Total Pageviews

Wednesday, January 14, 2015

ಜಾಢಮಾಲಿಯ ಜೀವ ಕೇಳುವುದಿಲ್ಲ!!



ಸಂಕ್ರಮಣದ ಶುಭಾಷಯಗಳು

     ಒಂದು ವರ್ಷವಷ್ಟೇ, ಮರಗಳಲ್ಲೀಗ ಎಷ್ಟೊಂದು ಹೂಗಳು!!! ಇತ್ತೀಚಿನ ಪಯಣದಲ್ಲಿ ನನ್ನ ತಂದೆ ಹಂಚಿಕೊಂಡ ದೋಹೆಯ ಎರಡು ಸಾಲುಗಳು ನೆನಪಾದವು-
“ಮಾಲಿ ಆವತ ದೇಖಕರ ಕಲಿಯಾ ಕರೀ ಪುಕಾರ
ಫೂಲೇಂ ಫೂಲೇಂ ಚುನಲಿಯೆ ಕಾಲಿ ಹಮಾರಿ ಬಾರ”
ಯಾರವೋ, ಈ ಸಾಲುಗಳು, ಸೊಗಸು ನಮ್ಮದಾಗಿದೆಯೆಲ್ಲ ಅಷ್ಟು ಸಂತಸ ಸಾಕು. ಪದ್ಯ ಹೇಳುತ್ತಿದೆ-
“ಮಾಲೆಗಾರ ಬರುವುದ ಕಂಡು ಕರೆಯುತ್ತವೆ ಹೂಗಳು
ಹೂಗಳಾಯ್ದ ಹೊರಟ ಮೇಲೆ ನಾಳೆ ನಮ್ಮ ಪಾಳಿಯೆಂದು ಮಲಗುತ್ತವೆ ಜೀವಗಳು”
ಛೀ! ನನಗೇನು ಈ ಭಾಷಾಂತರ ಇಷ್ಟವಾಗಲಿಲ್ಲ. ಹಿಂದಿ, ಉರ್ದುವನ್ನು ಕನ್ನಡಕ್ಕೆ ಭಾಷಾಂತರಿಸುವುದೂ ಅಷ್ಟೇ, ಹಿಜಿಡಾ ಒಬ್ಬನನ್ನು ಶುದ್ಧ ಗಂಡೋ-ಹೆಣ್ಣೋ ಮಾಡಲು ಹೋಗುವುದೂ ಅಷ್ಟೇ.
    ಹಿಂದಿಯಲ್ಲಿ ಉದ್ಯಾನವನ್ನು ನೋಡಿಕೊಳ್ಳುವವನನ್ನು ಜಾಡಮಾಲಿಯೆಂದು ಕರೆಯುತ್ತಾರೆ. ಎಷ್ಟೊಂದು ಹೆಣ್ಣು-ಹೆಣ್ಣಾಗಿದೆ ಈ ಪದ. ಆದರೆ ಅದರೊಳಗಿನ ಜೀವ ಹೆಣ್ಣು ಆಗಿರಬಹುದು ಅಥವಾ ಗಂಡು ಆಗಬಹುದು. ಲಿಂಗದ ಹಂಗು ಹರಿದುಕೊಂಡ ಈ ಪದದಲ್ಲಿ ನೀವು ಯಾರನ್ನೂ ಹುದುಗಿಸಿಡಬಹುದು.
