ ನಿಸರ್ಗ ಸೌಂದರ್ಯಕ್ಕೂ, ಬೆವರಿಳಿಸುವ ಊರಿನಲ್ಲಿ ಬಿಸಿ ಬಿಸಿಯಾದ ನನ್ನ ಆಲೋಚನಾ ಕ್ರಮಕ್ಕೂ
ಹೊಂದಾಣಿಕೆಯಾಗದೆ ಕವಳಾ ಹಾಕುವ ಸುಖಕ್ಕಾಗಿ, ಕಾಲೇಜು ಬಿಟ್ಟೇನು ಕವಳ(ಅವಳ?) ಬಿಡಲಾಗದು ಎಂದು ರಾಜಿನಾಮೆ
ಬಿಸಾಕಿ, ಹೊರಟು ಬಂದದ್ದಾಯಿತು. ಆದರೆ ಅವುಗಳ ನೆನಪಿನಲ್ಲಿಯೇ ಅದೆಷ್ಟೋ ಕಾಲ ನೂಕಿದ್ದಾಯಿತು.
ಈ ಭಾಗ ಎಂದರೆ ಶುರುವಾಗುತ್ತದೆ ನನ್ನ ಕತೆ ಉಜಿರೆ,
ಗುರುವಾಯುವಿನಕೆರೆ, ಮುಡಬಿದ್ರೆ, ಕುಂದಾಪುರ, ಭಟ್ಕಳ, ಸಿದ್ದಾಪುರ ಮತ್ತು ಶಿರಸಿ. ಹಳೆಯ ಮುಸ್ಲಿಂ
ಗೆಳತಿಯೊಬ್ಬಳು ಭಟ್ಕಳದಿಂದ ಬಂದು ಶಿರಸಿಯಲ್ಲಿ ಸಂಸಾರ ಹೂಡಿದಳು, ಎಳೆಯ ಗೆಳತಿಯೊಬ್ಬಳು ನರಗುಂದದಿಂದ
ಬಂದು ಮುಡಬಿದ್ರೆಯಲ್ಲಿ ಬದುಕು ತೆಯ್ದಳು, ಶಿಷ್ಯನೊಬ್ಬ ಸಿದ್ದಾಪುರದಲ್ಲಿ ಸಂಸಾರದ ಮಠ ಕಟ್ಟಿಕೊಂಡ,
ಪ್ರೀತಿಯ ಗೆಳೆಯನೊಬ್ಬ ಭಟ್ಕಳದಲ್ಲಿ ಮಡದಿಯೊಂದಿಗೆ ಸಂಸ್ಥೆಯೊಂದಕ್ಕೆ ಬದುಕನ್ನೇ ಸಮರ್ಪಿಸಿಕೊಂಡ.
ಈಗೊಬ್ಬ ಇದ್ದಾನೆ ಅಲೆಮಾರಿಯಂತೆ, ಈ ಮಧ್ಯ ಸಾವಿನೊಂದಿಗೆ ಸೆಣಸಾಡುತ್ತ ನಾನು ಮತ್ತೆ ಮತ್ತೆ ಮುಡಬಿದ್ರೆಗೆ
ಬಂದದ್ದೇ ಒಂದು ಕಂತೆ.
No comments:
Post a Comment