Total Pageviews

Thursday, January 22, 2015

ಆತುರ ಬದುಕಿನ ಅಂದಗೆಡಿಸುವುದೇ?

       ಇಂಥ ಯುಗದಲ್ಲಿ ನಾನು ಹೀಗೆ ಇದ್ದೀನಲ್ಲ!! ಎಂದು ಕೆಲವೊಮ್ಮೆ ಬೇಸರವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಟಿ.ವಿ ಮೋಹವಿಲ್ಲ, ಕಂಪ್ಯೂಟರ್, ಟ್ಯಾಬ್, ಮೋಬೈಲ್‍ಗಳ ಮಹಾಸಂತೆಯಾದ ಬೆಂಗಳೂರಿನಲ್ಲಿದ್ದೂ ಒಂದು ಕ್ಷಣವೂ ಅವು ನನ್ನನ್ನು ಆಳಲಿಲ್ಲ. Apps ಗಳು ಮಾಡುತ್ತಿರುವ ಭಾವನಾತ್ಮಕ Laps ಗಳ ಕುರಿತು Information and Intelligence ವಿಭಾಗದ ಗೆಳೆಯ ಶ್ರೀನಿವಾಸ ಕೊಡುವ ಮಾಹಿತಿಗಳನ್ನು ನೋಡಿದಾಗಲಂತೂ ಛಳಿಗಾಲದಲ್ಲೂ ಬೆವರಿಳಿಯುತ್ತದೆ.
      ತಿಳಿಯುವ, ತಿಳಿಯಬೇಕಾದ ಸುದ್ದಿ ತಿಳಿದೇ ತಿಳಿಯುತ್ತದೆ. ಸ್ವಲ್ಪ ತಡವಷ್ಟೆ. ಅರ್ಥಹೀನ ಆತುರ ಬದುಕಿನ ಅಂದಗೆಡಿಸುವುದಿಲ್ಲವಲ್ಲ ಅಷ್ಟು ಸಾಕು.
   ಈ ಪೀಠಿಕೆಯ ಉದ್ದೇಶ ಬೆಳಗಾವಿಯ ಹಿರಿಯ ಸಾಹಿತಿ-ಮಿತ್ರ ಶ್ರೀ ರವಿ ಉಪಾಧ್ಯಾ ತೀರಿ ಹೋದ ಸುದ್ದಿ ಸ್ವಲ್ಪ ತಡವಾಗಿ ತಿಳಿಯಿತಲ್ಲ ಎನ್ನುವುದು. ಹೀಗಾಗಿ ನನ್ನ ಬಗ್ಗೆ ನನಗೆ ಅಸಡ್ಡೆ. ನನ್ನ ಆರಂಭದ ಬರಹದ ಆ ದಿನಗಳು, ಉಗ್ರ ಭಾಷಣಗಳು, ಸಭಾ ಮಧ್ಯದಿಂದ ಎಲ್ಲ ಚಪ್ಪಾಳೆಗಳು ನಿಂತರೂ ನಿಲ್ಲದ ಒಂದು ಚಪ್ಪಾಳೆ. ಮಧ್ಯ ಮಧ್ಯ ಆ ವ್ಯಕ್ತಿ ಏಳುವುದು, ಪ್ರೋತ್ಸಾಹಪೂರಿತ ಒಂದು ಅಭಿಪ್ರಾಯದಿಂದ ನನ್ನ ವಾದಗಳಿಗೆ ಬೆಂಬಲ, ನನ್ನ ಬಗೆಗೆ ಸದಾ ಹಂಬಲ, ನಾನು ಈ ಹಿರಿಯರ ಪಾಲಿನ ಮಹಾನ್ ಲೇಖಕ. ಹೀಗೆ ನನ್ನ ಸಾತ್ವಿಕ ಸೊಕ್ಕನ್ನು ಪೋಷಿಸಿ ಬೆಳೆಸಿದವರು ರವಿ ಉಪಾಧ್ಯಾ. ಅಂದಹಾಗೆ, ಅವರ ಚಪ್ಪಾಳೆ ಯಾಕೆ ನಿಲ್ಲುತ್ತಿರಲಿಲ್ಲ ಎಂದು ನಾ ನಿಮಗೆ ಹೇಳಲೇಬೇಕಲ್ಲವೆ? ಪಾಶ್ರ್ವವಾಯು ಪೀಡಿತರಾಗಿದ್ದ ರವಿ ಉಪಾಧ್ಯಾ ಅವರ ಒಂದು ಕೈ ಅವರ ಸ್ವಾಧಿನದಲ್ಲಿರಲಿಲ್ಲ. ಅದೇ ಕೈಯನ್ನು ಹಿಡಿದು ತಿಂಗಳುಗಳ ಹಿಂದೆ ಕುಲುಕಿಸಿದ ನೆನಪು. ಆದರೆ ಅದು ಈಗ ಮಣ್ಣಿಗೊ, ಬೆಂಕಿಗೊ. ಒಟ್ಟಾರೆ ಮತ್ತೆ ಸ್ಪರ್ಶವಂತೂ ಸಾಧ್ಯವಿಲ್ಲ.
