ಈ
ಹೊಸ ವರ್ಷ ಗುರುವಾರ(ವೈಕುಂಠ ಏಕಾದಶಿ)ದಂದು ಪ್ರಾರಂಭವಾಗುತ್ತಿರುವುದು ನನಗೆ ಏನೆಲ್ಲ ಯೋಚನೆಗೆ ಹಚ್ಚಿದೆ.
ಪ್ರಾರಂಭ ಎಂಬ ಶಬ್ಧದ ನೆರಳಿನಲ್ಲಿಯೇ ಮುಕ್ತಾಯ ಎಂಬ ಪದವೂ ಇಣುಕು ಹಾಕುತ್ತಿರುತ್ತದೆ. ಹೀಗಾಗಿಯೇ
2015 ರ ಈ ಗುರುವಾರ ನನಗೆ ಖಾಸಗಿಯಾಗಿ ತುಂಬಾ ಔಚಿತ್ಯಪೂರ್ಣ. ಸಾಮಾನ್ಯವಾಗಿ ಗುರುವಾರವೆನ್ನುವುದೇ
ನಾನು ಅತ್ಯಂತ ಅಂತರ್ಮುಖಿಯಾಗುವ, ನನ್ನ ದೈವದ ಆರಾಧನೆಗೆ ತೊಡಗುವ, ನಿರ್ಧಾರಗಳನ್ನು ಗಟ್ಟಿಗೊಳಿಸಿಕೊಳ್ಳುವ
ಒಂದು ಮಹತ್ವದ ದಿನ.
ಹಾಗಾದರೆ ವಾರದ ಎಲ್ಲಾ ದಿನಗಳಿಗಿಂತ ಭಿನ್ನವಾದುದೇನಾದರೂ
ಈ ದಿನದೊಂದಿಗೆ ಇದೆಯೇ? ಎನ್ನುವ ಬುದ್ಧಿಯಾಧಾರಿತ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಆದರೆ ಈ ಬದುಕು
ಎನ್ನುವುದು ಮತ್ತೇನೂ ಅಲ್ಲ, ಹಲವು ಅಚಲ ನಂಬಿಕೆಗಳ ಮಹಾ ಸಂಗಮ ಎನ್ನುವುದಾದರೆ, ಅಂತಹ ಹಲವು ನಂಬಿಕೆಗಳಲ್ಲಿ
ಒಂದು ಈ ನನ್ನ ಗುರುವಾರ.
ಹೆಣ್ಣ
ಹೆಳಲಂತೆ, ತಲೆಯ ಮೇಲಿನ ಸಿಂಬೆಯಂತೆ, ಹಗ್ಗದಂತೆ, ಬದುಕನ್ನೂ ಆಗಾಗ ವಾರದಲ್ಲೊಮ್ಮೆಯಾದರೂ ಹುರಿಗೊಳಿಸಿಕೊಳ್ಳತ್ತಲೇ
ಇರಬೇಕಾಗುತ್ತದೆ. ಇಲ್ಲದೇ ಹೋದರೆ ಅದರ ಬಂಧ ಸಡಿಲುಗೊಳ್ಳುತ್ತದೆ, ಅಂದ ಹಾಳಾಗುತ್ತದೆ. ಬದುಕಿನ ಇಂಥ
ಬಂಧ ಮತ್ತು ಅಂದಗೊಳಿಸಿಕೊಳ್ಳುವ ಕಾರ್ಯಕ್ಕಾಗಿ ನಾನು ಕಾಯ್ದಿರಿಸಿಕೊಂಡ ದಿನವೇ ಗುರುವಾರ. ಆಗ ಬೇಡಿಕೊಳ್ಳುವುದಿಷ್ಟೆ-“ಗುರುವೇ,
ಹಸಿವೆಯಿಂದ ಹುಲ್ಲು ಮೇಯಲು ಹೋದ ಹಸು-ಹಕ್ಕಿ-ದನಗಳೆಲ್ಲ ಗೂಡು ಸೇರಲಿ, ಅಂಬಿಗನ ಕೈ ಜಾರಿ ದಿಕ್ಕು
ತಪ್ಪಿದ ದೋಣಿಗಳೆಲ್ಲ ನೆಮ್ಮದಿಯ ದಡ ಸೇರಲಿ, ಹಸುಳೆ-ಹೆಣ್ಣು-ಮುಪ್ಪಿನ ಮನಸುಗಳೆಲ್ಲ ಸುರಕ್ಷಿತ ಮರ್ಯಾದೆಯ
ಮನೆ ಸೇರಲಿ, ಬಾಗಿ ಬದುಕುವ ಯುಕ್ತಿ ಇರಲಿ, ಹಿಡಿದ ಕೈ ಕೊನೆ ಹಾಯಿಸುವ ಶಕ್ತಿ ಬರಲಿ, ಈ ದೇಶದ ಸಂಸ್ಕøತಿಯ
ಬಗೆಗೆ ಭಕ್ತಿ ಇರಲಿ”.