      ಅಂದಹಾಗೆ, ಈ ಪದವನ್ನು ನಾನು ಪಿಯುಸಿಯಲ್ಲಿದ್ದಾಗ ಕೇಳಿದ್ದೆ. ಕೆಲವು ಅಯೋಗ್ಯ ಗೆಳೆಯರೊಂದಿಗೆ ಸೇರಿಕೊಂಡು ಬಾಲಕ ಲಾಲ್‍ಬಹದ್ದೂರ್ ಶಾಸ್ತ್ರೀ ಹೂ ಕದಿಯಲು ಹೋಗುತ್ತಾನೆ. ತಕ್ಷಣ ಜಾಢಮಾಲಿ’ಬರುತ್ತಿರುವುದನ್ನು ಕಂಡು ಗೆಳೆಯರೆಲ್ಲ ಓಡಿ ಹೋಗುತ್ತಾರೆ. ಬಾಲಕ ಶಾಸ್ತ್ರೀ ಆತನ ಕೈಗೆ ಸಿಕ್ಕಿ ಬೀಳುತ್ತಾನೆ. ಬಾಲಕನ ಕೆನೆಗೆ ಎರಡು ಬಾರಿಸಿ ಜಾಢಮಾಲಿ ಹೂ ಕಸಿದುಕೊಳ್ಳುತ್ತಾನೆ. ಅಳುತ್ತಾ ಬಾಲಕ ಕೇಳುತ್ತಾನೆ, ನನ್ನ ಹೆತ್ತವರು ಸತ್ತು ಹೋಗಿದ್ದಾರೆ ಎಂದು ತಾನೇ ನೀನು ಹೊಡಿಯುವುದು?” ಹೀಗೆಂದ ಬಾಲಕನ ಕೆನೆಗೆ ಜಾಢಮಾಲಿ ಮತ್ತೆರಡು ಬಿಗಿಯುತ್ತಾನೆ, ಮತ್ತೆ ಹೇಳುತ್ತಾನೆ, “ಹೆತ್ತವರು ಸತ್ತು ಹೋಗಿದ್ದರೆ, ಹೇಳುವವರಿಲ್ಲ, ಕೇಳುವವರಿಲ್ಲ ಎಂದು ಹದ್ದು ಮೀರಬಾರದು. ನಿಮ್ಮಂತವರು ಉಳಿದವರಿಗೂ ಮಾದರಿಯಾಗಿ ಬದುಕಬೇಕು, ಸದ ಎಚ್ಚರದಿಂದಿರಬೇಕು.”
     ಒಂದೇ ಘಟನೆ, ಒಂದೇ ಹೊಡೆತ ಶಾಸ್ತ್ರೀಯ ಬದುಕನ್ನೇ ಬದಲಿಸಿತು. ಆತನನ್ನು ಇತಿಹಾಸ ಪುರುಷನನ್ನಾಗಿಸಿತು.
     ಈಗ ನನ್ನ ಪ್ರಶ್ನೆ, ನಿತ್ಯ ಅತ್ಯಂತ ಕೋಮುಲವಾದ ಹೂಗಳನ್ನೆತುವ ಜಾಢಮಾಲಿ ಅಷ್ಟೇ ಮೃದು ಮತ್ತು ಕೋಮುಲವಾದ ಬಾಲಕನ ಕೆನ್ನೆಗೆ ಬಾರಿಸಬೇಕಾದರೆ ಅವನಲ್ಲಿ ಅದೆಂಥ ಜೀವನ ಕಾಳಜಿ ಇರಬಹುದು! ಸಸಿ ಸಾಕುವ ಹಸನಾದ ಕೈಗಳವು. ಅಂತೆಯೆ ನಿಮಗೊಂದು ಕೋರಿಕೆ. ಎದೆಯಲ್ಲ ನಂದನವನವಾಗಿಸಿಕೊಂಡು, ಅಪರೂಪದ ಹೂ-ಹಣ್ಣು-ಗಿಡ ನೆಟ್ಟ ನೀವು ಅಷ್ಟೇ ಪ್ರೀತಿಯ ಜಾಢಮಾಲಿಯನ್ನು ಕಳೆದುಕೊಳ್ಳಬೇಡಿ. ಕಳೆದುಕೊಂಡರೆ ವನ ಒಣಗಿ, ನೆಲ ಪರದೆಸಿಯಾಗುತ್ತದೆ.