        ಸಾವನ್ನು ಭಯಂಕರವಾಗಿ ನಾನು ಶಪಿಸುವುದು ಈ ಕಾರಣಕ್ಕಾಗಿ. ಅದು ಎಲ್ಲವನ್ನೂ ಅಳುಕಿಸಿ ಹಾಕುವುದಕ್ಕೆ ಸದಾ ಹವಣಿಸುತ್ತದೆ. 
     ಬೆಂಗಳೂರಿಗೆ ಬಂದು ಇಂದಿಗೆ ಸರಿಯಾಗಿ ಐದು ತಿಂಗಳು (21.08.2014). ನನ್ನ ರಾಜಾಜಿನಗರವನ್ನು ಬಿಟ್ಟು ಜಯನಗರದ ಕಡೆಗೆ ಹೋಗಲು ಬಯಸಿರಲಿಲ್ಲ. ಅದಕ್ಕೊಂದು ವೈಯಕ್ತಿಕ ಕಾರಣ, ಆದರೆ ಈ ಬಾರಿ ನುಣುಚಿಕೊಳ್ಳುವಂತಿರಲಿಲ್ಲ. ಅಲ್ಲಿಯದೇ ಒಂದು ಸ್ಟಾರ್ ಹೋಟೆಲಿನಲ್ಲಿ ನಾನು ಎರಡು ರಾತ್ರಿ ಉಳಿದುಕೊಳ್ಳಬೇಕಿತ್ತು, ಮತ್ತೆರೆಡು ದಿನಗಳು, ಅದೇ ಜಯನಗರದಲ್ಲಿ, ಸ್ವಲ್ಪ ಹಿಂದೆ ಗಾಂಧಿನಗರದ ಹೋಟೆಲ್ ಒಂದರಲ್ಲಿ ಸಮಾರಂಭಕ್ಕೆ ಹಾಜರಾಗಬೇಕಾಯಿತು.
      ನನ್ನೊಂದಿಗೆ ಚಿತ್ರನಟ ಸೋಮಶೇಖರ್ ರಾವ್, ಹಿರಿಯ ಸಾಹಿತಿ ಹರಿಹರಪ್ರಿಯ, ಝಾನ್ಸಿಯ ಗೆಳೆಯ ವಾಸುದೇವ ನಾಡಿಗ, ಕಾದಂಬರಿಕಾರ ರಮೇಶಬಾಬು, ಮೆಲ್ಬೊರ್ನಿನ್ ಕನ್ನಡ ಸಂಘದ ಸೆಕ್ರೆಟರಿ ಗಿರಿರಾಜ, ರಿಗ್ರೇಟ್ ಅಯ್ಯರ್ ಹೀಗೆ ಎಲ್ಲರೂ ಸೇರಿದ ಕಾರಣ ಹಿರಿಯ ಸಾಹಿತಿ “ಆಗುಂಬೆ ನಟರಾಜ್”. 
      ಇವರು ಪ್ರವಾಸ ಕಥನಗಳ ಮಹಾಪರ್ವತ. ಇವರಷ್ಟು ದೇಶ ಸುತ್ತಿದವರು, ಸ್ಥಳ ಪುರಾಣ, ಐತಿಹ್ಯ, ಇತಿಹಾಸಗಳ ಕುರಿತು ತಲೆಕೆಡಿಸಿಕೊಂಡವರು ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಇದಕ್ಕಾಗಿಯೂ ಇವರು ನನ್ನನ್ನು ಕಾಡಿದವರಲ್ಲ. ಬದಲಾಗಿ ನನ್ನ ತಲೆಕೆಡಿಸಿದ್ದು ಅವರ ಸರಳತೆ.