ನನ್ನ
ಪಾಲಿಗೆ ಈ ಪಾರ್ಥನೆಯೊಂದಿಗೆ, ಗುರುವಾರದಂದು 2015 ರ ವರ್ಷ ಪ್ರಾರಂಭವಾಗಿದೆ. ಈ ವರ್ಷ ಗುರುವಾರದಂದು
ಪ್ರಾರಂಭವಾಗಿದೆ ಎನ್ನುವುದೇ ನನ್ನ ಇಡೀ ಕುಟುಂಬದ ಚೈತನ್ಯವನ್ನು ನೂರ್ಮಡಿಗೊಳಿಸಿದೆ. ಬಹಳಷ್ಟು ಉತ್ತಮ
ಬೆಳವಣಿಗೆಗಳ ನಿರೀಕ್ಷೆಯಿದೆ. ಈ ಭಾಗ್ಯ ನಿಮ್ಮದೂ ಆಗಲಿ ಎನ್ನುವುದೇ ಭಗವಂತನಲ್ಲಿ ನನ್ನ ಕಳಕಳಿಯ ಪ್ರಾರ್ಥನೆ.
ಪಥಭ್ರಷ್ಟವಾಗಬಾರದು
ಬದುಕು, ಅದರ ಪ್ರತಿ ಹೆಜ್ಜೆಯೂ ಬದುಕಿನ ಪ್ರತಿಕ್ಷಣವನ್ನು ಪೂಜ್ಯನೀಯಗೊಳಿಸಬೇಕು ಎಂಬ ಎಚ್ಚರಿಕೆಯನ್ನು ಹೇರಿಕೊಳ್ಳುವಗೊಸುಗ ಪ್ರತಿವರ್ಷದ ಕೊನೆಗೆ ಹೆತ್ತವರೊಂದಿಗೆ
ಒಂದಿಷ್ಟು ಸುತ್ತಾಡುವುದು ನನ್ನ ವಾಡಿಕೆ. ಸಾಧ್ಯವಾದಷ್ಟು ಮೌನ, ತಪ್ಪು-ಒಪ್ಪುಗಳ ಮೆಲುಕು, ಎಲ್ಲ
ಮನಸ್ಸಿನೊಳಗೆ ನಡೆಯುತ್ತಲೇ ಇರುತ್ತದೆ. ಈ ಬಾರಿಯ ನನ್ನ ಆಯ್ಕೆ ನನ್ನ ತಾಯಿಯ ತವರು.