      ಅಂದಹಾಗೆ, ನಾನು ನನ್ನ ಜೋಳಿಗೆಯ ಸುತ್ತ 25 ಗಿಡ ನೆಟ್ಟು ಇಂದಿಗೆ ಒಂದು ವರ್ಷ. ಗೆಳೆಯೊಬ್ಬನ ಬಿರುಮಾತಿಗೆ ಮುನಿಸಿಕೊಂಡು ನಮ್ಮ ಜಾಢಮಾಲಿ ಶರಣಪ್ಪ ಜೋಳಿಗೆ ಬಿಟ್ಟು ಹೋದ. ಅಪರೂಪದ ಮನುಷ್ಯ ಆತ. ಆತನ ತಾಯಿಯ ಕಾಲದಿಂದಲೂ ನನ್ನ ಮನೆತನಕ್ಕೆ ಅವರ ಕೈ ಆಸರೆ ಇದೆ. ತುಂಬಾ ಸೌಮ್ಯ, ಆದರೆ ಸಿಡಿದರೆ ಮರಳಿ ಬಾರದ ಕಿಡಿ. ಸಿಟ್ಟಿನಲ್ಲಿ ಹೊರಟುಹೋದ ಜಾಢಮಾಲಿ ಸಾಯಂಕಾಲ ಶೆರೆ ಕುಡಿದು ನನಗೂ, ನನ್ನ ಹೆಂಡತಿಗೂ ಗಿಡಗಳಿಗಾಗಿ, ಅವುಗಳ ರಕ್ಷಣೆಗಾಗಿ ಅವಲತ್ತುಕೊಳ್ಳುತ್ತಿದ್ದ. ಸ್ವಲ್ಪ ಹೆಚ್ಚಾದರೆ ನಶೆ ಅಳುತ್ತಿದ್ದ. ಯಾಕೆಂದರೆ, ಆತನದು ಜಾಢಮಾಲಿಯ ಜೀವ. ಸಸಿಯಾಗಿದ್ದವುಗಳನ್ನು, ಈಗ ಮರವಾಗಿ ನಿಲ್ಲಿಸಿದ್ದಾನೆ. ನಿತ್ಯ ನಲವತ್ತು ಕೊಡ ನೀರು ಎತ್ತಿ ಹಾಕಿದ್ದಾನೆ. ಇರುವೆ-ಕುರಿ-ದನಗಳ ಬಾಯಿಯಿಂದ ಅವುಗಳನ್ನು ರಕ್ಷಿಸಿ ತಾಯಿಯಾಗಿದ್ದಾನೆ, ‘ಜೋಳಿಗೆಗೆ ನೆರಳು ಹಾಸಿದ್ದಾನೆ.
      ಅದೇನು ಮೈ-ಮರೆವೊ, ಕಾರ್ಯದ ಒತ್ತಡದಲ್ಲಿ ನಾನು ಆತನ ಅಳಲನ್ನು ಕೇಳಿಸಕೊಳ್ಳಲಿಲ್ಲ. ಜಾಢಮಾಲಿ ನನಗಾಗಿ ಕಾಯಲಿಲ್ಲ. ಆದರೆ ದಿನ ನಸುಕಿನಲ್ಲಿ ಎದ್ದು, ನಾಲ್ಕು ಕಿ.ಮೀಗಳ ದಾರಿ ಕ್ರಮಿಸಿ ಹೋಗಿ, ನಲವತ್ತು ಕೊಡ ನೀರು ಹಾಕಿ ತಣ್ಣಗೆ ಕುಳಿತು, ಹೂ ಹರಿದು ಹೊಸ್ತಲಿಗೆ ಇಟ್ಟು ಬರಲಾರಂಭಿಸಿದ. ಯಾಕೆಂದರೆ ಆತ ಬೆಳೆಸಿದ್ದು 25 ಮರಗಳನಲ್ಲ, ಮಕ್ಕಳನ್ನು. ನೂರಾರು ವರ್ಷ ಯಾರದೇ ಕುಲ-ಧರ್ಮ-ದೇಶ ಕೇಳದೇ ನೆಮ್ಮದಿ ನೆರಳು ನೀಡುವ ಮರವೆಂಬ ಮಕ್ಕಳನ್ನು, ಇಂಥ ಜೀವಗಳನ್ನು ತನ್ನ ಸ್ವಪ್ರತಿಷ್ಠೆಗಾಗಿ ಬಲಿ ಕೊಡುವಷ್ಟು ಭೀಷಣವಲ್ಲ ಜಾಢಮಾಲಿಯ ಜೀವ.