ಕಳೆದ ಅನೇಕ ವರ್ಷಗಳಿಂದ ಇವರು ನನಗೆ ಪುಸ್ತಕಗಳನ್ನು ಕಳುಹಿಸುತ್ತಲೇ ಇದ್ದರು. ಇಂದಿನ ಈ ಕಾರ್ಯಕ್ರಮದವರೆಗೆ ಇವರು ಯಾರು? ಎಂಥವರು? ಹೇಗಿರಬಹುದು? ಒಂದೂ ತಿಳಿಯದು ನನಗೆ. ಅವರೇ ಫೋನಾಯಿಸಿ ತಾವು ಕಳುಹಿಸಿದ ತಮ್ಮ ಪುಸ್ತಕ ಕುರಿತು ನನ್ನ ಅಭಿಪ್ರಾಯ ಕೇಳುತ್ತಿದ್ದರು. ಅವರು ಹಾಗೆ ಫೋನ್ ಮಾಡಿದಾಗಲೆಲ್ಲ ನನಗೆ ನಾಚಿಕೆಯಾಗಿ, ನನ್ನನ್ನು ನಾನೇ ಕ್ಷಮಿಸಿಕೊಳ್ಳದವನಾಗುತ್ತಿದ್ದೆ. ಈ ಮಧ್ಯದ ಒಂದು ಪ್ರಸಂಗ. ಬೆಂಗಳೂರಿನ ಆರಂಭಿಕ ದಿನಗಳು. ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಒಪ್ಪಿಕೊಂಡಿದ್ದ ಸಿದ್ದಲಿಂಗಯ್ಯನವರು, ಕೊನೆಯ ಕ್ಷಣ ಹಾರ್ಟ್ ತೊಂದರೆಯಿಂದ ಕಾರ್ಯಕ್ರಮಕ್ಕೆ ಬರದಂತಾಯಿತು.
       ಇದು ಇಕ್ಕಟ್ಟಿನ ಸಂದರ್ಭ. ಸಾಹಿತಿಗಳ ಈಗೋ ಹಾಗೂ ಪ್ರತಿಷ್ಠೆಯ ಪ್ರಶ್ನೆಯೂ ಕೂಡಾ. ಯಾರದೋ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ಪ್ರಕಟವಾಗಿ ಸಿದ್ದಗೊಂಡ ಕಾರ್ಯಕ್ರಮಕ್ಕೆ, ಇನ್ಯಾರೋ ಸರಳವಾಗಿ ಒಪ್ಪಲಾರರು. ಅತ್ತ ನನಗೆ ನಮ್ಮ ಸಾಂಸ್ಕøತಿಕ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರ ಒತ್ತಡ. ಒಂದು ಕ್ಷಣ ಆಗುಂಬೆ ನಟರಾಜರಿಗೆ ಫೋನಾಯಿಸಿದೆ. ಎಂಥ ಸರಳಜೀವಿ ಅಂತೀರಾ? ಒಂದಿಷ್ಟೂ ಬೇಸರಿಸಿಕೊಳ್ಳದೆ 75ರ ಈ  ಜೀವ, ಜಯನಗರದ ತಮ್ಮ ಮನೆಯಿಂದ ಬಿ.ಎಂ.ಟಿ.ಸಿ ಬಸ್ಸು ಹತ್ತಿಕೊಂಡು ನಮ್ಮ ಕಾರಿರುವಲ್ಲಿ ಬಂದೇ ಬಿಡಬೇಕೆ!