ಅವಳು
ನನ್ನ ಹೆರಿಗೆಗೂ ಮುಂಚೆ ಹರಕೆ ಹೊತ್ತ ಎಲ್ಲ ದೇವರು-ದೈವಗಳನ್ನು ಸಂದರ್ಶಿಸಿ ತಲೆಬಾಗಿಸಿ ಬಂದೆ. ಅದರೊಳಗೊಂದು
ಅಪರೂಪದ ದೇವತೆ “ಚಂದ್ರವ್ವ ತಾಯಿ”. ದೂರದ ನಮ್ಮ ಅಜ್ಜಿಯೇ ಈ ದೇವಾಲಯದ ಪೂಜಾ-ಕೈಂಕರ್ಯಗಳನ್ನೆಲ್ಲ
ಹಲವು ವರ್ಷಗಳಿಂದ ನಡೆಯಿಸಿಕೊಂಡು ಬಂದಿದ್ದು ಅವಳು ಮುಪ್ಪಿನಿಂದ ಜರ್ಜರಿತಳಾದ ದಿನಗಳಿಂದ ಈ ದೇವಾಲಯ
ಹೆಚ್ಚ-ಕಡಿಮೆ ಮುಚ್ಚಿಯೇ ಹೋಗಿತ್ತು. ದೇವತೆ ಅನಾಥೆಯಾಗಿದ್ದಳು. ಖುಷಿಯಾಯಿತು, ಈಗ ಮತ್ತೆ “ಚಂದ್ರವ್ವ
ತಾಯಿ”ಯ ಗುಡಿಯ ಬಾಗಿಲು ತೆರೆದು, ದೀಪ ಉರಿದು ಅವಳ ಚಿತ್ಕಳೆ ಹರಕೆಯ ತಾಯಂದಿರಿಗೆ ಲಭ್ಯವಾಗುತ್ತಿದೆ.
ಇಲ್ಲಿಂದ
ನೇರ ತೆಲಸಂಗ ಬಂಗಲೆಗೆ. ಅದೆಂದರೆ ನನಗೆ ಕೇದಿಗೆ, ಹಳೆಯ ಬ್ರಿಟಿಷ್ ಕಾಲದ ಬಂಗ್ಲೊ, ಮಲ್ಲಯ್ಯನ ಬನ
ಹಾಗೂ ಆ ಆಲೆಮನೆ. ನಾನು ಚಿಕ್ಕವನಿದ್ದಾಗ ವರ್ಷದುದ್ದಕ್ಕೂ ಪುಕ್, ಪುಕ್, ಪುಕ್ ಎಂದು ಲಾಲಿಹಾಡುವ
ಒಂದು ಆಲೆಮನೆ ಇಲ್ಲಿರುತ್ತಿತ್ತು. ಅದರ ಸದ್ದು ಸರ ರಾತ್ರಿವರೆಗೂ ಕೇಳುತ್ತ ನಮ್ಮನ್ನು ನೆಮ್ಮದಿಯ
ನಿದ್ರೆಗೆ ಜಾರಿಸುತ್ತಿತ್ತು. ಅದು ಈಗ ಬಿದ್ದು ಹೋಗಿರಬಹುದು ಎಂಬ ಭಯದಲ್ಲಿದ್ದ ನನಗೆ, ಒಂದು ಕ್ಷಣ
ಕಾರು ನಿಲ್ಲಿಸಿ ಯಾಕೆ ತಪಾಸಣೆ ಮಾಡಬಾರದು? ಎಂದು ಕುತೂಹಲ ಕೆರಳಿ ಹುಡುಕಿದರೆ, ಮುಳ್ಳು ಕಂಟಿಗಳ ಮಧ್ಯ
ಕಳೆದುಹೋದ ಆಲೆಮನೆ ಸಿಕ್ಕೇ ಬಿಟ್ಟಿತು. ನನ್ನ ಬಾಲ್ಯ ಸಲುಹಿದ, ಲಾಲಿ ಹಾಡಿದ, ಹಾಲು-ಬೆಲ್ಲ ತಿನ್ನಿಸಿದ
ತಾಯಿಯದು. ಎಂಥ ಖುಷಿ ಅಂತೀರಾ.