     ಇಂಥವವನ್ನು ಕಳೆದುಕೊಳ್ಳಲಾದೀತೆ? ಆತನ ಮನೆಯವರಿಗೂ ಹೋಗಿ, ಗೆಳೆಯನ ಪರವಾಗಿ ನಾನೇ ಕ್ಷಮೆಯನ್ನು ಕೇಳಿ, ರಮಿಸಿ ಜೋಳಿಗೆಯಂಗಳಕೆ ಬಿಟ್ಟು ಬಂದೆ.

       ದಿನಾಂಕ 11 ಜೀವವೊಂದರ ಹುಟ್ಟು ಹಬ್ಬ. ಬಿಜಾಪುರದಲ್ಲಿದ್ದ ನಾವು ಬಸ್ ಸ್ಟ್ಯಾಂಡ್ ಹಿಂದೆಯೇ ಇರುವ ಸೂಫಿಯೊಬ್ಬನ ಸಮಾಧಿಗೆ ಸಂದರ್ಶಿಸಿ, ಪ್ರಾರ್ಥಿಸಿ, 12 ನೇ ತಾರೀಖಿನ ಸ್ವಾಮಿ ವಿವೇಕಾನಂದರ 152 ನೇ ಹುಟ್ಟು ಹಬ್ಬಕ್ಕೆ ಸಿದ್ಧ. 2015 ರ ಮೊದಲ ಅರ್ಥಪೂರ್ಣ ಕಾರ್ಯಕ್ರಮ, ಬಿಜಾಪುರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ.
      ನನ್ನೊಂದಿಗೆ ವೇದಿಕೆಯ ಮೇಲೆ ಮಾಜಿ ವಿಧಾನ ಪರಿಷತ್ತ್ ಸದಸ್ಯರು ಮತ್ತು ಕಾಂಗ್ರೇಸ್‍ನ ಹಿರಿಯ ಮುಖಂಡರು ಆದ ಶ್ರೀಮಾನ್ ಜಿದ್ದಿಯವರು. 72 ವರ್ಷದ, ಕಾಳಿ ಆರಾಧನೆಯ ಹಿರಿಯರು ಮತ್ತು ನನ್ನ ತಂದೆಯ ಸ್ನೇಹಿತರು, ವಿ.ಎಸ್. ಆಚಾರ್ಯ, ಎನ್.ಆರ್.ತಂಗಾ ರಂಥ ಸಭ್ಯ ರಾಜಕಾರಣಿಗಳ ಒಡನಾಡಿಗಳಾದ ಜಿದ್ದಿ ಅವರದು ಆರ್ಕಷಕ ವ್ಯಕ್ತಿತ್ವ. ಇನ್ನೊಬ್ಬ ಸ್ನೇಹಿತ ಬಿಜೆಪಿಯ ಮಾಜಿ ಹುರಿಯಾಳು ಶ್ರೀಯುತ ಕವಟಗಿ. ಸ್ಥಳೀಯ ಎನ್.ಜಿ.ಓ ಮುಖ್ಯಸ್ಥ, ಪ್ರೊ.ಸತ್ಯಪ್ಪ ಹಡಪದ, ಪ್ರಾಂಶುಪಾಲರಾದ ಜಾಧವ ಹಾಗೂ ಮತ್ತಿತ್ತರು. 