     ಇಲ್ಲಿಂದ ನನ್ನ ಸಾಂಗತ್ಯವನ್ನೂ ಬಯಸದೆ ಬೇಲೂರಿಗೆ ಹೋಗಿ ನಮ್ಮ ಬಳಗವನ್ನೆಲ್ಲ ರಂಜಿಸಿ, ತಮ್ಮ ಇಡೀ ಸಾಹಿತ್ಯದ ಒಂದು ಕಟ್ಟನ್ನು ನಮ್ಮ ಗ್ರಂಥಾಲಯಕ್ಕೆ ನೀಡಿ ಬಂದರು. ಆಗ ನನಗೆ ಗೊತ್ತಾದುದು ಮನುಷ್ಯ ಹೇಗೆ ದೊಡ್ಡವನಾಗುತ್ತಾನೆ ಎಂದು. ಈ ಹಿರಿಯ ಜೀವದ ಒಂದು ಸರಳ ಪರಿಚಯ ನಿಮಗಾಗಿ, ನಿಮ್ಮ ಕಾಡುವ ಪಾಠವಾಗಿ -
      “ಆಗುಂಬೆ ನಟರಾಜ್ (ಜನನ 1939) ಹಿರಿಯರು, ಆಗುಂಬೆಯವರು, ಬೆಂಗಳೂರಿನಲ್ಲಿ ಬಾಲ್ಯ, ವಿದ್ಯಾಭ್ಯಾಸ. ಕೆನರಾ ಬ್ಯಾಂಕಿನಲ್ಲಿ ಉದ್ಯೋಗ. ಐತಿಹಾಸಿಕ ಸ್ಥಳಗಳ ಅನ್ವೇಷಣೆ ಆಗುಂಬೆ ನಟರಾಜರ ಹವ್ಯಾಸ. ದೆಹಲಿಯ ಬಲ್ಲೀಮರಾನ್‍ನಲ್ಲಿರುವ ಮಿರ್ಜಾ ಗಾಲಿಬ್‍ನ ಮನೆ, ‘ದರ್ಬಾರಿ ಕಾನಡ’,  ‘ಮಿಯಾ ಸಾರಂಗ್’ನಂಥ ಅಪೂರ್ವ ರಾಗಗಳ ಸಂಯೋಜಕ ತಾನ್‍ಸೇನರ ಹುಟ್ಟೂರು ಗ್ವಾಲಿಯರ್ ಸಮೀಪದ ಬೇಹಾಟ್, ಕಲ್ಕತ್ತಾದಲ್ಲಿರುವ ಟಿಪ್ಪುಸುಲ್ತಾನರ ವಂಶದವರ ಮನೆ, ದೆಹಲಿಯ ಬಜಾರ್‍ಸೀತಾರಾಮ್‍ನಲ್ಲಿ ಅನಾದರಕ್ಕೀಡಾಗಿರುವ ಕಮಲಾ ನೆಹರೂ ಅವರ ಮನೆ, ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ ಮುಂಬಯಿಯ ಮೊದಲ ಸ್ವಾತಂತ್ರ್ಯ ಸೇನಾನಿ ರಾಮ ಕಾಮತಿಯ ಮನೆ - ಇಲ್ಲಿಗೆಲ್ಲ ನಮ್ಮ ಆಗುಂಬೆ ನಟರಾಜ ಭೇಟಿ ನೀಡಿದ್ದಾರೆ. ಇವರ ಮಹತ್ವದ ಕೃತಿಗಳು ‘ಇದು ಸ್ಪೈನ್! ಇದು ಇಸ್ಪಾನಾ!’, ‘ಇದು ಬರ್ಲಿನ್! ಇದು ಜರ್ಮೇನಿಯಾ!’, ‘ಅಮ್‍ಸ್ಟರ್‍ಡ್ಯಾಮ್‍ನಿಂದ ಅವಿಗ್ನಾನ್‍ಕ್ಕೆ’, ‘ಅಥೆನ್ಸ್‍ನಿಂದ ಇಸ್ತಾನ್‍ಬುಲ್‍ಗೆ’ ಮತ್ತು ‘ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’.”
      ಈ ಸಮಾರಂಭದ ದಿನ ಆಗುಂಬೆ ನಟರಾಜ್‍ರ ದಾಂಪತ್ಯಕ್ಕೆ 45 ವರ್ಷದ ಪ್ರಾಯ. ಇಂದು ಅವರ ಮೂರು ಕೃತಿಗಳ ಲೋಕಾರ್ಪಣೆ. ಇದರಲ್ಲಿ ಅತ್ಯಂತ ಮುಖ್ಯವಾಗಿ ಅವರ “ಸಾಹಿತ್ಯ ಮತ್ತು ಪ್ರಜ್ಞೆ” ನೀವು ಓದಲೇಬೇಕು.