ಅಂದಹಾಗೆ,
ತೆಲಸಂಗದ ನನ್ನ ಅಜ್ಜಿಯ ಮನೆಗೆ ದೊಡ್ಡಮನೆ ಎಂದೇ ಕರೆದು ವಾಡಿಕೆ. ಮಾತಿಗೆ ತಪ್ಪದ ಮನುಷ್ಯರೆಲ್ಲರೂ
ಬಾಳಿ ಬದುಕಿದ ಮನೆ. ಈಗ ಆ ದೊಡ್ಡ ಮನೆಯ ಮುಂದೆ ನನ್ನ ಪುಟ್ಟ ಮಗಳ ಗೆಜ್ಜೆ ಸದ್ದಿನ ಕೆಲವು ಗಂಟೆ.
ಕಳೆದುಹೋದ
2014 ರ ಡಿಸೆಂಬರ್ ತಿಂಗಳ 24 ರಿಂದ 31 ರ ವರೆಗೂ ನಿರಂತರ ಚಟುವಟಿಕೆಗಳು. ಜಮಖಂಡಿಯ ಜನಪದ ಕಲಾ ಮಹೋತ್ಸವ
ಮಗಿಸಿಕೊಂಡು ನಾನು ಹೋದದ್ದು ‘ಗಡಿನಾಡ ಕಹಳೆ’ ಪತ್ರಿಕೆಯ ಬಿಡುಗಡೆ ಸಮಾರಂಭದ ಪೂರ್ವಭಾವಿ ಸಭೆಗಾಗಿ.
ಈ ಮಾರ್ಗ ಮಧ್ಯದಲ್ಲಿ ಸಿಕ್ಕವರು ಕರ್ನಾಟಕದ ಕೃಷ್ಣಾ ತೀರದ ಅಭಿಜಾತ ಕಲೆಯಾದ “ಪಾರಿಜಾತ”ದ ಅತ್ಯಂತ
ಹಿರಿಯ ಮತ್ತು ಕೊನೆಯ ಕೊಂಡಿಯಾದ ಕಲಾವಿದ ಶ್ರೀ ವಿಠಲರಾವ್ ಟಕ್ಕಳಕಿ.
ನಾಯಿದ
ಜನಾಂಗದ 89ರ ವಯಸ್ಸಿನ ಈ ಹಿರಿಯ ಹೋದ ವರ್ಷ ತೀರಿ ಹೋದ ನಮ್ಮ ದೊಡ್ಡಪ್ಪನ ಗುರು, ನಿವ್ರ್ಯಸನಿ. ಪಾರಿಜಾತವನ್ನು
ಮೈಕ್ ಇಲ್ಲದೆ, ಲೈಟ್ ಇಲ್ಲದೇ ಇದ್ದ ದಿನಗಳಲ್ಲಿ ಎರಡು ದಿನಗಳವರೆಗೆ ಪ್ರದರ್ಶಿಸಿದ ನಟಶ್ರೇಷ್ಟ. ಇಂದಿಗೂ
ಲೀಟರ್ಗಳಷ್ಟು ಹಾಲು ಕುಡಿಯಬಲ್ಲರು. ಪುರಸ್ಕಾರ, ಪ್ರಶಸ್ತಿ, ಪದವಿಗಳಿಗೆ ಸೊಪ್ಪು ಹಾಕದೇ ತಮ್ಮ ಸುಂದರ
15 ಎಕರೆಗಳ ತೋಟದಲ್ಲಿ ದೊಡ್ಡ ಕುಟುಂಬದೊಂದಿಗೆ ಬಾಳುತ್ತಿರುವ ಕೃಷ್ಣಸಂಸಾರಿ. ಅವರೊಂದಿಗೆ ನನ್ನ ತಂದೆಯನ್ನು
ಸೇರಿಸಿ ಒಂದು ಇಡೀ ಸಂಜೆಯನ್ನು ಸಂಭ್ರಮಿಸಿದೆ.