      ನನಗಿಂತಲೂ ಮುಂಚೆ ಹತ್ತು ನಿಮಿಷಗಳ ಕಾಲ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪಾಲನೆ ಕುರಿತಾಗಿ ಪದ್ದಿಯ ಭಾಷಣ. ಆನಂತರದಲ್ಲಿ 50 ನಿಮಿಷ ಸುದೀರ್ಘ ನನ್ನ ಮಾತಿನ ಸುರಿಮಳೆ. ತಲೆಯ ತುಂಬಾ ನಾನು ಕಳೆದುಕೊಂಡ, ನನ್ನ ಗುರು ಎಂ.ಆರ್.ಜಿ ಯವರ ಕೊನೆಯ ಕೊಡುಗೆ 'ಶ್ರೀ ರಾಮಕೃಷ್ಣ ವಚನ ವೇದ ಭಾಗ-1' ಹಳೆಯ ಪುಸ್ತಕ ಸುತ್ತುತ್ತಿತ್ತು. ಎಷ್ಟೊಂದು ನೋವಿತ್ತು ಎದೆಯಲ್ಲಿ, ಅದೆಷ್ಟೋ ವರ್ಷ ಕಾಯ್ದಿಟ್ಟುಕೊಂಡ ಆ ಪುಸ್ತಕದೊಂದಿಗೆ ನನ್ನ ಆತ್ಮಸಂವಾದವಿತ್ತು. 
       ವಿವೇಕಾನಂದರದು ಅಲ್ಪಾವಧಿಯ ಜೀವನ, ಆದರೆ ದೀರ್ಘಾವಧಿಯ ಬಾಳು. ಇಂಥ ಬಾಳು ಎಲ್ಲರದೂ ಆಗಬೇಕೆಂದು ಹಂಬಲಿಸಿದ ಅವರು ಅರಿವನ್ನೇ ಅಡವಿಟ್ಟು, ಬದುಕಿನಲ್ಲಿ ದಿಕ್ಕೆಟ್ಟು ಹೊಸ ಬದುಕಿಗಾಗಿ ಏನು ಮಾಡಬೇಕು? ಎಂದು ಪ್ರಶ್ನಿಸುವವರಿಗೆ ಒಂದು ಸುಂದರ ಕಥೆ ಹೇಳಿದ್ದಾರೆ. ಆ ಕಥೆ ಹೀಗಿದೆ -–
     "ಅಪರಾಧಿಯೊಬ್ಬ ಒಂದು ರಾತ್ರಿ ಬಂದು ಜೀಸಸ್‍ರನ್ನು ಭೇಟಿಯಾದ. ಹೊಸ ಬದುಕು ಪಡೆಯಬೇಕಾದರೆ ಏನು ಮಾಡಬೇಕು? ಎಂಬುದು ಆತನ ಪ್ರಶ್ನೆಯಾಗಿತ್ತು. ಆದರೆ ಜೀಸಸ್‍ರಿಗೆ ಏನು ಮಾಡಬಾರದು ಎನ್ನುವುದರತ್ತ ಗಮನವಿತ್ತಲ್ಲ, ಹೀಗಾಗಿ ಅವರು "ನಿಕೋಡಾಮಸ್, ನೀನು ಸುಳ್ಳು ಹೇಳಬಾರದು, ನಿಕೋಡಾಮಸ್ ನೀನು ಮೋಸ ಮಾಡಬಾರದು, ನಿಕೋಡಾಮಸ್ ನೀನು ವ್ಯಭಿಚಾರ ಮಾಡಬಾರದು, ನಿಕೋಡಾಮಸ್ ನೀನು ಸೆರೆ ಕುಡಿಯಬಾರದು" ಎಂದೆಲ್ಲ ಹೇಳಲಿಲ್ಲ. ಇವೆಲ್ಲವುಗಳ ಬದಲಾಗಿ ತೀರ ಭಿನ್ನವಾದ ಒಂದು ವಿಚಾರವನ್ನು ಜೀಸಸ್ ಹೇಳಿದರು "ನಿಕೋಡಾಮಸ್ Be born again" ಅಂದರೆ "ನೀವು ಪುನರ್ ಜನಿಸಬೇಕು" ಎಂದರ್ಥ.”


No comments:

Post a Comment