      ಇಲ್ಲಿಂದ ನೇರವಾಗಿ “ರವಿ ಬೆಳಗೆರೆ ಕಾಫಿ & ಬುಕ್” ಶಾಪ್‍ಗೆ. ನನ್ನ “ಫಕೀರ” ಮಾರಾಟಗೊಂಡ ಅಂಗಡಿ ಅದು. ಅಲ್ಲಿಂದ “ಅಂಕಿತ ಬುಕ್ ಸ್ಟಾಲ್”ಗೆ. ಬರಹಗಾರನಾದುದಕ್ಕೆ ಅಭಿಮಾನಪಟ್ಟುಕೊಳ್ಳುವಷ್ಟು ನನ್ನ ಸಾಹಿತ್ಯವನ್ನು, “ಅಂಕಿತ”ದ ಒಡೆಯರಾದ ಪ್ರಕಾಶ ಕಂಬತ್ತಳ್ಳಿ ಹಾಗೂ ಶ್ರೀಮತಿ ಕಂಬತ್ತಳ್ಳಿಯವರು ಹೇಳಿ ಹೇಳಿ ಮಾರಾಟಮಾಡಿದ್ದಾರೆ. ಅದರಲ್ಲೂ ಶ್ರೀಮತಿ ಕಂಬತ್ತಳ್ಳಿ ಅವರ ತೂಕ ಇನ್ನೂ ಜಾಸ್ತಿ. ಅವರ ಈ ಸಾಹಿತ್ಯಿಕ ತಾಯ್ತನಕ್ಕೆ ಒಂದು ಥ್ಯಾಂಕ್ಸ್ ಹೇಳಲು ನಾವು ಹೋದರೆ, ನಮ್ಮಿಬ್ಬರನ್ನು ಕೂಡ್ರಿಸಿ, ಕಾಫಿ ಕುಡಿಸಿ, ಬಂದವರಿಗೆಲ್ಲ ಪರಿಚಯಿಸಿ, ಒಂದಷ್ಟು ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಇತರ ಉಡುಗೊರೆ ಅವರಿಂದ. ಇದು ಪುಸ್ತಕ ಓದಿದ ಹೃದಯಕ್ಕಿರಬೇಕಾದ ಸಂಸ್ಕಾರ. ಈಗ ನನ್ನ “ಅರ್ಧ ಸತ್ಯದ ಹೆಣ್ಣು” ಅವರ ಮನೆಮಗಳು.
     ಹೊರಗಡೆ ಬಂದು ನೋಡುತ್ತ ಕುಳಿತರೆ “ಮನಸ್ಸು ಗಾಂಧಿ ಬಝಾರ” ಎಷ್ಟೆಲ್ಲ ನೆನಪುಗಳು. ನಮ್ಮ ಕಣ್ವದ ಹುಡುಗ ಈರಣ್ಣ ಇಲ್ಲಿಯ ಕೆಲವು ನೆನಪುಗಳು ಹೇಳಿದ್ದ. ನಾನು ಮುಗುಳ್ನಕ್ಕು ಸುಮ್ಮನಾಗಿದ್ದೆ. ಆ ದಿನ ಆತ ಹೇಳುವಾಗಲೂ ಮತ್ತು ಈಗಲೂ ನನ್ನನ್ನು ಕಾಡಿದ್ದು ಮುಖ್ಯವಾಗಿ ಒಂದು ಪತ್ರಿಕೆ. ಇಲ್ಲಿಂದ ಅಲ್ಲಿಗೆ, ನನ್ನೂರಿಗೆ, ಒಂದು ಚಿಕ್ಕ, ಸಾಹಿತ್ಯದಿಂದ ಶ್ರೀಮಂತವಾದ ಪತ್ರಿಕೆ ಬರುತ್ತಿತ್ತು. ಅದರ ಹೆಸರೇ “ಗಾಂಧಿ ಬಝಾರ”, ನನ್ನ ಸಂವೇದನೆಗಳ ಸಾಕಿ-ಸಲುಹಿದ ಸರಳ ಪತ್ರಿಕೆ.
       ಈಗ ಆ ಪತ್ರಿಕೆ ಇಲ್ಲ ಆದರೆ, ಗಾಂಧಿ ಬಾಝಾರಿನ ತುಂಬ ಹೂವಿನಂಗಡಿಗಳಿವೆ. ಈ ಹೂಗಳು ಕಾಡಿದರೆ ಮತ್ತೊಂದು ಗಾಂಧಿ ಬಝಾರ ಇನ್ನೊಂದು ದಿನ ಹುಟ್ಟಿಯೇ ಹುಟ್ಟುತ್ತದೆ.

No comments:

Post a Comment