ಇಲ್ಲಿಂದ
ನೇರ ಖೋಜನವಾಡಿಗೆ. ನಮ್ಮ ಲಕ್ಷ್ಮಣನ ಸಿಂಧೂರಿನಿಂದ ಕೂಗಳತೆಯಲ್ಲಿರುವ ಜತ್ತ ತಾಲೂಕಿನ ಪುಟ್ಟ ಹಳ್ಳಿ.
ಸುತ್ತಲೂ ಎಲೆ-ಬಾಳೆ-ದ್ರಾಕ್ಷಿ-ದಾಳಿಂಬೆ ತೋಟಗಳುಳ್ಳ ತಣ್ಣನೆಯ ಊರು. ‘ಖೋಜನವಾಡಿ’ ಹೆಸರೇ ಮೋಜಿನದು.
ಒಂದು ಕಾಲಕ್ಕೆ ಅದ್ಯಾವ ಜಗತ್ಪ್ರಸಿದ್ಧ ‘ಖೋಜಾ’ ಇಲ್ಲಿ ವಾಸವಾಗಿದ್ದನೋ, ಇದು ಖೋಜನವಾಡಿಯಾಯಿತು.
ಅಲ್ಲಿ ನಮ್ಮ ಮಠಪತಿ ಮನೆತನದ ಅತ್ಯಂತ ಹಿರಿಯ ಜೀವ, ಹಣ್ಣು ಹಾಗಲಕಾಯಿಯಂಥ ಹೆಣ್ಣು. ವಯಸ್ಸು ನೂರು.
ಈಗ ಸ್ವಲ್ಪ ಮರುಳು ಮರುಳಾಗಿ ಮಾತಾಡುತ್ತಾಳೆ. ಎಂದೇ ಭೇಟಿಯಾದರೂ ಸಾವಿರ ವರ್ಷ ಇವಳೊಂದಿಗಿದ್ದೆ ಎನ್ನುವ
ಭಾವ ತರಿಸುವ ಜೀವ ಅದು. ಇವಳು ಸಿಕ್ಕರೆ ಸಾಕು, ನಾನು ಮಾಡುವ ಒಂದೇ ಕೆಲಸ ಸುಮ್ಮನೆ ಅವಳನ್ನು ಅವಲತ್ತುಕೊಂಡು
ಮಲಗಿ ಬಿಡುವುದು. ಅವಳ ಸ್ಪರ್ಶದಿಂದ ಮರುಜನ್ಮ ತಾಳಿದ ಸುಖಪಡುವುದು.
ಆನಂತರ
ಒಂದು ರಾತ್ರಿ ತಂದೆಯೊಂದಿಗೆ ‘ಜೋಳಿಗೆ’ಯಲ್ಲಿ. ಯಾವ ನೆಲದಲ್ಲಿ ಅವರು ತಮ್ಮ ನಲವತ್ತು ವರ್ಷಗಳ ಸೇವೆಯ
ಬದುಕನ್ನು ಕಳೆದೂ ಬೇರುಗಡಿತರಾಗಿದ್ದರೋ, ಅದೇ ನೆಲದಲ್ಲಿ ಈಗ ಅವರಿಗೆ ನೆಮ್ಮದಿಯ ಉಸಿರು. ತಮ್ಮಂತ್ಯಕ್ಕೆ
ಇಲ್ಲೊಂದಿಷ್ಟು ನೆಲೆ ಸಿಕ್ಕಿದೆ ಎಂಬ ಭರವಸೆ. ಬಹುತೇಕ ಅವರಿಗೆ ಈ ಕಟ್ಟಡದ ರಚನೆ ಬಹಳವಾಗಿ ಇಷ್ಟವಾಯಿತು.
ಆದರೆ ಹಿಡಿದ ದಾರಿಯನ್ನು ಕೊನೆ ಹಾಯಿಸಲು ನನಗೆ ಬಹಳ ಹಿಂಸೆ-ಕಷ್ಟವಾಯಿತು. ಈಗ ನಾನು ನಿರಾಳ, ಉರುಳಿಹೋದ
ವರ್ಷದಂತೆ.
28
ಡಿಸೆಂಬರ್, ಸವದತ್ತಿಯಲ್ಲಿ ನಾನು ಕೃತಿಯೊಂದನ್ನು (ಹೃದಯ ಕೃಷಿ, ವೈ.ಎಂ.ಯಾಕೊಳ್ಳಿ) ಲೋಕಾರ್ಪಣೆ ಮಾಡಿ,
ಮಾತನಾಡಬೇಕಿತ್ತು. ಇದೇ ದಿನ ಬೆಳಗಾವಿಯ ಶ್ರೀ ಬಸವರಾಜ ಜಗಜಿಂಪಿ, ಅವರಿಗೆ ‘ಚೆನ್ನಶ್ರೀ’ ಪ್ರಶಸ್ತಿ
ಪ್ರಧಾನ ಸಮಾರಂಭ. ನನ್ನೊಂದಿಗೆ ಅನೇಕ ಹಿರಿಯ ನ್ಯಾಯಾಧೀಶರು, ಧಾರವಾಡದ ಕರ್ನಾಟಕ ಸಾಹಿತ್ಯ ಪರಿಷತ್ತು
ಅಧ್ಯಕ್ಷ ಶ್ರೀ.ಲಿಂಗರಾಜ ಅಂಗಡಿ, ಶಾಸಕ ಮಾಮನಿ, ಮಠಾಧೀಶರು ಹಾಗೂ ಜನರಿಂದ ಕಿಕ್ಕಿರಿದ ಸಭಾಂಗಣ, ಪ್ರೀತಿಯ
ಆರ್ಶೀವಾದ.
ಹಗಲು-ರಾತ್ರಿ
ಎನ್ನದೆ ಹೀಗೆ ಒಂದು ವಾರ, 2800 ಕಿಲೋಮಿಟರ್ಗಳ, ಏಳು ಜಿಲ್ಲೆ ಮತ್ತು ಎರಡು ರಾಜ್ಯಗಳ ಸುತ್ತಲಿನ
ನನ್ನ ಡ್ರೈವಿಂಗ್, ದೇಹಕ್ಕೆ ಎಲ್ಲಿಲ್ಲದ ದಣಿವು. ಅಲ್ಲಲ್ಲಿ ಭಾಷಣಗಳು. ಸೋತು ದುರ್ಗದಲ್ಲಿ ಮಲಗಿಬಿಟ್ಟೆ.
ಒಂದೇ ತಾಸು, ಆಫೀಸಿನ ಕಾರ್ಯಭಾರ ನೆನಪಾಗಿ ಮತ್ತೆ ಡ್ರೈವಿಂಗ್, ಊಹೂಂ, ಒಪ್ಪಲಿಲ್ಲ ದೇಹ ಮತ್ತೆ ತುಮಕೂರಲ್ಲಿ
ಮೂರು ಗಂಟೆ ನಿದ್ರೆ. ಬೆಂಗಳೂರಿಗೆ ಬಂದಾಗ, ಬೆಳಗಿನ 10.30. ಹೆಣಭಾರ ಕೆಲಸ ಬಿದ್ದಿದ್ದರೂ ಆಫೀಸಿಗೆ
ಹೋಗಲು ಇಬ್ಬರಿಗೂ ಮನಸ್ಸಿಲ್ಲ, ಭಂಡ ಧೈರ್ಯ, 2014ರ ದೀರ್ಘ ನೆಮ್ಮದಿಯ ನಿದ್ರೆ.
ವರ್ಷ
ಹೊಸದೋ! ಗೊತ್ತಿಲ್ಲ ನನಗೆ ನಿಮಗೆ ಶುಭವಾಗಲಿ.
No comments:
Post a Comment